ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು

ಪರ್ಯಾಯ ಪದಗಳು:ಪರಮಾತ್ಮ :ಈಶ್ವರ :ದೇವರು :ಬ್ರಹ್ಮ :ಪರಬ್ರಹ್ಮ :ಮೂಲ ಚೈತನ್ಯ :

ಪೀಠಿಕೆ ಬದಲಾಯಿಸಿ

ಜೀವ, ಜಗತ್ತುಗಳಂತೆ ದರ್ಶನಗಳಲ್ಲಿ ಪ್ರಧಾನವಾದುದು ಈಶ್ವರ ತತ್ತ್ವ. ಸಮಸ್ತ ಪ್ರಪಂಚವನ್ನೂ ಆವರಿಸಿ ಅದನ್ನೆಲ್ಲಾ ನಿಯಂತ್ರಿಸುವ ಒಂದು ಶಕ್ತಿ ಇದೆಯೇ ? ಅದೊಂದು ವ್ಯಕ್ತಿಯೇ ? ಶಕ್ತಿಯೇ ? ಜಗತ್ತಿಗೂ ಈಶ್ವರನಿಗೂ ಇರುವ ಸಂಬಂಧವೇನು ? ಜಗತ್ತಿನಲ್ಲಿ ಅನುಭವಿಸುವ ಕಷ್ಟಗಳಿಗೆ ಆವ್ಯಕ್ತಿ - ಶಕ್ತಿಯಿಂದ ಸಹಾಯ ದೊರೆತೀತೇ ? ಈ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಯತ್ನಸಿರುವುದೇ ದರ್ಶನ ಶಾಸ್ತ್ರ.
ಡಿ.ವಿ.ಜಿ.ಯವರು ಜೀವನ ಧರ್ಶನ ಕಾವ್ಯವಾಗಿರುವ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಮೊದಲಿಗೆ ಈ ಪ್ರಶ್ನೆಗಳನ್ನು ಎತ್ತುತ್ತಾರೆ .
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,
ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||
(ವಿಶ್ವಕ್ಕೆ ಆದಿ ಮತ್ತು ಮೂಲ-ಕಾರಣವಾದದ್ದು/ ಕಾಣದೊಡಂ-ಕಾಣದಿದ್ದರೂ ಅಳ್ತಿಯಿಂ-ಪ್ರೀತಿಯಿಂದ/ಭಕ್ತಿಯಿಂದ ಜನ ನಂಬಿರುವರೋ ಆ ವಿಚಿತ್ರಕ್ಕೆ ನಮಸ್ಕಾರ !! )
ಜೀವ ಜಡರೂಪ ಪ್ರಪಂಚವನದಾವುದೋ|
ಆವರಿಸಿಕೊಂಡುಮೊಳನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ|
ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||
(ಪ್ರಪಂಚವನ್ನು ಅದು ಆವುದೋ ಆವರಿಸಿಕೊಂಡುಂ+ ಒಳ+ನೆರೆ-ಒಳಗೆ ತಂಬಿಹುದಂತೆ;ಭಾವಕೆ ಮನಸ್ಸಿಗೆ ಸಿಗದ ಅಳತೆಗೆ ಅಳವಡದ-ಸಿಗದ ಆ ವಿಶೇಷಕ್ಕೆ ನಮಿಸು !!)
ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|
ಮಹಿಮೆಯಿಂ ಜಗವಾಗಿ ಜೀವವೇಷದಲಿ||
ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ|
ಗಹನ ತತ್ವಕೆ ಶರಣೊ - ಮಂಕುತಿಮ್ಮ||
(ಇದೆ ಅಥವಾ ಇಲ್ಲ ಎಂದು ತಿಳಿಯಲು ಆಗದ /ಆಸ್ಪದಕೊಡದ -ತರ್ಕಕ್ಕೆ ಸಿಗದ ನಿಜ-ತನ್ನ ಶಕ್ತಿಯಿಂದ ಜಗತ್ತಾಗಿ ರೂಪಗೊಂಡು/ಜೀವವಾಗಿ ಪರಿಣಮಿಸಿ,ನಿಸದ=ನಿಜ- ನಿಜವಾದೊಡೆ/ನಿಜವಿದ್ದರೂ ಇರಬಹುದು -ಅದಕ್ಕೆ ನಮಿಸು !! )

ದರ್ಶನ ಶಾಸ್ತ್ರಗಳಲ್ಲಿ ಈಶ್ವರ ಬದಲಾಯಿಸಿ

ಚರ್ವಾಕ
ಚರ್ವಾಕರು ಮೋಕ್ಷ , ಪುನರ್ಜನ್ಮ , ಪರಲೋಕ , ಈಶ್ವರ , ಇವನ್ನೆಲ್ಲಾ ನಿರಾಕರಿಸುತ್ತಾರೆ. ಅವೆಲ್ಲಾ ಭ್ರಮೆ ಎನ್ನುತ್ತಾರೆ . ಸುಖ ದುಃಖಗಳೆಲ್ಲಾ ಪ್ರಕೃತಿ ಸಹಜವಾದದ್ದು ; ರಾಜನೇ ಈಶ್ವರನ ಕೆಲಸಮಾಡುತ್ತಾನೆ ಎಂಬುದು ಅವರ ಸಿದ್ಧಾಂತ.
ಜೈನ
ಜೈನದರ್ಶನವು ಈಶ್ವರನನ್ನು ಒಪ್ಪದಿದ್ದರೂ , ಅನಂತ ಜ್ಞಾನಶಕ್ತಿಗಳಿರುವ ಆತ್ಮ ತತ್ವನ್ನೊಪ್ಪಿದೆ.ಅನೇಕ ಅನಂತ ಆತ್ಮಗಳಿವೆ ಎನ್ನುತ್ತಾರೆ. ಕೆಲವು ದೇವತೆಗಳನ್ನೊಪ್ಪುತ್ತಾರೆ (ವೇದಗಳಲ್ಲಿ ಹೇಳಿದವು - ಕೆಲವು ಹೊಸ ದೇವತೆಗಳಿದ್ದಾರೆ). ಜಿನ , ಅರ್ಹತ, ತೀರ್ಥಂಕರರು, ಪೂರ್ಣಜೀವರು .
ಬೌದ್ಧ
ಬೌದ್ಧರೂ ಪರಮಾತ್ಮನನ್ನು ಒಪ್ಪುವುದಿಲ್ಲ. ಜೀವನನ್ನು ಒಪ್ಪಿದರೂ ;ರಾಗ ದ್ವೇಷಾದಿಗಳನ್ನೂ-ಕರ್ಮಗಳನ್ನು ಜ್ಞಾನದಿಂದ ಬಿಡಿಸಿಕೊಂಡ ನಂತರ ಶೂನ್ಯದಲ್ಲಿ ಒಂದಾಗುವುದು (ಮೋಕ್ಷ) ; ಆದರೂ ಪೂರ್ಣಾತ್ಮನೆಂದು ಬುದ್ಧನನ್ನೇ ಸ್ವೀಕರಿಸಿ ಅವನನ್ನೇ ಈಶ್ವರ ಸ್ಥಾನಕ್ಕೇರಿಸಿದೆ. ಬೌದ್ಧ ದರ್ಶನವು ದೇವತೆಗಳನ್ನು ಸ್ವೀಕರಿಸುವುದು . ಆದರೆ ಜಗತ್ತೆಲ್ಲಾ ಕ್ಷಣಿಕ -ಭ್ರಮೆ ಎಂಬ ನಿಲುಮೆ ಅದರ ಪ್ರಕಾರ ಶೂನ್ಯವೇ ಸತ್ಯ .

ಷಡ್ದರ್ಶನಗಳಲ್ಲಿ ದೇವರು ಬದಲಾಯಿಸಿ

ಸಾಂಖ್ಯ
ಪ್ರಾಚೀನ ಸಾಂಖ್ಯರಲ್ಲಿ ಈಶ್ವರನ ವಿಚಾರವಿಲ್ಲ. ಪ್ರಕೃತಿ ಪುರುಷರೇ ಎಲ್ಲಕ್ಕೂ ಕಾರಣ . ಪುರುಷರ ಸಾನ್ನಿಧ್ಯವು ಪ್ರಕೃತಿಗೆ - ಸೃಷ್ಟಿಗೆ ಪ್ರೇರಣೆಯನ್ನೊದಗಿಸುತ್ತದೆ.
ಯೋಗ ದರ್ಶನ
ಯೋಗ ದರ್ಶನದಲ್ಲಿ ಈಶ್ವರನನ್ನು ಒಪ್ಪಲಾಗಿದೆ. ಪತಂಜಲಿಯ ಪ್ರಕಾರ ಈಶ್ವರನು ನಿತ್ಯ, ಮುಕ್ತ , ಕರ್ಮಾತೀತ , ಸರ್ವಜ್ಞ ಸರ್ವಶಕ್ತ , ಸರ್ವವ್ಯಾಪಿ . ಹಿಂದಿನ ಋಷಿಗಳ ಗುರು , ಸಮಾಧಿ ಪಡೆಯಲು , ಅತನ ಅನುಗ್ರಹ ಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಜೀವರ ಶಿಷ್ಟ -ರಕ್ಷೆ ಯ ಹೊಣೆ ಅವನಿಗಿಲ್ಲ. ದೇವನು ಮೋಕ್ಷದಾಯಕನೂ ಅಲ್ಲ .ಜಗತ್ತಿನ ಸ್ರಷ್ಟಿ, ಸ್ಥಿತಿ,ಲಯಗಳಿಗೆ ಇವನು ಕಾರಣನಲ್ಲ . ಪ್ರಕೃತಿಗೆ ಕೇವಲ ಪ್ರೇರಕನಾಗಿ , -ನಿಮಿತ್ತ ಕಾರಣನಾಗಿದ್ದಾನೆ.
ವೈಶೇಷಿಕ ದರ್ಶನ
ವೈಶೇಷಿಕ ದರ್ಶನದಲ್ಲಿ -ಅದರ ಸೂತ್ರಗಳಲ್ಲಿ ಸ್ಪಷ್ಟವಾಗಿ ದೇವರ ಉಲ್ಲೇಖವಿಲ್ಲ. ಸೂತ್ರದ ವಿ ತದ್ವಚನಾತ್ ವಿ ಂಬಸೂತ್ರ-ವ್ಯಾಖ್ಯಾನಕ್ಕರ ವೇದದ ಆಧಾರದಮೇಲೆ , ತದ್ ಎಂದರೆ ಅದನ್ನು (ದೇವರನ್ನು) ಒಪ್ಪಲಾಗಿದೆ.
ಮೀಮಾಂಸಾ ದರ್ಶನ
ಮೀಮಾಂಸಾ ದರ್ಶನದಲ್ಲಿ ಜೈಮಿನಿ , ಶಬರಸ್ವಾಮಿ , ಇವರು ಈಶ್ವರನನ್ನು ನಿರಾಕರಿಸುತ್ತಾರೆ. ವೇದ -ಅದರ ಮಂತ್ರಗಳು , ಯಜ್ಞ ಕರ್ಮಗಳು ನಿತ್ಯ ಅಥವಾ ಪ್ರಾಮುಖ್ಯ . ದೇವತೆಗಳ ಅಸ್ಥಿತ್ವವನ್ನೂ ಒಪ್ಪುವುದಿಲ್ಲ .
ವೇದಗಳು ಅನಾದಿ , ತಾನಾಗಿ ಸೃಷ್ಟಿಯಾದವು ಎನ್ನುತ್ತಾರೆ. ನಂತರದ ಮೀಮಾಂಸಕರು ದೇವರನ್ನು ಒಪ್ಪಿದ್ದಾರೆ . ಆದರೆ ದೇವರಿಗೆ ಮಹತ್ವವಿಲ್ಲ. ಕುಮಾರಿಲರು ವೇದಪುರುಷನನ್ನು ಒಪ್ಪಿದರೂ, ಈಶ್ವರನನ್ನು ಒಪ್ಪಿಲ್ಲ . ಕಾರಣ ದೇವರನ್ನು ಒಪ್ಪಿದರೆ ಜಗತ್ತಿನಲ್ಲಿರುವ ಅನ್ಯಾಯವನ್ನು ವಿವರಿಸಲು ಅದಕ್ಕೆ ಕಾರಣ ಹೇಳಲು ಅಸಾದ್ಯವೆಂದು ಅವರ ಮತ,
ಅದ್ವೈತ
ಅದ್ವೈತ ದರ್ಶನದಲ್ಲಿ ನಿರ್ಗುಣನೂ, ನಿರಾಕಾರನೂ ಸಚ್ಚದಾನಂದ ರೂಪಿಯೂ ಆದ ಪರಬ್ರಹ್ಮನನ್ನು ಒಪ್ಪಲಾಗಿದೆ. ಬ್ರಹ್ಮ ವೊಂದೇ ಸತ್ಯ ,ಅದೇ ಪರಬ್ರಹ್ಮ , ಮಾಯೆ ಸೇರಿದಾಗ , ಅದು ಅಪರ ಬ್ರಹ್ಮ ವೆನಿಸಿ ,ಜಗತ್ತಿನ ಸೃಷ್ಟಿ , ಸ್ಥಿತಿಲಯಗಳಿಗೆ , ಉಪಾದಾನ ಮತ್ತು ನಿಮಿತ್ತ ಕಾರಣವಾಗಿದೆ.
ಅವಿದ್ಯೆಯ ಮಾಯೆಎ) ಆವರಣದಿಂದ , ಅದೇ ಬ್ರಹ್ಮ ವು ಜೀವ ಗಳೆ/ನೆನಿಸುತ್ತದೆ/ ವೆ. ಆದರೆ ವ್ಯವಹಾರಿಕ ಸತ್ತೆಯ ದೃಷ್ಟಿಯಿಂದ ಉಪಸನಾ ದೃಷ್ಟಿಯಿಂದ , ಈಶ್ವರನನ್ನು (ಸಗುಣ ಬ್ರಹ್ಮ) ಒಪ್ಪಲಾಗಿದೆ. ಆದರೆ ಪಾರಮಾರ್ಥಿಕ ದೃಷ್ಟಿಯಿಂದ ,ಸಗುಣ ಬ್ರಹ್ಮ , ನಿರ್ಗುಣಬ್ರಹ್ಮ ಜೀವರಲ್ಲಿ ಬೇಧವಿಲ್ಲ. ; ಜಗತ್ತು ಒಂದು ಮಿಥ್ಯೆ ; (ವಿವರಿಸಲಾಗದ ವಸ್ತು)ಅದು ಬ್ರಹ್ಮ ನಿಂದ ಬೇರೆಯಿಲ್ಲ.ಅಥವಾ -ಇಲ್ಲವೇ ಇಲ್ಲ.

ಇತರ ದರ್ಶನಗಳಲ್ಲಿ ದೇವರು ಬದಲಾಯಿಸಿ

ಭಕ್ತಿ ಪಂಥ ವಿಶಿಷ್ಟಾದ್ವೈತ

ರಾಮಾನುಜರ ವಿಶಿಷಾದ್ವೈತದಲ್ಲಿ ನಿರ್ಗುಣ ಬ್ರಹ್ಮಕ್ಕೆ ಸ್ಥಾನವಿಲ್ಲ.
ಸಗುಣ ಸವಿಶೇಷ ಬ್ರಹ್ಮವೇ ಈಶ್ವರ. ಅವನೇ ವಿಷ್ಣು ; ಅವನೇ ಶ್ರೀಮನ್ನಾರಾಯಣ . ಅವನು ಲಕ್ಷ್ಮಿಯೊಡನೆ ವೈಕುಂಠದಲ್ಲಿ ವಾಸಿಸುತ್ತಾನೆ . ಈ ಈಶ್ವರನಲ್ಲಿಯೇ ಚಿತ್ (ಚೇತನ) ಅಚಿತ್ ಮತ್ತು ಸಗುಣ ಈಶ್ವರ ತತ್ವವನ್ನು ಕಾಣಬಹುದು.ಅವನೇ ಏಕಮಾತ್ರ ಸತ್ತೆ (ಸತ್ಯ -ಇರುವವನು) . ಜೀವ , ಜಗತ್ತು ಅವನನ್ನು ಅವಲಂಬಿಸಿಕೊಂಡಿದ್ದೂ ಬೇರೆಯಾಗಿವೆ. ಆದರೆ ಬಿಡಿಸಲಾಗದಂತೆ ಹೊಂದಿಕೊಂಡಿವೆ. ಪ್ರಳಯ ಕಾಲದಲ್ಲಿ ಜೀವ ಜಗತ್ತುಗಳು ಸೂಕ್ಷ್ಮಾವಸ್ಥೆಯಲ್ಲಿ ಈಶ್ವರನಲ್ಲಿ ಅಡಗಿರುತ್ತವೆ. ಪುನಃ ಸೃಷ್ಟಿಯಾದಾಗ ಪ್ರಕಟವಾಗುತ್ತವೆ . ಪರಮಾತ್ಮನಾದ ವಾಸುದೇವನು ಜಗತ್ತಿನ ಸೃಷ್ಟಿ, ಸ್ಥಿತಿ , ಲಯಗಳಿಗೆ ಉಪಾದಾನ ಹಾಗೂ ನಿಮಿತ್ತ ಕಾರಣನಾಗಿದ್ದಾನೆ. ಸ್ವತಃ ಅವನಲ್ಲಿ ಯಾವ ಬದಲಾವಣೆಯೂ ಇಲ್ಲ. ಅವನಿಗೆ ಅಪ್ರಾಕೃತವಾದ ಅಂದರೆ ದಿವ್ಯವಾದ ದೇಹವಿದೆ. ಹಾಗಿದ್ದರೂ ಕರ್ಮದ ಬಂಧಕ್ಕೆ ಸಿಲುಕುವುದಿಲ್ಲ. ಆದರೆ ಅವನು ಕರ್ಮಾಧ್ಯಕ್ಷ.ಅವನ ಅನುಗ್ರಹದಿಂದ ಮುಕ್ತಿಯನ್ನು ಪಡೆಯಬಹುದು.

ಮಧ್ವರ ದ್ವೈತ ಮತ್ತು ದೇವರು. ಬದಲಾಯಿಸಿ

ಮಧ್ವರ ಮತದಲ್ಲಿಯೂ ದೇವರನ್ನು ವಿಷ್ಣುವೆಂದು ಕರೆಯಲಾಗಿದೆ. ಅವನ ಗುಣಗಳೆಲ್ಲಾ ರಾಮಾನುಜ ಮತದಂತೆ ; ಆದರೆ ರಾಮಾನುಜರಂತೆ ಜೀವ ಜಗತ್ತುಗಳು ಪರಮಾತ್ಮನ ಶರೀರವೆಂದು ಒಪ್ಪುವುದಿಲ್ಲ. ಅವು ಅವನಿಗಿಂತ ಭಿನ್ನ ವಾದವು. ಜಗತ್ತಿನ ಸೃಷ್ಟಿಗೆ ಅವನು ನಿಮಿತ್ತ ಕಾರಣ ಮಾತ್ರಾ ; ಪ್ರಕೃತಿಯು ಉಪಾದಾನ ಕಾರಣ.

ನಿಂಬಾರ್ಕರು - ದ್ವೈತಾದ್ವೈತ ಬದಲಾಯಿಸಿ

ನಿಂಬಾರ್ಕರು ತಮ್ಮ ದ್ವೈತಾದ್ವೈತ ಸಿದ್ಧಾಂತದಲ್ಲಿ ,ಈಶ್ವರ ಆತ್ಮೀಯ ; ಅವನೇ ಶ್ರೀಕೃಷ್ಣ ; ಅವನ ಗುಣಗಳು ರಾಮಾನುಜ -ಮಧ್ವ ಮತದಂತೆ , ಆದರೆ ದೇವರು ವಿಶ್ವ ಸೃಷ್ಠಿ ಗೆ ಉಪಾದಾನ ಕಾರಣ ಮತ್ತು ನಿಮಿತ್ತ ಕಾರಣ. ಜಗತ್ತಿನ ಜಡ ಚೇತನಗಳು ಬೇರೆಯಾಗಿ ಕಂಡರೂ, ಬ್ರಹ್ಮದ ಪರಿಣಾಮವಾಗಿದ್ದು , ತತ್ವತಃ ಬ್ರಹ್ಮವೇ ಆಗಿದೆ.

ವಲ್ಲಭರ -ಶುದ್ಧಾದ್ವೈತ ಬದಲಾಯಿಸಿ

ವಲ್ಲಭಾಚಾರ್ಯರ ಶುದ್ಧಾದ್ವೈತವೂ ಸಾಕಾರ ಈಶ್ವರನನ್ನು ಪ್ರತಿಪಾದಿಸುತ್ತದೆ . ಈ ಬ್ರಹ್ಮನೇ (ಕೃಷ್ಣನೇ), ಸತ್ ಚಿತ್ , ಆನಂದ ಮತ್ತು ರಸನಾಗಿದ್ದಾನೆ . ಅನೋರಣಿಯಾನ್ ಮಹತೋಮಹೀಯಾನ್ ಆಗಿರುವವನೂ ಅವನೇ. ಕರ್ತೃವೂ ಅವನೇ ಭೋಕ್ತೃವೂ ಅವನೇ ; ಈ ವಿಶ್ವ ಅವನ ಲೀಲೆ . ಅವನು ಅಧಿದೈವಿಕದಲ್ಲಿ ಪರಬ್ರಹ್ಮ , ಅಧ್ಯಾತ್ಮಿಕದಲ್ಲಿ ಅಕ್ಷರಬ್ರಹ್ಮ ; ಅಧಿಭೌತಿಕದಲ್ಲಿ ಜಗತ್ತು . ಕಾರ್ಯ ಕಾರಣಗಳು ಬೇರೆ ಅಲ್ಲವಾದುದರಿಂದ , ಜಗತ್ತು ಬ್ರಹ್ಮ ರೂಪವೇ ಆಗಿದೆ. ಕಾರಣ ಅವನು ಜಗತ್ತಿಗೆ ಉಪಾದಾನ ,ಮತ್ತು ನಿಮಿತ್ತ ಕಾರಣನಾಗಿದ್ದಾನೆ.

ಚೈತನ್ಯ ಪ್ರಭು

ಚೈತನ್ಯರ ಪ್ರಕಾರ ಬ್ರಹ್ಮ ಅಥವಾ ಶ್ರೀಕೃಷ್ಣ ಸಚ್ಚಿದಾನಂದ ರೂಪಿ ; ಸಕಲ ಕಲ್ಯಾಣಗುಣನಿಧಿ ; ಅವನು ಬೇಧಗಳಿಂದ ಶೂನ್ಯನಾದವನು ; ಅಚಿಂತ್ಯ ; ನಕಾರಾತ್ಮಕವಾಗಿ ಕಂಡರೂ , ಏಕಾತ್ಮ ; ಸರ್ವವ್ಯಾಪಿ ; ಅವನ ಮೂರು (೪?) ಶಕ್ತಿಗಳೆಂದರೆ ಸ್ವರೂಪ ಶಕ್ತಿ , ತಟಸ್ಥ ಶಕ್ತಿ , ಜೀವಶಕ್ತಿ ಅಥವಾ ಮಾಯಾ ಶಕ್ತಿ. ಸ್ವರೂಪ ಶಕ್ತಿಯಿಂದ ಸತ್ತೆ ವ್ಯಾಪ್ತಿ , ಜ್ಞಾನ, ಆನಂದ ; ತಟಸ್ಥ ಶಕ್ತಿಯಿಂದ ಜೀವಿಗಳ ಉತ್ಪತ್ತಿ ; (ಜೀವ ಶಕ್ತಿ) ಮಾಯಾಶಕ್ತಿಯಿಂದ ಜಗತ್ತು ಉಂಟಾಗುತ್ತದೆ.ಈ ಮೂರು ಶಕ್ತಿಗಳು ಒಟ್ಟಾಗಿ -ಪರಾಶಕ್ತಿ- ಎನಿಸುತ್ತದೆ. ಸ್ವರೂಪ ಶಕ್ತಿಯಿಂದ ಜಗತ್ತಿಗೆ ನಿಮಿತ್ತ ಕಾರಣ ; ಮಾಯಾ ಶಕ್ತಿ ಮತ್ತು ಜೀವ ಶಕ್ತಿಯಿಂದ ಉಪಾದಾನ ಕಾರಣ. ಅವನು (ದೇವನು, ಬ್ರಹ್ಮ ,ಶ್ರೀಕೃಷ್ಣ ) ಅನೇಕ ಅವತಾರವೆತ್ತುತ್ತಾನೆ . ಆದರೆ ಶ್ರೀ ಕೃಷ್ಣನು ಮಾತ್ರಾ ಪರಬ್ರಹ್ಮವೇ .

ಶೈವ ಸಿದ್ಧಾಂತಗಳಲ್ಲಿ ದೇವರು ಬದಲಾಯಿಸಿ

ಶೈವ ಸಿದ್ಧಾಂತಗಳ ಪ್ರಕಾರ ಶಿವನೇ (ಪರಬ್ರಹ್ಮ) ಪ್ರಪಂಚದ ಸೃಷ್ಟಿ -ಸ್ಥಿತಿ -ಲಯಗಳಿಗೆ ಕಾರಣ. ಅವನ ಆಣವ ಮಲದ (ಅವಿದ್ಯೆ) ಸಂಬಂಧದಿಂದ ಜಗತ್ತು ಹೊರಹೊಮ್ಮುತ್ತದೆ. ಕಾಲ-ದಂತೆ ಅವನಲ್ಲಿ ಬದಲಾವಣೆ ಇಲ್ಲ . ಅವನ ಸಂಕಲ್ಪದಿಂದ ಎಲ್ಲಾ ಬದಲಾವಣೆಗಳಾಗುತ್ತವೆ. ಜೀವಿಗಳ ಬಂಧವನ್ನು ಹರಿಸುವುದರಿಂದ ಅವನು -ಹರ ; ಮಂಗಳಕರನಾದುದರಿಂದ ಅವನು -ಶಿವ ; ಅವನು ನಿರ್ಗುಣ ; ನಿರ್ಗುಣನೆಂದರೆ ತ್ರಿಗುಣಾತೀತ ; ಪೂರ್ಣ ; ವಿಶ್ವಾತ್ಮಕ ; ವಿಶ್ವಾತೀತ ; ಸಾಕಾರನೂ ಹೌದು ; ನಿರಾಕಾರನೂ ಹೌದು . ಅವನಿಗೆ ಪಂಚ ಕೃತ್ಯಗಳುಂಟು : -ಅವು ಸೃಷ್ಟಿ , ಸ್ಥಿತಿ , ಲಯ , ತಿರೋಧಾನ , ಅನುಗ್ರಹ .
ಕಾಶ್ಮೀರ ಶೈವ -ಪ್ರತ್ಯಭಿಜ್ಞಾ ದರ್ಶನ
ಕಾಶ್ಮೀರ ಶೈವದ ಪ್ರಕಾರ ಶಿವನೇ ಪರಮ ತತ್ವ . ಈ ತತ್ವವು ಶಿವ-ಶಕ್ತಿಯರ ಸಾಮ್ಯ ರೂಪದ್ದು. ಅವನು ಚೈತನ್ಯ-ಎಲ್ಲದರಲ್ಲೂ ವ್ಯಾಪಿತ ; ವಿಶ್ವಾತ್ಮಕನಾಗಿ ಪ್ರತಿವಸ್ತುವಿನಲ್ಲಿದ್ದಾನೆ . ಅಲ್ಲದೆ ವಿಶ್ವೋತ್ತೀರ್ಣ , ವಿಶ್ವದ ಹೊರಗೂ ಇದ್ದಾನೆ . ಈ ಜಗತ್ತು ಶಿವನಿಂದ ಬೇರೆಯಲ್ಲ . ಅವನ ಪ್ರಧಾನ ಶಕ್ತಿಗಳು : ಚಿತ್ , ಆನಂದ , ಇಚ್ಛಾ , ಜ್ಞಾನ , ಮತ್ತು ಕ್ರಿಯಾ . ಕಾಶ್ಮೀರೀ ಶೈವವು ಅದ್ವೈತವನ್ನೇ ಹೇಳಿದರೂ ಶಿವನಿಗೆ ಕರ್ತೃತ್ವವನ್ನು ಹೇಳುತ್ತದೆ. ಅವನೇ ನಿಪುಣ ನಟನಾಗಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ .

ಪಾಶ್ಚಿಮಾತ್ಯ ತತ್ವಶಾಸ್ತ್ರ ಮತ್ತು ದೇವರು ಬದಲಾಯಿಸಿ

 
A depiction of the Trinity-ತತ್ವ-ತ್ರಯ consisting of God the Father-ದೇವ ಪಿತ, God the Son-ದೇವಪುತ್ರ (Jesus-ಏಸು), and God the Holy Spirit-ಪವಿತ್ರಶಕ್ತಿ

ವೈಜ್ಞಾನಿಕ ವಿಚಾರ ವಾದಿಗಳು ಅನೇಕರು "ಇಲ್ಲದ" ವಿಚಾರದಲ್ಲಿ ಅನಗತ್ಯ ದೀರ್ಘ ಚರ್ಚೆ ಅನಗತ್ಯವೆಂದು ಅಭಿಪ್ರಾಯ ಪಡುತ್ತಾರೆ ಮತ್ತು ಈ ಚರ್ಚೆಗೆ ಸಮಯ ವ್ಯರ್ಥವೆಂದು ಹೇಳುತ್ತಾರೆ . ಆದರೆ ಪಶ್ಚಿಮದ ಆಸ್ತಿಕರು ದೇವನು ಒಂದು ಸರ್ವಶಕ್ತಿಯುಳ್ಳ ದೇವಲೋಕದಲ್ಲಿರುವ ಒಂದು ವ್ಯಕ್ತಿಯೆಂದು, ಅವರ ಮತ ಗ್ರಂಥದ ಆಧಾರದ ಮೇಲೆ ನಂಬುಗೆ ಇಟ್ಟು ಒಪ್ಪಿದ್ದಾರೆ . ಅವರ ಮತಗ್ರಂಥದ ಆದಾರದ ಮೇಲೆ ದೇವರನ್ನು ಒಪ್ಪುವ ಅವರು ಡಾರ್ವಿನ್ನನ ಜೀವವಿಕಾಸ ವಾದವನ್ನೂ , ವೈಜ್ಞಾನಿಕ ವಿಶ್ವ ವಿಕಾಸ ವಾದವನ್ನೂ, ತಿರಸ್ಕರಿಸುತ್ತಾರೆ.

ಮುಖ್ಯ ಮತಧರ್ಮ ಕ್ರಿಶ್ಚಿಯನ್ನರು ಮುಖ್ಯವಾಗಿ ಮೂರು ತತ್ವಗಳನ್ನು ಅಂತಿಮ ದೈವಿಕ ಶಕ್ತಿಗಳೆಂದು ನಂಬುತ್ತಾರೆ.
    1. ದೇವಲೋಕದ ಪಿತ (ದೇವ ಪಿತ) ;
    2. ದೇವ ಪುತ್ರ (ಏಸು ) ;
    3. ಪವಿತ್ರಾತ್ಮ ಅಥವಾ ಪವಿತ್ರ ಶಕ್ತಿ;
ಎಂದು, ಈ ಮೂರು ತತ್ವಗಳುಳ್ಳ ದೇವನನ್ನು ನಂಬಬೇಕೆಂದು ವಿಧಿಸಲಾಗಿದೆ

ದೇವರು ಇದ್ದಾನೋ ಇಲ್ಲವೋ-ವಾದ-ವಿವಾದ ಬದಲಾಯಿಸಿ

ಈಶ್ವರನ ಅಸ್ತಿತ್ವ~ ನಿರಾಕರಣೆ -ಸಮರ್ಥನೆ .
ಈಶ್ವರನು (ದೇವನು) ಪ್ರತ್ಯಕ್ಷ ಪ್ರಮಾಣಕ್ಕೆ ವಿಷಯನಲ್ಲ (ಕಣ್ಣಿಗೆ ಕಾಣುವುದಿಲ್ಲ) .ಅದರಿಂದ ಅನುಮಾನ ಅಥವಾ ಶಬ್ದಪ್ರಮಾಣವನ್ನು ಆಶ್ರಯಿಸಿ ಈಶ್ವರನು ಇದ್ದಾನೆಂದು ನಿರೂಪಿಸಬೇಕಾಗುವುದು. ಮೀಮಾಂಸಕರಾದ ಕುಮಾರಿಲರು ಅನುಮಾನ ಪ್ರಮಾಣದಿಂದಲೂ ದೇವರಿದ್ದಾನೆಂದು ಸಾಧಿಸಲುಬರುವುದಲ್ಲವೆನ್ನುತ್ತಾರೆ .

ಅದಕ್ಕೆ ಉದಯನನ ತನ್ನ ನ್ಯಾಯ ಕುಸುಮಾಂಜಲಿಯಲ್ಲಿ , ಹೂಡುವ ವಾದವು ಪ್ರಸಿದ್ಧವಾಗಿದೆ. (ನ್ಯಾಯ ದರ್ಶನ)

ದೇವರು ಇದ್ದಾನೆ ಎಂಬ ಸಮರ್ಥನೆಯ ವಾದ

ಉದಯನನ ಸಮರ್ಥನೆ ಬದಲಾಯಿಸಿ


ಕಾರ್ಯಕಾರಣ ಯೋಜನದೃತ್ಯಾದೇಃ | ಪದಾತ್ ಪ್ರತ್ಯಯ ಶ್ರುತೇಃ |
ವಾಕ್ಯಾತ್ , ಸಾಂಖ್ಯಾ ವಿಷೇಶಾಚ್ಯ ಸಾಧ್ಯೋ , ವಿಶ್ವ ವಿದವ್ಯ : ||
ವ್ಯಾಖ್ಯಾನ :-
  1. ಕಾರ್ಯಾತ್ : ಜಗತ್ತು ಒಂದು ಕಾರ್ಯ ; ಹಾಗಾಗಿ ಇದಕ್ಕೊಂದು ನಿಮಿತ್ತಕಾರಣ ಬೇಕು ; ಅವನೇ ಈಶ್ವರ. ಉದಾಹರಣೆ : ಮಡಕೆಗೆ ಕುಂಬಾರನಿದ್ದಂತೆ.
  2. ಆಯೋಜನಾತ್ : ಜಗತ್ತಿನ ಉಪಾದಾನ ಕಾರಣಗಳಾದ ಪರಮಾಣುಗಳ (ಜಡ) ಸಂಯೋಜನೆ ಕ್ರಿಯೆಗೆ, ಚೇತನ ಶಕ್ತಿ ಬೇಕು. ಅವನೇ ಈಶ್ವರ.
  3. ಧೃತ್ಯಾದೇ :(ಧರಿಸುವಿಕೆ): ಗ್ರಹ, ತಾರೆ, ನಕ್ಷತ್ರಗಳು ನಿಂತಿದ್ದರೆ ಅದು ಈಶ್ವರನ ಮಹಿಮೆ. ಇಲ್ಲದಿದ್ದರೆ ಎಲ್ಲಾ ನಾಶವಾಗುತ್ತಿತ್ತು.
  4. ಪದಾತ್ : ಪದಗಳು ಅರ್ಥವನ್ನು ಸೂಚಿಸುತ್ತವೆ. ಅದು ಅವನ ಶಕ್ತಿಯಿಂದ . ಕಲಾ ಕೌಶಲ್ಯಗಳೂ ಅವನ ಶಕ್ತಿಯಿಂದ.
  5. ಪ್ರತ್ಯಯತಃ : ಯಾವ ತಪ್ಪೂ ಇಲ್ಲದ ವೇದಗಳ ರಚನೆ , ಈಶ್ವರನಿಂದ ಮಾತ್ರಾ ಸಾಧ್ಯ.
  6. ಶ್ರುತೇ : ವೇದಗಳು ಈಶ್ವರನ ಅಸ್ತಿತ್ವವನ್ನು ಹೇಳುತ್ತವೆ.
  7. ವಾಕ್ಯಾತ್ : ವೇದ ವಾಕ್ಯಗಳು ವಿಧಿ -ನಿಷೇಧವನ್ನು ಹೇಳುತ್ತವೆ. ಆ ಧರ್ಮ ಪ್ರವರ್ತಕನು ಈಶ್ವರ.
  8. ಸಂಖ್ಯಾ ವಿಶೇಷಾತ್ : ಎರಡು ಪರಮಾಣುಗಳ ಸಂಯೋಗ , ದ್ವಣುಕ ಉತ್ಪತ್ತಿ ಸಂಖ್ಯಾದ್ವಯದಿಂದ ಆಗುತ್ತದೆ. ಈ ದ್ವಿತ ಸಂಖ್ಯೆಯ ಅಪೇಕ್ಷಾ ಬುದ್ಧಿ ಜನ್ಯ. ಅದು ಚೇತನಾ ವ್ಯಕ್ತಿಯಿಂದ ಆಗತಕ್ಕದ್ದು. ಅವನೇ ಈಶ್ವರ.
  9. ಅದೃಷ್ಟಾತ್  : ನಮ್ಮ ಕರ್ಮಫಲಗಳಿಗೆ ಅದೃಷ್ಟವು ಕಾರಣ. ಜಡವಾದ ಅದೃಷ್ಟವನ್ನು , ಪ್ರೇರಿಸುವ ಕೆಲಸವನ್ನು ಚೇತನ ವ್ಯಕ್ತಿಯೇ ಮಾಡಬೇಕಾಗುತ್ತದೆ. ಆ ಚೇತನ ವ್ಯಕ್ತಿಯೇ ಈಶ್ವರ.(ನ್ಯಾಯ ದರ್ಶನ)
  • (ಕರ್ಮಫಲವನ್ನು ಅದೃಷ್ಟ ವಸ್ತು ಪ್ರೇರೇಪಿಸುವುದು ; ಈ ಕೆಲಸವನ್ನು ಚೇತನ-ವ್ಯಕ್ತಿಯೇ ಮಾಡಬೇಕಾಗುವುದು. ಇದು ಈ ಚೇತನ ದೇವರು. ಯೋಗ ಸೂತ್ರದಂತೆ ನಮ್ಮಲ್ಲಿರುವ , ಭೂತ,ಭವಿಷ್ಯತ್,ವರ್ತಮಾನ , ಜ್ಞಾನ ಶಕ್ತಿ , ಈಶ್ವರನಿಂದಲೇ ಬಂದಿರಬಹುದು. ಅದಕ್ಕೆ ಶ್ರತಿ ಯು ಪ್ರಮಾಣ, ಅನುಮಾನ ಮತ್ತು ಶ್ರುತಿ ಇವು ಪ್ರಮಾಣ ,)
  • ವೇದಾಂತಿಗಳು ಈಶ್ವರನನ್ನು ತಿಳಿಯಲು , ವೇದಗಳು ಮಾತ್ರಾ ಪ್ರಬಲ ಪ್ರಮಾಣವೆನ್ನುತ್ತಾರೆ , ಅದಕ್ಕೆ ಅನುಮಾನ ಪ್ರಮಾಣಗಳನ್ನು ನಿರಾಕರಿಸುವುದಿಲ್ಲ . ಆದರೆ ಶ್ರೀ ಶಂಕರರು , ಅನುಮಾನ ಪ್ರಮಾಣದಿಂದ , ಈ ಜಗತ್ತನ್ನು ಕಾರ್ಯವೆಂದು ಒಪ್ಪಿದರೂ , ಅದಕ್ಕೆ ಈಶ್ವರನು ಕಾರಣವೋ ಬೇರೆ ಕಾರಣವೋ ಎಂದು ನಿರ್ಧರಿಸುವುದು /ತೀರ್ಮಾನಿಸುವುದು ಕಷ್ಟವೆನ್ನುತ್ತಾರೆ. (ಬ್ರ,ಊ. ಭಾಷ್ಯ : ೨.೨) ಪ್ರಸಿದ್ಧ ಮೀಮಾಂಸಕರಾದ , ಕುಮಾರಿಲ ಭಟ್ಟರದೂ ಅದೇ ಅಭಿಪ್ರಾಯ.

ಈಶ್ವರಾಸ್ತಿತ್ವದ ನಿರಾಕರಣೆಯ ವಾದ ಬದಲಾಯಿಸಿ


  • ಈಶ್ವರನ ಅಸ್ತಿತ್ವವನ್ನು ನಿರಾಕರಿಸುವವರು ಕಾರ್ಯ-ಕಾರಣ ವಾದವು ಪ್ರಬಲವಾದುದೆಂದು ಅಂಗೀಕರಿಸಿದ್ದಾರೆ. ಏಕೆಂದರೆ ದೇವರು ಇದ್ದಾನೆ ಎನ್ನುವುದಕ್ಕೆ ಹೇಗೋ ಹಾಗೆ ಇಲ್ಲವೆನ್ನುವುದಕ್ಕೂ ಅದೇ ವಾದವನ್ನು ಉಪಯೋಗಿಸುತ್ತಾರೆ.
ಈಶ್ವರನ ನಿರಾಕರಣೆ ವಾದಗಳು
೧. ಕಾರ್ಯಕಾರಣವಾದದಲ್ಲಿ , ಮುಖ್ಯ ಅಂಶ ‘ಜಗತ್ತು ಒಂದು ಕಾರ್ಯ‘ (ಸೃಷ್ಟಿಸಲ್ಪಟ್ಟಿದ್ದು) ಎಂಬುದಾಗಿದೆ. ಜೈನರಲ್ಲಿ ಪ್ರಸಿದ್ಧನಾದ ಗುಣರತ್ನನು ಜಗತ್ತನ್ನು ಕಾರ್ಯವೆಂದೇ ಒಪ್ಪುವುದಿಲ್ಲ. ಏಕೆಂದರೆ ‘ಅವಯುವ‘ ಸಂಬಂಧವಾಗಿದ್ದರೆ ಮಾತ್ರಾ ಕಾರ್ಯವೆಂದು ಪರಿಗಣಿಸಬಹುದು (ಅವಯುವ=ಮೂರು ಆಯಾಮದ ವಸ್ತು /ತ್ರೀ ಡೈಮೆನ್ಶನಲ್ ಮ್ಯಾಟರ್) .ಆದರೆ ಆಕಾಶವು (ಪಂಚ ಭೂತಗಳಲ್ಲಿ ಒಂದು.) ಕಾರ್ಯವಾಗಲಾರದು ;ಎಲ್ಲಾ ವಸ್ತುಗಳಿಗೂ ಆಶ್ರಯವಾದದ್ದು . ಅಥವಾ (ವಸ್ತುಗಳು) ‘ಸಾವಯುವ‘ ವೆಂದರೆ (ಮೂಲದ್ರವ್ಯ) ಸಮವೇತ ದ್ರವ್ಯತ್ವ ಅಥವಾ ದ್ರವ್ಯದಲ್ಲಿ ದ್ರವ್ಯತ್ವ (ಎಲಿಮೆಂಟ್?)ಎಂದರೂ ಸರಿಯಾಗದು -ಮೂಲದಲ್ಲಿರುವುದು ಎಂದರೂ ಸರಿಯಾಗದು. ಬುದ್ಧಿಗೆ ಗೋಚರವೆಂದರೆ - `ಆತ್ಮ` ವು ‘ಕಾರ್ಯ‘ ವೆನ್ನಬೇಕಾಗುವುದು. ಆದ್ದರಿಂದ ಜಗತ್ತು ‘ಕಾರ್ಯ‘ ವೆಂದು ಹೇಳುವುದು ಸರಿಯಲ್ಲ.
ಜಗತ್ತಿನ ಸೃಷ್ಟಿ ಕಾರ್ಯವಲ್ಲದಿದ್ದ ಮೇಲೆ ಅದಕ್ಕೆ ಕಾರಣವೆಂದು ಈಶ್ವರನನ್ನು ಹೇಳಲುಬರುವುದಿಲ್ಲ. ಆದ್ದರಿಂದ ಈಶ್ವರನನ್ನು ಒಪ್ಪಬೇಕಾದ್ದಿಲ್ಲ.
೨.ಈಶ್ವರನು ಒಬ್ಬನೇ ಜಗತ್ತನ್ನು ಸೃಷ್ಟಿಸಿದನೇ ? ಈ ವಿಶಾಲ ಜಗತ್ತು ಒಬ್ಬನಿಂದಾಗಲಾರದು . ಮನೆ ಕಟ್ಟಲು ಅನೇಕ ಜನರಿರುವಂತೆ ಜಗತ್ ಸೃಷ್ಟಿಗೆ ಅನೇಕರು ಬೇಕಾಗುವುದು. ; ಅದೂ ಸಿದ್ಧಿಸದು (ತರ್ಕಕ್ಕೆ ಒಪ್ಪದು) ಏಕೆಂದರೆ ಅವರಲ್ಲಿ ಸದಾ ಮತಬೇಧವಿದ್ದು ಕೆಲಸ ಕೆಡುವುದು.
೩. ಸಾಂಖ್ಯ ಸೂತ್ರದಲ್ಲಿ ‘ಈಶ್ವರಾಸಿದ್ಧೇ‘ (ಈಶ್ವರನು ಇದ್ದಾನೆಂದು ಸಾಧಿಸಲು ಸಾಧ್ಯವಿಲ್ಲ), ಎಂಬ ಮಾತಿದೆ. ಅದರ ವ್ಯಾಖ್ಯಾನ ಮಾಡುತ್ತಾ ‘ಅನಿರುದ್ಧಪಂಡಿತ‘ , -ಅವನು ಶರೀರವಿರುವವನೋ ಇಲ್ಲದವನೋ ? ಶರೀರವಿದೆಯೆಂದರೆ ಅವನಿಗೆ ಮಿತಿಗಳಿವೆ. ಶರೀರ ಹೇಗುಂಟಾಯಿತು ಎಂಬ ಪ್ರಶ್ನೆ ಏಳುವುದು . ಇಲ್ಲವೆಂದರೆ ಅವನಿಗೆ (ದೇವನಿಗೆ) ಇಚ್ಛೆಯೂ ಉಂಟಾಗದು. ಎಂದರೆ ಜಗತ್ತಿನ ಸೃಷ್ಟಿಯೂ ಅವನಿಂದಾಗದು , ಇದು ಪ್ರತಿವಾದ.
೪.ಈಶ್ವರನು ಸರ್ವವ್ಯಾಪಿಯಾಗಿದ್ದರೆ , ಬೇರೆಯವರಿಗೆ ಸೃಷ್ಟಿಸಲು ಎನೂ ಇಲ್ಲವೆಂದಾಗುವುದು. ಎಲ್ಲಾ ಅವನೇ, ಆದ್ದರಿಂದ ಅದು ಸರಿಯಲ್ಲ. ಹಾಗಿದ್ದರೆ ದೇವರು ನರಕದಲ್ಲೂ ಇದ್ದಾನೆ ಎಂದಂತೆ ಆಯಿತು. ಆಗ ಅದು ನರಕವೇ ಆಗದು . ನರಕದಲ್ಲಿ ಇಲ್ಲವೆಂದರೆ ಅವನು ಸರ್ವವ್ಯಾಪಿಯಾಗಲಾರ. ಆದ್ದರಿಂದ ದೇವರ ಕಲ್ಪನೆಯೇ ಸರಿಯಲ್ಲ.
೫. ಈಶ್ವರನು ಸ್ವತಂತ್ರನೆಂದರೆ ಅವನ ಸೃಷ್ಟಿಯಲ್ಲಿರುವವರೆಲ್ಲಾ ಸುಖಿಗಳಾಗಿರಬೇಕಿತ್ತು. ದುಃಖವನ್ನೇ ಸೃಷ್ಟಿಸುತ್ತಿರಲಿಲ್ಲ. ಸುಖ ದುಃಖಗಳು ಕರ್ಮಾಧೀನವೆಂದರೆ ಈಶ್ವರನಿಗೆ ಸ್ವತಂತ್ರ ಶಕ್ತಿ ಇಲ್ಲ ಎಂದಾಗುವುದು . ಕರ್ಮವೇ ಪ್ರಬಲವಾಗುವುದು . ಆದ್ದರಿಂದ ಸರ್ವಶಕ್ತ ದೇವರಿದ್ದಾನೆ ಎಂದು ಹೇಳುವುದು ಸರಯಲ್ಲ .
೬. ಈಶ್ವರನು ಜಗತ್ತನ್ನು ಸೃಷ್ಟಿಸಿದ್ದಾನೆಂದರೆ -ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆ ? -ಎಂದು ವಿವರಿಸುವುದು ಕಷ್ಟ. ಅವನಿಗೆ ಆಸೆಗಳಿಲ್ಲ . ‘ಪೂರ್ಣಕಾಮನಾದ‘ ,(ಸಂತೃಪ್ತ ) ಅವನಿಗೆ ಸ್ವಾರ್ಥವೇನು? ಇಚ್ಛೆ ಏಕೆ ? ಅಂಥ ಅಪೇಕ್ಷೆ ಇದೆ ಎಂದಾದರೆ ಅವನಲ್ಲಿ ಏನೋ ಕೊರತೆ ಇದೆ ಎಂದಾಗುತ್ತದೆ . ಹಾಗಾಗಿ ಈಶ್ವರನನ್ನು (ಅಸ್ತಿತ್ವವನ್ನು) ನಾಸ್ತಿಕರು , ಮೀಮಾಂಸಕರು ಒಪ್ಪುವುದಿಲ್ಲ.
೭. ವೇದಾಂತಿಗಳು ಜಗತ್ತನ್ನು ಈಶ್ವರನ ಲೀಲೆ ಎನ್ನುತ್ತಾರೆ . ಆದರೆ ನಿರೀಶ್ವರವಾದಿಗಳು , ಅದನ್ನೊಪ್ಪುವುದಿಲ್ಲ. ತನ್ನ ಲೀಲಾ ವಿನೋದಕ್ಕಾಗಿ ದೇವನು , ಜೀವಿಗಳನ್ನು ದುಃಖ , ಕಷ್ಟ , ಕೋಟಲೆಗೆ ನೂಕಿ ತಾನು ಆನಂದ ಪಡುವುದಾದರೆ. ಅವನು ಕ್ರೂರಿಯೂ ಕರಣಾಹೀನನೂ ಆಗುತ್ತಾನೆ . ಆ ಬಗೆಯ ದೇವನನ್ನು ಒಪ್ಪಲು ಆಗುವುದಿಲ್ಲ.
೮. ಪ್ರಾಚೀನ ಮೀಮಾಂಸಕರು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳು ಕಟ್ಟು ಕಥೆ ಎನ್ನುತ್ತಾರೆ. ಜಗತ್ತು ತಾನಾಗಿಯೇ ಯಾವಾಗಲೂ ಇದೆ ಎನ್ನುತ್ತಾರೆ ಅದಕ್ಕೆ (ಸೃಷ್ಟಿಸಲು) ಈಶ್ವರನ ಅಗತ್ಯವಿಲ್ಲ ಎನ್ನುವುದು ಅವರ ಮತ. ವೇದಗಳು ಅನಾದಿಯಾದವು -ತಂತಾನೆ ಪ್ರಕಟವಾದವು ; ಅವು ನಿತ್ಯ ; ಕರ್ಮಫಲಗಳು ತನ್ನಿಂದ ತಾನೇ ಪ್ರವರ್ತಿಸುತ್ತವೆ . ಅದಕ್ಕೆ ಯಜಮಾನ-ಈಶ್ವರ ಬೇಕಿಲ್ಲ ಎಂಬುದು ಅವರ ಮತ . ಅವರು ದೇವರನ್ನು ಒಪ್ಪದಿದ್ದರೂ ವೇದಗಳನ್ನು ಒಪ್ಪುತ್ತಾರೆ.
೯ , ಅಂತ್ಯದಲ್ಲಿ ತಾರ್ಕಿಕರೆಲ್ಲಾ ಮೂಲೆಗೆ ಬಿದ್ದು , ಈಶ್ವರನ ಅಸ್ತಿತ್ವವಾದ ಗೆದ್ದು , ಧಾರ್ಮಿಕ ವಿಧಿಗಳ ಅವಶ್ಯಕತೆ ಪ್ರಬಲವಾಗಿ ಜಗತ್ತಿನಲ್ಲಿ ಬೇರೂರಿದೆ ಎನ್ನಬಹುದು .
೧೦. ಜೀವ-ಜಗತ್ತಿಗೆ ಕಾರಣವಾದ ಚೇತನ ಮತ್ತು ಮನಸ್ಸುಗಳಿಗೆ ಸಕಾರಣವನ್ನ ಹೇಳಲು ನಿರೀಶ್ವರವಾದಿಗಳಿಂದಲೂ ಸಾಧ್ಯವಿಲ್ಲ.
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು

ತಾತ್ಪರ್ಯ -ಉಪಸಂಹಾರ ಬದಲಾಯಿಸಿ

ಒಟ್ಟು ನಾಲ್ಕು ಬಗೆಯ ಈಶ್ವರನಿಗೆ ಸಂಬಂಧಿಸಿದ ವಾದಗಳು ಕಂಡುಬರುತ್ತವೆ :
  1. ಈಶ್ವರನಿಲ್ಲ ಜಗತ್ತು ಮಾತ್ರವಿದೆ (ಶೂನ್ಯ ವಾದ ) ;
  2. ಈಶ್ವರನು ಜಗತ್ತಿಗೆ ಕಾರಣ ಅವನು ಸ್ವತಂತ್ರ ಜಗತ್ತು ಅವನಿಗೆ ಅಧೀನ ;
  3. ಈಶ್ವರನು ಜಗತ್ತಿಗೆ ಪ್ರಭು ; ಆದರೂ ಅವನು ಸೃಷ್ಟಿ -ಸ್ಥಿತಿ-ಲಯಗಳಿಗೆ ಕಾರಣನಲ್ಲ ಕರ್ತೃತ್ವವಿಲ್ಲ. ;
  4. ಈಶ್ವರ ಮತ್ತು ಚಿತ್ ಶಕ್ತಿ ಎರಡೂ ಒಂದೇ
ವಿಚಾರ ವಾದಿಗಳು ಈಶ್ವರನನ್ನು ಒಪ್ಪದೆ , ಕುಟುಂಬದ ಯಜಮಾನನ ಕಲ್ಪನೆಯಿಂದ ಈಶ್ವರ ಕಲ್ಪನೆ ಉಂಟಾಗಿರಬಹುದೆನ್ನುವರು . ಆಪತ್ತಿನಕಾಲದಲ್ಲಿ ರಕ್ಷಣೆಗೆ ಮೊರೆ ಇಡಲು ಒಂದು ಅದೃಷ್ಟ ಶಕ್ತಿಬೇಕಾಗುವುದು ; ಅದು ಮಾನವ ಮನಸ್ಸಿನ ಸ್ವಭಾವ . ಆದ್ದರಿಂದ ಸರ್ವಜ್ಞನೂ, ಸರ್ವಶಕ್ತನೂ ಬೇಕೆಂಬ ಬಯಕೆ ಈಶ್ವರ ಕಲ್ಪನೆಗೆ ಕಾರಣವೆನ್ನವವರೂ ಇದ್ದಾರೆ. ಕಡು ದುಃಖಿತನಿಗೆ - ಪರಿಹಾರವಿಲ್ಲದ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದವನಿಗೆ ದೇವರೇ ಗತಿಯಲ್ಲವೇ !! - ಎಂಬುದು ಒಂದು ಅಭಿಪ್ರಾಯ . : ಓಂ ತತ್ಸತ್ :

[೧] [೨]

ನೋಡಿ ಬದಲಾಯಿಸಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ; ಜೈನ ಧರ್ಮ - ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ವೀರಶೈವ; ಬಸವಣ್ಣ; ಭಾರತೀಯ ತತ್ವಶಾಸ್ತ್ರ ಸಮೀಕ್ಷೆ; ಭಗವದ್ಗೀತಾ ತಾತ್ಪರ್ಯ ; ಕರ್ಮ ಸಿದ್ಧಾಂತ ; ವೇದ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ

ಆಧಾರ ಬದಲಾಯಿಸಿ

  1. ಭಾರತೀಯ ತತ್ತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
  2. ಮಂಕುತಿಮ್ಮನ ಕಗ್ಗ ಪೀಠಿಕೆ ಪದ್ಯಗಳು: ಡಿ.ವಿ.ಜಿ.