ಭಾರತೀಯ ತತ್ವಶಾಸ್ತ್ರ ಸಮೀಕ್ಷೆ

ಭಾರತೀಯ ತತ್ತ್ವಶಾಸ್ತ್ರ-ಪೀಠಿಕೆ ಬದಲಾಯಿಸಿ

ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬೆಳೆದು ಬಂದ ತತ್ತ್ವಶಾಸ್ತ್ರವು ನಾಸ್ತಿಕವೆನಿಸುವ ಚರ್ವಾಕವಾದದಿಂದ ಇತ್ತೀಚಿನ ಭಕ್ತಿವೇದಾಂತದವರೆಗಿನ ವೈವಿಧ್ಯವನ್ನು ಹೊಂದಿದೆ. ಪ್ರಕೃತಿತತ್ವದ ವಿಕಾಸದ ಸಾಂಖ್ಯ , ಶೂನ್ಯದಿಂದಲೇ ಎಂದು ಹೇಳುವ ಬೌದ್ಧ , ವೇದವನ್ನು ಧಿಕ್ಕರಿಸುವ ಲೋಕಾಯತ , ಬ್ರಹ್ಮ(ಒ)ವೊಂದೇ ಸತ್ಯವೆನ್ನುವ ಅದ್ವೈತ , ಅದೇ ವಿಷ್ಣು,ಅಥವಾ ಶಿವನೆನ್ನುವ ಭಕ್ತಿಪಂಥಗಳು ,ಅಹಿಂಸೆ ನಗ್ನತೆ ಪಾಲಿಸುವ ಜೈನ ಧರ್ಮ , ಪಂಚ ಮಕಾರಗಳ ಆರಾಧನೆಯ ಶಾಕ್ತ ಪಂಥ , ಏನು ಸಾಧನೆ ಮಾಡಿದರೂ ಫಲವಿಲ್ಲವೆನ್ನುವ , ಎಲ್ಲಾ ಪೂರ್ವನಿಶ್ಚಿತವೆನ್ನುವ ಆಜೀವಕ ಮಾರ್ಗ, ಸತ್ಯ ಅನಿಶ್ಚಿತ , ಜಗತ್ತೇ ಇಲ್ಲವೆನ್ನುವ ಮಾಧ್ಯಮಿಕ , ಇದ್ದರೆ ಅದು ಭ್ರಮೆ ಎನ್ನುವ ಶಾಂಕರ ಮತ ; ಇವೆಲ್ಲವೂ ಸೇರಿ ಜಗಳವಾಡುತ್ತಾ ಸಹಬಾಳ್ವೆ ನಡೆಸುತ್ತಾ , -ಅವರವರದು ಅವರವರಿಗೆನ್ನುವ ತಾತ್ವಿಕ ನಿಲುವುಳ್ಳ ಭಾರತ ಸಮಾಜ ಒಂದು ವಿಚಿತ್ರ ಸಮ್ಮಿಲನ .

ವಾದ ಮಾಡಿ ವಾದ ಮಾಡಿ , ಸೋತವನು ಗೆದ್ದವನ ಶಿಷ್ಯನಾಗುತ್ತಾ ಮುಕ್ತ ಚರ್ಚೆಯ ತಾತ್ವಿಕ ಪ್ರಜಾತಂತ್ರ - ಇಲ್ಲಿ ಅಂತರ್ಗತ. ನಿನ್ನ ದಾರಿ ಸರಿ ಇರಬಹುದು , ಆದರೆ ನಾನು ಒಪ್ಪುವುದಿಲ್ಲ ; ಮುಂದೆ ಸರಿಕಂಡರೆ ಒಪ್ಪಲೂಬಹುದು ಎನ್ನುವ ಉದಾರ ನಿಲುವು ಭಾರತಸಂಸ್ಕೃತಿ ಮತ್ತು ಅದರ ಮನೋಭಾವ . ಈ ಸಾಂಸ್ಕೃತಿಕ ಮನೋಭವ ಇಂದು

ನಿನ್ನೆಯದಲ್ಲ ; ಆದರೆ ಸಾವಿರಾರು ವರ್ಷಗಳಿಂದ ನಡೆದು ಬಂದ ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಮನೋಭಾವ.

ವೇದಾಂತದ ಪ್ರಭುತ್ವ ಬದಲಾಯಿಸಿ

ಜೀವ, ಜಗತ್ತು , ದೇವರು , ಕರ್ಮ , ಪಾಪ , ಪುಣ್ಯ , ಭಕ್ತಿ , ಮೋಕ್ಷ , ಇವುಗಳನ್ನು ಎಳೆ ಎಳೆಯಾಗಿ ಕೂದಲು ಸೀಳುವ ತರ್ಕದಿಂದ ಬೆಳೆದದ್ದು ದೊಡ್ಡ ಗ್ರಂಥರಾಶಿ . ಇದಕ್ಕಾಗಿ ಪ್ರಚಂಡ ತರ್ಕಗಳು , ಒಂದೇ ದರ್ಶನದಲ್ಲಿ ನಾನಾ ಬೇಧ, ಮಂಡನೆ - ಖಂಡನೆಗಳ ಗ್ರಂಥಗಳ ಸಾಗರ (ರಾಶಿ) ; ಕೆಲವು ಹಿಮಾಲಯದ ಎತ್ತರದ ಚಂತನೆ , ಸಮುದ್ರದಷ್ಟು ಆಳ - ಕೆಲವು ಶುಷ್ಕ ತರ್ಕಗಳ ಮರುಭೂಮಿ ; ಇವು -ಇವುಗಳ ಸಮಗ್ರ ಅಧ್ಯಯನವನ್ನು ಅಸಾಧ್ಯವಾಗಿಸಿದೆ. ಆದರೆ ಇವೆಲ್ಲವೂ , ಮೋಕ್ಷವನ್ನು ಮಾತ್ರಾ ಗುರಿಯಾಗಿ ಬೆಳೆದು ಬಂದಿದ್ದು ಒಂದು ವಿಚಿತ್ರ (ದುರಂತ ?) . ಸಂಸ್ಕೃತಿಯು ಸಮಾಜದ ಇತರ ಮುಖಗಳನ್ನು -ದಾರ್ಶನಿಕ ಚಿಂತನೆಗಳು ಕಡೆಗಣಿಸಿವೆ ಎನ್ನಬೇಕು . ದರ್ಶನಗಳ ಸೆಳೆತವೆಲ್ಲಾ ಪರಲೋಕದ ಕಡೆ ಇದ್ದು , ಉಳಿದ ದರ್ಶನಗಳಿಗಿಂತ ವೇದಾಂತ ದರ್ಶನವೇ ಶ್ರೇಷ್ಠ ವೆಂಬ , ಭ್ರಮೆಯಿಂದ , ಐಹಿಕ (ಈ ಲೋಕದ) ಜೀವನ ಪ್ರೀತಿಗೆ ವಿರೋಧವಾಗಿ , ಸಂಸ್ಸೃತಿ ಬೆಳೆಯಿತೇ ? - ಜೀವನ ವೀರ್ಯವತ್ತಾಗುವ ಬದಲು , ಸಂರಕ್ಷಣೆಯು ಇಲ್ಲದೇ ನಿರ್ವೀರ್ಯ ಸಂಸ್ಸೃತಿಯಾಯಿತೇ ? -ಎಂಬುದು ಚಿಂತಿಸಬೇಕಾದ ವಿಷಯ. ಕೇವಲ ನೂರಿನ್ನೂರು ವರ್ಷಗಳಲ್ಲಿ ಕಂಡ ಆಥುನಿಕ ಬುದ್ದಿಜೀವಿಗಳ ದರ್ಶನ ಹೊಸ ಪ್ರಪಂಚವನ್ನೇ ಕಾಣಹೊರಟಿದೆ.

ವೇದ-ಭಕ್ತಿ-ಮೋಕ್ಷ ಬದಲಾಯಿಸಿ

ವೇದದಲ್ಲಿ ಜೀವನ ವಿಮುಖ ದೃಷ್ಟಿ ಇಲ್ಲ . ಗೃಹಸ್ಥಾಶ್ರಮಕ್ಕೆ ಮಹತ್ವವಿದೆ ಅದರ ರಕ್ಷಣೆಗೆ ಮಹತ್ವವಿದೆ ; ಸುಖ ಸಂಪತ್ತಿಗೆ ಮಹತ್ವವಿದೆ. ಧರ್ಮ , ಅರ್ಥ(ಹಣ) , ಕಾಮ (ಆಸೆಗಳು)ಇವುಗಳ ಪೂರೈಕೆ ಆದರ ಗುರಿಯಾಗಿತ್ತು . ಮೀಮಾಂಸಕರ ಕರ್ಮಠತೆ , ವೇದಾಂತದ ಪ್ರಾಮುಖ್ಯತೆ ವೇದಗಳನ್ನು ಜನರಿಂದ ದೂರ ಮಾಡಿದವು . ಈ ವೇದ -ವೇದಾಂತದ ಗೊಂದಲಗಳನ್ನು ದಾಟಿ ಸಾಮಾನ್ಯ ಜನರ ಬಳಿಗೆ ಸಾರಿದ ಭಕ್ತಿ ಪಂಥವೂ ಅತಿರೇಕಕ್ಕೆ ಹೋಗಿ ನಿಷ್ಕ್ರಿಯತೆ , ಅಳು ಬುರುಕುತನ , ಆತ್ಮ ವಿಶ್ವಾಸದ ಬದಲು - ಎಲ್ಲದಕ್ಕೂ ಭಗವಂತನನ್ನು ಕರೆಯುವ ಪರಾಭವ ಮನೋಭಾವ -ಮೂರ್ತಿಪೂಜೆಯ ಪ್ರಾಮುಖ್ಯತೆ , ಜಗತ್ತಿನ ಜೀವನದ ಸೌಂದರ್ಯಕ್ಕೆ ವಿಮುಖವಾದವು. ಮಾನವ ಸಹಜವಾದ ಪ್ರವೃತ್ತಿತನವನ್ನು ಕುಂಠಿತಗೊಳಿಸಿದವು , ಶ್ರೀ ಕೃಷ್ಣನೇ ಮೊದಲಾಗಿ ಬಸವಣ್ಣ ,ವಿವೇಕಾನಂದ , ದಯಾನಂದ ಸರಸ್ವತಿ , ಗಾಂಧೀಜಿ , ಈ ಜೀವನದ ಕಷ್ಟ ಸುಖಗಳಿಗೆ ಸ್ಪಂದಿಸುವ , ಜೀವನಪರಗೊಳಿಸುವ , ಪ್ರಯತ್ನ ಮಾಡಿದರೂ , ಮುಖ್ಯಧಾರೆಯನ್ನು ತಿರುಗಿಸಲು ಸಾಧ್ಯವಾಗಲಿಲ್ಲ. ಕೆಲಸ ಮಾಡುತ್ತಾ ನೂರು ಕಾಲ ಬದುಕೋಣ ಎಂದು ವೇದ ಮೊಳvದ ದೇಶದಲ್ಲೇ "ಪರಲೋಕಕ್ಕಾಗಿ ದುಡಿಯೋಣ" ,ಎನ್ನುವ ವೇದಾಂತ ಪ್ರಾಮುಖ್ಯವಾದದ್ದು ವಿಚಿತ್ರ. ಎಲ್ಲಾ ಜೀವರು ದೇವರ ಅಂಶ -ಎನ್ನುತ್ತಲೇ, ನೀ ನನ್ನ ಮುಟ್ಟಬೇಡ ,ಎನ್ನುವಂತಾದದ್ದು ; ಬಡತನ , ದುಃಖ , ಕಷ್ಟ -ಕೋಟಲೆಗೆ ಇದು ನನ್ನ / ಅವನ -ಕರ್ಮ ಎನ್ನುವ ನಿಷ್ಕರುಣ ನಿರಾಶಾವಾದ ಹುಟ್ಟಿದ್ದು ದುರಂತ.

ನನಗೆ ನಾನೇ ಹೊಣೆ , ಎನ್ನುವ ಕರ್ಮಸಿದ್ಧಾಂತ ಹೋಗಿ ಫಲ-ಜ್ಯೋತಿಷ , ದೈವ ಲೀಲೆ, ಭಜನೆ , ಇವುಗಳನ್ನು ನೆಚ್ಚಿಕೊಂಡಿದ್ದು ಒಂದು ರೀತಿಯಲ್ಲಿ ಜೀವನದ ಪರಾಭವವಾಯಿತು ಅಥವಾ ಜೀವನ ಪರಾಭವದ ಕಡೆ ಮುಖಮಾಡಿತು ಎನ್ನಬಹುದು.

೧೭ನೇ ಶತಮಾನದ ಸಾಹಸಿ-ಪಾಶ್ಚಿಮಾತ್ಯರ ಧಾಳಿ , ದೃಷ್ಟಿಕೋನ ಅವಕಾಶವಾದ, -ಭಾರತವನ್ನು ಎಚ್ಚರಿಸಿತೆನ್ನಬೇಕು. ವಿವೇಕಾನಂದರ ವೀರ ಗರ್ಜನೆ , ಗಾಂಧೀಜಿಯವರ ಕರ್ಮಯೋಗ , ಸೇವಾ ಮನೋಭಾವ , ಆತ್ಮವಿಶ್ವಾಸಗಳು ಚಿಗರೊಡೆದರೂ ಸ್ಥಿತ ಬಹಳ ಬದಲಾಗಿಲ್ಲ.

  • ಜಾನಪದ ದರ್ಶನ :ಈ ಎಲ್ಲದಕ್ಕೂ ವಿರುದ್ಧವಾಗಿ ದುಡಿಮೆಯಲ್ಲಿ ತೊಡಗಿದ ;ಅಷ್ಟು ವಿದ್ಯಾವಂತರಲ್ಲದ , ಸಾಮಾನ್ಯ ಜನರ ನಿಷ್ಟೆ , ಪ್ರಕೃತಿ ಪ್ರೇಮ , ಸತ್ಯ ಮತ್ತು ನ್ಯಾಯ ನಿಷ್ಟೆ , ಆಡಂಬರವಿಲ್ಲದ ಸರಳ ಜೀವನ - ಇವು ನಿಜವಾದ ಭಾರತದ ಜೀವನ ದರ್ಶನವಾಗಿದೆ. ಅವರಿಗೆ ಪಂಡಿತರ ಪ್ರಗತಿ ಚಿಂತನ ತರ್ಕ ಬೇಕಿಲ್ಲ . ಜ್ಞಾನ ಕರ್ಮಗಳೆರಡೂ ಒಂದೇ , ಜೀವನವೇ ಸಿದ್ಧಾಂತ , ಬದುಕೇ ಗ್ರಂಥ , ಅದರಿಂದ /ಅವರಿಂದ ದಾರ್ಶನಿಕರೂ ಕಲಿಯಬೇಕಾಗಿದೆ.[೧] [೨]

ಈಗಿನ ದರ್ಶನ ಬದಲಾಯಿಸಿ

ನಮ್ಮ ದಾರ್ಶನಿಕ ಪರಂಪರೆಯಲ್ಲಿ, ಆಧುನಿಕ ಜೀವನ ದೃಷ್ಟಿಯಿಂದ, ಒಳಿತಾದುದನ್ನು ಇಟ್ಟುಕೊಂಡು ಅನಗತ್ಯ ಜೀವನ ವಿರೋಧಿ ಅಂಶಗಳನ್ನು ಬಿಟ್ಟು ಎಲ್ಲೆಡೆಯಿಂದ ಒಳಿತನ್ನು ಸ್ವೀಕರಿಸುವ , ತತ್ವದೃಷ್ಟಿ ಬೇಕಾಗಿದೆ.

ನೋಡಿ ಬದಲಾಯಿಸಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ದರ್ಶನಶಾಸ್ತ್ರ ಚಾರ್ವಾಕ ದರ್ಶನ ; ಜೈನ ಧರ್ಮ- ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ಸೃಷ್ಟಿ ಮತ್ತು ಪುರಾಣ ದರ್ಶನ ಗಳಲ್ಲಿ ವಿಶ್ವ ಸೃಷ್ಟಿ . ಭಗವದ್ಗೀತಾ ತಾತ್ಪರ್ಯ ಹುಟ್ಟು , ಇತಿಹಾಸ, ಹಿನ್ನೆಲೆ, ಪಠನ ಕ್ರಮ ಶೈವ ದರ್ಶನಗಳು ಅಥವಾ ಶೈವ ಸಿದ್ಧಾಂತಗಳು-ಶೈವ ಪಂಥ - ಶಕ್ತಿ ವಿಶಿಷ್ಟಾದ್ವೈತ- ಪಂಚ ಕೋಶ- ವಿವೇಕ ಚೂಡಾಮಣಿಯಲ್ಲಿ ಪಂಚ ಕೋಶಗಳು.- ಓಂ ತತ್ಸತ್- ವೇದ ಕರ್ಮ ಸಿದ್ಧಾಂತ- ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು;- ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಉಲ್ಲೇಖ ಬದಲಾಯಿಸಿ

  1. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. .ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
  2. ಗೀತಾ ಪ್ರವಚನ -ವಿನೋಬಾ