ಹಿಂದೂ ಧರ್ಮ

ಒಂದು ಭಾರತೀಯ ಧರ್ಮ

ಹಿಂದು ಧರ್ಮ ಎಂದರೆ ಅದು ಮಾನವ ಧರ್ಮ, ಅನಂತ ಸತ್ಯ ಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ[೧] ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ.[೨] ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ "ದೈನಿಕ ಸದಾಚಾರ"ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.

ಹಿಂದೂ ಧರ್ಮದ
ಮೇಲಿನ ಒಂದು ಸರಣಿಯ ಭಾಗ
ಹಿಂದೂ ಧರ್ಮ

ಓಂಬ್ರಹ್ಮಈಶ್ವರ
ಹಿಂದೂಹಿಂದೂ ಧರ್ಮದ ಇತಿಹಾಸ


ಓಂ ಕಾರ - ಹಿಂದೂ ಧರ್ಮದ ಒಂದು ಪವಿತ್ರಾಕ್ಷರ
ಗಣಪತಿ - ಹಿಂದೂ ಧರ್ಮೀಯರು ಅಪಾರವಾಗಿ ನಂಬುವ ದೇವರು

ಇತಿವೃತ್ತ

ಅದರ ಮೂಲಗಳಲ್ಲಿ ಕಬ್ಬಿಣ ಯುಗದ ಭಾರತದ ಐತಿಹಾಸಿಕ ವೈದಿಕ ಧರ್ಮವಿದೆ, ಮತ್ತು ಹಲವುವೇಳೆ ಹಿಂದೂ ಧರ್ಮವು "ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಧರ್ಮ"[೩] ಅಥವಾ "ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯ" ಎಂದು ಹೇಳಲಾಗುತ್ತದೆ.[೪][೫][೬][೭] ಹಿಂದೂ ಧರ್ಮವು ವಿವಿಧ ಸಂಪ್ರದಾಯಗಳಿಂದ ರಚಿತವಾಗಿದೆ ಮತ್ತು ಒಬ್ಬ ಏಕಾಂಗಿ ಸಂಸ್ಥಾಪಕನನ್ನು ಹೊಂದಿಲ್ಲ.[೮] ಹಿಂದೂ ಧರ್ಮವು ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ನಂತರ ವಿಶ್ವದ ಮೂರನೇ ಅತಿ ದೊಡ್ಡ ಧರ್ಮವಾಗಿದೆ ಮತ್ತು ಭಾರತದಲ್ಲಿ ಸುಮಾರು ೮೩ ಕೋಟಿ ಅನುಯಾಯಿಗಳು ಹಾಗೂ ಒಟ್ಟಾರೆ ಸುಮಾರು ೧೦೦ ಕೋಟಿ ಅನುಯಾಯಿಗಳನ್ನು ಹೊಂದಿದೆ.[೯] ದೊಡ್ಡ ಪ್ರಮಾಣದ ಹಿಂದೂ ಜನಸಂಖ್ಯೆಯಿರುವ ಇತರ ರಾಷ್ಟ್ರಗಳನ್ನು ದಕ್ಷಿಣ ಏಷ್ಯಾದಾದ್ಯಂತ ಕಾಣಬಹುದು. ಭಾರತ, ನೇಪಾಳ ಹಾಗೂ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಈ ಧರ್ಮದ ಬಹುಪಾಲು ಅನುಯಾಯಿಗಳು ನೆಲೆಸಿದ್ದಾರೆ. ಅದಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇಂದು ಹಿಂದೂ ಧರ್ಮದ ಅನುಯಾಯಿಗಳನ್ನು ಕಾಣಬಹುದು.

ಧರ್ಮಗ್ರಂಥಗಳು

ಶಬ್ದ ವ್ಯುತ್ಪತ್ತಿ

ಮುಂಚಿನ ಐರೋಪ್ಯ ಪ್ರವಾಸಿಗಳು ಮತ್ತು ಕ್ರೈಸ್ತ ಧರ್ಮಪ್ರಚಾರಕರು ಹಿಂದೂ ಸಮಾಜ ಹಾಗೂ ಧರ್ಮದ ಮೇಲೆ ಬ್ರಾಹ್ಮಣ ವರ್ಣದ ಪ್ರಾಬಲ್ಯದ ಕಾರಣ ಹಿಂದೂ ಧರ್ಮವನ್ನು ನಿರ್ದೇಶಿಸಲು "ಬ್ರಾಹ್ಮಣ ಧರ್ಮ" ಎಂಬ ಶಬ್ದವನ್ನು ಸೃಷ್ಟಿಸಿದರು. ಹಿಂದೂಗಳು ತಮ್ಮ ಧರ್ಮವನ್ನು, ಶಾಶ್ವತ ನಿಯಮಗಳನ್ನು ಆಧರಿಸಿರುವ ಕಾರಣ ಸನಾತನ ಧರ್ಮ ಎಂದು, ಅಥವಾ ವೇದಗಳ ಉಪದೇಶಗಳನ್ನು ಆಧರಿಸಿರುವ ಕಾರಣ ವೈದಿಕ ಧರ್ಮವೆಂದು ಕರೆಯಲು ಇಷ್ಟಪಡುತ್ತಾರೆ. ಹಿಂದೂಗಳ ನಾಡು ಅವರಿಗೆ ಸಾಂಪ್ರದಾಯಿಕವಾಗಿ ಭಾರತ ಅಥವಾ ಭಾರತದ ಒಬ್ಬ ಪ್ರಾಚೀನ ರಾಜನಾದ ಭರತನ ಹೆಸರಿನಿಂದ ವ್ಯುತ್ಪನ್ನವಾದ ಭರತವರ್ಷವೆಂದು ಪರಿಚಿತವಾಗಿದೆ.[೧೫]

ಪ್ರಕಾರಗಳು

  • ಜಾಗತಿಕ ಮಟ್ಟದಲ್ಲಿ ಮಾನವನ ವಿಭಾಗಿತ ಗುಂಪುಗಳಾಗಿ ಧರ್ಮಗಳು ಕಂಡುಬರುತ್ತವೆ. ಧಾರ್ಮಿಕ ಪುರುಷರ ಸತ್ವಯುತ ಚಿಂತನೆಗಳು, ಜೀವನ ನೀತಿ ಬೋಧನೆಗಳು ಒಂದೊಂದು ಜನ ಪ್ರಾದೇಶಿಕ ಜನಸಮುದಾಯಗಳ ಆಚಾರ ವಿಚಾರಗಳಾಗಿ, ಮಹತ್ವ ಪಡೆಯುತ್ತಾ ಬಂದಿವೆ. ಅದರಲ್ಲಿಯೂ ಲಿಂಗ, ವರ್ಗಗಳಲ್ಲಿ ತಾರತಮ್ಯ ಉಂಟಾದಾಗ ಸಂಘರ್ಷ ನಡೆದಿವೆ. ಧರ್ಮ ವಿಚಾರಗಳಲ್ಲಿ ಮತಬೇಧಗಳು ಉಂಟಾಗಿ ಹಲವು ಉಪ ಅಥವಾ ಧರ್ಮಗಳು ನಿರ್ಮಾಣವಾಗಿರುವುದೂ ಉಂಟು. ಕೆಲವು ಇವುಗಳಲ್ಲಿಯೇ ತಮ್ಮ ತಮ್ಮ ಧರ್ಮಗಳ ಮತ ವಿಚಾರಗಳು ಶ್ರೇಷ್ಠವೆಂದು ಸಂಘರ್ಷಗಳು ನಡೆದಿರುವುದುಂಟು. ಬಹುತೇಕ ಮಧ್ಯ ಏಷ್ಯಾ ಮೂಲ ಭಾಗದ ಸಮುದಾಯಗಳ ಧಾರ್ಮಿಕ ಜೀವನ ಪದ್ಧತಿಗಳನ್ನು ಮುಸ್ಲಿಂ ಹೆಸರಿನಿಂದ, ಯುರೋಪಿಯನ್ ದೇಶ ಸಮುದಾಯಗಳ ಧಾರ್ಮಿಕ ಜೀವನವನ್ನು ಕ್ರಿಶ್ಚಿಯನ್ ಹೆಸರಿನಿಂದ, ಭಾರತದಲ್ಲಿ ಮಾತ್ರ ಹತ್ತು ಹಲವು, ಬುಧ್ಧ, ಮಹಾವೀರ ಮೊದಲಾದಂತಹ ಧಾರ್ಮಿಕ ಸಂತರು ನಿರ್ದೇಶಿಸಿದ ಬೌದ್ಧ, ಜೈನ, ಸಿಖ್, ಯಹೂದಿಗಳೆಂದು ಜೀವನ ಪದ್ಧತಿಗಳು, ಧಾರ್ಮಿಕ ಸುಧಾರಣೆಗಳು ಇವೆ. ಇದಲ್ಲದೆ ಈ ಭಾರತ ದೇಶದಲ್ಲಿ ಬಹಳ ಪ್ರಾಚೀನವೆಂದು ಹಿಂದೂ ಮತ್ತು ಹಿಂದುತ್ವಗಳು ದೊಡ್ಡ ಮಟ್ಟದಲ್ಲಿ ಚರ್ಚಿತವಾಗುತ್ತಿರುವ ವಿಷಯವಾಗಿ ಗಂಭೀರವಾಗಿದೆ. ಭಾರತದಲ್ಲಿ ಹುಟ್ಟಿದ, ಇಲ್ಲಿಯೇ ಬೆಳೆದ ವ್ಯಕ್ತಿಗಳನ್ನು, ಅವರ ಜೀವನ, ನಂಬಿಕೆ-ಆಚಾರ ವಿಚಾರಗಳನ್ನು ಅನುಸರಿಸುತ್ತಾ, ಒಂದು ಪರಂಪರೆಯ ಪ್ರಾಥಮಿಕ ಅನುಸಂಧಾನವನ್ನು ಮಾಡಿಕೊಳ್ಳುತ್ತಾ, ವೈಯಕ್ತಿಕ ಬದುಕಿನಲ್ಲಿ ವಿಶಿಷ್ಠತೆಯನ್ನು ಕಾಯ್ದುಕೊಂಡು ಬೆಳೆದು ಬಂದ ಭಾರತೀಯ ಸಮುದಾಯದ ಅಖಂಡ ಧಾರ್ಮಿಕ ಜೀವನದ ಮಹತ್ವವನ್ನು ತಿಳಿಸುವ ಪದ ‘ಹಿಂದೂ’ ಎಂಬುದು ಸಾಮಾನ್ಯ ಅಭಿಪ್ರಾಯ.

ಆದರೆ ಹಿಂದೂ ಎಂಬ ಪದಕ್ಕೆ ಬಹಳ ಪ್ರಾಚೀನವಾದ ಇತಿಹಾಸವಿಲ್ಲ. ಭಾರತದಲ್ಲಿ ವೈಧಿಕ ಧರ್ಮ ಇತ್ತು ಎಂಬುದು, ಸನಾತನ ಧರ್ಮ ಇತ್ತು ಎಂಬುದು, ಚಾತುರ್ವರ್ಣ ಧರ್ಮ ಇತ್ತು ಎಂಬುದು, ಮನುಧರ್ಮವಿತ್ತು ಎಂಬುದು, ವೇದಗಳೇ ವೈಧಿಕ ಧರ್ಮದ ಆಧಾರ ಗ್ರಂಥಗಳೆಂದು, ಪ್ರಾಚೀನ ಋಷಿ-ಮುನಿಗಳು ಇವುಗಳ ರಚನೆಕಾರರು, ಅವರೇ ಈ ಧರ್ಮ ಸಂಸ್ಥಾಪಕರು ಎಂಬ ಚಿಂತನೆಗಳಿವೆ. ವೇದಗಳೇ ಸತ್ಯವೆಂಬ ಮಾತೂ ಇದೆ. ಯಜ್ಞ ಯಾಗಾದಿಗಳನ್ನು ಮಾಡುತ್ತ ಪ್ರಜೆಗಳಿಗೆ ಮಾರ್ಗದರ್ಶಕರಾಗಿ ಮುನಿಗಳು ವೈಧಿಕ ಧರ್ಮದ ಕರ್ತೃಗಳು ಎಂಬುದು ಬಹುತೇಕ ಭಾರತೀಯರ ನಂಬಿಕೆ. ಭಾರತೀಯ ಅರೆಸೊತ್ತಿಗೆಯ ರಾಜ್ಯಾಡಳಿತ ಕಾಲದಲ್ಲಿ ರಾಜಾ ಪ್ರತ್ಯಕ್ಷ ದೈವವೆಂಬ ನಂಬಿಕೆಯಲ್ಲಿ, ಆತನ ರಕ್ಷಣೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂಬ ಜನ ಸಮುದಾಯಗಳ ಸಂಘಟನೆಯಲ್ಲಿ ಬೆಳೆಯಿತು ಈ ಸನಾತನ ಧರ್ಮ. ಅನಂತರ ಬೆಳೆದು ಬಂದ ಪಂಚಮನ ಸೇರ್ಪಡೆಯೊಂದಿಗೆ ಭಾರತೀಯ ಜನವರ್ಗ ವೈಧಿಕಧರ್ಮದ ಅಡಿಯಲ್ಲಿ ಬದುಕು ಕಟ್ಟಿಕೊಳ್ಳುವಾಗ, ದೇವರು, ಸಂಪ್ರದಾಯ, ವಿಧಿ-ನಿಷೇಧಗಳು, ಪುನರ್ಜನ್ಮ, ಕರ್ಮಸಿದ್ದಾಂತ, ಪುರುಷಪ್ರಾಧಾನ್ಯ ಆಚರಣೆಗಳು, ಮೊದಲಾದ ಅಸ್ತ್ರಗಳ ಮೂಲಕ, ಧಾರ್ಮಿಕ ಅಲಿಖಿತ ಶಾಸನಗಳ ಭಯದೊಂದಿಗೆ ವೈಧಿಕ ಧರ್ಮ ಭಾರತೀಯರ ಬದುಕಿನ ಭಾಗವಾಗಿದೆ. ದೇವರ ಶಿರದಿಂದ ಬ್ರಾಹ್ಮಣನೂ, ತೋಳುಗಳಿಂದ ಕ್ಷತ್ರಿಯನೂ, ಹೊಟ್ಟೆ-ತೊಡೆಗಳಿಂದ ವೈಶ್ಯನೂ, ಪಾದಗಳಿಂದ ಶೂದ್ರನು ಹುಟ್ಟಿದನೆಂದು ಭಾರತದ ಜನ ಸಮುದಾಯದ ವೈಧಿಕರ ಜನ್ಮ ರಹಸ್ಯವನ್ನು ತಿಳಿಸಲಾಗಿದೆ. ಶೂದ್ರ ಸೇವಕ. ಪಶು ಸಮಾನ ಆತನಿಗೆ ಸುಖ ಜೀವನದ ಹಕ್ಕಿಲ್ಲ. ಶ್ರೇಣೀಕೃತವಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಸೇವೆಯನ್ನು ಕಾಯಾವಾಚಾಮನಸಾ ಮಾಡಿದಾಗ, ಮರುಜನ್ಮದಲ್ಲಿ ತನ್ನ ಕರ್ಮದಂತೆ ಉನ್ನತವಾದ ಸಮುದಾಯಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಲ್ಲಿ ಹುಟ್ಟಿ ದೇವರ ಪ್ರೀತಿ, ಸುಖ, ಭೋಗ ಜೀವನ ಅನುಭವಿಸಬಹುದು. ಇಲ್ಲದಿದ್ದರೆ ಇಲ್ಲ. ಬ್ರಾಹ್ಮಣನೇ ಶ್ರೇಷ್ಠ. ವೇದಗಳನ್ನು ನಿರ್ಮಿಸಿದ ಋಷಿಗಳ ಸಂತತಿ ಎಂಬುದು ತರ್ಕ. ಧರ್ಮ ಸುಧಾರಕರೂ ಅವರೇ ಆಗಿದ್ದರು.ಸಂಸ್ಕ್ರತ ದೇವಭಾಷೆ ಅಂದರೆ ಶ್ರೇಷ್ಟರ ಭಾಷೆ. ಆಡಳಿತ, ಶಿಕ್ಷಣ, ಧಾರ್ಮಿಕಾಚರಣೆಗಳೆಲ್ಲವೂ ಸಂಸ್ಕೃತ ದಲ್ಲಿಯೇ. ಪ್ರಾದೇಶಿಕ ಭಾಷೆಗಳು ಹತ್ತು ಹಲವು ಶೂದ್ರರಾದ ಜನಸಾಮಾನ್ಯರದು. ಹೆಣ್ಣು ಈ ಧರ್ಮದಲ್ಲಿ ದೈವಿಕವಾದ ಪಾತ್ರ, ಪುರುಷ ಪೋಷಕ, ಪುರುಷನ ಭೋಗವಸ್ತು. ಗೌರವದ ಪತಿವ್ರತೆ, ಗೃಹಿಣಿ. ಮಹಾಸತಿ. ಲಿಂಗತಾರತಮ್ಯವಿದ್ದರೂ ಅದು ದೈವೀ ಇಚ್ಛೆ. “ಮಹಿಳಾ ಮೌನಂ ಸುಖಪ್ರಾಪ್ತಂ” ಆಗಿತ್ತು. ಋಷಿ-ಮುನಿ ನಿರ್ಮಿತ ವೈಧಿಕ ಧರ್ಮದಲ್ಲಿ ಕಾಲಕಾಲಕ್ಕೆ ದೋಷಗಳನ್ನು ಗುರುತಿಸಿ, ಸುಧಾರಣಾ ತಿದ್ದುಪಡಿಗಳನ್ನು ತಂದಿರುವುದುಂಟು, ಅವುಗಳೇ ಸ್ಮ್ರತಿಗಳು, ಆಗಮ ಗ್ರಂಥಗಳು, ಧರ್ಮಶಾಸ್ತ್ರ ಗ್ರಂಥಗಳು ಮೊದಲಾದವು. ಇಲ್ಲಿ ಎಷ್ಟೇ ದೋಷ ನಿವಾರಣೆಯನ್ನು ತಂದರೂ, ಅದರಲ್ಲಿನ ಮೂಲ ಸ್ವರೂಪ ಬದಲಾಗಿಲ್ಲ. ಜನ ಸಮುದಾಯಗಳಲ್ಲಿನ ತಾರತಮ್ಯ ಬದಲಾಗಿಲ್ಲ. ಹೆಣ್ಣು-ಗಂಡಿನ ಬೇಧ ತಗ್ಗಲಿಲ್ಲ. ವೃತ್ತಿ-ಕಸುಬು ಆಧಾರಿತ ಖಾಯಂ ಜಾತಿ-ಗುಂಪುಗಳನ್ನು ಪೋಷಿಸಲಾಯಿತು. ಶ್ರಮ ಜೀವಿಗಳು ಕಷ್ಟ ಪಡುವಂತಾದರೆ, ಸುಖಜೀವಿಗಳು ಮತ್ತಷ್ಟು ಭೋಗಾಕಾಂಕ್ಷಿಗಳಾದರು. ದರ್ಪ, ದೌರ್ಜನ್ಯ, ಪಾಳೇಗಾರಿಕೆಗಳು ಹೆಚ್ಚಿದವು. ಶೂದ್ರರಲ್ಲಿ ಮತ್ತೂ ಶೂದ್ರ-ಪಂಚಮ ಅಸ್ಪ್ರಶ್ಯತೆಗಳು ಹೆಚ್ಚಾಗಿ ಶೋಷಣೆಯ ವಿಧಗಳು ಬೆಳೆದವು. ಹೆಣ್ಣು ರತ್ನವಾಗಿ, ಭೋಗಮಸಾಣಿಯಾಗಿ- ವೇಶ್ಯಯಾಗಿ, ವಂಶವನ್ನು ಹೆತ್ತುಕೊಡುವ ಯಂತ್ರವಾಗಿ ನೆಲೆನಿಂತಳು. ಸ್ವಪ್ರತಿಷ್ಟೆ, ಸ್ವಜನ ಪಕ್ಷಪಾತ, ಅಧಿಕಾರದಾಹಗಳು ಧರ್ಮವನ್ನು ಹಲವು ದಾರಿಗಳಾಗಿ ಸೀಳಿದವು. ಶೈವ, ವೈಷ್ಣವ, ಶಕ್ತಿ ಆರಾಧನೆ ಮೊದಲಾದ ಪಂಥಗಳು ಹುಟ್ಟಿಕೊಂಡವು. ಬೌದ್ಧ, ಜೈನ, ಸಿಖ್, ವೀರಶೈವ ಮೊದಲಾದ ಧರ್ಮಗಳು, ಈ ವೈಧಿಕ ಧರ್ಮದ ದೋಷಗಳನ್ನು ಕಂಡು ಸಿಡಿದು ಹೊಸ ರೂಪಗಳನ್ನು ಪಡೆದವು, ಬೆಳೆದವು. ಕಾಲಾಂತರದಲ್ಲಿ ಯಜ್ಞಯಾಗಾದಿಗಳು ಕೆಲವು ಸನಾತನಿಗಳಲ್ಲಿ ಉಳಿದು, ಆದಿ ಮೂಲದ ಮೂರ್ತಿಪೂಜೆ, ಆತ್ಮ ಪೂಜೆ, ಪ್ರಕೃತಿ ಪೂಜೆಗಳು ಶೂದ್ರರಾದಿಯಾಗಿ ಬೆಳೆದವು. ಶೂದ್ರರಲ್ಲಿ ದೇವರು, ಧರ್ಮಗಳ ಹುಡುಕಾಟದಲ್ಲಿ ಭಕ್ತಿಪಂಥಗಳೂ ಬೆಳೆದವು. ಮುಕ್ತಿಗೆ ಭಕ್ತಿಯೇ ಸಾಕೆಂಬ ಶರಣರ, ದಾಸರ, ತತ್ವಪದಕಾರರ ವಿಚಾರಗಳಿಂದ ಪ್ರೇರಿತವಾದ ಜನರು ಮೂರ್ತಿ ಪೂಜೆಯನ್ನು ಖಾಯಂಗೊಳಿಸಿ, ಪ್ರಕೃತಿ ಆರಾಧನೆಯಲ್ಲಿ ಖುಷಿ ಕಂಡರು. ಹೀಗೆ ಬೆಳೆದು ಬಂದ ಭಾರತ ಜಾತಿ ವ್ಯವಸ್ಥೆಯ ಬಹುತೇಕ ಸಮುದಾಯಗಳಲ್ಲಿ ಧರ್ಮವೆಂಬುದು, ಅನಿವಾರ್ಯದ ಭಾಗವೆಂದು ಅವರಿಗೆ ಅನಿಸಲೇ ಇಲ್ಲ. ಯಾವುದೋ ಗುರುಗಳು ಬಂದು ಧರ್ಮ ಬೋಧನೆ ಮಾಡಬೇಕು, ನಾವು ಅದನ್ನು ಪಾಲಿಸಬೇಕೆಂಬ ಪ್ರಜ್ಞೆಯೂ ಇಲ್ಲದಂತೆ ಅವರು ಬದುಕಿದರು. ಅವರವರಿಗೆ ಅವರದೇ ದೇವರು, ಅವರ ಪೂಜೆ- ಕರ್ಮಗಳೇ ಬೇರೆಯಾಗಿ ಹಿಂದೂ ಎಂದರೆ ಭಾರತದಲ್ಲಿ ಮೂರ್ತಿ ಪೂಜಾರಾಧಕರೆಂಬ ಕುರುಹು ಮಾತ್ರ ಉಳಿಯಿತು.

ಹಿಂದೂ ಎಂಬುದು ಹೊಸ ಇತಿಹಾಸ ನಿರ್ಮಾಣವಾದ ಕಾಲಘಟ್ಟದಲ್ಲಿ ಹುಟ್ಟಿದ ಪದ. ಇತಿಹಾಸಕಾರರ ಪ್ರಕಾರ ಭಾರತದ ಮೂಲನಿವಾಸಿಗಳ ನೆಲೆ-ತಾಣ, ಸಿಂಧೂನದಿ ತೀರ ಪ್ರದೇಶ. ಸಿಂದೂನಾಗರೀಕತೆ ಭಾರತದ ಪೂರ್ವ ಇತಿಹಾಸವನ್ನು ತಿಳಿಸುವ ಗತಕಾಲದ ಉತ್ಖನನದ ದಾಖಲೆ. ಶ್ರೀಲಂಕಾ, ಬರ್ಮಾ, ನೇಪಾಳ, ಬಾಗ್ಲಾದೇಶ, ಪಾಕೀಸ್ಥಾನ ಮತ್ತು ಭಾರತಗಳು ಉಪಖಂಡವಾಗಿ ಒಂದಾಗಿದ್ದ ಕಾಲಘಟ್ಟದಲ್ಲಿ ಸಿಂದೂನದಿ ಪ್ರದೇಶವೇ, ಭಾರತದ ಜನಸಮುದಾಯಗಳ ನೆಲೆ. ಮಧ್ಯೆ ಏಷ್ಯಾದಿಂದ ಆ ಪ್ರದೇಶದ ಮೇಲೆ ದಾಳಿ ನಡೆದಾಗ ಪರ್ಷಿಯನ್ನರು. ಸಿಂದೂ ನದಿಯನ್ನು ಅವರಲ್ಲಿ ‘ಸ’ ಕಾರ ಇಲ್ಲದ್ದರಿಂದ ಹಿಂದೂನದಿ ಎಂದು ಕರೆದರೆಂದೂ, ಸಿಂದೂನದಿ ನಾಗರೀಕರನ್ನು, ಹಿಂದೂನದಿ ನಾಗರೀಕರೆಂದು ಕರೆದರೆಂದೂ ಆ ರೂಪಗಳೇ ಮುಂದೆ ಸಿಂದೂಸ್ಥಾನ- ಹಿಂದೂಸ್ಥಾನ ವಾಯಿತೆಂದು, ಇಲ್ಲಿನ ಜನ ಹಿಂದೂಗಳಾದರೆಂದು ವಿವರಗಳಿವೆ. ಯುರೋಪಿಯನ್ನರು ಆ ಕಾರಣಕ್ಕಾಗಿಯೇ INDIA- ಇಂಡಿಯಾ ಎಂಬ ಹೆಸರಿನಿಂದ ಭಾರತವನ್ನು ಕರೆದಿದ್ದಾರೆಂಬ ವಿವರಗಳು ಇತಿಹಾಸದಲ್ಲಿ ಸಿಗುತ್ತವೆ. ಪರ್ಷಿಯನ್ ಪದದ ಸಿಂದೂ-ಹಿಂದೂ ಜನರಾದ ಭಾರತೀಯರು, ಹಿಂದೂಗಳಾದರು. ಭಾರತೀಯರ ಧರ್ಮ, ಜನಾಂಗೀಯ ಪದವಾದ ಹಿಂದೂ ಪದ ಸೂಚಕವಾಗಿ ಹಿಂದೂ ಧರ್ಮವಾಯಿತು ಅಂಬೋಣ, ಭಾರತ ಮೂಲದ ಎಲ್ಲರೂ ಹಿಂದೂಗಳಾದರೆ, ಹಿಂದೂ ಹೆಸರಿನ ಅವರ ಮೂಲಧರ್ಮ ವೈಧಿಕ ಧರ್ಮ, ಸನಾತನ ಧರ್ಮ ಆಗಿತ್ತು. ಆದರೆ ಈ ಧರ್ಮಾಚರಣೆಗಳಲ್ಲಿ ಫಲಾನುಭವಿಗಳು ಹಳೆಯ ಚಾತುರ್ವರ್ಣ ವ್ಯವಸ್ಥೆಯ ರೂವಾರಿಗಳು. ಯಜ್ಞ-ಯಾಗಾದಿಗಳಲ್ಲಿ ಭಾಗವಹಿಸುತ್ತಾ ಬಂದವರೂ ಆದ ಪುರೋಹಿತಶಾಹಿಗಳು, ರಾಜ್ಯಶಾಹಿಗಳೂ ಆಗಿದ್ದರು. ಶೂದ್ರರಿಗೆ, ದೇವತೆಗಳ, ದೇವರುಗಳ ದರ್ಶನವಿಲ್ಲ. ಧಾರ್ಮಿಕಾಚರಣೆಗಳಲ್ಲಿ ಮೂಕ ಪ್ರೇಕ್ಷಕರು. ಪಾಲುದಾರರಲ್ಲ. ಭಾಗೀದಾರರಲ್ಲ. ಈ ಇಬ್ಬರಲ್ಲಿ ಒಂದು ಕಂದಕವಿತ್ತು. ಶೂದ್ರರಿಗೆ, ಅವರದೇ ಆದ ಪ್ರಕೃತಿ ದೈವಗಳು, ಮಾರ್ಗದರ್ಶನ ನೀಡಿ ಹುತಾತ್ಮರಾದ ಸತ್ವಪರುಷರು, ನೆಲ-ಜಲ ಭೂತ- ಪ್ರೇತಗಳು ದೇವರುಗಳಾಗಿ ಅವರ ಮೈಮೇಲೆ ಬಂದು ಸಹಾಯ ಮಾಡುವ ಪರಿಹಾರ ಸೂಚಕರೂ ಆಗಿದ್ದರು. ಅದರ ಜೊತೆಗೆ ಪುರಾಣ, ಕಾವ್ಯಗಳ ಶಿವ, ವಿಷ್ಣು, ಗಣಪ, ಪಾರ್ವತಿ, ಸರಸ್ವತಿ. ಲಕ್ಷ್ಮಿ ಎಲ್ಲರೂ ವರ ಕೊಡುವ ಆದರ್ಶ ದೇವತೆಗಳಾದರು. ಆದರೆ ಸನಾತನ ಯಜ್ಞ ಯಾಗಾದಿಗಳು ಇವರ ಆರಾಧನೆಗಳಲ್ಲವಾಗಿತ್ತು. ಅದರಿಂದ ಸನಾತನ ವೈಧಿಕರ ಪಂಥಕ್ಕೂ, ಶೂದ್ರರಾದ ಶ್ರಮಿಕರ ಪಂಥಕ್ಕೂ ವ್ಯತ್ಯಾಸಗಳು ಇದ್ದೇ ಇತ್ತು. ವೈಧಿಕರ ಜೊತೆ ಅನಿವಾರ್ಯವಾಗಿ ಸಾಮರಸ್ಯ- ಶೋಷಣೆ- ಬೇಸರಗಳ ನಡುವೆಯೇ ಹೆಸರಿಗೆ ವೈಧಿಕರಾಗಿದ್ದರು. ಆದರೆ ಅವರು ವೈಧಿಕರಲ್ಲ. ಭಾರತೀಯ ಮೂಲನಿವಾಸಿಗಳು ಮಾತ್ರ ಆಗಿದ್ದರು. ಪಿತೃ ಜೊತೆಗೆ ಮಾತೃವನ್ನೂ ಆರಾಧಿಸುವ ಸುಸಂಸ್ಕೃತರು ಇವರು.

ವೈಧಿಕ ಧರ್ಮಕ್ಕೆ ಸಿಂಧೂ ನಾಗರೀಕತೆಯ ಅನ್ವೇಷಣೆಯ ನಂತರ ಹಿಂದೂ ಧರ್ಮವೆಂಬ ನಾಮಕರಣವಾದ ಸಂದರ್ಭದಲ್ಲಿ ಸನಾತನ ವೈಧಿಕಧರ್ಮದ ಶೂದ್ರರೆಲ್ಲರು ಒಂದೇ ಆಗಿ ಹಿಂದೂಗಳು ಎನಿಸಿಕೊಂಡರು. ಆದರೆ, ಹಿಂದೂಗಳಾದ ಮಾತ್ರಕ್ಕೆ ಭಾರತೀಯ ಶೂದ್ರರು ಸನಾತನ ಪುರೋಹಿತಶಾಹಿ ಹಿಂದೂಗಳಾಗಲಿಲ್ಲ. ಅವರೂ ಇವರನ್ನು ಸೇರಿಸಿಕೊಳ್ಳಲಿಲ್ಲ. ಭಾರತೀಯ ಶೂದ್ರರೆಂದು ಕರೆಸಿಕೊಂಡ ಆದಿ ಹಿಂದೂಗಳಾಗಿಯೇ ಉಳಿದರು. ಸನಾತನ ಹಿಂದೂಗಳೇ ಬೇರೆ, ಆದಿ ಹಿಂದೂಗಳೇ ಬೇರೆ. ಮೂರ್ತಿಪೂಜೆ ಮೊದಲಾದ ಕೆಲವೊಂದು ಆಚರಣೆ, ನಂಬಿಕೆಗಳಲ್ಲಿ ಇವರಿಬ್ಬರಲ್ಲಿ ಸಾಮ್ಯತೆಯಿದೆ ಎಂದು ಹೇಳಿದರೂ, ಯಜ್ಞ ಮೂಲದ ಸನಾತನ ಆಚರಣೆಗಳಿಲ್ಲ. ಮುಸ್ಲಿಮಲ್ಲಿ ಸುನ್ನಿ ಮತ್ತು ಶಿಯಾಗಳಿದ್ದಂತೆ, ಕ್ರಿಶ್ಚಿಯನ್ನರಲ್ಲಿ ಕ್ಯಾಥೋಲಿಕ್ ಮತ್ತು ಪ್ರಾಟೆಸ್ಟೆಂಟರಿದ್ದಂತೆ , ಜೈನರಲ್ಲಿನ ಶ್ವೇತಾಂಬರ ಮತ್ತು ದಿಗಂಬರರಿದ್ದಂತೆ ಭಾರತದ ಹಿಂದೂಗಳಲ್ಲಿ ಸನಾತನ ಹಿಂದೂಗಳು ಮತ್ತು ಆದಿಹಿಂದೂಗಳು ಎಂಬ ವಿಭಾಗವಿದೆ. ಆದರೆ ಬೇರೆ ಧರ್ಮಗಳಂತೆ ಭಾರತದಲ್ಲಿ ಆ ಪ್ರತ್ಯೇಕತೆಯ ಗುರುತು ದಾಖಲೆಯಾಗಿಲ್ಲ. ಸನಾತನ ಧರ್ಮದ ಅನುಯಾಯಿಗಳು ಧರ್ಮದ ನೆಲೆಯಲ್ಲಿ ಅಸ್ತಿತ್ವ ಹುಡುಕಾಡಿದರೆ, ಆದಿಹಿಂದೂಗಳು ಶ್ರಮ, ಭೂಮಿ ತಾಯಿಯ ಮಡಿಲು ಮತ್ತು ಇತ್ತೀಚೆಗೆ ಸರ್ಕಾರದ ನೌಕರಿ, ವಿವಿಧ ಉಧ್ಯಮಗಳ ಹುಡುಕಾಟದಲ್ಲಿ ಅಧಿಕಾರ-ರಾಜಕಾರಣದ ಪರಿಚಯ ಪಡೆಯುತ್ತಿದ್ದಾರೆ. ಅದಕ್ಕೆ ಜಾತಿಯ ಬಳಕೆ ಉಪಯೋಗವಾಗುತ್ತಿದೆಯೆಂಬ ಭ್ರಮೆಯೂ ಇಣುಕಿನೋಡುತ್ತಿದೆ. ಬಹುತೇಕ ಶೂದ್ರರು ಹಿಂದೂ ಎಂಬ ಹೆಸರಿನಿಂದ ಭಾವಪರವಶರಾಗುವುದಿಲ್ಲ. ಆದರೆ ವೈಧಿಕ ಧರ್ಮ ಹುಟ್ಟು ಹಾಕಿದ ಜಾತಿ ಪದಕ್ಕೆ ವೈಚಾರಿಕ ನೆಲೆಯಲ್ಲಿ ಬೇಸರವಿದ್ದರೂ ಅನಿವಾರ್ಯತೆಯ ನೆಲೆಯಲ್ಲಿ ಭಾವಪರವಶರಾಗುವುದುಂಟು. ಸರ್ಕಾರಿ ದಾಖಲೆಗಳಲ್ಲಿ ಕಾಲಂ ತುಂಬಲು ಹಿಂದೂ ಪದ ಬಳಸುತ್ತಾರೆಂಬುದು ನಿಜವಾದರೂ, ಇವರಿಗೆ ಹಿಂದೂ ಎನ್ನಿಸಿಕೊಳ್ಳುವುದಕ್ಕಿಂತಲೂ ಭಾರತೀಯ ಎನ್ನುವುದು ಭಾವಾದ್ರೇಕಕ್ಕೆ ಕಾರಣವಾಗುತ್ತದೆ. ನನ್ನ ದೇಶ ಭಾರತ, ನಾಡು, ನುಡಿ ಅತ್ಯಂತ ಪ್ರೀಯವಾದುದು. ಭಾರತೀಯ ಹೆಮ್ಮೆಯ ವಿಷಯ. ಹಿಂದೂ ಅದು ವೈಯಕ್ತಿಕ ಅನುಭೂತಿ ಅಷ್ಟೇ. ಹಳೆಯ ಭಾರತದ ವೈಧಿಕ ಧರ್ಮ ಹುಟ್ಟು ಹಾಕಿದ ಜಾತಿ ಮಾತ್ರ ಅವರ ಬದುಕನ್ನು ನಿರ್ಧರಿಸುತ್ತಿದೆ, ಧರ್ಮ ಐಚ್ಛಿಕವಷ್ಟೇ.

ಭಾರತೀಯ ಹಿಂದೂಗಳೆಲ್ಲರೂ ಜಾತಿಯನ್ನು ಮಾತ್ರ ಹಿಡಿದಿದ್ದಾರೆ. ಅಥವಾ ಅದೇ ಅವರನ್ನು ಬಿಟ್ಟು ಬಿಡಲಾರದಂತೆ ಹಿಡಿದಿದೆ. ಅದರಿಂದಲೇ, ಅವರ ನೋವು-ನಲಿವುಗಳಲ್ಲಿ ಅಲ್ಪ ತೃಪ್ತಿಯನ್ನು ಅನುಭವಿಸುತ್ತಿದ್ದಾರೆ. ಆಗಾಗ ಅಧಿಕಾರ, ರಾಜಕಾರಣಕ್ಕಾಗಿ ಸನಾತನ ಹಿಂದೂಗಳು, ಹಿಂದೂಗಳೆಲ್ಲರೂ ಒಂದೇ ಎಂಬ ಧರ್ಮದ ಅಪೀಮನ್ನು ಹರಡಲು ಪ್ರಯತ್ನ ಪಡುತ್ತಾ ಹೋರಾಡುತ್ತಾರೆ. ಅದಕ್ಕಾಗಿ ಆದಿ ಹಿಂದೂಗಳನ್ನು ಜಾತ್ಯಾತೀತವಾದಿಗಳು, ಧರ್ಮ ವಿರೋಧಿಗಳು ಎಂದು ಜರಿದು ಆವೇಶ ಭರಿತರಾಗುತ್ತಾರೆ. ಹಿಂದೂಗಳಿಗೆ ಪ್ರೇರಣೆ ನೀಡುತ್ತಿದ್ದೇವೆಂದು ಭ್ರಮೆಗೆ ಬೀಳುತ್ತಾರೆ. ಆದರೆ ಬಹಳಷ್ಟು ಆದಿ ಹಿಂದೂಗಳು ಮತ್ತು ಕೆಲವರಾದರೂ ಸನಾತನ ಹಿಂದೂಗಳು ಅದರ ಮೂಲ ಕೋಮುವಾದಿತನದಿಂದ ಬಿಡಿಸಿಕೊಳ್ಳಲು ನಿರ್ಧರಿಸಿ, ಅದು ಹುಟ್ಟು ಹಾಕಿದ ಜಾತಿ ಮೂಲವನ್ನು ಮರೆತು ಜಾತ್ಯಾತೀತತೆಯನ್ನು ಬೆಳೆಸಿಕೊಂಡು, ಇಂದಿನ ಅಖಂಡ ಭಾರತದ ಹಲವು, ಧರ್ಮ, ಸಂಸ್ಕೃತಿ, ಸಮುದಾಯಗಳಲ್ಲಿ ಬೆರೆತು ಮಾನವತನವನ್ನಷ್ಟೇ ಗುರುತಿಸಿಕೊಂಡು ವಿಶ್ವಮಾನವತೆಗಾಗಿ ದುಡಿಯಲು ಕಂಕಣಬದ್ಧರಾಗುತ್ತಿದ್ದಾರೆ. ಜಾತಿ, ಧರ್ಮ, ಕೋಮಿಗಿಂತಲೂ ಮಾನವ ಪ್ರೇಮ ಮುಖ್ಯವಲ್ಲವೇ. ಅದೇ ನಮ್ಮ ಗುರಿಯಾಗಬೇಕೆಂಬ ಧೋರಣೆ ಸ್ವಾಗತಾರ್ಹ. ಪ್ರಕೃತಿಯೊಡನೆ ಸ್ಪಂದಿಸಿ ಮನುಷ್ಯರಾಗುವುದು ಮುಖ್ಯವಾಗುತ್ತದೆಂಬುದು ನನ್ನ ಭಾವನೆ. ಎಲ್ಲಾ ಮನುಷ್ಯರು ಒಂದೇ, ಅವರಿಗೆ ಗೌರವ ಕೊಡಬೇಕು, ಪ್ರೀತಿ ತೋರಿಸಬೇಕು. ನಾವು ಸಹ ಅವನ್ನೆಲ್ಲಾ ಪಡೆಯಬೇಕು, ಇದರಿಂದ ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಉಳಿಯುತ್ತದೆ. ಬುದ್ಧ, ಮಹಾವೀರ, ಬಸವಣ್ಣ, ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರಶಕ್ತಿ ಮತ್ತು ಮಹಾಮಾನವತ್ವ, ಹಾಗೆಯೇ ಮಹಾತ್ಮ ಗಾಂಧೀಜಿಯವರ ಅಹಿಂಸೆ, ಸತ್ಯ, ಶಾಂತಿಗಳು ಜಗತ್ತನ್ನೂ ಬೆಳಗುವುದರಲ್ಲಿ ಎರಡು ಮಾತಿಲ್ಲ. ಅವು ನಮ್ಮವು ಮಾತ್ರ ಆದರೆ ‘ನಾವು ದೈವತ್ವಕ್ಕಿಂತ ಮಿಗಿಲಲ್ಲವೇ’.

ಮುಖ್ಯ ಲೇಖನ: ಹಿಂದೂ ಪಂಥಗಳು

ಪದದ ಅರ್ಥವಿವರಣೆಗಳು

  • ಹಿಂದೂ ಧರ್ಮವು "ಒಂದು ಧರ್ಮಶ್ರದ್ಧೆ ಅಥವಾ ಒಂದು ಮತದ ಘೋಷಣೆಯಲ್ಲಿ ಸಂಕೇತೀಕರಿಸಲಾದ ನಂಬಿಕೆಯ ಏಕೀಕೃತ ವ್ಯವಸ್ಥೆ"ಯನ್ನು ಹೊಂದಿಲ್ಲ,Flood 2001, Defining Hinduism</ref> ಬದಲಿಗೆ ವೈದಿಕ ಸಂಪ್ರದಾಯಗಳಲ್ಲಿ ಉತ್ಪತ್ತಿಯಾದ ಮತ್ತು ಅವುಗಳ ಮೇಲೆ ಆಧಾರಿತವಾದ ಧಾರ್ಮಿಕ ಸಂಗತಿಗಳ ಬಹುತ್ವವನ್ನು ಒಳಗೊಂಡಿರುವ ಒಂದು ಸರ್ವಾನ್ವಯ ಪದವಾಗಿದೆ.
  • ಉತ್ಪತ್ತಿಯಲ್ಲಿ ಹಿಂದೂ ಪದವು ದೆಹಲಿ ಸಲ್ತನತ್‌ನ ಕಾಲದಿಂದ ಬಳಕೆಯಲ್ಲಿರುವ, ಭಾರತಕ್ಕೆ ಸ್ಥಳೀಯವಾದ ಯಾವುದೇ ಇಸ್ಲಾಂಯೇತರ ಸಂಪ್ರದಾಯವನ್ನು ನಿರ್ದೇಶಿಸುವ ಒಂದು ಪರ್ಶಿಯಾದ ಶಬ್ದವಾಗಿದೆ. ಹಿಂದೂ ಶಬ್ದವನ್ನು ೧೭ನೇ ಶತಮಾನದಿಂದ ಆಂಗ್ಲ ಭಾಷೆಯಲ್ಲಿ "ಭಾರತೀಯ ವಿಧರ್ಮಿ" ಎಂಬ ಅರ್ಥದಲ್ಲಿ ಬಳಸಲಾಗುತ್ತದೆ,[೧೮] ಆದರೆ ವಿಶ್ವ ಧರ್ಮಗಳ ಪೈಕಿ ಒಂದೆಂದು ಅರ್ಹತೆಪಡೆದು ಒಂದು ಗುರುತಿಸಬಲ್ಲ ಧಾರ್ಮಿಕ ಸಂಪ್ರದಾಯವಾಗಿ ಹಿಂದೂ ಧರ್ಮದ ಕಲ್ಪನೆ ೧೯ನೇ ಶತಮಾನದ ಅವಧಿಯಲ್ಲಿ ಮಾತ್ರ ಕಾಣಿಸಿಕೊಂಡಿತು.
  • ನಂಬಿಕೆಗಳಲ್ಲಿನ ಭಿನ್ನತೆಗಳಿಗೆ ವಿಸ್ತಾರವಾದ ಸಹಿಷ್ಣುತೆಯ ವೈಶಿಷ್ಟ್ಯ, ಮತ್ತು ಹಿಂದೂ ಧರ್ಮದ ನಿರಂಕುಶ ಅಕೃತ್ರಿಮತೆಯು ಸಾಂಪ್ರದಾಯಿಕ ಪಾಶ್ಚಾತ್ಯ ಕಲ್ಪನೆಗಳ ಪ್ರಕಾರ ಅದನ್ನು ಒಂದು ಧರ್ಮವೆಂದು ಸೂತ್ರಿಸುವುದನ್ನು ಕಠಿಣವಾಗಿಸುತ್ತದೆ.[೧೯] ಅದರ ಬಹುಸಂಖ್ಯಾತ ಅನುಯಾಯಿಗಳಿಗೆ ಹಿಂದೂ ಧರ್ಮವು ಒಂದು ಸಂಪೂರ್ಣವಾಗಿ ವ್ಯವಹಾರ್ಯ ಪರಿಕಲ್ಪನೆಯಾಗಿದ್ದರೂ, ಪದದ ಒಂದು ವ್ಯಾಖ್ಯಾನಕ್ಕೆ ಬರುವಲ್ಲಿ ಹಲವರು ಸಮಸ್ಯೆಯನ್ನು ವ್ಯಕ್ತಪಡಿಸುತ್ತಾರೆ.
  • ಮುಖ್ಯವಾಗಿ ಅದರೊಳಗೆ ಸೇರಿದ ಅಥವಾ ಅದು ಒಳಗೊಂಡಿರುವ ಸಂಪ್ರದಾಯಗಳು ಮತ್ತು ವಿಚಾರಗಳ ವಿಶಾಲವಾದ ವ್ಯಾಪ್ತಿಕ್ಷೇತ್ರದ ಕಾರಣದಿಂದ.[೨೦] ಕೆಲವೊಮ್ಮೆ ಒಂದು ಧರ್ಮವೆಂದು ನಿರ್ದೇಶಿಸಲಾದರೂ, ಹಿಂದೂ ಧರ್ಮವನ್ನು ಹಲವುವೇಳೆ ಒಂದು ಧಾರ್ಮಿಕ ಸಂಪ್ರದಾಯವೆಂದು ವ್ಯಾಖ್ಯಾನಿಸಲಾಗುತ್ತದೆ.[೧] ಆದ್ದರಿಂದ ಅದು ವಿಶ್ವದ ಧರ್ಮಗಳ ಪೈಕಿ ಅತ್ಯಂತ ಹಳೆಯದು ಮತ್ತು ಅತ್ಯಂತ ವೈವಿಧ್ಯವುಳ್ಳದ್ದೆಂದು ವಿವರಿಸಲಾಗುತ್ತದೆ.[೪][೨೧][೨೨][೨೩] ಬಹುತೇಕ ಹಿಂದೂ ಪಂಥಗಳು ಧಾರ್ಮಿಕ ಅಥವಾ ಧರ್ಮ ಸಾಹಿತ್ಯದ ಒಂದು ಮಂಡಲವಾದ ವೇದಗಳನ್ನು ಪವಿತ್ರವೆಂದು ಭಾವಿಸುತ್ತವೆ, ಆದರೆ ಇದಕ್ಕೆ ಅಪವಾದಗಳಿವೆ. ನಿರ್ದಿಷ್ಟ ಧಾರ್ಮಿಕ ಸಂಸ್ಕಾರಗಳು ಮೋಕ್ಷಕ್ಕಾಗಿ ಆವಶ್ಯಕವೆಂದು ಕೆಲವು ಹಿಂದೂ ಧಾರ್ಮಿಕ ಸಂಪ್ರದಾಯಗಳು ಪರಿಗಣಿಸುತ್ತವೆ, ಆದರೆ ಈ ವಿಷಯದ ಸಂಬಂಧವಾಗಿ ವಿವಿಧ ಅಭಿಪ್ರಾಯಗಳು ಅಸ್ತಿತ್ವದಲ್ಲಿವೆ.
  • ಕೆಲವು ಹಿಂದೂ ತತ್ತ್ವಶಾಸ್ತ್ರಗಳು ಬ್ರಹ್ಮಾಂಡದ ಸೃಷ್ಟಿ, ಪೋಷಣೆ, ಮತ್ತು ವಿನಾಶದ ಒಂದು ಆಸ್ತಿಕವಾದಿ ಸತ್ವವಿದ್ಯೆಯನ್ನು ಆಧಾರವಾಗಿ ಇಟ್ಟುಕೊಳ್ಳುತ್ತವೆ, ಆದಾಗ್ಗಿಯೂ ಕೆಲವು ಹಿಂದೂಗಳು ನಾಸ್ತಿಕರಾಗಿದ್ದಾರೆ. ಕೆಲವೊಮ್ಮೆ ಹಿಂದೂ ಧರ್ಮವನ್ನು ಕರ್ಮದ ನಿಯಮದಿಂದ ನಿರ್ಧರಿಸಲಾದ ಮರುಜನ್ಮದ (ಸಂಸಾರ) ನಂಬಿಕೆಯಿಂದ ಮತ್ತು ಮೋಕ್ಷವು ಪುನರಾವರ್ತಿಸುವ ಜನನ ಮತ್ತು ಮರಣಗಳ ಈ ಆವರ್ತದಿಂದ ಬಿಡುಗಡೆಯೆಂಬ ಕಲ್ಪನೆಯಿಂದ ನಿರೂಪಿಸಲಾಗುತ್ತದೆ.
  • ಆದರೆ, ಬೌದ್ಧಧರ್ಮ ಮತ್ತು ಜೈನ ಧರ್ಮಗಳಂತಹ ಪ್ರದೇಶದ ಇತರ ಧರ್ಮಗಳು ಸಹ, ಹಿಂದೂ ಧರ್ಮದ ವ್ಯಾಪ್ತಿಯಲ್ಲಿರದ, ಕರ್ಮದಲ್ಲಿ ವಿಶ್ವಾಸವಿಡುತ್ತವೆ.[೨೦] ಹಾಗಾಗಿ, ಹಿಂದೂ ಧರ್ಮವನ್ನು ಅಸ್ತಿತ್ವದಲ್ಲಿರುವ ಎಲ್ಲ ಐತಿಹಾಸಿಕ ವಿಶ್ವಧರ್ಮಗಳ ಪೈಕಿ ಅತ್ಯಂತ ಸಂಕೀರ್ಣವಾದ ಧರ್ಮವೆಂದು ಕಾಣಲಾಗುತ್ತದೆ.[೨೪] ಅದರ ಸಂಕೀರ್ಣತೆಯ ಹೊರತಾಗಿಯೂ, ಹಿಂದೂ ಧರ್ಮವು ಕೇವಲ ಅಂಕೀಯವಾಗಿ ವಿಶಾಲವಾದ ಧರ್ಮವಷ್ಟೇ ಅಲ್ಲ, ಜೊತೆಗೆ ಪ್ರಾಗೈತಿಹಾಸದಲ್ಲಿ ಚಾಚಿರುವ ಬೇರುಗಳುಳ್ಳ, ಅಸ್ತಿತ್ವದಲ್ಲಿರುವ ಭೂಮಿಯ ಮೇಲಿನ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯವೂ ಆಗಿದೆ.[೨೫]
  • ಒಬ್ಬ ಪ್ರಖ್ಯಾತ ಧರ್ಮಶಾಸ್ತ್ರಜ್ಞರೂ ಆಗಿದ್ದ ಭಾರತದ ಮೊದಲನೆಯ ಉಪ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್‌ರಿಂದ ಕೊಡಲ್ಪಟ್ಟ ಹಿಂದೂ ಧರ್ಮದ ಒಂದು ವ್ಯಾಖ್ಯಾನವು ಹಿಂದೂ ಧರ್ಮವು "ಕೇವಲ ಒಂದು ಧರ್ಮ"ವಷ್ಟೇ ಅಲ್ಲ, ಜೊತೆಗೆ ತನ್ನೊಳಗೇ ಕಾರಣ ಮತ್ತು ಅಂತರ್ದೃಷ್ಟಿಗಳ ಸಂಯೋಜನೆಗೆ ಸಂಬಂಧಿಸಿದೆ ಎಂದು ಹೇಳುತ್ತದೆ. ಹಿಂದೂ ಧರ್ಮವನ್ನು ವ್ಯಾಖ್ಯಾನಿಸಲಾಗುವುದಿಲ್ಲ.
  • ಆದರೆ ಅದನ್ನು ಕೇವಲ ಅನುಭವಿಸುಬಹುದು ಎಂದು ರಾಧಾಕೃಷ್ಣನ್ ವಿಶದವಾಗಿ ಹೇಳುತ್ತಾರೆ.[೨೬] ಹಾಗೆಯೇ, ಹಿಂದೂ ಧರ್ಮವನ್ನು ಒಂದು ಸುಸ್ಪಷ್ಟ ಮತ್ತು ಕಟ್ಟುನಿಟ್ಟಿನ ಘಟಕದ ಬದಲಾಗಿ "ಅಸ್ಪಷ್ಟವಾದ ತುದಿಗಳುಳ್ಳ" ಒಂದು ವರ್ಗವಾಗಿ ನೋಡಬಹುದೆಂದು ಕೆಲವು ಪಂಡಿತರು ಸೂಚಿಸುತ್ತಾರೆ.
  • ಧಾರ್ಮಿಕ ಅಭಿವ್ಯಕ್ತಿಗಳ ಕೆಲವು ಪ್ರಕಾರಗಳು ಹಿಂದೂ ಧರ್ಮದ ತಿರುಳಾಗಿವೆ, ಮತ್ತು ಬೇರೆಯವು ಅಷ್ಟು ಪ್ರಮುಖವಾಗಿಲ್ಲ ಆದರೂ ವರ್ಗದೊಳಗೆ ಉಳಿದಿವೆ. ಇದನ್ನು ಆಧರಿಸಿ, ಫ಼ೆರೋ-ಲೂಟ್ಸಿ ಹಿಂದೂ ಧರ್ಮದ ವ್ಯಾಖ್ಯಾನಕ್ಕೆ ಒಂದು 'ಮಾತೃಕಾ ಸಿದ್ಧಾಂತ ವಿಧಾನ'ವನ್ನು (ಪ್ರೋಟಟೈಪ್ ಥೀಯರಿ ಅಪ್ರೋಚ್) ಅಭಿವೃದ್ಧಿಗೊಳಿಸಿದ್ದಾರೆ.[೨೭]
  • ವಾಸ್ತವಿಕವಾಗಿ 'ಹಿಂದೂ ಧರ್ಮ' ಪದ ಏನು ಅರ್ಥಸೂಚಿಸುತ್ತದೆ ಎಂಬ ಒಂಟಿ ವ್ಯಾಖ್ಯಾನವುಳ್ಳ ಸಮಸ್ಯೆಗಳನ್ನು ಹಲವುವೇಳೆ ಹಿಂದೂ ಧರ್ಮವು ಒಂದು ಪ್ರತ್ಯೇಕ ಅಥವಾ ಸಾಮಾನ್ಯ ಐತಿಹಾಸಿಕ ಸಂಸ್ಥಾಪಕನನ್ನು ಹೊಂದಿಲ್ಲ ಎಂಬ ವಾಸ್ತವಾಂಶಕ್ಕೆ ಆರೋಪಿಸಲಾಗುತ್ತದೆ. ಹಿಂದೂ ಧರ್ಮ, ಅಥವಾ ಕೆಲವರು ಹೇಳುವಂತೆ 'ಹಿಂದೂ ಧರ್ಮಗಳು' ಮೋಕ್ಷದ ಒಂದು ಏಕಾಂಗಿ ವ್ಯವಸ್ಥೆಯನ್ನು ಹೊಂದಿಲ್ಲ ಮತ್ತು ಪ್ರತಿ ವರ್ಗ ಅಥವಾ ಪಂಥದ ಪ್ರಕಾರ ವಿಭಿನ್ನ ಗುರಿಗಳನ್ನು ಹೊಂದಿದೆ.
  • ವೈದಿಕ ಧರ್ಮದ ಪ್ರಕಾರಗಳನ್ನು ಹಿಂದೂ ಧರ್ಮದ ಒಂದು ವಿಕಲ್ಪವಾಗಿ ಕಾಣದೆ ಅದರ ಅತ್ಯಂತ ಮುಂಚಿನ ಪ್ರಕಾರವಾಗಿ ಕಾಣಲಾಗುತ್ತದೆ, ಮತ್ತು ಬಹಳಷ್ಟು ಪಾಶ್ಚಾತ್ಯ ವಿದ್ವತ್ ಬರಹಗಳಲ್ಲಿ ವೈದಿಕ ಧರ್ಮ, ಬ್ರಾಹ್ಮಣ ಧರ್ಮ, ಮತ್ತು ಹಿಂದೂ ಧರ್ಮಗಳ ನಡುವಣ ಕಾಣುವ ವಿಭಜನಕ್ಕೆ ಅಲ್ಪ ಸಮರ್ಥನೆಯಿದೆ.[೭][೨೮]

"ಧರ್ಮ"ಕ್ಕೆ ಒಂದು ಸಮಾನಾರ್ಥಕ ಪದವಾಗಿ "ಮತ" ಪದದ ನಿತ್ಯಗಟ್ಟಳೆಯ ಬಳಕೆಯ ಕಾರಣ ಹಿಂದೂ ಧರ್ಮದ ಒಂದು ವ್ಯಾಖ್ಯಾನ ಮತ್ತೂ ಜಟಿಲವಾಗಿದೆ.[೨೦] ಕೆಲವು ವಿದ್ವಾಂಸರು[೨೯] ಮತ್ತು ಹಲವಾರು ಆಚರಣಕರ್ತರು ಹಿಂದೂ ಧರ್ಮವನ್ನು ಒಂದು ಸ್ಥಳೀಯ ವ್ಯಾಖ್ಯಾನವಾದ ಶಾಶ್ವತ ಸೂತ್ರ", ಅಥವಾ "ಶಾಶ್ವತ ಕ್ರಮ"ವೆಂಬ ಅರ್ಥಸೂಚಿಸುವ ಒಂದು ಸಂಸ್ಕೃತ ಪದಗುಚ್ಛವಾದ ಸನಾತನ ಧರ್ಮ ಎಂಬ ಪದವನ್ನು ಬಳಸಿ ನಿರ್ದೇಶಿಸುತ್ತಾರೆ.[೨][೩೦]

ನಂಬಿಕೆಗಳು

 
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಚಿತ್ರಿಸುವ ಹೊಯ್ಸಳೇಶ್ವರ ದೇವಸ್ಥಾನದಲ್ಲಿನ ದೇವಸ್ಥಾನ ಶಿಲ್ಪ.
  • ಹಿಂದೂ ಧರ್ಮವು ಆಂಗಿಕವಾಗಿ ಅರಳಿದ ಮತ್ತು ಗಮನಾರ್ಹ ಜನಾಂಗೀಯ ಹಾಗೂ ಸಾಂಸ್ಕೃತಿಕ ವೈವಿಧ್ಯದಿಂದ ಗುರುತಿಸಬಹುದಾದ ಒಂದು ವಿಶಾಲವಾದ ಪ್ರದೇಶದಲ್ಲಿ ಹರಡಿದ ಒಂದು ಧಾರ್ಮಿಕ ಮುಖ್ಯವಾಹಿನಿಯನ್ನು ನಿರ್ದೇಶಿಸುತ್ತದೆ. ಈ ಮುಖ್ಯವಾಹಿನಿಯು ಒಳಗಿನ ನಾವೀನ್ಯದಿಂದ, ಮತ್ತು ಹಿಂದೂ ಪದರದಲ್ಲಿ ಬಾಹ್ಯ ಸಂಪ್ರದಾಯಗಳು ಅಥವಾ ಪಂಥಗಳ ಸಮ್ಮಿಲನದಿಂದ ಅರಳಿತು.
  • ಪರಿಣಾಮವಾಗಿ, ಅಸಂಖ್ಯಾತ ಸಣ್ಣ, ಸರಳ ಪಂಥಗಳಿಂದ ಶುರುವಾಗಿ ಇಡೀ ಉಪಖಂಡದಾದ್ಯಂತ ಹರಡಿರುವ ಲಕ್ಷಾಂತರ ಅನುಯಾಯಿಗಳಿರುವ ಪ್ರಮುಖ ಧಾರ್ಮಿಕ ಚಳವಳಿಗಳವರೆಗೆ ವ್ಯಾಪಿಸುವ ಧಾರ್ಮಿಕ ಸಂಪ್ರದಾಯಗಳ ಅಗಾಧವಾದ ವೈವಿಧ್ಯ ಉಂಟಾಗಿದೆ. ಪರಿಣಾಮವಾಗಿ, ಬೌದ್ಧಧರ್ಮ ಅಥವಾ ಜೈನ ಧರ್ಮದಿಂದ ಪ್ರತ್ಯೇಕವಾದ ಒಂದು ಸ್ವತಂತ್ರ ಧರ್ಮವಾಗಿ ಹಿಂದೂ ಧರ್ಮದ ಗುರುತಿಸುವಿಕೆಯು ಅದು ಸ್ವತಂತ್ರವಾಗಿದೆ ಎಂಬ ಅದರ ಅನುಯಾಯಿಗಳ ದೃಢೀಕರಣದ ಮೇಲೆ ಅವಲಂಬಿಸಿದೆ.[೩೧]
  • ಹಿಂದೂ ನಂಬಿಕೆಗಳಲ್ಲಿನ ಗಮನ ಸೆಳೆಯುವ ಸಂಗತಿಗಳು, ಧರ್ಮ (ನೀತಿ ತತ್ವಗಳು/ಕರ್ತವ್ಯಗಳು), ಸಂಸಾರ (ಜನನ, ಬದುಕು, ಮರಣ ಮತ್ತು ಹೊಸಹುಟ್ಟಿನ ಮುಂದುವರಿಯುವ ಆವರ್ತ), ಕರ್ಮ (ಕ್ರಿಯೆ ಮತ್ತು ಅನಂತರದ ಪ್ರತಿಕ್ರಿಯೆ), ಮೋಕ್ಷ (ಸಂಸಾರದಿಂದ ಬಂಧವಿಮುಕ್ತಿ), ಮತ್ತು ವಿವಿಧ ಯೋಗಗಳನ್ನು (ಪಥಗಳು ಅಥವಾ ಆಚರಣೆಗಳು) ಒಳಗೊಂಡಿವೆ (ಆದರೆ ಇಷ್ಟಕ್ಕೇ ಸೀಮಿತವಲ್ಲ).[೩೨]

ದೇವರ ಪರಿಕಲ್ಪನೆ

  • ಹಿಂದೂ ಧರ್ಮವು ಏಕದೇವತಾವಾದ, ಬಹುದೇವತಾವಾದ,[೩೩] ಸರ್ವ ದೇವತಾವಾದ, ಸರ್ವಬ್ರಹ್ಮವಾದ, ಅದ್ವೈತವಾದ, ಮತ್ತು ನಿರೀಶ್ವರವಾದಗಳಿಗೆ ವ್ಯಾಪಿಸುವ ನಂಬಿಕೆಗಳುಳ್ಳ ಕಲ್ಪನೆಯ ಒಂದು ತರಹೇವಾರಿ ಮಂಡಲವಾಗಿದೆ.
  • ಅದರ ದೇವರ ಪರಿಕಲ್ಪನೆಯು ಸಂಕೀರ್ಣವಾಗಿದೆ ಮತ್ತು ಪ್ರತಿಯೊಂದು ನಿರ್ದಿಷ್ಟ ಸಂಪ್ರದಾಯ ಹಾಗೂ ಜೀವನಕ್ರಮದ ಮೇಲೆ ಅವಲಂಬಿಸಿದೆ. ಅದು ಕೆಲವೊಮ್ಮೆ ಏಕದೇವೋಪಾಸಕವೆಂದು (ಅಂದರೆ, ಒಬ್ಬ ಪ್ರತ್ಯೇಕ ದೇವರಿಗೆ ಧರ್ಮನಿಷ್ಠೆಯನ್ನು ಒಳಗೊಂಡಿರುವ ಆದರೆ ಬೇರೆ ದೇವತೆಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವ) ನಿರ್ದೇಶಿಸಲ್ಪಡುತ್ತದೆ, ಆದರೆ ಅಂತಹ ಯಾವುದೇ ಪದವು ಅತಿಸಾಮಾನ್ಯೀಕರಣವಾಗಿದೆ.Michaels 2004, p. xiv and Gill, N.S. ""Henotheism"". About, Inc. Retrieved on 2007-07-05.</ref>
  • ಪ್ರತಿಯೊಬ್ಬ ಮನುಷ್ಯನ ನಿಜವಾದ "ತಾನು" ಆಗಿರುವ ಆತ್ಮ ಅಥವಾ ಚೇತನವು ಚಿರಂತನವಾದದ್ದೆಂದು ಬಹುತೇಕ ಹಿಂದೂಗಳು ನಂಬುತ್ತಾರೆ.[೩೪] ಹಿಂದೂ ಧರ್ಮದ (ಅದ್ವೈತದಂತಹ ಪಂಥ) ಅದ್ವೈತವಾದಿ/ಸರ್ವಬ್ರಹ್ಮವಾದಿ ಧರ್ಮಶಾಸ್ತ್ರಗಳ ಪ್ರಕಾರ, ಈ ಆತ್ಮವು ಮೂಲಭೂತವಾಗಿ ಪರಮಪ್ರಧಾನ ಚೇತನವಾದ ಬ್ರಹ್ಮದಿಂದ ಬೇರೆಯಲ್ಲ. ಆದ್ದರಿಂದ, ಈ ಪಂಥಗಳನ್ನು ಅದ್ವೈತವಾದಿಯೆಂದು ಕರೆಯಲಾಗುತ್ತದೆ.[೩೫]
  • ಅದ್ವೈತ ಪಂಥದ ಪ್ರಕಾರ, ಒಬ್ಬರ ಆತ್ಮವು ಪರಮಪ್ರಧಾನ ಚೇತನವಾದ ಬ್ರಹ್ಮಕ್ಕೆ ಸರ್ವಾಂಗಸಮವಾಗಿದೆಯೆಂದು ಅರಿತುಕೊಳ್ಳುವುದು ಜೀವನದ ಗುರಿಯಾಗಿದೆ.[೩೬] ಆತ್ಮವು ಒಬ್ಬರ ಸ್ವಂತ ವ್ಯಕ್ತಿತ್ವದ ಅಂತರಾಳದ ತಿರುಳೆಂದು ಯಾರು ಸಂಪೂರ್ಣವಾಗಿ ಅರಿಯುತ್ತಾರೋ ಅವರು ಬ್ರಹ್ಮದೊಂದಿಗೆ ಒಂದು ಅನನ್ಯತೆಯನ್ನು ಅರಿಯುತ್ತಾರೆ.
  • ಅದರಿಂದಾಗಿ ಮೋಕ್ಷವನ್ನು (ಬಂಧವಿಮುಕ್ತಿ ಅಥವಾ ಸ್ವಾತಂತ್ರ್ಯ) ತಲಪುತ್ತಾರೆಂದು ಉಪನಿಷತ್ತುಗಳು ಹೇಳುತ್ತವೆ.[೩೪][೩೭] ದ್ವೈತವಾದಿ ಪಂಥಗಳು (ದ್ವೈತ ಮತ್ತು ಭಕ್ತಿ ನೋಡಿ) ಬ್ರಹ್ಮವು ವ್ಯಕ್ತಿತ್ವವನ್ನು ಹೊಂದಿರುವ ಒಬ್ಬ ಪರಮಶಕ್ತ ವ್ಯಕ್ತಿಯೆಂದು ಭಾವಿಸುತ್ತವೆ, ಮತ್ತು ಹಾಗಾಗಿ ಅವು, ಪಂಥವನ್ನು ಅವಲಂಬಿಸಿ, ಅವನನ್ನು ಅಥವಾ ಅವಳನ್ನು ವಿಷ್ಣು, ಬ್ರಹ್ಮ, ಶಿವ, ಅಥವಾ ಶಕ್ತಿಯ ರೂಪದಲ್ಲಿ ಆರಾಧಿಸುತ್ತವೆ. ಆತ್ಮವು ದೇವರನ್ನು ಅವಲಂಬಿಸಿದೆ.
  • ಮೋಕ್ಷವು ದೇವರ ಪ್ರತಿ ಪ್ರೀತಿ ಮತ್ತು ದೇವರ ಅನುಗ್ರಹವನ್ನು ಅವಲಂಬಿಸಿದೆ.[೩೮] ದೇವರನ್ನು (ಅನಂತ ಮೂಲತತ್ವವೆಂದು ನೋಡುವ ಬದಲು) ಪರಮಶಕ್ತ ಸಶರೀರ ವ್ಯಕ್ತಿಯಾಗಿ ನೋಡಲಾದಾಗ, ದೇವರನ್ನು ಈಶ್ವರ ("ಪ್ರಭು"[೩೯]), ಭಗವಂತ ("ಮಂಗಳಕರ ನಾದವನು"[೩೯]) ಅಥವಾ ಪರಮೇಶ್ವರನೆಂದು ("ಪರಮಶಕ್ತ ಪ್ರಭು"[೩೯]) ಕರೆಯಲಾಗುತ್ತದೆ.[೩೫]
  • ಆದರೆ ಈಶ್ವರ ಪದದ ಅರ್ಥವಿವರಣೆಗಳು, ಮೀಮಾಂಸಕರಿಂದ ಈಶ್ವರನಲ್ಲಿ ನಂಬಿಕೆಯಿಲ್ಲದಿರುವುದರಿಂದ ಅದ್ವೈತದಲ್ಲಿರುವಂತೆ ಬ್ರಹ್ಮ ಮತ್ತು ಈಶ್ವರ ಒಂದೇ ಎಂದು ಗುರುತಿಸಿಕೊಳ್ಳುವುದರವರೆಗೆ ವ್ಯಾಪಿಸಿ, ಬದಲಾಗುತ್ತವೆ.[೩೫] ವೈಷ್ಣವ ಪಂಥದ ಬಹಳಷ್ಟು ಸಂಪ್ರದಾಯಗಳಲ್ಲಿ ಅವನು ವಿಷ್ಣುವಾಗಿದ್ದಾನೆ.
  • ವೈಷ್ಣವ ಪವಿತ್ರಗ್ರಂಥಗಳ ಪಠ್ಯಗಳಲ್ಲಿ ಈ ಜೀವಿಯನ್ನು, ಕೆಲವೊಮ್ಮೆ ಸ್ವಯಂ ಭಗವಾನ್ ಎಂದು ಉಲ್ಲೇಖಿಸಲಾದ, ಕೃಷ್ಣನೆಂದು ಗುರುತಿಸಲಾಗುತ್ತದೆ. ನಿರೀಶ್ವರವಾದಿ ಓಲಿಕೆಗಳನ್ನು ಹೊಂದಿರುವ ಸಾಂಖ್ಯದಂತಹ ಪಂಥಗಳೂ ಇವೆ.ದರ್ಶನಶಾಸ್ತ್ರ ಗಳು ಮುಖ್ಯವಾಗಿವೆ.[೪೦]

ದೇವತೆಗಳು ಮತ್ತು ಅವತಾರಗಳು

ಚಿತ್ರ:RadheShyam07.jpg
ವಿಷ್ಣುವಿನ ಎಂಟನೆಯ ಅವತಾರನಾದ ಕೃಷ್ಣ (ಎಡಕ್ಕೆ) ಅಥವಾ ಸ್ವಯಂ ಭಗವಾನ್, ತನ್ನ ಗೆಳತಿ ರಾಧೆಯೊಂದಿಗೆ, ಹಲವಾರು ಸಂಪ್ರದಾಯಗಳಾದ್ಯಂತ ರಾಧಾ ಕೃಷ್ಣರೆಂದು ಆರಾಧಿಸಲ್ಪಡುತ್ತಾರೆ - ೧೭೦೦ರ ದಶಕದಿಂದ ಸಾಂಪ್ರದಾಯಿಕ ವರ್ಣಚಿತ್ರ.
  • ಹಿಂದೂ ಧರ್ಮಗ್ರಂಥಗಳು ದೇವ (ಅಥವಾ ಸ್ತ್ರೀ ರೂಪದಲ್ಲಿ ದೇವಿ) ("ತೇಜಸ್ವಿಯಾಗಿರುವವರು") ಎಂದು ಕರೆಯಲಾದ ಅಲೌಕಿಕ ಅಸ್ತಿತ್ವಗಳನ್ನು ಉಲ್ಲೇಖಿಸುತ್ತವೆ.[೪೧][೪೨]

ದೇವತೆಗಳು

  • ಹಿಂದೂ ಸಂಸ್ಕೃತಿಯ ಒಂದು ಅಖಂಡ ಭಾಗವಾಗಿದ್ದಾರೆ ಮತ್ತು ಕಲೆ, ವಾಸ್ತುಶಿಲ್ಪ, ಮತ್ತು ಮೂರ್ತಿಗಳ ಮೂಲಕ ಚಿತ್ರಿಸಲ್ಪಟ್ಟಿದ್ದಾರೆ, ಮತ್ತು ಅವರ ಬಗ್ಗೆ ಪೌರಾಣಿಕ ಕಥೆಗಳನ್ನು ಧರ್ಮಗ್ರಂಥಗಳಲ್ಲಿ ನಿರೂಪಿಸಲಾಗಿದೆ, ವಿಶೇಷವಾಗಿ ಭಾರತೀಯ ಮಹಾಕಾವ್ಯ ಮತ್ತು ಪುರಾಣಗಳಲ್ಲಿ. ಆದರೆ, ಹಲವುವೇಳೆ ಅವರನ್ನು, ಪರಮಶಕ್ತ ಸಶರೀರ ದೇವರಾದ ಈಶ್ವರನಿಂದ ಭಿನ್ನವಾಗಿ ನೋಡಲಾಗಿದೆ.
  • ಹಲವಾರು ಹಿಂದೂಗಳು ಒಂದು ನಿರ್ದಿಷ್ಟ ರೂಪದಲ್ಲಿ ಈಶ್ವರನನ್ನು ತಮ್ಮ ಇಷ್ಟ ದೇವತೆಯಾಗಿ ಆರಾಧಿಸುತ್ತಾರೆ.[೪೩][೪೪] ಆಯ್ಕೆಯು ವೈಯಕ್ತಿಕ ಒಲವು,[೪೧] ಮತ್ತು ಪ್ರಾದೇಶಿಕ ಹಾಗೂ ಮನೆತನದ ಸಂಪ್ರದಾಯಗಳ ವಿಷಯವಾಗಿದೆ.[೪೧]
  • ಹಿಂದೂ ಮಹಾಕಾವ್ಯಗಳು ಮತ್ತು ಪುರಾಣಗಳು ಸಮಾಜದಲ್ಲಿ ಧರ್ಮವನ್ನು ಪುನಃ ಸ್ಥಾಪಿಸಲು ಹಾಗೂ ಮಾನವರಿಗೆ ಮೋಕ್ಷಕ್ಕೆ ದಾರಿ ತೋರಿಸಲು ದೈಹಿಕ ರೂಪದಲ್ಲಿ ಭೂಮಿಗೆ ದೇವರ ಅವರೋಹಣದ ಹಲವಾರು ಉಪಾಖ್ಯಾನಗಳನ್ನು ನಿರೂಪಿಸುತ್ತವೆ. ಅಂತಹ ಒಂದು ಮೂರ್ತರೂಪಕ್ಕೆ ಅವತಾರವೆಂದು ಕರೆಯಲಾಗುತ್ತದೆ.
  • ಅತ್ಯಂತ ಪ್ರಸಿದ್ಧ ಅವತಾರಗಳು ವಿಷ್ಣುವಿನವು ಮತ್ತು ರಾಮ (ರಾಮಾಯಣದ ನಾಯಕ) ಹಾಗೂ ಕೃಷ್ಣರನ್ನು (ಮಹಾಭಾರತ ಮಹಾಕಾವ್ಯದಲ್ಲಿ ಒಬ್ಬ ಪ್ರಮುಖ ವ್ಯಕ್ತಿ) ಒಳಗೊಳ್ಳುತ್ತವೆ.

ಕರ್ಮ ಮತ್ತು ಸಂಸಾರ

ಕರ್ಮ ಎಂದರೆ ಅಕ್ಷರಶಃ ಕ್ರಿಯೆ, ಕೆಲಸ, ಅಥವಾ ಕಾರ್ಯ,[೪೫] ಮತ್ತು ಇದನ್ನು "ಕಾರಣ ಮತ್ತು ಫಲದ ನೈತಿಕ ನಿಯಮ"ವೆಂದು ವಿವರಿಸಬಹುದು.[೪೬]

  • ಉಪನಿಷತ್ತುಗಳ ಪ್ರಕಾರ, ಜೀವಾತ್ಮನೆಂದು ಕರೆಯಲ್ಪಡುವ ಒಬ್ಬ ವ್ಯಕ್ತಿಯು ಶಾರೀರಿಕ ಅಥವಾ ಮಾನಸಿಕ ಕ್ರಿಯೆಗಳಿಂದ ಸಂಸ್ಕಾರಗಳನ್ನು ವಿಕಸಿಸಿಕೊಳ್ಳುತ್ತಾನೆ. ಭೌತಿಕ ಶರೀರಕ್ಕಿಂತ ಹೆಚ್ಚು ಗೂಢ ಆದರೆ ಅತ್ಮಕ್ಕಿಂತ ಕಡಿಮೆ ಗೂಢ ಶರೀರವಾದ ಲಿಂಗಶರೀರವು ಭಾವನೆಗಳನ್ನು ಉಳಿಸಿಕೊಂಡು ಮುಂದಿನ ಜನ್ಮಕ್ಕೆ ಅವುಗಳನ್ನು ಹೊತ್ತೊಯ್ಯುತ್ತದೆ ಮತ್ತು ವ್ಯಕ್ತಿಗಾಗಿ ಒಂದು ಅದ್ವಿತೀಯ ಪಥವನ್ನು ಸ್ಥಾಪಿಸುತ್ತದೆ.[೪೭]
  • ಈ ಪ್ರಕಾರವಾಗಿ, ಒಂದು ವಿಶ್ವವ್ಯಾಪಿ, ನಿಷ್ಪಕ್ಷಪಾತ, ಮತ್ತು ಎಂದಿಗೂ ವಿಫಲಗೊಳ್ಳದ ಕರ್ಮದ ಪರಿಕಲ್ಪನೆಯು ಸಹಜವಾಗಿ ಪುನರವತಾರ ಮತ್ತು ಒಬ್ಬರ ವ್ಯಕ್ತಿತ್ವ, ಲಕ್ಷಣಗಳು, ಹಾಗೂ ಕುಟುಂಬವನ್ನು ವಿವರಿಸುತ್ತದೆ. ಕರ್ಮವು ಇಚ್ಛಾ ಸ್ವಾತಂತ್ರ್ಯ ಮತ್ತು ದೈವದ ಕಲ್ಪನೆಗಳನ್ನು ಒಟ್ಟಾಗಿ ಬಂಧಿಸುತ್ತದೆ.
  • ಕ್ರಿಯೆ, ಪ್ರತಿಕ್ರಿಯೆ, ಜನನ, ಮರಣ ಹಾಗೂ ಪುನರ್ಜನ್ಮದ ಈ ಚಕ್ರವು ಸಂಸಾರವೆಂದು ಕರೆಯಲಾಗುವ ಒಂದು ನಿರಂತತೆಯಾಗಿದೆ. ಪುನರವತಾರ ಮತ್ತು ಕರ್ಮದ ಕಲ್ಪನೆಯು ಹಿಂದೂ ಚಿಂತನೆಯಲ್ಲಿ ಒಂದು ಪ್ರಭಾವಿ ಆಧಾರವಾಕ್ಯವಾಗಿದೆ.
ಒಬ್ಬ ವ್ಯಕ್ತಿಯು ಹಳೆಯ ಮತ್ತು ಹರಿದ ಬಟ್ಟೆಗಳನ್ನು ತ್ಯಜಿಸಿ ಹೊಸ ಬಟ್ಟೆಗಳನ್ನು ಹೇಗೆ ಧರಿಸುತ್ತಾನೆಯೋ, ಹಾಗೆ ಒಂದು ಸಶರೀರ ಆತ್ಮವು ಹಳೆಯ ಶರೀರಗಳನ್ನು ತೊರೆದು ಹೊಸ ಭೌತಿಕ ಶರೀರಗಳನ್ನು ಪ್ರವೇಶಿಸುತ್ತದೆ. (ಭ.ಗೀ. ೨:೨೨)[೪೮]

ಎಂದು ಭಗವದ್ಗೀತೆಯು ಹೇಳುತ್ತದೆ.

  • ಸಂಸಾರವು ಕ್ಷಣಿಕ ಸಂತೋಷಗಳನ್ನು ಒದಗಿಸುತ್ತದೆ, ಮತ್ತು ಹಾಗಾಗಿ ಒಂದು ನಾಶವಾಗುವ ಶರೀರದ ಸಂತೋಷಗಳನ್ನು ಭೋಗಿಸಲು ಪುನರ್ಜನ್ಮವನ್ನು ಬಯಸುವಂತೆ ಜನರನ್ನು ಪ್ರೇರಿಸುತ್ತದೆ. ಆದರೆ, ಮೋಕ್ಷದ ಮೂಲಕ ಸಂಸಾರದ ಪ್ರಪಂಚದಿಂದ ಬಿಡುಗಡೆ ಹೊಂದುವುದು ಶಾಶ್ವತ ಸುಖ ಮತ್ತು ನೆಮ್ಮದಿಯನ್ನು ನಿಶ್ಚಿತಗೊಳಿಸುತ್ತದೆಂದು ನಂಬಲಾಗಿದೆ.[೪೯][೫೦] ಹಲವಾರು ಮರುಜನ್ಮಗಳ ಬಳಿಕ, ಒಂದು ಆತ್ಮವು ಅಂತಿಮವಾಗಿ ಬ್ರಹ್ಮಾಂಡದ ಚೇತನದೊಂದಿಗೆ (ಬ್ರಹ್ಮ/ಪರಮಾತ್ಮ) ಏಕತೆಯನ್ನು ಅರಸುತ್ತದೆಂದು ಭಾವಿಸಲಾಗಿದೆ.
  • ಮೋಕ್ಷ, ನಿರ್ವಾಣ ಅಥವಾ ಸಮಾಧಿಯೆಂದು ನಿರ್ದೇಶಿಸಲಾದ ಜೀವನದ ಅಂತಿಮ ಗುರಿಯನ್ನು ಹಲವು ವಿಭಿನ್ನ ರೀತಿಗಳಲ್ಲಿ ಅರ್ಥಮಾಡಿಕೊಳ್ಳಲಾಗುತ್ತದೆ: ದೇವರೊಂದಿಗೆ ಒಬ್ಬರ ಸಂಯೋಜನೆಯ ಸಾಕ್ಷಾತ್ಕಾರ; ದೇವರೊಂದಿಗೆ ಒಬ್ಬರ ಚಿರಂತನವಾದ ಸಂಬಂಧದ ಸಾಕ್ಷಾತ್ಕಾರ; ಎಲ್ಲ ಅಸ್ತಿತ್ವದ ಐಕಮತ್ಯದ ಸಾಕ್ಷಾತ್ಕಾರ; ಸಂಪೂರ್ಣ ನಿಸ್ವಾರ್ಥತೆ ಮತ್ತು ಆತ್ಮಜ್ಞಾನ; ಪರಿಪೂರ್ಣ ಮಾನಸಿಕ ಶಾಂತಿಯ ಸಿದ್ಧಿ; ಮತ್ತು ಪ್ರಾಪಂಚಿಕ ಕಾಮನೆಗಳಿಂದ ನಿರ್ಲಿಪ್ತತೆ.
  • ಅಂತಹ ಸಾಕ್ಷಾತ್ಕಾರವು ಒಬ್ಬರನ್ನು ಸಂಸಾರದಿಂದ ವಿಮುಕ್ತಗೊಳಿಸುತ್ತದೆ ಮತ್ತು ಪುನರ್ಜನ್ಮದ ಆವೃತ್ತವನ್ನು ಕೊನೆಗೊಳಿಸುತ್ತದೆ.[೫೧][೫೨] ಮೋಕ್ಷದ ಕರಾರುವಾಕ್ಕಾದ ಪರಿಕಲ್ಪನೆಯು ವಿವಿಧ ಹಿಂದೂ ತತ್ವ ಸಿದ್ಧಾಂತಗಳ ನಡುವೆ ಭಿನ್ನವಾಗಿದೆ.
  • ಉದಾಹರಣೆಗೆ, ಮೋಕ್ಷಪ್ರಾಪ್ತಿಯ ನಂತರ ಆತ್ಮವು ತನ್ನನ್ನು ಒಬ್ಬ ವ್ಯಕ್ತಿಯೊಂದಿಗೆ ಗುರುತಿಸದೆ ಎಲ್ಲ ವಿಷಯಗಳಲ್ಲೂ ಬ್ರಹ್ಮದೊಂದಿಗೆ ಸಮಾನವೆಂದು ಗುರುತಿಸುತ್ತದೆಂದು ಅದ್ವೈತ ವೇದಾಂತವು ಅಭಿಪ್ರಾಯಪಡುತ್ತದೆ. ದ್ವೈತ ಪಂಥದ ಅನುಯಾಯಿಗಳು ತಮ್ಮನ್ನು ಬ್ರಹ್ಮದ ಭಾಗವೆಂದು ಗುರುತಿಸಿಕೊಳ್ಳುತ್ತಾರೆ, ಮತ್ತು ಮೋಕ್ಷಪ್ರಾಪ್ತಿಯ ನಂತರ ತಾವು ಆಯ್ದುಕೊಂಡ ರೂಪದ ಈಶ್ವರನ ಸಂಗಡ ಚಿರಕಾಲವನ್ನು ಸ್ವರ್ಗದಲ್ಲಿ ಕಳೆಯುವರೆಂದು ನಿರೀಕ್ಷಿಸುತ್ತಾರೆ.[೫೩] ಹಾಗಾಗಿ, ದ್ವೈತ ಪಂಥದ ಅನುಯಾಯಿಗಳು "ಸಕ್ಕರೆಯನ್ನು ಸವಿಯಲು" ಅಪೇಕ್ಷಿಸಿದರೆ ಅದ್ವೈತ ಪಂಥದ ಅನುಯಾಯಿಗಳು "ಸಕ್ಕರೆಯಾಗಲು" ಅಪೇಕ್ಷಿಸುತ್ತಾರೆಂದು ಹೇಳಲಾಗುತ್ತದೆ.[೫೪]

ಮನುಷ್ಯ ಜನ್ಮದ ಉದ್ದೇಶಗಳು

ಮುಖ್ಯ ಲೇಖನ: ಪುರುಷಾರ್ಥಗಳು

ಸಂಪ್ರದಾಯಬದ್ಧ ಹಿಂದೂ ಚಿಂತನೆಯು ಪುರುಷಾರ್ಥಗಳೆಂದು ಪರಿಚಿತವಾದ ಮುಂದೆ ಹೇಳಲಾದ ಮನುಷ್ಯ ಜನ್ಮದ ಉದ್ದೇಶಗಳನ್ನು ಒಪ್ಪಿಕೊಳ್ಳುತ್ತದೆ: ಧರ್ಮ "ಧರ್ಮಿಷ್ಠತೆ, ನೀತಿಶಾಸ್ತ್ರ;" ಅರ್ಥ "ಜೀವನಾಧಾರ, ಸಂಪತ್ತು;" ಕಾಮ "ಇಂದ್ರಿಯಾಪೇಕ್ಷೆಗಳು;" ಮೋಕ್ಷ "(ಸಂಸಾರದಿಂದ) ಬಂಧವಿಮುಕ್ತಿ, ಬಿಡುಗಡೆ".[೫೫][೫೬]

ಯೋಗ

ಮುಖ್ಯ ಲೇಖನ: ಯೋಗ
 
ಯೋಗಿಕ ಧ್ಯಾನದಲ್ಲಿರುವ ಶಿವನ ಒಂದು ಮೂರ್ತಿ.
  • ಯಾವುದೇ ವಿಧಾನದಲ್ಲಿ ಒಬ್ಬ ಹಿಂದೂವು ಜೀವನದ ಗುರಿಯನ್ನು ಗೊತ್ತುಪಡಿಸಿದರೂ, ಆ ಗುರಿಯನ್ನು ತಲುಪಲು ಋಷಿಗಳು ಹೇಳಿಕೊಟ್ಟ ಹಲವಾರು ವಿಧಾನಗಳಿವೆ (ಯೋಗಗಳು). ಯೋಗಕ್ಕೆ ಮುಡುಪಾಗಿಡಲಾದ ಪಠ್ಯಗಳು, ಭಗವದ್ಗೀತೆ, ಯೋಗ ಸೂತ್ರಗಳು, ಹಠ ಯೋಗ ಪ್ರದೀಪಿಕಾ, ಮತ್ತು ಅವುಗಳ ತಾತ್ವಿಕ ಹಾಗೂ ಐತಿಹಾಸಿಕ ಆಧಾರವಾಗಿ ಉಪನಿಷತ್ತುಗಳನ್ನು ಒಳಗೊಂಡಿವೆ.
  • ಜೀವನದ ಆಧ್ಯಾತ್ಮಿಕ ಗುರಿಯನ್ನು (ಮೋಕ್ಷ, ಸಮಾಧಿ ಅಥವಾ ನಿರ್ವಾಣ) ಸಾಧಿಸಲು ಒಬ್ಬರು ಅನುಸರಿಸಬಹುದಾದ ದಾರಿಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:
  • ಭಕ್ತಿಯೋಗ (ಪ್ರೀತಿ ಮತ್ತು ಭಕ್ತಿಯ ಮಾರ್ಗ)
  • ಕರ್ಮಯೋಗ (ನ್ಯಾಯವಾದ ಕ್ರಿಯೆಯ ಮಾರ್ಗ)
  • ರಾಜಯೋಗ (ಧ್ಯಾನದ ಮಾರ್ಗ)
  • ಜ್ಞಾನಯೋಗ (ವಿವೇಕದ ಮಾರ್ಗ)[೩೫]
  • ತನ್ನ ಒಲವು ಮತ್ತು ವಿವೇಚನೆಯ ಪ್ರಕಾರ ಒಬ್ಬ ವ್ಯಕ್ತಿಯು ಬೇರೆಯವುಗಳ ಬದಲು ಒಂದು ಅಥವಾ ಕೆಲವು ಯೋಗಗಳನ್ನು ಆರಿಸಿಕೊಳ್ಳಬಹುದು. ಈಗ ವಿಶ್ವವು ಕಲಿಯುಗದಲ್ಲಿರುವುದರಿಂದ (ಯುಗ ಆವರ್ತದ ಭಾಗವಾದ ನಾಲ್ಕು ಯುಗಗಳ ಪೈಕಿ ಒಂದು) ತಮ್ಮ ನಂಬಿಕೆಯನ್ನು ಆಧರಿಸಿ, ಬಹುತೇಕ ಜನರಿಗೆ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಸಾಧಿಸಲು ಭಕ್ತಿಯು ಏಕೈಕ ವ್ಯಾವಹಾರಿಕವಾದ ಮಾರ್ಗವೆಂದು ಕೆಲವು ಭಕ್ತಿ ಪಂಥಗಳು ಬೋಧಿಸುತ್ತವೆ.[೫೭] ಒಂದು ಯೋಗದ ಆಚರಣೆಯು ಬೇರೆಯವುಗಳನ್ನು ವರ್ಜಿಸುವುದಿಲ್ಲ.
  • ವಿವಿಧ ಯೋಗಗಳು ಇತರ ಯೋಗಗಳಲ್ಲಿ ಸಹಜವಾಗಿ ಬೆರೆಯುತ್ತವೆ ಮತ್ತು ಇತರ ಯೋಗಗಳಿಗೆ ನೆರವಾಗುತ್ತವೆಂದು ಹಲವು ಪಂಥಗಳು ನಂಬುತ್ತವೆ. ಉದಾಹರಣೆಗೆ, ಜ್ಞಾನಯೋಗದ ಆಚರಣೆಯು ಸ್ವಾಭಾವಿಕವಾಗಿ ಪರಿಶುದ್ಧ ಪ್ರೇಮದೆಡೆಗೆ (ಭಕ್ತಿಯೋಗದ ಗುರಿ) ಕರೆದೊಯ್ಯುತ್ತದೆಂದು, ಮತ್ತು ವಿಪರ್ಯಯವಾಗಿ ಭಕ್ತಿಯೋಗದ ಆಚರಣೆ ಜ್ಞಾನಯೋಗದೆಡೆಗೆ ಕರೆದೊಯ್ಯುತ್ತದೆಂದು ಭಾವಿಸಲಾಗಿದೆ.[೫೮] (ರಾಜಯೋಗದಲ್ಲಿರುವಂತೆ) ಗಹನವಾದ ಧ್ಯಾನವನ್ನು ಅಭ್ಯಾಸ ಮಾಡುವ ಯಾರಾದರೂ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗಗಳ ಪ್ರಮುಖವಾದ ಮೂಲತತ್ವಗಳನ್ನು ಮೈದಾಳಿಸಿಕೊಂಡಿರಲೇಬೇಕು.Monier-Williams 1974, p. 116</ref>

ಆಚರಣೆಗಳು

 
ಚತುರ್ಥಿ ಹಬ್ಬದ ಅವಧಿಯಲ್ಲಿ ಗಣೇಶನ ವಿಸರ್ಜನೆಯ (ನಿಮರ್ಜನೆ) ಆಚರಣೆ
  • ಹಿಂದೂ ಆಚರಣೆಗಳು ಸಾಮಾನ್ಯವಾಗಿ ದೇವರ ಅರಿವನ್ನು ಅರಸುವ ಮತ್ತು ಕೆಲವೊಮ್ಮೆ ದೇವತೆಗಳಿಂದ ಆಶೀರ್ವಾದಗಳನ್ನು ಬೇಡುವುದನ್ನು ಸಹ ಒಳಗೊಂಡಿರುತ್ತವೆ. ಹಾಗಾಗಿ, ಹಿಂದೂ ಧರ್ಮವು ದಿನನಿತ್ಯದ ಜೀವನದ ನಡುವೆಯೂ ಒಬ್ಬರಿಗೆ ದೈವತ್ವದ ಬಗ್ಗೆ ಚಿಂತಿಸಲು ನೆರವಾಗುವ ಉದ್ದೇಶದಿಂದ ಅನೇಕ ಆಚರಣೆಗಳನ್ನು ವೃದ್ಧಿಪಡಿಸಿದೆ.
  • ಹಿಂದೂಗಳು, ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ, ಪೂಜೆಯಲ್ಲಿ (ಆರಾಧನೆ ಅಥವಾ ಗೌರವ)[೩೯] ಭಾಗವಹಿಸಬಹುದು. ಮನೆಯಲ್ಲಿ, ಹಿಂದೂಗಳು ಹಲವುವೇಳೆ ತಮ್ಮ ಇಷ್ಟದೇವತೆಗಳಿಗೆ ಸಮರ್ಪಿತವಾದ ಮೂರ್ತಿಗಳಿರುವ ಒಂದು ದೇವರಮನೆಯನ್ನು ನಿರ್ಮಿಸುತ್ತಾರೆ.
  • ದೇವಸ್ಥಾನಗಳು ಸಾಮಾನ್ಯವಾಗಿ ಒಬ್ಬ ಮುಖ್ಯ ದೇವತೆಗೆ, ಜೊತೆಗೆ ಸಂಬಂಧಿತ ಅಪ್ರಧಾನ ದೇವತೆಗಳಿಗೆ, ಸಮರ್ಪಿತವಾಗಿರುತ್ತವೆಯಾದರೂ ಕೆಲವು ದೇವಸ್ಥಾನಗಳು ಅನೇಕ ದೇವತೆಗಳನ್ನು ಹೊಂದಿರುತ್ತವೆ. ದೇವಸ್ಥಾನಗಳಿಗೆ ಭೇಟಿ ನೀಡುವುದು ಅನಿವಾರ್ಯವಲ್ಲ,[೫೯] ಮತ್ತು ಹಲವರು ಧಾರ್ಮಿಕ ಹಬ್ಬಗಳ ಅವಧಿಯಲ್ಲಿ ಮಾತ್ರ ದೇವಸ್ಥಾನಗಳಿಗೆ ಭೇಟಿಕೊಡುತ್ತಾರೆ.
  • ಹಿಂದೂಗಳು ತಮ್ಮ ಪೂಜೆಯನ್ನು ಮೂರ್ತಿಗಳ ಮೂಲಕ ಮಾಡುತ್ತಾರೆ. ಮೂರ್ತಿಯು ಆರಾಧಕ ಮತ್ತು ದೇವರ ನಡುವೆ ಒಂದು ಪ್ರತ್ಯಕ್ಷ ಸಂಪರ್ಕವಾಗಿ ಕೆಲಸಮಾಡುತ್ತದೆ.[೬೦] ದೇವರು ಸರ್ವಾಂತರ್ಯಾಮಿಯಾಗಿರುವುದರಿಂದ ಮೂರ್ತಿಯನ್ನು ಹಲವುವೇಳೆ ದೇವರ ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ.
  • ಮೂರ್ತಿಯನ್ನು ಬರಿಯ ಕಲ್ಲು ಅಥವಾ ಕಟ್ಟಿಗೆಯಾಗಿ ಭಾವಿಸದೇ ದೈವತ್ವದ ಪ್ರಕಟವಾದ ರೂಪವಾಗಿ ಭಾವಿಸಬೇಕೆಂದು ಪದ್ಮ ಪುರಾಣವು ಹೇಳುತ್ತದೆ.[೬೧] ಆರ್ಯ ಸಮಾಜದಂತಹ ಕೆಲವು ಹಿಂದೂ ಪಂಥಗಳು ಮೂರ್ತಿಗಳ ಮೂಲಕ ದೇವರನ್ನು ಪೂಜಿಸುವುದನ್ನು ನಂಬುವುದಿಲ್ಲ.
  • ಹಿಂದೂ ಧರ್ಮವು ಕಲೆ, ವಾಸ್ತುಶಾಸ್ತ್ರ, ಸಾಹಿತ್ಯ ಮತ್ತು ಪೂಜೆಯಲ್ಲಿ ಧಾರ್ಮಿಕವನ್ನು ಚಿತ್ರಿಸಲು ಸಂಕೇತ ಸಮೂಹ ಮತ್ತು ವಿಗ್ರಹ ನಿರ್ಮಾಣಶಾಸ್ತ್ರದ ವಿಕಸಿತ ವ್ಯವಸ್ಥೆಯನ್ನು ಹೊಂದಿದೆ. ಈ ಸಂಕೇತಗಳು ತಮ್ಮ ಅಂತರಾರ್ಥವನ್ನು ಧರ್ಮಗ್ರಂಥಗಳು, ಪುರಾಣ ಸಂಗ್ರಹಗಳು, ಅಥವಾ ಸಾಂಸ್ಕೃತಿಕ ಸಂಪ್ರದಾಯಗಳಿಂದ ಪಡೆಯುತ್ತವೆ.
  • (ಪರಬ್ರಹ್ಮವನ್ನು ನಿರೂಪಿಸುವ) ಓಂ ವರ್ಣ ಮತ್ತು (ಶುಭವನ್ನು ಸಂಕೇತೀಕರಿಸುವ) ಸ್ವಸ್ತಿಕ ಚಿಹ್ನೆಗಳು ಹಿಂದೂ ಧರ್ಮವನ್ನೇ ಪ್ರತಿನಿಧಿಸುವಷ್ಟು ದೊಡ್ಡದಾಗಿ ಬೆಳೆದಿವೆ, ಮತ್ತು ತಿಲಕದಂತಹ ಇತರ ಚಿಹ್ನೆಗಳು ಮತದ ಒಬ್ಬ ಅನುಯಾಯಿಯನ್ನು ಗುರುತಿಸುತ್ತವೆ. ಹಿಂದೂ ಧರ್ಮವು, ಕಮಲ, ಚಕ್ರ ಮತ್ತು ವೀಣೆಯನ್ನು ಒಳಗೊಂಡಂತೆ, ಹಲವು ಸಂಕೇತಗಳನ್ನು ನಿರ್ದಿಷ್ಟ ದೇವತೆಗಳೊಂದಿಗೆ ಸಂಬಂಧಿಸುತ್ತದೆ.
  • ಮಂತ್ರಗಳು ಅವುಗಳ ಅರ್ಥ, ಶಬ್ದ ಮತ್ತು ಪಠನ ಶೈಲಿಯ ಮೂಲಕ ಒಬ್ಬ ಭಕ್ತನಿಗೆ ಮನಸ್ಸನ್ನು ದೇವರ ಚಿಂತನೆಗಳ ಮೇಲೆ ಕೇಂದ್ರೀಕರಿಸಲು ಅಥವಾ ದೇವತೆಗಳ ಪ್ರತಿ ತನ್ನ ಭಕ್ತಿಯನ್ನು ವ್ಯಕ್ತಪಡಿಸಲು ನೆರವಾಗುವ ವಿಜ್ಞಾಪನೆಗಳು, ಸ್ತುತಿಗಳು ಮತ್ತು ಪ್ರಾರ್ಥನೆಗಳು. ಅನೇಕ ಭಕ್ತರು ಮುಂಜಾನೆಯ ಶುಧ್ಧಿಸ್ನಾನವನ್ನು ಗಾಯತ್ರಿ ಮಂತ್ರ ಅಥವಾ ಮಹಾಮೃತ್ಯುಂಜಯ ಮಂತ್ರಗಳನ್ನು ಪಠಿಸುತ್ತ ಒಂದು ಪವಿತ್ರವಾದ ನದಿಯ ದಡದಲ್ಲಿ ಮಾಡುತ್ತಾರೆ.
  • ಮಹಾಭಾರತ ಮಹಾಕಾವ್ಯವು (ಅನೇಕ ಹಿಂದೂಗಳು ಈಗ ನಡೆಯುತ್ತಿರುವ ಯುಗವೆಂದು ನಂಬುವ) ಕಲಿಯುಗದಲ್ಲಿ ಜಪವನ್ನು (ವಿಧಿವತ್ತಾದ ಪಠನ) ಅತಿ ಮುಖ್ಯವಾದ ಕರ್ತವ್ಯವೆಂದು ಕೊಂಡಾಡುತ್ತದೆ. ಅನೇಕರು ಜಪವನ್ನು ತಮ್ಮ ಪ್ರಮುಖ ಆಧ್ಯಾತ್ಮಿಕ ಆಚರಣೆಯಾಗಿ ಅಳವಡಿಸಿಕೊಳ್ಳುತ್ತಾರೆ.

ಧಾರ್ಮಿಕ ಸಂಸ್ಕಾರಗಳು

 
ಒಂದು ಹಿಂದೂ ವಿವಾಹ ಸಮಾರಂಭದಲ್ಲಿ ಸಾಂಪ್ರದಾಯಿಕ ದೀಪಗಳು ಮತ್ತು ಇತರ ಪ್ರಾರ್ಥನಾ ವಸ್ತುಗಳು.

ಹಿಂದೂಗಳು ಬಹುಸಂಖ್ಯೆಯಲ್ಲಿ ದೈನಂದಿನ ಆಧಾರದ ಮೇಲೆ ಧಾರ್ಮಿಕ ಸಂಸ್ಕಾರಗಳಲ್ಲಿ ಭಾಗವಹಿಸುತ್ತಾರೆ.[೬೨] ಬಹುತೇಕ ಹಿಂದೂಗಳು ಮನೆಯಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಆಚರಿಸುತ್ತಾರೆ[೬೩], ಆದರೆ ಸಂಸ್ಕಾರಗಳ ಆಚರಣೆಯು ಪ್ರದೇಶಗಳು, ಹಳ್ಳಿಗಳು, ಮತ್ತು ವ್ಯಕ್ತಿಗಳ ನಡುವೆ ಬಹಳವಾಗಿ ಬದಲಾಗುತ್ತವೆ. ಶ್ರದ್ಧಾವಂತ ಹಿಂದೂಗಳು ಪ್ರಾತಃಕಾಲದಲ್ಲಿ ಸ್ನಾನದ ನಂತರ ಪೂಜೆ, (ಸಾಮಾನ್ಯವಾಗಿ ಒಂದು ಕೌಟುಂಬಿಕ ದೇವಸ್ಥಾನ ದಲ್ಲಿ ಮತ್ತು ವಿಶಿಷ್ಟವಾಗಿ ಒಂದು ದೀಪವನ್ನು ಬೆಳಗುವುದು ಮತ್ತು ದೇವತೆಗಳ ಮೂರ್ತಿಗಳಿಗೆ ನೈವೇದ್ಯಾರ್ಪಣೆಯನ್ನು ಒಳಗೊಳ್ಳುತ್ತದೆ.

  • ಧಾರ್ಮಿಕ ಸಾಹಿತ್ಯದ ಪಠನ, ಭಜನೆ, ಧ್ಯಾನ, ಮಂತ್ರಗಳ ಪಠನ, ಧರ್ಮಗ್ರಂಥಗಳ ವಾಚನ ಇತ್ಯಾದಿ ದಿನನಿತ್ಯದ ಕೆಲಸಗಳನ್ನು ನೆರವೇರಿಸುತ್ತಾರೆ[೬೩]. ಪಾವಿತ್ರ್ಯ ಮತ್ತು ಮಾಲಿನ್ಯದ ನಡುವಣ ವಿಭಜನವು ಧಾರ್ಮಿಕ ಸಂಸ್ಕಾರದಲ್ಲಿನ ಒಂದು ಗಮನಾರ್ಹ ವೈಶಿಷ್ಟ್ಯವಾಗಿದೆ.
  • ಧಾರ್ಮಿಕ ಸಂಸ್ಕಾರ ವಿಧಾನಗಳ ಮೊದಲು ಅಥವಾ ಅವುಗಳ ಅವಧಿಯಲ್ಲಿ ಪರಿಹರಿಸಿಕೊಳ್ಳಲೇಬೇಕಾದ ಅಥವಾ ಹೊರಗುಮಾಡಬೇಕಾದ ಆಚರಿಸುವವನ ಸ್ವಲ್ಪ ಪ್ರಮಾಣದ ಅಪವತ್ರಿತತೆ ಅಥವಾ ಮಲಿನತೆಯನ್ನು ಧಾರ್ಮಿಕ ವಿಧಿಗಳು ಭಾವಿಸಿಕೊಳ್ಳುತ್ತವೆ. ಹಾಗಾಗಿ ಶುದ್ಧೀಕರಣವು, ಸಾಮಾನ್ಯವಾಗಿ ನೀರಿನಿಂದ, ಬಹುತೇಕ ಧಾರ್ಮಿಕ ಕಾರ್ಯಗಳ ಒಂದು ವಿಶಿಷ್ಟ ಲಕ್ಷಣವಾಗಿದೆ.[೬೩]
  • ಇತರ ವೈಶಿಷ್ಟ್ಯಗಳು, ಕಾಲ ಕಳೆದಂತೆ ಶೇಖರಣೆಯಾಗಿ ಮುಂದಿನ ಜಗತ್ತಿನಲ್ಲಿ ಕಷ್ಟಗಳನ್ನು ಕಡಿಮೆಮಾಡುವ, ದಾನದ ನೆರವೇರಿಕೆ ಅಥವಾ ಸುಕರ್ಮಗಳ ಮೂಲಕ ಪಡೆದ ಸಮರ್ಪಣೆಯ ಫಲದಾಯಕತೆಯಲ್ಲಿನ ನಂಬಿಕೆ ಮತ್ತು ಪುಣ್ಯದ ಪರಿಕಲ್ಪನೆಯನ್ನು ಒಳಗೊಂಡಿವೆ.[೬೩] ಅಗ್ನಿ ಆಹುತಿಯ ವೈದಿಕ ವಿಧಿಗಳು (ಯಜ್ಞ) ಈಗ ಕೇವಲ ಸಾಂದರ್ಭಿಕ ವಾಡಿಕೆಗಳಾಗಿವೆಯಾದರೂ ಸಿದ್ಧಾಂತದಲ್ಲಿ ಬಹಳ ಪವಿತ್ರವೆಂದು ಭಾವಿಸಲಾಗಿದೆ. ಆದರೆ ಹಿಂದೂ ವಿವಾಹ ಮತ್ತು ಶವ ಸಂಸ್ಕಾರ ಸಮಾರಂಭಗಳಲ್ಲಿ ಯಜ್ಞ ಮತ್ತು ವೈದಿಕ ಮಂತ್ರಗಳ ಪಠನ ಈಗಲೂ ರೂಢಿಯಲ್ಲಿವೆ.[೬೪]
  • ಕ್ರಿಯಾವಿಧಿಗಳು, ಉಪಚಾರಗಳು ಕಾಲದೊಂದಿಗೆ ಬದಲಾಗುತ್ತವೆ. ಉದಾಹರಣೆಗೆ, ಕಳೆದ ಕೆಲವು ನೂರು ವರ್ಷಗಳಲ್ಲಿ, ಆಗಮ ಶಾಸ್ತ್ರದಿಂದ ವಿಧಿಸಲ್ಪಟ್ಟ ರೂಢಿಯಲ್ಲಿದ್ದ ಷೋಡಶೋಪಚಾರಗಳ ವರ್ಗದಲ್ಲಿನ ಧಾರ್ಮಿಕ ನಾಟ್ಯ ಮತ್ತು ಸಂಗೀತ ನಿವೇದನೆಗಳಂತಹ ಕ್ರಿಯಾವಿಧಿಗಳನ್ನು ಅನ್ನ ಮತ್ತು ಸಿಹಿ ಭಕ್ಷ್ಯಗಳ ನಿವೇದನೆಗಳಿಂದ ಬದಲಾಯಿಸಲಾಯಿತು.
  • ಜನನ, ವಿವಾಹ, ಮತ್ತು ಮರಣದಂತಹ ಸಂದರ್ಭಗಳು ಹಲವುವೇಳೆ ವಿಸ್ತಾರವಾದ ವರ್ಗಗಳ ಧಾರ್ಮಿಕ ಸಂಪ್ರದಾಯಗಳನ್ನು ಒಳಗೊಳ್ಳುತ್ತವೆ. ಹಿಂದೂ ಧರ್ಮದಲ್ಲಿ, ಜೀವನ ಚಕ್ರದ ಸಂಸ್ಕಾರಗಳು, ಅನ್ನಪ್ರಾಶನ (ಶಿಶುವಿಗೆ ನೀಡುವ ಮೊದಲ ಗಟ್ಟಿ ಆಹಾರದ ಸಂದರ್ಭ), ಉಪನಯನ (ಮೇಲು ಜಾತಿಯ ಮಕ್ಕಳು ಶಾಸ್ತ್ರೋಕ್ತ ವಿದ್ಯಾಭ್ಯಾಸದಲ್ಲಿ ತಮ್ಮ ಉಪಕ್ರಮದ ಸಂದರ್ಭದಲ್ಲಿ ಒಳಗೊಳ್ಳುವ "ಪವಿತ್ರವಾದ ದಾರದ ಸಮಾರಂಭ") ಮತ್ತು ಶ್ರಾದ್ಧ (ಮೃತರ ಹೆಸರಿನಲ್ಲಿ ಜನರಿಗೆ ಔತಣನೀಡಿ ಸತ್ಕರಿಸುವ ಕ್ರಿಯಾವಿಧಿ) ಒಳಗೊಳ್ಳುತ್ತವೆ.[೬೫][೬೬] ಭಾರತದಲ್ಲಿನ ಬಹುತೇಕ ಜನರಿಗೆ, ಯುವ ದಂಪತಿಗಳ ಮದುವೆ ತೀರ್ಮಾನ ಮತ್ತು ಮದುವೆಯ ಕರಾರುವಾಕ್ಕಾದ ದಿನಾಂಕ ಹಾಗೂ ಕಾಲಗಳು ಜ್ಯೋತಿಷಿಗಳ ಸಮಾಲೋಚನೆಯಲ್ಲಿ ತಂದೆತಾಯಂದಿರಿಂದ ನಿರ್ಧರಿಸಲ್ಪಡುವ ವಿಷಯಗಳಾಗಿವೆ.[೬೫] ಮರಣಾನಂತರ, ಸಂನ್ಯಾಸಿಗಳು, ಹಿಜಿಡ, ಮತ್ತು ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೊರತು ಬೇರೆಲ್ಲರಿಗೂ ದಹನಸಂಸ್ಕಾರವು ಅನಿವಾರ್ಯವೆಂದು ಪರಿಗಣಿಸಲಾಗುತ್ತದೆ.[೬೭] ದಹನಸಂಸ್ಕಾರವನ್ನು ವಿಶಿಷ್ಟವಾಗಿ ಬಟ್ಟೆಯಿಂದ ಶವವನ್ನು ಸುತ್ತಿ ಅದನ್ನು ಚಿತೆಯ ಮೇಲೆ ಸುಟ್ಟು ನೆರವೇರಿಸಲಾಗುತ್ತದೆ.

ತೀರ್ಥಯಾತ್ರೆ ಮತ್ತು ಹಬ್ಬಗಳು

 
ಬೆಳಕಿನ ಹಬ್ಬವಾದ ದೀಪಾವಳಿಯು ಹಿಂದೂ ಧರ್ಮದ ಒಂದು ಮುಖ್ಯ ಹಬ್ಬವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಹಲವುವೇಳೆ ಬೆಳಗಿಸಲಾದ ಸಾಂಪ್ರದಾಯಿಕ ಹಣತೆಗಳನ್ನು ಇಲ್ಲಿ ತೋರಿಸಲಾಗಿದೆ

ಧರ್ಮಗ್ರಂಥಗಳು

ಮುಖ್ಯ ಲೇಖನಗಳು: ಶೃತಿ ಮತ್ತು ಸ್ಮೃತಿ
 
ಋಗ್ವೇದವು ಅತ್ಯಂತ ಹಳೆಯ ಧರ್ಮಗ್ರಂಥಗಳ ಪೈಕಿ ಒಂದು. ಋಗ್ವೇದದ ಈ ಹಸ್ತಲಿಖಿತ ಪುಸ್ತಕವು ದೇವನಾಗರಿಯಲ್ಲಿದೆ
  • "ವಿಭಿನ್ನ ವ್ಯಕ್ತಿಗಳಿಂದ ವಿಭಿನ್ನ ಕಾಲಗಳಲ್ಲಿ ಅರಿಯಲಾದ ಆಧ್ಯಾತ್ಮಿಕ ಸೂತ್ರಗಳ ಶೇಖರಿಸಿದ ಭಂಡಾರ"ದ ಮೇಲೆ ಹಿಂದೂ ಧರ್ಮವು ಆಧಾರಿತವಾಗಿದೆ.[೬೯][೭೦] ಅವುಗಳನ್ನು ಬರೆಯುವುದಕ್ಕೆ ಮೊದಲು, ಹಲವು ಶತಮಾನಗಳವರೆಗೆ ಕಂಠಪಾಠಕ್ಕೆ ನೆರವಾಗಲು ಧರ್ಮಗ್ರಂಥಗಳು ಮೌಖಿಕವಾಗಿ ಶ್ಲೋಕ ರೂಪದಲ್ಲಿ ಪ್ರಸಾರ ಮಾಡಲ್ಪಟ್ಟವು.[೭೧]
  • ಅನೇಕ ಶತಮಾನಗಳ ಅವಧಿಯಲ್ಲಿ, ಋಷಿಗಳು ಉಪದೇಶಗಳನ್ನು ಪರಿಷ್ಕರಿಸಿ ಧರ್ಮಗ್ರಂಥಗಳನ್ನು ವಿಸ್ತರಿಸಿದರು. ವೈದಿಕೋತ್ತರ ಮತ್ತು ಈಗಿನ ಹಿಂದೂ ನಂಬಿಕೆಯಲ್ಲಿ, ಬಹುತೇಕ ಹಿಂದೂ ಧರ್ಮಗ್ರಂಥಗಳನ್ನು ವಿಶಿಷ್ಟವಾಗಿ ಪದಶಃವಾಗಿ ವ್ಯಾಖ್ಯಾನಿಸಲಾಗುವುದಿಲ್ಲ. ಅವುಗಳಿಂದ ಗ್ರಹಿಸಲಾದ ನೀತಿ ತತ್ವಗಳು ಮತ್ತು ರೂಪಕಾರ್ಥಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ.[೭೨] ಬಹುತೇಕ ಧಾರ್ಮಿಕ ಪಠ್ಯಗಳು ಸಂಸ್ಕೃತದಲ್ಲಿವೆ. ಪಠ್ಯಗಳನ್ನು ಶ್ರುತಿ ಮತ್ತು ಸ್ಮೃತಿ ಎಂಬ ವರ್ಗಗಳಲ್ಲಿ ವರ್ಗೀಕರಿಸಲಾಗುತ್ತದೆ.

ಶ್ರುತಿ

  • ಶ್ರುತಿ (ಅಕ್ಷರಶಃ ಕೇಳಲ್ಪಟ್ಟದ್ದು) [೭೩] ಪದವು ಮೂಲತಃ, ಹಿಂದೂ ಧರ್ಮಗ್ರಂಥಗಳ ಅತ್ಯಂತ ಮುಂಚಿನ ದಾಖಲೆಯಾದ, ವೇದಗಳನ್ನು ನಿರ್ದೇಶಿಸುತ್ತದೆ.
  • ಅನೇಕ ಹಿಂದೂಗಳು ವೇದಗಳು ಪ್ರಾಚೀನ ಋಷಿಗಳಿಗೆ ಬಹಿರಂಗಗೊಂಡ ಚಿರಂತನವಾದ ಸತ್ಯಗಳೆಂದು ಭಾವಿಸುತ್ತಾರಾದರೂ,[೭೦] ಕೆಲವು ಭಕ್ತರು ವೇದಗಳ ಸೃಷ್ಟಿಯನ್ನು ಒಬ್ಬ ದೇವತೆ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸುವುದಿಲ್ಲ. ಅವು, ಋಷಿಗಳಿಗೆ ಬಹಿರಂಗಗೊಳ್ಳದಿದ್ದರೂ ಅಸ್ತಿತ್ವದಲ್ಲಿರುತ್ತಿದ್ದ, ಆಧ್ಯಾತ್ಮಿಕ ಪ್ರಪಂಚದ ನಿಯಮಗಳೆಂದು ಭಾವಿಸಲಾಗಿದೆ.[೬೯][೭೪][೭೫] ವೇದಗಳ ಆಧ್ಯಾತ್ಮಿಕ ಸತ್ಯಗಳು ಚಿರಂತನವಾದ್ದರಿಂದ ಅವು ಹೊಸ ವಿಧಾನಗಳಲ್ಲಿ ವ್ಯಕ್ತಪಡಿಸಲಾಗುತ್ತಿವೆಯೆಂದು ಹಿಂದೂಗಳು ನಂಬುತ್ತಾರೆ.[೭೬]

(ಋಗ್-, ಸಾಮ-, ಯಜುರ್- ಮತ್ತು ಅಥರ್ವ- ಎಂದು ಕರೆಯಲಾಗುವ) ನಾಲ್ಕು ವೇದಗಳಿವೆ. ಋಗ್ವೇದವು ಮೊದಲನೆಯ ಮತ್ತು ಅತ್ಯಂತ ಪ್ರಮುಖ ವೇದವಾಗಿದೆ.[೭೭] ಪ್ರತಿ ವೇದವು ನಾಲ್ಕು ಭಾಗಗಳಲ್ಲಿ ವಿಭಜನೆಗೊಂಡಿದೆ:

  • ಪವಿತ್ರ ಮಂತ್ರಗಳನ್ನು ಒಳಗೊಳ್ಳುವ ಪ್ರಮುಖ ಭಾಗವಾದ ಸಂಹಿತೆಯು ನಿಖರವಾದ ಅರ್ಥದಲ್ಲಿ ವೇದವೆಂದು ಹೇಳಲಾಗುತ್ತದೆ. ಇತರ ಮೂರು ಭಾಗಗಳು, ಸಾಮಾನ್ಯವಾಗಿ ಗದ್ಯ ರೂಪದಲ್ಲಿರುವ, ಭಾಷ್ಯಗಳ ಒಂದು ಮೂರು-ಶ್ರೇಣಿಯ ಸಮಷ್ಟಿಯನ್ನು ರಚಿಸುತ್ತವೆ, ಮತ್ತು ಸಂಹಿತೆಗಿಂತ ಕಾಲದಲ್ಲಿ ಸ್ವಲ್ಪ ತಡವಾಗಿ ರಚಿತವಾದದ್ದೆಂದು ನಂಬಲಾಗಿದೆ.
  • ಇವುಗಳು: ಬ್ರಾಹ್ಮಣಗಳು, ಆರಣ್ಯಕಗಳು, ಮತ್ತು ಉಪನಿಷತ್ತುಗಳು. ಮೊದಲ ಎರಡು ಭಾಗಗಳನ್ನು ನಂತರ ಕರ್ಮಕಾಂಡವೆಂದು (ಧಾರ್ಮಿಕ ಸಂಸ್ಕಾರದ ಭಾಗ) ಕರೆಯಲಾಯಿತು, ಮತ್ತು ಕೊನೆಯ ಎರಡು ಭಾಗಗಳು ಜ್ಞಾನಕಾಂಡವನ್ನು (ಜ್ಞಾನದ ಭಾಗ) ರಚಿಸುತ್ತವೆ.[೭೮]
  • ವೇದಗಳು ಧಾರ್ಮಿಕ ಕ್ರಿಯಾವಿಧಿಗಳ ಮೇಲೆ ಪ್ರಾಧಾನ್ಯ ನೀಡಿದರೆ, ಉಪನಿಷತ್ತುಗಳು ಆಧ್ಯಾತ್ಮಿಕ ಒಳನೋಟ ಮತ್ತು ತತ್ವಶಾಸ್ತ್ರ ಸಂಬಂಧಿತ ಉಪದೇಶಗಳ ಮೇಲೆ ಪ್ರಾಧಾನ್ಯ ನೀಡುತ್ತವೆ, ಮತ್ತು ಬ್ರಹ್ಮ ಹಾಗೂ ಪುನರ್ಜನ್ಮವನ್ನು ಚರ್ಚಿಸುತ್ತವೆ.[೭೨][೭೯][೮೦]

ಸ್ಮೃತಿಗಳು

 
ನಾರದೇಯ ಪುರಾಣವು ಬ್ರಹ್ಮಾಂಡದ ಕ್ರಿಯಾವಿನ್ಯಾಸವನ್ನು ವರ್ಣಿಸುತ್ತದೆ. ತನ್ನ ಪತ್ನಿ ಲಕ್ಷ್ಮಿಯೊಂದಿಗೆ ಶೇಷನಾಗನ ಮೇಲೆ ವಿಶ್ರಮಿಸುತ್ತಿರುವ ವಿಷ್ಣುವನ್ನು ಇಲ್ಲಿ ಚಿತ್ರಿಸಲಾಗಿದೆ. ನಾರದ ಮತ್ತು ಬ್ರಹ್ಮರನ್ನೂ ಚಿತ್ರಿಸಲಾಗಿದೆ.

ಶ್ರುತಿಗಳನ್ನು ಬಿಟ್ಟು ಉಳಿದ ಹಿಂದೂ ಪಠ್ಯಗಳನ್ನು ಸಾಮೂಹಿಕವಾಗಿ ಸ್ಮೃತಿಗಳೆಂದು (ಸ್ಮರಣೆ) ಕರೆಯಲಾಗುತ್ತದೆ. ಮಹಾಭಾರತ ಮತ್ತು ರಾಮಾಯಣವನ್ನು ಒಳಗೊಂಡಿರುವ ಮಹಾಕಾವ್ಯಗಳು ಸ್ಮೃತಿಗಳ ಪೈಕಿ ಅತ್ಯಂತ ಪ್ರಸಿದ್ಧವಾದ ಕೃತಿಗಳು. ಭಗವದ್ಗೀತೆಯು ಮಹಾಭಾರತದ ಒಂದು ಸಮಗ್ರಕತಾವಶ್ಯಕ ಭಾಗ ಮತ್ತು ಹಿಂದೂ ಧರ್ಮದ ಅತ್ಯಂತ ಜನಪ್ರಿಯ ಧಾರ್ಮಿಕ ಪಠ್ಯಗಳ ಪೈಕಿ ಒಂದು. ಅದು ಒಂದು ಮಹಾಯುದ್ಧದ ಹಿಂದಿನ ದಿನದಂದು ವಿಷ್ಣುವಿನ ಅವತಾರನಾದ ಕೃಷ್ಣನಿಂದ ರಾಜಕುಮಾರ ಅರ್ಜುನನಿಗೆ ಹೇಳಲಾದ ತತ್ವಬೋಧನೆಗಳನ್ನು ಒಳಗೊಂಡಿದೆ. ಕೃಷ್ಣನಿಂದ ನುಡಿಯಲಾದ 'ಭಗವದ್ಗೀತೆಯು(ಭಗವದ್ಗೀತಾ ತಾತ್ಪರ್ಯ) ವೇದಗಳ ಸಾರಾಂಶವೆಂದು ವಿವರಿಸಲಾಗಿದೆ.[೮೧] ಆದರೆ, ವಿಷಯವಸ್ತುವು ಉಪನಿಷತ್ತಿನಂತೆ ಇರುವುದರಿಂದ, ಕೆಲವೊಮ್ಮೆ ಗೀತೋಪನಿಷತ್ ಎಂದೂ ಕರೆಯಲ್ಪಡುವ ಗೀತೆಯನ್ನು ಹೆಚ್ಚಾಗಿ ಶ್ರುತಿ ವರ್ಗದಲ್ಲಿ ಇರಿಸಲಾಗುತ್ತದೆ.[೮೨] ಸ್ಮೃತಿಗಳು, ವಿಶದವಾದ ಆಖ್ಯಾನಗಳ ಮೂಲಕ ಹಿಂದೂ ಕಲ್ಪನೆಗಳನ್ನು ವಿವರಿಸುವ ಪುರಾಣಗಳನ್ನೂ ಒಳಗೊಳ್ಳುತ್ತವೆ. ದೇವಿ ಮಹಾತ್ಮ್ಯ ತಂತ್ರಗಳು, ಯೋಗ ಸೂತ್ರಗಳು, ತಿರುಮಂತಿರಮ್, ಶಿವ ಸೂತ್ರಗಳು ಮತ್ತು ಆಗಮಗಳಂತಹ ಪಂಥೀಯ ಸ್ವರೂಪವುಳ್ಳ ಪಠ್ಯಗಳಿವೆ. ಹೆಚ್ಚು ವಿವಾದಿತ ಪಠ್ಯವಾದ ಮನುಸ್ಮೃತಿಯು ಜಾತಿ ಪದ್ಧತಿಯ ಸಾಮಾಜಿಕ ನಿಯಮಾವಳಿಗಳನ್ನು ಸಂಗ್ರಹಿಸುವ ಆದೇಶ ನ್ಯಾಯಗ್ರಂಥವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಇತಿಹಾಸ

 
ಟಿಬೆಟ್‌ನಲ್ಲಿನ ಪವಿತ್ರ ಕೈಲಾಸ ಪರ್ವತವನ್ನು ಶಿವನ ಆಧ್ಯಾತ್ಮಿಕ ನಿವಾಸವೆಂದು ಭಾವಿಸಲಾಗಿದೆ.
  • ಭಾರತದಲ್ಲಿ ಪ್ರಾಗೈತಿಹಾಸಿಕ ಧರ್ಮಕ್ಕೆ ಅತ್ಯಂತ ಮೊದಲಿನ ಪ್ರಮಾಣವು ಮುಂಚಿನ ಹರಪ್ಪಾ ಅವಧಿಯ (ಕ್ರಿ.ಪೂ. ೫೫೦೦-೨೬೦೦) ನವಶಿಲಾಯುಗದ ಕೊನೆಯ ಕಾಲಘಟ್ಟಕ್ಕೆ ಸೇರಿದೆ.[೭೨][೮೩] ಪೂರ್ವಶಾಸ್ತ್ರೀಯ ಯುಗದ (ಕ್ರಿ.ಪೂ. ೧೫೦೦-೫೦೦) ನಂಬಿಕೆಗಳು ಮತ್ತು ಆಚರಣೆಗಳನ್ನು "ಐತಿಹಾಸಿಕ ವೈದಿಕ ಧರ್ಮ" ಎಂದು ಕರೆಯಲಾಗುತ್ತದೆ.
  • ಆಧುನಿಕ ಹಿಂದೂ ಧರ್ಮವು ವೇದಗಳಿಂದ ಜೀವತಳೆದಿದೆ, ಮತ್ತು ಕ್ರಿ.ಪೂ. ೧೭೦೦-೧೦೦೦ ಕಾಲಕ್ಕೆ ಸೇರಿದ ಋಗ್ವೇದವು ವೇದಗಳಲ್ಲಿ ಅತ್ಯಂತ ಹಳೆಯದಾದದ್ದು.[೮೪] ವೇದಗಳು ಇಂದ್ರ, ವರುಣ ಮತ್ತು ಅಗ್ನಿಯಂತಹ ದೇವತೆಗಳ ಉಪಾಸನೆ, ಮತ್ತು ಸೋಮ ಕ್ರಿಯಾವಿಧಿಯ ಮೇಲೆ ಕೇಂದ್ರೀಕರಿಸುತ್ತವೆ.
  • ಯಜ್ಞವೆಂದು ಕರೆಯಲಾಗುವ ಅಗ್ನಿಆಹುತಿಗಳನ್ನು ಮಾಡಲಾಗುತ್ತಿತ್ತು ಮತ್ತು ವೈದಿಕ ಮಂತ್ರಗಳನ್ನು ಪಠಿಸಲಾಗುತ್ತಿತ್ತು, ಆದರೆ ದೇವಸ್ಥಾನಗಳು ಅಥವಾ ಮೂರ್ತಿಗಳನ್ನು ನಿರ್ಮಿಸಲಾಗುತ್ತಿರಲಿಲ್ಲ. ಅತ್ಯಂತ ಹಳೆಯ ವೈದಿಕ ಸಂಪ್ರದಾಯಗಳು ಪಾರಸಿ ಧರ್ಮ ಮತ್ತು ಇತರ ಇಂಡೋ-ಯೂರೋಪಿಯನ್ ಧರ್ಮಗಳಿಗೆ ತೀಕ್ಷ್ಣ ಸಾದೃಶ್ಯಗಳನ್ನು ತೋರಿಸುತ್ತವೆ.[೮೫]
  • ಪ್ರಮುಖ ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಕ್ರೈಸ್ತಶಕದ ಪೂರ್ವದ ಕೊನೆಯ ಶತಮಾನಗಳು ಮತ್ತು ಕ್ರೈಸ್ತಶಕದ ಮೊದಲಿನ ಶತಮಾನಗಳ ದೀರ್ಘ ಕಾಲಾವಧಿಯಾದ್ಯಂತ ಸಂಕಲಿಸಲಾಗಿದೆ. ಅವು ಪ್ರಾಚೀನ ಭಾರತದ ಪ್ರಭುಗಳು ಮತ್ತು ಯುದ್ಧಗಳ ಪೌರಾಣಿಕ ಕಥೆಗಳನ್ನು ಹೊಂದಿವೆ, ಮತ್ತು ಅಲ್ಲಲ್ಲಿ ಮಧ್ಯದಲ್ಲಿ ಧಾರ್ಮಿಕ ಹಾಗೂ ದಾರ್ಶನಿಕ ಪ್ರಕರಣಗಳನ್ನು ಹೊಂದಿವೆ.
  • ನಂತರದ ಪುರಾಣಗಳು ದೇವ ಮತ್ತು ದೇವಿಯರ ಕಥೆಗಳು, ಮನುಷ್ಯರೊಂದಿಗೆ ಅವರ ಸಂವಹನಗಳು ಮತ್ತು ರಾಕ್ಷಸರ ವಿರುದ್ಧ ನಡೆದ ಅವರ ಯುದ್ಧಗಳನ್ನು ವರ್ಣಿಸುತ್ತವೆ. ಮೂರು ಪ್ರಮುಖ ಚಳುವಳಿಗಳು ಹಿಂದೂ ಚಿಂತನೆಯ ಒಂದು ಹೊಸ ಅವಧಿಯ ಹುಟ್ಟಿಗೆ ಆಧಾರವಾದವು:
  • ಭಾರತದ ವಿಶಾಲವಾದ ಭೂರಾಶಿಯಾದ್ಯಂತ ಉಪನಿಷದಾಧಾರಿತ, ಜೈನ, ಮತ್ತು ಬೌದ್ಧ ತಾತ್ವಿಕ-ಧಾರ್ಮಿಕ ಚಿಂತನೆಯ ಆಗಮನ ಮತು ಪ್ರಸಾರ.[೮೬] ಮೋಕ್ಷ ಅಥವಾ ನಿರ್ವಾಣವನ್ನು ಪಡೆಯಲು ಒಬ್ಬರು ವೇದಗಳ ಅಧಿಕಾರ ಅಥವಾ ಜಾತಿಪದ್ಧತಿಯನ್ನು ಒಪ್ಪಿಕೊಳ್ಳುವುದು ಅಗತ್ಯವಲ್ಲವೆಂದು ಮಹಾವೀರ (ಜೈನರ ೨೪ನೆಯ ತೀರ್ಥಂಕರ) ಮತ್ತು ಗೌತಮ ಬುದ್ಧ (ಬೌದ್ಧ ಧರ್ಮದ ಸಂಸ್ಥಾಪಕ) ಇಬ್ಬರೂ ಬೋಧಿಸಿದರು.
  • ಆತ್ಮ/ಚೇತನ ಅಥವಾ ದೇವರ ಅಸ್ತಿತ್ವವು ಅನಗತ್ಯವೆಂದೂ ಬುದ್ಧನು ಪ್ರತಿಪಾದಿಸಿದನು.[೮೭] ಬೌದ್ಧ ಧರ್ಮವು, ಕ್ರಿ.ಪೂ. ೩ನೆಯ ಶತಮಾನದಲ್ಲಿ ಭಾರತೀಯ ಉಪಖಂಡವನ್ನು ಏಕೀಕರಿಸಿದ ಮೌರ್ಯ ಸಾಮ್ರಾಜ್ಯದ ಅಶೋಕನ ಆಳ್ವಿಕೆಯ ಅವಧಿಯಲ್ಲಿ ಅತ್ಯುಚ್ಛ್ರಾಯ ಸ್ಥಿತಿ ತಲುಪಿತು.
  • ಕ್ರಿ.ಶ. ೨೦೦ರ ನಂತರ, ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವ-ಮೀಮಾಂಸ ಹಾಗೂ ವೇದಾಂತವನ್ನು ಒಳಗೊಡಂತೆ, ಹಲವಾರು ತತ್ವ ಸಿದ್ಧಾಂತಗಳು ಹಿಂದೂ ಸಿದ್ಧಾಂತದಲ್ಲಿ ವಿಧ್ಯುಕ್ತವಾಗಿ ಸಂಕೇತೀಕೃತಗೊಂಡವು.[೮೮]
  • ಒಂದು ನಾಸ್ತಿಕ ಭೌತವಾದಿ ಪಂಥದ ಸಂಸ್ಥಾಪಕನಾದ ಚಾರ್ವಾಕನು ಕ್ರಿ.ಪೂ. ಆರನೇ ಶತಮಾನದಲ್ಲಿ ಉತ್ತರ ಭಾರತದಲ್ಲಿ ಗಮನ ಸೆಳೆದನು.[೮೯] ಕ್ರಿ.ಪೂ. ೪೦೦ ಮತ್ತು ಕ್ರಿ.ಶ. ೧೦೦೦ರ ನಡುವೆ ಬೌದ್ಧಧರ್ಮವು ಅವನತಿಹೊಂದಿ ಹಿಂದೂ ಧರ್ಮವು ವಿಸ್ತರಿಸಿತು.[೯೦]
  • ಗುಪ್ತರ ಕಾಲದ ಅಂತ್ಯದ ನಂತರ ಸಂಸ್ಕೃತಾಧಾರಿತ ಸಂಸ್ಕೃತಿಯು ಅವನತಿಗೀಡಾಯಿತು. ಮೊದಲಿನ ಮಧ್ಯಯುಗದ ಪುರಾಣಗಳು ಸಾಂಸ್ಕೃತೀಕರಣಕ್ಕೀಡಾಗುತ್ತಿದ್ದ (ಅಕಲ್ಚರೇಶನ್) ಬರಹದ ಭಾಷೆಯಿರದ ಬುಡಕಟ್ಟು ಸಮಾಜಗಳ ನಡುವೆ ಒಂದು ಧಾರ್ಮಿಕ ಮುಖ್ಯವಾಹಿನಿಯನ್ನು ಸ್ಥಾಪಿಸಲು ನೆರವಾದವು.
  • ಪುರಾಣಗಳ ರಚನಕಾರರ ಕೈಯಿಂದ ಬ್ರಾಹ್ಮಣ ಹಿಂದೂ ಧರ್ಮ ಮತ್ತು ಧರ್ಮಶಾಸ್ತ್ರಗಳ ತತ್ವಗಳು ಆಮೂಲಾಗ್ರ ರೂಪಾಂತರಕ್ಕೆ ಒಳಗಾದವು, ಪರಿಣಾಮವಾಗಿ ಎಲ್ಲ ಮುಂಚಿನ ಸಂಪ್ರದಾಯಗಳನ್ನು ಮರೆಮಾಡಿ ಒಂದು ಮುಖ್ಯವಾಹಿನಿ "ಹಿಂದೂ ಧರ್ಮ"ವು ಉದಯಿಸಿತು.[೯೧]
 
ದೆಹಲಿಯಲ್ಲಿ ಅಕ್ಷರಧಾಮ ದೇವಸ್ಥಾನ.

ಸಮಾಜ

ಧಾರ್ಮಿಕ ಪಂಥಗಳು

 
ತಮಿಳುನಾಡಿನ ಮೀನಾಕ್ಷಿ ದೇವಸ್ಥಾನದ ಒಂದು ನೋಟ
  • ಹಿಂದೂ ಧರ್ಮವು ಒಂದು ಪ್ರಧಾನ ಸೈದ್ಧಾಂತಿಕ ಶಾಸನವನ್ನು ಹೊಂದಿಲ್ಲ ಮತ್ತು ಧರ್ಮವನ್ನು ಆಚರಿಸುವ ಹಲವು ಹಿಂದೂಗಳು ತಾವು ಯಾವುದೇ ನಿರ್ದಿಷ್ಟ ಪಂಥಕ್ಕೆ ಸೇರಿದ್ದೇವೆಂದು ಹೇಳುವುದಿಲ್ಲ.[೯೪] ಆದರೆ, ಸಮಕಾಲೀನ ಹಿಂದೂ ಧರ್ಮವನ್ನು ವಿದ್ವಾಂಸರು ನಾಲ್ಕು ಪ್ರಮುಖ ಪಂಥಗಳಲ್ಲಿ ವರ್ಗೀಕರಿಸುತ್ತಾರೆ:
  • ವೈಷ್ಣವ ಪಂಥ, ಶೈವ ಪಂಥ, ಶಕ್ತಿ ಪಂಥ ಮತ್ತು ಸ್ಮಾರ್ತ ಪಂಥ. ಈ ಪಂಥಗಳು ಮುಖ್ಯವಾಗಿ ಪರಮಶಕ್ತ ರೂಪವೆಂದು ಆರಾಧಿಸಲಾಗುವ ದೇವರ ವಿಷಯದಲ್ಲಿ ಮತ್ತು ಆ ದೇವರ ಆರಾಧನೆಗೆ ಸಂಬಂಧಿಸಿದ ಸಂಪ್ರದಾಯಗಳಲ್ಲಿ ಭಿನ್ನವಾಗಿವೆ. ವೈಷ್ಣವರು ವಿಷ್ಣುವನ್ನು ಪರಮಶಕ್ತ ದೇವರೆಂದು ಆರಾಧಿಸುತ್ತಾರೆ; ಶೈವರು ಶಿವನನ್ನು ಪರಮಶಕ್ತನೆಂದು ಆರಾಧಿಸುತ್ತಾರೆ;
  • ಶಾಕ್ತರು ಸ್ತ್ರೀ ದೇವತೆ ಅಥವಾ ದೇವಿಯ ಮೂಲಕ ಮೂರ್ತಿಮತ್ತಾಗಿರುವ ಶಕ್ತಿಯನ್ನು ಆರಾಧಿಸುತ್ತಾರೆ; ಮತ್ತು ಸ್ಮಾರ್ತರು ಪರಮಶಕ್ತದ ಮೂರ್ತೀಕರಣಗಳೆಂದು ಐದು (ಪಂಚದೇವ) ಅಥವಾ (ತಮಿಳು ಹಿಂದೂಗಳು ಸ್ಕಂದನನ್ನು[೯೫] ಸೇರಿಸುವುದರಿಂದ) ಆರು (ಷಣ್ಮತ) ದೇವತೆಗಳ ಸಾರಭೂತವಾದ ಸಂಯೋಜನೆಯಲ್ಲಿ ನಂಬಿಕೆ ಇಡುತ್ತಾರೆ.
  • ಹಿಂದೂ ಧರ್ಮವೆಂದರೇನು ಎಂಬುದರ ಪಾಶ್ಚಾತ್ಯ ಕಲ್ಪನೆಯನ್ನು ಸ್ಮಾರ್ತ ದೃಷ್ಟಿಕೋನದ ಮೂಲಕ ವ್ಯಾಖ್ಯಾನಿಸಲಾಗಿದೆ; ಸಮಕಾಲೀನ ಹಿಂದೂ ಧರ್ಮದಲ್ಲಿ ಅದ್ವೈತ ವೇದಾಂತವನ್ನು ತಿಳಿಯದ ಅಥವಾ ಅನುಸರಿಸದ ಹಲವಾರು ಹಿಂದೂಗಳು ಸಾಂಪ್ರದಾಯಿಕವಾಗಿ ದೇವರ ಹಲವು ಸ್ವರೂಪಗಳನ್ನು ಆರಾಧಿಸುವ ಷಣ್ಮತ ನಂಬಿಕೆಯನ್ನು ಅನುಸರಿಸುತ್ತಾರೆ.
  • ಸ್ಮಾರ್ತ ಸಂಪ್ರದಾಯದ ಪ್ರಭಾವವನ್ನು ಗಮನಿಸಿದ ಒಬ್ಬ ವಿಶ್ಲೇಷಕರು, ಹಲವು ಹಿಂದೂಗಳು ತಾವು ಸ್ಮಾರ್ತರೆಂದು ನಿಖರವಾಗಿ ಗುರುತಿಸಿಕೊಳ್ಳದಿದ್ದರೂ, ಅಪಂಥೀಯತೆಯ ಆಧಾರವಾಗಿ ಅದ್ವೈತ ವೇದಾಂತದ ಮೇಲೆ ಅವಲಂಬಿಸುವುದರ ಮೂಲಕ ಅವರು ಪರೋಕ್ಷವಾಗಿ ಸ್ಮಾರ್ತ ಪಂಥದ ಅನುಯಾಯಿಗಳಾಗಿದ್ದಾರೆಂದು ಹೇಳಿದರು.[೯೬]
  • ಗಾಣಪತ್ಯ ಮತ್ತು ಸೌರದಂತಹ ಇತರ ಪಂಥಗಳು ಅಷ್ಟೊಂದು ವ್ಯಾಪಕವಾಗಿಲ್ಲ. ಮೂರ್ತಿಪೂಜೆ ಮತ್ತು ಬಹುದೇವತಾರಾಧನೆಯನ್ನು ವರ್ಜಿಸುವ ಸ್ವಾಮಿ ದಯಾನಂದ ಸರಸ್ವತಿಯವರ ಆರ್ಯ ಸಮಾಜದಂತಹ, ಮೇಲೆ ಪ್ರಸ್ತಾಪಿಸಲಾದ ಯಾವುದೇ ವರ್ಗಗಳಲ್ಲಿ ಸುಲಭವಾಗಿ ಸೇರಿಸಲಾರದ ಚಳುವಳಿಗಳಿವೆ.
  • ಅದು ವೇದಗಳು ಮತ್ತು ವೈದಿಕ ಯಜ್ಞಗಳ ಮೇಲೆ ಕೇಂದ್ರೀಕರಿಸುತ್ತದೆ. ಬ್ಯಾನರ್ಜಿಯವರು ಗಮನಿಸಿದಂತೆ, ತಾಂತ್ರಿಕ ಸಂಪ್ರದಾಯಗಳು ವಿವಿಧ ಪಂಥಗಳನ್ನು ಹೊಂದಿವೆ:
ತಂತ್ರಗಳು ... ಆಸ್ತಿಕ ಅಥವಾ ವೈದಿಕ ಮತ್ತು ನಾಸ್ತಿಕ ಅಥವಾ ವೈದಿಕವಲ್ಲದ ಎಂದೂ ವಿಭಜಿಸಲಾಗಿವೆ. ದೇವತೆಯ ಪ್ರಧಾನತೆಗೆ ಅನುಗುಣವಾಗಿ ಆಸ್ತಿಕ ಗ್ರಂಥಗಳನ್ನು ಶಾಕ್ತ, ಶೈವ, ಸೌರ, ಗಾಣಪತ್ಯ ಮತ್ತು ವೈಷ್ಣವ ಎಂದು ವಿಭಜಿಸಲಾಗಿದೆ.

[೯೭]

ಪ್ರತಿಯೊಂದು ಧರ್ಮದಲ್ಲಿರುವಂತೆ, ಕೆಲವರು ತಮ್ಮ ಸ್ವಂತ ಪಂಥವನ್ನು ಇತರ ಪಂಥಗಳಿಗಿಂತ ಶ್ರೇಷ್ಠವೆಂದು ಕಾಣುತ್ತಾರೆ. ಆದರೆ, ಹಲವು ಹಿಂದೂಗಳು ಇತರ ಪಂಥಗಳನ್ನು ತಮ್ಮ ಸ್ವಂತ ಪಂಥದ ಸಂಪ್ರದಾಯವಿಹಿತ ಪರ್ಯಾಯಗಳೆಂದು ಪರಿಗಣಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಹಾಗಾಗಿ, ಹಿಂದೂಗಳಿಗೆ ಸಾಮಾನ್ಯವಾಗಿ ಪಾಷಂಡ ಸಂಪ್ರದಾಯವು ಒಂದು ವಿವಾದಾಂಶವಾಗಿಲ್ಲ.[೯೮]

ಆಶ್ರಮಗಳು

ಮುಖ್ಯ ಲೇಖನ: ಆಶ್ರಮ
  • ಸಾಂಪ್ರದಾಯಿಕವಾಗಿ ಒಬ್ಬ ಹಿಂದೂ ಧರ್ಮೀಯನ ಜೀವನವನ್ನು ನಾಲ್ಕು ಆಶ್ರಮಗಳಲ್ಲಿ (ಹಂತಗಳು ಅಥವಾ ಘಟ್ಟಗಳು; ಅಸಂಬಂಧಿತ ಅರ್ಥಗಳು ಏಕಾಂತಗೃಹವನ್ನು ಒಳಗೊಳ್ಳುತ್ತವೆ) ವಿಭಜಿಸಲಾಗುತ್ತದೆ. ಒಬ್ಬರ ಜೀವನದ ಮೊದಲ ಭಾಗವಾದ, ಒಬ್ಬ ವಿದ್ಯಾರ್ಥಿಯಾಗಿರುವ ಹಂತವಾದ ಬ್ರಹ್ಮಚರ್ಯವು, ಒಬ್ಬ ಗುರುವಿನ ಮಾರ್ಗದರ್ಶನದಲ್ಲಿ ಅವಿವಾಹಿತ, ನಿಯಂತ್ರಿತ, ಸಂಯಮದ ಮತ್ತು ನಿರ್ಮಲವಾದ ಅವಲೋಕನದಲ್ಲಿ ಕಳೆಯಲಾಗುತ್ತದೆ.
  • ಆಧ್ಯಾತ್ಮಿಕ ಜ್ಞಾನಕ್ಕಾಗಿ ಮನಸ್ಸನ್ನು ಬೆಳೆಸಲಾಗುತ್ತದೆ. ಗೃಹಸ್ಥವು ಮನೆಯವನ ಹಂತ, ಅಂದರೆ ಒಬ್ಬ ವ್ಯಕ್ತಿಯು ಮದುವೆಯಾಗಿ ತನ್ನ ವಿವಾಹಿತಜೀವನದಲ್ಲಿ ಕಾಮವನ್ನು ಹಾಗೂ ವೃತ್ತಿಜೀವನದಲ್ಲಿ ಅರ್ಥವನ್ನು ಈಡೇರಿಸಿಕೊಳ್ಳುವ ಹಂತ (ಮನುಷ್ಯ ಜನ್ಮದ ಉದ್ದೇಶಗಳು ನೋಡಿ).
  • ಒಬ್ಬ ಹಿಂದೂ ಗೃಹಸ್ಥನ ನೈತಿಕ ಕರ್ತವ್ಯಗಳು, ಒಬ್ಬರ ಹೆತ್ತವರು, ಮಕ್ಕಳು, ಅತಿಥಿಗಳು ಮತ್ತು ಪೂಜ್ಯ ವ್ಯಕ್ತಿಗಳಿಗೆ ಆಸರೆಯಾಗಿರುವುದನ್ನು ಒಳಗೊಳ್ಳುತ್ತವೆ. ನಿವೃತ್ತಿಯ ಹಂತವಾದ ವಾನಪ್ರಸ್ಥವು ಐಹಿಕ ಪ್ರಪಂಚದಿಂದ ಕ್ರಮೇಣವಾಗಿ ಅನಾಸಕ್ತಿಯ ಹಂತ. ಇದು, ಒಬ್ಬರ ಕರ್ತವ್ಯಗಳನ್ನು ತಮ್ಮ ಮಕ್ಕಳಿಗೆ ವಹಿಸುವುದು, ಹೆಚ್ಚು ಸಮಯವನ್ನು ಧಾರ್ಮಿಕ ಆಚರಣೆಗಳಲ್ಲಿ ಕಳೆಯುವುದು ಮತ್ತು ಧಾರ್ಮಿಕ ತೀರ್ಥಯಾತ್ರೆಗಳಲ್ಲಿ ತೊಡಗುವುದನ್ನು ಒಳಗೊಳ್ಳಬಹುದು.
  • ಕೊನೆಯದಾಗಿ ವೈರಾಗ್ಯದ ಹಂತವಾದ ಸಂನ್ಯಾಸದಲ್ಲಿ, ಒಬ್ಬ ವ್ಯಕ್ತಿಯು ಪ್ರಾಪಂಚಿಕ ಜೀವನದಿಂದ ನಿರ್ಲಿಪ್ತತೆಯ ಮೂಲಕ ಏಕಾಂತವಾಗಿ ದೈವಿಕವನ್ನು ಕಂಡುಕೊಳ್ಳಲು ಮತ್ತು ಮೋಕ್ಷಕ್ಕಾಗಿ ಶಾಂತಿಯುತವಾಗಿ ದೇಹವನ್ನು ತೊರೆಯಲು ಎಲ್ಲ ಪ್ರಾಪಂಚಿಕ ಬಂಧನಗಳನ್ನು ತ್ಯಜಿಸುತ್ತಾನೆ.[೯೯]

ಸಂನ್ಯಾಸ

ಮುಖ್ಯ ಲೇಖನ: ಸಂನ್ಯಾಸ
  • ಮೋಕ್ಷ ಅಥವಾ ಬೇರೊಂದು ಬಗೆಯ ಆಧ್ಯಾತ್ಮಿಕ ಪರಿಪೂರ್ಣತೆಯ ಅನ್ವೇಷಣೆಯಲ್ಲಿ ಕೆಲವು ಹಿಂದೂಗಳು ಸಂನ್ಯಾಸಿ ಜೀವನವನ್ನು ಜೀವಿಸಲು ಆಯ್ದುಕೊಳ್ಳುತ್ತಾರೆ. ಸಂನ್ಯಾಸಿಗಳು ಸರಳತೆ, ಬ್ರಹ್ಮಚರ್ಯೆ, ಪ್ರಾಪಂಚಿಕ ಮನರಂಜನೆ ಗಳಿಂದ ನಿರ್ಲಿಪ್ತತೆ, ಮತ್ತು ದೇವರ ಅವಲೋಕನದ ಜೀವನಕ್ಕೆ ಬದ್ಧವಾಗಿರುತ್ತಾರೆ.Bhaskarananda 1994, p. 112</ref>
  • ಒಬ್ಬ ಹಿಂದೂ ಬೈರಾಗಿಯನ್ನು ಸಂನ್ಯಾಸಿ, ಸಾಧು, ಅಥವಾ ಸ್ವಾಮಿಯೆಂದು ಕರೆಯಲಾಗುತ್ತದೆ. ಒಬ್ಬ ಸ್ತ್ರೀ ಬೈರಾಗಿಯನ್ನು ಸಂನ್ಯಾಸಿನಿಯೆಂದು ಕರೆಯಲಾಗುತ್ತದೆ. ಸ್ವಾರ್ಥತೆ ಮತ್ತು ಪ್ರಾಪಂಚಿಕತೆಯ ತಮ್ಮ ಬಾಹ್ಯ ವೈರಾಗ್ಯವು ಮಾನಸಿಕ ವಿರಕ್ತಿಗಾಗಿ ಶ್ರಮಿಸುವ ಗೃಹಸ್ಥರಿಗೆ ಸ್ಫೂರ್ತಿಯಾಗಿರುವುದರಿಂದ ಬೈರಾಗಿಗಳು ಹಿಂದೂ ಸಮಾಜದಲ್ಲಿ ವಿಶೇಷ ಗೌರವವನ್ನು ಪಡೆಯುತ್ತಾರೆ.
  • ಕೆಲವು ಸಂನ್ಯಾಸಿಗಳು ಮಠಗಳಲ್ಲಿ ವಾಸಿಸಿದರೆ, ಇತರರು ಒಂದೆಡೆಯಿಂದ ಮತ್ತೊಂದೆಡೆಗೆ ಅಲೆದಾಡುತ್ತಾರೆ, ಮತ್ತು ತಮ್ಮ ಎಲ್ಲ ಅಗತ್ಯಗಳನ್ನು ಒದಗಿಸಲು ದೇವರಲ್ಲಿ ಮಾತ್ರ ವಿಶ್ವಾಸವಿಡುತ್ತಾರೆ.[೧೦೦] ಒಬ್ಬ ಗೃಹಸ್ಥನು ಸಂನ್ಯಾಸಿಗಳಿಗೆ ಆಹಾರ ಮತ್ತು ಇತರ ಅಗತ್ಯಗಳನ್ನು ಒದಗಿಸುವ ಕಾರ್ಯ ಅತ್ಯಂತ ಶ್ಲಾಘನೀಯವೆಂದು ಭಾವಿಸಲಾಗುತ್ತದೆ.
  • ವ್ಯಕ್ತಿಯು ಶ್ರೀಮಂತನಿರಲಿ ಅಥವಾ ಬಡವನಿರಲಿ, ಉತ್ತಮನಿರಲಿ ಅಥವಾ ನೀಚನಿರಲಿ, ಸಂನ್ಯಾಸಿಗಳು ಎಲ್ಲರನ್ನೂ ಗೌರವ ಹಾಗೂ ಅನುಕಂಪದಿಂದ ಕಾಣಲು ಮತ್ತು ಹೊಗಳಿಕೆ, ದೂಷಣೆ, ನಲಿವು ಹಾಗೂ ನೋವುಗಳಿಗೆ ಔದಾಸೀನ್ಯವುಳ್ಳವರಾಗಿರಲು ಪ್ರಯತ್ನಿಸುತ್ತಾರೆ.

ವರ್ಣಗಳು

ಹಿಂದೂ ಸಮಾಜವು ಸಾಂಪ್ರದಾಯಿಕವಾಗಿ ವರ್ಣಗಳೆಂದು (ಸಂಸ್ಕೃತ: "ಬಣ್ಣ, ರೂಪ, ನೋಟ") ಕರೆಯಲಾಗುವ ನಾಲ್ಕು ವರ್ಗಗಳಲ್ಲಿ ವರ್ಗೀಕರಿಸಲ್ಪಟ್ಟಿದೆ:[೩೯]

  • ಬ್ರಾಹ್ಮಣರು: ಶಿಕ್ಷಕರು ಮತ್ತು ಅರ್ಚಕರು;
  • ಕ್ಷತ್ರಿಯರು: ಯೋಧರು, ಕುಲೀನರು ಮತ್ತು ದೊರೆಗಳು;
  • ವೈಶ್ಯರು: ರೈತರು, ವರ್ತಕರು ಮತ್ತು ವ್ಯಾಪಾರಿಗಳು; ಮತ್ತು
  • ಶೂದ್ರರು: ಸೇವಕರು ಮತ್ತು ಕಾರ್ಮಿಕರು.
  • ವರ್ಣ ವ್ಯವಸ್ಥೆ ಎಂದು ಕರೆಯಲಾಗುವ ವ್ಯವಸ್ಥೆಯು ಧರ್ಮಗ್ರಂಥಗಳಿಂದ ನಿರ್ಬಂಧಿಸಲ್ಪಟ್ಟ ಹಿಂದೂ ಧರ್ಮದ ಒಂದು ಅಖಂಡ ಭಾಗವಾಗಿದೆಯೇ ಅಥವಾ ಒಂದು ಹಳತಾದ ಸಾಮಾಜಿಕ ಪದ್ಧತಿಯೇ ಎಂದು ಹಿಂದೂಗಳು ಮತ್ತು ವಿದ್ವಾಂಸರು ಚರ್ಚಿಸುತ್ತಾರೆ.[೧೦೧] ಧರ್ಮಗ್ರಂಥಗಳ ಪೈಕಿ, ಶ್ರುತಿಗಳು ವರ್ಣ ವ್ಯವಸ್ಥೆಯನ್ನು ಪ್ರಸ್ತಾಪಿಸುವ, ಆದರೆ ಬಹಳ ಮಿತವಾಗಿ ಮತ್ತು ವರ್ಣನಾತ್ಮಕವಾಗಿರುವ (ಅಂದರೆ ಆದೇಶವಾಗಿರದ), ಶ್ಲೋಕಗಳನ್ನು ಹೊಂದಿವೆ.
  • ವಾಸ್ತವವಾಗಿ, ಋಗ್ವೇದದಲ್ಲಿ ಪುರುಷಸೂಕ್ತವು (೧೦.೯೦) ಎಲ್ಲ ನಾಲ್ಕು ವರ್ಣಗಳನ್ನು ಪ್ರಸ್ತಾಪಿಸುವ ಏಕಮಾತ್ರ ಶ್ಲೋಕವಾಗಿದೆ. ಇತರ ವರ್ಣಗಳಾದ ಬ್ರಹ್ಮ (ಅಂದರೆ ಬ್ರಾಹ್ಮಣ) ಮತ್ತು ರಾಜನ್ಯಗಳನ್ನು (ಅಂದರೆ ಕ್ಷತ್ರಿಯ) ಋಗ್ವೇದದಲ್ಲಿ ಕೆಲವು ಇತರ ಶ್ಲೋಕಗಳಲ್ಲಿ (ಉದಾಹರಣೆಗೆ ೧೦.೮೦.೧) ಮತ್ತು ಇತರ ವೇದಗಳಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಲಾಗಿದೆ, ಮತ್ತು ಉಪನಿಷತ್ತುಗಳಲ್ಲಿ ಅಪರೂಪವಾಗಿ ಪ್ರಸ್ತಾಪಿಸಲಾಗಿದೆ.
  • ನಿಖರವಾಗಿ ಬಹುತೇಕ ಸ್ಮೃತಿ ಪಠ್ಯಗಳನ್ನು ಒಳಗೊಂಡಂತೆ, ಕೆಲವು ಪಠ್ಯಗಳು ಇವುಗಳನ್ನು ನಾಲ್ಕು ವರ್ಣಗಳಲ್ಲಿ ಸಮಾಜದ ವಿಭಜನೆಯನ್ನು ವಿಧಿಸುವ ಆದೇಶಗಳೆಂದು ವಿವರಿಸಿವೆ. ಒಬ್ಬ ವ್ಯಕ್ತಿಯ ವೃತ್ತಿಯು ಕಡ್ಡಾಯವಾಗಿ ಆತನ ಕುಟುಂಬದ ವೃತ್ತಿಯಿಂದ ನಿರ್ಧರಿತವಾಗಿರಲಿಲ್ಲವೆಂದು ಋಗ್ವೇದದ ಒಂದು ಶ್ಲೋಕವು ಸೂಚಿಸುತ್ತದೆ:
"ನಾನೊಬ್ಬ ಹಾಡುಗಾರ, ನನ್ನ ತಂದೆ ಒಬ್ಬ ವೈದ್ಯ, ಧಾನ್ಯವನ್ನು ಬೀಸುವುದು ನನ್ನ ತಾಯಿಯ ವೃತ್ತಿ." (ಋಗ್ವೇದ .೧೧೨.೩)[೧೦೨]
  • ವೈದಿಕ ಯುಗದಲ್ಲಿ, ವೇದಗಳನ್ನು ಕೇಳುವುದಕ್ಕೆ ಅಥವಾ, ಮುಂದಿನ ಸಮಯದಲ್ಲೂ ಇದ್ದಂತೆ, ಯಾವುದೇ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಶೂದ್ರರ ಮೇಲೆ ಯಾವುದೇ ನಿಷೇಧವಿರಲಿಲ್ಲ.[೧೦೩] ಹಲವಾರು ಸಮಾಜಶಾಸ್ತ್ರಜ್ಞರಿಂದ ಸೂಚಿಸಲ್ಪಟ್ಟಂತೆ, ವರ್ಣಗಳೊಳಗಿನ ಸ್ವಲ್ಪ ಗತಿಶೀಲತೆ ಮತ್ತು ನಮ್ಯತೆಯು ಜಾತಿ ವ್ಯವಸ್ಥೆಯಲ್ಲಿನ ಸಾಮಾಜಿಕ ಭೇದಭಾವದ ಆಪಾದನೆಗಳನ್ನು ಆಕ್ಷೇಪಿಸುತ್ತವೆ.[೧೦೪][೧೦೫]
  • ವರ್ಣಗಳ ವೈದಿಕ ಪ್ರಸ್ತಾಪಗಳನ್ನು ಆದೇಶಗಳೆಂದು ವಿವರಿಸುವ ಸ್ಮೃತಿಗಳು, ನಾಲ್ಕು ವರ್ಣಗಳಲ್ಲಿ ಸಮಾಜದ ವಿಭಜನೆಯನ್ನು ಸ್ಪಷ್ಟವಾಗಿ ಅನುಮೋದಿಸುತ್ತವೆ, ಮತ್ತು, ಮುಂದೆ ಇಂದಿನ ಜನ್ಮಾಧಾರಿತ ಜಾತಿ ವ್ಯವಸ್ಥೆಯಾಗಿ ಹೊರಹೊಮ್ಮಿದ, ಈ ವರ್ಣಗಳೊಳಗಿನ ವಿವಿಧ ಉಪ-ವಿಭಾಗಗಳನ್ನೂ ಪ್ರಸ್ತಾಪಿಸುತ್ತವೆ.
  • ಮಹಾತ್ಮಾ ಗಾಂಧಿ ಹಾಗೂ ಬಿ. ಆರ್. ಅಂಬೇಡ್ಕರ್‌ರನ್ನು ಒಳಗೊಂಡಂತೆ, ಅನೇಕ ಸಮಾಜ ಸುಧಾರಕರು ಜಾತಿ ತಾರತಮ್ಯವನ್ನು ಟೀಕಿಸಿದರು.[೧೦೬] ಧಾರ್ಮಿಕ ಶಿಕ್ಷಕರಾದ ಶ್ರೀ ರಾಮಕೃಷ್ಣರು (೧೮೩೬-೧೮೮೬)
"ದೇವರನ್ನು ಪ್ರೀತಿಸುವವರು ಯಾವುದೇ ಜಾತಿಗೆ ಸೇರುವುದಿಲ್ಲ . . . . ಈ ಪ್ರೀತಿಯಿರದ ಬ್ರಾಹ್ಮಣನು ಬ್ರಾಹ್ಮಣನಾಗಿ ಉಳಿಯುವುದಿಲ್ಲ. ಮತ್ತು ದೇವರ ಪ್ರೀತಿಯಿರುವ ಅಸ್ಪೃಶ್ಯನು ಅಸ್ಪೃಶ್ಯನಾಗಿ ಉಳಿಯುವುದಿಲ್ಲ. ಭಕ್ತಿಯ ಮೂಲಕ ಒಬ್ಬ ಅಸ್ಪೃಶ್ಯನು ಪರಿಶುದ್ಧ ಮತ್ತು ಉತ್ತಮನಾಗುತ್ತಾನೆ."[೧೦೭]

ಎಂದು ಬೋಧಿಸಿದರು.

ಅಹಿಂಸೆ ಮತ್ತು ಸಸ್ಯಾಹಾರಾಚರಣೆ

  • ಸಸ್ಯಗಳು ಮತ್ತು ಮನುಷ್ಯೇತರ ಪ್ರಾಣಿಗಳನ್ನು ಒಳಗೊಂಡಂತೆ, ದಿವ್ಯತೆಯು ಎಲ್ಲ ಜೀವಿಗಳ ಒಳವ್ಯಾಪಿಸುತ್ತದೆಂದು ನಂಬಲಾಗುವುದರಿಂದ, ಹಿಂದೂಗಳು ಅಹಿಂಸೆ ಮತ್ತು ಜೀವನದ ಪ್ರತಿ ಗೌರವವನ್ನು ಪ್ರತಿಪಾದಿಸುತ್ತಾರೆ.[೧೦೮] ಅಹಿಂಸೆ ಪದವು ಉಪನಿಷತ್ತುಗಳಲ್ಲಿ,[೧೦೯] ಮಹಾಭಾರತ ಮಹಾಕಾವ್ಯದಲ್ಲಿ[೧೧೦] ಕಾಣುತ್ತದೆ ಮತ್ತು
  • ಪತಂಜಲಿಯ ಯೋಗ ಸೂತ್ರಗಳಲ್ಲಿ ಅಹಿಂಸೆಯು ಐದು ಯಮಗಳ (ಆತ್ಮನಿಗ್ರಹದ ಶಪಥಗಳು) ಪೈಕಿ ಮೊದಲಿನದು.[೧೧೧]
  • ಅಹಿಂಸೆಗೆ ಅನುಗುಣವಾಗಿ, ಜೀವನದ ಉನ್ನತ ಸ್ವರೂಪಗಳನ್ನು ಗೌರವಿಸಲು ಅನೇಕ ಹಿಂದೂಗಳು ಸಸ್ಯಾಹಾರವನ್ನು ಅಂಗೀಕರಿಸುತ್ತಾರೆ. ಯಜುರ್ವೇದವು ಸಸ್ಯಾಹಾರಾಚರಣೆಯನ್ನು ಪ್ರಚಾರ ಮಾಡುತ್ತದೆ ಮತ್ತು ಸಾತ್ವಿಕ ಜೀವನಶೈಲಿಗಾಗಿ ಸಸ್ಯಾಹಾರಾಚರಣೆಯನ್ನು ಸೂಚಿಸಲಾಗುತ್ತದೆ.[೧೧೨] (ಎಲ್ಲ ಧರ್ಮಗಳ ಅನುಯಾಯಿಗಳನ್ನು ಒಳಗೊಂಡಂತೆ) ಭಾರತದಲ್ಲಿ ಕ್ಷೀರ ಸಸ್ಯಾಹಾರಿಗಳ ಸಂಖ್ಯೆಯ ಅಂದಾಜುಗಳು ಶೇಕಡ ೨೦ರಿಂದ ೪೨ರ ನಡುವೆ ಬದಲಾಗುತ್ತವೆ.[೧೧೩] ಆಹಾರ ಪದ್ಧತಿಗಳು ಸಮುದಾಯ ಮತ್ತು ಪ್ರದೇಶದೊಂದಿಗೆ ಬದಲಾಗುತ್ತವೆ, ಉದಾಹರಣೆಗೆ ಕೆಲವು ಜಾತಿಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಸ್ಯಾಹಾರಿಗಳಿರುವುದು ಮತ್ತು ಕರಾವಳಿ ತೀರದ ನಿವಾಸಿಗಳು ಕಡಲಾಹಾರದ ಮೇಲೆ ಅವಲಂಬಿಸಿರುವುದು.[೧೧೪][೧೧೫] ಕೆಲವು ಹಿಂದೂಗಳು, ರಾಜಸಿಕ ಆಹಾರಗಳೆಂದು ಪರಿಗಣಿಸಲಾದ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ.[೧೧೬]
  • ಕೆಲವರು ನಿರ್ದಿಷ್ಟ ಧಾರ್ಮಿಕ ದಿನಗಳಂದು ಮಾತ್ರ ಮಾಂಸ ತಿನ್ನುವುದಿಲ್ಲ. ಮಾಂಸ ತಿನ್ನುವ ಶ್ರದ್ಧಾವಂತ ಹಿಂದೂಗಳು ಬಹುತೇಕ ಎಂದೂ ಗೋಮಾಂಸ ತಿನ್ನುವುದಿಲ್ಲ. ಹಿಂದೂ ಸಮಾಜದಲ್ಲಿ ಹಸುವನ್ನು ಸಾಂಪ್ರದಾಯಿಕವಾಗಿ ರಕ್ಷಕ ಮತ್ತು ಮಾತೃಸಮಾನವಾಗಿ ಗುರುತಿಸಲಾಗುತ್ತದೆ[೧೧೭] ಮತ್ತು ಹಿಂದೂ ಸಮಾಜವು ಹಸುವನ್ನು ನಿಸ್ವಾರ್ಥ ದಾನದ ಒಂದು ಸಂಕೇತವೆಂದು ಗೌರವಿಸುತ್ತದೆ.[೧೧೮]
  • ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಗೋಹತ್ಯೆಯನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ.[೧೧೯] ಹೆಚ್ಚಿನ ಚರ್ಚೆಗೆ ಧರ್ಮದಲ್ಲಿ ಹಸು ಮತ್ತು ನಿಷಿದ್ಧ ಆಹಾರ ನೋಡಿ.

ಮತಾಂತರ

  • ಧರ್ಮಾಂತರ, ಧರ್ಮ ಪ್ರಚಾರ, ಮತ್ತು ಮತಾಂತರಿಸುವಿಕೆಯ ಪರಿಕಲ್ಪನೆಗಳು ಹಿಂದೂ ಪಠ್ಯಗಳಲ್ಲಿ ಕಾಣುವುದಿಲ್ಲ ಮತ್ತು ಆಚರಣೆಯಲ್ಲಿ ಎಂದೂ ಪ್ರಮುಖವಾದ ಪಾತ್ರವಹಿಸಿಲ್ಲವಾದರೂ ಮತಾಂತರಗೊಳ್ಳಲು ಸಿದ್ಧವಿರುವವರಿಗೆ ಸಮ್ಮತಿಯು ಹೆಚ್ಚು ಸಾಮಾನ್ಯವಾಗುತ್ತಿದೆ.
  • ಅದರ ಇತಿಹಾಸದ ಮುಂಚಿನ ಭಾಗದಲ್ಲಿ, ಇತರ ಪ್ರತಿಸ್ಪರ್ಧಿ ಧರ್ಮಗಳ ಅನುಪಸ್ಥಿತಿಯ ಕಾರಣ, ಹಿಂದೂಗಳು ತಾವು ಸಂಧಿಸಿದ ಎಲ್ಲರನ್ನೂ ಹಿಂದೂಗಳೆಂದು ಪರಿಗಣಿಸುತ್ತಿದ್ದರು ಮತ್ತು ತಾವು ಭೇಟಿಯಾದ ಎಲ್ಲರೂ ಹಿಂದೂಗಳಾಗಿರಬೇಕೆಂದು ನಿರೀಕ್ಷಿಸುತ್ತಿದ್ದರು.[೧೨೦][೧೨೧]
  • ಇಂದಿಗೂ ಕೂಡ ಹಿಂದೂಗಳು ಮತಾಂತರದ ಸ್ವೀಕಾರಾರ್ಹತೆಯ ಐತಿಹಾಸಿಕ ವಿಚಾರಗಳಿಂದ ಪ್ರಭಾವಿತಗೊಳ್ಳುತ್ತಿದ್ದಾರೆ. ಹಾಗಾಗಿ, ಒಂದೆಡೆ ಅನೇಕ ಹಿಂದೂಗಳು ಹಿಂದೂ ಧರ್ಮವು ಜನ್ಮದಿಂದ ಮಾತ್ರ ಹೊಂದಬಹುದಾದ ಒಂದು ಗುರುತೆಂದು ಇಂದಿಗೂ ನಂಬಿದರೆ, ಇನ್ನೊಂದೆಡೆ ಹಿಂದೂ ನಂಬಿಕೆಗಳು ಮತ್ತು ಆಚರಣೆಗಳನ್ನು ಅನುಸರಿಸುವ ಯಾರಾದರೂ ಹಿಂದೂಗಳೆಂದು ಅನೇಕ ಇತರರು ನಂಬುತ್ತಾರೆ, ಮತ್ತು ಅನೇಕರು ಈ ಎರಡೂ ಸಿದ್ಧಾಂತಗಳ ಸ್ವಲ್ಪ ಭಾಗವನ್ನು ನಂಬುತ್ತಾರೆ.
  • ಆದರೆ, ಇತರ ಪಮುಖ ಧರ್ಮಗಳ ಧರ್ಮ ಪ್ರಚಾರ, ಮತಾಂತರ ಮತ್ತು ಧರ್ಮಾಂತರ ಚಟುವಟಿಕೆಗಳ ಅವಗತವಾದ ಮತ್ತು ವಾಸ್ತವಿಕ ಅಪಾಯಕ್ಕೆ ಪ್ರತಿಕ್ರಿಯೆಯಾಗಿ ಬಹುತೇಕ ಹಿಂದೂಗಳು ವಾಸ್ತವಿಕವಾಗಿ (ಯಾವುದೇ) ಒಂದು ಧರ್ಮದಿಂದ (ಬೇರಾವುದೇ) ಮತ್ತೊಂದು ಧರ್ಮಕ್ಕೆ ಮತಾಂತರದ ಕಲ್ಪನೆಯನ್ನು ವಿರೋಧಿಸುತ್ತಾರೆ.[೧೨೨]
  • ಪಾಶ್ಚಾತ್ಯ ದೇಶಗಳಲ್ಲಿನ ಹಿಂದೂಗಳು ಸಾಮಾನ್ಯವಾಗಿ ಮತಾಂತರಹೊಂದಲು ಇಷ್ಟಪಡುವವರನ್ನು ಸ್ವೀಕರಿಸಿ ಸ್ವಾಗತಿಸುತ್ತಾರೆ ಮತ್ತು ಭಾರತದಲ್ಲಿಯೂ ಮತಾಂತರಹೊಂದಲು ಇಷ್ಟಪಡುವವರಿಗೆ ಸಮ್ಮತಿಯು ಹೆಚ್ಚು ಸಾಮಾನ್ಯವಾಗುತ್ತಿದೆ. ಹಿಂದೂ ಪುನರುಜ್ಜೀವಕ ಚಳುವಳಿಗಳ ಹೆಚ್ಚಳದಿಂದ ಹಿಂದೂ ಧರ್ಮಕ್ಕೆ ಪುನರ್ಮತಾಂತರಗಳೂ ಹೆಚ್ಚಿವೆ.[೧೨೩] ಹಿಂದೂ ಧರ್ಮದ ಹೊರಗಿನ ಮತಾಂತರಗಳನ್ನು ಮಾನ್ಯಮಾಡಲಾಗದ ಕಾರಣ ಪುನರ್ಮತಾಂತರಗಳನ್ನು ಹೆಚ್ಚಾಗಿ ಒಪ್ಪಿಕೊಳ್ಳಲಾಗಿದೆ.[೧೨೪]
  • ವಿವಾಹದ ಮೂಲಕ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಹೆಚ್ಚಾಗಿ ಅಂಗೀಕರಿಸಲಾಗಿದೆ ಮತ್ತು ಹಿಂದೂವಲ್ಲದ ಭಾಗದಾತನು ವಿಶಾಲ ಹಿಂದೂ ಕುಟುಂಬ ಹಾಗೂ ಸಮಾಜದೊಳಗಿನ ಆಧ್ಯಾತ್ಮಿಕ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಕರ್ತವ್ಯಗಳಲ್ಲಿ ಸಂಪೂರ್ಣವಾಗಿ ಭಾಗವಹಿಸುವುದನ್ನು ಸಾಧ್ಯವಾಗಿಸಲು ಇದು ಹಲವುವೇಳೆ ನಿರೀಕ್ಷಿತವಾಗಿರುತ್ತದೆ.
  • ಹಿಂದೂ ಧರ್ಮಕ್ಕೆ ಮತಾಂತರಹೊಂದಲು ಯಾವುದೇ ಶಾಸ್ತ್ರೋಕ್ತ ಪ್ರಕ್ರಿಯೆಯಿಲ್ಲವಾದರೂ, ಅನೇಕ ಸಂಪ್ರದಾಯಗಳಲ್ಲಿ ದೀಕ್ಷೆ ("ಉಪಕ್ರಮ") ಎಂದು ಕರೆಯಲ್ಪಡುವ ಒಂದು ಕ್ರಿಯಾವಿಧಿಯು ಆಧ್ಯಾತ್ಮಿಕ ಜೀವನದ ಆರಂಭವನ್ನು ಮಾನ್ಯಮಾಡುತ್ತದೆ. ಶುದ್ಧಿ ಎಂದು ಕರೆಯಲ್ಪಡುವ ಒಂದು ಕ್ರಿಯಾವಿಧಿಯು ಕೆಲವೊಮ್ಮೆ ಪುನರ್ಮತಾಂತರದ ನಂತರ ಆಧ್ಯಾತ್ಮಿಕ ಜೀವನಕ್ಕೆ ಪುನರಾಗಮನವನ್ನು ಮಾನ್ಯಮಾಡುತ್ತದೆ.
  • ಆಧ್ಯಾತ್ಮಿಕ ಜೀವನದ ಉದ್ದೇಶಗಳನ್ನು, ಪ್ರಾಮಾಣಿಕವಾಗಿ ಆಚರಿಸಿದರೆ, ಯಾವುದೇ ಧರ್ಮದ ಮೂಲಕ ಸಾಧಿಸಬಹುದೆಂದು ಹಿಂದೂ ಪಂಥಗಳು ನಂಬುವ ಕಾರಣ, ಬಹುತೇಕ ಹಿಂದೂ ಪಂಥಗಳು ಮತಾಂತರಿಗಳನ್ನು ಅರಸುವುದಿಲ್ಲ.[೧೨೫][೧೨೫][೧೨೬][೧೨೭][೧೨೮][೧೨೯]
  • ಆದರೆ, ಆರ್ಯ ಸಮಾಜ, ಶೈವ ಸಿದ್ಧಾಂತ ಚರ್ಚ್, ಬಿಎಪಿಎಸ್, ಇಸ್ಕಾನ್‌ನಂತಹ ಕೆಲವು ಹಿಂದೂ ಪಂಥಗಳು ಮತ್ತು ಅಂಗಸಂಸ್ಥೆಗಳು ಹಿಂದೂ ಧರ್ಮವನ್ನು ಅನುಸರಿಸುವ ಅಪೇಕ್ಷೆಯಿರುವವರನ್ನು ಸ್ವೀಕರಿಸುತ್ತವೆ. ಸಾಮಾನ್ಯವಾಗಿ, ಹಿಂದೂ ಧರ್ಮದ ಧಾರ್ಮಿಕ ಸ್ವಾತಂತ್ರ್ಯದ ಆಶಯ ಮತಾಂತರಿಸುವ ಸ್ವಾತಂತ್ರ್ಯದ ಮೇಲೆ ಆಧರಿಸಿಲ್ಲ.
  • ಬದಲಾಗಿ, ಒಬ್ಬರ ಧರ್ಮವನ್ನು ನಡೆಸಿಕೊಂಡು ಬರುವ ಹಕ್ಕು ಮತ್ತು ಮತಾಂತರಕ್ಕೆ ಒಳಪಡದೇ ಇರುವ ಸ್ವಾತಂತ್ರ್ಯದ ಮೇಲೆ ಆಧರಿಸಿದೆ. ಮತಾಂತರಿಸುವ ಧರ್ಮಗಳನ್ನು ಪ್ರೋತ್ಸಾಹಿಸುವ ಕಾರಣ, ಮಾನವ ಹಕ್ಕುಗಳ ವಿಶ್ವವ್ಯಾಪಿ ಘೋಷಣೆಯಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಅಧಿನಿಯಮದ ಈಗಿರುವ ಸೂತ್ರೀಕರಣವನ್ನು ಬದಲಾಯಿಸಬೇಕೆಂದು ಹಿಂದೂ ಮುಖಂಡರು ವಾದಿಸುತ್ತಿದ್ದಾರೆ.[೧೩೦]

ಇವನ್ನೂ ನೋಡಿ

ಸಂಬಂಧಿತ ಪದ್ಧತಿಗಳು ಮತ್ತು ಧರ್ಮಗಳು

ಟಿಪ್ಪಣಿಗಳು

  1. ೧.೦ ೧.೧ Hinduism is variously defined as a "religion", "set of religious beliefs and practices", "religious tradition" etc. For a discussion on the topic, see: "Establishing the boundaries" in Gavin Flood (2003), pp. 1-17. René Guénon in his Introduction to the Study of the Hindu Doctrines (1921 ed.), Sophia Perennis, ISBN 0-900588-74-8, proposes a definition of the term "religion" and a discussion of its relevance (or lack of) to Hindu doctrines (part II, chapter 4, p. 58).
  2. ೨.೦ ೨.೧ The Concise Oxford Dictionary of World Religions. Ed. John Bowker. Oxford University Press, 2000; The modern use of the term can be traced to late 19th century Hindu reform movements (J. Zavos, Defending Hindu Tradition: Sanatana Dharma as a Symbol of Orthodoxy in Colonial India, Religion (Academic Press), Volume 31, Number 2, April 2001, pp. 109-123; see also R. D. Baird, "Swami Bhaktivedanta and the Encounter with Religions", Modern Indian Responses to Religious Pluralism, edited by Harold Coward, State University of New York Press, 1987); less literally also rendered "eternal way" (so Harvey, Andrew (2001). Teachings of the Hindu Mystics. Boulder: Shambhala, xiii. ISBN 1-57062-449-6. ). See also René Guénon, Introduction to the Study of the Hindu Doctrines (1921 ed.), Sophia Perennis, ISBN 0-900588-74-8, part III, chapter 5 "The Law of Manu", p. 146. On the meaning of the word "Dharma", see also René Guénon, Studies in Hinduism, Sophia Perennis, ISBN 0-900588-69-3, chapter 5, p. 45
  3. Morgan, Sarma 1953
  4. ೪.೦ ೪.೧ (2000) Merriam-Webster's Collegiate Encyclopedia. Merriam-Webster, 751. 
  5. Laderman, Gary (2003). Religion and American Cultures: An Encyclopedia of Traditions, Diversity, and Popular Expressions. Santa Barbara, Calif: ABC-CLIO, 119. ISBN 1-57607-238-X. "world's oldest living civilization and religion" 
  6. Turner, Jeffrey S. (1996). Encyclopedia of relationships across the lifespan. Westport, Conn: Greenwood Press, 359. ISBN 0-313-29576-X. "It is also recognized as the oldest major religion in the world" 
  7. ೭.೦ ೭.೧ Klostermaier 1994, p. 1
  8. Osborne 2005, p. 9
  9. "Major Religions of the World Ranked by Number of Adherents". Adherents.com. Retrieved on 2007-07-10.
  10. The Gita Dhyanam is a traditional short poem sometimes found as a prefatory to editions of the Bhagavad Gita. Verse 4 refers to all the Upanishads as the cows, and the Gita as the milk drawn from them. (Chidbhavananda 1997, pp. 67–74)
  11. See Indo-European sound laws for a discussion of the transition from "Sindhu" to "Hindu"
  12. Thapar, R. 1993. Interpreting Early India. Delhi: Oxford University Press. p. 77
  13. David Lorenzen, Who Invented Hinduism? New Delhi 2006, pp. 24-33; Rajatarangini of Yonaraja : "Hinduka"
  14. "...that many-sided and all-enfolding culture which we in the West have chosen to call Hinduism" Jan Gonda, Visnuism and Sivaism, Munshiram Manoharlal. 1996, ISBN 812150287X p. 1. cited by Welbon, G.R. (Journal of the American Academy of Religion, Vol. 43, No. 1, 98+100. March, 1975.). [[]] (Review: Love of God According to Saiva Siddhanta: A Study in the Mysticism and Theology of Saivism by Mariasusay Dhanamoy)}}. 
  15. Swami Nikhilananda, "Self-Knowledge", an english translation of Sankaracarya's Atmabodha, Pg. 6, Sri Ramakrishna Math, Madras, India, ISBN 81-7120-398-1
  16. Adherents.com Archived 2014-01-28 ವೇಬ್ಯಾಕ್ ಮೆಷಿನ್ ನಲ್ಲಿ., which itself references many sources; The World Almanac & Book of Facts 1998 being especially relevant.
  17. J. McDaniel Hinduism, in John Corrigan, The Oxford Handbook of Religion and Emotion, (2007) Oxford University Press, 544 pages, pp. 52-53 ISBN 0-19-517021-0
  18. OED cites J. Davies, tr. Mandelslo's Trav. 74 (1662) The King of Cambaya, who was a Hindou, or Indian, that is, a Pagan. and Sir T. Roe's Voy. E. Ind. in P. della Valle's Trav. E. Ind. 374 (1665) The Inhabitants in general of Indostan were all anciently Gentiles, called in general Hindoes.
  19. Bryan S. Turner "Essays on the Sociology of Fate - Page 275"
  20. ೨೦.೦ ೨೦.೧ ೨೦.೨ ಉಲ್ಲೇಖ ದೋಷ: Invalid <ref> tag; no text was provided for refs named flood01
  21. Merriam-Webster's Encyclopedia of World Religions, p. 434
  22. Vaz, P. (2001), "Coexistence of Secularism and Fundamentalism in India", Handbook of Global Social Policy: 124, retrieved 2008-06-26, Hinduism is the oldest of all the major world religions.
  23. Eastman, R. (1999). The Ways of Religion: An Introduction to the Major Traditions. Oxford University Press, USA. 
  24. Joel Beversluis (2000). Sourcebook of the World's Religions: An Interfaith Guide to Religion and Spirituality (Sourcebook of the World's Religions, 3rd ed). Novato, Calif: New World Library, 50. ISBN 1-57731-121-3. 
  25. Weightman & Klostermaier 1994, p. 1
  26. Bhagavad Gita, Sarvepalli Radhakrishnan: "Hinduism is not just a faith. It is the union of reason and intuition that can not be defined but is only to be experienced."
  27. Ferro-Luzzi,(1991)The Polythetic-Prototype Approach to Hinduism in G.D. Sontheimer and H. Kulke (ed.) Hinduism Reconsidered. Delhi: Manohar. pp. 187-95
  28. "JSTOR: Philosophy East and West, Vol. 34, No. 2 (April, 1984 ), pp. 234-236". www.jstor.org.
  29. Hinduism in Britain Kim Knott, (2000) The South Asian Religious Diaspora in Britain, Canada, and a United States.
  30. Harvey, Andrew (2001). Teachings of the Hindu Mystics. Boulder: Shambhala, xiii. ISBN 1-57062-449-6. 
  31. "It is Hindu self-awareness and self-identity that affirm Hinduism to be one single religious universe, no matter how richly varied its contents, and make it a significant and potent force alongside the other religions of the world."
  32. Brodd, Jefferey (2003). World Religions. Winona, MN: Saint Mary's Press. ISBN 978-0-88489-725-5. 
  33. "Polytheism". Encyclopædia Britannica. Encyclopædia Britannica Online (2007). Retrieved on 2007-07-05.
  34. ೩೪.೦ ೩೪.೧ Monier-Williams 1974, pp. 20–37
  35. ೩೫.೦ ೩೫.೧ ೩೫.೨ ೩೫.೩ Bhaskarananda 1994
  36. Vivekananda 1987
  37. Werner 1994, p. p37
  38. Werner 1994, p. 7
  39. ೩೯.೦ ೩೯.೧ ೩೯.೨ ೩೯.೩ ೩೯.೪ Monier-Williams 2001
  40. Sen Gupta 1986, p. viii
  41. ೪೧.೦ ೪೧.೧ ೪೧.೨ Harman 2004, pp. 104–106
  42. For translation of deva in singular noun form as "a deity, god", and in plural form as "the gods" or "the heavenly or shining ones", see: Monier-Williams 2001, p. 492. In fact, there are different ranks among the devas. The highest are the immortal Mahadevas, such as Shiva, Vishnu, etc. The second-rank devas, such as Ganesha, are described as their offspring: they are "born", and their "lifespan" is quite limited. In ISKCON the word is translated as "demigods", although it can also denote such heavenly denizens as gandharvas. See: "Vedic cosmology". Vedic Knowledge Online. VEDA - Bhaktivedanta Book Trust. Retrieved on 2007-06-25.. For translation of devatā as "godhead, divinity", see: Monier-Williams 2001, p. 495.
  43. Werner 1994, p. 80
  44. Renou 1961, p. 55
  45. * Apte, Vaman S (1997), written at Delhi, [[]] (The Student's English-Sanskrit Dictionary)}} (New ed.), Motilal Banarsidas, ISBN 8120803000
  46. Smith 1991, p. 64
  47. Radhakrishnan 1996, p. 254
  48. Bhagavad Gita 2.22
  49. See Bhagavad Gita XVI.8-20
  50. See Vivekananda, Swami (2005), [[]] (Jnana Yoga)}}, Kessinger Publishing, ISBN 1-425482-88-0 301-02 (8th Printing 1993)
  51. Rinehart 2004, pp. 19–21
  52. Bhaskarananda 1994, pp. 79–86
  53. The Christian concepts of Heaven and Hell do not translate directly into Hinduism. Spiritual realms such as Vaikunta (the abode of Vishnu) or loka are the closest analogues to an eternal Kingdom of God.
  54. Nikhilananda 1992
  55. as discussed in Mahābhārata 12.161; Bilimoria et al. (eds.), Indian Ethics: Classical Traditions and Contemporary Challenges (2007), p. 103; see also Werner 1994, Bhaskarananda 1994, p. 7
  56. (2006) The Philosophy of Hinduism : Four Objectives of Human Life ; Dharma (Right Conduct), Artha (iRght Wealth), Kama (Rght Desire), Moksha (Right Exit (Liberation)). Pustak Mahal. ISBN 81-223-0945-3. 
  57. For example, see the following translation of B-Gita 11.54: "My dear Arjuna, only by undivided devotional service can I be understood as I am, standing before you, and can thus be seen directly. Only in this way can you enter into the mysteries of My understanding." (Bhaktivedanta 1997, ch. [http:// bhagavadgitaasitis.com/11/54/en1 11.54])
  58. "One who knows that the position reached by means of analytical study can also be attained by devotional service, and who therefore sees analytical study and devotional service to be on the same level, sees things as they are." (Bhaktivedanta 1997, ch. 5.5)
  59. Bhaskarananda 1994, p. 157
  60. Bhaskarananda 1994, p. 137
  61. ಅರ್ಚ್ಯೇ ವಿಷ್ಣೌ ಶೀಲಾ-ಧೀರ್...ನರಕೀ ಸಃ
  62. "Religious Life". Religions of India. Global Peace Works. Retrieved on 2007-04-19.
  63. ೬೩.೦ ೬೩.೧ ೬೩.೨ ೬೩.೩ "Domestic Worship". Country Studies. The Library of Congress (September 1995). Retrieved on 2007-04-19.
  64. "Hindu Marriage Act, 1955". Retrieved on 2007-06-25.
  65. ೬೫.೦ ೬೫.೧ "Life-Cycle Rituals". Country Studies: India. The Library of Congress (September 1995). Retrieved on 2007-04-19.
  66. Banerjee, Suresh Chandra. "Shraddha". Banglapedia. Asiatic Society of Bangladesh. Retrieved on 2007-04-20.
  67. Garces-Foley 30
  68. Fuller 2004
  69. ೬೯.೦ ೬೯.೧ Vivekananda 1987, pp. 6–7 Vol I
  70. ೭೦.೦ ೭೦.೧ Vivekananda 1987, pp. 118–120 Vol III
  71. Sargeant & Chapple 1984, p. 3
  72. ೭೨.೦ ೭೨.೧ ೭೨.೨ Nikhilananda 1990, pp. 3–8
  73. See, for instance, René Guénon Man and His Becoming According to the Vedanta (1925 ed.), Sophia Perennis, ISBN 0-900588-62-4, chapter 1, "General remarks on the Vedanta, p.7.
  74. Note: Nyaya-Vaisheshika believe that the Vedas were created by God, not eternal.
  75. Harshananda, Swami (1989), A Bird's Eye View of the Vedas, in "Holy Scriptures: A Symposium on the Great Scriptures of the World" (2nd ed.), Mylapore: Sri Ramakrishna Math, ISBN 81-7120-121-0
  76. Vivekananda 1987, p. 374 Vol II
  77. Rigveda is not only the oldest among the vedas, but is one of the earliest Indo-European texts.
  78. "Swami Shivananda's mission". Retrieved on 2007-06-25.
  79. Werner 1994, p. 166
  80. Monier-Williams 1974, pp. 25–41
  81. Sarvopaniṣado gāvo, etc. (Gītā Māhātmya 6). Gītā Dhyānam, cited in Introduction to Bhagavad-gītā As It Is Archived 2014-03-01 ವೇಬ್ಯಾಕ್ ಮೆಷಿನ್ ನಲ್ಲಿ..
  82. Thomas B. Coburn, Scripture" in India: Towards a Typology of the Word in Hindu Life, Journal of the American Academy of Religion, Vol. 52, No. 3 (September, 1984), pp. 435-459
  83. "Hindu History" The BBC names a bath and phallic symbols of the Harappan civilization as features of the "Prehistoric religion (3000-1000 BCE)".
  84. T. Oberlies (Die Religion des Rgveda, Vienna 1998. p. 158) based on 'cumulative evidence' sets wide range of 1700–1100.
  85. The Ṛgvedic deity Dyaus, regarded as the father of the other deities, is linguistically cognate with Zeus—the king of the gods in Greek mythology, Iovis (gen. of Jupiter) —the king of the gods in Roman mythology, and Tiu/Ziu in Germanic mythology[೧], cf. English 'Tues-day'. Other Vedic deities also have cognates with those found in other Indo-European speaking peoples' mythologies; see Proto-Indo-European religion.
  86. Olivelle, Patrick, "The renouncer tradition", in Flood 2003, pp. 273–274
  87. Eliot 2003
  88. Radhakrishnan & Moore 1967, p. xviii–xxi.
  89. ೮೯.೦ ೮೯.೧ ೮೯.೨ Basham 1999
  90. "The rise of Jainism and Buddhism". Religion and Ethics—Hinduism: Other religious influences. BBC (26 July 2004). Retrieved on 2007-04-21.
  91. Vijay Nath, From 'Brahmanism' to 'Hinduism': Negotiating the Myth of the Great Tradition, Social Scientist 2001, pp. 19-50.
  92. J.T.F. Jordens, “Medieval Hindu Devotionalism” in & Basham 1999
  93. Raymond Brady Williams (2004). Williams on South Asian Religions and Immigration: Collected Works. Ashgate Publishing Ltd.. ISBN 0754638561. p.217
  94. Werner 1994, p. 73
  95. "ಆರ್ಕೈವ್ ನಕಲು". Archived from the original on 2010-09-11. Retrieved 2010-03-18.
  96. "Heart of Hinduism: The Smarta Tradition". Archived from the original on 2011-02-05. Retrieved 2010-03-20.
  97. Banerji 1992, p. 2
  98. "India and Hinduism". Religion of World. ThinkQuest Library. Retrieved on 2007-07-17.
  99. S.S. Rama Rao Pappu, "Hindu Ethics", in Rinehart 2004, pp. 165–168
  100. Michaels 2004, p. 316
  101. Michaels 2004, pp. 188–197
  102. Later scriptures however, such as the Bhagavad Gītā (4.13 Archived 2009-09-13 ವೇಬ್ಯಾಕ್ ಮೆಷಿನ್ ನಲ್ಲಿ.) state that the four varṇa divisions are created by God, and the Manusmṛiti categorizes the different castes.Manu Smriti Laws of Manu Archived 2010-05-28 ವೇಬ್ಯಾಕ್ ಮೆಷಿನ್ ನಲ್ಲಿ. 1.87-1.91 However, at the same time, the Gītā says that one's varṇa is to be understood from one's personal qualities and one's work, not one's birth. This view is supported by records of sages who became Brahmins. For example, the sage Vishvāmitra was a king of the Kṣhatriya caste, and only later became recognized as a great Brahmin sage, indicating that his caste was not determined by birth. Similarly, Vālmiki, once a low-caste robber, became a sage.
  103. White Yajurveda 26.2
  104. Silverberg 1969, pp. 442–443
  105. Smelser & Lipset 2005
  106. Elenanor Zelliot, "Caste in Contemporary India", in Rinehart 2004
  107. Nikhilananda 1992, p. 155
  108. Monier-Williams, Religious Thought and Life in India (New Delhi, 1974 edition)
  109. Radhakrishnan, S (1929). Indian Philosophy, Volume 1, 2nd, Muirhead library of philosophy, London: George Allen and Unwin Ltd., 148. 
  110. For ahiṃsā as one of the "emerging ethical and religious issues" in the Mahābhārata see: Brockington, John, "The Sanskrit Epics", in Flood (2003), p. 125.
  111. For text of Y.S. 2.29 and translation of yama as "vow of self-restraint", see: Taimni, I. K. (1961). The Science of Yoga. Adyar, India: The Theosophical Publishing House. ISBN 81-7059-212-7. , p. 206.
  112. Michael Keene (2002). Religion in Life and Society. Folens Limited, 122. Retrieved on May 18, 2009. 
  113. Surveys studying food habits of Indians include: "Diary and poultry sector growth in India" Archived 2018-08-17 ವೇಬ್ಯಾಕ್ ಮೆಷಿನ್ ನಲ್ಲಿ., "Indian consumer patterns" Archived 2013-11-26 ವೇಬ್ಯಾಕ್ ಮೆಷಿನ್ ನಲ್ಲಿ. and "Agri reform in India" Archived 2006-12-28 ವೇಬ್ಯಾಕ್ ಮೆಷಿನ್ ನಲ್ಲಿ.. Results indicate that Indians who eat meat do so infrequently with less than 30% consuming non-vegetarian foods regularly, although the reasons may be economical.
  114. Fox, Michael Allen (1999), Deep Vegetarianism, Temple University Press, ISBN 1-566397-05-7
  115. Yadav, Y. (August 14, 2006). "The food habits of a nation". The Hindu. http://www.hindu.com/2006/08/14/stories/2006081403771200.htm. Retrieved 2006-11-17. 
  116. See, Basak, R., "The Hindu concept of the natural world" in Morgan 1987, pp. 111-112; see also Doshi, Malvi (2002), Cooking Along the Ganges: The Vegetarian Heritage of India, Writer's Showcase Press, ISBN 059524422X p. 2.
  117. Walker 1968:257
  118. Richman 1988:272
  119. Krishnakumar, R. (August 30-September 12, 2003). "Beef without borders". Frontline (Narasimhan Ram). http://www.hinduonnet.com/fline/fl2018/stories/20030912004703100.htm. Retrieved 2006-10-07. 
  120. Geoffray, Davis; Peter Marsden, Benedicte Ledent, Marc Delrez (2005). PA106&lr =&sig=odCSau50iKmPQAAYDT22N4YGsVs Towards a Transcultural Future: Literature and society in a post-colonial world. Rodopi, 106. ISBN 9042017368. 
  121. Ketkar, Shridhar (1909). The History of Caste in India. Taylor & Carpenter, 87–89. 
  122. Omar, Rashid (August 2006). The Right to Religious Conversion: Between Apostasy and Proselytization (PDF), Kroc Institute, University of Notre Dame, 3. 
  123. Reuter, Thomas (September 2004). Java's Hinduism Revivial. Hinduism Today. 
  124. Tamil Nadu: Dalit Christians embrace Hinduism Archived 2012-01-13 ವೇಬ್ಯಾಕ್ ಮೆಷಿನ್ ನಲ್ಲಿ. Indian Express - August 10, 2009
  125. ೧೨೫.೦ ೧೨೫.೧ Catharine Cookson (2003), Encyclopedia of religious freedom, Taylor & Francis, p. 180, ISBN 9780415941815
  126. J. N. Nanda (1991), Conflicts and co-existence, India, Concept Publishing Company, p. 93, ISBN 9788170223023
  127. William Stoddart (1993), Outline of Hinduism, Foundation for Traditional Studies, p. 13, ISBN 9780962998416
  128. Jeffery D. Long (2007), A vision for Hinduism: beyond Hindu nationalism, I.B.Tauris, p. 188, ISBN 9781845112738
  129. See Swami Bhaskarananda, Essentials of Hinduism pp. 189-92 (Viveka Press 1994) ISBN 1-884852-02-5
  130. Omar, Rashid (August 2006). The Right to Religious Conversion: Between Apostasy and Proselytization (PDF), Kroc Institute, University of Notre Dame, 4. 

ಆಧಾರ ಗ್ರಂಥಗಳು

  • Banerji, S. C. (1992), Tantra in Bengal (Second Revised and Enlarged ed.), Delhi: Manohar, ISBN 81-85425-63-9
  • Basham, A.L (1999), A Cultural History of India, Oxford University Press, ISBN 0-19-563921-9
  • Bhaktivedanta, A. C. (1997), Bhagavad-Gita As It Is, Bhaktivedanta Book Trust, ISBN 089213285X, archived from the original on 2009-09-13, retrieved 2007-07-14
  • Bhaskarananda, Swami (1994), The Essentials of Hinduism: a comprehensive overview of the world's oldest religion, Seattle, WA: Viveka Press, ISBN 1-884852-02-5[unreliable source?]
  • Bhattacharyya, N.N (1999), History of the Tantric Religion (Second Revised ed.), Delhi: Manohar Publications, ISBN 81-7304-025-7
  • Chidbhavananda, Swami (1997), The Bhagavad Gita, Sri Ramakrishna Tapovanam
  • Eliot, Sir Charles (2003), Hinduism and Buddhism: An Historical Sketch, vol. I (Reprint ed.), Munshiram Manoharlal, ISBN 8121510937
  • Fuller, C. J. (2004), The Camphor Flame: Popular Hinduism and Society in India, Princeton, NJ: Princeton University Press, ISBN 9780691120485
  • Growse, Frederic Salmon (1996), Mathura - A District Memoir (Reprint ed.), Asian Educational Services
  • Garces-Foley, Katherine (2005), Death and religion in a changing world, M. E. Sharpe
  • Guénon, René (1921), Introduction to the Study of the Hindu Doctrines (1921 ed.), Sophia Perennis, ISBN 0-900588-74-8
  • Guénon, René, Studies in Hinduism (1966 ed.), Sophia Perennis, ISBN 0-900588-69-3 {{citation}}: Check |isbn= value: checksum (help)
  • Guénon, René, Man and His Becoming According to the Vedanta (1925 ed.), Sophia Perennis, ISBN 0-900588-62-4
  • Hoiberg, Dale (2001), Students' Britannica India, Popular Prakashan, ISBN 0852297602
  • Kuruvachira, Jose (2006), Hindu nationalists of modern India, Rawat Publications, ISBN 8170339952
  • Monier-Williams, Monier (2001), English Sanskrit dictionary, Delhi: Motilal Banarsidass, ISBN 8120615093, retrieved 2007-07-24
  • Morgan, Kenneth W.; Sarma, D. S. (1953), The Religion of the Hindus, Ronald Press
  • Nikhilananda, Swami (1990), The Upanishads: Katha, Iśa, Kena, and Mundaka, vol. I (5th ed.), New York: Ramakrishna-Vivekananda Center, ISBN 0-911206-15-9
  • Nikhilananda, Swami (trans.) (1992), Gospel of Sri Ramakrishna (8th ed.), New York: Ramakrishna-Vivekananda Center, ISBN 0-911206-01-9
  • Oberlies, T (1999), Die Religion des Rgveda, Vienna: Institut für Indologie der Universität Wien, ISBN 3900271321
  • Osborne, E (2005), Accessing R.E. Founders & Leaders, Buddhism, Hinduism and Sikhism Teacher's Book Mainstream, Folens Limited
  • Radhakrishnan, S; Moore, CA (1967), A Sourcebook in Indian Philosophy, Princeton University Press, ISBN 0-691-01958-4
  • Radhakrishnan, S (Trans.) (1995), Bhagvada Gita, Harper Collins, ISBN 1-855384-57-4
  • Radhakrishnan, S (1996), Indian Philosophy, vol. 1, Oxford University Press, ISBN 0195638204
  • Richman, Paula (1988), Women, branch stories, and religious rhetoric in a Tamil Buddhist text, Buffalo, NY: Maxwell School of Citizenship and Public Affairs, Syracuse University, ISBN 0915984903
  • Sargeant, Winthrop; Chapple, Christopher (1984), The Bhagavad Gita, New York: State University of New York Press, ISBN 0-87395-831-4
  • Sen Gupta, Anima (1986), The Evolution of the Sāṃkhya School of Thought, South Asia Books, ISBN 8121500192
  • Silverberg, James (1969), "Social Mobility in the Caste System in India: An Interdisciplinary Symposium", The American Journal of Sociology, vol. 75, no. 3, pp. 442–443
  • Smelser, N.; Lipset, S., eds. (2005), Social Structure and Mobility in Economic Development, Aldine Transaction, ISBN 0202307999
  • Smith, Huston (1991), The World's Religions: Our Great Wisdom Traditions, San Francisco: HarperSanFrancisco, ISBN 0062507990
  • Vasu, Srisa Chandra (1919), The Catechism Of Hindu Dharma, New York: Kessinger Publishing, LLC
  • Vivekananda, Swami (1987), Complete Works of Swami Vivekananda, Calcutta: Advaita Ashrama, ISBN 81-85301-75-1
  • Walker, Benjamin (1968), The Hindu world: an encyclopedic survey of Hinduism, Praeger

ಹೆಚ್ಚಿನ ವಾಚನ

ಹೊರಗಿನ ಸಂಪರ್ಕಗಳು

ಶ್ರವ್ಯ ಮಾಧ್ಯಮ (ಆಡಿಯೋ)