ತರ್ಕಶಾಸ್ತ್ರ-(ಲಾಜಿಕ್-Logic ಮತ್ತು Epistemology)


ಪೀಠಿಕೆಸಂಪಾದಿಸಿ

ಭಾರತೀಯ ತರ್ಕಶಾಸ್ತ್ರಕ್ಕೆ ನ್ಯಾಯ ದರ್ಶನವೆಂದು ಹೆಸರು. 'ನ್ಯಾಯ' ಎಂದರೆ -'ಯೋಗ್ಯ', 'ಉಚಿತ', ಎಂಬ ಅರ್ಥವಿದೆ. ಆದರೆ ಇಲ್ಲಿ ಅರ್ಥವೇ ಬೇರೆ; ಪ್ರಮಾಣೈಃ ಅರ್ಥ ಪರೀಕ್ಷಣಂ ನ್ಯಾಯಃ -ಎಂದರೆ ಪ್ರಮಾಣಗಳಿಂದ (ಅರ್ಥ) ವಸ್ತು ತತ್ವವನ್ನು ಪರೀಕ್ಷಿಸುವುದು 'ನ್ಯಾಯ' ; ಎಂದು ವಾತ್ಸ್ಯಾಯನ ಭಾಷ್ಯವಿದೆ.

ಪಾಶ್ಚ್ಯಾತ್ಯರಲ್ಲಿ ತರ್ಕ(Logic) ಮತ್ತು ಜ್ಞಾನ ಮೀಮಾಂಸೆ (Epistemology) ಎಂದು ಎರಡು ವಿಭಾಗವಿದೆ. ಆದರೆ ನ್ಯಾಯದರ್ಶನ ಇವೆರಡನ್ನೂ ವಿಚಾರಿಸುತ್ತದೆ.

ಇತಿಹಾಸಸಂಪಾದಿಸಿ

ಈ ದರ್ಶನದ ಪ್ರವರ್ತಕ ಅಕ್ಷಪಾದ ಗೌತಮ. ಆದ್ದರಿಂದ ಅಕ್ಷಪಾದ ದರ್ಶನ ಎಂಬ ಹೆಸರೂ ಇದೆ. ಅಲ್ಲದೆ, ಹೇತು ವಿದ್ಯಾ,, ವಾದ ವಿದ್ಯಾ, ಎಂಬ ಹೆಸರುಗಳೂ ಇವೆ. ಇದು ತುಂಬಾ ಪ್ರಾಚೀನವಾದುದು. ಸುಮಾರು ಕ್ರಿ.ಶ. ೪ನೇ ಶತಮಾನದ ಗೌತಮನ , ನ್ಯಾಯಸೂತ್ರ ಇದಕ್ಕೆ ಆಧಾರ. ವಾತ್ಸ್ಯಾಯನನ ಭಾಷ್ಯ , ಇದಕ್ಕೆ ಕೀಲಿ ಕೈ. ಇದು ಪ್ರಾಚೀನ ನ್ಯಾಯ ಶಾಸ್ತ್ರ; ೧೨ನೇ ಶತಮಾನದ ಗಂಗೇಶೋಪಾಧ್ಯಾನ, ತತ್ವ ಚಿಂತಾಮಣಿ, ನವೀನ ನ್ಯಾಯ ಶಾಸ್ತ್ರಕ್ಕೆ ತಳಹದಿ. ನ್ಯಾಯ ಮತ್ತು ವೈಶೇಷಿಕ : ನ್ಯಾಯ ಮತ್ತು ವೈಶೇಷಿಕ ದರ್ಶನಗಳು ಒಂದು ಗುಂಪು. ಪರಸ್ಪರ ಸಾಮ್ಯವಿದೆ. ನ್ಯಾಯವು ತರ್ಕ ಮತ್ತು ಜ್ಞಾನ ಮೀಮಾಂಸೆಬೆಳಸಿತು. ವೈಶೇಷಿಕವು ತತ್ವಮೀಮಾಂಸೆ (Epistemology)) ಮತ್ತು ಇರುವಿನ ತತ್ವ (Ontology) ಮೀಮಾಂಸೆಯನ್ನು ಬೆಳಸಿತು. ಕೆಲವು ಗ್ರಂಥಗಳು ಇವನ್ನು ಒಟ್ಟಾಗಿ ವಿವರಿಸುತ್ತವೆ (ಉದಾ: ಅಣ್ಣಂಭಟ್ಟನ -ತರ್ಕಸಂಗ್ರಹ).

ತತ್ವಗಳುಸಂಪಾದಿಸಿ

ನ್ಯಾಯ ದರ್ಶನದ ತತ್ವಗಳು ಒಟ್ಟು ಹದಿನಾರು.
೧ ಪ್ರಮಾಣ ; ೨. ಪ್ರಮೇಯ (ಜ್ಞಾನ ವಿಷಯ) ; ೩. ಸಂಶಯ; ೪. ಪ್ರಯೋಜನ; ೫. ದೃಷ್ಟಾಂತ ; ೬, ಸಿದ್ಧಾಂತ; ೭. ಅವಯವ ; ೮. ತರ್ಕ ; ೯ನಿರ್ಣಯ ; ೧೦. ವಾದ ; ೧೧. ಜಲ್ಪ ; ೧೨. ವಿತಂಡ ; ೧೩. ಹೇತ್ವಾಭಾಸ ; ೧೪. ಛಲ ; ೧೫. ಜಾತಿ ; ೧೬. ನಿಗ್ರಹ ಸ್ಥಾನ .
ಮೊದಲ ಒಂಭತ್ತು ಪದಾರ್ಥದ ಸರಿಯಾದ ಜ್ಞಾನಕ್ಕೆ ಸಾಧನಗಳು. ಮುಂದಿನ ಏಳು, ತಪ್ಪು ಭಾವನೆಯನ್ನು ನಿವಾರಿಸುವ ಸಾಧನಗಳು.

ಇದು ಮಿಥ್ಯಾಜ್ಞಾನವನ್ನು ಬಿಟ್ಟು ತತ್ವದ ಯತಾರ್ಥ ಜ್ಞಾನಕ್ಕಾಗಿ ಇದೆ. ಅದರಿಂದ ಮೋಕ್ಷವನ್ನು ಪಡೆಯಬಹುದು, -ಎಂಬ ಉದ್ದೇಶ. ಹೇಯ (ದುಃಖ) ; ಹೇಯ ಹೇತು (ದುಃಖದ ಕಾರಣ); ಹಾನ (ನಾಶ) ; ಹಾನೋಪಾಯ (ನಾಶದ ಉಪಾಯ) ; ಈ ಶಾಸ್ತ್ರದ ವಿಷಯ. (ವಾತ್ಸಾಯನ ->) ಪ್ರಯೋಜನ ಮೋಕ್ಷ .

:ಪ್ರಮಾಣ ಮೀಮಾಂಸೆ ವಿಚಾರಸಂಪಾದಿಸಿ

ಪ್ರಮಾಣಗಳಿಗೆ ಅಗ್ರ ಸ್ಥಾನ . ನ್ಯಾಯವಾದಿಗಳು -ನೈಯಾಯಿಕರು -ಇವರು ಯಾವುದೇ ಜ್ಞಾನವನ್ನು , ಬುದ್ಧಿ, ಉಪಲಬ್ಧಿ, ಅನುಭವ, ಎಂದು ಗುರುತಿಸುತ್ತಾರೆ.
ಬುದ್ಧಿ ಎಲ್ಲಾ ವಸ್ತುಗಳನ್ನು ಬೆಳಗುತ್ತದೆ(ಅರಿಯುತ್ತದೆ). ಜ್ಙಾನವು (ಅರಿವು) ಸ್ಮೃ ತಿ (ಸ್ಮೃತಿ: ಸ್ಮಋತಿ), ಅನುಭವ ಎಂದು ಎರಡು ವಿಧ. ಹಿಂದಿನ ಅನುಭವವೇ 'ಸ್ಮೃತಿ' . ಅದು "ಭಾವನಾ"ಎಂಬ ಸಂಸ್ಕಾರದಿಂದ ಹುಟ್ಟಿದ್ದು, ಸ್ವಜಾತಿಗಿಂತ ಬೇರೆಯಾದದ್ದು- ಅನುಭವ. ವಸ್ತುವು ಹೇಗಿದೆಯೋ ಹಾಗೆಯೇತಿಳಿದರೆ ಅದು 'ಯತಾರ್ಥ'. ಅದು 'ಪ್ರಮಾ' ; ಅದಕ್ಕೆ ವಿರುದ್ಧವಾದರೆ ಅದು 'ಅಯತಾರ್ಥ' -'ಅಪ್ರಮೆ' (ಪ್ರಮಾಣವಲ್ಲ).
ಅಪ್ರಮೆ ಯು , 'ಸಂಶಯ', 'ವಿಪರ್ಯಯ' , 'ತರ್ಕ' ಎಂದು ಮೂರು ಬಗೆ .
ಸಂಶಯವೆಂದರೆ 'ನಿಶ್ಚಯ ಜ್ಞಾನವಿಲ್ಲ' :ವಿಪರ್ಯಯವೆಂದರೆ ಒಂದನ್ನು ಇನ್ನೊಂದಾಗಿ ತಿಳಿಯುವುದು. ಹಗ್ಗವನ್ನು ಹಾವೆಂದು ತಿಳಿದು ಹೆದರುವುದು. ಇಲ್ಲಿ ನಿಶ್ಚಯವಿದೆ ; -ಹಾವೇ ಎಂಬ ನಿಶ್ಚಯ ; ಆದರೆ ತಪ್ಪು.
ತರ್ಕವೆಂಬುದು ಊಹಾತ್ಮಕ ವಾದ. ಇಲ್ಲಿ ಪ್ರಮೆ ಅಥವಾ ಯತಾರ್ಥ ಜ್ಞಾನವನ್ನುಂಟುಮಾಡುವುದು ಪ್ರಮಾಣ. ಯತಾರ್ಥ ಜ್ಞಾನದ ಸಾಧನ ಅದು.
ಪರತಃ ಪ್ರಾಮಾಣ್ಯ : ಸಕ್ಕರೆಯ ಪುಡಿ ಇದ್ದಾಗ ಅದು ಹೌದೋ ಅಲ್ಲವೋ ತಿಳಿಯಲು, ಬಾಯಿಗೆ ಹಾಕಿ ತಿಳಿಯಬೇಕು. ಸಿಹಿ ಇದ್ದರೆ ಸಕ್ಕರೆ ; ಇದಕ್ಕೆ ಸಮರ್ಥ ಪ್ರವೃತ್ತಿ ಎನ್ನುತ್ತಾರೆ. ಈ ನೈಯಾಯಕರ ನಿಲುವಿಗೆ ಪರತಃ ಪ್ರಾಮಾಣ್ಯ ಎನ್ನುತ್ತಾರೆ.
ಪ್ರಮೆ ಅಥವಾ ಯತಾರ್ಥ ಜ್ಞಾನವನ್ನುಂಟು ಮಾಡುವ, ಸಾಧನಕ್ಕೆ ಪ್ರಮಾಣವೆಂದು ಹೆಸರು.
ನ್ಯಾಯ ದರ್ಶನದ ಪ್ರಕಾರ ಪ್ರಮಾಣಗಳು ನಾಲ್ಕು. ೧.ಪ್ರತ್ಯಕ್ಷ , ೨ .ಅನುಮಾನ ; ೩.ಉಪಮಾನ ; ೪.ಶಬ್ದ . ಇವುಗಳನ್ನು ಹೊರತುಪಡಿಸಿ ಯತಾರ್ಥ ಜ್ಞಾನಕ್ಕೆ ಅನ್ಯ ಸಾಧನಗಳಿಲ್ಲ .

೧. ಪ್ರತ್ಯಕ್ಷ ಪ್ರಮಾಣಸಂಪಾದಿಸಿ

ಇಂದ್ರಿಯಾರ್ಥ ಸನ್ನಿಕರ್ಷ ಜನ್ಯ ಜ್ಞಾನಮ್ -ಸೂತ್ರ.

ಇಂದ್ರಿಯ ಮತ್ತು ವಸ್ತುವಿನ ಸಂಬಂಧದಿಂದ ಹುಟ್ಟಿದ ಜ್ಞಾನ (ಕಣ್ಣು ,ನಾಲಗೆ, ಮೂಗು ಇತ್ಯಾದಿ) ಇಂದ್ರಿಯ ದೋಷವಿರಬಾರದು. ವಸ್ತು ಸ್ಪುಟವಾಗಿರಬೇಕು. (ಮಾತು ಪರೋಕ್ಷವಾಗಿ ಪ್ರಮಾಣವಲ್ಲ.)ದೂರದ ವಸ್ತುವಿನ ಜ್ಞಾನಕ್ಕೆ ನಿರ್ವಿಕಲ್ಪ ಜ್ಞಾನವೆನ್ನುತ್ತಾರೆ. ವಸ್ತುವಿನ (ಹತ್ತಿರದ) ವಿವರವಾದ ಜ್ಞಾನಕ್ಕೆ ಸವಿಕಲ್ಪ ಜ್ಞಾನ ವೆನ್ನುತ್ತಾರೆ. ವಸ್ತುವಿನ ಯತಾರ್ಥ ಜ್ಞಾನ ಆರು ಬಗೆಯಲ್ಲಾಗುವುದೆಂದು ಹೇಳುತ್ತಾರೆ. ಪ್ರತ್ಯಕ್ಷದಲ್ಲಿ ಲೌಕಿಕ, ಅಲೌಕಿಕ ಎಂದು ಎರಡು ಬಗೆ .

ಇಂದ್ರಿಯಘಳಮೂಲಕಬರುವ ಜ್ಞಾನ ಲೌಕಿಕ ;
ಇಂದ್ರಿಯ ಮತ್ತು ಅರ್ಥಗಳ (ವಿಚಾರ) ಸಂಬಂಧಗಳಿಲ್ಲದೆಯೂ ಕೆಲವು ಜ್ಞಾನಗಳಾಗುತ್ತವೆ -ಅವು ಅಲೌಕಿಕ ; ಅಲೌಕಿಕ ಮೂರು ವಿಧ : ಸಾಮಾನ್ಯ ಲಕ್ಷಣ , ಜ್ಞಾನ ಲಕ್ಷಣ , ಯೋಗಜ.
ಉದಾಹರಣೆ :
೧. ಗೋವನ್ನು ವಿವರವಾಗಿ ಪರೀಕ್ಷಿಸದಿದ್ದರೂ,ಸಾಮಾನ್ಯ ಲಕ್ಷಣದಿಂದ ಅದು ದನವೆಂದು ತೀರ್ಮಾನಿಸುತ್ತೇವೆ.
೨. ಗುಲಾಬಿಯ ಹೂವನ್ನು ದೂರದಿಂದ ನೋಡಿದರೂ , ಅದರ ಸುಗಂಧ ಅನುಭವ ಆಗುತ್ತದೆ (ಮೂಗಿಗೆ ಸುಗಂಧ ಬಂದಿರುವುದಿಲ್ಲ) . ಇದು ಜ್ಞಾನ ಲಕ್ಷಣ ಪ್ರತ್ಯಕ್ಷ .
೩.ಯೋಗಿಗಳು ಸಾಮಾನ್ಯರ ಕಣ್ಣಿಗೆ ಕಾಣದೆ ಇರುವ ವಿಷಯವನ್ನೂ ನೋಡಬಲ್ಲರು. -ಇದು ಯೋಗಜ.

೨. ಅನುಮಾನಸಂಪಾದಿಸಿ


(inference :The reasoning involved in drawing a conclusion or making a logical judgment on the basis ofcircumstantial evidence and prior conclusions rather than on the basis of direct observation)
ಅನುಮಾನವು ಪ್ರಮಾಣಗಳಲ್ಲಿ ಎರಡನೆಯದು .
ಅನುಮಾನವೆಂದರೆ "ಸಂಶಯವಲ್ಲ". ಪ್ರತ್ಯಕ್ಷವಲ್ಲದ್ದನ್ನು ತಾರ್ಕಿಕವಾಗಿ ಪ್ರಮಾಣಿಸುವುದು. (ಊಹೆಯಾದರೂ ಪೂರ್ತಿ ಊಹೆಯಲ್ಲ).
ಉದಾ : ಗಣಿತದ ಸಹಾಯದಿಂದ ಸೂರ್ಯನು ಇಷ್ಟೇ ದೂರದಲ್ಲಿ ಇದ್ದಾನೆ ಎನ್ನುವುದು. ಅನಮಾನಕ್ಕೆ ಪ್ರಸಿದ್ಧ ಉದಾಹರಣೆ : ಪರ್ವತದಲ್ಲಿ ಬೆಂಕಿ ಇದೆ ಏಕೆಂದರೆ , ಅಲ್ಲಿ ಹೊಗೆ ಇದೆ. (ಬೆಂಕಿ ಕಾಣದಿದ್ದರೂ ಹೊಗೆಯ ಆಧಾರದ ಮೇಲೆ ನಿರ್ಣಯಿಸುವುದು) ; ಇಲ್ಲಿ 'ಬೆಂಕಿ' ಎಂಬ ವಸ್ತುವನ್ನು 'ಹೊಗೆ' ಎಂಬ ಹೇತುವಿನಿಂದ (ಕಾರಣ) ಸಾಧಿಸಿದೆ . ಕಾರಣಕ್ಕೆ -ಹೇತು ಅಥವಾ ಲಿಂಗ ಎಂದು ಹೇಳುತ್ತಾರೆ ಅಥವಾ ಸಾಧನ, ವ್ಯಾಪ್ಯ.). ಬೆಂಕಿಗೂ ಹೊಗೆಗೂ ಅವಿನಾ ಸಂಬಂಧವಿದ್ದಾಗ ಮಾತ್ರ , ಹೊಗೆ 'ಹೇತು'. -ಬೆಂಕಿ 'ಸಾಧ್ಯ' -ಸಾಧಿಸಿದ ವಸ್ತು. ಇದಕ್ಕೆ ವ್ಯಾಪ್ತಿ ಎಂದು ಹೆಸರು. ಹೊಗೆಗೂ ಬೆಂಕಿಗೂ ವ್ಯಾಪ್ತಿ ಇದೆ. ಒಂದು ಇದ್ದಾಗ ಇನ್ನೊಂದು ಇರಲೇಬೇಕು ಎಂಬ ಸಾಮಾನ್ಯ ಸರ್ವಕಾಲಿಕ ಸಂಬಂಧ. ಬೆಂಕಿ ಇರವಲ್ಲೆಲ್ಲಾ ಹೊಗೆ ಇರುವುದಿಲ್ಲ. ಆದ್ದರಿಂದ ಬೆಂಕಿಗೂ ಹೊಗೆಗೂ ವ್ಯಾಪ್ತಿ ಇಲ್ಲ. ; ಆದರೆ ಹೊಗೆ -ಬೆಂಕಿಗೆ ವ್ಯಾಪ್ತಿ ಇದೆ. ಆದರೆ ವ್ಯಾಪ್ತಿಗೆ ಉಪಾದಿಯನ್ನು ಗಮನಿಸಬೇಕು ( ಎಕ್ಸೆಪ್ಶನ್ಸ್). ಸಾಮಾನ್ಯ ಲಕ್ಷಣವು ವ್ಯಾಪ್ತಿಯನ್ನು ಕಂಡುಕೊಳ್ಳವ ಬಗೆಯನ್ನು ವಿವರಿಸುತ್ತದೆ.
ಉದಾ : ಮನುಷ್ಯರು ಸಾಯುವರು ಎಂಬುದನ್ನು ಕಂಡು ಹಿಡಿಯಲು ಎಲ್ಲಾ ಮನುಷ್ಯರನ್ನೂ ಪರೀಕ್ಷಿಸಿ ನೋಡಬೇಕಿಲ್ಲ.
ಇದು ಸಾಮಾನ್ಯ ಪ್ರತ್ಯಾಸತಿ ಅನುಮಾನ ಪ್ರಮಾಣ.
ವ್ಯಾಪ್ತಿಯ ಲಕ್ಷಣದಂತೆ ಪರೀಕ್ಷಣವೂ ಅವಶ್ಯ . ಅವು 'ಅನ್ವಯ', 'ವ್ಯತಿರೇಕ' , 'ವ್ಯಭಿಚಾರಾಗ್ರಹ' , 'ಉಪಾದಿ ನಿರಾಸ', 'ತರ್ಕ' ಮತ್ತು 'ಸಾಮಾನ್ಯ ಲಕ್ಷಣ' ಎಂದು ಆರು ವಿಧ.
ಒಂದು ವಸ್ತುವಿದ್ದರೆ ಮತ್ತೊಂದು ಇರುತ್ತದೆ - ಅನ್ವಯ . (ಹೊಗೆ-ಬೆಂಕಿ).
ಒಂದುವಸ್ತು ಇರದಿದ್ದರೆ ಮತ್ತೊಂದು ಇರುವುದಿಲ್ಲ. ಇದು ವ್ಯತಿರೇಕ.
ಉದಾ : ಬೆಂಕಿ ಇಲ್ಲದಿದ್ದರೆ -ಹೊಗೆ ಇಲ್ಲ.
ವಿಪರೀತ - ಅನ್ವಯವಾಗದ ದೃಷ್ಟಾಂತವಾಗಬಾರದು.

ವ್ಯಭಿಚಾರಾಗ್ರಹ - ಸೋಪಾಧಿಕವಾಗಿರಬಾರದು (ಉತ್ಪ್ರೇಕ್ಷೆ) ಉಪಾದಿ ನಿರಾಸ -( ಎಕ್ಸೆಪ್ಶನ್ಸ್) ವಿಶೇಷ ಸಂದರ್ಭದ್ದಾಗಿರಬಾರದು. ತರ್ಕವು -ವಿರೋಧ ವಿರುವುದನ್ನು ತೋರಿಸುತ್ತದೆ. ಸಾಮಾನ್ಯ ಲಕ್ಷಣವು ವ್ಯಾಪ್ತಿಯ ಬಗೆಯನ್ನು ತಿಳಿಸುತ್ತದೆ.

ಅನುಮಾನ ಬೇಧಸಂಪಾದಿಸಿ

ಅನುಮಾನ ಬೇಧ:-
ಅನುಮಾನವನ್ನು , ಪೂರ್ವವತ್ , ಶೇಷವತ್ , ಸಾಮಾನ್ಯತೋ ದೃಷ್ಟ ಎಂದು ಮೂರು ಬಗೆಯಾಗಿ ಹೇಳಿದೆ.
೧ .ಪೂರ್ವವತ್ -ಕಾರಣದಿಂದ ಕಾರ್ಯ ;
ಉದಾ : ಮೋಡವನ್ನು ನೋಡಿ ಮಳೆ ಸುರಿಯುವುದೆಂದು ತಿಳಿಯುವುದು.
೨ .ಕಾರ್ಯದಿಂದ ಕಾರಣವು ಅನುಮಿತವಾಗುವುದು.
ಉದಾ : ಕೆಂಪು ಪ್ರವಾಹವನ್ನು ನೋಡಿ ಮೇಲ್ಭಾಗದಲ್ಲಿ ಮಳೆಯಾಗಿದೆ ಎಂದು ತಿಳಿಯುವುದು.
೩.ಚಂದ್ರನು ಒಂದುಕಡೆ ಇದ್ದು ನಂತರ ಬೇರೆಕಡೆ ಇದ್ದರೆ, ಚಲನೆಯನ್ನು ಕಾಣದೇ ಇದ್ದರೂ ಚಲನೆ ಇದೆ ಎನ್ನುವುದು.

ನ್ಯಾಯ ಅಥವಾ ಪಂಚಾಯಯುವ ವಾಕ್ಯ ;

೧. ಪ್ರತಿಜ್ಞಾ , ಹೇತು, ಉದಾಹರಣೆ. ಉಪನಯ, ನಿಗಮನ, ಈಪಂಚ ವಾಕ್ಯಗಳು ಬೇರೆಯವರಿಗೆ ಅರ್ಥವಾಗುವಂತೆ ಹೇಳುವ ವಿಧಾನ.
೧. ಪ್ರತಿಜ್ಞಾ :ಸಿದ್ಧಮಾಡಬೇಕಾದ್ದನ್ನು ಹೇಳುವುದು.
೨. ಹೇತು : ಕಾರಣವನ್ನು ಹೇಳುವುದು,
೩. ಉದಾಹರಣೆ : ಅರ್ಥವಾಗಲು/ ಸಿದ್ಧಪಡಿಸಲು ಬೆಂಕಿ-ಹೊಗೆ ಈ ಬಗೆಯ ಉದಾಹರಣೆ ಕೊಡುವುದು.
೪ : ಉಪನಯ : ವಿಷಯ ತಿಳಿಯುವಂತೆ ಮಾಡುವುಸು. (ಡಿಡಕ್ಶನ್)
೫ : ನಿಗಮನ ಮತ್ತು ಅನುಗಮನ : (ಡಿಡಕ್ಶನ್) ಸಕಾರಣಯುತವಾಗಿ ಕ್ರಮದಲ್ಲಿ ಸಿದ್ಧಪಡಿಸುವುದು -ಮತ್ತು
ಇಂಡಕ್ಶನ್ -ಬೆರೆ ಬಗೆಯ ಸಾಧ್ಯತೆ ಇಲ್ಲವೆಂಬ ಕ್ರಮದಲ್ಲಿ ಸಿದ್ಧಪಡಿಸುವು.
ಅನುಮಾನವನ್ನು ಕೇವಲ ದ್ವಯೀ ; ಕೇವ® ವ್ಯತಿದೇಕೀ ;ನ್ವಯ ವ್ಯತಿರೇಕೀ ಎಂದು ಮೂರು ವಿಭಾಗ ಮಾಡುತ್ತಾರೆ.
ಉದಾ : ಜ್ಞೇಯ ಪದಾರ್ಥಗಳೆಲ್ಲಾ ಅಭಿದೇಯವಾಗಿದೆ ; ಎಂದರೆ ತಿಳಿಯಲು ಸಾಧ್ಯವಾಗಿರುವ ವಸ್ತುಗಳಿಗೆಲ್ಲಾ ಹೆಸರಿಡಬಹುದು.
ಹೇತು (ಕಾರಣ) ಮತ್ತು ಸಾಧ್ಯ -ಸಾಧಿಸಿದ ವಿಚಾರ ; (ಪ್ರೂವ್ಡ್)
ಅನ್ವಯವನ್ನು ಮಾತ್ರಾ ಆಧರಿಸಿದೆ -ಆಗ ಕೇವಲಾನ್ವಯೀ .
ಉದಾ : ಹೊಗೆ ಇದ್ದಲ್ಲಿ ಬೆಂಕಿ ಇದೆ -ಇದು ಅನ್ವಯ.
ವ್ಯತಿರೇಕೀ : ಮೇಲಿದನ್ನು ವ್ಯತಿರೇಕವಾಗಿ ಹೇಳುಲು ಬರುವುದಿಲ್ಲ. (ಬೆಂಕಿ ಇದ್ದಲ್ಲಿ ಹೊಗೆ ಇದೆ ಎಂದು ಹೇಳಲು ಆಗದು.)

೧. ಹೀಗೆ ವ್ಯತಿರೇಕ ವ್ಯಾಪ್ತಿಯನ್ನು ಮಾತ್ರ ಕೊಡಬಹುದಾದ್ದು, - ಕೇವಲ ವ್ಯತಿರೇಕಿ ; ತಿಳಿಯದ ಹೆಸರಿಲ್ಲದ ವಸ್ತು /ಭಾವನೆ ಆದರೆ ಉದಾಹರಿಸಲು ಸಾಧ್ಯವಿಲ್ಲ -ಕೇವಲ ವ್ಯತಿರೇಕದಿಂದಲೇ ಹೇಳಬೇಕಾಗುವುದು.

ಉದಾ : ಪೃಥ್ವಿಯು ಇತರೆ ವಸ್ತುಗಳಿಂದ ಬೇರೆಯಾಗಿದೆ- ಗಂಧವಿರುವುದರಿಂದ, ಇಲ್ಲಿ ಗಂಧವು ಕೇವಲ ಪೃಥ್ವಿಯ ಗುಣ ; ವ್ಯತಿರೇಕ ವ್ಯಾಪ್ತಿ ಮಾತ್ರ ಸಾಧ್ಯ.
೨. ಅನ್ವಯ ಮತ್ತು ವ್ಯತಿರೇಕೀ ಈ ಎರಡೂ ಸಾಧ್ಯತೆಗಳಿರುತ್ತವೆ. ಅದು ಅನ್ವಯ ವ್ಯತಿರೇಕೀ. ಉದಾ : ಹೊಗೆ - ಬೆಂಕಿ.

ವೇದಾಂತಿಗಳು -ಹಿಂದಿನ ನ್ಯಾಯ ವಾಕ್ಯಗಳಲ್ಲಿ ಮೊದಲಿನ ಮೂರು ಹಂತಗಳೇ -ಪ್ರತಿಜ್ಞಾ, ಹೇತು, ಉದಾಹರಣೆ ; ಸಾಕಾಗುವುದು ಎಂದರೆ, ಬೌದ್ಧರು, ಉದಾಹರಣೆ , ಉಪನಯ, ಈ ಎರಡೇ ಸಾಕು ಎನ್ನುತ್ತಾರೆ. ಆದರೆ ನೈಯಾಯಿಕರು, ಬೇರೆಯವರಿಗೆ ಬೋಧಿಸಲು, ಈ ಐದು- ಪ್ರತಿಜ್ಞಾ, ಹೇತು, ಉದಾಹರಣ, ಉಪನಯ, ನಿಗಮನ, ಅಗತ್ಯವೆನ್ನುತ್ತಾರೆ. ;(ಆಧುನಿಕ ತರ್ಕಶಾಸ್ತ್ರದ ಬೋಧನಾಕ್ರಮದಲ್ಲೂ ಈ ಐದು ಹಂತಗಳಿವೆ. ) ಹೇತ್ವಾಭ್ಯಾಸ ದೋಷಗಳು. :

ಕಾರಣಗಳನ್ನು (ಹೇತು)ಹೇಳವಾಗ ದೋಷಪೂರಿತ ಕಾರಣಗಳನ್ನು ಸೇರಿಸುವುದು. ಹೇತುವು (ಕಾರಣವು) :ಸದ್ಧೇತುವಾಗಲು, - ಒಳ್ಳೆಯ ಕಾರಣವಾಗಲು ಐದು ಗುಣಗಳು ಅವಶ್ಯ.
೧.ಪಕ್ಷೇಸತ್ತಾ -ಪಕ್ಷದಲ್ಲಿದೆ. ; ೨. ಸಪೇಕ್ಷೇ ಸತ್ತಾ, - ಸಪಕ್ಷದಲ್ಲಿ ಹೇತುಇರುವುದು ; ೩. ವಿಪಕ್ಷಾತ್ ವ್ಯಾವೃತಿ , -ಪಕ್ಷದ ವಿರುದ್ಧವಾದ, ದೃಷಾಂತಗಳಲ್ಲಿ ಇಲ್ಲದಿರುವುದು. ; ೪.ಅಸತ್ ಪ್ರತಿಪಕ್ಷಂ. -ಸಾಧ್ಯದವಿರುದ್ಧವನ್ನು ಸಾಧಿಸುವ, ಇತರ ಹೇತುಗಳಿಲ್ಲದಿರುವುದು. ೫. ಆಬಾಧಿತ ,- ಪ್ರತ್ಯಕ್ಷಾದಿ ಪ್ರಮಾಣಗಳಿಂದ ಬಾಧಿತವಾಗದಿರುವುದು.
ಈ ಗುಣಗಳಲ್ಲಿ ದೋಷ ಕಂಡುಬಂದರೆ, ಹೇತ್ವಾಭಾಸವಾಗುತ್ತದೆ. ಒಂದು ವಿಷಯವನ್ನು ಸಾಧಿಸಬೇಕಾದರೆ, ಸಾದ್ಯಕ್ಕೆ ಸರಿಯಾದ ಕಾರಣವನ್ನು ಕೊಡಬೇಕೆಂಬುದು ತಾತ್ಪರ್ಯ.

ಕಾರಣದಲ್ಲಿ ದೋಷಗಳು :

೧. ಸವ್ಯಭಿಚಾರ, ೨. ವಿರುದ್ಧ, ೩. ಸತ್ ಪ್ರತಿಪಕ್ಷ , ೪. ಅಸಿದ್ಧ, ೫. ಬಾಧಿತ. ಈ ಐದು
೧. ಸವ್ಯಭಿಚಾರ, : ಸಿಹಿ ಇರುವ್ಯದೆಲ್ಲಾ ಕಬ್ಬು ; ಕಬ್ಬಿನಲ್ಲೂ ಸಿಹಿ ಇದೆ, ಹಣ್ಣಿನಲ್ಲೂ ಸಿಹಿ ಇದೆ. ಆದ್ದರಿಂದ ಹೇತುವು (ಕಾರಣವು) ಸಪಕ್ಷದಲ್ಲೂ (ಕಬ್ಬು) ಇದೆ, ವಿಪಕ್ಷದಲ್ಲೂ (ಹಣ್ಣು) ಇದೆ . -ಇದುಸವ್ಯಭಿಚಾರವು.
೨. ವಿರುದ್ಧ, : ಶಬ್ದವು ನಿತ್ಯವಾದುದು. ನಿತ್ಯ (ಶಾಶ್ವತ)

-ಇಲ್ಲಿ ಕಾರಣವು ವಿರುದ್ಧವನ್ನು ಹೇಳುತ್ತದೆ. ಶಬ್ದವು ನಿತ್ಯವಾದುದು ಏಕೆಂದರೆ ಅದು ಕೃತಕ (ಕ್ಷಣಿಕ) ವಾದುದು. ನಿತ್ಯ =ಶಾಶ್ವತವನ್ನು ಹೇಳುವ ಬದಲು ಕೃತಕವನ್ನು ಹೇಳವ ಕಾರಣ - ವಿರುದ್ಧ

೩. ಸತ್ ಪ್ರತಿಪಕ್ಷ , : ಸಾಧ್ಯಕ್ಕೆ ಮತ್ತೊಂದನ್ನು ಸಾಧಿಸುವ ಹೇತುವಿರುತ್ತದೆ. -ಎಂದರೆ ಒಂದು ಕಾರಣದಿಂದ ಸಾಧ್ಯವನ್ನು ಸಾಧಿಸಬಹುದು ,ಮತ್ತೊಂದು ಕಾರಣದಿಂದ ನಿರಾಕರಿಸಬಹುದು. ಉದಾ : ಶಬ್ದವು ನಿತ್ಯವಾದುದು -ಕಾರಣ ಶ್ರವ್ಯವಾದುದು ; ಅದು ಅನಿತ್ಯ ವಾದುದು, -ಕಾರಣ ಕೃತಕವಾದುದು.
೪. ಅಸಿದ್ಧ, : ಹೇತು -ಪ್ಷಗಳು ಅಸಿದ್ಧವಾದಾಗ. ; ಉದಾ : ಗಗನ ಕುಸುಮವು ಪರಿಮಳಯುಕ್ತ , -ಏಕೆಂದರೆ ಅದು ಕುಸುಮ (ಹೂ)ವಾಗಿದೆ. ಇಲ್ಲಿ ಕ್ಷವಾದ ಕುಸುಮವೇ ಇಲ್ಲ. ಆದ್ದರಿಂದ ಸಿದ್ಧ ಪಡಿಸಬೇಕಾದ ಪರಿಮಳ ಅಸಿದ್ಧವಾಗುತ್ತದೆ. (ಆಶ್ರಯಾಸಿದ್ಧ ) ಕುಸುಮವಿರುವಲ್ಲೆಲ್ಲಾ ಪರಿಮಳವಿರುತ್ತದೆ -ಎಂದರೆ ವ್ಯಾಪ್ತಿ ; ಅದೂ ವ್ಯಾಪತ್ವಾಸಿದ್ಧ್ಧ - ಏಕೆಂದರೆ ಎಲ್ಲಾ ಹೂವಿಗೂ ಪರಿಮಳವಿರುವುದಿಲ್ಲ.
೫. ಬಾಧಿತ. : ಬಾಧಿತವೆಂದರೆ, ಪ್ರತ್ಯಕ್ಷಾದಿಗಳಿಗೆ ವಿರುದ್ಧವಾದುದು. ಉದಾ : ಅಗ್ನಿಯು ತಣ್ಣಗಿದೆ. ಅದು (ದ್ರವ್ಯ) ವಸ್ತು ಪ್ರತ್ಯಕ್ಷಕ್ಕೆ ವಿರುದ್ಧ

೩ ಉಪಮಾನಸಂಪಾದಿಸಿ

ಉಪಮಾನ ಪ್ರಮಾಣಗಳಲ್ಲಿ ಮೂರನೆಯದು. ಉಪಮಾನ ಎಂದರೆ ಹೋಲಿಕೆ. ವಸ್ತು ಒಂದರ ಸಾದೃಸ್ಯ ದಿಂದ ತಿಳಿಯುವುದು ಉಪಮಾನ.
ಇದು ಪ್ರತ್ಯಕ್ಷ , ಅನುಮಾನ, ಶಬ್ದ ಈ ಮೂರರಿಂದ ಬೇರೆಯಾದುದು , ಎಂದು ನೈಯಾಯಿಕರು ಹೇಳುತ್ತಾರೆ.
ಉದಾ : ಗೋವಿನಂತೆಯೇ ಇರುವ ಕಾಡುದನವನ್ನು ನೋಡಿ , ಒಬ್ಬ ವ್ಯ ಕ್ತಿ ಅದನ್ನು ಗವಯಃ ಎಂದರೆ. -ಅದು ಉಪಮಾನದಿಂದ ಹೇಳಿದ್ದು.

೪ ಶಬ್ದ ಪ್ರಮಾಣಸಂಪಾದಿಸಿ


||ಆಪ್ತೋಪದೇಶಃ ಶಬ್ದಃ || ಆಪ್ತ ಪುರುಷನ ಉಪದೇಶವೇ ಶಬ್ದ ವೆಂದು ನ್ಯಾಯ ಸೂತ್ರ . ಆಪ್ತನಾದವನು ಸರಿಯಾದ ಪದ ವಾಕ್ಯಗಳಲ್ಲಿ ಹೇಳಿದ್ದು. - ಏಕೆಂದರೆ ಪದ ವಾಕ್ಯಗಳು ಸರಿಇಲ್ಲದಿದ್ದರೆ ಅಪಾರ್ಥವಾಗಬಹುದು. ಪದಕ್ಕೆ ಶಕ್ತಿ ಇದೆ.
ಆಕಾಂಕ್ಷೆ, ಯೋಗ್ಯತೆ , ಸನ್ನಿಧಿ ಗಳಿದ್ದಾಗ ಮಾತ್ರಾ ವಾಕ್ಯದ ಅರ್ಥವು ತಿಳಿಯುತ್ತದೆ.
ಆಕಾಂಕ್ಷೆ -ಎಂದರೆ ವಿಚಾರಿಸಿ ಸ್ಪಷ್ಟವಾಗಿ ತಿಳಿಯುವ ಕುತೂಹಲ.
ಅರ್ಥವನ್ನು ತಪ್ಪಿಲ್ಲದೆ ಸರಿಯಾಗಿ ತಿಳಿಯುವ ಶಕ್ತಿ -ಯೋಗ್ಯತೆ.
ಸನ್ನಿಧಿ -ಉಚ್ಛಾರ ಹೇಳುವುದು. ವಿಪರೀತ ವಿಳಂಬವಾಗಿ ಒಂದೊಂದೇ ಪದವನ್ನು ಹೇಳಿದರೆ ಅರ್ಥವಾಗದು.

ಶಬ್ದ ಬೋಧ : - ಪ್ರತಿಜ್ಞಾ ವಾಕ್ಯಗಳ ಅರ್ಥವನ್ನು ತಾರ್ಕಿಕವಾಗಿ ಸ್ಪಷ್ಟಪಡಿಸುವುದಕ್ಕೆ ಶಬ್ದ ಬೋಧವೆಂದು ಹೆಸರು. ಇದನ್ನು ವಾಕ್ಯಾರ್ಥ ವಿಮರ್ಶೆ ಎನ್ನಬಹುದು. ಶಬ್ದ ಪ್ರಮಾಣ ಲೌಕಿಕ, ವೈದಿಕ ಎಂದು ಎರಡು ಬಗೆ .

ವೇದಗಳು ಈಶ್ವರ ಕೃತವಾದುದರಿಂಧ ಅದು ಪ್ರಮಾಣವೆಂದು ಸ್ವೀಕರಿಸುತ್ತಾರೆ. ಅದು ವೈದಿಕ.
ಲೌಕಿಕ ವಾಕ್ಯಗಳಲ್ಲಿ ಆಪ್ತೋಕ್ತವಾದದ್ದು ಪ್ರಮಾಣ ; ಉಳಿದಿದ್ದು ಅಪ್ರಮಾಣ. ಆಪ್ತನ ವಾಕ್ಯ , ಪ್ರತ್ಯಕ್ಷ , ಅನುಮಾನಗಳನ್ನು ಆದರಿಸಿದ್ದರೂ, ನಮ್ಮ ಪಾಲಿಗೆ ಶಬ್ದ ರೂದಲ್ಲೇ ಬರುತ್ತದೆ. ಆದ್ದರಿಂದ ಹಿಂದಿನವರ ಅನುಭವವನ್ನು ಜ್ಞಾನ ಸಾಧನವಾಗಿ ಸ್ವೀಕರಿಸಬೇಕೆಂಬುದು ನ್ಯಾಯದ ನಿಲುವು. ಇದು ಲೌಕಿಕ ಶಬ್ದ ಪ್ರಮಾಣ.

೨ ಪ್ರಮೇಯಸಂಪಾದಿಸಿ


ಪ್ರಮೇಯ :
ಪ್ರಮೇಯವೆಂದರೆ ತಿಳಿಯಬಹುದಾದದ್ದು ; ಇರುವುದೆಲ್ಲಾ ತಿಳಿಯಬೇಕಾದ ವಿಷಯ. ಇದು ನ್ಯಾಯ ಶಾಸ್ರದ ನಿಲುಮೆ ; ಮೋಕ್ಷ ಸಾಧನರಗೆ ಅವಶ್ಯವಾದ ಆತ್ಮ, ಶರೀರ, ಇಂದ್ರಿಯಗಳು, ವಿಷಯ(ಆಸೆ) , ಬುದ್ಧಿ , ಮನಸ್ಸು, ಪುನರ್ಜನ್ಮ , ಕರ್ಮಫಲ, ಸುಖ -ದುಃಖ , ಅಪವರ್ಗಗಳು, -ಇತ್ಯಾದಿ ಪ್ರಮೇಯ ವರ್ಗಕ್ಕೆ ಸೇರುತ್ತವೆ. (ಇವುಗಳ ಸತ್ಯಾಸತ್ಯತೆ ಮತ್ತು ಅರ್ಥಗಳನ್ನು ತಿಳಿದುಕೊಳ್ಳಬೇಕಾದದ್ದು ಅವಶ್ಯ. ಅವುಗಳಬಗ್ಗೆ ಸರಿಯಾದ ತಿಳುವಳಿಕೆ ಜ್ಞಾನವನ್ನು ಕೊಡುವ ಸಾಧನ ನ್ಯಾಯ ಶಾಸ್ತ್ರ .

೩.ಸಂಶಯಸಂಪಾದಿಸಿ


.ಸಂಶಯ (ಇದು ಅನುಮಾನ ಪ್ರಮಾಣವಲ್ಲ) :ಇದು ಒಂದು ಬಗೆಯ ಅನಿಶ್ಚಯ ಸ್ಥಿತಿ. (ಸಂದೇಹ) . ಉದಾ : ದೂರದ ವಸ್ತು , ಮನುಷ್ಯನೋ , ಮೋಟು ಮರವೋ ? -ಇದನ್ನು ನಿರ್ಧರಿಸಬೇಕಾದ್ದು ಅವಶ್ಯ. ಮೂಢನಂಬಿಕೆಯನ್ನು ಹೋಗಲಾಡಿಸಲು ಸಂಶಯ ಅವಶ್ಯ.

೪. ಪ್ರಯೋಜನಸಂಪಾದಿಸಿ


.ಪ್ರಯೋಜನ : ಇದು ಕ್ರಿಯೆಯ ಉದ್ದೇಶ, ಜ್ಞಾನದ ಪ್ರಾಮಾಣ್ಯಕ್ಕೆ ಅವಶ್ಯ. ಆದ್ದರಿಂದ ತತ್ವಕ್ಕೆ ಸೇರುತ್ತದೆ.

೫.ದೃಷ್ಟಾಂತಸಂಪಾದಿಸಿ


.ದೃಷ್ಟಾಂತ : ವಾದ ಮಾಡುವ ಎರಡೂ ಪಕ್ಷದವರು, ಒಪ್ಪುವ ಉದಾಹರಣೆಗಳು - ದೃಷ್ಟಾಂತ. ದೃಷ್ಟಾಂತ ದೃಷ್ಟತೆಗೆ ಸಹಕಾರಿ.

೬.ಸಿದ್ಧಾಂತ'ಸಂಪಾದಿಸಿ


.ಸಿದ್ಧಾಂತ : ಪ್ರಾಮಾಣಿಕವೆಂದು ಒಪ್ಪಿದ ವಿಚಾರವೇ ಸಿದ್ಧಾಂತ. ಅನೇಕ ಆಧಾರ (ಪ್ರಮಾಣ) ಗಳ ಮೂಲಕ ಸಿದ್ಧವಾದ ವಿಚಾರ. ಇದು ನಾಲ್ಕು ಬಗೆ. ಸರ್ವತಂತ್ರ , ಪ್ರತಿತಂತ್ರ , ಅಧಿಕರಣ , ಅಭ್ಯಪಗಮ.
೧ . ಎಲ್ಲರಿಗೂ ಒಪ್ಪಿಗೆಯಾದದ್ದು ,ಸರ್ವತಂತ್ರ ಸಿದ್ಧಾಂತ ; ಉದಾ : ಕಣ್ಣು ಒಂದು ಇಂದ್ರಿಯ.
೨ . ಒಒಂದು ದರ್ಶನದವರಿಗೆ ಒಪ್ಪಿಗೆಯಾದದ್ದು ಬೇರೆಯವರಿಗೆ ಒಪ್ಪಿಗೆಯಾಗದಿರುವುದು, ಈ ಸಿದ್ಧಾಂತವೇ ಪ್ರತಿತಂತ್ರ , ಉದಾ ಸತ್ಕಾರ್ಯವಾದ -ಸಾಂಖ್ಯರಿಗೆ ಒಪ್ಪಿಗೆ ಇತರರಿಗೆ ಒಪ್ಪಿಗೆ ಇಲ್ಲ.
೩. ಅಧಿಕರಣ ಸಿದ್ಧಾಂತ ; ಆಧಾರಭೂತವಾದ ಮೂಲ ಸಿದ್ಧಾಂತ, ಸಿದ್ಧವಾದರೆ, ಇತರ ಸಿದ್ಧಾಂತಗಳು ತಾನಾಗಿಯೇ ಸಿದ್ಧವಾದಂತೆ. ಇದು ಅಧಿಕರಣ ಸಿದ್ಧಾಂತ
೪. ಅಭ್ಯುಪಗಮ : ಪರೀಕ್ಷಿಸದೆ ಪ್ರತಿವಾದಿಯು ಸಿದ್ಧಾಂತವನ್ನು ವಾದಕ್ಕಾಗಿ ಒಪ್ಪಿ ಪ್ರತಿವಾದಿಯು ಅದನ್ನು ಪರೀಕ್ಷೆಗೆ ಒಳಪಡಿಸುವುದು, -ಅಭ್ಯುಪಗಮ ಸಿದ್ಧಾಂತ.

ಉದಾಹರಣೆ ; ಈಶ್ವರ ಇದ್ದಾನೆಂದರೆ , ಜನರಿಗೆ ದುಃಖವೇಕೆ ? ಅವನು ಪರಿಹರಿಸಬಹುದಲ್ಲಾ. -ಇತ್ಯಾದಿ .

೭.ಅವಯುವಸಂಪಾದಿಸಿ


ಅವಯುವ : ಈ ಹಿಂದೆ ಹೇಳಿದ ಐದು- ಪ್ರತಿಜ್ಞಾ, ಹೇತು, ಉದಾಹರಣ, ಉಪನಯ, ನಿಗಮನ, ದೃಷ್ಟಾಂತ, ನಿಗಮಗಳು ಅವಯುವಗಳು, ನ್ಯಾಯ ವಾಕ್ಯಗಳು (ಹಿಂದೆ ಹೇಳಿದೆ)

೮.ತರ್ಕಸಂಪಾದಿಸಿ


ತರ್ಕ : ಸಂಶಯವನ್ನು ನಿವಾರಿಸಲು ವಿಶಿಷ್ಟ ವಿಧಾನ .

೯.ನಿರ್ಣಯಸಂಪಾದಿಸಿ


ನಿರ್ಣಯ : ಪಕ್ಷ ಪ್ರತಿಪಕ್ಷಗಳನ್ನು ವಿಮರ್ಶಸುವುಸದು . ಯಾವುದೇ ನಿರ್ಣಯಕ್ಕೆ ಬರಬೇಕಾದರೆ , ವಿಮರ್ಶ ಅಗತ್ಯ /ಅವಶ್ಯ. ಅವಶ್ಯ ಪ್ರಮಾಣಗಳಿಂದ ದೊರೆತ ತೀರ್ಮಾನವು ನಿರ್ಣಯ.

ಈ ಮೇಲಿನ ಒಂಭತ್ತು ಮತ್ತು ಅನುಮಾನ , ಉಪಮಾನ , ಶಬ್ದ ಪ್ರಮಾಣ ;ಈ ಮೂರು ಒಟ್ಟು ಹನ್ನೆರಡು
ಈ ಹನ್ನರಡು ವಿಚಾರಗಳು ತರ್ಕಶಾಸ್ತ್ರಕ್ಕೆ ನೇರ ಸಂಬಂಧಿಸಿದವು..
ಚರ್ಚೆಯ ಕಲೆಯ ದೃಷ್ಟಿಯಿಂದ , ಉಳಿದ ಏಳು ವಿಚಾರಗಳಿವೆ.ವಾದ , ಜಲ್ಪ , ವಿತಂಡ. ಇತ್ಯಾದಿ

೧೦. ವಾದಸಂಪಾದಿಸಿ


ವಾದ : ತತ್ವ ನಿರ್ಣಯವೇ ಗುರಿಯಾಗಿರುವ ಸಂವಾದ ವಿಶೇಷವು - ವಾದ, ವಾದಿ , ಪ್ರತಿವಾದಿಗಳು , ಪಕ್ಷ ಪ್ರತಿ ಪಕ್ಷಗಳನ್ನು ತರ್ಕಮೂಲಕ ಚರ್ಚಿಸುವುದು.- ಅದು ಸತ್ಯದ ಅರಿವಿಗಾಗಿ ; ಜಯದ ಉದ್ದೇಶದಿಂದಲ್ಲ.
||ವಾದೇ ವಾದೇ ತತ್ವಬೋಧ|| ಎಂಬುದು ಪ್ರಸಿದ್ಧ.

೧೧.ಜಲ್ಪಸಂಪಾದಿಸಿ


ಜಲ್ಪ ತತ್ವ ನಿಷ್ಠೆಯನ್ನು ಸಂರಕ್ಷಿಲು ಮಾಡುವ ಚರ್ಚೆ - ಜಲ್ಪ (ಮತ್ತು ವಿತಂಡ) . ಜಲ್ಪದಲ್ಲಿ ಗೆಲ್ಲುವುದು ಮುಖ್ಯ ; ಈಶ್ವರನಿದ್ದಾನೆ ಎಂದು ಸಾಧಿಸಲು ಎಲ್ಲ ಉಪಾಯಗಳನ್ನೂ ಉಪಯೋಗಿಸುವುದು.

೧೨.ವಿತಂಡಸಂಪಾದಿಸಿ


ವಿತಂಡ : ಸ್ವಪಕ್ಷ ಸ್ಥಾಪನೆ ಮಾಡದೆಯೇ ಪರಮತ ಖಂಡನೆಯೇ ಗುರಿಯಾಗಿರುವ ಚರ್ಚೆಗೆ ವಿತಂಡವಾದ ಎನ್ನುವರು.

೧೩.ಹೇತ್ವಾಭಾಸಸಂಪಾದಿಸಿ


ಹೇತ್ವಾಭಾಸ : ತಪ್ಪು ಕಾರಣ ಕೊಡುವುದು, ಅಸತ್ಯವಾದುದನ್ನು ಸತ್ಯವೆಂದುಹೆಳುವುದು(Fallacy, the semblance of reason) ಅದು - ಅರ್ಥೈಕಾಂತಿಕ, ವಿರುದ್ಧ, , ಅಸಿದ್ಧ; ಸತ್ಪ್ರತಿಪಕ್ಷ, ಬಾಧಿತ -ಎಂದು ಐದು ವಿಧ . ಅನುಮಾನ ಬೇಧ- ನೋಡಿ-:

೧೪.ಛಲಸಂಪಾದಿಸಿ


ಛಲ : ವಕ್ತಾರನ ಮಾತನ್ನು ತಿರುಚಿ ಖಚಿಡಿಸುವುದು ಛಲ. ವಕ್ತಾರನ ಮಾತಿಗೆ ವಿಪರೀತ ಅರ್ಥಮಾಡಿಅಪಹಾಸ್ಯ ಮಾಡುವುದು. ನ್ಯಾಯವಾಗಿ ಗೆಲ್ಲು ಆಗದಿದ್ದರೆ ,ಈ ವಂಚನೆಯ ಮಾರ್ಗ ಹಿಡಿಯುವುದು. ಉದಾ : ಇವನ ಹತ್ತಿರ ನವ ಕಂಬಳಿ ಇದೆ ; ಎಂದರೆ ; ಅದಕ್ಕೆ ಹೊಸ ಕಂಬಳಿ ಎಂಬುದನ್ನು ಬಿಟ್ಟು , ಒಂಭತ್ತುಕಂಬಳಿಎಲ್ಲಿದೆ ಎಚಿದಯ ವಿರೋಧಿಸುವುದು.

೧೫.ಜಾತಿಸಂಪಾದಿಸಿ


ಜಾತಿ : ತನ್ನ ನಿಲುವಿಗೇ ವಿರುದ್ಧವಾಗಿ ಉತ್ತರ ಕೊಡುವುದು . ಉದಾಹರಣೆ : ವ್ಯರ್ಥ ಶಬ್ದ ಅನಿತ್ಯ - ಘಟದಂತೆ , ಆದರೆ ಅದು ನಿತ್ಯ ಏಕೆಂದರೆ ಅದು ಅಮೂರ್ತ-ಆಕಾಶದಂತೆ. ಇತ್ಯಾದಿ.

೧೬.ನಿಗ್ರಹಸ್ಥಾನಸಂಪಾದಿಸಿ


ನಿಗ್ರಹ ಸ್ಥಾನ : ಪರಾಜಯಕ್ಕೆ ಕಾರಣವಾದುದು ನಿಗ್ರಹ ಸ್ಥಾನವಾಗಿದೆ. ಇದು ತಿಳುವಳಿಕೆಯ ಕೊರತೆ ; ತಪ್ಪು ತಿಳವಳಿಕೆಗಳನ್ನು ಆಧರಿಸಿದೆ.

ಕಾರ್ಯ ಕಾರಣ ಸಿದ್ಧಾಂತಸಂಪಾದಿಸಿ

ಕಾರ್ಯ ಕಾರಣ ಸಿದ್ಧಾಂತ :

ಅನನ್ಯತಾ ಸಿದ್ಧವಾಗಿರುವ ಕಾರ್ಯಕ್ಕೆ ಪೂರ್ವವಾಗಿ ಇರುವುದು ಕಾರಣ. ಕಾರಣವು ಕಾರ್ಯಕ್ಕಿಂತ ಹಿಂದಿನದು. ಅದು ನಿಯತವಾಗಿರಬೇಕು. ಕೆಲವುಕಡೆ ಇದೆ ;ಕೆಲವು ಕಡೆ ಇಲ್ಲ ಎನ್ನುವಂತಿರಬಾರದು. ಕಾರ್ಯವನ್ನುಂಟುಮಾಡುವಲ್ಲಿ ಅತ್ಯಂತ ಅವಶ್ಯವಾಗಿರಬೇಕು.ಅದು ಇಲ್ಲದಿದ್ದರೆ ಕಾರ್ಯವಿಲ್ಲವಾಗಬೇಕು. ಉದಾಹರಣೆ : ಬಟ್ಟೆಗೆ -ದಾರ. ಇತ್ಯಾದಿ. ಅನ್ಯತಾ ಸಂಬಂಧ ಸಿದ್ಧಿಗಳಿರಬಾರದೆಂಬುದು ಮುಖ್ಯ.
ಉದಾಹರಣೆ : ಮಣ್ಣನ್ನು ಹೊರಲು ಕತ್ತೆ ಬೇಕು . ಆದ್ದರಿಂದ ಮಡಕೆಗೆ ಕತ್ತೆ ಕಾರಣ ;
ಅನ್ಯತಾ ಸಂಬಂಧ : ಕಾರಣದಿಂದ ಕಾರ್ಯವು ಹುಟ್ಟುತ್ತದೆ. ಆದರೆ ಕಾರ್ಯದಲ್ಲಿ ಕಾರಣವು ಇರುವುದಿಲ್ಲ. (ಕಾರ್ಯಾಭಾವ ಪತಿಯೋಗಿ) ; ಹಾಗಿದ್ದರೂ ಅವುಗಳಲ್ಲಿ (ಕಾರ್ಯ-ಕಾರಣ) ಸಮವಾಯು (ಬೇರ್ಪಡಿಸಲಾಗದ) ಸಂಬಂಧವಿರುತ್ತದೆ.
ಕಾರಣವು ಮೂರು ವಿಧ - ಸಮವಾಯು, ಅಸಮವಾಯು,ಮತ್ತು ನಿಮಿತ್ತ.
೧. ಕಾರ್ಯದ ಉತ್ಪತ್ತಿಗೆ ಕಾರಣವಾದ ದ್ರವ್ಯವನ್ನು ಸಮವಾಯು, ಅಥವಾ ಉಪಾದಾನ ಕಾರಣ ಎನ್ನುತ್ತಾರೆ.
ಉದಾರಣೆ : ಮಡಕೆ -ಮಣ್ಣು (ಮಡಕೆಗೆ ಮಣ್ಣು ಉಪಾದಾನ ಕಾರಣ).
೨. ಕಾರ್ಯ ಅಥವಾ ಕಾರಣದೊಡನೆ ಒಂದು ವಸ್ತುವಿನ ಅಸಮವಾಯು ಸಂಬಂಧ ವಿರುವಾಗ ಉಂಟಾಗುವ ಕಾರ್ಯವನ್ನು ಅಸಮವಾಯು ಎನ್ನುತ್ತಾರೆ,
ಉದಾ : ದಾರಗಳ ಸಂಯೋಗವು ಬಟ್ಟೆಗೆ ಅಸಮವಾಯು ಕಾರಣ - ದಾರಗಳಿಗೂ ಅವುಗಳ ಸಂಯೋಗಕ್ಕೂ ಸಮವಾಯು ಸಂಬಂಧ. ನೂಲಿನ ರೂಪವು ಬಟ್ಟೆಗಳ ರೂಪಕ್ಕೆ ಅಸಮವಾಯು ಕಾರಣ. ಗುಣ ಮತ್ತು ಕ್ರಿಯೆಗಳು ಅಸಮವಾಯುಗಳಾಗಿರುತ್ತವೆ. ನೈಯಾಯಿಕರು (ನ್ಯಾಯ ದರ್ಶನದ ಅನಯಾಯಿಗಳು) ಮಾತ್ರಾ ಈಸಂಬಂಧ ಹೇಳುತ್ತಾರೆ.
೩. ಸಮವಾಯು ಮತ್ತು ಅಸಮವಾಯು ಕಾರಣಗಳಿಗಿಂತ ಬೇರೆಯಾದುದು . ನಿಮಿತ್ತ ಕಾರಣ (ಸಂಪ್ರದಾನ ಕಾರಣ)
ಉದಾಹರಣೆ ಮಡಕೆ ಮಾಡಲು ಕುಂಬಾರ ಬೇಕು ; ಇಲ್ಲಿ ಕುಂಬಾರ ನಿಮಿತ್ತ ಕಾರಣ. (ಇದಕ್ಕೆ ಸಂಪ್ರದಾನ ಕಾರಣವೆಂದೂ ಹೇಳುವರು).

ಈಶ್ವರಸಂಪಾದಿಸಿ

ನ್ಯಾಯ ದರ್ಶನ ಈಶ್ವರನನ್ನು ಒಪ್ಪುತ್ತದೆ. ‍ಈ ಶಾಸ್ತ್ರದ ಕೋವಿದ ಉದಯನನು ಈಶ್ವರನನ್ನು ಒಪ್ಪಲು ಹೂಡಿದ ವಾದ ಪ್ರಸಿದ್ಧವಾಗಿದೆ :
ಕಾರ್ಯಯೋಜನ ದೃತ್ಯಾದೇಃ ಪದಾತ್ ಪ್ರತ್ಯಯತಃ ಶ್ರುತೇಃ |
ವಾಕ್ಯಾತ್ ಸಂಖ್ಯಾ ವಿಶೇಷಾಚ್ಚ ಸಾಧ್ಯೋ ವಿಶ್ವ ವಿದವ್ಯಯಃ ||
ವ್ಯಾಖ್ಯಾನ :-
ಕಾರ್ಯಾತ್ : ಜಗತ್ತು ಒಂದು ಕಾರ್ಯ ; ಹಾಗಾಗಿ ಇದಕ್ಕೊಂದು ನಿಮಿತ್ತಕಾರಣ ಬೇಕು ; ಅವನೇ ಈಶ್ವರ. ಉದಾಹರಣೆ : ಮಡಕೆಗೆ ಕುಂಬಾರನಿದಂತೆ.
ಆಯೋಜನಾತ್ : ಜಗತ್ತಿನ ಉಪಾದಾನ ಕಾರಣಗಳಾದ ಪರಮಾಣುಗಳ (ಜಡ) ಸಂಯೋಜನೆ ಕ್ರಿಯೆಗೆ, ಚೇತನ ಶಕ್ತಿ ಬೇಕು. ಅವನೇ ಈಶ್ವರ.
ಧೃತ್ಯಾದೇ :(ಧರಿಸುವಿಕೆ): ಗ್ರಹ, ತಾರೆ, ನಕ್ಷತ್ರಗಳು ನಿಂತಿದ್ದರೆ ಅದು ಈಶ್ವರನ ಮಹಿಮೆ. ಇಲ್ಲದಿದ್ದರೆ ಎಲ್ಲಾ ನಾಶವಾಗುತ್ತಿತ್ತು.
ಪದಾತ್ : ಪದಗಳು ಅರ್ಥವನ್ನು ಸೂಚಿಸುತ್ತವೆ. ಅದು ಅವನ ಶಕ್ತಿಯಿಂದ . ಕಲಾ ಕೌಶಲ್ಯಗಳೂ ಅವನ ಶಕ್ತಿಯಿಂದ.
ಪ್ರತ್ಯಯತಃ : ಯಾವ ತಪ್ಪೂ ಇಲ್ಲದ ವೇದಗಳ ರಚನೆ , ಈಶ್ವರನಿಂದ ಮಾತ್ರಾ ಸಾಧ್ಯ.
ಶ್ರುತೇ : ವೇದಗಳು ಈಶ್ವರನ ಅಸ್ತಿತ್ವವನ್ನು ಹೇಳುತ್ತವೆ.
ವಾಕ್ಯಾತ್ : ವೇದ ವಾಕ್ಯಗಳು ವಿಧಿ -ನಿಷೇಧವನ್ನು ಹೇಳುತ್ತವೆ. ಆ ಧರ್ಮ ಪ್ರವರ್ತಕನು ಈಶ್ವರ.
ಸಂಖ್ಯಾ ವಿಶೇಷಾತ್ : ಎರಡು ಪರಮಾಣುಗಳ ಸಂಯೋಗ , ದ್ವಣುಕ ಉತ್ಪತ್ತಿ ಸಂಖ್ಯಾದ್ವಯದಿಂದ ಆಗುತ್ತದೆ. ಈ ದ್ವಿತ ಸಂಖ್ಯೆಯ ಅಪೇಕ್ಷಾ ಬುದ್ಧಿ ಜನ್ಯ. ಅದು ಚೇತನಾ ವ್ಯಕ್ತಿಯಿಂದ ಆಗತಕ್ಕದ್ದು. ಅವನೇ ಈಶ್ವರ.
ಅದೃಷ್ಟಾತ್  : ನಮ್ಮ ಕರ್ಮಫಲಗಳಿಗೆ ಅದೃಷ್ಟವು ಕಾರಣ. ಜಡವಾದ ಅದೃಷ್ಟವನ್ನು , ಪ್ರೇರಿಸುವ ಕೆಲಸವನ್ನು ಚೇತನ ವ್ಯಕ್ತಿಯೇ ಮಾಡಬೇಕಾಗುತ್ತದೆ. ಆ ಚೇತನ ವ್ಯಕ್ತಿಯೇ ಈಶ್ವರ.
ಈಶ್ವರನ ಅನುಗ್ರಹವು ಮುಕ್ತಿಗೆ ಅವಶ್ಯಕ.
ಪ್ರಾಚೀನ ನ್ಯಾಯ ದರ್ಶನದಂತೆ - ಈಶ್ವರನು ಸರ್ವಶಕ್ತನಾದರೂ ಅಣುಗಳನ್ನೂ ಆತ್ಮಗಳನ್ನು ಸೃಷ್ಟಿಸಲೂ ಆರ, ನಾಶಮಾಡಲೂ ಆರ. ಕುಂಬಾರನಂತೆ ಕೆಲಸ ಮಾಡುವುದೂ ಇಲ್ಲ. ಅದೃಷ್ಟವನ್ನು ಪ್ರೇರಿಸುತ್ತಾನೆ ಅಷ್ಟೆ . ಅವನು ಕೇವಲ ಚೇತನ-ಧರ್ಮಿ.

ಆತ್ಮಸಂಪಾದಿಸಿ

ಈ ಶಾಸ್ತ್ರವು ದೇಹ ಇಂದ್ರಿಯ ಗಳಿಂದ ಬೇರೆಯಾದ ಆತ್ಮವನ್ನು ಒಪ್ಪುತ್ತದೆ. ಅನುಮಾನ ಪ್ರಮಾಣದಿಂದ ಆತ್ಮ ತತ್ವವನ್ನು ಸಿದ್ಧಪಡಿಸುತ್ತದೆ. ಅಣುಗಳು, ಕಾಲ, ದೇಶಗಳಂತೆ ಆತ್ಮನೂ ನಿತ್ಯ ಪದಾರ್ಥ. ಬುದ್ಧಿ , ಸುಖ -ದುಃಖ ಇತ್ಯಾದಿ ಆತ್ಮದ ಗುಣಗಳು. ಪ್ರತಿಯೊಂದು ದೇಹಕ್ಕೂ ಆತ್ಮವಿದೆ ಆತ್ಮಗಳ ಸಂಖ್ಯೆ ಅನಂತ. ಚೈತನ್ಯವು ಆತ್ಮದ ಧರ್ಮ ಸ್ವರೂಪವಲ್ಲ -ಇವು ನೈಯಾಯಿಕರ (ನ್ಯಾಯ ಶಾಸ್ತ್ರದ ಅನುಯಾಯಿಗಳ ನಿಲುವು).

ಅಪವರ್ಗಸಂಪಾದಿಸಿ

ಮಿಥ್ಯಾ ಜ್ಞಾನದಿಂದ ಬಂಧ , ಪ್ರವೃತ್ತಿ , ದುಃಖ ಇತ್ಯಾದಿ ಉಂಟಾಗುವುದು. ದುಃಖದ ಅಂತ್ಯವೇ ಮೋಕ್ಷ. ಮೋಕ್ಷವೇ ಅಪವರ್ಗ . ಇಂಥ ಮುಕ್ತಿಯಲ್ಲಿ ಆತ್ಮದ ಗುಣವೆಲ್ಲವೂ ನಾಶವಾಗಿ ಸುಖ ದುಃಖ ರಹಿತನಾಗಿ ಚೈತನ್ಯದಿಂದಲೂ ವಿಮುಕ್ತನಾಗುತ್ತಾನೆ. ಹಾಗಾಗಿ ಮುಕ್ತಾವಸ್ಥೆಯಲ್ಲಿ ಆನದವೂ ಇಲ್ಲ (ದುಃಖವೂಇಲ್ಲ) .

ಸಮೀಕ್ಷೆಸಂಪಾದಿಸಿ

ನ್ಯಾಯ ದರ್ಶನವು ಮುಖ್ಯವಾಗಿ ತರ್ಕಶಾಸ್ತ್ರ. ಎಲ್ಲಾ ದರ್ಶನಗಳೂ ಇದರಿಂದ ಪ್ರಭಾವಿತವಾಗಿವೆ.
ಪಾಶ್ಚ್ಯಾತ್ಯರಲ್ಲಿ ತರ್ಕಶಾಸ್ತ್ರವು ೧೬ ನೆಯ ಶತಮಾನದಲ್ಲಿ ಬಂದರೆ ಇಲ್ಲಿ ಮೊದಲೇಬಂದಿತ್ತೆನ್ನಬಹುದು. ಇದು ದೇವರನ್ನೂ , ವೇದಗಳನ್ನೂ , ಅರೆಮನಸ್ಸಿನಿಂದ ಒಪ್ಪಿದಂತೆ ಕಾಣುತ್ತದೆ - ಎನ್ನುವುದು ಪಂಡಿತರ ಅಭಿಪ್ರಾಯ. ಆದ್ದರಿದ ಇದನ್ನು ಕೇವಲ ಪ್ರಮಾಣ ಶಾಸ್ತ್ರವೆನ್ನುವುದು ಸೂಕ್ತ.ಚರ್ಚೆಪುಟ:ಜೈನ ಧರ್ಮ[೧][೨]

ನೋಡಿಸಂಪಾದಿಸಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ;ಮೋಕ್ಷ

ಉಲ್ಲೇಖಗಳುಸಂಪಾದಿಸಿ

  1. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
  2. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.

ಉಲ್ಲೇಖಸಂಪಾದಿಸಿ