ಸಂಸ್ಕೃತ ಶಬ್ದವಾದ ಚೈತನ್ಯದ ಅರ್ಥ 'ತಿಳಿವು/ಅರಿವು/ಜ್ಞಾನ' ಅಥವಾ 'ಪ್ರಾಣ/ಚೇತನ/ಜೀವ' ಅಥವಾ 'ಬುದ್ಧಿಶಕ್ತಿ/ಬುದ್ಧಿವಂತಿಕೆ' ಅಥವಾ 'ಸಂವೇದನೆ'. ಇದು ಪರಿಶುದ್ಧ ಪ್ರಜ್ಞೆ ಅಥವಾ ಬ್ರಹ್ಮಾಂಡೀಯ ಬುದ್ಧಿಶಕ್ತಿ, ಅಂದರೆ ತನ್ನನ್ನು ತಿಳಿದುಕೊಂಡಿರುವ ಮತ್ತು ಇತರರನ್ನು ಕೂಡ ತಿಳಿದುಕೊಂಡಿರುವ ಪ್ರಜ್ಞೆ. ಇದರರ್ಥ ಶಕ್ತಿ ಅಥವಾ ಉತ್ಸಾಹ ಎಂದು ಕೂಡ ಇದೆ. ಋಗ್ವೇದದಲ್ಲಿ (ಋ.ವೇ.೪.೪೯.೫) ನೃಶದನೆಂದರೆ ಮಾನವರೊಳಗಿನ ನಿವಾಸಿ; ನೃಶದ ಪದವನ್ನು ಚೈತನ್ಯ ಅಥವಾ ಪ್ರಜ್ಞೆ ಅಥವಾ ಪ್ರಾಣ ಅಥವಾ 'ಜೀವಶಕ್ತಿ' ಎಂದು ವಿವರಿಸಲಾಗಿದೆ, ಏಕೆಂದರೆ ಇವೆರಡೂ ಮಾನವರಲ್ಲಿ ಇರುತ್ತವೆ.[೧]

ಉಪನಿಷತ್‍ಗಳಲ್ಲಿ, ಜೀವಿಯಲ್ಲಿನ ಪ್ರಜ್ಞೆಯ ಪ್ರಧಾನ ತತ್ವದ ಪ್ರಕಾರ ಆತ್ಮವು ಪ್ರಕೃತಿಯ ಏಳುಪಟ್ಟು ಚಲನೆಯಲ್ಲಿ ತನ್ನನ್ನು ವಿಭಿನ್ನವಾಗಿ ಪ್ರತಿನಿಧಿಸಿಕೊಳ್ಳುತ್ತದೆ ಎಂದು ವಿವರಿಸಲಾಗಿದೆ. ಪ್ರಜ್ಞೆಯ ಈ ಏಳು ರೂಪಗಳು ಯಾವುವೆಂದರೆ – ೧) ಭೌತಿಕ ಪ್ರಜ್ಞೆ, ೨) ಜೀವಧಾರಕ ಪ್ರಜ್ಞೆ, ೩) ಮಾನಸಿಕ ಪ್ರಜ್ಞೆ, ೪) ಬೌದ್ಧಿಕವನ್ನು ಮೀರಿದ ಪ್ರಜ್ಞೆ, ೫) ವಿಶ್ವವ್ಯಾಪಿ ದಿವ್ಯಾನಂದ ಅಥವಾ ಪರಮಾನಂದ ಪ್ರಜ್ಞೆಗೆ ಸರಿಯಾದ ಪ್ರಜ್ಞೆ, ೬) ಅನಂತ ದೈವಿಕ ಆತ್ಮಪ್ರಜ್ಞೆಗೆ ಸರಿಯಾದ ಪ್ರಜ್ಞೆ, ಮತ್ತು ೭) ಪರಿಶುದ್ಧ ದೈವಿಕ ಅಸ್ತಿತ್ವದ ಸ್ಥಿತಿಗೆ ಸರಿಯಾದ ಪ್ರಜ್ಞೆ. ಅರವಿಂದ ಘೋಷ್‍ರು ಅನಂತ ಆತ್ಮಪ್ರಜ್ಞೆಗೆ ಸರಿಯಾದ ಪ್ರಜ್ಞೆಯನ್ನು ಚೈತನ್ಯ ಪುರುಷ ಎಂದು ಕರೆಯುತ್ತಾರೆ. ಸುಷುಪ್ತಿಯಲ್ಲಿ ಮತ್ತು ಯೋಗದಲ್ಲಿ ಬಹಿರಂಗಗೊಳಿಸಲಾದ ಬ್ರಹ್ಮನ್‍ನ ಅವಶ್ಯಕವಾದ ಸ್ವರೂಪವೇ ಚೈತನ್ಯ (ಪರಿಶುದ್ಧ ಪ್ರಜ್ಞೆ).

ವೇದಾಂತಿಗಳು ಅವರ್ಣನೀಯ ಮಾಯೆಗೆ ಸಂಬಂಧಿಸಿದ ಪ್ರಜ್ಞೆ ಅಥವಾ ಮಾಯಾಒಪಾಹಿತ ಚೈತನ್ಯದ ಬಗ್ಗೆ ಕೂಡ ಮಾತನಾಡುತ್ತಾರೆ. ಇದು ಸಂಪೂರ್ಣ ಅಸ್ತಿತ್ವದ ಸೃಷ್ಟಿ, ಸ್ಥಿತಿ ಮತ್ತು ಲಯದ ಕಾರ್ಯಗಳಿಗೆ ಜವಾಬ್ದಾರವಾಗಿದೆ. ವೇದಾಂತಿಗಳು ಅವಿದ್ಯೆಗೆ ಸಂಬಂಧಿಸಿದ ಪ್ರಜ್ಞೆ ಅಥವಾ ಅವಿದ್ಯಾಒಪಾಹಿತ ಚೈತನ್ಯದ ಬಗ್ಗೆ ಕೂಡ ಮಾತನಾಡುತ್ತಾರೆ. ಇದು ದೇಹದೊಂದಿಗೆ ಆತ್ಮದ ತಪ್ಪು ಗುರುತಿಗೆ, ಇತ್ಯಾದಿಗಳಿಗೆ ಕಾರಣವಾಗುತ್ತದೆ; ಮಾಯೆ ಮತ್ತು ಅವಿದ್ಯೆ ಎರಡನ್ನೂ ಇಲ್ಲದಂತೆ ಮಾಡಿದಾಗ, ಅಂದರೆ, ಎಲ್ಲ ವ್ಯತ್ಯಾಸಗಳನ್ನು ತೊಡೆದುಹಾಕಿದ ನಂತರ, ಯಾವುದು ಉಳಿಯುವುದೋ ಅದೇ ಪರಿಶುದ್ಧ ಪ್ರಜ್ಞೆ ಅಥವಾ ಚೈತನ್ಯ.

ಒಂದು ವಸ್ತುವಿನ ಸಂಪರ್ಕಕ್ಕೆ ಬಂದ ನಂತರ ಅಥವಾ ಅದನ್ನು ಆವರಿಸಿದ ನಂತರ ಮನಸ್ಸು ಊಹಿಸಿಕೊಳ್ಳುವ ಆ ವಸ್ತುವಿನ ರೂಪವನ್ನು ವೃತ್ತಿ ಎಂದು ಕರೆಯಲಾಗುತ್ತದೆ. ಅದನ್ನು ಆವರಿಸುವ ಪ್ರಕ್ರಿಯೆಯನ್ನು ವೃತ್ತಿ ವ್ಯಾಪ್ತಿ ಎಂದು ಕರೆಯಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Rig veda Samhita Vol. 3. III Ashtaka VII Adhyaya Sukta XIII (XL) .5. Wm. H. Allen and Company. p. 200.
"https://kn.wikipedia.org/w/index.php?title=ಚೈತನ್ಯ&oldid=1187489" ಇಂದ ಪಡೆಯಲ್ಪಟ್ಟಿದೆ