ಅನಂತ್ ನಾಗ್
ಅನಂತನಾಗ್ (ಅನಂತ್ ನಾಗರಕಟ್ಟೆ) - ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ಇವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.[೧]
ಅನಂತ್ ನಾಗ್ | |
---|---|
ಜನನ | ಅನಂತ್ ನಾಗರಕಟ್ಟೆ ಸೆಪ್ಟೆಂಬರ್-೦೪-೧೯೪೮ ಶಿರಾಲಿ, ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ) |
ರಾಷ್ಟ್ರೀಯತೆ | ಭಾರತೀಯ |
ಉದ್ಯೋಗ | ನಟ/ರಾಜಕಾರಣಿ |
ಜೀವನ ಸಂಗಾತಿ | ಗಾಯತ್ರಿ (m. ೧೯೮೭) |
ಮಕ್ಕಳು | ಅದಿತಿ ಅನಂತ್ ನಾಗ್ |
ಜೀವನಸಂಪಾದಿಸಿ
ಅನಂತನಾಗ್ ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಕನ್ನಡ, ಕೊಂಕಣಿ ಮತ್ತು ಮರಾಠಿ ರಂಗಭೂಮಿಗಳಲ್ಲಿ ಎಂಟು ವರ್ಷಗಳ ಕಾಲ ತೊಡಗಿಸಿಕೊಂಡರು. ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್ ಅವರೂ ಸಹ ಖ್ಯಾತ ಚಿತ್ರ ಕಲಾವಿದರು. [೨]
ನಟನಾಗಿಸಂಪಾದಿಸಿ
ನಟನಾಗಿ ಅನಂತ್ ಅವರು ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ಮರಣೀಯ ಪಾತ್ರಗಳಲ್ಲಿ ನಟಿಸಿದ್ದಾರೆ. [೩]
ಶ್ಯಾಂ ಬೆನೆಗಲ್ ನಿರ್ದೇಶನದ ಹಿಂದಿ ಭಾಷೆಯ ‘ಅಂಕುರ್’ ಅನಂತ್ ಅವರ ಮೊದಲ ಚಿತ್ರ. ಮುಂದೆ "ನಿಶಾಂತ್", "ಕಲಿಯುಗ್", "ಗೆಹ್ರಾಯಿ", "ಭೂಮಿಕಾ", "ಮಂಗಳಸೂತ್ರ್", "ಕೊಂಡುರಾ" ಮತ್ತು "ರಾತ್" ಸೇರಿದಂತೆ ಹಲವಾರು ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸಿದ್ದಾರೆ.
ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ‘ಅನಾಹತ್’, ಮಲಯಾಳಂನ ‘ಸ್ವಾತಿ ತಿರುನಾಳ್’, ತೆಲುಗಿನ ‘ಅನುಗ್ರಹಂ’, ಇಂಗ್ಲಿಷಿನ ‘ಸ್ಟಂಬಲ್’ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿಸಂಪಾದಿಸಿ
ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬಂದದ್ದು ೧೯೭೩ರಲ್ಲಿ ಮೂಡಿಬಂದ ಪಿ.ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ ಚಿತ್ರದಿಂದ. ‘ಸಂಕಲ್ಪ’ ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’ ಚಿತ್ರದಲ್ಲಿ ಸಂಗೀತಗಾರ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿರ್ವಹಿಸಿದರು. ೧೯೭೭ರ ದೊರೈ ಭಗವಾನರ ‘ಬಯಲುದಾರಿ’ ಚಿತ್ರ ಜನಪ್ರಿಯವಾಯಿತು. ‘ಹಂಸಗೀತೆ’, ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬೆಳದಿಂಗಳ ಬಾಲೆ’, ‘ಮತದಾನ’, ‘ಮೌನಿ’, ‘ಅನುರೂಪ’, ‘ರಾಮಾಪುರದ ರಾವಣ’, ‘ಸಿಂಹಾಸನ’, ‘ಅನ್ವೇಷಣೆ’, ‘ಮಾಲ್ಗುಡಿ ಡೇಸ್’ ಧಾರಾವಾಹಿ ಸರಣಿ ಮುಂತಾದವು ವಸ್ತು ಮತ್ತು ನಿರೂಪಣೆಗಳಿಂದ ಗಮನ ಸೆಳೆದಿವೆ.
ಅನಂತನಾಗ್ – ಲಕ್ಷ್ಮೀ ತಾರಾಜೋಡಿ ಹಲವಾರು ಯಶಸ್ವೀಚಿತ್ರಗಳನ್ನು ನೀಡಿದೆ. ಅವುಗಳಲ್ಲಿ ‘ಬೆಂಕಿಯ ಬಲೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾ ನಿನ್ನ ಬಿಡಲಾರೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’ ಮುಂತಾದ 25ಕ್ಕೂ ಹೆಚ್ಚಿನ ಚಿತ್ರಗಳಿವೆ.
‘ಅರುಣರಾಗ’, ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ಬಾಡದ ಹೂ’, ‘ಜನ್ಮಜನ್ಮದ ಅನುಬಂಧ’, ಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಪ್ರಮುಖ ಚಿತ್ರಗಳು. ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಯಶಸ್ವಿಯಾದ ಕನ್ನಡದ ನಟರಲ್ಲಿ ಅನಂತ್ ನಾಗ್ ಮೊದಲಿಗರು. ‘ಚಾಲೆಂಜ್ ಗೋಪಾಲಕೃಷ್ಣ’, ‘ಗೋಲ್ ಮಾಲ್ ರಾಧಾಕೃಷ್ಣ’, ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’, ‘ಹೆಂಡ್ತೀಗ್ಹೇಳ್ಬೇಡಿ’, ‘ಗೌರಿ ಗಣೇಶ’, ‘ಗಣೇಶ ಸುಬ್ರಮಣ್ಯ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಧೈರ್ಯಲಕ್ಷ್ಮಿ’, ‘ನಾರದ ವಿಜಯ’, ‘ಹಾಸ್ಯರತ್ನ ರಾಮಕೃಷ್ಣ’, ‘ಯಾರಿಗೂ ಹೇಳ್ಬೇಡಿ’, ‘ಗಾಯತ್ರಿ ಮದುವೆ’, ‘ಇನ್ನೊಂದು ಮದುವೆ’, ‘ಯಾರಿಗೆ ಸಾಲುತ್ತೆ ಸಂಬಳ’, ‘ಉಂಡು ಹೋದ ಕೊಂಡುಹೋದ’, ‘ಉದ್ಭವ’, ‘ಹೆಂಡ್ತಿ ಬೇಕು ಹೆಂಡ್ತಿ’, ‘ಸಮಯಕ್ಕೊಂದು ಸುಳ್ಳು’ ಸೇರಿದಂತೆ ಹಲವಾರು ಚಿತ್ರಗಳನ್ನು ಈ ಪಟ್ಟಿಗೆ ಸೇರಿದವು.
ಅನಂತ್ ನಾಗ್ ಅವರು ಇತರ ನಟರೊಂದಿಗೆ ನಟಿಸಿರುವ ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆಗಿನ ‘ಕಾಮನಬಿಲ್ಲು’,ವಿಷ್ಣುವರ್ಧನ್ ಜೊತೆಗಿನ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’, ರವಿಚಂದ್ರನ್ ಅವರ ‘ರಣಧೀರ’, ಶಾಂತಿಕ್ರಾಂತಿ’ ಪ್ರಮುಖವಾದವು. ‘ಮುಂಗಾರುಮಳೆ’, ‘ಗಾಳಿಪಟ’ ಮುಂತಾದ ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತದ ಜನಪ್ರಿಯ ಧಾರಾವಾಹಿಗಳಲ್ಲೊಂದಾದ, ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.
ರಾಜಕಾರಣಿಯಾಗಿಸಂಪಾದಿಸಿ
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ ಶಾಸಕರಾದ ಅನಂತನಾಗ್, ನಂತರ ಜೆ.ಹೆಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದರು.
ಚಿತ್ರಗಳ ಪಟ್ಟಿಸಂಪಾದಿಸಿ
ಕನ್ನಡ ಚಿತ್ರಗಳುಸಂಪಾದಿಸಿ
ಹಿಂದಿ ಚಿತ್ರಗಳುಸಂಪಾದಿಸಿ
- ಅಂಕುರ (1974)
- ನಿಶಾಂತ (1975)
- ಭೂಮಿಕಾ (1977)
- ಮಂಥನ್ (1977)
- ಕೊಂಡುರಾ (1978)
- ಕಲಿಯುಗ್ (1980)
- ಮಂಗಲಸೂತ್ರ (1981)
- ಗೆಹ್ರಾಯಿ (1982)
- ಸೂಖಾ/ಬರ (1983)
- ರಾತ್ (1990)
- ಯುವಾ (2002)
ಧಾರಾವಾಹಿಗಳುಸಂಪಾದಿಸಿ
ಪ್ರಶಸ್ತಿ - ಪುರಸ್ಕಾರಸಂಪಾದಿಸಿ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
- ಅತ್ಯುತ್ತಮ ನಟ - ಮಿಂಚಿನ ಓಟ (1979-80)
- ಅತ್ಯುತ್ತಮ ನಟ - ಹೊಸ ನೀರು (1985-86)
- ಅತ್ಯುತ್ತಮ ನಟ - ಅವಸ್ಥೆ (1987-88)
- ಅತ್ಯುತ್ತಮ ನಟ - ಗಂಗವ್ವ ಗಂಗಾಮಾಯಿ (1994-95)
- ಎರಡನೆಯ ಅತ್ಯುತ್ತಮ ಚಲನಚಿತ್ರ - ಮಿಂಚಿನ ಓಟ (1979-80) [ಶಂಕರ ನಾಗ್ ಜೊತೆ]
- ವಿಷ್ಣುವರ್ಧನ ಪ್ರಶಸ್ತಿ (2010)
ಫಿಲಂಫೇರ್ ಅವಾರ್ಡ ಕನ್ನಡ
- ಅತ್ಯುತ್ತಮ ನಟ - ನಾ ನಿನ್ನ ಬಿಡಲಾರೆ (1979)
- ಅತ್ಯುತ್ತಮ ನಟ - ಬರ (1982)
- ಅತ್ಯುತ್ತಮ ನಟ - ಹೆಂಡ್ತಿಹೇಳ್ಬೇಡಿ (1989)
- ಅತ್ಯುತ್ತಮ ನಟ - ಉದ್ಭವ (1990)
- ಅತ್ಯುತ್ತಮ ನಟ - ಗೌರಿ ಗಣೇಶ (1991)
- ಅತ್ಯುತ್ತಮ ನಟ - ಗೋದಿ ಬಣ್ಣ ಸಾಧಾರಣ ಮೈಕಟ್ಟು (2016)
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ - "ನನ್ನ ತಮ್ಮ ಶಂಕರ"
- ರಾಜ್ಯೋತ್ಸವ ಪ್ರಶಸ್ತಿ (2007)