ಪಶ್ಚಿಮ ಬಂಗಾಳ

ಭಾರತದ ರಾಜ್ಯ
(ಪಶ್ಚಿಮ ಬಂಗಾಲ ಇಂದ ಪುನರ್ನಿರ್ದೇಶಿತ)

ಪಶ್ಚಿಮ ಬಂಗಾಳ ಪೂರ್ವ ಭಾರತದ ರಾಜ್ಯಗಳಲ್ಲೊಂದು. ಪಶ್ಚಿಮ ಬಂಗಾಲ - ಭಾರತ ಗಣರಾಜ್ಯದ ಒಂದು ರಾಜ್ಯ. ದೇಶದ ಈಶಾನ್ಯ ಭಾಗದಲ್ಲಿ, ಉ,ಅ. 21( 38'-27(10' ಮತ್ತು ಪೂ. ರೇ. 85(50'-89(50' ನಡುವೆ ಇದೆ. ಕರ್ಕಾಟಕದ ಸಂಕ್ರಾಂತಿ ವೃತ್ತ ಈ ರಾಜ್ಯದ ನಡುವೆ ಹಾದುಹೋಗುತ್ತದೆ. ರಾಜ್ಯದ ಉತ್ತರದಲ್ಲಿ ಸಿಕ್ಕಿಂ ಮತ್ತು ಭೂತಾನ್, ದಕ್ಷಿಣದಲ್ಲಿ ಬಂಗಾಲ ಕೊಲ್ಲಿ, ಪೂರ್ವದಲ್ಲಿ ಅಸ್ಸಾಂ ಮತ್ತು ಬಾಂಗ್ಲಾ ದೇಶ, ಪಶ್ಚಿಮದಲ್ಲಿ ಒರಿಸ್ಸ, ಬಿಹಾರ ಮತ್ತು ನೇಪಾಲ ಇವೆ ಇದರ ವಿಸ್ತೀರ್ಣ 88,752 ಚದರ ಕಿಮೀ. ಜನ ಸಂಖ್ಯೆ 8,02,21,171 (2001). ಜನಸಂಖ್ಯೆಯಲ್ಲಿ ಈ ರಾಜ್ಯದ್ದು ಭಾರತದ ರಾಜ್ಯಗಳ ಪೈಕಿ ನಾಲ್ಕನೆಯ ಸ್ಥಾನ, ರಾಜಧಾನಿ ಕೊಲ್ಕತ್ತ.

ಪಶ್ಚಿಮ ಬಂಗಾಳ
পশ্চিমবঙ্গ
Map of India with the location of ಪಶ್ಚಿಮ ಬಂಗಾಳ পশ্চিমবঙ্গ highlighted.
Map of India with the location of ಪಶ್ಚಿಮ ಬಂಗಾಳ
পশ্চিমবঙ্গ highlighted.
ರಾಜಧಾನಿ
 - ಸ್ಥಾನ
ಕೊಲ್ಕಾತಾ
 - 22.56° N 88.36° E
ಅತಿ ದೊಡ್ಡ ನಗರ ಕಲ್ಕತ್ತಾ
ಜನಸಂಖ್ಯೆ (2004)
 - ಸಾಂದ್ರತೆ
80,221,171 (14ನೇ)
 - 904/km²
ವಿಸ್ತೀರ್ಣ
 - ಜಿಲ್ಲೆಗಳು
88,752 km² (8th)
 - 19
ಸಮಯ ವಲಯ IST (UTC+5:30)
ಸ್ಥಾಪನೆ
 - [[ ಪಶ್ಚಿಮ ಬಂಗಾಳ
পশ্চিমবঙ্গ ರಾಜ್ಯದ ರಾಜ್ಯಪಾಲರು|ರಾಜ್ಯಪಾಲ]]
 - [[ಪಶ್ಚಿಮ ಬಂಗಾಳ
পশ্চিমবঙ্গ ರಾಜ್ಯದ ಮುಖ್ಯಮಂತ್ರಿಗಳು|ಮುಖ್ಯ ಮಂತ್ರಿ]]
 - ಶಾಸನಸಭೆ (ಸ್ಥಾನಗಳು)
ಮೇ ೧,೧೯೬೦
 - ಗೋಪಾಲಕೃಷ್ಣ ಗಾಂಧಿ
 - ಬುದ್ಧದೇಬ್ ಭಟ್ಟಾಚಾರ್ಯ
 - Unicameral (294)
ಅಧಿಕೃತ ಭಾಷೆ(ಗಳು) ಬಂಗಾಳಿ
Abbreviation (ISO) IN-WB
ಅಂತರ್ಜಾಲ ತಾಣ: www.wbgov.com

1947 ರಲ್ಲಿ ಭಾರತ ವಿಭಜನೆಯಾದಾಗ ಆಗಿನ ಬಂಗಾಲ ಪ್ರಾಂತ್ಯವನ್ನು ಪೂರ್ವ ಮತ್ತು ಪಶ್ಚಿಮ ಬಂಗಾಲಗಳಾಗಿ ವಿಂಗಡಿಸಲಾಯಿತು. ಪೂರ್ವ ಬಂಗಾಲಪೂರ್ವ ಪಾಕಿಸ್ತಾನವಾಯಿತು. ಪಶ್ಚಿಮ ಬಂಗಾಲ ಭಾರತದಲ್ಲಿ ಉಳಿಯಿತು. ಈ ರಾಜ್ಯವನ್ನು ವಿಚಿತ್ರವಾದ ಆಕಾರ. ಇದರ ಅಗಲ ಒಂದೆಡೆಯಲ್ಲಿ 320 ಕಿಮೀ. ಇದ್ದರೆ ಇನ್ನೊಂದಡೆಯಲ್ಲಿ ಕೇವಲ 16 ಕಿಮೀ. ಭಾರತದ ರಕ್ಷಣಾ ದೃಷ್ಟಿಯಿಂದ ಇದರದು ಆಯಕಟ್ಟಿನ ಸ್ಥಾನ. ಬಾಂಗ್ಲಾದೇಶದೊಂದಿಗೆ ಸುಮಾರು 2,160 ಕಿಮೀ. ಉದ್ದದ ಗಡಿ ಇದಕ್ಕಿದೆ.

ಮೇಲ್ಮೈ ಲಕ್ಷಣ ಬದಲಾಯಿಸಿ

 
Many areas remain flooded during the heavy rains brought by monsoon
 
National Highway 31A winds along the banks of the Teesta River near Kalimpong, in the Darjeeling Himalayan hill region.

ಪಶ್ಚಿಮ ಬಂಗಾಲ ಬಹುತೇಕ ಮೆಕ್ಕಲು ಬಯಲು ಪ್ರದೇಶ. ಇದರ ಬಹುಭಾಗ ಗಂಗಾನದಿಯ ಮುಖಜ ಭೂಮಿ. ಒಟ್ಟು ಪ್ರದೇಶ ಶೇಕಡ ಒಂದು ಭಾಗ ಮಾತ್ರ ಪರ್ವತ ಪ್ರದೇಶ ಈ ರಾಜ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು: 1 ಉತ್ತರದಲ್ಲಿರುವ ಹಿಮಾಲಯ ಮತ್ತು ಅದರ ತಪ್ಪಲಿನ ಪ್ರದೇಶ, 2 ದಕ್ಷಿಣದ ಮೆಕ್ಕಲು ಮಣ್ಣಿನ ಬಯಲು, ರಾಜ್ಯದ ಉತ್ತರ ಗಡಿಯಲ್ಲಿ ಜಗತ್ತಿ ಅತ್ಯಂತ ಎತ್ತರದ ಹಿಮಾಲಯ ಪರ್ವತ ಶ್ರೇಣಿಯ ಏರು ಇದೆ. ಈ ಸೀಮೆ ಡಾರ್ಜಿಲಿಂಗ್ ಜಿಲ್ಲೆಯನ್ನು ಒಳಗೊಳ್ಳುತ್ತದೆ. ಈ ಜಿಲ್ಲೆ ಸಮುದ್ರಮಟ್ಟದಿಂದ ೩,೬೫೮ಮೀ. ಎತ್ತರದಲ್ಲಿದೆ. ಕಾಂಚನಗಂಗ ಶಿಖರ ಇದಕ್ಕೆ ಸಮೀಪದಲ್ಲಿದೆ. ಮೋಡವಿಲ್ಲದ ದಿನಗಳಲ್ಲಿ ಗೌರೀಶಂಕರ ಶಿಖರ ಇಲ್ಲಿಗೆ ಕಾಣುತ್ತದೆ.

ಹಿಮಾಲಯ ತಪ್ಪಲಿನ ಹರವು ಜಲಪೈಗುರಿ ಮತ್ತು ಕೂಚ್‍ಬಿಹಾರ್ ಜಿಲ್ಲೆಗಳಲ್ಲಿ ಹಬ್ಬಿದೆ. ತಗ್ಗುನೆಲವಿರುವ ಈ ಪ್ರದೇಶವನ್ನು ತರೈ ಎನ್ನುತ್ತಾರೆ. ಒಂದು ಕಾಲದಲ್ಲಿ ಇಲ್ಲಿ ಮಲೇರಿಯ, ಕಾಲಾ ಆಚಾರ್ ರೋಗಗಳು ಹಬ್ಬಿದ್ದು, ಇದು ಅನಾರೋಗ್ಯಕರ ಪ್ರದೇಶವಾಗಿತ್ತು. ಈಗ ಇಲ್ಲಿಯ ಜಲೋತ್ಸಾರಣ ವ್ಯವಸ್ಥೆಯಿಂದಾಗಿ ಅನಾರೋಗ್ಯದ ಪರಿಸ್ಥಿತಿ ತಪ್ಪಿದೆಯಲ್ಲದೆ ನೆಲವನ್ನು ಸಾಗುವಳಿಗೆ ಒಳಪಡಿಸಲಾಗಿದೆ. ಭಾರತದ ಕೆಲವು ಉತ್ಕೃಷ್ಟ ಚಹ ತೋಟಗಳು ಇಲ್ಲಿವೆ. ಈ ಭಾಗದ ನದಿಗಳು ಮಳೆಗಾಲದಲ್ಲಿ ತುಂಬಿ ರಭಸವಾಗಿ ಹರಿಯುತ್ತವೆ. ತಿಷ್ಟ, ಟೊರ್ಸ್, ಜಾಲ್ದಾಕ್, ರಣಜಿತ್ ಮೊದಲಾದ ನದಿಗಳು ಬೆಟ್ಟದ ಕೊರಕಲುಗಳಿಂದ ಇಳಿದು ಬರುವಾಗ ಕಲ್ಲು, ಮರಳು ಮತ್ತು ಮೆಕ್ಕಲನ್ನು ಹೆಚ್ಚಾಗಿ ತಂದು ಹರಡುತ್ತವೆ.

ವಿಶಾಲವಾದ ಮೆಕ್ಕಲು ಬಯಲು ಉತ್ತರದ ಜಲಪೈಗುರಿ ಮತ್ತು ಸಿಲಗುರಿಯಿಂದ ಹಿಡಿದು ದಕ್ಷಿಣದ ಸುಂದರಬನ ಖಾರಿಯ ವರೆಗೆ ಹರಡಿಕೊಂಡಿದೆ. ಮಾಲ್ಡಾ ಜಿಲ್ಲೆಯನ್ನು ಒಳಗೊಳ್ಳುವ ಮಹಾನದಿ ಬಯಲು ಅನೇಕ ಸಣ್ಣ ತೊರೆಗಳಿಂದ ಕೂಡಿದ ಎತ್ತರದ ಮೆಕ್ಕಲು ಪ್ರದೇಶ, ಬೀರ್‍ಭೂಮ್, ಬದ್ರ್ವಾನ್, ಬಂಕುರ, ಮಿಡ್ನಾಪುರ ಮತ್ತು ಪುರುಲಿಯ ಜಿಲ್ಲೆಗಳನ್ನು ಒಳಗೊಳ್ಳುವ ಪ್ರಸ್ಥಭೂಮಿಯ ಅಂಚುನೆಲ ಅಲ್ಲಲ್ಲಿ ಗುಡ್ಡಬೆಟ್ಟಗಳಿಂದ ಕೂಡಿರುವ, ವಿರಳವಾದ ಕಾಡುಗಳನ್ನುಳ್ಳ ಕೆಂಪು ಮಣ್ಣಿನ ಪ್ರದೇಶ, ಗಂಗಾ ನದಿಯ ದಕ್ಷಿಣಕ್ಕೆ ಇರುವ ಬಯಲು ಭಾಗೀರಥಿ ಹೂಗ್ಲಿ ನದಿಯಿಂದಾಗಿ ಇಬ್ಭಾಗವಾಗಿದೆ. ಆಗ್ನೇಯ ಬಯಲು ದಾಮೋದರರ ಮೊದಲಾದ ನದಿಗಳ ಪ್ರವಾಹ ತಂದ ಮೆಕ್ಕಲುಮಣ್ಣಿನಿಂದ ಉಂಟಾದ್ದು, ಅರಣ್ಯನಾಶ, ಸಡಿಲಮಣ್ಣು ಮೊದಲಾದ ಕಾರಣಗಳಿಂದಾಗಿ ಮಣ್ಣಿನ ಸವೆತ ಉಂಟಾಗಿ, ನದಿಗಳಲ್ಲಿ ನೀರು ಅಪಾರವಾಗಿ ಹರಿದು ಸಾಗರದ ಪಾಲಾಗುತ್ತಿದೆ. ನೈಋತ್ಯ ಬಯಲು ಅಸಂಖ್ಯಾತ ಸರೋವರಗಳಿಂದಲೂ ಜೌಗು ಪ್ರದೇಶಗಳಿಂದಲೂ ಕೂಡಿದೆ. ಇನ್ನೂ ದಕ್ಷಿಣಕ್ಕೆ ಸುಂದರ ಬನವೆಂದು ಹೆಸರಾದ ವೈವಿಧ್ಯಪೂರ್ಣ ಜಲ-ಭೂಸಂಕೀರ್ಣವಿದೆ. ಕಾಂತಿ ಕರಾವಳಿಯಲ್ಲಿ ಮರಳುರಾಶಿ ಹಾಗೂ ಉಪ್ಪು ಮಣ್ಣಿನ ಜೌಗು ನೆಲಗಳಿವೆ. ವ್ಯಾಪಕವಾದ ಭತ್ತದ ಗದ್ದೆಗಳಿಂದಲೂ ಮಾವು ತೆಂಗು ಬಾಳೆ ತೋಪುಗಳಿಂದಲೂ ತುಂಬಿರುವ ದಕ್ಷಿಣದಲ್ಲಿ ದಟ್ಟ ಜನಸಂದಣಿ ಇದೆ. ಅನೇಕ ಪ್ರಮುಖ ನದಿಗಳ ಪ್ರಭಾವದಿಂದಾಗಿ ದಕ್ಷಿಣದ ಮೆಕ್ಕಲು ಬಯಲು ಉಂಟಾಗಿದೆ. ನದಿಗಳಲ್ಲಿ ಮುಖ್ಯವಾದವೆಂದರೆ ಭಾಗೀರಥಿ ಹಾಗೂ ಅದರ ಉಪನದಿಗಳಾದ ಮಯೂರಾಕ್ಷಿ, ದಾಮೋದರ, ಕಂಗ್ರಾಬತಿ ಮತ್ತು ರೂಪ ನಾರಾಯಣ್, ಸಾಗರಕ್ಕೆ ಸೇರಲಿರುವ ಭಾಗೀರಥಿಯ ಕೊನೆಯ ಭಾಗವನ್ನು ಹೂಗ್ಲಿ ಎನ್ನುತ್ತಾರೆ, ಇದು ಗಂಗಾನದಿಯ ಶಾಖೆಯೇ, ಹೂಗ್ಲಿ ನದಿಯಿಂದ ಕಲ್ಕತ್ತಕ್ಕೆ ಸಾಗರಸಂಪರ್ಕ ಏರ್ಪಟ್ಟಿದೆ.

ಮಣ್ಣು ಬದಲಾಯಿಸಿ

1965ರಲ್ಲಿ ರಾಜ್ಯ ಸರ್ಕಾರ ನಡೆಸಿದ ಸರ್ವೇಕ್ಷಣೆಯಲ್ಲಿ ಇಲ್ಲಿಯ ಮಣ್ಣನ್ನು ಏಳು ವರ್ಗಗಳಾಗಿ ವಿಂಗಡಿಸಲಾಗಿದೆ : 1 ಕೆಂಪು ಜೇಡುಮಣ್ಣು 14,70,000 ಎಕರೆ ; 4 ತರೈ ಮಣ್ಣು 16,20,000 ಎಕರೆ ; ಈ ಮಣ್ಣು ಪಶ್ಚಿಮ ಬಂಗಾಲಕ್ಕೆ ವಿಶಿಷ್ಟವಾದ್ದು : 5 ಕರಾವಳಿಯ ಉಪ್ಪು ಮಣ್ಣು 28,50,000 ಎಕರೆ ; 6 ಮರಳುಕಲ್ಲಿನ ಮಣ್ಣು 32,80,000 ಎಕರೆ ; 7 ಕಂದು ಕಾಡು ಮಣ್ಣು 4,80,000 ಎಕರೆ.

ವಾಯುಗುಣ ಬದಲಾಯಿಸಿ

ಉತ್ತರದ ಎತ್ತರ ಪ್ರದೇಶಗಳನ್ನು ಬಿಟ್ಟರೆ, ಪಶ್ಚಿಮ ಬಂಗಾಲದಲ್ಲಿ ಮೂಲಭೂತವಾಗಿ ಉಷ್ಣವಲಯದ ವಾಯುಗುಣವಿದೆ. ಇಲ್ಲಿ ಹೆಚ್ಚು ಆದ್ರ್ರತೆ ಹಾಗೂ ತಕ್ಕಮಟ್ಟಿಗೆ ಅಧಿಕ ಉಷ್ಣತೆ ಇರುತ್ತದೆ.

೧. ಬೇಸಗೆ (ಮಾರ್ಚಿಯಿಂದ ಜೂನ್ ಆರಂಭದ ವರೆಗೆ); ೨. ಮಳೆಗಾಲ (ಜೂನ್ ಮಧ್ಯದಿಂದ ಸೆಪ್ಟಂಬರ್ ವರೆಗೆ); ೩. ಚಳಿಗಾಲ (ಅಕ್ಟೋಬರಿನಿಂದ ಫೆಬ್ರವರಿಯ ವರೆಗೆ); ಉಷ್ಣತೆಯಲ್ಲಿ ಅತಿಯಾದ ಏರಿಳಿತಗಳಿರುವುದಿಲ್ಲ. ಮೇ-ಜೂನ್ ತಿಂಗಳುಗಳಲ್ಲಿ ತೀವ್ರ ಧಗೆ ಇರುತ್ತದೆ; ನವೆಂಬರ್ ಡಿಸೆಂಬರ್‍ಗಳಲ್ಲಿ ಚಳಿ, ಜೂನ್‍ನಲ್ಲಿ ಮಳೆಗಾಲ ಆರಂಭವಾಗುತ್ತದೆ. ಆಗ್ನೇಯ ಮಾನ್ಸೂನ್ ಮಾರುತಗಳು ಮಳೆ ತರುತ್ತವೆ. ಬಂಗಾಲ ಕೊಲ್ಲಿಯ ಸಾಗರಪ್ರವಾಹ ಮತ್ತು ಅವನಮನಗಳ (ಡಿಪ್ರೆಷನ್) ಸಂಭಾವ್ಯತೆ ಹಾಗೂ ಅವುಗಳ ಚಲನೆಗಳನ್ನು ಮಳೆತೀವ್ರತೆ ಅವಲಂಬಿಸುತ್ತದೆ. ಪಶ್ಚಿಮ ಬಂಗಾಲ ಹೆಚ್ಚು ಮಳೆ ಬೀಳುವ ಪ್ರದೇಶ. ರಾಜ್ಯದ ಸರಾಸರಿ ಮಳೆ ಸುಮಾರು ೧೭೫ ಸೆಂ.ಮೀ. ಇದರಲ್ಲಿ ೧೨೫ ಸೆಂ.ಮೀ. ಗಳಷ್ಟು ಮಳೆ ಬೀಳುವುದು ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ, ದಕ್ಷಿಣದಲ್ಲಿ ೧೨೦ ಸೆಂ.ಮೀ.ಗಳಿಂದ ಹಿಡಿದು ಉತ್ತರದಲ್ಲಿ ೪೦೦ ಸೆಂಮೀ.ಗಳ ವರೆಗೂ ಮಳೆ ವ್ಯತ್ಯಾಸವಾಗುತ್ತದೆ. ಉತ್ತರದ ಜಿಲ್ಲೆಗಳಲ್ಲಿ ೩೦೦ ಸೆಂ.ಮೀ. ಗಳಿಗೂ ಹೆಚ್ಚು ಮಳೆಯಾಗುತ್ತದೆ. ನದೀ ಬಯಲು, ಸುಂದರಬನ, ಕಾಂತಿ ಕರಾವಳಿ-ಇಲ್ಲಿ ಸುಮಾರು ೨೦೦ ಸೆಂ.ಮೀ. ಮಿಡ್ನಾಪುರ, ಹೌರ, ಹೂಗ್ಲಿ, ನದಿಯ ಜಿಲ್ಲೆಗಳಲ್ಲಿ ೧೪ರಿಂದ ೧೬೦ ಸೆಂ.ಮೀ. ಮಳೆಯಾಗುತ್ತದೆ. ಅತ್ಯಂತ ಕಡಿಮೆ ಮಳೆ ಬೀಳುವ ಜಿಲ್ಲೆಯಾದ ಬಂಕುರದಲ್ಲಿ ಬೀಳುವ ಮಳೆ ಸುಮಾರು ೧೧೮ ಸೆಂ.ಮೀ. ಆಗಿದೆ.

ಸಸ್ಯಪ್ರಾಣಿ ಜೀವನ ಬದಲಾಯಿಸಿ

Sal trees in the Arabari forest in West Midnapur.

ಪಶ್ಚಿಮ ಬಂಗಾಲದಲ್ಲಿ ವಾಯುಗುಣ ಮತ್ತು ಮಣ್ಣಿಗೆ ಅನುಗುಣವಾದ ಸಸ್ಯವರ್ಗವಿದೆ. ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡ ೧೩.೪ ರಷ್ಟು ನೆಲ ಅರಣ್ಯಾವೃತವಾಗಿದೆ. ಜನಸಾಂದ್ರತೆ ಹೆಚ್ಚುತ್ತಿರುವುದರಿಂದ ಹೆಚ್ಚು ಹೆಚ್ಚು ಭೂಮಿಯನ್ನು ಸಾಗುವಳಿಗೆ ತರಲಾಗುತ್ತಿದೆ. ಇದರಿಂದ ಪಶ್ಚಿಮ ಬಂಗಾಲದ ನೈಸರ್ಗಿಕ ಸಸ್ಯಸಂಪತ್ತು ನಶಿಸುತ್ತಿದೆ. ಸಾಮಾನ್ಯವಾಗಿ ಇಲ್ಲಿ ಮೂರು ಬಗೆಯ ಅರಣ್ಯಗಳನ್ನು ಗುರುತಿಸಬಹುದು : ೧. ಪರ್ವತಪ್ರದೇಶದ ಸಮಶೀತೋಷ್ಣ ಕಾಡು, ೨. ಪರ್ವತ ತಪ್ಪಲಿನ ಪರ್ಣಪಾತಿ ಕಾಡು, ೩. ಸುಂದರಬನದ ಉಷ್ಣವಲಯ ಕಾಡು, ಉತ್ತರದಲ್ಲಿ ಪರ್ವತ ಇಳಿಜಾರುಗಳಲ್ಲಿ ಚಹ ತೋಟಗಳು ಹಾಗೂ ದೇವದಾರು ಅರಣ್ಯಗಳು ಹಬ್ಬಿಕೊಂಡಿವೆ. ತಪ್ಪಲು ಪ್ರದೇಶದ ವಿರಳ ಕಾಡುಗಳಲ್ಲಿ ಸಾಲವೃಕ್ಷ, ಮಾಹುವ, ಪಾರಾಶ, ಸಂಪಿಗೆ, ಬೀಟೆ ಮುಂತಾದ ಮರಗಳನ್ನು ಕಾಣಬಹುದು. ಬಯಲಿನ ಕಾಡುಗಳಲ್ಲಿ ಬೆಲೆಬಾಳುವ ಮರಮುಟ್ಟು ನೀಡುವ ವೃಕ್ಷಗಳಿವೆ. ಬೊಂಬು ಮತ್ತು ನೀಳ ಹುಲ್ಲು ವಿಪುಲವಾಗಿ ಬೆಳೆಯುತ್ತವೆ. ಕಾಂತಿ ಕರಾವಳಿಯಲ್ಲಿ ಸಮುದ್ರದ ಕೊರೆತವನ್ನು ತಪ್ಪಿಸಲು ಸರ್ವೆಮರಗಳ ಕಾಡನ್ನು ಬೆಳೆಸಲಾಗುತ್ತಿದೆ. ಶೀಘ್ರವಾಗಿ ಬೆಳೆಯುವ ಜಪಾನೀ ಮರ ಕುಡ್ಜುವನ್ನು ನೆಡಲಾಗುತ್ತಿದೆ. ಈ ಭಾಗದ ನೈಸರ್ಗಿಕ ಸಸ್ಯವೆಂದರೆ ಕೆಯಾ ಪೊದೆ. ಇದರ ಸುವಾಸನೆಯ ಹೂಗಳನ್ನು ಸಂಗ್ರಹಿಸಿ ಪ್ರಸಿದ್ಧ ಕೆವ್ರಾ ಸುಗಂಧವನ್ನು ಉತ್ಪಾದಿಸುತ್ತಾರೆ, ಸಾಲದವೃಕ್ಷಗಳು ಮರಳು ಮಣ್ಣಿನಲ್ಲಿ ಬೆಳೆಯುತ್ತವೆ. ಇತರ ವೃಕ್ಷಗಳು ಜೌಗುನೆಲದಲ್ಲಿ ಹೇರಳವಾಗಿ ಬೆಳೆಯುತ್ತವೆ. ಮಾವು, ಹಲಸು ಹಾಗೂ ಬಾಳೆ ಪಶ್ಚಿಮ ಬಂಗಾಲದ ಪ್ರಮುಖ ಫಲವೃಕ್ಷಗಳು.

ಉತ್ತರದ ಜಿಲ್ಲೆಗಳ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಕಾಡೆಮ್ಮೆ, ನೀರಾನೆ ಮತ್ತು ಇತರ ಹಲವು ಪ್ರಾಣಿಗಳಿವೆ. ಉರಗ ಹಾಗೂ ಪಕ್ಷಿಗಳ ವಿವಿಧ ಜಾತಿಗಳು ಇಲ್ಲಿ ಇವೆ. ಜಾಲ್ದಾಕಾ ನದಿ ಕಣಿವೆಯಲ್ಲಿ ಒಂದು ಪ್ರಾಣಿನಾಮವಿದೆ.

ಬಂಗಾಲದ ರಾಜ್ಯ ಲಾಂಛನಗಳು
ರಾಜ್ಯ ಪ್ರಾಣಿ Fishing cat[೧]  
ರಾಜ್ಯ ಪಕ್ಷಿ White-throated kingfisher  
ರಾಜ್ಯ ವೃಕ್ಷ Devil tree[೧]  
ರಾಜ್ಯ ಪುಷ್ಪ Night-flowering jasmine[೧]  

ಜನ ಬದಲಾಯಿಸಿ

ಪಶ್ಚಿಮ ಬಂಗಾಲದ ಜನಸಂಖ್ಯೆಯಾದ 9,13,47,736 .(2011) ಇಲ್ಲಿಯ ಜನಸಂಖ್ಯೆ 38,074 ಹಳ್ಳಿಗಳಲ್ಲಿ ಮತ್ತು 223 ಪಟ್ಟಣಗಳಲ್ಲಿ ಹಂಚಿಕೆಯಾಗಿದೆ. ಒಂದು ಲಕ್ಷಕ್ಕೂ ಮೀರಿದ ಜನಸಂಖ್ಯೆಯುಳ್ಳ ನಗರಗಳು 15. ಐದು ಸಾವಿರಕ್ಕಿಂತ ಹೆಚ್ಚು ಮತ್ತು ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಪಟ್ಟಣಗಳು 123. ಕೈಗಾರಿಕಾ ಸಂಕೀರ್ಣಗಳಿಂದ ಬೃಹತ್ತಾಗಿ ಬೆಳೆದು ಸಮುದಾಯವಾಗಿರುವ ನಾಲ್ಕು ಮಹಾನಗರವಲಯಗಳಿವೆ. ಇವುಗಳ ಪೈಕಿ ಕೊಲ್ಕತ್ತ ಮಹಾನಗರ ಅತ್ಯಂತ ದೊಡ್ಡದು. ಹೂಗ್ಲಿ ನದಿಯ ಇಕ್ಕೆಲಗಳ 76 ಪಟ್ಟಣ ಬಡಾವಣೆಗಳು ಇದರಲ್ಲಿ ಸೇರಿವೆ. ಎರಡನೆಯದೆಂದರೆ 13 ಪಟ್ಟಣಗಳುಳ್ಳ ಆಸನ್‍ಸೋಲ್-ದುರ್ಗಾಪುರ ವಲಯ. ಭಾಗೀರಥಿಯ ಇಕ್ಕೆಲದ ಎಂಟು ಪಟ್ಟಣಗಳ ಮುರ್ಷಿದಾಬಾದ್ ವಲಯ ಮೂರನೆಯದು. ನಾಲ್ಕನೆಯದು ಮಿಡ್ನಾಪುರ ಜಿಲ್ಲೆಯ ಉತ್ತರದಲ್ಲಿದೆ. ಇದರಲ್ಲಿ ಹಾಲ್ದಿಯವೂ ಸೇರಿದಂತೆ 6 ಪಟ್ಟಣಗಳಿವೆ.

ಈ ನಾಲ್ಕು ವಲಯಗಳ ಒಟ್ಟು ಜನಸಂಖ್ಯೆ 83,30,000 (1971). ಬಂಗಾಳದ ಸೇ 16ರಷ್ಟು ಜನರು ಭಾರತದ ಅತ್ಯಂತ ಬೃಹತ್ ನಗರವಾದ ಕೊಲ್ಕತ್ತದಲ್ಲಿ ನೆಲಸಿದ್ದಾರೆ. 1912ರ ವರೆಗೆ ಭಾರತ ಸರ್ಕಾರದ ರಾಜಧಾನಿಯಾಗಿದ್ದ ಈ ನಗರ ಈಗ ಭಾರತದ ವಾಣಿಜ್ಯ ರಾಜಧಾನಿಯಾಗಿದೆ. ವಿವಿಧ ಮತಗಳ ಜನಸಮುದಾಯವಿರುವ ಈ ರಾಜ್ಯದಲ್ಲಿ ಹಿಂದುಗಳು ಒಟ್ಟು ಜನಸಂಖ್ಯೆಯ ಸೇ. 79ರಷ್ಟು ಮಂದಿ ಮುಸ್ಲಿಮರು, ಉಳಿದ ಸೇಕಡ ಒಂದರಷ್ಟು ಜನಸಂಖ್ಯೆಯಲ್ಲಿ ಕ್ರೈಸ್ತರು, ಬೌದ್ಧರು, ಜೈನರು ಹಾಗೂ ಸಿಖ್ಖರು ಸೇರಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ಮಾನ್ಯತೆ ಪಡೆದ 41 ಬುಡಕಟ್ಟು ಸಮುದಾಯಗಳಿವೆ. ಇವುಗಳಲ್ಲಿ ಪ್ರಸಿದ್ಧವಾದವು ಬಯಲುಸೀಮೆಯಲ್ಲಿ ಸಂತಾಲ, ಒರಾವೂ ಮತ್ತು ಮುಂಡ, ಹಿಮಾಲಯ ಪ್ರದೇಶಗಳಲ್ಲಿ ಲೆಪ್ಚಾ ಹಾಗೂ ಭೂತಿಯ, ಬುಡಕಟ್ಟು ಜನರ ಸಂಖ್ಯೆ ಒಟ್ಟು ಜನಸಂಖ್ಯೆಯ ಸೇ. 6.

ರಾಜ್ಯದ ಮುಖ್ಯ ಭಾಷೆ ಬಂಗಾಲಿ, ಜನಸಂಖ್ಯೆಯ ಶೇ, 84ರಷ್ಟು ಮಂದಿ ಬಂಗಾಲಿ ಮಾತನಾಡುತ್ತಾರೆ. ಇತರ ಭಾಷೆಗಳು ಹಿಂದಿ (ಸೇ.5), ಸಂತಾಲಿ (ಸೇ. 3). ಉರ್ದು (ಸೇ.2) ಮತ್ತು ನೇಪಾಲಿ (ಸೇ.1) ಒರಾವೂ ಮತ್ತು ಇಂಗ್ಲಿಷ್ ಭಾಷೆಗಳೂ ಪ್ರಚಾರದಲ್ಲಿವೆ.

1971 ರ ಜನಗಣತಿಯ ಪ್ರಕಾರ ವ್ಯವಸಾಯ ವೃತ್ತಿಯಲ್ಲಿರುವವರು 72,22,108 : ಕಾರ್ಖಾನೆ ಕಾರ್ಮಿಕರು 8,43,300 ; ಕಲ್ಲಿದ್ದಲು ಗಣಿ ಕೆಲಸಗಾರರು 1,16,460 ; ಪ್ಲಾಂಟೇಷನ್ ಕೆಲಸಗಾರರು 2,15,000 ; ರಾಜ್ಯ ಸರ್ಕಾರದ ಸೇವೆಯಲ್ಲಿರುವವರು 2,89,000 ; ಕೇಂದ್ರ ಸರ್ಕಾರದ ಸೇವೆಯಲ್ಲಿರುವವರು 4,13,000 ; ಭಾಗಶಃ ಸರ್ಕಾರಿ ಸೇವೆಗಳಲ್ಲಿರುವವರು 32,200 ; ಇತರ ಕೆಲಸಗಾರರು 4,58,000.

ಆಡಳಿತ ಬದಲಾಯಿಸಿ

ಪಶ್ಚಿಮ ಬಂಗಾಲದ ಸರ್ಕಾರ ವ್ಯವಸ್ಥೆ ಭಾರತ ಗಣರಾಜ್ಯದ ಇತರ ರಾಜ್ಯಗಳವುಗಳಂತೆಯೇ ಇದೆ. ರಾಷ್ಟ್ರಪತಿಯಿಂದ ನೇಮಕ ಹೊಂದಿದ ರಾಜ್ಯಪಾಲ ರಾಜ್ಯದ ಮುಖ್ಯ. ಆದರೆ ಅಧಿಕಾರ ಚಲಾವಣೆ ಇವರ ಕೈಯಲ್ಲಿರುವುದಿಲ್ಲ. ವಿಧಾನ ಸಭೆಯ ಬಹುಮತ ಪಕ್ಷದ ಸದಸ್ಯ ಪ್ರತಿನಿಧಿಗಳು ಸರ್ಕಾರ ರಚಿಸುತ್ತಾರೆ. ಮುಖ್ಯ ಮಂತ್ರಿ ಮತ್ತು ಆತನ ಸಂಪುಟ ಸದಸ್ಯರು ವಿಧಾನ ಮಂಡಲಕ್ಕೆ ಉತ್ತರವಾದಿಗಳಾಗಿರುತ್ತಾರೆ.

ರಾಜ್ಯದ ನ್ಯಾಯವ್ಯವಸ್ಥೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಮುಖ್ಯ ನ್ಯಾಯಾಧೀಶ ಹಾಗೂ ಇತರ ನ್ಯಾಯಾಧೀಶರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಜಿಲ್ಲೆಯ ಮತ್ತು ಅದಕ್ಕಿಂತ ಕೆಳಗಿನ ಸೆಷನ್ಸ್ ನ್ಯಾಯಲಯಗಳ ನ್ಯಾಯಾಧೀಶರ ನೇಮಕ ರಾಜ್ಯಪಾಲರಿಂದ.

ಪ್ರೆಸಿಡೆನ್ಸಿ. ಬದ್ರ್ವಾನ್ ಹಾಗೂ ಜಲ್ ಪೈಗುರಿ-ಇವು ರಾಜ್ಯದ ಆಡಳಿತ ವಿಭಾಗಗಳು, ಇವುಗಳ ಕೇಂದ್ರ ಕಛೇರಿಗಳು ಅನುಕ್ರಮವಾಗಿ ಕಲ್ಕತ್ತ, ಚಿನ್‍ಸುರ ಮತ್ತು ಜಲಪೈಗುರಿಗಳಲ್ಲಿವೆ. ಪ್ರತಿ ವಿಭಾಗಕ್ಕೂ ಒಬ್ಬ ವಿಭಾಗಾಧಿಕಾರಿ ಇರುತ್ತಾನೆ. ಪ್ರತಿಯೊಂದು ವಿಭಾಗದಲ್ಲೂ ಹಲವು ಜಿಲ್ಲೆಗಳಿರುತ್ತವೆ. ರಾಜ್ಯದ ಜಿಲ್ಲೆಗಳ ಸಂಖ್ಯೆ ೨೩ ಜಿಲ್ಲೆಗಳ ವಿವರಗಳನ್ನು ಕೋಷ್ಟಕ 1ರಲ್ಲಿ ನೀಡಿದೆ. ಜಿಲ್ಲೆಯ ಅಧಿಕಾರಿ ಕಲೆಕ್ಟರ್. ಆತ ಜಿಲ್ಲಾದಂಡಾಧೀಶನೂ ಹೌದು. ಪ್ರತಿಯೊಂದು ಜಿಲ್ಲೆಯೂ ಮತ್ತೆ ಹಲವು ಥಾನಾಗಳಾಗಿ ವಿಭಾಗವಾಗುತ್ತವೆ. ಒಟ್ಟು ಇಂಥ 48 ಉಪವಿಭಾಗಗಳಿವೆ.

 
Districts of West Bengal
 
A hut in a village in Hooghly district

ಪ್ರಸ್ತುತ ಪಶ್ಚಿಮ ಬಂಗಾಲದಲ್ಲಿ ೨೩ ಜಿಲ್ಲೆಗಳಿವೆ .[೩]

ನಂಬ್ರ ದರ್ಜೆ ಜಿಲ್ಲೆ ಜನಸಂಖ್ಯೆ ಜನಸಂಖ್ಯೆ ದರ ಲಿಂಗಾನುಪಾತ ಸಾಕ್ಷರತೆ ಚದರ ಕಿ.ಮೀ.ಗೆ ಸಾಂದ್ರತೆ
1 2 ಉತ್ತರ ೨೪ ಪರಗಣ 10,082,852 12.86 949 84.95 2463
2 6 ದಕ್ಷಿಣ ೨೪ ಪರಗಣ 8,153,176 18.05 949 78.57 819
3 7 ಬರ್ಧಮಾಮ್ 7,723,663 12.01 943 77.15 1100
4 9 ಮುರ್ಶಿದಾಬಾದ್ 7,102,430 21.07 957 67.53 1334
5 14 ಪಶ್ಚಿಮ ಮೇದಿನಿಪುರ 5,943,300 14.44 960 79.04 636
6 16 ಹೂಗ್ಲಿ 5,520,389 9.49 958 82.55 1753
7 18 ನಾಡಿಯಾ 5,168,488 12.24 947 75.58 1316
8 20 ಪೂರ್ವ ಮೇದಿನಿಪುರ 5,094,238 15.32 936 87.66 1076
9 23 ಹೌರಾ 4,841,638 13.31 935 83.85 3300
10 35 ಕಲ್ಕತ್ತಾ ಜಿಲ್ಲೆ 4,486,679 −1.88 899 87.14 24252
11 58 ಮಾಲ್ಡ 3,997,970 21.50 939 62.71 1071
12 66 ಜಲಪಾಯ್‍ಗುರಿ 2,172,846 13.77 954 73.79 621
13 ಅಲಿಪುರುದೂರ್ 1,700,000 400
14 80 ಬಂಕೂರ 3,596,292 12.64 954 70.95 523
15 84 ಬೀರ್‍ಭೂಮ್ 3,502,387 16.15 956 70.90 771
16 124 ಉತ್ತರ ದಿನಜೂರ್ 3,000,849 22.90 936 60.13 956
17 129 ಪುರುಲಿಯಾ 2,927,965 15.43 955 65.38 468
18 136 ಕೂಚ್ ಬಿಹಾರ್ 2,822,780 13.86 942 75.49 833
19 257 ದಾರ್ಜೀಲಿಂಗ್ 1,842,034 14.47 971 79.92 585
20 295 ದಕ್ಷಿಣ ದಿನಜ್‍ಪುರ್ 1,670,931 11.16 954 73.86 753
21 ಕಲಿಂಪಾಂಗ್ 202,239

ಪ್ರತಿಯೊಂದು ಉಪವಿಭಾಗದಲ್ಲೂ ಉಪವಿಭಾಗಾಧಿಕಾರಿ ಮತ್ತು ಹಲವಾರು ಪೋಲಿಸ್ ಠಾಣೆಗಳಿರುತ್ತವೆ. ಪ್ರತಿ ಪೋಲಿಸ್ ಠಾಣೆಯ ಆಡಳಿತವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳು ಇರುತ್ತವೆ. ಗ್ರಾಮ ಸ್ವಯಮಾಡಳತವನ್ನು ಅಭಿವೃದ್ಧಿಗೊಳಿಸುವ ದೃಷ್ಟಿಯಿಂದ ಹಲವು ಗ್ರಾಮಗಳು ಸೇರಿದ ಗ್ರಾಮಗಳು ಸೇರಿದ ಗ್ರಾಮಪಂಚಾಯಿತಿಗಳ ಅಸ್ತಿತ್ವವನ್ನು 1956ರ ಪಶ್ಚಿಮ ಬಂಗಾಲ ಪಂಚಾಯಿತಿ ಅಧಿನಿಯಮದ ಮೂಲಕ ಘೋಷಿಸಲಾಯಿತು. ಊರಿನ ನೈರ್ಮಲ್ಯೀಕರಣ, ರಕ್ಷಣೆ, ಗ್ರಾಮ ಪೋಲಿಸ್ ಮೇಲ್ವಿಚಾರಣೆ, ಗೃಹಕೈಗಾರಿಕೆಗಳ ಅಭಿವೃದ್ಧಿ- ಇವು ಪಂಚಾಯಿತಿಗಳ ಮೂಲ ಕರ್ತವ್ಯ, ಪಶ್ಚಿಮ ಬಂಗಾಲದಲ್ಲಿ ಸುಮಾರು 20,000 ಗ್ರಾಮ ಪಂಚಾಯಿತಿಗಳೂ, ಸುಮಾರು 3.000 ಅಂಚಲ್ ಪಂಚಾಯಿತಿಗಳೂ ಇವೆ.

ಶಿಕ್ಷಣ ಬದಲಾಯಿಸಿ

 
The Auditorium at Indian Institute of Management Calcutta
 
University of Calcutta

1971ರಲ್ಲಿ ಪಶ್ಚಿಮ ಬಂಗಾಲದಲ್ಲಿ ಸಾಕ್ಷರತೆ ಸೇ 33.05. ಸೇ 43 ಪರುಷರು ಮತ್ತು ಸೇ 22 ಸ್ತ್ರೀಯರು ಅಕ್ಷರಸ್ಥರು, 1968-69ರಲ್ಲಿ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತರಲಾಯಿತು. 1972-73ರಲ್ಲಿ ರಾಜ್ಯದಲ್ಲಿ 39.400 ಪ್ರಾಥಮಿಕ ಶಾಲೆಗಳು 2,946 ಮಾಧ್ಯಮಿಕ ಶಾಲೆಗಳು, 2,147 ಪ್ರೌಢ ಶಾಲೆಗಳು, 283 ಕಾಲೇಜುಗಳು, 29 ಪಾಲಿಟೆಕ್ನಿಕ್ ಶಾಲೆಗಳು, 6 ವೈದ್ಯಕೀಯ ಕಾಲೇಜುಗಳು ಇದ್ದುವು. ಕಲ್ಕತ್ತ, ಬದ್ರ್ವಾನ್, ಜಾದವ್‍ಪುರ್, ಕಲ್ಯಾಣಿ, ಉತ್ತರಬಂಗಾಲ, ರವೀಂದ್ರಭಾರತಿ ಮತ್ತು ವಿಶ್ವಭಾರತಿ ವಿಶ್ವವಿದ್ಯಾಲಯಗಳಿವೆ. ಸುಮಾರು 50 ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ. 5.000 ಕ್ಕೂ ಹೆಚ್ಚು ವಯಸ್ಕರ ಶಿಕ್ಷಣ ಕೇಂದ್ರಗಳಿವೆ. ರಾಜ್ಯದಲ್ಲಿ ಕೇಂದ್ರ ಗ್ರಂಥಾಲಯವೂ 18 ಜಿಲ್ಲಾ ಗ್ರಂಥಾಲಯಗಳೂ 44 ಪ್ರಾದೇಶಿಕ ಗ್ರಂಥಾಲಯಗಳೂ 500ಕ್ಕೂ ಹೆಚ್ಚು ಗ್ರಾಮಂತರ ಗ್ರಂಥಾಲಯಗಳೂ ಇದ್ದವು.

ಆರೋಗ್ಯ ಬದಲಾಯಿಸಿ

1974ರಲ್ಲಿ ರಾಜ್ಯದಲ್ಲಿ 300 ಆಸ್ಪತ್ರೆಗಳು 679 ಕ್ಲಿನಿಕ್‍ಗಳು, 47 ಆರೋಗ್ಯಕೇಂದ್ರಗಳು ಮತ್ತು 441 ಡಿಸ್ಪೆನ್ಸರಿಗಳು ಇದ್ದುವು. ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ವರ್ಷಕ್ಕೆ ಸುಮಾರು 1,000 ಮಂದಿ ವೈದ್ಯ ಪದವೀಧರರು ಹೊರಬರುತ್ತಾರೆ. ಕುಟಂಬಯೋಜನಾ ಸೇವೆಯನ್ನು 18 ಜಿಲ್ಲಾ ಕೇಂದ್ರಗಳಲ್ಲಿ ಮತ್ತು ನಗರ ಹಾಗೂ ಗ್ರಾಮ ಕೇಂದ್ರಗಳಲ್ಲಿ ಒದಗಿಸಲಾಗುತ್ತದೆ. 1974ರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ 335, ಮತ್ತು ನಗರಗಳಲ್ಲಿ 105 ಕುಟುಂಬ ಯೋಜನಾ ಕೇಂದ್ರಗಳು ಇದ್ದವು.

ರಾಜ್ಯ ಯೋಜನೆಯ ಅಡಿಯಲ್ಲಿ 8,60,000ಕ್ಕೂ ಹೆಚ್ಚು ಕಾರ್ಮಿಕರಿಗೆ ಆರೋಗ್ಯ ಉದ್ಯೋಗ, ರಕ್ಷಣೆ ಹಾಗೂ ಮಾತೃತ್ವ ವಿಮೆಯ ಸೌಲಭ್ಯ ನೀಡಲಾಗಿದೆ. ಅಲ್ಲದೆ. 800ಕ್ಕೂ ಹೆಚ್ಚೂ ವೈದ್ಯರ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕೈಗಾರಿಕೆ ಮತ್ತು ಕೃಷಿ ಇವೆಲ್ಲವುಗಳಲ್ಲಿ ಮೇಲಿನ ಅಂಕಿ ಅಂಶಗಳನ್ನು ಮೀರಿಸಿ ಈಗ ಪ್ರಗತಿಯಾಗಿರುವುದನ್ನು ಮನದಟ್ಟು ಮಾಡಿಕೊಳ್ಳಬೇಕು.

ಸಮಾಜ ಕಲ್ಯಾಣ ಬದಲಾಯಿಸಿ

1970ರ ದಶಕದ ಆರಂಭದಲ್ಲಿ ಸಾರ್ವಜನಿಕ ಕಲ್ಯಾಣ ನಿರ್ದೇಶನಾಲಯ ವಿವಿಧ ಸಮಾಜಕಲ್ಯಾಣ ಸೇವೆಗಳನ್ನು ಕೈಗೊಂಡಿತು. ಅನಾಥರು, ನಿರ್ಗತಿಕರು, ಅಲೆಮಾರಿಗಳು, ಮಾನಸಿಕವಾಗಿ ಹಾಗೂ ಭೌತಿಕವಾಗಿ ವಿಕಲರಾದವರು, ಬಾಲಾಪರಾಧಿಗಳು ಇವರ ಕಡೆಗೆ ತೀವ್ರ ಗಮನವಿತ್ತು. ಸರ್ಕಾರದ ಸಮಾಜಕಲ್ಯಾಣ ಸೇವೆಗೆ ಪೂರಕವಾಗಿ ಅನೇಕ ಖಾಸಗಿ ಸಂಸ್ಥೆಗಳೂ ಕ್ರಿಯಾಶೀಲವಾದುವು. ಇವುಗಳಲ್ಲಿ ಅತ್ಯಂತ ಪ್ರಮುಖವಾದ್ದೆಂದರೆ ಸ್ವಾಮಿ ವಿವೇಕಾನಂದರಿಂದ 1897ರಲ್ಲಿ ಸ್ಥಾಪಿತವಾದ ಶ್ರೀ ರಾಮಕೃಷ್ಣಶ್ರಮ. ಶ್ರೀ ರಾಮಕೃಷ್ಣ ಸಂಸ್ಥೆಯು ಕ್ರೈಸ್ತ ಸಂಸ್ಥೆಗಳೂ ಅನೇಕ ಶಾಲೆಗಳನ್ನು ಆಸ್ಪತ್ರೆಗಳನ್ನೂ ನಡೆಸುತ್ತಿವೆ.

ಕೃಷಿ ಬದಲಾಯಿಸಿ

ಪಶ್ಚಿಮ ಬಂಗಾಲದ ಜನರ ಮುಖ್ಯ ಕಸುಬು ವ್ಯವಸಾಯ. ಸೇ. 57.5 ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ರಾಜ್ಯದ ನೆಲದ ಸೇ 60 ರಷ್ಟು ಭಾಗ ಸಾಗುವಳಿಗೆ ಒಳಪಟ್ಟಿದೆ. ರಾಜ್ಯದ ಮುಖ್ಯ ಬೆಳೆ ಬತ್ತ. ಒಟ್ಟು ಸಾಗುವಳಿ ಪ್ರದೇಶದ ಸೇ 70ರಷ್ಟು ಇದಕ್ಕೆ ಮೀಸಲು ಇತ್ತೀಚೆಗೆ ಅಹಾರ ಬೆಳೆ ಉತ್ಪಾದನೆಯ ವಿನ್ಯಾಸ ತೀವ್ರವಾಗಿ ಬದಲಿಸುತ್ತಿದೆ. ಗೋಧಿಯೂ ಒಂದು ಪ್ರಮುಖ ಬೆಳೆಯಾಗುತ್ತಿದೆ. ಬಾರ್ಲಿ ಮತ್ತು ಜೋಳ ಗಾಣ ಬೆಳೆಗಳೂ ಬೆಳೆಯುತ್ತವೆ. ರಾಷ್ಟ್ರದ ಒಟ್ಟು ಆಹಾರ ಉತ್ಪಾದನೆಯಲ್ಲಿ ಈ ರಾಜ್ಯದ ಪಾಲು ಸೇ 7 ಈ ವಿಚಾರದಲ್ಲಿ ರಾಜ್ಯದ್ದು 4ನೆಯ ಸ್ಥಾನ. ಇಲ್ಲಿಯ ವಾಣಿಜ್ಯ ಬೆಳೆಗಳಲ್ಲಿ ಮುಖ್ಯವಾದವು. ಸೆಣಬು. ಚಹ ಮತ್ತು ವೀಳೆಯದೆಲೆ, ಭಾರತದ ಒಟ್ಟು ಸಣಬು ಉತ್ಪಾದನೆಯಲ್ಲಿ ಸೇ 50ರಷ್ಟು ಇಲ್ಲಿ ಬೆಳೆಯುತ್ತದೆ. ಚಹ ಪ್ರಮುಖ ಪ್ಲಾಂಟೇಷನ್ ಬೆಳೆ. ಅಸ್ಸಾಮನ್ನು ಬಿಟ್ಟರೆ ಈ ರಾಜ್ಯವೇ ಅತ್ಯಂತ ಹೆಚ್ಚು ಚಹ ಬೆಳೆಯುವ ರಾಜ್ಯ. ಅತ್ಯಂತ ರುಚಿಕರ ಹಿಮಾಲಯದ ಚಹ ಇಲ್ಲಿಯದು. ಪರ್ವತ ಶ್ರೇಣಿಗಳ ಇಳುಕಲುಗಳಲ್ಲಿ ಚಹ ತೋಟಗಳು ಸಮೃದ್ಧವಾಗಿವೆ. ಮಗ್ಗಲಲ್ಲಿಯೇ ಚಹ ಕಾರ್ಖಾನೆಗಳುಂಟು ಸಂಸ್ಕರಣ ಹೊಂದಿದ ಕಪ್ಪು ಚಹ ಪುಡಿಯನ್ನು ಕಲ್ಕತ್ತೆಯ ಮಾರುಕಟ್ಟೆಗೆ ಸಾಗಿಸುತ್ತಾರೆ. ಇಲ್ಲಿಯ ಸೆಣಬು ಮತ್ತು ಚಹ ಭಾರತದ ವಿದೇಶಿ ವಿನಿಮಯ ಸಂಪಾದನೆಯ ಸರಕುಗಳು, ರಾಜ್ಯದಲ್ಲಿ ಸಾಗುವಳಿಯಾಗುತ್ತಿರುವ ಪ್ರಮುಖ ಜಮೀನಿನ ಸೇ 2ರಷ್ಟು ಪ್ರದೇಶದಲ್ಲಿ ಎಣ್ಣೆ ಬೀಜಗಳನ್ನು ಬೆಳೆಯುತ್ತಾರೆ. ರಾಜ್ಯದ ಅಗತ್ಯವನ್ನು ಇಲ್ಲಿಯ ಬೆಳೆ ಭಾಗಶಃ ಪೂರೈಸುತ್ತದೆ.

ಎಣ್ಣೆ ಬೀಜಗಳಲ್ಲಿ ಸಾಸುವೆ ಪ್ರಮುಖವಾದ್ದು. ಬಂಗಾಲದಲ್ಲಿ ಅಡುಗೆಗೆ ಸಾಸುವೆ ಎಣ್ಣೆಯನ್ನೇ ಹೆಚ್ಚಾಗಿ ಉಪಪ್ರಮುಖವಾದ್ದು. ಬಂಗಾಲದಲ್ಲಿ ಅಡುಗೆಗೆ ಸಾಸುವೆ ಎಣ್ಣೆಯನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಅಲ್ಲದೆ ಈ ಎಣ್ಣೆಯನ್ನು ಮೈಗೂ ತಿಕ್ಕಿಕೊಳ್ಳಲು ಬಳಸುತ್ತಾರೆ. ಹತ್ತಿ, ತಂಬಾಕು ಮತ್ತು ಕಬ್ಬು ಇತರ ಮುಖ್ಯ ಬೆಳೆಗಳು, ಡಾರ್ಜಿಲಿಂಣ್ ಶ್ರೇಣಿಗಳಲ್ಲಿ ಸೇಬು ಮೊದಲಾದ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇವುಗಳ ಬೆಳೆಯಿಂದ ಸುತ್ತಣ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುವ ನಿರೀಕ್ಷೆ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಾಳೆ, ಪರಂಗಿ, ಮಾವು, ಹಲಸು, ಅನಾನಸುಗಳನ್ನು ಬೆಳೆಯುತ್ತಾರೆ. 2002-2003 ರ ಸಾಲಿನಲ್ಲಿ 14,389.2 ಸಾವಿರ ಟನ್ನುಗಳ ಬತ್ತವನ್ನು 887.4 ಸಾವಿರ ಟನ್ನುಗಳ ಗೋಧಿಯನ್ನೂ 167.9 ಸಾವಿರ ಟನ್ನುಗಳ ದ್ವಿದಳ ಧಾನ್ಯಗಳನ್ನೂ, 475.8 ಸಾವಿರ ಟನ್ನುಗಳ ತೈಲ ಬೀಜಗಳನ್ನೂ 6,902.5 ಸಾವಿರ ಟನ್ನುಗಳ ಆಲೂಗಡ್ಡೆಯನ್ನು ಬೆಳೆಯಲಾಗಿತ್ತು. 2001-02 ರ ಸಾಲಿನಲ್ಲಿ 8,505 ಸಾವಿರ ಬೇಲುಗಳ ಸೆಣಬನ್ನೂ ಬೆಳೆಯಲಾಗಿತ್ತು.

ನೀರಾವರಿ ಬದಲಾಯಿಸಿ

ಪಶ್ಚಿಮ ಬಂಗಾಲ ಹೆಚ್ಚು ಮಳೆ ಬೀಳುವ ಪ್ರದೇಶವಾದ್ದರಿಂದ ನೀರಾವರಿಗೆ ಅಂಥ ಪ್ರಾಮುಖ್ಯವಿಲ್ಲ. ರಾಜ್ಯದ ಒಟ್ಟು ಸಾಗುವಳಿ ನೆಲದ ಶೇ 38ರಷ್ಟು ಪ್ರದೇಸ ನೀರಾವರಿಗೆ ಒಳಪಟ್ಟಿದೆ. (ಪೂರ್ಣವಾಗಿ ನೀರಾವರಿಗೆ ಒಳಪಟ್ಟಿರುವ ನೆ ಸೇ 11 : ಭಾಗಶಃ ನೀರಾವರಿ ಇರುವ ನೆಲ ಶೇ. 27) ಸರ್ಕಾರದಿಂದ ನಿಯಂತ್ರಿತವಾದ ನಾಲೆಗಳು ಮತ್ತು ಕೆರೆಗಳು ಸಹಾಯದಿಂದ ಪ್ರಮುಖ. ಗೌಣ ಹಾಗೂ ಸಾಧಾರಣ ನೀರಾವರಿ ಯೋಜನೆಗಳ ಮೂಲಕ ಸುಮಾರು ಹತ್ತು ಲಕ್ಷ ಹೆಕ್ಟೇರ್ ಜಮೀನು ಸಾಗುವಳಿಯಾಗುತ್ತದೆ. ಸ್ವಾತಂತ್ರ್ಯಾನಂತರ ಅನೇಕ ವಿವಿಧೋದ್ದೇಶ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಮುಖ್ಯವಾದವು ದಾಮೋದರ ಕಣೆವೆ ಹಾಗೂ ಮಯೂರಾಕ್ಷಿ ಯೋಜನೆಗಳು ಖಂಡೆಲ್ ಶಾಖವಿದ್ಯುತ್ ಕೇಂದ್ರ ಹಾಗೂ ದುರ್ಗಾಪುರ ವಿದ್ಯುತ್ ಕೇಂದ್ರ ಇವೆ.

ಜಾನುವಾರು ಸಂಪತ್ತು ಬದಲಾಯಿಸಿ

ಇಡೀ ರಾಷ್ಟ್ರದ ಜಾನುವಾರುಗಳಲ್ಲಿ ಸೇ 56ರಷ್ಟು ಇಲ್ಲಿವೆ. ಜಾನುವಾರು ಸಾಂದ್ರತೆ ಕಿಲೋ ಮೀಟರಿಗೆ 200, ಹೈನಿನ ಹಸು ಎಮ್ಮೆಗಳು ಕಲ್ಕತ್ತ ನಗರದ ಸುತ್ತ ಸಾಂದ್ರಿಕೃತವಾಗಿವೆ. ಕ್ಷೀರೋತ್ಪಾದನಾ ಕೈಗಾರಿಕೆಯೊಂದಿಗೆ ಉಪ ಉತ್ಪಾದನೆಯಾಗಿ ಧರ್ಮ ಕೈಗಾರಿಕೆ ಅಭಿವೃದ್ಧಿಗೊಳ್ಳುತ್ತಿದೆ. ಸರ್ಕಾರ ಅನೇಕ ರೇಷ್ಮೆ ಫಾರಂಗಳನ್ನು ಸ್ಥಾಪಿಸಿದೆ. ಜೇನು ಸಾಕುವುದಕ್ಕೂ ಪ್ರೋತ್ಸಾಹವಿದೆ. ಕೋಳಿ ಮೊಟ್ಟೆಗಳ ಉತ್ಪಾದನೆಯಲ್ಲೂ ಈ ರಾಜ್ಯ ಅಗ್ರಸ್ಥಾನದಲ್ಲಿದೆ.

ಮತ್ಸ್ಯೋದ್ಯಮ ಬದಲಾಯಿಸಿ

ಬಂಗಾಲಿಗಳ ಆಹಾರದಲ್ಲಿ ಮೀನೂ ಪ್ರಮುಖವಾದ್ದು ಸಿಹಿನೀರಿನ ಮೀನುಗಾರಿಕೆಯಲ್ಲಿ ಈ ರಾಜ್ಯಕ್ಕೆ ಭಾರತದಲ್ಲಿ ಅಗ್ರಸ್ಥಾನ. ಸುಂದರಬನಗಳಲ್ಲಿ ಮತ್ತು ನದಿಗಳಿವೆ. ಪ್ರದೇಶದಲ್ಲಿ ಗಣನೀಯವಾಗಿ ಮೀನು ಬೆಳೆ ತೆಗೆಯಲಾಗುತ್ತದೆ. ಜೊತೆಗೆ ಕರಾವಳಿ ಮೀನು ಉತ್ಪಾದನೆಯೂ ಬೆಳೆದಿವೆ. ಆಳ ಕಡಲು ಮೀನುಗಾರಿಕೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೂ ರಾಜ್ಯದ ಬೇಡಿಕೆಯನ್ನು ಪೂರೈಸುವಷ್ಟು ಮೀನು ಉತ್ಪಾದನೆಯಾಗುತ್ತಿಲ್ಲ ಸಾಮಾನ್ಯವಾಗಿ ಮನೆಮನೆಯಲ್ಲೂ ಮೀನುಕೊಳಗಳಿರುತ್ತವೆ. ಮೀನುಸಾಕಣೆ ಕೇಂದ್ರಗಳು ವಾಣಿಜ್ಯಮಟ್ಟದಲ್ಲಿ ಅಭಿವೃದ್ಧಿಗೊಳ್ಳುತ್ತಿವೆ.

ಖನಿಜ ಬದಲಾಯಿಸಿ

ಬಿಹಾರವನ್ನು ಬಿಟ್ಟರೆ ಪಶ್ಚಿಮ ಬಂಗಾಲವೇ ಅತ್ಯಂತ ಹೆಚ್ಚು ಖನಿಜಗಳನ್ನು ಉತ್ಪಾದಿಸುವ ರಾಜ್ಯ. ರಾಷ್ಟ್ರದಲ್ಲಿ ಉತ್ಪಾದನೆಯಾಗುವ ಖನಿಜಗಳಲ್ಲಿ ಐದನೆಯ ಒಂದು ಭಾಗ ಪಶ್ಚಿಮ ಬಂಗಾಲದಲ್ಲಾಗುತ್ತದೆ. ಕಲ್ಲಿದ್ದಲು ಪ್ರಮುಖ ಖನಿಜ. ರಾಜ್ಯದ ಒಟ್ಟು ಖನಿಜೋತ್ಪಾದನೆಯ ಶೇ 99 ಭಾಗ ಕಲ್ಲಿದ್ದಲು, ಭಾರತದ ಒಟ್ಟು ಕಲ್ಲಿದ್ದಲು ಉತ್ಪಾದನೆಯ ಶೇ 30ರಷ್ಟು ಇಲ್ಲಿಯದು. ಜೇಡಿಮಣ್ಣು ಇನ್ನೊಂದು ಪ್ರಮುಖ ಖನಿಜ. ಡೊಲಮೈಟ್ ವಿಪುಲವಾಗಿ ದೊರೆಯುತ್ತದೆ. ಕ್ವಾಟ್ರ್ಸ್ ಮತ್ತು ಟಂಗ್‍ಸ್ಟನ್‍ಗಳೂ ದೊರೆಯುತ್ತವೆ. ಮಿಡ್ನಾಪುರದ ಬಳಿ ಮ್ಯಾಂಗನೀಸ್ ಅದುರು ನಿಕ್ಷೇಪಗಳಿವೆ. ಕಿÁರ್ಜಿಲಿಂಣ್ ಬಳಿ ಸ್ವಲ್ಪ ಪ್ರಮಾಣದಲ್ಲಿ ಆರ್ಸೆನಿಕ್ ದೊರೆಯುತ್ತದೆ. ರಾಣಿಗಂಜ್ ಕಲ್ಲಿದ್ದಲ ಗಣಿಯ ಸಮೀಪದಲ್ಲಿ ಕಬ್ಬಿಣದ ಅದುರು ನಿಕ್ಷೇಪಗಳಿವೆ.

ಕೈಗಾರಿಕೆ ಬದಲಾಯಿಸಿ

 
Queen Elizabeth at the Durgapur Steel Plant

ಪಶ್ಚಿಮ ಬಂಗಾಲ ಮೊದಲಿನಿಂದಲೂ ಕೈಗಾರಿಕಾ ಬೆಳವಣಿಗೆಯ ಮುಂಚೂಣಿಯಲ್ಲಿದೆ. ಹಿಂದಿನ ಬಂಗಾಲದ ವಿಭಜನೆಯಾದ ಮೇಲೆ ಇಲ್ಲಿ ಆರ್ಥಿಕ ಅವ್ಯವಸ್ಥೆ ಉಂಟಾಗಿ ಎರಡು ಪ್ರಮುಖ ಉದ್ಯಮಗಳಿಗೆ ಧಕ್ಕೆಯಾಯಿತು. ಇಲ್ಲಿ ಸೆಣಬು ಕೈಗಾರಿಕೆ ಪೂರ್ವ ಪಾಕಿಸ್ತಾನದಲ್ಲಿ ಬೆಳೆಯುವ ಕಚ್ಚಾ ಸಣಬನ್ನೂ ಅವಲಂಬಿಸಿತ್ತು. ಉತ್ತರದ ಪ್ಲಾಂಟೇಷನ್‍ಗಳಿಂದ ಚಹವನ್ನು ಪೂರ್ವ ಪಾಕಿಸ್ತಾನದ ಮೂಲಕ ಹಾದುಹೋಗುವ ರೈಲು ಹಾಗೂ ಜಲಮಾರ್ಗಗಳ ಮೂಲಕ ಸಾಗಿಸಲಾಗುತ್ತಿತ್ತು. ಈ ಅಸ್ತವ್ಯಸ್ತತೆಯನ್ನು ನಿವಾರಿಸಿಕೊಂಡು ಹೊಸ ಉದ್ಯಮಗಳನ್ನು ಅಭಿವೃದ್ಧಿಗೊಳಿಸುವುದು ರಾಜ್ಯದ ಪ್ರಮುಖ ಆರ್ಥಿಕ ಗುರಿಯಾಯಿತು. ಸಣಬು ಮತ್ತು ಚಹ ಕೈಗಾರಿಕೆಗಳು ರಾಜ್ಯದಲ್ಲಿ ಪ್ರಮುಖವಾಗಿವೆ. ಕಾಗದ ಮತ್ತು ಉಕ್ಕು ಕಾರ್ಖಾನೆಗಳನ್ನು ಆರಂಭಿಸಿದ ಪ್ರಥಮ ರಾಜ್ಯ ಇದು. ರಾಣಿಗಂಜ್ ಬಳಿ ಕಲ್ಲಿದ್ದಲ ಪತ್ತೆಯಾದ್ದು ಭಾರತದಲ್ಲಿ ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು. ರಾಜ್ಯದಲ್ಲಿ ಎರಡು ಉಕ್ಕು ಸ್ಥಾವರಗಳಿವೆ. ದುರ್ಗಾಪುರದ ಕಾರ್ಖಾನೆ ಸರ್ಕಾರಿ ವಲಯದ್ದ; ಬರ್ನ್‍ಪುರದ ಕಾರ್ಖಾನೆ ಖಾಸಗಿ ವಲಯದ್ದು, ರೈಲ್ವೆ ಎಂಜಿನ್, ಕೇಬಲ್, ರಸಗೊಬ್ಬರ ಮತ್ತು ನೌಕಾ ನಿರ್ಮಾಣ ಇವು ಇತರ ಕೆಲವು ದೊಡ್ಡ ಕೈಗಾರಿಕೆಗಳು. ಹಾಲ್ದಿಯ ಬಳಿ ಭಾರತೀಯ ರಸಗೊಬ್ಬರ ಕಂಪನಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಅಲ್ಲದೆ ಇಲ್ಲಿ ತೈಲಸಂಸ್ಕರಣ ಕೇಂದ್ರ ಹಾಗೂ ಬಂದರು ನಿರ್ಮಾಣವಾಗುತ್ತವೆ. ಹೂಗ್ಲಿ ಜಲಾನಯನದ ಸುತ್ತ ಅನೇಕ ಹತ್ತಿ ಗಿರಣಿಗಳಿವೆ. ಕಲ್ಕತ್ತ ನಗರದಲ್ಲಿ ಪ್ರಮುಖ ಬಟ್ಟೆ ಗಿರಣಿಗಳಿವೆ. ಇಲ್ಲಿಯ ಇತರ ಕೆಲವು ಉದ್ಯಮಗಳೆಂದರೆ ಮೋಟಾರು ವಾಹನ, ಸೈಕಲ್, ಹಡಗು ಮತ್ತು ಮೋಟಾರು ದೋಣಿಗಳ ತಯಾರಿಕೆ, ಲಘು ಎಂಜಿನಿಯರಿಂಗ್, ಅಲ್ಯೂಮಿನಿಯಮ್, ಕಾಗದ, ರಾಸಾಯನಿಕ, ಪಾದರಕ್ಷೆ, ಸಿಮೆಂಟ್, ಸ್ಕೂಟರ್, ವಿದ್ಯುದುಪಕರಣಗಳು ಮತ್ತು ಮಿನಿ ಉಕ್ಕು ಸ್ಥಾವರಗಳು ಹೊಸ ಕೈಗಾರಿಕೆಗಳು.

ಸಾರಿಗೆ ಬದಲಾಯಿಸಿ

 
Netaji Subhash Chandra Bose International Airport is hub for flights with Bangladesh, East Asia, Nepal, Bhutan and Northeast India
 
Durgapur Expressway

1947ರ ವಿಭಜನೆಯ ಫಲವಾಗಿ ಪೂರ್ವ ಪಾಕಿಸ್ತಾನದ ಮೂಲಕ ಸಾಗುತ್ತಿದ್ದ ರಸ್ತೆ ಮಾರ್ಗಗಳೆಲ್ಲವೂ ಕಡಿದುಹೋಗಿ. ಉತ್ತರ ಬಂಗಾಲ ಮತ್ತು ಅಸ್ಸಾಮಿಗೆ ರೈಲು ಹಾಗೂ ಜಲಸಾರಿಗೆಗಳನ್ನು ಕಲ್ಪಿಸುವ ಅನಿವಾರ್ಯ ಅಗತ್ಯ ಉಂಟಾಯಿತು. 1968ರ ಹೊತ್ತಿಗೆ ಸುವ್ಯವಸ್ಥಿತ ಸಾರಿಗೆ ಸೌಕರ್ಯಗಳನ್ನು ಮಾಡಲಾಯಿತು. 1974ರಲ್ಲಿ ಇದ್ದ ರಸ್ತೆಗಳ ಒಟ್ಟು ಉದ್ದ 52,896 ಕಿಮೀ. ಪಶ್ಚಿಮ ಬಂಗಾಲದ ಉತ್ತರಭಾಗಕ್ಕೆ ಹಾಗೂ ಅಸ್ಸಾಮಿಗೆ ವಿಮಾನ ಸಾರಿಗೆ ಸೌಲಭ್ಯ ಚೆನ್ನಾಗಿದೆ. ಕಲ್ಕತ್ತ ಪ್ರಮುಖ ಅಂತರರಾಷ್ಟ್ರೀಯ ವಿಮಾನ ಮಾರ್ಗಗಳ ಕೇಂದ್ರ. ಕಲ್ಕತ್ತಬಂದರು ಭಾರತದ ಸುಮಾರು ಸೇ. 20ರಷ್ಟು ವಾಣಿಜ್ಯ ವ್ಯವಹಾರಗಳನ್ನು ನಿರ್ವಹಿಸುತ್ತದೆ. 1999 ಮಾರ್ಚ್ 31ರ ಅಂಕಿ ಅಂಶದ ಪ್ರಕಾರ 1715 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಸೇರಿ ಒಟ್ಟು 90,184 ಕಿ.ಮೀ ರಸ್ತೆಯಿತ್ತು. ರಾಜ್ಯ ಹೆದ್ದಾರಿ 3354 ಕಿ.ಮೀ. ಜಿಲ್ಲಾ ರಸ್ತೆಗಳು 41,278 ಕಿ.ಮೀ. ಇತ್ತು. 2002-03ರಲ್ಲಿ 3696.86 ಕಿ.ಮೀ. ರೈಲು ಮಾರ್ಗವಿತ್ತು.

ಸಾಂಸ್ಕೃತಿಕ ಜೀವನ ಬದಲಾಯಿಸಿ

 
Baul singers at Basanta-Utsab, Shantiniketan

ಬಂಗಾಲಿಗಳು ಬುದ್ಧಿಜೀವಿಗಳು, ಕಲಾಪ್ರೇಮಿಗಳು ಎಂದು ಹೆಸರಾಗಿದ್ದಾರೆ. ಸಾಹಿತ್ಯ, ಕಲೆ, ಸಂಗೀತ ಹಾಗೂ ನಾಟಕಗಳಿಗೆ ಪ್ರೋತ್ಸಾಹ ನೀಡುತ್ತಾರೆ. 19ನೆಯ ಶತಮಾನದ ಆರಂಭದಿಂದಲೇ ಪಾಶ್ಚಾತ್ಯ ಸಂಪರ್ಕದಿಂದಾಗಿ ಬಂಗಾಲಿ ಸಾಹಿತ್ಯದಲ್ಲಿ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾಯಿತು. ಇದು ಭಾರತದ ಇತರ ಭಾಷಾ ಸಾಹಿತ್ಯಗಳ ಮೇಲೆ ಪ್ರಭಾವ ಬೀರಿದೆ. ನೊಬೆಲ್ ಪಾರಿತೋಷಕ ಪಡೆದ ರವೀಂದ್ರನಾಥ ಠಾಕೂರರಲ್ಲದೆ ಬಂಕಿಮಚಂದ್ರ, ಶರಚ್ಚಂದ್ರ ಮುಂತಾದ ಯುಗಪ್ರವರ್ತಕ ಸಾಹಿತಿಗಳು ಬಂಗಾಲಿಯಲ್ಲಿ ಕೃತಿರಚನೆ ಮಾಡಿದ್ದಾರೆ. ಬಂಗಾಲಿ ರಂಗಭೂಮಿ ಜನಪ್ರಿಯವಾಗಿದೆ. ವೃತ್ತಿ ಹಾಗೂ ಹವ್ಯಾಸೀ ಎರಡೂ ರಂಗಭೂಮಿಗಳು ಪ್ರಚಲಿತವಾಗಿವೆ. ಇಲ್ಲಿ ಸಾಮಾನ್ಯವಾಗಿ ಪೌರಾಣಿಕ ಹಾಗೂ ಐತಿಹಾಸಿಕ ವಸ್ತುಗಳೇ ಪ್ರಧಾನವಾದರೂ ಇವು ಇತ್ತೀಚೆಗೆ ಆಧುನಿಕ ವಸ್ತುಗಳಿಂದಲೂ ಆಕರ್ಷಿತವಾಗಿವೆ. ಗ್ರಾಮ ಕವಿಗಳ ನಡುವೆ ನಡೆಯುವ ಆಶು ಸಂಗೀತ ಕಾವ್ಯ ಸ್ಪರ್ಧೆ ಜನಪ್ರಿಯವಾಗಿದೆ. ಇನ್ನೊಂದು ಗ್ರಾಮಾಂತರ ಮನೋರಂಜನೆ ಎಂದರೆ ಪರಂಪರಾಗತವಾಗಿ ಬಂದ ಕಥಾಕೂಟ ಎಂಬ ಹರಿಕಥೆ. ಜನರಿಗೆ ಸಾರ್ವತ್ರಿಕವಾಗಿ ಮನೋರಂಜನೆ ನೀಡುವ ಪ್ರಮುಖ ಉದ್ಯಮ ಚಲನಚಿತ್ರ. ಬಂಗಾಲಿ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿವೆ. ಅವುಗಳಲ್ಲಿಯ ಭಾರತೀಯ ಸಮಾಜ ನಿರೂಪಣೆಯ ಕುಶಲತೆ ಮೆಚ್ಚುಗೆ ಗಳಿಸಿದೆ. ನಿರ್ದೇಶಕ ಸತ್ಯಜಿತ್‍ರಾಯ್‍ರ ಕೃತಿಗಳು ಗಮನಾರ್ಹ.

ಸಾಂಪ್ರದಾಯಿಕ ಸಂಗೀತದ ರೂಪಗಳು ಭಕ್ತಿ ಹಾಗೂ ಸಾಂಸ್ಕೃತಿಕ ಗೀತೆಗಳಲ್ಲಿ ವಿಕಾಸಗೊಂಡಿವೆ. ರವೀಂದ್ರನಾಥ ಠಾಕೂರರು ರಚಿಸಿ ರಾಗ ಸಂಯೋಜಿಸಿದ ಗೀತೆಗಳು ರವೀಂದ್ರ ಸಂಗೀತವೆಂದು ಹೆಸರಾಗಿವೆ. ಶುದ್ಧ ಭಾರತೀಯ ಸಂಗೀತ ಹಾಗೂ ಪರಂಪರಾಗತ ಜನಪದ ಸಂಗೀತ ಮೂಲಗಳಿಂದ ಹಕ್ಕಿ ರಾಗ ಸಂಯೋಜಿಸಿರುವ ರವೀಂದ್ರ ಸಂಗೀತ ಬಂಗಾಲಿ ಸಾಂಸ್ಕøತಿಕ ಜೀವನದ ಮೇಲೆ ಪ್ರಬಲ ಪ್ರಭಾವಬೀರಿದೆ.

ಜೇಡಿಮಣ್ಣಿನ ಹಾಗೂ ಕೆಂಪುಮಣ್ಣಿನ ಮೂರ್ತಿಗಳು ಹಾಗೂ ಅಲಂಕಾರಿಕ ಚಿತ್ರಕಲೆ ಇವು ಜನಪ್ರಿಯವಾಗಿವೆ. ಕಲ್ಕತ್ತದ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್, ಬೋಸ್ ಸಂಶೋಧನ ಕೇಂದ್ರ ಮತ್ತು ಕಲ್ಕತ್ತ ವಿಶ್ವವಿದ್ಯಾಲಯದ ವಿಜ್ಞಾನ ಪ್ರಯೋಗಾಲಯಗಳು ವಿಜ್ಞಾನಕ್ಕೆ ಗಮನಾರ್ಹ ಕೊಡುಗೆ ನೀಡಿವೆ. ಅತ್ಯಂತ ಪ್ರಸಿದ್ಧ ಇತಿಹಾಸ ಸಂಶೋಧನ ಸಂಸ್ಥೆಯಾದ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಇಲ್ಲಿದೆ. ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಕೂರರು ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯ ಭಾರತದ ಪುರಾತತ್ವ ಹಾಗೂ ಅಂತರರಾಷ್ಟ್ರೀಯ ಸಾಂಸ್ಕøತಿಕ ಸಂಬಂಧಗಳನ್ನು ಅಧ್ಯಯನ ಮಾಡುವ ಜಗತ್ಪ್ರಸಿದ್ಧ ಕೇಂದ್ರ.

ಈ ರಾಜ್ಯದಿಂದ ಹೊರಡುವ ದೈನಿಕ ಪತ್ರಿಕೆಗಳಲ್ಲಿ ಪ್ರಮುಖವಾದವು ಅಮೃತಬಜಾರ್ ಪತ್ರಿಕೆ. ಹಿಂದೂಸ್ತಾನ್ ಸ್ಟ್ಯಾಂಡರ್ಡ್ ಮತ್ತು ಸ್ಟೇಟ್ಸ್‍ಮನ್ (ಇಂಗ್ಲಿಷ್) ಆನಂದ ಬಜಾರ್ ಪತ್ರಿಕೆ ಮತ್ತು ಜುಗಾಂತರ (ಬಂಗಾಲಿ); ಹಾಗೂ ಸನ್ಮಾರ್ಗ (ಹಿಂದಿ).

 
Dance with Rabindra From the early 1990s, there has been an emergence of new genres of music, including the emergence of what has been called Bengali Jeebonmukhi Gaan (a modern genre based on realism)..

ಇತಿಹಾಸ ಬದಲಾಯಿಸಿ

 
ಚಂದ್ರಕೇತುಗೃಹ
 
ಪಾಲ ಮತ್ತು ಸೇನರ ಕಾಲದ ವಾಸ್ತುಶಿಲ್ಪದ ಮಾದರಿ

ಪ್ರಾಗಿತಿಹಾಸ ಸಂಸ್ಕøತಿಗಳು ಬದಲಾಯಿಸಿ

ಪಶ್ಚಿಮ ಬಂಗಾಲದ ಇತಿಹಾಸಪೂರ್ವ ಸಂಸ್ಕøತಿಗಳು ಅಲ್ಲಿಯ ಭೌಗೋಲಿಕ ವೈವಿಧ್ಯಕ್ಕೆ ಅನುಗುಣವಾಗಿ ವೈವಿಧ್ಯಮಯವಾಗಿವೆ. ನೈಋತ್ಯ ಭಾಗದ ಪ್ರಾಚೀನ ಮೆಕ್ಕಲು ಮಣ್ಣಿನ ಪ್ರದೇಶ ಛೋಟಾನಾಗಪುರ ಪ್ರಸ್ಥಭೂಮಿಯ ಭಾಗವಾಗಿದ್ದು ಪ್ರಾಚೀನತಮ ಶಿಲಾಪದರಗಳಿಂದ ಆವೃತವಾಗಿದೆ. ಈ ಪ್ರದೇಶದಲ್ಲಿ ಪ್ಲೀಸ್ಟೊಸೀನ್ ಯುಗದ ನದಿ ಮಟ್ಟಗಳಲ್ಲಿ ಶಿಲಾಯುಗ ಸಂಸ್ಕøತಿಗಳಿಗೆ ಅವಶ್ಯಕವಾಗಿದ್ದ ಕಲ್ಲುಗಳು ಇವೆ. ಆ ಪ್ರದೇಶದಲ್ಲಿ ಈವರೆಗೆ ಹೆಚ್ಚಿನ ಭೂಶೋಧನೆಗಳು ನಡೆದಿಲ್ಲವಾದರೂ ಮಧ್ಯಶಿಲಾಯುಗ ಮತ್ತು ಅನಂತರಕಾಲದ ಅವಶೇಷಗಳು ಅಲ್ಲಲ್ಲಿ ಕಂಡುಬಂದಿದೆ. ಶಿಲಾಯುಗದ ಸಂಸ್ಕøತಿಗಳ ದೃಷ್ಟಿಯಿಂದ ಮುಖ್ಯವಾದ ಉತ್ತರ ಭಾಗದಲ್ಲೂ ಪ್ರಾಚೀನ ಶಿಲಾಪದರಗಳಿವೆ. ಅಲ್ಲಿ ಕೆಲವು ಮುಖ್ಯ ಶಿಲಾಯುಗ ನೆಲೆಗಳು ಕಂಡುಬಂದಿವೆ.

ಬಂಕುರಾ, ಪುರುಲಿಯಾ, ಬೀರ್‍ಭೂಮ್ ಮತ್ತು ಮಿಡ್ನಾಪುರ ಜಿಲ್ಲೆಗಳಲ್ಲಿ ಆದಿ ಶಿಲಾಯುಗದ ವಿವಿಧ ಹಂತಗಳಿಗೆ ಸೇರುವ ಕೈಗೊಡಲಿ ಮತ್ತು ಕ್ಲೀವರ್ ಕೊಡಲಿ, ಕ್ಲಾಕ್ಟೋನಿಯನ್ ಮತ್ತು ಲೆವಾಲ್ವಾಸಿಯನ್ ರೀತಿಯ ಚಕ್ಕೆ ಕಲ್ಲಿನ ಆಯುಧಗಳು ಸಿಕ್ಕಿವೆ. ಆದಿಮಾನವ ಭಾರತದ ಇತರ ಪ್ರದೇಶಗಳಲ್ಲಿದ್ದಂತೆ ಅಲ್ಲೂ ವಾಸಮಾಡುತ್ತಿದ್ದನೆಂದು ಅದರಿಂದ ತಿಳಿದುಬರುತ್ತದೆ. ಅನಂತರ ಕಾಲದ ಮಧ್ಯಶಿಲಾಯುಗ ಸಂಸ್ಕøತಿಗೆ ಸೇರುವ, ಚಕ್ಕೆ ಕಲ್ಲಿನ ಆಯುಧಗಳು ಬೀರ್‍ಭೂಮ್ ಮತ್ತು 24 ಪರಗಣ ಜಿಲ್ಲೆಯ ಕೆಲವು ನೆಲೆಗಳಲ್ಲಿ ಕಂಡುಬಂದಿವೆ. ಅದಿ ಮತ್ತು ಮಧ್ಯಶಿಲಾಯುಗಗಳ ಅವಶೇಷಗಳು ಇಲ್ಲಿಯ ನದಿ ಪದರಗಳಲ್ಲಿ ಅನಂತರಕಾಲದ ಅವಶೇಷಗಳನ್ನೊಳಗೊಂಡಿರುವ ಪದರಗಳ ಕೆಳಗೆ ದೊರಕಿರುವುದರಿಂದಲೂ ಭಾರತದ ಇತರ ಪ್ರದೇಶಗಳಲ್ಲಿ ಅಂಥ ಅವಶೇಷಗಳೊಂದಿಗೆ ಸಿಕ್ಕಿರುವ ಪ್ರಾಣಿಗಳ ಪಳೆಯುಳಿಕೆಗಳ ಅಧ್ಯಯನದಿಂದಲೂ ಅಂಥ ಅವಶೇಷಗಳನ್ನು ಅನುಕ್ರಮವಾಗಿ ಮಧ್ಯ ಮತ್ತು ಅಂತ್ಯ ಪ್ಲೀಸ್ಟೋಸೀನ್ ಕಾಲಕ್ಕೆ ನಿರ್ದೇಶಿಸಬಹುದು. ಪಶ್ಚಿಮ ಬಂಗಾಲದ ಶಿಲಾಯುಗಮಾನವನ ಪರಿಸರ ಮತ್ತು ಸಾಂಸ್ಕøತಿಕ ಸಿದ್ಧತೆ ಇವುಗಳ ದೃಷ್ಟಿಯಿಂದ ಇವರ ಜೀವನ ರೀತಿನೀತಿಗಳು ಆಗಿನ ಭಾರತದ ಇತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದವರನ್ನು ಹೋಲುತ್ತಿದ್ದುವೆಂದು ನಿಸ್ಸಂದೇಹವಾಗಿ ಹೇಳಬಹುದು.

ಹೊಲೊಸೀನ್ ಯುಗದ ಪ್ರಾರಂಭದ ಕಾಲಕ್ಕೆ ಸೇರುವ ಅಂತ್ಯಶಿಲಾಯುಗ ಅಥವಾ ಸೂಕ್ಷ್ಮಶಿಲಾಯುಧ ಸಂಸ್ಕøತಿಯ ಅವಶೇಷಗಳ ಬರ್ದ್‍ವಾನ್ ಜಿಲ್ಲೆಯಲ್ಲಿ ದಾಮೋದರ ನದಿ ಕಣಿವೆಯ ಕೆಲವೆಡೆಗಳಲ್ಲಿ ಕಂಡುಬಂದಿವೆ. ಅವುಗಳಲ್ಲಿ ಪ್ರಮುಖ ನೆಲೆ ದುರ್ಗಾಪುರದ ಬಳಿ ಇರುವ ಬೀರ್‍ಭಾನ್‍ಪುರ. 1937ರಲ್ಲಿ ಎನ್.ಜೆ. ನುಜುಲ್‍ದಾರ್ ಅಲ್ಲಿ ಸೂಕ್ಷ್ಮಶಿಲಾಯುಧಗಳನ್ನು ಪತ್ತೆ ಹಚ್ಚಿದರು. 1954 ಮತ್ತು 1957ರಲ್ಲಿ ಬಿ.ಬಿ.ಲಾಲ್ ಅಲ್ಲಿ ಸಂಶೋಧನೆಗಳನ್ನು ನಡೆಸಿ ಆ ಸಂಸ್ಕøತಿಯ ವಿವರಗಳನ್ನು ದೊರಕಿಸಿದ್ದಾರೆ. ಪ್ರಾಚೀನ ನದಿ ಮಟ್ಟದ ಮೇಲೆ ಹಳ್ಳದಿಬ್ಬಗಳಿಂದ ಕೂಡಿದ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಾನವರು ಕೊರಲಗು ಫಲಕಗಳನ್ನೂ (ಬ್ಲೇಡ್ಸ್) ಮುಕ್ಕೋಣಾಕಾರದ, ಅರ್ಧಚಂದ್ರಾಕೃತಿಯ ಮತ್ತು ಚೂಪಾದ ತುದಿಗಳಿದ್ದ ಆಯುಧಗಳನ್ನೂ ಹೆರೆಯುವ ಮತ್ತು ಕೊರೆಯುವ ಸಲಕರಣೆಗಳನ್ನೂ ಬಳಸುತ್ತಿದ್ದರು. ಅವರ ಗುಡಿಸಿಲುಗಳ ಆಕಾರ, ಆಗಿನ ವಾತಾವರಣದ ಪರಿಸ್ಥಿತಿ ಇವುಗಳ ಬಗ್ಗೆಯೂ ಕೆಲವು ಮಾಹಿತಿಗಳು ದೊರಕಿವೆ. ಸಂತಾಲ್ ಪರಗಣ, ಬಂಕುರಾ ಮತ್ತು ಬರ್ದ್‍ವಾನ್ ಜಿಲ್ಲೆಯ ಹಲವೆಡೆಗಳಲ್ಲಿ ಈ ಸಂಸ್ಕøತಿಯ ನೆಲೆಗಳು ಕಂಡುಬಂದಿವೆ. ಈ ಸಂಸ್ಕøತಿಯ ಕಾಲವನ್ನು ಕ್ರಿ.ಪೂ. ಸುಮಾರು 4000-1500 ಎಂದು ನಿರ್ಣಯಿಸಲಾಗಿದೆ.

ನವಶಿಲಾಯುಗ-ತಾಮ್ರಶಿಲಾಯುಗ ಸಂಸ್ಕøತಿಗಳು ಪಶ್ಚಿಮ ಬಂಗಾಲದ ಬಂಕುರಾ, ಬೀರ್‍ಭೂಮ್, ಪುರುಲಿಯಾ ಮತ್ತು ಮಿಡ್ನಾಪುರ ಜಿಲ್ಲೆಗಳಲ್ಲಿ ಪ್ರಸರಿಸಿದ್ದುವು. ಅಲ್ಲಿ ಈ ಸಂಸ್ಕøತಿಗಳು ಭಾರತದ ಇತರ ಪ್ರದೇಶಗಳಲ್ಲಿ ಕಂಡುಬಂದಿರುವ ಅಂಥ ಸಂಸ್ಕøತಿಗಳಿಗಿಂತ ಸ್ವಲ್ಪ ಭಿನ್ನವಾಗಿದ್ದುವು. ಆಂಧ್ರ ಕರ್ನಾಟಕಗಳ ನವಶಿಲಾ ಯುಗ ಮತ್ತು ಪಶ್ಚಿಮ ಮಧ್ಯಭಾರತದ ತಾಮ್ರಶಿಲಾಯುಗ ಸಂಸ್ಕøತಿಗಳು ದೂರದ ಈ ಗಡಿ ಪ್ರದೇಶಕ್ಕೆ ತಲುಪುವುದರಲ್ಲಿ ಹಲವಾರು ಪ್ರಾದೇಶಿಕ ಪ್ರಭಾವಗಳಿಗೆ ಸಿಕ್ಕಿದ್ದು ಈ ಭಿನ್ನತೆಗೆ ಕಾರಣ. ಬಹುಶಃ ಅದೇ ಕಾರಣದಿಂದ ಅವು ಸ್ವಲ್ಪ ಈಚಿನ ಕಾಲಕ್ಕೆ ಸೇರುತ್ತವೆ. ಬರ್ದ್‍ವಾನ್ ಜಿಲ್ಲೆಯ ಪಾಂಡುರಾಜರ್ ಧೀಬಿಯಲ್ಲಿ ಆ ಸಂಸ್ಕøತಿಯ ಕಾಲದಲ್ಲಿ ಬತ್ತದ ಬೇಸಾಯ ಪ್ರಮುಖ ಆಹಾರೋತ್ಪಾದನ ಚಟುವಟಿಕೆಯಾಗಿದ್ದ, ಮತ್ತು ಆ ಜನರು ಚೀನ ಮತ್ತು ಆಗ್ನೇಯ ಏಷ್ಯ ಪ್ರದೇಶಗಳೊಂದಿಗೆ ಸಂಪರ್ಕ ಪಡೆದಿದ್ದ ಸಂಗತಿಗಳು ಅಲ್ಲಿ ನಡೆದ ಸಂಶೋಧನೆಗಳಿಂದ ವ್ಯಕ್ತಪಟ್ಟಿವೆ. ನಾಯಕರ ಹಿಡಿತದಲ್ಲಿದ್ದ ಸಣ್ಣ ಪಂಗಡಗಳಲ್ಲಿ ಅವರು ವಾಸಿಸುತ್ತಿದ್ದಿರಬಹುದು. ಬೀರ್‍ಭೂಮ್ ಜಿಲ್ಲೆಯ ಮಹಿಸ್‍ದಲ್, ನಾನೂರ್ ಮತ್ತು ಹರಿಯಾಪುರ, ಬಂಕುರಾ ಜಿಲ್ಲೆಯ ತುಳಸಿಪುರ ಮತ್ತು ಕೆಲವು ನೆಲೆಗಳು, ಮಿಡ್ನಾಪುರ ಪರಿಸರ-ಇವುಗಳಲ್ಲಿ ಆ ಸಂಸ್ಕøತಿಯ ಮಾಹಿತಿಗಳು ದೊರಕಿವೆ. ಇಡೀ ಪ್ರದೇಶದ ಸಾಂಸ್ಕøತಿಕ ಲಕ್ಷಣಗಳು ಮೂಲತಃ ಒಂದೇ ರೀತಿಯವಾಗಿದ್ದರೂ ಆಯುಧ ರೀತಿ ಮತ್ತು ಸಲಕರಣೆಗಳಲ್ಲಿ ಅಲ್ಲಲ್ಲಿ ಕೆಲವು ವ್ಯತ್ಯಾಸಗಳಿದ್ದವು. ಉದಾಹರಣೆಗೆ ವರ್ಣಚಿತ್ರಿತ ಅಥವಾ ಅಲಂಕಾರರಹಿತವಾದ ಕಪ್ಪು ಮತ್ತು ಕೆಂಪು ಬಣ್ಣದ ಹೊಳೆಯುವ ಕೆಂಪು ಬಣ್ಣದ ಮತ್ತು ಜಾರು ನಳಿಕೆಯ ಸುಟ್ಟ ಮಣ್ಣಿನ ಪಾತ್ರೆಗಳು, ನಯಗೊಳಿಸಿದ ಕಲ್ಲಿನ ಆಯುಧಗಳು ಮೊದಲಾದ ಸಲಕರಣೆಗಳು ಎಲ್ಲೆಡೆಗಳಲ್ಲೂ ಕಂಡುಬಂದರೂ, ಪ್ರತಿ ಪಂಗಡದ ಅನುವಂಶಿಕ ವೈವಿಧ್ಯದಿಂದಾಗಿ ಅವುಗಳ ಸಾಂಸ್ಕøತಿಕ ಜೀವನದಲ್ಲಿ ಕೆಲವು ಭಿನ್ನತೆಗಳು ಕಂಡುಬರುತ್ತವೆ. ಪಾಂಡುರಾಜರ್ ಧೀಬಿ ನೆಲೆಯಲ್ಲಿ ಈ ಜನರು ಗಟ್ಟಿಸಿದ ನೆಲಗಟ್ಟು ಮತ್ತು ಕೆಸರು ಬಳಿದ ತಡಿಕೆ ಗೋಡೆಗಳಿದ್ದ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು. ಸಗಣಿ ಮತ್ತು ಸುಣ್ಣವನ್ನು ಸಹ ತಡಿಕೆ ಗೋಡೆಗಳಿಗೆ ಲೇಪಿಸಿದ್ದುದಕ್ಕೆ ಮಾಹಿತಿಗಳಿವೆ. ಮರದ ಕಂಬಗಳ ಆಧಾರದ ಮೇಲೆ ನಿಂತಿದ್ದ ಚಾವಣೆಗೆ ಹುಲ್ಲು ಅಥವಾ ಸಣ್ಣ ಹೆಂಚುಗಳನ್ನು ಹೊದಿಸಲಾಗುತ್ತಿತ್ತು. ಮನೆಗಳಲ್ಲಿ ಅಡುಗೆ ಒಲೆಗಳ ಅವಶೇಷಗಳನ್ನು ಗುರುತಿಸಲಾಗಿದೆ. ಒಂದೇ ಕೋಣೆಯ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದ ಈ ಜನರು ಹಲವು ರೀತಿಯ ಮಡಕೆಕುಡಿಕೆಗಳನ್ನು ಬಳಸುತ್ತಿದ್ದರು. ಬತ್ತದ ಹೊಟ್ಟನ್ನು ಜೇಡಿಮಣ್ಣಿನೊಂದಿಗೆ ಕಲೆಸಿ ಕೈಯಿಂದ ರೂಪಿಸಿದ, ದಪ್ಪ, ಬೂದು ಬಣ್ಣದ ಇಲ್ಲವೇ ಕುಂಬಾರ ಚಕ್ರದ ಮೇಲೆ ತಯಾರಿಸಿದ, ಅಲಂಕಾರರಹಿತವಾದ ತೆಳ್ಳನೆಯ, ತಿಳಿಕೆಂಪಿನ ಮತ್ತು ಕಪ್ಪು-ಕೆಂಪು ಬಣ್ಣದ ಪಾತ್ರೆಗಳನ್ನು ಮೊದಲಿಗೆ ಬಳಸುತ್ತಿದ್ದರು. ಕುಂಬಾರ ಚಕ್ರದ ಮೇಲೆ ನಾಜೂಕಾಗಿ ತಯಾರಿಸಿದ ವರ್ಣಚಿತ್ರಮಯವಾದ ವಿವಿಧ ಆಕಾರಗಳ ಮಡಿಕೆಕುಡಿಕೆಗಳ, ಜಾರುನಳಿಕೆಯ ಮತ್ತು ತಳಭಾಗದಲ್ಲಿ ರಂಧ್ರಗಳಿದ್ದ ಪಾತ್ರೆಗಳು ಇವನ್ನು ಅವರು ಅನಂತರ ಬಳಸುತ್ತಿದ್ದರು. ಇವು ಅವರ ಸಂಪದ್ಯುಕ್ತಧಾರ್ಮಿಕ ಜೀವನ ಮತ್ತು ಆಹಾರ ತಯಾರಿಕಾ ಪದ್ಧತಿಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತವೆ. ಅವರು ಪಾತ್ರೆಗಳ ವರ್ಣಮಯ ಚಿತ್ರಗಳಿಗೆ ಸರಳ ರೇಖಾವಿನ್ಯಾಸಗಳನ್ನು ಬಳಸುತ್ತಿದ್ದರು. ತಾಮ್ರದ ಸರಳ ಅಥವಾ ಅಲಂಕೃತ ಬಳೆಗಳು, ಬೆರಳುಂಗುರ, ಉಗುರು ಕತ್ತರಿ, ಕಾಡಿಗೆ ಕಡ್ಡಿ, ಮಣಿಗಳು, ಬಾಣದ ಮೊನೆಗಳು, ಈಟಿಮೊನೆ, ಚಪ್ಪಟೆಯಾದ ಬಾಚಿ ಅಥವಾ ಮಚ್ಚುಕತ್ತಿ ಮೊದಲಾದ ಸಲಕರಣೆಗಳು ಆ ಕಾಲದ ಉತ್ತರಾರ್ಧದಲ್ಲಿ ಬಳಕೆಯಲ್ಲಿದ್ದುದರಿಂದ ಅವರಿಗೆ ಲೋಹಗಾರಿಕೆಯಲ್ಲಿದ್ದ ಪರಿಶ್ರಮವನ್ನು ಊಹಿಸಬಹುದು. ಸೂಕ್ಷ್ಮ ಶಿಲಾಯುಧಗಳೂ ವೈವಿಧ್ಯಪೂರ್ಣವಾಗಿವೆ. ಕಲ್ಲಿನ ನಯಗೊಳಿಸಿದ ಆಯುಧಗಳು ದೊರಕಿವೆಯಾದರೂ ಅವು ಅನಂತರ ಕಾಲದವೆಂದು ಶಂಕಿಸಲಾಗಿದೆ. ಮೂಳೆಯಿಂದ ತಯಾರಿಸಿದ ಆಯುಧಗಳೂ ಆಗ ಬಳಕೆಯಲ್ಲಿದ್ದುವು. ಅಕ್ಕಿ, ಮೀನು, ಕಾಡು ಹಸು, ಜಿಂಕೆ ಮತ್ತು ಹಂದಿಗಳನ್ನು ಅವರು ಆಹಾರವಾಗಿ ತಿನ್ನುತ್ತಿದ್ದರು. ಈ ಸಂಸ್ಕøತಿಗಳನ್ನು ಕ್ರಿ.ಪೂ 1200-ಕ್ರಿ,ಪೂ 800ರ ಕಾಲಕ್ಕೆ ನಿರ್ದೇಶಿಲಾಗಿದೆ.

ಕಬ್ಬಿಣದ ಯುಗ ಬದಲಾಯಿಸಿ

ಕಬ್ಬಿಣ ಯುಗದ ಕಾಲದಲ್ಲಿ ಆ ಮೊದಲಿಗಿಂತಲೂ ಜೀವನ ರೀತಿ ಬಹುಮಟ್ಟಿಗೆ ಸುಧಾರಿಸಿತು. ಪಾಂಡುರಾಜರ್ ಧಿ. ಬಿ. ಮಹಿಸ್‍ದಲ್ ಮುಂತಾದೆಡೆಗಳಲ್ಲಿ ನಡೆದಿರುವ ಉತ್ಖನನಗಳಲ್ಲಿ ತಾಮ್ರ ಮತ್ತು ಕಬ್ಬಿಣದ ಅದುರನ್ನು ಕರಗಿಸಲು ಉಪಯೋಗಿಸುತ್ತಿದ್ದ ಕುಲುಮೆಗಳೂ ದೊರಕಿವೆ. ಅಲ್ಲಿಯ ಗೃಹೋಪಯೋಗಿ ವಸ್ತುಗಳು ಹೆಚ್ಚು ಪ್ರಗತಿಪರವಾಗಿವೆ. ವ್ಯವಸಾಯಕ್ರಮದಲ್ಲಿ, ಗೃಹನಿರ್ಮಾಣ ವಿಧಾನಗಳಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಸತ್ತವರ ದೇಹಗಳನ್ನು ಗುಳಿಗಳಲ್ಲಿ ಪೂರ್ಣವಾಗಿ ಅಥವಾ ಆಂಶಿಕವಾಗಿ, ಅಥವಾ ಶವಜಾಡಿಗಳಲ್ಲಿ ಹೂಳೂತ್ತಿದ್ದರು. ಆ ಸುಮಾರಿಗೆ ಬರವಣಿಗೆ ಮತ್ತು ನಾಣ್ಯ ಪದ್ಧತಿ ರೂಢಿಗೆ ಬಂದು, ಸುವ್ಯವಸ್ಥಿತ ರಾಜ್ಯಪದ್ಧತಿ ನೆಲೆಸಿತ್ತು. ಕಬ್ಬಿಣ ಯುಗದ ಸಂಸ್ಕøತಿ ಕ್ರಿ,ಪೂ 700ರಿಂದ ಪ್ರಾರಂಭವಾಯಿತೆಂದು ಹೇಳಲಾಗಿದೆ. ಇತಿಹಾಸ : ವೇದೋಪನಿಷತ್ತುಗಳ ಕಾಲದ ಪಶ್ಚಿಮ ಬಂಗಾಲದ ಇತಿಹಾಸದ ಬಗ್ಗೆ ನಮಗೆ ಮಾಹಿತಿಗಳು ಲಭ್ಯವಾಗಿಲ್ಲ. ಆ ಸಮಯದ ಜನಜೀವನ ರೀತಿಯನ್ನು ಆಗಿನ ಪ್ರಾಗೈತಿಹಾಸಿಕ ಸಂಸ್ಕøತಿಗಳ ಸಮೀಕ್ಷೆಯಿಂದ ತಿಳಿಯಬಹುದು. ಕ್ರಿ.ಪೂ 7ನೆಯ ಶತಮಾನದ ವೇಳೆಗೆ ಆ ಪ್ರದೇಶದಲ್ಲಿ ಗೌಡ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ಕ್ರಿ.ಪೂ 5-4ನೆಯ ಶತಮಾನಗಳಲ್ಲಿ ಪಶ್ಚಿಮ ಬಂಗಾಲ ಮಗಧ ಸಾಮ್ರಾಜ್ಯದಲ್ಲಿ ಸೇರಿತ್ತು. ತರುವಾಯ ಅದು ಮೌರ್ಯ ಸಾಮ್ರಾಜ್ಯದಲ್ಲಿ ಅಡಕವಾಯಿತು. ಮತ್ತೆ ಕ್ರಿ,ಶ 4ನೆಯ ಶತಮಾನದ ಆದಿಭಾಗದಲ್ಲಿ ಗುಪ್ತ ಸಾಮ್ಯಾಜ್ಯದೊಂದಿಗೆ ಸೇರುವವರೆಗಿನ ಬಂಗಾಲದ ಇತಿಹಾಸ ಗೊತ್ತಿಲ್ಲ.

ಗುಪ್ತ ಸಾಮ್ರಾಜ್ಯ ಬದಲಾಯಿಸಿ

ಸಮುದ್ರಗುಪ್ತ ಬಂಕುರಾ ಜಿಲ್ಲೆಯಲ್ಲಿ ಆಳುತ್ತಿದ್ದ ಚಂದ್ರವರ್ಮನನ್ನು ಸೋಲಿಸಿ ಅದನ್ನು ತನ್ನ ಆಧಿಪತ್ಯಕ್ಕೆ ಸೇರಿಸಿಕೊಂಡ ಮೇಲೆ ಆ ಪ್ರದೇಶ ಗುಪ್ತ ದೊರೆಗಳ ವಶದಲ್ಲಿ ಮುಂದುವರಿಯಿತು. ಮತ್ತೆ 507ರ ಸುಮಾರಿಗೆ ಗೋಪಚಂದ್ರ ಒಂದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದುದಾಗಿ ತಿಳಿದುಬರುತ್ತದೆ. ಆ ವಂಶದ ಗೋಪಚಂದ್ರ, ಧರ್ಮಾದಿತ್ಯ ಮತ್ತು ಸಮಾಚಾರದೇವ ಇವರು ಮಹಾರಾಜಾಧಿರಾಜ ಎಂಬ ಬಿರುದು ಧರಿಸಿದ್ದರು. 550ರವರೆಗೆ ಆಳಿದ ಆ ವಂಶದವರು ಗುಪ್ತರ ನಾಣ್ಯಗಳ ಅನುಕರಣೆಯ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಉತ್ತರಕಾಲೀನ ಗುಪ್ತ ಚಕ್ರವರ್ತಿ 6ನೆಯ ಶತಮಾನದಂತ್ಯದಲ್ಲಿ ಅಧಿಕಾರ ಕಳೆದುಕೊಂಡಾಗ ಗೌಡ ದೇಶದಲ್ಲಿ ಪ್ರಸಿದ್ಧಿಗೆ ಬಂದ ಶಶಾಂಕ ಬಂಗಾಲದ ಇತಿಹಾಸದಲ್ಲಿ ಹೆಸರಾದ ದೊರೆ. ಅವನ ರಾಜಧಾನಿ ಕರ್ಣಸುವರ್ಣ (ಈಗಿನ ಮುರ್ಷಿದಾಬಾದ್ ಜಿಲ್ಲೆಯ ರಂಗಮಾತಿ). ಬಂಗಾಲದ ಹೆಚ್ಚು ಭಾಗ, ಮಗಧ ಮತ್ತು ಒರಿಸ್ಸಾದ ಹಲವು ಪ್ರದೇಶಗಳು ಅವನ ವಶದಲ್ಲಿದ್ದುವು. ಪೂರ್ವದಲ್ಲಿ ಕಾಮರೂಪದ ಭಾಸ್ಕರವರ್ಮ ಮತ್ತು ಪಶ್ಚಿಮದಲ್ಲಿ ಕನೌಜಿನ ದೊರೆ ಮೌಖರಿ ವಂಶದ ಗ್ರಹವರ್ಮ ಅವನ ಮುಖ್ಯ ಶತ್ರುಗಳು. ಈ ಕಾರಣದಿಂದ ಅವನು ಮಾಲ್ವದ ದೇವಗುಪ್ತನೊಂದಿಗೆ ಮೈತ್ರಿ ಬೆಳೆಸಿದ. ಶಶಾಂಕ ಮತ್ತು ದೇವಗುಪ್ತರು ಕೂಡಿ ಯುದ್ಧದಲ್ಲಿ ಗ್ರಹವರ್ಮನನ್ನು ಕೊಂದಾಗ, ಗ್ರಹವರ್ಮನೊಂದಿಗೆ ವಿವಾಹ ಸಂಬಂಧ ಹೊಂದಿದ ಸ್ಥಾಣೇಶ್ವರದ ಪುಷ್ಯಭೂತಿ ಮನೆತನದೊಂದಿಗೆ ಶಶಾಂಕನ ಹಗೆತನ ಬೆಳೆಯಿತು. ತನ್ನ ಭಾವನ ಸಹಾಯಕ್ಕೆ ಧಾವಿಸಿ, ಆ ವಂಶದ, ರಾಜ್ಯವರ್ಧನನನ್ನು ಮೋಸದಿಂದ ಶಶಾಂಕ 666ರಲ್ಲಿ ಕೊಲ್ಲಿಸಿದನೆಂದು ಹೇಳಲಾಗಿದೆ. ತನ್ನ ಅಣ್ಣನ ಕೊಲೆಯ ಸೇಡು ತೀರಿಸಿಕೊಳ್ಳಲು ಹರ್ಷವರ್ಧನ ಪ್ರತಿಜ್ಞೆ ಮಾಡಿದುದಾಗಿ ಹೇಳಲಾಗಿದ್ದರೂ ಹರ್ಷ ಮತ್ತು ಶಶಾಂಕರ ನಡುವೆ ನೇರ ಹೋರಾಟ ನಡೆದ ಬಗ್ಗೆ ಮಾಹಿತಿಗಳಿಲ್ಲ. ಶಶಾಂಕ 619ರ ವರೆಗೆ ಆಳುತ್ತಿದ್ದುದಾಗಿ ತಿಳಿದುಬಂದಿದೆ. ಅವನು ಬಹುಶಃ 636-37ರ ವರೆಗೂ ಗೌಡಾಧಿಪನಾಗಿದ್ದನೆಂದು ಹ್ಯುಯೆನ್ ತ್ಸಾಂಗನ ಬರವಣಿಗೆಗಳಿಂದ ಊಹಿಸಲಾಗಿದೆ. ಆದರೆ ಅದು ಸಂದೇಹಾಸ್ಪದ, ಬಂಗಾಲವನ್ನು ಸ್ವತಂತ್ರಗೊಳಿಸಿದುದಲ್ಲದೆ, ಬಿಹಾರ ಒರಿಸ್ಸಗಳಲ್ಲೂ ತನ್ನ ಪ್ರಭಾವ ಬೀರಿದ ಕೀರ್ತಿ ಅವನಿಗೆ ಸಲ್ಲುತ್ತದೆ.

ಅವನ ತರುವಾಯ ಪಶ್ಚಿಮ ಬಂಗಾಲದಲ್ಲಿ ಕರ್ಣಸುವರ್ಣ, ತಾಮ್ರಲಿಪ್ತಿ ಮತ್ತು ಪುಂಡ್ರವರ್ಧನ ಎಂಬ ಸ್ವತಂತ್ರರಾಜ್ಯಗಳಿದ್ದುವು. ಆದರೆ ಆಂತರಿಕ ಕಲಹಗಳು ಹೆಚ್ಚಿದ್ದುವು. ಅರಾಜಕತೆ ವ್ಯಾಪಕವಾಗಿತ್ತು. ತರುವಾಯ ಜಯನಾಗನೆಂಬುವನು ಒಂದು ಸ್ವತಂತ್ರ ರಾಜ್ಯ ಸ್ಥಾಪಿಸಿದ. ಅವನ ಕಾಲಮಾನ ನಿರ್ದಿಷ್ಟವಲ್ಲದಿದ್ದರೂ ಕಾಮರೂಪದ ಭಾಸ್ಕರವರ್ಮನ ಮರಣಾನಂತರ ಅವನು ಅಧಿಕಾರಕ್ಕೆ ಬಂದಿರಬೇಕು. ತನ್ನ ರಾಜಧಾನಿಯಾದ ಕರ್ಣಸುವರ್ಣದಿಂದ ಹೊರಡಿಸಿದ ಶಾಸನದಿಂದ ಅವನಿಗೆ ಮಹಾರಾಜಾಧಿರಾಜನೆಂಬ ಬಿರುದಿದ್ದ ಸಂಗತಿ ತಿಳಿಯುತ್ತದೆ. ಅವನು ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದ್ದ. ಅವನು ಸಮರ್ಥ ದೊರೆಯಾಗಿದ್ದರೂ ಅವನ ಉತ್ತರಾಧಿಕಾರಿಗಳ ಮತ್ತು ರಾಜ್ಯವಿಸ್ತಾರದ ಬಗ್ಗೆ ಏನೂ ತಿಳಿದಿಲ್ಲ. 725-735ರ ನಡುವೆ ಯಶೋವರ್ಮನೆಂಬ ಸಮರ್ಥ ದೊರೆ ಆ ಪ್ರದೇಶದಲ್ಲಿ ಆಳುತ್ತಿದ್ದುದಾಗಿ ತಿಳಿದುಬಂದಿದೆ. ತರುವಾಯ ಪಶ್ಚಿಮಬಂಗಾಲ ಕಾಶ್ಮೀರದ ಲಲಿತಾದಿತ್ಯನ ವಶವಾಯಿತು. ಕಾಶ್ಮೀರದ ಜಯಾಪೀಡ ಸ್ವಲ್ಪ ಕಾಲಾನಂತರ ರಾಜ್ಯ ಕಳೆದುಕೊಂಡು ಪುಂಡ್ರವರ್ಧನಕ್ಕೆ ಬಂದು ಅಲ್ಲಿಯ ದೊರೆ ಜಯಂತನ ಮಗಳನ್ನು ವಿವಾಹವಾಗಿ, ಅವನ ರಾಜ್ಯ ವಿಸ್ತರಣೆಗೆ ಸಹಾಯ ನೀಡಿದ.

ಪಾಲ ವಂಶ ಬದಲಾಯಿಸಿ

ಅಂಥ ಅನಿಶ್ಚಿತ ಪರಿಸ್ಥಿತಿಯಿಂದ 750ರ ಪಾಲವಂಶದ ದೊರೆಗಳು ಬಂಗಾಲವನ್ನು ರಕ್ಷಿಸಿದರು. ತಮ್ಮ ನಾಡಿನ ಅನಾಯಕ ಪರಿಸ್ಥಿತಿಗಳನ್ನು ಕೊನೆಗೊಳಿಸಿ ಅದರ ಪುರೋಭಿವೃದ್ಧಿಗೆ ಶ್ರಮಿಸುವ ಉದ್ದೇಶದಿಂದ ಆ ಪ್ರದೇಶದ ಸಣ್ಣ ರಾಜರು ಒಗ್ಗೂಡಿ ಸಮರ್ಥನೂ ಧೀರನೂ ಆದ. ಪುಂಡ್ರವರ್ಧನದಲ್ಲಿ ಹುಟ್ಟಿ ವಂಗರಾಜ್ಯವನ್ನಾಳುತ್ತಿದ್ದ, ಗೋಪಾಲನನ್ನು (750-770) ತಮ್ಮ ಅಧಿರಾಜನನ್ನಾಗಿ ಆರಿಸಿದರು. ಅ ವಂಶದ ಅರಸರು 1155ರ ವರೆಗೂ ಆಳಿ, ಹಲವಾರು ಏರುಪೇರುಗಳನ್ನನುಭವಿಸಬೇಕಾಗಿ ಬಂದರೂ, ಬಂಗಾಲದ ಕೀರ್ತಿಧ್ವಜವನ್ನು ಎತ್ತಿಹಿಡಿದರು. ಧರ್ಮಪಾಲ (770-810) ಮತ್ತು ದೇವಪಾಲ (810-850) ಆ ವಂಶದ ಪ್ರಸಿದ್ಧ ದೊರೆಗಳು. ಅವರು ತಮ್ಮ ರಾಜ್ಯವನ್ನು ವಿಸ್ತಾರಗೊಳಿಸಿದರಲ್ಲದೆ ಇಡೀ ಉತ್ತರ ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಸಾಮಥ್ರ್ಯಗಳಿಸಿದ್ದರು. ಮೌಲ್ವದ ಪ್ರತೀಹಾರ ದೊರೆ ವತ್ಸರಾಜ ಮತ್ತು ರಾಷ್ಟ್ರಕೂಟ ಧ್ರುವನಿಂದ ಧರ್ಮಪಾಲ ಸೋತನಾದರೂ, ರಾಷ್ಟ್ರಕೂಟರಿಂದ ವತ್ಸರಾಜ ಸೋಲನ್ನನುಭವಿಸಿದ್ದರ ಫಲವಾಗಿ ಧರ್ಮಪಾಲ ಉತ್ತರಭಾರತದಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಯಿತು. ಧರ್ಮಪಾಲ ವತ್ಸರಾಜನ ಮಿತ್ರನಾದ ಇಂದ್ರಾಯುಧನನ್ನು ಕನೌಜಿನ ಸಿಂಹಾಸನದಿಂದ ಇಳಿಸಿ ತನ್ನ ಆಶ್ರಿತನಾದ ಚಕ್ರಾಯುಧನಿಗೆ ಸಿಂಹಾಸನ ಕೊಡಿಸಿದ. ಅವನತಿಕಾಲದಲ್ಲಿ ವತ್ಸರಾಜನ ಮಗ 2ನೆಯ ನಾಗಭಟ ಚಕ್ರಾಯುಧನನ್ನೂ ಅವನ ಸಹಾಯಕ್ಕೆ ಬಂದ ಧರ್ಮಪಾಲನನ್ನೂ ಸೋಲಿಸಿದ. ರಾಷ್ಟ್ರಕೂಟ 3ನೆಯ ಗೋವಿಂದ ಮತ್ತೆ ಉತ್ತರ ಭಾರತದ ರಾಜಕೀಯದಲ್ಲಿ ಪ್ರವೇಶಿಸಿ ನಾಗಭಟನನ್ನು ಸೋಲಿಸಿದ. ಧರ್ಮಪಾಲ ಮತ್ತು ಚಕ್ರಾಯುಧರು ಅವನಿಗೆ ಶರಣಾದರು. ದೂರದ ದಖನ್ನಿನ ರಾಷ್ಟ್ರಕೂಟರ ಸಾರ್ವಭೌಮತ್ವವನ್ನೊಪ್ಪಿಕೊಂಡಿದ್ದರಿಂದ ಧರ್ಮಪಾಲನಿಗೆ ನಿಜಕ್ಕೂ ಯಾವ ತೊಂದರೆಯೂ ಉಂಟಾಗಲಿಲ್ಲ. ದೇವಪಾಲ ಸಿಂಹಾಸನವನ್ನೇರಿದ ಅನಂತರ ಅಸ್ಸಾಮ್, ಒರಿಸ್ಸ, ಹಿಮಾಲಯ ಪರ್ವತ ಪ್ರದೇಶಗಳು ಮತ್ತು ವಾಯವ್ಯಭಾರತದ ಕೆಲವು ಭಾಗಗಳನ್ನು ಗೆದ್ದು ತನ್ನ ರಾಜ್ಯವನ್ನು ವಿಸ್ತರಿಸಿದ. ಅವನು ದಕ್ಷಿಣದ ಪಾಂಡ್ಯ ಶ್ರೀಮಾರ ಶ್ರೀವಲ್ಲಭನನ್ನು ಸೋಲಿಸಿದನೆಂದು ಹೇಳಲಾಗಿದ್ದರೂ ಆ ಸಂಗತಿ ನಂಬಲರ್ಹವಲ್ಲ. ದೇವಪಾಲನ ಆಸ್ಥಾನಕ್ಕೆ ಸುಮಾತ್ರದ ಶೈಲೇಂದ್ರ ದೊರೆ ಬಾಲಪುತ್ತದೇವ ತನ್ನ ದೂತರನ್ನು ಕಳಿಸಿ ತಾನು ನಾಲಂದದಲ್ಲಿ ಕಟ್ಟಿಸಿದ್ದ ಬೌದ್ಧ ವಿಹಾರಕ್ಕೆ ಕೆಲವು ದತ್ತಿಗಳನ್ನು ಪಡೆದುಕೊಂಡ ಸಂಗತಿ ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಧರ್ಮಪಾಲ ಮತ್ತು ದೇವಪಾಲ ಬೌದ್ಧಧರ್ಮಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದುದಲ್ಲದೆ ವಿಕ್ರಮಶಿಲಾ ವಿದ್ಯಾಲಯವನ್ನು ಸ್ಥಾಪಿಸಿ ವೃದ್ಧಿಪಡಿಸಿದರು.

ದೇವಪಾಲನ ತರುವಾಯ ಪಾಲವಂಶ ಸ್ವಲ್ಪಕಾಲ ದುಃಸ್ಥಿತಿಗೊಳಗಾಗಿದ್ದು ಮತ್ತೆ 908ರಲ್ಲಿ ಚೇತರಿಸಿಕೊಂಡಿತು. 860ರ ಸುಮಾರಿನಲ್ಲಿ ರಾಷ್ಟ್ರಕೂಟರು ಮತ್ತೆ ಬಂಗಾಲದ ಮೇಲೆ ದಾಳಿ ನಡೆಸಿದರು. ಪ್ರತೀಹಾರರು ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡರು. ಕೆಲವು ಸಾಮಂತರಾಜರು ಸ್ವಾತಂತ್ರ್ಯ ಘೋಷಿಸಿಕೊಂಡರು. ಅಂಥ ಪರಿಸ್ಥಿತಿಯಲ್ಲಿ ರಾಷ್ಟ್ರಕೂಟ 2ನೆಯ ಕೃಷ್ಣ ಪ್ರತೀಹಾರರ ಬಲವನ್ನು ನಾಶಪಡಿಸಿದಾಗ ನಾರಾಯಣಪಾಲ ರಾಷ್ಟ್ರಕೂಟರ ಮೈತ್ರಿ ಬೆಳೆಸಿದ. ಕೃಷ್ಣನ ಮೊಮ್ಮಗಳನ್ನು ತನ್ನ ಮಗ ರಾಜ್ಯಪಾಲನಿಗೆ ವಿವಾಹಮಾಡಿ ಆ ಮೈತ್ರಿಯನ್ನು ಬಲಗೊಳಿಸಿದ. ಮತ್ತೆ ಬಲಹೀನಗೊಂಡ ಪಾಲರಾಜ್ಯವನ್ನು 1021ರಲ್ಲಿ ಚೋಳ 1ನೆಯ ರಾಜೇಂದ್ರ ಆಕ್ರಮಿಸಿ ಬಲಹೀನಗೊಂಡ ಪಾಲರಾಜ್ಯವನ್ನು 1021ರಲ್ಲಿ ಚೋಳ 1ನೆಯ ರಾಜೇಂದ್ರ ಆಕ್ರಮಿಸಿ ಮಹೀಪಾಲನನ್ನು ಸೋಲಿಸಿದ. 1068ರಲ್ಲಿ ಚಾಲುಕ್ಯ ವಿಕ್ರಮಾದಿತ್ಯ ವಿಗ್ರಹಪಾಲನನ್ನು ಸೋಲಿಸಿದರೂ ರಾಮಪಾಲನ (1077-1120) ಕಾಲದಲ್ಲಿ ಚೇತರಿಸಿಕೊಂಡ ಈ ವಂಶ 1155ರ ವರೆಗೂ ಬಂಗಾಲದ ಕೆಲವು ಭಾಗಗಳಲ್ಲಿ ಆಳುತ್ತಿತ್ತು.

ಪಾಲ ದೊರೆಗಳು ಬೌದ್ಧಮತಕ್ಕೆ ಪ್ರೋತ್ಸಾಹ ನೀಡಿ ನಾಲಂದ ಮತ್ತು ವಿಕ್ರಮ ಶಿಲಾ ವಿದ್ಯಾಲಯಗಳನ್ನು ವೃದ್ಧಿಗೊಳಿಸಿದರು. ಪ್ರಸಿದ್ಧ ಬೌದ್ಧ ಪಂಡಿತ ದೀಪಂಕರ ಶ್ರೀಜ್ಞಾನ ಅತಿಸ್ಸ ನಯಪಾಲನ ಕಾಲದಲ್ಲಿ ವಿಕ್ರಮ ಶಿಲೆಯ ಪ್ರಾಚಾರ್ಯನಾಗಿದ್ದು ಟಿಬೆಟ್ಟಿನ ದೊರೆಯ ಆಮಂತ್ರಣದ ಮೇರೆಗೆ ಆ ದೇಶಕ್ಕೆ ಹೋಗಿ ನೆಲೆಸಿ ಬೌದ್ಧ ಪ್ರಸಾರಕ್ಕೆ ಕಾರಣನಾದ. ಪಾಲ ದೊರೆಗಳು ಕಲೆಗೆ ಅಮಿತ ಪ್ರೋತ್ಸಾಹ ನೀಡಿದರು.

ಸೇನರು 1095ರಿಂದ ಪಾಲದೊರೆಗಳ ಸಾಮಂತರಾಗಿ ಪಶ್ಚಿಮ ಬಂಗಾಲದಲ್ಲಿ ಕ್ರಮೇಣ ಪ್ರಬಲರಾಗುತ್ತಿದ್ದರು. ಆ ವಂಶದ ಮೂಲ ಪುರುಷನಾದ ಸಾಮಂತಸೇನ ಕರ್ನಾಟಕದಿಂದ ಹೋಗಿ ರಾಢಾ ಪ್ರಾಂತ್ಯದಲ್ಲಿ ಸಣ್ಣ ರಾಜ್ಯ ಸ್ಥಾಪಿಸಿದ. ಅವನ ಮಗ ಹೇಮಂತಸೇನನ ಕಾಲದಲ್ಲಿ ಅವರ ಅಧಿಕಾರ ಬೆಳೆಯಿತು. 1095ರಲ್ಲಿ ಆ ಮನೆತನದ ಮೂರನೆಯ ದೊರೆ ವಿಜಯಸೇನ ಪಾಲದೊರೆ ರಾಮಪಾಲನನ್ನು ಸೋಲಿಸಿ ಬಂಗಾಲದ ಬಹುಭಾಗವನ್ನು ವಶಪಡಿಸಿಕೊಂಡ. ಮಾಲ್ವ, ಮಿಥಿಲಾ ಮತ್ತು ಕಾಮರೂಪಗಳು ಅವನ ದಾಳಿಗೆ ತುತ್ತಾದುವು. ಅವನ ದೀರ್ಘ ಆಳ್ವಿಕೆಯ ಅನಂತರ 1158ರಲ್ಲಿ ಸಿಂಹಾಸನವನ್ನೇರಿದ ವಲ್ಲಾಳಸೇನ ಉತ್ತಮ ಯೋಧ ಮತ್ತು ವಿದ್ಯಾಭಿಮಾನಿ; ಸ್ವತಃ ಎರಡು ಗ್ರಂಥಗಳನ್ನು ರಚಿಸಿದನೆಂದು ಹೇಳಲಾಗಿದೆ. ಇವನು ಚಾಲುಕ್ಯ ವಿಕ್ರಮಾದಿತ್ಯನ ಮಗಳು ರಾಮದೇವಿಯನ್ನು ವಿವಾಹವಾಗಿದ್ದ. ಮುಪ್ಪಿನಲ್ಲಿ ರಾಜ್ಯವನ್ನು ಮಗ ಲಕ್ಷ್ಮಣಸೇನನಿಗೆ ವಹಿಸಿ, ಪತ್ನಿಯೊಂದಿಗೆ ಧಾರ್ಮಿಕ ಜೀವನದಲ್ಲಿ ಕಾಲ ಕಳೆದನೆಂದು ಹೇಳಲಾಗಿದೆ. 1178ರಲ್ಲಿ ರಾಜ್ಯಭಾರ ವಹಿಸಿಕೊಂಡ ಲಕ್ಷ್ಮಣಸೇನ ಗಾಹಡವಾಲ ಚಂದ್ರನನ್ನು 1183-92ರ ನಡುವೆ ಹಲವು ಬಾರಿ ಸೋಲಿಸಿ ವಾಯವ್ಯ ಭಾರತದಲ್ಲಿ ತನ್ನ ಅಧಿಕಾರ ಸ್ಥಾಪಿಸಿದನಲ್ಲದೆ ಕಳಿಂಗ ದೇಶವನ್ನು ಗೆದ್ದನೆಂದು ಅವನ ಶಾಸನಗಳಿಂದ ತಿಳಿದುಬಂದಿದೆ. ಆದರೆ 1202ರಲ್ಲಿ ಇಖ್ತಿಯಾರ್-ಉದ್-ದೀನ್ ಮಹಮ್ಮದ್ ಖಿಲ್ಜಿಯ ನೇತೃತ್ವದಲ್ಲಿ ಬಂದ ಮುಸ್ಲಿಮರ ಸೈನ್ಯ ರಾಜಧಾನಿ ನದಿಯಾವನ್ನು ಆಕ್ರಮಿಸಿದಾಗ ಪೂರ್ವ ಬಂಗಾಲಕ್ಕೆ ಹಿನ್ನಡೆದು ಸ್ವಲ್ಪಕಾಲದ ಅನಂತರ ತೀರಿಕೊಂಡ.

ಸೇನ ದೊರೆಗಳು ಸಂಸ್ಕೃಂತ ಸಾಹಿತ್ಯಕ್ಕೆ ಆಶ್ರಯ ಕೊಟ್ಟಿದ್ದರು. ಕವಿ ಜಯದೇವ ಮತ್ತು ನ್ಯಾಯಶಾಸ್ತ್ರ ಪಂಡಿತ ಹಲಾಯುಧ ಇವರು ಸೇನ ದೊರೆಗಳ ಆಶ್ರಿತರು.

ಮುಸಲ್ಮಾನರ ಆಳ್ವಿಕೆ ಬದಲಾಯಿಸಿ

 
ಬ್ರಿಟಿಷ್ ಆಳ್ವಿಕೆಯಲ್ಲಿ ಕೊಲ್ಕಾತಾ

ಇಖ್ತಿಯಾರ್-ಉದ್-ದೀನ್ ಮಹಮ್ಮದ್ ಖಲ್ಜಿ(1202-1206) ಪಶ್ಚಿಮ ಬಂಗಾಲವನ್ನು ವಶಪಡಿಸಿಕೊಂಡ ಅನಂತರ ದೆಹಲಿ ಸುಲ್ತಾನರ ಅಧೀನನಾಗಿ ಆಳುತ್ತಿದ್ದಾಗ 1205ರಲ್ಲಿ ಟಿಬೆಟ್ಟಿನ ಮೇಲೆ ನಡೆಸಿದ ದಾಳಿ ವಿಫಲಗೊಂಡಿತು; 1206ರಲ್ಲಿ ಅವನು ತೀರಿಕೊಂಡ. ಅವನ ತರುವಾಯದ ಪ್ರಾಂತ್ಯಾಧಿಕಾರಿಗಳು ಆಗಾಗ್ಗೆ ದೆಹಲಿಯ ವಿರುದ್ಧ ಬಂಡೇಳುತ್ತಿದ್ದರು. 1280ರಲ್ಲಿ ತಘ್ರಿಲನ ನೇತೃತ್ವದಲ್ಲಿ ನಡೆದ ದಂಗೆಯನ್ನು ಸುಲ್ತಾನ್ ಬಲ್ಬನ್ ನಿಷ್ಕರುಣೆಯಿಂದ ಹತ್ತಿಕ್ಕಿದ. ಆದರೂ ಅವನತಿ ಕಾಲದಲ್ಲೇ ಬುಘ್ರಾಖಾನನ ದಂಗೆ ಫಲಕಾರಿಯಾಗಿ, ಅವನು ನಸೀರುದ್ದೀನ್ ಎಂಬ ಹೆಸರಿನಿಂದ ಸ್ವತಂತ್ರನಾಗಿ ಪಶ್ಚಿಮ ಬಂಗಾಲದ ಲಖ್ನೌತಿಯಿಂದ (ಮಾಲ್ಡಾ ಜಿಲ್ಲೆ) ಆಳತೊಡಗಿದ. 1291ರಲ್ಲಿ ರುಕ್ನುದ್ದೀನ್ ಕೈಕಾಉಸ್, 1301ರಲ್ಲಿ ಶಂಶುದ್ದೀನ್ ಫಿರೂಜ್ ಷಾ ಅಧಿಕಾರಕ್ಕೆ ಬಂದರು. ಫಿರೂಜ್ ಷಾನ ಕಾಲದಲ್ಲಿ ಪಾಂಡುವ ನಗರದ ಸ್ಥಾಪನೆಯಾಯಿತು. ಘಿಯಾಸ್-ಉದ್-ದೀನ್ ಬಹದೂರ್ ಷಾ 1322ರಲ್ಲಿ ಅಧಿಕಾರಕ್ಕೆ ಬಂದ. ಇವನು 1324ರಲ್ಲಿ ದೆಹಲಿಯ ತುಗಲಕ್ ಮಹಮದನ ಬಂದಿಯಾಗಿದ್ದು ಸ್ವಲ್ಪ ಕಾಲಾನಂತರ ಬಿಡುಗಡೆ ಹೊಂದಿ ದೆಹಲಿಯಿಂದ ಮರಳಿ ತನ್ನ ಅಧಿಕಾರವನ್ನು ಮತ್ತೆ ಪಡೆದ. 1366ರಲ್ಲಿ ಫಕ್ರುದ್ದೀನ್ ಮುಂಬಾರಕ್ ಷಾನ ನೇತೃತ್ವದಲ್ಲಿ ಪಶ್ಚಿಮ ಬಂಗಾಲ ಸ್ವತಂತ್ರವಾಯಿತು.

ಇಲಿಯಾಸ್ ಶಾಹಿ ಮನೆತನ ಬಂಗಾಲದಲ್ಲಿ 1345ರಿಂದ 1487ರ ವರೆಗೆ ಅಧಿಕಾರದಲ್ಲಿತ್ತು. ಶಂಶುದ್ದೀನ್ ಇಲಿಯಾಸ್ ಷಾ (1345-57) ಪೂರ್ವ ಬಂಗಾಲ, ತಿರ್ಹುತ್, ಒರಿಸ್ಸ ಮತ್ತು ವಾರಣಾಸಿ ಪ್ರದೇಶಗಳನ್ನು ವಶಪಡಿಸಿಕೊಂಡ. ಸಿಕಂದರ್ ಷಾ (1357-91) ಎರಡು ಬಾರಿ ದೆಹಲಿಯ ಸುಲ್ತಾನ ಫಿರೂಜ್ ಷಾ ಗುಗಲಕನ ವಿರುದ್ಧ ಹೋರಾಡಬೇಕಾದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡ. ಅವನ ಕಾಲದ ಅದೀನ ಮಸೀದಿ (1368) ಪಶ್ಚಿಮ ಬಂಗಾಲದ ಉತ್ತಮ ವಾಸ್ತು ನಿರ್ಮಾಣ. ಘಿಯಾಸುದ್ಧೀನ್ ಅಜರ್ಮ ಷಾನಿಂದ 1415ರಲ್ಲಿ ಹಿಂದೂ ಸರದಾರ ರಾಜಾ ಗಣೇಶ ಅಧಿಕಾರ ಕಸಿದುಕೊಂಡು ತನ್ನ ಮಗನನ್ನು ಸಿಂಹಾಸನಕ್ಕೆ ತಂದ. ಆದರೆ ಆ ಹೊಸ ರಾಜ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿ ಜಲಾಲುದ್ದೀನ್ ಎಂಬ ಹೆಸರಿನಿಂದ 1431ರ ವರೆಗೆ ಆಳಿದ. ಇಲಿಯಾಸ್ ಷಾಹಿ ವಂಶದ ನಸಿರುದ್ದೀನ್ ಮಹಮ್ಮದ್ ಷಾ (1437-1459) ಮತ್ತೆ ತನ್ನ ವಂಶವನ್ನು ಅಧಿಕಾರಕ್ಕೆ ತಂದ. ಆ ವಂಶದವರು 1487ರ ವರೆಗೆ ಆಳಿದರು. ಅನಂತರ ಅಧಿಕಾರಕ್ಕೆ ಬಂದ ಸಯ್ಯಿದ್ ಮನೆತನದಲ್ಲಿ (1493-1538) ಅಲ್ಲಾಉದ್ದೀನ್ ಹುಸೇನ್ ಷಾ ಪ್ರಮುಖ. ಆ ಸಮರ್ಥ ಸುಲ್ತಾನನ ಕಾಲದಲ್ಲಿ ರಾಜ್ಯದ ಸಂಪದಭಿವೃದ್ಧಿಯಾಯಿತು. ರಾಜ್ಯವಿಸ್ತಾರದೊಂದಿಗೆ ಸಾಹಿತ್ಯ ಸಾಂಸ್ಕøತಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ದೊರಕಿತು. ವೈಷ್ಣವ ಸಂತ ಚೈತನ್ಯನಿಗೆ ಆಶ್ರಯ ಸಿಕ್ಕಿತು.

ಮೊಗಲ್ ವಂಶದ ಸ್ಥಾಪಕ ಪಕ ಬಾಬರ್ 1526ರಲ್ಲಿ ಬಂಗಾಲವನ್ನು ವಶಪಡಿಸಿಕೊಂಡರೂ ಮತ್ತೆ ಅಲ್ಲಿ ಅನಾಯಕತ್ವದ ಪರಿಸ್ಥಿತಿ ಉಂಟಾಯಿತು. 1538ರಲ್ಲಿ ಹುಮಾಯೂನ್ ಬಂಗಾಲದ ಮೇಲೆ ದಾಳಿ ಮಾಡಿದಾಗ ಇದು ಕೊನೆಗೊಂಡಿತು. ಆದರೆ ಮರುವರ್ಷವೇ ಪಶ್ಚಿಮ ಬಂಗಾಲ ಸೇರಿದಂತೆ ಮೊಗಲ್ ಸಾಮ್ಯಾಜ್ಯವನ್ನು ಸೂರ್ ಮನೆತನದ ಷೇರ್ ಷಾ ಆಕ್ರಮಿಸಿಕೊಂಡ. ಸುಲೇಮಾನ್ ಕರ್ನಾನಿ 1564ರಲ್ಲಿ ಪಶ್ಚಿಮ ಬಂಗಾಲವನ್ನು ಸೂರ್ ಮನೆತನದಿಂದ ಗೆದ್ದುಕೊಂಡು ಹೆಸರಿಗೆ ಮಾತ್ರ ದೆಹಲಿ ಅಧಿಪತ್ಯವನ್ನು ಒಪ್ಪಿಕೊಂಡು ಸ್ವತಂತ್ರನಾದ. ಅಕ್ಬರ್ 1576ರಲ್ಲಿ ಪಶ್ಚಿಮ ಬಂಗಾಲವನ್ನು ಮೊಗಲರ ನೇರ ಆಡಳಿತಕ್ಕೆ ಸೇರಿಸಿಕೊಂಡ. ಮೊಗಲರ ಆಳ್ವಿಕೆಯಲ್ಲಿ ಆ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆಗಳು ನೆಲಸಿದ್ದುವು. ಅದೇ ಸಮಯದಲ್ಲಿ ಯೂರೋಪಿನ ವರ್ತಕರು ಅಲ್ಲಿ ತಮ್ಮ ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಿದರು. ದೆಹಲಿಯ ಆಡಳಿತ ಬಲಹೀನಗೊಂಡಾಗ ಅಲಿವರ್ದಿ ಖಾನ್ 1740ರಿಂದ ಹೆಚ್ಚು ಕಡಿಮೆ ಸ್ವತಂತ್ರನಾದ. ದಕ್ಷ ಮತ್ತು ಸಮರ್ಥ ಆಡಳಿತಗಾರನಾದ ಅಲಿವರ್ದಿವಿದೇಶಿ ವರ್ತಕರನ್ನು ಹಿಡಿತದಲ್ಲಿಟ್ಟುಕೊಂಡಿದ್ದ. ಅವರಲ್ಲಿ ಪೈಪೋಟಿಗೆ ಅವಕಾಶ ನೀಡಲಿಲ್ಲ. ಆ ವೇಳೆಗೆ ಮರಾಠರು ದಾಳಿ ಮಾಡಿದ್ದರು. ಅವರಿಗೆ ಅಧಿಕ ಹಣವನ್ನೂ ಒರಿಸ್ಸದ ಕೆಲವು ಭಾಗಗಳನ್ನೂ ಕೊಡಬೇಕಾಯಿತು. ಅವನ ಮಗ ಸಿರಾಜುದ್ದೌಲ (1756-1757) ಸಿಂಹಾಸನವನ್ನೇರಿದಾಗ ಇಂಗ್ಲಿಷರು ಪ್ರಬಲರಾದರು. ಇಂಗ್ಲಿಷರ ಸೈನ್ಯ ರಾಬರ್ಟ್ ಕ್ಲೈವ್ ಮತ್ತು ವಾಟ್ಸನರ ನೇತೃತ್ವದಲ್ಲಿ 1757ರ ಜನವರಿಯಲ್ಲಿ ಕಲ್ಕತ್ತೆಯನ್ನು ವಶಪಡಿಸಿಕೊಂಡಿತು. ಜೂನ್ 23ರಂದು ಪ್ಲಾಸಿ ಕದನಾನಂತರ ಸಿರಾಜುದ್ದೌಲನ ಶಿರಶ್ಛೇದ ಮಾಡಿತು, ಮೀರ್ ಜಾಫರ್ ಹೆಸರಿಗೆ ನವಾಬನಾದ. ಇಂಗ್ಲಿಷರು ಸರ್ವಾಧಿಕಾರಿಗಳಾದರು. ಅವರು 1765ರಲ್ಲಿ ಮೊಗಲ್ ಚಕ್ರವರ್ತಿ 2ನೆಯ ಷಾ ಆಲಮನಿಂದ ಬಂಗಾಲದ ದಿವಾನಿ ಹಕ್ಕನ್ನು ಪಡೆದರು. ಕ್ಲೈವ್ ಬಂಗಾಲದ ಗವರ್ನರಾದ. ಇಂಗ್ಲಿಷರ ಆಳ್ವಿಕೆಯಲ್ಲಿ 1770ರಲ್ಲಿ ಸಂಭವಿಸಿದ ಭೀಕರ ಕ್ಷಾಮದಲ್ಲಿ ಬಂಗಾಲದ 1/3 ರಷ್ಟು ಮಂದಿ ಸಾವಿಗೀಡಾದರು. 1772ರಲ್ಲಿ ವಾರನ್ ಹೇಸ್ಟಿಂಗ್ಸ್ ಗವರ್ನರಾದ. 1773ರಲ್ಲಿ ಅವನನ್ನು ಭಾರತದಲ್ಲಿ ಬ್ರಿಟಿಷರ ಆಡಳಿತಕ್ಕೆ ಸೇರಿದ ಎಲ್ಲ ಪ್ರದೇಶಗಳಿಗೂ ಗವರ್ನರ್-ಜನರಲ್ ಆಗಿ ನೇಮಿಸಲಾಯಿತು. ಕಲ್ಕತ್ತ ಅವನ ರಾಜಧಾನಿಯಾಯಿತು. ಇಂಗ್ಲಿಷರ ಆಳ್ವಿಕೆಯಲ್ಲಿ ಆಡಳಿತ ದೃಷ್ಟಿಯಿಂದ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಗವರ್ನರ್ ಜನರಲ್ಲನ ನೇರ ಆಡಳಿತದಲ್ಲಿದ್ದ ಬಂಗಾಲವನ್ನು 1854ರಲ್ಲಿ ಲೆಫ್ಟೆನಂಟ್-ಗವರ್ನರನ ಆಡಳಿತಕ್ಕೆ ಒಳಪಡಿಸಲಾಯಿತು. ಕರ್ಜನನ ಕಾಲದಲ್ಲಿ 1905ರಲ್ಲಿ ನಡೆದ ಬಂಗಾಲ ವಿಭಜನೆಯನ್ನು ಸುರೇಂದ್ರನಾಥ ಬ್ಯಾನರ್ಜಿಯವರ ನೇತೃತ್ವದಲ್ಲಿ ಜನರು ವಿರೋಧಿಸಿ ಸ್ವದೇಶಿ ಚಳವಳಿಯನ್ನಾರಂಭಿಸಿದರು. ಇಂಗ್ಲಿಷರು ಅದನ್ನು ಹತ್ತಿಕ್ಕಲು ಮಾಡಿದ ಪ್ರಯತ್ನಗಳ ವಿರುದ್ಧ ಬಾರಿ ಚಳವಳಿ ನಡೆಯಿತು. ಇಡೀ ಭಾರತವೇ ಇದನ್ನು ಪ್ರತಿಭಟಿಸಿತು. 1911ರಲ್ಲಿ ಬ್ರಿಟಿಷರು ವಿಭಜನೆಯನ್ನು ಕೊನೆಗೊಳಿಸಿದರು. 1947ರಲ್ಲಿ ಭಾರತ ಸ್ವತಂತ್ರವಾದಾಗ ಮತ್ತೆ ಬಂಗಾಲದ ವಿಭಜನೆಯಾಗಿ, ಪಶ್ಚಿಮ ಬಂಗಾಲ ಭಾರತದಲ್ಲಿ ಸೇರಿತು. ಅದು ಈಗ ಭಾರತ ಒಕ್ಕೂಟದ ಒಂದು ರಾಜ್ಯವಾಗಿದೆ.

ವಾಸ್ತುಶಿಲ್ಪ ಬದಲಾಯಿಸಿ

 
ಅದೀನ ಮಸೀದಿ
 
ಬಿಷ್ಣುಪುರ ದೇವಾಲಯ

ಪಶ್ಚಿಮ ಬಂಗಾಲದ ಪ್ರಾಕೃತಿಕ ಸನ್ನಿವೇಶ ಮತ್ತು ವಾಯುಗುಣದ ಸ್ವಭಾವದಿಂದ ಪ್ರಾಚೀನ ನಿರ್ಮಾಣಗಳು ಹೆಚ್ಚಾಗಿ ಉಳಿದುಬಂದಿಲ್ಲ. ಮೊದಲಿನ ಇಟ್ಟಿಗೆ ಕಟ್ಟಡಗಳು ಪೂರ್ಣವಾಗಿ ಅಳಿದುಹೋಗಿವೆ. ಆದರೆ ಒರಿಸ್ಸ ವಾಸ್ತುಶೈಲಿಯಿಂದ ಪ್ರೇರಿತವಾದ ಕೆಲವು ಕಲ್ಲಿನ ಕಟ್ಟಡಗಳನ್ನು ಬಂಕುರಾ ಮತ್ತು ಬರ್ದವಾನ್ ಜಿಲ್ಲೆಗಳಲ್ಲಿ ಕಾಣಬಹುದು. ಅನಂತರ ಕಾಲದಲ್ಲಿ ಜಾನಪದ ಶೈಲಿಯಿಂದ ಪ್ರೇರಿತವಾದ ಸ್ಥಾನಿಕ ಮಾದರಿಯ ಕಟ್ಟಡಗಳು ನಿರ್ಮಾಣವಾದುವು. ಮೊದಲ ರೀತಿಯ ಕಟ್ಟಡಗಳು ಎತ್ತರವಾದ ಶಿಖರವುಳ್ಳ ಒಂದು ಕೋಣೆಯ ಕಲ್ಲಿನ ಗುಡಿಗಳು; ಭುವನೇಶ್ವರದ ಮಂದಿರಗಳ ಮಾದರಿಯ ಸಣ್ಣ ನಿರ್ಮಾಣಗಳು. ಅವುಗಳ ಎತ್ತರ ಚತುರಸ್ರತಳ ಪ್ರಮಾಣದ ಮೂರೂವರೆಯಷ್ಟಿರುತ್ತಿತ್ತು. ಶಖರದ ಎರಡಂತಸ್ತುಗಳನ್ನು ಜೋಡು ಕಪೋತಗಳಿಂದ ಪ್ರತ್ಯೇಕಿಸಿರಲಾಗುತ್ತಿತ್ತು. ಲಂಬಾಕೃತಿಯ ಶಿಖರಗಳ ಮೇಲಿನ ಅಡ್ಡಗಲದ ಕಪೋತಗಳು ವೈದೃಶ್ಯ ಸೌಂದರ್ಯವನ್ನು ಹೆಚ್ಚಿಸುತ್ತಿದ್ದುವು. ಬರ್ದವಾನ್ ಜಿಲ್ಲೆಯ ಬರಾಕರ್ ಎಂಬಲ್ಲಿ ಅಂಥ ಹಲವು ಗುಡಿಗಳಿವೆ. ಬಹೂಲರಾದ ಸಿದ್ಧೇಶ್ವರ ದೇವಾಲಯ ಆ ಶೈಲಿಯ ಉತ್ತಮ ನಿದರ್ಶನ. 10ನೆಯ ಶತಮಾನದ ಆ ಕಟ್ಟಡದ ಇಟ್ಟಿಗೆ ಗೋಡೆಗಳ ಮೇಲ್ಭಾಗವನ್ನು ಸುಟ್ಟ ಮಣ್ಣಿನ ಫಲಕಗಳ ಮೇಲಿನ ಉಬ್ಬುಶಿಲ್ಪಗಳಿಂದ ಅಲಂಕರಿಸಲಾಗಿತ್ತು. ಶಿಲ್ಪಗಳು ಅಧಿಕಸಂಖ್ಯೆಯಲ್ಲಿದ್ದರೂ ಅತ್ಯಲಂಕರಣಭಾವವನ್ನು ಉಂಟುಮಾಡುವುದಿಲ್ಲ; ಅದರ ರಮ್ಯತೆಯನ್ನು ಹೆಚ್ಚಿಸಿವೆ. ಅನಂತರ ಕಾಲದ ಜಾನಪದ ಶೈಲಿಯ ಕಟ್ಟಡಗಳಿಗೆ ಅಲ್ಲಿ ಹೇರಳವಾಗಿ ಸಿಕ್ಕುವ ಜಂಬುಕಲ್ಲನ್ನು ಅಥವಾ ಇಟ್ಟಿಗೆಗಳನ್ನು ಬಳಸಲಾಗಿತ್ತು. ಅವು ಜೋಪಡಿಯಾಕಾರದಲ್ಲಿವೆ. ಕಾಲಾನುಕ್ರಮವಾಗಿ ಮರದ ಗೋಡೆಗಳ ಮತ್ತು ಬಿದಿರು ಚಾವಣಿಯ ನಿರ್ಮಾಣಶೈಲಿ ಮುಂದುವರಿಯಿತು. ಆ ನಿರ್ಮಾಣಗಳು ಆ ಪ್ರದೇಶದ ಅರಣ್ಯವಾಸಿ ಪೂರ್ವಜರ ಕುಟೀರಗಳನ್ನು ಹೋಲುತ್ತಿದ್ದುವು. ಅವುಗಳ ಇಳಿಜಾರಾದ ಚಾವಣಿ ಮತ್ತು ಬಾಗಿದಕಪೋತಗಳು ಜಾನಪದ ಶೈಲಿಗಿಂತ ಪ್ರಗತಿ ಪರವಾದರೂ ಉನ್ನತ ಮಟ್ಟಕ್ಕೇರಲಿಲ್ಲ. ಚತುರಸ್ರವಾದ ಕಟ್ಟಡಗಳ ಗೋಡೆಗಳು ನೇರವಾಗಿದ್ದು, ಮೇಲ್ಭಾಗದಲ್ಲಿ ಬಾಗಿದ ಚಾವಣಿ ಇರುತ್ತಿತ್ತು. ಹಾಗಾಗಿ ಚಾವಣಿ ಮತ್ತು ಕಪೋತಗಳು ಪರವಲಯಕಾರದವು. ಅಧಿಕ ಮಳೆಯನೀರು ಸುಲಭವಾಗಿ ಹರಿದುಹೋಗಲು ಅದು ಸಹಾಯಕವಾಗುತ್ತಿತ್ತು. ಬಾಗಿದ ಚಾವಣಿಗಳ ಮೇಲಿನ ಶಿಖರಗಳ ವಿಭಿನ್ನ ಸಂಖ್ಯೆಗೆ ಅನುಗುಣವಾಗಿ ಏಕರತ್ನ ತ್ರಿರತ್ನ ಪಂಚರತ್ನ ಗುಡಿಗಳೆಂದು ಅವನ್ನು ಪರಿಗಣಿಸಲಾಗುತ್ತಿತ್ತು. ಮುಂಭಾಗದಲ್ಲಿ ಮೂರು ಕಮಾನುಗಳೂ ಪ್ರತಿಕಮಾನಿನ ಕೆಳಗೆ ಕಂಬಗಳಿಂದ ಕೂಡಿದ ಬಾಗಿಲುಗಳೂ ಇರುತ್ತಿದ್ದುವು. ಸೂಚಿಯ ಆಕಾರದ ಕಮಾನುಗಳಲ್ಲಿ ಕಂಬಗಳಿಂದ ಕೂಡಿದ ಬಾಗಿಲುಗಳು ಇರುತ್ತಿದ್ದವು. ಆ ಕಮಾನುಗಳಲ್ಲಿ ಚಾಚಿದ ಕೋಡುಗಳಿರುತ್ತಿದ್ದುವು. ಒಳಭಾಗದಲ್ಲಿರುತ್ತಿದ್ದ ವಿಶಾಲ ಹಜಾರದ ಸುತ್ತಲೂ ಮೇಲಂತಸ್ತಿನಲ್ಲಿ ಉಪ್ಪರಿಗೆಯ ಮೊಗಸಾಲೆಯಿರುತ್ತಿತ್ತು. ಗೋಡೆಗಳ ಮೇಲೆ ಸುಟ್ಟ ಮಣ್ಣಿನ ಉಬ್ಬುಚಿತ್ರಫಲಕಗಳ ಅಲಂಕರಣವಿರುತ್ತಿತ್ತು. ಆ ಶಿಲ್ಪಗಳಲ್ಲಿ ರಾಮಾಯಣ ಮಹಾಭಾರತ ಮತ್ತು ಸಾಮಾನ್ಯ ಜನಜೀವನಕ್ಕೆ ಸಂಬಂಧಿಸಿದ ದೃಶ್ಯಗಳ ನಿರೂಪಣೆಯಿರುತ್ತಿತ್ತು. ಬಂಕುರಾ ಜಿಲ್ಲೆಯ ವಿಷ್ಣಪುರದಲ್ಲಿ ಮಲ್ಲರಾಜನ ಮನೆತನದ ದೊರೆಗಳು ಕಟ್ಟಿಸಿದ ದೇವಾಲಯಗಳು ಈ ರೀತಿಯವು. ಅಲ್ಲಿರುವ ಜಂಬುಕಲ್ಲಿನ ಏಕಶಿಖರದ ಲಾಲ್ಜುಯಿ (1 58), ಇಟ್ಟಿಗೆಯ ಏಕಶಿಖರದ ಮದನ ಮೋಹನ (1694), ಇಟ್ಟಿಗೆಯ ಪಂಚರತ್ನ ರೀತಿಯ ಶ್ಯಾಮರಾಯ (1643) ಮತ್ತು ಜಂಬುಕಲ್ಲಿನ ಪಂಚರತ್ನರೀತಿಯ ಮದನಗೋಪಾಲ (1665) ಮಂದಿರಗಳು, ಇವು 17ನೆಯ ಶತಮಾನದವಾದರೂ ಹಿಂದಿನ ಶೈಲಿಯ ನಿಜವಾದ ಪ್ರತೀಕಗಳಾಗಿವೆ. ಇದೇ ಶೈಲಿಯ ಎರಡು ಗುಡಿಗಳುಳ್ಳ ಜೋಡ್ ಬಂಗ್ಲಾ ಮಂದಿರಗಳಲ್ಲಿ ಮುಂಭಾಗದಲ್ಲಿ ಎರಡು ಗುಡಿಸಿಲುಗಳನ್ನು ಸೇರಿಸಿದ್ದಂತೆ ಕಂಡರೂ ಒಳಭಾಗದ ಮಧ್ಯದಲ್ಲಿ ಒಂದು ಥಾಕುರ್ ಬಡಿ ಮತ್ತು ಬದಿಗಳಲ್ಲಿ ಎರಡು ಕೋಣೆಗಳು ಇರುತ್ತಿದ್ದುವು. ಅವುಗಳಲ್ಲೊಂದರಲ್ಲಿರುತ್ತಿದ್ದ ಸೋಪಾನಪಂಕ್ತಿ ಮೇಲಿನ ಮೊಗಸಾಲೆಗೆ ಒಯ್ಯುತ್ತಿತ್ತು. ಗುಪ್ತಪಾರಾದ ಚೈತನ್ಯಮಂದಿರ ಮತ್ತು ವಿಷ್ಣುಪುರದ ಕೆಸ್ತರಾಯ (1726) ಈ ಮಾದರಿಯವು.

ಮತ್ತೊಂದು ಮಾದರಿಯು ಪೌರಸ್ತ್ಯ ಶೈಲಿಯ ಸುಂದರ ಸತ್ತ್ವಪೂರ್ಣ ಕಟ್ಟಡಗಳು ಲಖ್ನೌತಿಯಲ್ಲಿ ಪಾಲ-ಸೇನರ ಆಶ್ರಯದಲ್ಲಿ ನಿರ್ಮಾಣಗೊಂಡುವು. ಅವನ್ನು ನೆರೆಯ ರಾಜಮಹಲ್ ಬೆಟ್ಟಗಳಲ್ಲಿ ಸಿಕ್ಕುವ ಕಪ್ಪು ಬಸಾಲ್ಟ್ ಕಲ್ಲಿನಲ್ಲಿ ಕಟ್ಟಲಾಗಿದೆ. ಈಗ ಆ ಕಟ್ಟಡಗಳು ನಾಶವಾಗಿದ್ದರೂ ಅನಂತರಕಾಲದ ಮುಸ್ಲಿಮ್ ವಾಸ್ತುಗಳಲ್ಲಿ ಅವುಗಳ ಕಲ್ಲುಗಳನ್ನು ಬಳಸಿಕೊಂಡಿರುವುದರಿಂದ ಆ ಹಿಂದೂ ಕಟ್ಟಡಗಳ ವಾಸ್ತುಲಕ್ಷಣಗಳನ್ನು ತಿಳಿಯಬಹುದು. ಆ ಹಿಂದೂ ದೇವಾಲಯಗಳಲ್ಲಿ ಅಲಂಕಾರ ಪೂರ್ಣವಾದ ಎತ್ತರವಾದ ಅಂತಸ್ತುಗಳಿದ್ದ ಶಿಖರಗಳು ಮತ್ತು ತ್ರಿಪತ್ರಕ (ಟ್ರಿಫಾಯಲ್) ಕಮಾನುಗಳಿರುತ್ತಿದ್ದುವು. ಅವು ಹೆಚ್ಚು ಕಡಿಮೆ ಬೋಧ್ ಗಯೆಯ ದೇವಾಲಯವನ್ನು ಹೋಲುತ್ತಿದ್ದುವು. ಗೌರ್ ಮತ್ತು ಪಾಂಡುವ ಪಟ್ಟಣಗಳಲ್ಲಿರುವ ಮಸೀದಿಗಳಲ್ಲಿ ಉಪಯೋಗಿಸಿರುವ ಶಿಲ್ಪ ಕೆತ್ತನೆಗಳು ಮೊದಲಿಗೆ ಆ ದೇವಾಲಯಗಳಿಗೆ ಸೇರಿದುವು. ಅವು ಪಶ್ಚಿಮ ಬಂಗಾಲದ ಅತ್ಯುತ್ತಮ ಕಲಾಕೃತಿಗಳು. ಅದೀನ ಮಸೀದಿಯ ಹಿಂದಿನ ಬಾಗಿಲಿನ ಚೌಕಟ್ಟು ಮೊದಲಿಗೆ ಲಖ್ನೌತಿಯ ವಿಷು ್ಣದೇವಾಲಯಕ್ಕೆ ಸೇರಿತ್ತು. ಅದರ ಇಬ್ಬದಿಗಳ ಕಂಬಗಳಿಗೆ ಹಗ್ಗದಂತೆ ಸುತ್ತಿಕೊಂಡಿರುವ ಶೇಷ, ತಳಭಾಗದಲ್ಲಿರುವ ಶೇಷನ ಸುರಳಿಗಳನ್ನು ಹೋಲುವ ಕಂಬದ ಪೀಠ, ಬಾಗಲುವಾಡದ ಮೇಲಿರುವ ಕಪೋತ ಇವು ಉತ್ತಮ ಕಲಾಕೃತಿಗಳು. ಗುಪ್ತರ ಶಿಲ್ಪಗಳಲ್ಲಿ ಕಾಣುವ ಭಾಂಡದೊಳಗಿಂದ ಹೊರ ಹೊಮ್ಮುವ ಲತಾಗುಚ್ಚಗಳು ಇವಕ್ಕೆ ಸ್ಫೂರ್ತಿಯಾಗಿವೆ. ಆ ಕಾಲದ ಅರಮನೆ, ಕೋಟೆ, ಕೊತ್ತಲಗಳು ಉಳಿದು ಬಂದಿಲ್ಲವಾದರೂ, ವಲ್ಲಾಳಸೇನನ ಅರಮನೆ ಕೊತ್ತಲಗಳ ಕಲ್ಲುಗಳನ್ನು ಬಳಸಿ ಆ ಸ್ಥಳದಲ್ಲಿ ಕಟ್ಟಿರುವ ಮಸೀದಿಯಲ್ಲಿರುವ ಕಂಬಗಳು ಅಂಥ ವಾಸ್ತು ನಿರ್ಮಾಣಗಳಿಗೆ ಸಾಕ್ಷಿ. ದುಂಡಾದ ಚತುರಸ್ರ ಅಥವಾ ಅಷ್ಟಮುಖ ಕಂಬಗಳು ಸಾಮಾನ್ಯವಾಗಿ 2.7 ಮೀ ಎತ್ತರ ಮತ್ತು 0,9 ಮೀ ಅಗಲ ಇವೆ.

ಈ ಮೇಲೆ ವರ್ಣಿಸಿದ ಕಣ್ಮರೆಯಾದ ವಾಸ್ತುನೈಪುಣ್ಯವನ್ನು ಹೂಗ್ಲಿ ಜಿಲ್ಲೆಯ ಸತ್‍ಗಾಂವ್‍ನಲ್ಲಿ (ಸಂಸ್ಕೃತದ ಸಪ್ತಗ್ರಾಮ; ಈಗಿನ ತ್ರಿಬೇಣಿ) ಕಾಣಬಹುದು. ಅಲ್ಲಿರುವ ಆ ಶೈಲಿಯ ಎರಡು ಹಿಂದೂ ಕಟ್ಟಡಗಳಲ್ಲಿ ಒಂದನ್ನು ಮುಸ್ಲಿಮ್ ಸಮಾಧಿಯಾಗಿಯೂ ಮತ್ತೊಂದನ್ನು ಮಸೀದಿಯಾಗಿಯೂ ಪರಿವರ್ತಿಸಲಾಗಿದೆ. ಸಮಾಧಿ ಕಟ್ಟಡದಲ್ಲಿರುವ ಎರಡು ಕೋಣೆಗಳು ಮೊದಲಿಗೆ ವೈಷ್ಣವ ಮಂದಿರದ ಅಂತರಾಳ ಮತ್ತು ಸಭಾಮಂಟಪಗಳಾಗಿದ್ದುವು. ಅಲ್ಲಿದ್ದ ಹಿಂದೂ ಶಿಲ್ಪಗಳನ್ನು ಒಡೆದು ಹಾಕಲಾಗಿದೆ. ಅದಕ್ಕೆ ನಾಲ್ಕು ದಿಕ್ಕುಗಳಿಂದಲೂ ಬಾಗಿಲುಗಳಿವೆ. ಅವುಗಳ ಸರಳವಾದ ಸೊಬಗು ಗಮನಾರ್ಹ.

ಪಶ್ಚಿಮಬಂಗಾಲ 1202ರಲ್ಲಿ ಮುಸ್ಲಿಮರ ವಶವಾದರೂ ಬಹಳ ಕಾಲದವರೆಗೆ ಅಲ್ಲಿ ಇಸ್ಲಾಮೀ ವಾಸ್ತುಶೈಲಿಯ ನಿರ್ಮಾಣಗಳು ಕಂಡುಬರಲಿಲ್ಲ. ಕ್ರಮೇಣ ಮಸೀದಿ ಮತ್ತು ಸಮಾಧಿಗಳ ನಿರ್ಮಾಣ ಪ್ರಾರಂಭವಾಯಿತು. ಇಸ್ಲಾಮೀ ಶೈಲಿಯ ಕಟ್ಟಡಗಳು ಬಹಳಮಟ್ಟಿಗೆ ಮಾಲ್ಡಾ ಜಿಲ್ಲೆಯಲ್ಲಿರುವ, ಹಲವು ಬಾರಿ ರಾಜಧಾನಿಗಳಾಗಿದ್ದ, ಲಖ್ನೌತಿ, ಗೌರ್ ಮತ್ತು ಪಾಂಡುವ ನಗರಗಳಲ್ಲಿ ಕೇಂದ್ರೀಕೃತವಾಗಿದ್ದುವು. ಅಲ್ಲಿ ಅನೇಕ ಕೋಟೆಕೊತ್ತಲಗಳ, ಅರಮನೆಗಳ, ಸೇತುವೆಗಳ, ದೇವಾಲಯಗಳ, ಮಸೀದಿಗಳ ಮತ್ತು ಸಮಾಧಿಗಳ ಅಧ್ಯಯನದಿಂದ ಪಶ್ಚಿಮಬಂಗಾಲದ ಇಸ್ಲಾಮೀ ವಾಸ್ತುಶೈಲಿಯ ಉಗಮ ಮತ್ತು ವಿಕಾಸಗಳನ್ನು ತಿಳಿಯಬಹುದು. ಆ ವಾಸ್ತುನಿರ್ಮಾಣಗಳನ್ನು 1200ರಿಂದ 1340ರ ವರೆಗಿನ, ಗೌರ್ ರಾಜಧಾನಿಯಾಗಿದ್ದ ಕಾಲದ ಅವಶೇಷಗಳು, 1340-1430ರ ನಡುವೆ ಪಾಂಡುವ ರಾಜಧಾನಿಯಾದಾಗಿನಿಂದ ಎಕ್ಲಾಖಿ ಸಮಾಧಿ ನಿರ್ಮಾಣದ ವರೆಗಿನ ಅವಶೇಷಗಳು, ಮತ್ತು 1442-1576ರಲ್ಲಿ ಮತ್ತೆ ಗೌರ್ ರಾಜಧಾನಿಯಾಗಿದ್ದ ಕಾಲದಲ್ಲಿ ಅವಶೇಷಗಳು, ಎಂದು ವಿಭಜಿಸಲಾಗಿದೆ. ಮೊದಲನೆಯ ವಿಭಾಗದ ಕಟ್ಟಡಗಳು ಬಹಳಮಟ್ಟಿಗೆ ನಾಶವಾಗಿದ್ದರೂ ತ್ರಿಬೇಣಿ ಮತ್ತು ಪಾಂಡುವಗಳಲ್ಲಿ ಕೆಲಮಟ್ಟಿಗೆ ಉಳಿದಿವೆ. ಪಾಂಡುವದ ಜೀರ್ಣವಾದ ಮಸೀದಿಯ ಗೋಡೆ ಮತ್ತು ಕಮಾನುಗಳನ್ನು ಇಟ್ಟಿಗೆಯಲ್ಲಿ ಕಟ್ಟಲಾಗಿದೆ. ಆದರೆ ಹಿಂದೂ ದೇವಾಲಯಗಳಿಂದ ಕಿತ್ತು ತಂದ ಬಸಾಲ್ಟ್ ಕಲ್ಲಿನ ಕಂಬಗಳನ್ನು ಬಳಸಲಾಗಿದೆ. ಅದರ ಮಧ್ಯದಲ್ಲಿರುವ ಮುಖ್ಯ ಮಿಹ್ರಾಬದ ಬಲಕ್ಕೆ ಕಲ್ಲಿನ ಉಪದೇಶ ವೇದಿಕೆ ಇದೆ. ಆ ಮಸೀದಿ ಪಾಂಡುವದ ಅನಂತರಕಾಲದ ದೊಡ್ಡ ಅದೀನ ಮಸೀದಿಗೆ ಮಾದರಿಯಾಗಿದೆ. ಪಶ್ಚಿಮ ಬಂಗಾಲದ ಚತುರಸ್ರತಳಹದಿಯ ಅನೇಕ ಗುಮ್ಮಟಗಳ ಮಸೀದಿಗಳಲ್ಲಿ ಅದು ಪ್ರಾಚೀನತಮವಾದುದು. ಅದರ ಬಳಿಯಲ್ಲಿ ಸಂತ ಷಾ ಪುರಿಯುದ್ದೀನ್ ಕಟ್ಟಿಸಿದ ಸ್ಮಾರಕಸ್ತಂಭವಿದೆ. ದೆಹಲಿಯ ಕುತ್ಬ್ ಮಿನಾರ್ ಮಾದರಿಯ ಅನೇಕ ಅಂತಸ್ತುಗಳು, ಪಾಶ್ರ್ವಮುಖಗಳು ಮತ್ತು ಪಟ್ಟಿಕೆಗಳು ಅಲಂಕರಣ ಗಮನಾರ್ಹವಾದರೂ ಅದು ಗುಜ್ಜಾಗಿದ್ದು ಒಟ್ಟು ನೋಟಕ್ಕೆ ಅಷ್ಟು ಸುಂದರವಾಗಿಲ್ಲ. 1298ರಲ್ಲಿ ನಿರ್ಮಿಸಿದ ತ್ರಿಬೇಣಿಯ ಮಸೀದಿ 16ನೆಯ ಶತಮಾನದಲ್ಲಿ ಬಹಳ ರಿಪೇರಿಗಳಿಗೆ ಗುರಿಯಾಗಿದೆ. ಅದರ ಬಳಿಯಿರುವ ಜಾಫರ್‍ಖಾನ್ ಘಾಜಿûಯ ಸಮಾಧಿ ಇನ್ನೂ ಪ್ರಾಚೀನವಾದುದಾದರೂ ಈಗ ಪಾಳುಬಿದ್ದಿದೆ. ಮೊದಲು ಕೃಷ್ಣ ದೇವಾಲಯವಾಗಿದ್ದ ಈ ಕಟ್ಟಡವನ್ನು ಪುನನಿರ್ಮಿಸಿದಾಗ ಬಸಾಲ್ಟ್ ಕಂಬಗಳ ನಡುವೆ ಇಟ್ಟಿಗೆಯ ಕಮಾನುಗಳನ್ನು ಸೇರಿಸಲಾಗಿದೆ. ಹಿಂದೂ ಕಟ್ಟಡಗಳನ್ನು ಮುಸ್ಲಿಮರು ತಮ್ಮ ಉಪಯೋಗಕ್ಕೆ ಪರಿವರ್ತಿಸಿಕೊಂಡ ರೀತಿಯನ್ನು ತಿಳಿಯಲು ಅದು ಉತ್ತಮ ನಿದರ್ಶನ. ಎರಡನೆಯ ವಿಭಾಗದ ಕಟ್ಟಡಗಳಲ್ಲಿ ಅತಿ ಮುಖ್ಯವಾದ ಆದೀನ ಮಸೀದಿ ಲಖ್ನೌತಿಯಿಂದ 17ಮೈಲಿ ದೂರದಲ್ಲಿರುವ ಹೊಸ ರಾಜಧಾನಿ ಪಾಂಡುವದಲ್ಲಿದೆ. ಸಿಕಂದರ್ ಷಾ (1358-1389) ತನ್ನ ಸ್ವಾತಂತ್ರ್ಯದ ಮತ್ತು ವೈಭವದ ಕುರುಹಾಗಿ ತನ್ನದೇ ಆದ ಹೊಸ ಶೈಲಿಯಲ್ಲಿ ಅದನ್ನು ಕಟ್ಟಿಸಿದ. ರಾಜಧಾನಿಯ ಹಲವು ಸಾವಿರ ಜನ ಮುಸ್ಲಿಮರು ಒಟ್ಟಿಗೆ ನಮಾಜು ಮಾಡಲು ಸಾಧ್ಯವಾಗುವಂಥ 122 ಮೀ ಘಿ 40 ಮೀ. ವಿಸ್ತಾರವಾದ ಪ್ರಾಂಗಣ. ಅದರ ಸುತ್ತಲೂ 260 ಕಂಬಗಳಿಂದ ಕೂಡಿದ ಮೊಗಸಾಲೆ ಇರುವ ಆ ಬೃಹತ್ ಮಸೀದಿಯ ನಿರ್ಮಾಣ 1364ರಲ್ಲಿ ಆಯಿತು. ನಾಲ್ಕು ದಿಕ್ಕುಗಳಲ್ಲೂ ಹಲವಾರು ಕಮಾನುಗಳಿದ್ದುವು. ಪಶ್ಚಿಮ ದಿಕ್ಕಿನ ಮಧ್ಯಭಾಗದಲ್ಲಿ ಬಹಳ ಉನ್ನತವಾದ ಗುಮ್ಮಟವಿತ್ತು. ಪ್ರಾಂಗಣದ ಸುತ್ತ 88 ಕಮಾನುಗಳನ್ನೊಳಗೊಂಡ 6.7 ಮೀ ಎತ್ತರದ ಕೈಪಿಡಿ ಗೋಡೆಯಿತ್ತು. ಮೊಗಸಾಲೆಯ ಚಾವಣಿಯ ಮೇಲೆ ಎದ್ದು ಕಾಣುವ 306 ಗುಮ್ಮಟಗಳಿದ್ದುವು. ಪ್ರಾಂಗಣದ ಆಗ್ನೇಯ ಮೂಲೆಯಲ್ಲಿದ್ದ ಮೂರು ಕಮಾನು ಬಾಗಿಲುಗಳಲ್ಲಿ ಒಂದು ಕೆಳ ಅಂತಸ್ತಿನ ಒಳಕೋಣೆಗೂ ಮತ್ತೆರಡು ಮೇಲಂತಸ್ತಿನ ಬಾದಷಾ-ಕಿ-ತಖ್ತ್ ಅಥವಾ ಸುಲ್ತಾನನ ಗದ್ದುಗೆಯಿದ್ದ ಕೋಣೆಗೆ ಪ್ರವೇಶ ನೀಡುವ ಸೋಪಾನಪಂಕ್ತಿಗಳಿಗೂ ಪ್ರವೇಶ ನೀಡುತ್ತಿದ್ದುವು. ಅಲ್ಲಿರುವ ಕಂಬಗಳು ವೈಶಿಷ್ಟ್ಯಪೂರ್ಣವಾದವು. ಇಂಥವು ಬಂಗಾಲದ ಹೊರಗೆಲ್ಲೂ ಕಾಣಬರುವುದಿಲ್ಲ. ಮಸೀದಿಯ ಪಶ್ಚಿಮದ ಒಳಗೋಡೆಯಲ್ಲಿ ಪ್ರತಿ ಅಂಕಣದ ಮಧ್ಯದಲ್ಲೂ ಸುಂದರ ಕೆತ್ತನೆ ಮತ್ತು ಶಿಲ್ಪಗಳಿಂದ ಅಲಂಕೃತವಾದ ಮುನ್‍ಚಾಚಿದ ಕಮಾನುಗೂಡುಗಳಲ್ಲಿ 32 ಮಿಹ್ರಾಬ್‍ಗಳಿದ್ದವು. ಮಸೀದಿಯ ಗುಡಿಯ ಭಾಗದ ಮಧ್ಯದಲ್ಲಿ 21 ಮೀ ಘಿ 10 ಮೀ ವಿಸ್ತೀರ್ಣದ ಮತ್ತು 15 ಮೀ ಎತ್ತರದ ಹಜಾರವಿತ್ತು. ಅದರ ಇಬ್ಬದಿಗಳಲ್ಲಿ ಸಮಕೋನದಲ್ಲಿ ಅಡ್ಡನಾಗಿ ಐದೈದು ಹಜಾರಗಳು ಇದ್ದುವು. ಹಜಾರಗಳ ಮುಖಭಾಗದಲ್ಲಿದ್ದ 15ಮೀ ಅಗಲ ಮತ್ತು 18ಮೀ ಎತ್ತರದ ಅಡ್ಡ ಗೋಡೆಯಲ್ಲಿ 15 ಮೀ ಎತ್ತರ ಮತ್ತು 10ಮೀ ಅಗಲವುಳ್ಳ ಅದ್ಭುತವಾದ ಕಮಾನು ಬಾಗಿಲಿತ್ತು. ಅದರ ಇಬ್ಬದಿಗಳಲ್ಲಿರುವ ಸಣ್ಣ ಬಾಗಿಲುಗಳಿಂದ ಪ್ರಾರ್ಥನಾ ಸಮಯದ ಘೋಷಕ ಮ್ಯುಎಜಿನ್ ಮೇಲಂತಸ್ತಿನ ಮಿನಾರತ್ತಿಗೆ ಹೋಗಬಹುದಿತ್ತು. ಹಜಾರದ ಹಿಂದಿನ ಗೋಡೆಯನ್ನು ಬಹಳ ಕಲಾತ್ಮಕವಾಗಿ ಶೃಂಗರಿಸಲಾಗಿದೆ. ಈ ಭವ್ಯ ಸುಂದರ ವಿಶಾಲ ಮಸೀದಿಯ ಕೆಳಗಿನರ್ಧವನ್ನು ಹಿಂದೂ ದೇವಾಲಯಗಳಿಂದ ಕಿತ್ತು ತಂದ ಕಲ್ಲುಗಳಿಂದಲೂ ಮೇಲಿನ ಕಮಾನು ಮತ್ತು ಗುಮ್ಮಟಗಳನ್ನು ಇಟ್ಟಿಗೆಗಳಿಂದಲೂ ಕಟ್ಟಲಾಗಿದೆ. ಈ ಶೈಲಿಗೆ ಸೇರಿದ ಗೌರ್‍ನಲ್ಲಿರುವ ಅಖಿ ಸೂರಜುದ್ದೀನನ ಮಸೀದಿ ಮತ್ತು ಸಮಾಧಿ, ಊರಿನ ದಕ್ಷಿಣಕ್ಕಿರುವ ಕೊತ್ವಾಲಿ ದರ್ವಾಝಾ ಉಲ್ಲೇಖಾರ್ಹವಾದರೂ ಆದೀನದಷ್ಟು ಭವ್ಯವಾಗಿಲ್ಲ.

ಮೂರನೆಯ ವಿಭಾಗದ ಕಟ್ಟಡಗಳು ಇಸ್ಲಾಮೀ ವಾಸ್ತುಪದ್ಧತಿಯಲ್ಲಿ ಹೊಸ ಪ್ರಾದೇಶಿಕ ಶೈಲಿಯ ಪ್ರಾದುರ್ಭಾವದ ಪ್ರತೀಕಗಳು. ಈವರೆಗೆ ತಮ್ಮ ವಿಶಿಷ್ಟ ಶೈಲಿಯನ್ನು ಬಳಸಿದ ಮುಸ್ಲಿಮರು ಭೌಗೋಳಿಕ ಪರಿಸರ ಮತ್ತು ಅಧಿಕಮಳೆಯ ಪ್ರಭಾವಗಳಿಂದ ತಮ್ಮ ಕಟ್ಟಡಗಳಿಗೆ ಒದಗುವ ಹಾನಿಯನ್ನು ನಿವಾರಿಸುವ ಸಲುವಾಗಿ ಆ ಮೊದಲು ಹಿಂದೂಗಳು ಬಳಸುತ್ತಿದ್ದ ಇಳಿಜಾರು ಚಾವಣಿಯ ಕಟ್ಟಡಶೈಲಿಗೆ ಶರಣಾದರು. ಆ ಶೈಲಿಯ ಕಟ್ಟಡಗಳಿಗೆ ಮಾದರಿಯಾಗಿರುವ ಎಕ್ಲಾಖಿ ಸಮಾಧಿ (1425) ಪಾಂಡುವದಲ್ಲಿದೆ. ವಿಶಿಷ್ಟ ವಾಸ್ತುಲಕ್ಷಣದಿಂದ ಕೂಡಿದ ಈ ಸಮಾಧಿ ಆ ಶೈಲಿಯ ವಿಕಾಸದ ಪ್ರಥಮ ಹಂತವಾಗಿದೆ. ಅನಂತರದ ಆ ಶೈಲಿಯ ಕಟ್ಟಡಗಳಿಗೆ ಮಾದರಿಯಾಗಿದೆ. ಈ ದೃಷ್ಟಿಯಿಂದ ಇದು ಗಮನಾರ್ಹವಾದ್ದಾಗಿದೆ. 23 ಮೀ ಚತುರಸ್ರ ತಳಹದಿಯ ಆ ಕಟ್ಟಡದ ಎತ್ತರ 7.5 ಮೀ. ಅದರ ಮೂರು ತಿರುವುಗಳ ಸೂರು 14 ಮೀ ವ್ಯಾಸದ ಗುಮ್ಮಟ, ಮೂಲೆಗಳಲ್ಲಿರುವ ಸಣ್ಣ ಅಷ್ಟಸ್ತ್ರ ಗೋಪುರಗಳು-ಇವು ಆ ಕಟ್ಟಡದ ಮುಖ್ಯ ಲಕ್ಷಣಗಳು. ಮುಖಭಾಗದ ಗೋಡೆಯಲ್ಲಿ ಎದ್ದುಕಾಣುವ ಇಟ್ಟಿಗೆವರಸೆ, ಅದು ಎರಡು ಅಂತಸ್ತುಗಳ ಕಟ್ಟಡವೆಂಬ ಭ್ರಮೆಯನ್ನುಂಟು ಮಾಡುತ್ತದೆ. ನಾಲ್ಕು ದಿಕ್ಕುಗಳಲ್ಲಿ ಹಿಂದೂ ಕಟ್ಟಡಗಳಿಂದ ತಂದು ಸೇರಿಸಿದ ಕಲ್ಲಿನ ಬಾಗಿಲುಗಳ ಮೇಲೆ ಇಟ್ಟಿಗೆಯ ಕಮಾನುಗಳನ್ನು ರಚಿಸಲಾಗಿದೆ. ಸಮಾಧಿಕೋಣೆ ಅಷ್ಟಸ್ರವಾಗಿದ್ದು 14ಮೀ ವ್ಯಾಸವುಳ್ಳದ್ದಾಗಿದೆ. ಗೌರ್ ನಗರದ ಕೋಟೆಯ ದಖಿಲ್ ದರ್ವಾeóÁ (1465)ವಿಜಯಸ್ಮಾರಕವಾಗಿ ಇಟ್ಟಿಗೆಯಲ್ಲಿ ಕಟ್ಟಿದ ವಿಶಿಷ್ಟ ಕಟ್ಟಡ. 34.5 ಮೀ. ಉದ್ದ, 23 ಮೀ ಅಗಲ ಮತ್ತು 18 ಮೀ ಎತ್ತರದ ಕಮಾನು ಹೆಬ್ಬಾಗಿಲಿನ ಇಬ್ಬದಿಗಳಲ್ಲಿ ಕಾವಲುಗಾರರ ಕೋಣೆಗಳಿದ್ದುವು. ಗೋಡೆಗಳ ಮೇಲಿನ ಸುಟ್ಟ ಮಣ್ಣಿನ ಶಿಲ್ಪ ಫಲಕಗಳು ಕಟ್ಟಡದ ಸೌಂದರ್ಯವನ್ನು ಹೆಚ್ಚಿಸಿದ್ದುವು. ಮುಂದಿನ 75 ವರ್ಷಗಳಲ್ಲಿ ಎಕ್ಲಾಖಿ ಸಮಾಧಿಯ ಮಾದರಿಯ ಹಲವು ಮಸೀದಿಗಳು ಸಮಾಧಿಗಳಲ್ಲಿ ವಿವಿಧ ಸ್ಥಳಗಳಲ್ಲಿ ನಿರ್ಮಿತವಾದವು. ಕೆಲವು ಮಸೀದಿಗಳಲ್ಲಿ ತೆರೆದ ಒಳ ಪ್ರಾಂಗಣದ ಬದಲು, ಮಳೆಯಿಂದ ರಕ್ಷಣೆ ಪಡೆಯಲು ಚಾವಣಿಯಿಂದ ಕೂಡಿದ, ಕಂಬಗಳಿಂದ ಬೇರ್ಪಡಿಸಿದ ಅಂಕಣಗಳಿದ್ದ ವಿಶಾಲ ಹಜಾರಗಳನ್ನು ನಿರ್ಮಿಸಲಾಯಿತು. ಹಜಾರಗಳಿಗೆ ಮುಂಭಾಗದಿಂದ 10-12 ಬಾಗಿಲುಗಳೂ ಬದಿಗಳಿಂದ 2-3 ಬಾಗಿಲುಗಳೂ ಇರುತ್ತಿದ್ದುವು. ಗೋಡೆಗಳ ಮೇಲ್ಭಾಗವನ್ನು ಆಯಾಕಾರದ ಫಲಕಗಳಾಗಿ ವಿಭಾಗಿಸಿ ಅವುಗಳಲ್ಲಿ ಕೆತ್ತನೆಯ ಅಲಂಕಾರ ಮಾಡಲಾಗುತ್ತಿತ್ತು. ಹಜಾರದ ಹಿಂಬದಿಯ ಗೋಡೆಗಳಲ್ಲಿದ್ದ ಮುನ್‍ಚಾಚಿದ ಕಮಾನುಗೂಡುಗಳಲ್ಲಿ ಮಿಹ್ರಾಬ್‍ಗಳಿರುತ್ತಿದ್ದವು. ಗೌರ್‍ನ ತಂತಿಪಾರಾ ಮಸೀದಿ (1475), ಬಗೇರ್ಲಟ್‍ನ ಸಾತ್ ಗುಂಬeóï (1470) ಗೌರ್‍ನ ಚಮ್‍ಖಾನ್ ಮಸೀದಿ (1475), ದಾರಸ್‍ಬಾರಿ ಮತ್ತು ಲೋಟಾನ್ ಮಸೀದಿಗಳು (1480), ಗುಣ್ಮಂತ್ ಮಸೀದಿ (1484), ಛೋಟಾ ಸೊನಾ ಮಸೀದಿ (1510), ಬಡಾ ಸೋನಾ ಮಸೀದಿ (1526) ಮತ್ತು ಕದಮ್ ರಸೂಲ್ ಮಸೀದಿ (1530) ಇವು ಈ ಶೈಲಿಯ ಇತರ ಕಟ್ಟಡಗಳು. ಇವುಗಳಲ್ಲಿ ದೊಡ್ಡದಾದ ಬಡಾ ಸೋನಾ ಮಸೀದಿಯ ವ್ಯಾಸ 61ಮೀ. ಮೂರು ದಿಕ್ಕುಗಳಲ್ಲಿ ಇದಕ್ಕೆ ದೊಡ್ಡ ಕಮಾನು ಬಾಗಿಲುಗಳಿವೆ. ಇಟ್ಟಿಗೆಯ ಆಯಾಕಾರದ ಮಂದಿರದ ವಿಸ್ತಾರ 51 ಮೀ ಘಿ 22ಮೀ ಎತ್ತರ 6 ಮೀ ತುದಿಗಳಲ್ಲಿರುವ ಸಣ್ಣ ಗೋಪುರಗಳ ನಡುವೆ 11 ಕಮಾನುಗಳಿದ್ದುವು. ಒಳಗಿನ ಪ್ರತಿ ಅಂಕಣದಲ್ಲೂ ಮಿಹ್ರಾಬ್‍ಗಳಿವೆ. ಕುತ್ಬ್ ಮಿನಾರ್ ಮಾದರಿಯ ಐದು ಅಂತಸ್ತುಗಳ ಫಿರೋಜ್ ಮಿನಾರ್ (1488) ಮೊದಲಿಗೆ ವಿಜಯಸ್ತಂಭವಾಗಿತ್ತು. ಈಗ ಮ್ಯುಎಜಿನ್ ಅದನ್ನು ಬಳಸುತ್ತಿದ್ದಾನೆ. ಅದರ ಕೆಳಗಿನ ಮೂರಂತಸ್ತುಗಳಿಗೆ 12 ಪಾರ್ಶ್ವಗಳಿವೆ. ಮೇಲಿನ ಎರಡು ಅಂತಸ್ತುಗಳು ವೃತ್ತಾಕಾರದಲ್ಲಿವೆ. ಸುಟ್ಟ ಮಣ್ಣಿನ ಫಲಕಗಳೊಂದಿಗೆ ನೀಲಿ ಮತ್ತು ಬಿಳಿಯ ಲೇಪದ ಗಾಜಿನ ಹೆಂಚುಗಳ ಅಲಂಕರಣ ಅದರ ಸೊಬಗನ್ನು ಹೆಚ್ಚಿಸಿದೆ.

ಮೂರ್ತಿಶಿಲ್ಪ ಬದಲಾಯಿಸಿ

ಪಶ್ಚಿಮ ಬಂಗಾಲದಲ್ಲಿ ಮೌರ್ಯಪೂರ್ವ ಅಥವಾ ಮೌರ್ಯಕಾಲದ ಯಾವ ಶಿಲ್ಪಗಳೂ ದೊರಕಿಲ್ಲ. ಮಹಾಸ್ತಾನದಲ್ಲಿ ಸಿಕ್ಕಿರುವ ಕುಷಾಣಪೂರ್ವದ ಸುಟ್ಟಮಣ್ಣಿನ ಕೆಲವು ಗೊಂಬೆಗಳನ್ನು ಬರಿಗೈಯಿಂದ ಅಥವಾ ಅಚ್ಚುಗಳಲ್ಲಿ ರೂಪಿಸಲಾಗಿದೆ. ಅವುಗಳಲ್ಲಿ ಹೆಚ್ಚಿನ ಕಲಾವಂತಿಕೆಯಿಲ್ಲ. ಕುಮಾರಪುರ ಮತ್ತು ನಿಯಾಮತ್‍ಪುರಗಳ ಸೂರ್ಯ, ಮತ್ತು ಹಂಕ್ರೈಲ್‍ನ ವಿಷ್ಣ ಗಮನಾರ್ಹ ಶಿಲ್ಪಗಳು. ಅವುಗಳ ವಸ್ತುಗಳ ನಿರೂಪಣೆ ಮತ್ತು ಶೈಲಿಯಿಂದ ಅವನ್ನು ಕುಷಾಣರ ಕಾಲಕ್ಕೆ ನಿರ್ದೇಶಿಸಲಾಗಿದೆ. ಕುಮಾರಪುರದ ಸೂರ್ಯ ಏಳು ಕುದುರೆಗಳ ರಥದಲ್ಲಿ ಇಬ್ಬರು ಸೇವಕರ ನಡುವೆ ಪೀಠದ ಮೇಲೆ ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದು ನಿಂತಿದ್ದಾನೆ. ಉದ್ದನೆಯ ಅಂಗಿಯನ್ನು ತೊಟ್ಟ, ವಿಶಾಲದೇಹದ, ದುಂಡು ಕಣ್ಣುಗಳ ಈ ಶಿಲ್ಪದ ತಲೆಯ ಮೇಲೆ ಕಿರೀಟವಿದೆ. ಇದನ್ನು ಹೋಲುವ ನಿಯಾಮತ್‍ಪುರದ ಶಿಲ್ಪದಲ್ಲಿ ಅಂಗಿಯ ಮೇಲೆ ಸೊಂಟಪಟ್ಟಿಯನ್ನು ತೋರಿಸಲಾಗಿದೆ. ಹಂಕ್ರೈಲ್‍ನ ಚತುರ್ಭುಜ ವಿಷ್ಣುವಿನ ಎರಡು ಕೈಗಳು ಮುರಿದಿವೆ. ಉಳಿದಿರುವ ಬಲದ ಮೇಲ್ಕೈಯಲ್ಲಿ ಪದ್ಮ, ಎಡ ಮೇಲ್ಕೈಯಲ್ಲಿ ಶಂಖ, ಮತ್ತು ತಲೆಯ ಮೇಲೆ ಕಿರೀಟ ಮುಕುಟ ಇವೆ. ನಡುವಿಗೆ ಧೋತ್ರವನ್ನು ಸುತ್ತಲಾಗಿದೆ.

ಗುಪ್ತಕಾಲದ ಶಿಲ್ಪಗಳಲ್ಲಿ ಸುಲ್ತಾನ್‍ಗಂಜ್‍ನ ತಾಮ್ರದ ಬ್ರಹತ್ ವಿಗ್ರಹ ಅಷ್ಟು ಸುಂದರವಾಗಿಲ್ಲ. ಅದರ ಮುಖದ ಮೇಲೆ ಕಂಡುಬರುವ ದೈವೀಲಾಸ್ಯ ಗಮನಾರ್ಹ. ಪಹಾಡ್‍ಪುರದಲ್ಲಿ ಸಿಕ್ಕಿರುವ ಅಧಿಕ ಸಂಖ್ಯೆಯ ಮೂರ್ತಿಶಿಲ್ಪಗಳು ಬಂಗಾಲ ಶಿಲ್ಪ ಕಲೆಯ ಉತ್ತಮ ನಿದರ್ಶನಗಳು. ಗುಪ್ತ ಮತ್ತು ಪಾಲ-ಸೇನ ಶಿಲ್ಪ ಶೈಲಿಗಳ ಮಧ್ಯದ ಹಂತವನ್ನು ಸೂಚಿಸುವ ಈ ಕೃತಿಗಳು ಪಾಲಶಿಲ್ಪಿಗಳಿಗೆ ಪ್ರೇರಕ, ಇವುಗಳಲ್ಲಿ ಕೆಲವು ಗುಪ್ತ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ರಾಧಾಕೃಷ್ಣಮೂತಿಯದು ಕೃಶವಾದ ಲಾಲಿತ್ಯಮಯ ದೇಹ. ಮುಂದಿನ ಹಂತದ ಯಮುನೆಯ ಶಿಲ್ಪದಲ್ಲಿ ಕೆಲವು ಮಾರ್ಪಾಡುಗಳಾಗಿವೆ. ಅದಕ್ಕೂ ಮುಂದಿನ ಹಂತದ ಶಿಲ್ಪಗಳು ಭಾರವಾದ ದೇಹಗಳುಳ್ಳವಾಗಿಯೂ ಸಡಿಲವಾಗಿಯೂ ಉಬ್ಬಿಕೊಂಡು ಇರುವುವಲ್ಲದೆ ಕೆಲವು ಭಾರಿ ಪೆಡಸಾಗಿರುತ್ತವೆ. ಇಂದ್ರ ಮತ್ತು ಬೃಹಸ್ಪತಿ ಶಿಲ್ಪಗಳು ಇವಕ್ಕೆ ಉತ್ತಮ ನಿದರ್ಶನ. ಅತ್ಯಂತ ಭಾರವಾದ ಶಲಾಕೆಯಂತೆ ಪೆಡಸಾದ ದೇಹವುಳ್ಳ ಅಂಥ ಶಿಲ್ಪಗಳು ಮುಂದಿನ ಹಂತದಲ್ಲಿ ಕಲಾಭಿರುಚಿಯಲ್ಲಿ ಉಂಟಾದ ಅವನತಿಯನ್ನು ಪ್ರತಿಬಿಂಬಿಸುತ್ತವೆ. ಅವುಗಳ ನಿರೂಪಣೆ ಬಹಳ ಒರಟು. ವಾಲಿ ಸುಗ್ರೀವರ ಕಾಳಗ, ಸಂಜೀವಿನಿ ಪರ್ವತವನ್ನು ಹೊತ್ತ ಹನುಮಾನ್ ಇವು ಈ ರೀತಿಯ ಶಿಲ್ಪಗಳು. ಬೋಗ್ರಾ ಜಿಲ್ಲೆಯ ದೇವೋರಾದ ಸೂರ್ಯಶಿಲ್ಪ ಬಂಗಾಲ ಶೈಲಿಯ ಭಾವಾವೇಶದ ಪ್ರತೀಕ. ದುಂಡಾದ ಪ್ರಭಾ ಮಂಡಲದ ಕೆಳಗೆ ದಂಡಿ, ಪಿಂಗಳ, ಉಷಾ ಮತ್ತು ಪ್ರತ್ಯುಷಾ ಇವರಿಂದ ಆವೃತನಾಗಿ ನಿಂತ ಸೂರ್ಯನ ಕೈಗಳಲ್ಲಿ ಕಮಲಗಳಿವೆ. ಅವನು ಕಿರೀಟ, ಕಂಠಹಾರ, ಕೈಕಡಗಗಳು ಮತ್ತು ಪಾದರಕ್ಷೆಗಳನ್ನು ಧರಿಸಿದ್ದಾನೆ. ಪೀಠದ ಮೇಲೆ ಸಪ್ತಾಶ್ವಗಳನ್ನೂ ಅರುಣನನ್ನೂ ತೋರಿಸಲಾಗಿದೆ. ಈ ಶಿಲ್ಪ ಮತ್ಸ್ಯಪುರಾಣದ ವರ್ಣನೆಗೆ ಅನುಸಾರವಾಗಿದೆ. ಮಹಾಸ್ತಾನದ, ಚಿನ್ನದ ಲೇಪವುಳ್ಳ, ಕಂಚಿನ ಸರಳಸುಂದರ ಭಾವಪೂರ್ಣ ಮಂಜುಶ್ರೀ ಶಿಲ್ಪದ ಕೈಗಳು ವರದ ಮತ್ತು ವಿತರ್ಕ ಮುದ್ರೆಗಳಲ್ಲಿವೆ. ಧೋತ್ರ, ನಡುಪಟ್ಟಿ, ಉತ್ತರೀಯ, ಯಜ್ಞೋಪವೀತ, ಕರ್ಣಕುಂಡಲಗಳು ಮತ್ತು ಬೆಳ್ಳಿಯ ಕಣ್ಣುಗಳನ್ನು ತೊಡಿಸಲಾಗಿದೆ. ಇದು ಚಿನ್ನದ ಲೇಪವುಳ್ಳ ಕಂಚಿನ ವಿಗ್ರಹಪದ್ಧತಿಯ ಮೊದಲ ನಿದರ್ಶನ. ಅನಂತರ ಕಾಲದಲ್ಲಿ ಟಿಬೆಟ್ ಮತ್ತು ಪೂರ್ವಭಾರತಗಳಲ್ಲಿ ಈ ಪದ್ಧತಿ ಪ್ರಸಾರವಾಯಿತು. ಚುದ್ದ ಗ್ರಾಮದ ರಾಣಿ ಪ್ರಭಾವತಿ ಮಾಡಿಸಿದ ಎಂಟು ಕೈಗಳ ಸರ್ವಾಣಿ ಮತ್ತು ಕಲ್ಕತ್ತೆಯ ವಸ್ತುಸಂಗ್ರಹಾಲಯದಲ್ಲಿರುವ ಶಿವ-ಈ ಕಂಚು ಶಿಲ್ಪಗಳು ಗುಪ್ತಶೈಲಿಯ ಸಾಧಾರಣ ಕೃತಿಗಳು. ಎಲ್ಲ ತಾಮ್ರ-ಕಂಚು ಶಿಲ್ಪಗಳನ್ನು 6-7ನೇ ಶತಮಾನಗಳಿಗೆ ನಿರ್ದೇಶಿಸಬಹುದು. ಪಾಲ-ಸೇನರ ಕಾಲದ (750-1206) ಪಶ್ಚಿಮ ಬಂಗಾಲದ ಮೂರ್ತಿಶಿಲ್ಪ ಕಲೆ ವೈವಿಧ್ಯಪೂರ್ಣವಾದ್ದು. ಆಗಿನ ಶಿಲ್ಪಗಳು ರಾಜಮಹಲ್ ಬೆಟ್ಟಗಳಲ್ಲಿ ದೊರಕುವ ಕಪ್ಪು ಛಾಯೆಯ ಬಳಪದ ಕಲ್ಲಿನಲ್ಲಿ ಗುಪ್ತಶಿಲ್ಪಗಳ ಅನುಕರಣೆಯ, ಬೊಜ್ಜುದೇಹದ ಒರಟು ಶಿಲ್ಪಗಳನ್ನು ಮೊದಲು ತಯಾರಿಸಿದರು. ಫಲಕಗಳಲ್ಲಿರುವ ಉಬ್ಬುಶಿಲ್ಪಗಳು ಸರಳವಾಗಿಯೂ ಚಲನಾತ್ಮಕವಾಗಿಯೂ ಇದೆ. 10ನೆಯ ಶತಮಾನದ ವೇಳೆಗೆ ಉಡುಪುಗಳು, ಆಭರಣಗಳು ಮತ್ತು ಹಿನ್ನೆಲೆ ಸಂಪದ್ಭರಿತವೂ ಆಕರ್ಷಕವೂ ಆದುವು. ಶಕ್ತಿಯುತ ಕೃಶದೇಹ ಮತ್ತು ನೀಳ ಸ್ನಗ್ಧವದನದಿಂದ ಕೂಡಿದ ಮೂರ್ತಿಗಳು ಸತ್ವಪೂರ್ಣವಾಗಿವೆ. 11ನೆಯ ಶತಮಾನದ ವೇಳೆಗೆ ಮೇಲ್ನೋಟದ ಸೊಬಗಿಗೆ ಪ್ರಾಧಾನ್ಯದೊರಕಿ, ಶಿಲ್ಪಗಳು ನಿಸ್ಸತ್ತ್ವವಾದುವು. ಇವು ಅತಿ ನೀಳದೇಹ, ಅಸಹಜ ಸ್ನಿಗ್ಧತೆ, ಸೋಗಿನ ಚಲನೆ, ಅತ್ಯಲಂಕಾರದ ಉಡುಪು ಮತ್ತು ಆಭರಣಗಳಿಂದ ಕೂಡಿವೆ. ಪ್ರಾರಂಭದಲ್ಲಿ, ಅಕೃತ್ರಿಮ ಧಾರ್ಮಿಕ ಭಾವನೆಗಳಿಂದ ಪ್ರೇರಿತವಾದ ಶಿಲ್ಪಕಲೆ ಕ್ರಮೇಣ ಮತೀಯ ದೃಷ್ಟಿಯಲ್ಲಿ ಶುದ್ಧವಾಗಿದ್ದರೂ ಅಂತಸ್ಸತ್ವರಹಿತವಾಗಿ ರಾಜಾಸ್ಥಾನ ಸಹಜ ವಿಷಯಲಂಪಟತೆಯನ್ನು ಸೂಚಿಸುತ್ತವೆಂದರೆ ತಪ್ಪಾಗಲಾರದು.

ಈಗ ಬಾಸ್ಟನ್ ಸಂಗ್ರಹಾಲಯದಲ್ಲಿರುವ ಬುದ್ಧವಿಗ್ರಹ ಮೊದಲನೆಯ ಶೈಲಿಯ ಉತ್ತಮ ನಿದರ್ಶನ. ವಿಶ್ವಪದ್ಮಾಸನದ ಮೇಲೆ, ಭೂಮಿಸ್ಪರ್ಶಮುದ್ರೆಯಲ್ಲಿ ಕುಳಿತಿರುವ ಧ್ಯಾನಿಬುದ್ಧನ ಕಿರೀಟ. ಕಂಠಹಾರ, ಕರ್ಣಕುಂಡಲ ಮುಂತಾದ ಆಭರಣಗಳು ಅಸಹಜವಾದರೂ, ಮಹಾಯಾನ ಪಂಥದಲ್ಲಿ ನಡೆದ ಬುದ್ಧನ ದೈವೀಕರಣದ ಪ್ರಯತ್ನದಲ್ಲಿ ವಿಶ್ವಸಮ್ರಾಟನ ನಿರೂಪಣೆ ಸಹಜವಾಗಿದೆ. ಆ ಶಿಲ್ಪದ ಪ್ರಭಾವಳಿಯಲ್ಲಿ ಗೌತಮನ ಜನನ, ಮಹಾಪರಿನಿರ್ವಾಣ, ಮೊದಲಾದ ಕೆಲವು ಘಟನೆಗಳನ್ನೂ ಪೀಠದ ಮೇಲೆ ಭಕ್ತರ ಮತ್ತು ಯಕ್ಷರ ಮೂರ್ತಿಗಳನ್ನೂ ಕಡೆಯಲಾಗಿದೆ. ಕಲ್ಕತ್ತೆಯ ವಂಗೀಯ ಸಾಹಿತ್ಯ ಪರಿಷತ್ತಿನ ಸಂಗ್ರಹಾಲಯದಲ್ಲಿರುವ, ವಿಶ್ವಪದ್ಮಾಸನದ ಮೇಲೆ ಸಮಪಾದ ಸ್ಥಾನಕ ಭಂಗಿಯಲ್ಲಿ ನಿಂತ ಬುದ್ಧಶಿಲ್ಪದ ಪೀಠದ ಮೇಲೆ 9ನೆಯ ಶತಮಾನದ ಅಕ್ಷರಗಳಲ್ಲಿ `ಯೇ ಧರ್ಮಃ ಹೇತು ಪ್ರಭವಾ. . . .ಮಹಾಶ್ರವಣಃ ಎಂಬ ಬೌದ್ಧತತ್ತ್ವದ ಬರಹವಿದೆ. ಅದರ ಪ್ರಭಾವಳಿಯ ಮೇಲೆ ಅಪೂರ್ವವಾದ ಯೋಗಾಸನ ಮುದ್ರೆಯಲ್ಲಿ ಕುಳಿತ ಬುದ್ಧನ ತೊಡೆಗಳ ಮೇಲೆ ಸೇರಿಸಲಾದ ಕೈಗಳಲ್ಲಿ ಭಿಕ್ಷಾಪಾತ್ರೆಯನ್ನಿಡಲಾಗಿದೆ. ಪೀಠದ ಮೇಲೆ ಒಂದು ಮಂಗ ಮರದ ಮೇಲಿನ ಜೇನುಗೂಡಿನಿಂದ ಜೇನನ್ನು ತಂದು ಪಾತ್ರೆಯಲ್ಲಿ ಹಾಕುತ್ತಿರುವಂತೆ ರೂಪಿಸಲಾಗಿದೆ.

ಮಿಡ್ನಾಪುರ ಜಿಲ್ಲೆಯ ಬಾರಾಭೂಮ್‍ನಲ್ಲಿ ಸಿಕ್ಕಿದ, ಈಗ ಇಂಡಿಯನ್ ಸಂಗ್ರಹಾಲಯದಲ್ಲಿರುವ, ಋಷಭನಾಥನ ಶಿಲ್ಪ 10ನೆಯ ಶತಮಾನದ್ದು. ಗುಡಿಯ ಆಕಾರದ ಫಲಕದ ಮಧ್ಯದಲ್ಲಿ ಧ್ಯಾನಾಸಕ್ತನಾದ ಋಷಭನಾಥನ ಸುತ್ತ 23 ಜಿನಬಿಂಬಗಳಿವೆ. ಇಬ್ಬದಿಗಳಲ್ಲಿ ಚಾಮರಧಾರಿಗಳನ್ನೂ ಹಾರುತ್ತಿರುವ ಮಾಲಾಧಾರಿ ವಿದ್ಯಾಧರರನ್ನೂ ಪೀಠದ ಮೇಲೆ ಎರಡು ಸಿಂಹಗಳನ್ನೂ ಕೆಳಭಾಗದಲ್ಲಿ ವೃಷಭ ಮತ್ತು ಭಕ್ತದಂಪತಿಗಳನ್ನೂ ಅಂದವಾಗಿ ಕೆತ್ತಲಾಗಿದೆ. ಕಾಯೋತ್ಸರ್ಗ ಮುದ್ರೆಯಲ್ಲಿ ನಿಂತಿರುವ ಪಾಶ್ರ್ವನಾಥ ಮತ್ತು ಶಾಂತಿನಾಥರ ಶಿಲ್ಪಗಳ ಮೇಲೆ ನವಗ್ರಹಗಳನ್ನು ಕೆತ್ತಿರುವ 10-11ನೆಯ ಶತಮಾನದ ಶಿಲ್ಪಗಳು ಹಲವು ಎಡೆಗಳಲ್ಲಿ ದೊರಕಿವೆ.

ಈ ಕಾಲಕ್ಕೆ, ಸೇರುವ, ಪಶ್ಚಿಮ ಬಂಗಾಲದಲ್ಲಿ ದೊರಕಿರುವ, ಶಿವ-ಪಾರ್ವತಿಯರ ನಿರೂಪಣೆಯ ಅಥವಾ ಕಲ್ಯಾಣ ಸುಂದರ ಶಿಲ್ಪಗಳು ದಕ್ಷಿಣ ಭಾರತದ ಅಂಥ ಮೂರ್ತಿಗಳಷ್ಟು ರಮಣೀಯವಾಗಿಲ್ಲವಾದರೂ ಸ್ಥಳೀಯ ವೈವಾಹಿಕ ಪದ್ಧತಿಗಳನ್ನು ತಿಳಿಯಲು ಸಹಾಯಕವಾಗಿವೆ. 10 ಅಥವಾ 12 ಕೈಗಳುಳ್ಳ, ಪರಿವಾರಗಣಗಳಿಂದ ಸುತ್ತುವರಿಯಲ್ಪಟ್ಟ ನಟರಾಜ ತನ್ನ ವಾಹನವಾದ ನಂದಿಯ ಮೇಲೆ ನೃತ್ಯವಾಡುತ್ತಿರುವಂತೆ ತೋರಿಸುವ ಸತ್ತ್ವಪೂರ್ಣಶಿಲ್ಪಗಳು ಹಲವಾರು ಸಿಕ್ಕಿವೆ. ಕರಾಳರೂಪಿ ವಿರೂಪಾಕ್ಷನ ಮೂರ್ತಿ, ಸೇನ ದೊರೆಗಳ ಇಷ್ಟದೈವವಾದ ಪಂಚಮುಖಿ ದಶಬಾಹು ಸದಾಶಿವ ಈ ಸುಂದರಶಿಲ್ಪಗಳು ಸೇನರ ಕಾಲದವು. 11-12ನೆಯ ಶತಮಾನಗಳಿಗೆ ಸೇರಿದ ಚತುರ್ಭುಜ, ಗಜಲಕ್ಷ್ಮಿ, ಸರಸ್ವತಿ, ಸಿಂಹವಾಹಿನಿ, ದುರ್ಗೆ, ಆಸೀನ ಮಹಾಲಕ್ಷ್ಮಿ. ಲಿಂಗೋದ್ಭವಳಾದ, ಧ್ಯಾನಮುದ್ರೆಯಲ್ಲಿರುವ ಮಹಾಮಾಯೆ, ಚಾಮುಂಡಿ ಮುಂತಾದ ದೇವೀಮೂರ್ತಿಗಳು ಅನೇಕ ಸ್ಥಳಗಳಲ್ಲಿ ಸಿಕ್ಕಿವೆ.

ವಿವಿಧ ಪ್ರದೇಶಗಳಲ್ಲಿ ದೊರಕಿರುವ, ಪಶ್ಚಿಮ ಬಂಗಾಲದ ಅವನತಮುಖ ಶಿಲ್ಪ ಕಲೆಯನ್ನು ಪ್ರತಿಬಿಂಬಿಸುವ, ಮೂಷಿಕವಾಹನ ಷಡ್ಭುಜ ಗಣೇಶ, ಹೇರಂಬ ಗಣಪತಿ, ಸೂರ್ಯ, ಸೂರ್ಯನಾರಾಯಣ, ನವಗ್ರಹಗಳು ಮೊದಲಾದ ಶಿಲ್ಪಕೃತಿಗಳು ಇಂಡಿಯನ್ ವಸ್ತುಸಂಗ್ರಹಾಲಯದಲ್ಲಿವೆ. 8-13ನೆಯ ಶತಮಾನಗಳ ಪಶ್ಚಿಮ ಬಂಗಾಲದ ಶಿಲ್ಪಕಲೆಯ ಸೌಮ್ಯತೆ-ಲಾವಣ್ಯಗಳು ಯಾಂತ್ರಿಕವಾದರೂ ಅವುಗಳಲ್ಲಿ ತಾಂತ್ರಿಕ ಕೌಶಲವನ್ನು ಕಾಣಬಹುದು.

ನಾಣ್ಯ ಪದ್ಧತಿ ಬದಲಾಯಿಸಿ

ಪಶ್ಚಿಮ ಬಂಗಾಲದಲ್ಲಿ ನಾಣ್ಯಗಳ ಬಳಕೆ ಕ್ರಿ.ಪೂ 3ನೆಯ ಶತಮಾನದಲ್ಲಿ ಪ್ರಾರಂಭವಾಗಿರಬಹುದೆಂದು ಕಾಣುತ್ತದೆ. ಮಹಾಸ್ತಾನ ಶಾಸನದಲ್ಲಿ 4 ಕವಡೆಗಳ ಮೌಲ್ಯದ ಗಂಡಕ ಮತ್ತು ಕಾರ್ಷಾಪಣದ 1/64 ಭಾಗವಾದ ಕಾಕನಿಕ ನಾಣ್ಯಗಳು ಉಲ್ಲೇಖವಿದೆ. ಮೌರ್ಯರ ಕಾಲದ ಬೆಳ್ಳಿಯ ಮುದ್ರಾಂಕಿತ ನಾಣ್ಯಗಳು 2.54 ಸೆಂಮೀ ವ್ಯಾಸದ ತೆಳ್ಳನೆಚಿiÀು ವೃತ್ತಾಕಾರದವು. ಅವುಗಳ ಮೇಲೆ ರೇಖಾವಿನ್ಯಾಸ, ಪ್ರಾಣಿ, ಕದಿರುಬಿಲ್ಲೆ ಮತ್ತು ಆರು ಬಾಹುಗಳ ಚಿಹ್ನೆಗಳಿರುತ್ತಿದ್ದುವು. ಅವು 50ರಿಂದ 54 ಗ್ರೇನ್‍ಗಳಷ್ಟು ತೂಕವಾಗಿರುತ್ತಿದ್ದುವು. ವಿರಳವಾದರೂ ತಾಮ್ರದ ಮುದ್ರಾಂಕಿತ ನಾಣ್ಯಗಳೂ ಬಳಕೆಯಲ್ಲಿದ್ದುವು. ಕುಷಾಣರ ಚಿನ್ನದ ಮತ್ತು ತಾಮ್ರದ ಮುದ್ರಾಂಕಿ ನಾಣ್ಯಗಳೂ ಬಳಕೆಯಲ್ಲಿದ್ದುವು. ಕುಷಾಣರ ಚಿನ್ನದ ಮತ್ತು ತಾಮ್ರದ ನಾಣ್ಯಗಳೂ ದೊರಕಿವೆ. ಪೆರಿಪ್ಲಸ್ ಗ್ರಂಥದಲ್ಲಿ ಹೇಳಿರುವ ಕಾಲ್ಟಿಸ್ ಬಹುಶಃ ಕುಷಾಣರ ಚಿನ್ನದ ನಾಣ್ಯ. ಆ ಪ್ರದೇಶದಲ್ಲಿ ಗುಪ್ತರ ಕಾಲದಲ್ಲಿ ಅವರ ಚಿನ್ನದ ನಾಣ್ಯಗಳ ಬಳಕೆ ಹೆಚ್ಚಾಗಿತ್ತು. ಗುಪ್ತರ ಮೊದಲ ನಾಣ್ಯಗಳು ಕುಷಾಣರ ಅನುಕರಣೆಯವಾಗಿದ್ದರೂ ಕ್ರಮೇಣ ಅವರು ಕಲಾತ್ಮಕವಾದ ಅನೇಕ ಹೊಸ ರೀತಿಯ ನಾಣ್ಯಗಳನ್ನು ಹೊರಡಿಸಿದರು. ಅವರ 17-18 ಬಗೆಯ ನಾಣ್ಯಗಳ ಪೈಕಿ ಬಿಲ್ಲುಗಾರ ನಾಣ್ಯವನ್ನು ಎಲ್ಲ ದೊರೆಗಳೂ ಹೊರಡಿಸಿದರು. ಅವರ ನಾಣ್ಯಗಳ ಹಿಮ್ಮುಖದಲ್ಲಿ, ಕುಳಿತ ಅಥವಾ ನಿಂತ ದೇವಿಯ ಚಿತ್ರ ಸಾಮಾನ್ಯವಾಗಿರುತ್ತಿತ್ತು. ಕ್ಷತ್ರಪರ ಅನುಕರಣೆಯ ಬೆಳ್ಳಿಯ ನಾಣ್ಯಗಳನ್ನು 2ನೆಯ ಚಂದ್ರಗುಪ್ತ ಮೊದಲಿಗೆ ಹೊರಡಿಸಿದನಾದರೂ ಬಂಗಾಲದಲ್ಲಿ ಅವು ಸ್ಕಂಧಗುಪ್ತನ ತರುವಾಯ ರೂಢಿಗೆ ಬಂದರುವು. ಗುಪ್ತರ ತಾಮ್ರದ ನಾಣ್ಯಗಳು ಈ ಪ್ರದೇಶದಲ್ಲಿ ವಿರಳ. ಆ ಕಾಲದ ಬಂಗಾಲದ ಶಾಸನಗಳಲ್ಲಿ ದೀನಾರ ಮತ್ತು ಬೆಳ್ಳಿಯ ರೂಪಕ ನಾಣ್ಯಗಳ ಉಲ್ಲೇಖಗಳಿವೆ. ಒಂದು ದೀನಾರ 16 ರೂಪಕಗಳಿಗೆ ಸಮವೆಂದು ತಿಳಿಸಲಾಗಿದೆ. 6ನೆಯ ಶತಮಾನದ ಉತ್ತರಾರ್ಧದಲ್ಲಿ ಗುಪ್ತನಾಣ್ಯಗಳ ಅನುಕರಣೆಯ ಚಿನ್ನದ ನಾಣ್ಯಗಳು-ಮುಖ್ಯವಾಗಿ ಬಿಲ್ಲುಗಾರ ಮಾದರಿ-ಬಂಗಾಲದಲ್ಲಿ ಚಲಾವಣೆಗೆ ಬಂದುವು. ಸಮಾಚಾರದೇವ ಮತ್ತು ಜುಗುಪ್ತರ ಅಂಥ ನಾಣ್ಯಗಳ ಹಿಂಬದಿಯಲ್ಲಿ ಲಕ್ಷ್ಮಿ ಅಥವಾ ಗಜಲಕ್ಷ್ಮಿಯವರ ಚಿತ್ರಗಳಿವೆ. ಸಮಾಚಾರದೇವನ ಕೆಲವು ನಾಣ್ಯಗಳ ಮುಮ್ಮುಖದಲ್ಲಿ ದೊರೆ ರಾಜಲೀಲಾ ಮುದ್ರೆಯಲ್ಲಿ ಕುಳಿತಂತೆಯೂ ಹಿಮ್ಮುಖದಲ್ಲಿ ಕುಳಿತ ಸರಸ್ವತಿಯ ಚಿತ್ರವೂ ಇವೆ. ಶಶಾಂಕನ ಕಾಲದಲ್ಲಿ ಬಳಕೆಗೆ ಬಂದ ಬೆರಕೆ ಚಿನ್ನದ ನಾಣ್ಯಗಳ ಮುಮ್ಮುಖದಲ್ಲಿ ಮೇಲೆ ಒರಗಿನಿಂತ ಶಿವನ, ಮತ್ತು ಹಿಮ್ಮುಖದಲ್ಲಿ ಕುಳೀತ ಗಜಲಕ್ಷ್ಮಿಯ ಚಿತ್ರಗಳಿದ್ದುವು. ಈ ಬೆರಕೆ ಚಿನ್ನದ ನಾಣ್ಯಗಳು 7-8ನೆಯ ಶತಮಾನಗಳಲ್ಲಿ ಹೆಚ್ಚು ಬಳಕೆಯಲ್ಲಿದ್ದುವು. ಅವುಗಳ ಮುಮ್ಮುಖದಲ್ಲಿ ಧನುರ್ಧಾರಿಯಾಗಿ ನಿಂತ ಅರಸ, ಹಿಮ್ಮುಖದಲ್ಲಿ ನಿಂತ ದೇವಿ ಮತ್ತು ಇಬ್ಬದಿಗಳಲ್ಲೂ ಕೆಲವು ಅಸ್ಪಷ್ಟ ಶಾಸನಗಳು ಇರುತ್ತಿದ್ದುವು. 8ನೆಯ ಶತಮಾನದ ಒಂದು ನಾಣ್ಯದ ಮುಂಬದಿಯಲ್ಲಿ ಅವಲೋಕಿತೇಶ್ವರನ ಮುಂದೆ ಅಂಜಲಿ ಹಸ್ತನಾದ ದೊರೆಯ ಚಿತ್ರವೂ ಹಿಂಬದಿಲಯಲ್ಲಿ ಗಜಧ್ವಜದ ಚಿತ್ರವೂ ಶ್ರೀವಿಂಧ್ಯಶಕ್ತಿ ಎಂಬ ಬರಹವೂ ಇವೆ. 9ನೆಯ ಶತಮಾನದ ದೇವಪಾಲನ ನಾಣ್ಯಗಳ ಮೇಲೆ ಧನುರ್ಬಾಣಧಾರಿ ದೊರೆಯ ಮತ್ತು ಹಿಂಬದಿಯಲ್ಲಿ ಲಕ್ಷ್ಮಿಯ ಚಿತ್ರಗಳಿವೆ. ಶ್ರೀವಿಗ್ರ ಅಥವಾ ವಿಗ್ರ ಎಂಬ ಶಾಸನವುಳ್ಳ ತಾಮ್ರ ಮತ್ತು ಬೆಳ್ಳಿಯ ನಾಣ್ಯಗಳು ವಿಗ್ರಹ ಪಾಲನವಿರಬಹುದು. ಪಾಲರ ಶಾಸನಗಳಲ್ಲಿ ದ್ರಮ್ಮನಾಣ್ಯದ ಉಲ್ಲೇಖವಿದೆ. ಸೇನರ ಶಾಸನಗಳಲ್ಲಿ ಉಲ್ಲೇಖಿಸಿರುವ ಪುರಾಣ ಮತ್ತು ಕಪರ್ದಕ ಪುರಾಣಗಳು ಕವಡೆಯ ಬೆಲೆಯವೆಂದೂ, ನಾಕಾಯಾನದ ತೆರ ಕೊಡಲು ಇವನ್ನು ಬಳಸಲಾಗುತ್ತಿತ್ತೆಂದೂ ಹೇಳಲಾಗಿದೆ. ಪುರಾಣ ಮತ್ತು ಕಪರ್ದಕ ಪುರಾಣಗಳು ಬೆಳ್ಳಿಯ ನಾಣ್ಯಗಳೆಂದು ಭಂಡಾರ್ಕರ್ ಭಾವಿಸಿದ್ದಾರೆ. ಅವು ನಾಣ್ಯಗಳಲ್ಲ, ಕವಡೆಯ ಬೆಲೆಯಲ್ಲಿ ಸೂಚಿಸುತ್ತಿದ್ದ ಮೌಲ್ಯಮಾಪನವೆಂಬುದಾಗಿ ಎಸ್.ಕೆ.ಚಟರ್ಜಿ ವಾದಿಸಿದ್ದಾರೆ. ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿ ಬಂಗಾಲವೂ ಸೇರಿದಂತೆ ಇಡೀ ರಾಜ್ಯದಲ್ಲಿ ಏಕರೂಪದ ನಾಣ್ಯಪದ್ಧತಿಯನ್ನು ಜಾರಿಗೆ ತಂದರು. ಆದರೆ ಕೆಲವು ಬಾರಿ ದೆಹಲಿಯ ಸುಲ್ತಾನರು ಪಶ್ಚಿಮ ಬಂಗಾಲದ ಟಂಕಸಾಲೆಯಲ್ಲಿ ನಾಣ್ಯಗಳನ್ನು ತಯಾರಿಸುತ್ತಿದ್ದರು; ಅಥವಾ ಅವರು ಬಂಗಾಲಕ್ಕಾಗಿ ವಿಶಿಷ್ಟವಾದ ನಾಣ್ಯಗಳನ್ನು ಹೊರಡಿಸುತ್ತಿದ್ದುದುಂಟು. ಅಲ್ಲದೆ ಆಗಾಗ್ಗೆ ಸ್ವತಂತ್ರ ಬಂಗಾಲದ ನವಾಬರು ತಮ್ಮ ಪ್ರತ್ಯೇಕ ನಾಣ್ಯಗಳನ್ನು ಬಳಸುತ್ತಿದ್ದರು.

ಗುಲಾಮೀ ಸಂತತಿಯ ರಜಿûಯಾ ಬೇಗಮಳ ಕಾಲದಲ್ಲಿ ಲಖ್ನೌತಿಯ ಹೆಸರಿನಲ್ಲಿ ಮುದ್ರಿಸಿದ ನಾಣ್ಯಗಳು ದೊರಕಿವೆ. ತುಗಲಕ್ ಮಹಮ್ಮದನ ಕಾಲದಲ್ಲೂ ಲಖ್ನೌತಿಯ ಹೆಸರಿನಲ್ಲಿ ಮುದ್ರಿಸಿದ ನಾಣ್ಯಗಳು ದೊರಕಿವೆ. ತುಗಲಕ್ ಮಹಮ್ಮದನ ಕಾಲದಲ್ಲೂ ಲಖ್ನೌತಿಯ ಟಂಕಸಾಲೆಯಲ್ಲಿ ಚಿನ್ನದ, ಬೆಳ್ಳಿಯ ಮತ್ತು 1329ರ ಅನಂತರ ತಾಮ್ರದ, ನಾಣುಗಳನ್ನು ಹೊರಡಿಸಲಾಗಿತ್ತು. ಮೊದಲ ನಾಣ್ಯಗಳ ಮೇಲೆ ಅಂದವಾದ ಅಲ್ ಶಹೀದ್ ಘಿಯಾಸುದ್ದೀನ್ ತುಗಲಕ್ ಎಂಬ, ಮತ್ತು ಅನಂತರಕಾಲದ ನಾಣ್ಯಗಳ ಮೇಲೆ ಕಲಿಮಾದ, ಬರಹ ಇರುತ್ತಿತ್ತು. ಮೊದಲ ನಾಣ್ಯಗಳ ತೂಕ 170 ಗುಂಜಿಗಳು. ಅನಂತರಕಾಲದ ನಾಣ್ಯಗಳು 201.5 ಗುಂಜಿ ತೂಕವಿರುತ್ತಿದ್ದುವು. ಬೆಳ್ಳಿಯ ನಾಣ್ಯಗಳ ತೂಕ 144 ಗುಂಜಿಗಳು. 1327ರ ಅನಂತರ ಬೆರಕೆ ಬೆಳ್ಳಿಯ ಟಂಕನಾಣ್ಯಗಳನ್ನು ಹೊರಡಿಸಲಾಯಿತು. ಮುಮ್ಮುಖದಲ್ಲಿ ಕಲಿಮಾ ಮತ್ತು ಕಲೀಫರ ಹೆಸರ ಮತ್ತು ಹಿಂಬದಿಯಲ್ಲಿ ತನ್ನ ಹೆಸರು, ಟಂಕಸಾಲೆಯ ಹೆಸರು, ನಾಣ್ಯ ಹೊರಡಿಸಿದ ವರ್ಷದ ಉಲ್ಲೇಖ ಇದ್ದ ಬೆರಕೆ ಬೆಳ್ಳಿಯ ಮತ್ತು ತಾಮ್ರದ ನಾಣ್ಯಗಳನ್ನು ಷೇರ್ ಷಾ ಪಾಂಡುವ ಟಂಕಸಾಲೆಯಿಂದ ಹೊರಡಿಸಿದ. 180 ಗುಂಜಿ ತೂಕದ ಆ ಬೆಳ್ಳಿಯ ರುಪಿಯಾಗಳು ಭಾರತದ ಮೊದಲ ರೂಪಾಯಿಗಳು. ಅವನ ತಾಮ್ರದ ಪೈಸಾಗಳು ಭಾರತದ ಮೊದಲ ಪೈಸೆ.

ಪಶ್ಚಿಮ ಬಂಗಾಲದ ಸ್ವತಂತ್ರರಾದ. ಅಥವಾ ಹೆಸರಿಗೆ ದೆಹಲಿ ದರ್ಬಾರಿಗೆ ಅಧೀನರಾಗಿದ್ದ, ನವಾಬರಲ್ಲಿ ಘಿಯಾಸುದ್ದೀನ್ ಇವಾeóï (1211-1226), ಮುಘಿಸುದ್ದೀನ್ ಯುeóïಬಾಕ್ (1246-1258), ರುಕ್ನುದ್ದೀನ್ ಕಾಯಿಕುಸ್ (1291-1302), ಷಂಷುದ್ದೀನ್ ಫಿರೋeóï ಷಾ (1302-1318), ಷಿಹಾಬುದ್ದೀನ್ ಬುಘ್ರಾ ಷಾ (131) ಮತ್ತು ಘಿಯಾಸುದ್ದೀನ್ ಬಹದೂರ್ ಷಾ (1310-23) ಇವರು ತಮ್ಮ ಪ್ರತ್ಯೇಕ ಬೆಳ್ಳಿ ನಾಣ್ಯಗಳನ್ನು ಹೊರಡಿಸಿದ್ದರು. ಷಂಷುದ್ದೀನ್ ಫಿರೋeóï ಷಾನ ಕೆಲವು ಚಿನ್ನದ ನಾಣ್ಯಗಳೂ ಸಿಕ್ಕಿವೆ. ಮೊದಲಿಬ್ಬರ ನಾಣ್ಯಗಳ ಮುಮ್ಮುಖದಲ್ಲಿ ಕಲಿಮಾ ಮತ್ತು ವರ್ಷ ಹಿಂಬದಿಯಲ್ಲಿ ನವಾಬನ ಹೆಸರು ಮತ್ತು ಬಿರುದು ಇರುತ್ತಿದ್ದುವು. ಕಲಿಮಾದ ಬದಲು ಕಲೀಫರ ಮತ್ತು ಅಲ್ ಮುಸ್ಟಸಿಮ್ ಬರಹಗಳನ್ನು ಕೊನೆಯ ನಾಲ್ವರು ಬಳಸಿದ್ದರು.

ಇಲಿಯಾಸ್ ಷಾಹಿ ನವಾಬರ ಕಾಲದಿಂದ 1556ರ ವರೆಗೆ ಆಳಿದ ಆರು ಮನೆತನಗಳ ನವಾಬರು ದೆಹಲಿಯ ನಾಣ್ಯ ಪದ್ಧತಿಯನ್ನು ಅನುಸರಿಸಿದರೂ ಅವರ ನಾಣ್ಯಗಳ ಅಂಚುಗಳಲ್ಲಿದ್ದ ಚಿಹ್ನೆಗಳು ಬೇರೆಯಾಗಿದ್ದುವು. ಮುಂಬದಿಯಲ್ಲಿ ಕಲೀಫರ ಹೆಸರು ಮತ್ತು ಇಸ್ಲಾಮಿಗೆ ಸಂಬಂಧಿಸಿದ ಬರಹಗಳಿರುತ್ತಿದ್ದುವು. ಜಲಾಲುದ್ದೀನನ ನಾಣ್ಯಗಳ ಮೇಲೆ ಕಲಿಮಾ, ಅದರ ಕೆಳಗೆ ಟಂಕಸಾಲೆಯ ಅಂಕಿತ ಮತ್ತು ವರ್ಷದ ಉಲ್ಲೇಖ ಇರುತ್ತಿದ್ದುವು. ಹುಸೇನ್ ಷಾಹ ಮತ್ತು ಅವನ ಉತ್ತರಾಧಿಕಾರಿಗಳು ತಮ್ಮ ನಾಣ್ಯಗಳ ಇಬ್ಬದಿಗಳಲ್ಲೂ ತಮ್ಮ ಬಿರುದುಗಳನ್ನು ಅರಬ್ಬಿ ಭಾಷೆಯಲ್ಲಿ ಬರೆಸುತ್ತಿದ್ದರು. ರಾಜಾ ಗಣೇಶ ಮತ್ತಿತರ ಹಿಂದೂ ದೊರೆಗಳ ನಾಣ್ಯಗಳ ಮೇಲೆ ಬಂಗಾಲಿ ಬರಹ ಮತ್ತು ಶಕವರ್ಷ ಇರುತ್ತಿದ್ದುವು. ಅವುಗಳ ತೂಕ-166-170 ಗುಂಜಿಗಳು.

ಪಶ್ಚಿಮ ಬಂಗಾಲ 1556ರಲ್ಲಿ ಅಕ್ಬರನ ವಶವಾದ ಮೇಲೆ ಮೊಗಲ್ ನಾಣ್ಯಪದ್ಧತಿ ರೂಢಿಗೆ ಬಂತು. ಆದರೆ ಷಾಹಜಹಾನನ ಮಗ ಷಾ ಷೂಜಾ ಅಲ್ಲಿಯ ಪ್ರಾಂತ್ಯಾಧಿಕಾರಿಯಾಗಿದ್ದಾಗ (1656-57) ಅಲ್ಲಿಯ ಅಕ್ಬರ್ ನಗರದಿಂದ ಒಂದು ಕಡೆ ಕಲಿಮಾ ಮತ್ತು ಕಲೀಫನ ಹೆಸರು, ಮತ್ತೊಂದು ಕಡೆ ತನ್ನ ಹೆಸರು ಮತ್ತು ಬಿರುದುಗಳು ಇದ್ದ ಪ್ರತ್ಯೇಕ ಚೌಕಾಕಾರದ ನಾಣ್ಯಗಳನ್ನು ಹೊರಡಿಸಿದ್ದನೆಂದು ತಿಳಿದುಬರುತ್ತದೆ.

ಭಾರತಕ್ಕೆ ಬಂದ ಯೂರೋಪಿಯನ್ ವರ್ತಕರು ಪಶ್ಚಿಮ ಬಂಗಾಲದಲ್ಲಿ ತಮ್ಮ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಿ ತಮ್ಮ ನಾಣ್ಯಗಳನ್ನು ಬಳಸಲಾರಂಭಿಸಿದರು. ಪೋರ್ಚುಗೀಸರು ಚಿನ್ನದ ಮೆನೊಯಲ್, ಬೆಳ್ಳಿಯ ಎಸ್ಪೆರ, ಬಸ್ತಿಯದ್ ಅಥವಾ ಸೆರಾಫಿಮ್ ಮತ್ತು ಟಂಗ ನಾಣ್ಯಗಳನ್ನು ಬಳಸುತ್ತಿದ್ದರು. 1611ರ ಅನಂತರ ತಾಮ್ರದ ಬುeóÁ ರುಕ್ಕೋಸ್ ನಾಣ್ಯಗಳನ್ನು ಹೊರಡಿಸಿದರು. ಡಚ್ಚರು ತಮ್ಮ ವಸಾಹತುಗಳಲ್ಲಿ ಮುಂಬದಿಯಲ್ಲಿ ಖಡ್ಗಧಾರಿ ಕುದುರೆ ಸವಾರನ ಚಿತ್ರ, ಹಿಂಬದಿಯಲ್ಲಿ ಎರಡು ಸಿಂಹಗಳ ಮೇಲೆ ರಾಜಚಿಹ್ನೆ ಮತ್ತು ಕೆಲವು ಬರಹಗಳು ಇದ್ದ ಬೆಳ್ಳಿಯ ಡುಕಾಟೂನ್ಸ್ ನಾಣ್ಯಗಳನ್ನು ಬಳಸುತ್ತಿದ್ದರು. ಡೇನರು ಸೀಸ ಮತ್ತು ತಾಮ್ರದ 10.2 ಮತ್ತು 1 ಕಾಸುಗಳನ್ನು ಬೆಳ್ಳಿಯ ಪಣಮ್ ಮತ್ತು ಚಿನ್ನದ ಪಗೋಡಗಳನ್ನು ಮತ್ತು ತಮ್ಮ ಮಾತೃಭೂಮಿಯಲ್ಲಿ ಚಲಾವಣೆಯಲ್ಲಿದ್ದ ಚಿನ್ನದ ಡುಕಾಟ್ಸ್ ನಾಣ್ಯಗಳನ್ನು ಬಳಸುತ್ತಿದ್ದರು. ಫ್ರೆಂಚರು ಚಂದ್ರನಗರ್‍ನಿಂದ ತಮ್ಮ ನಾಣ್ಯಗಳನ್ನು ಹೊರಡಿಸುತ್ತಿದ್ದರೆಂದು ಹೇಳಲಾಗಿದ್ದರೂ ಅವು ಈವರೆಗೆ ಸಿಕ್ಕಿಲ್ಲ. ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಮೊದಲಿಗೆ ಸ್ಥಳೀಯ ನಾಣ್ಯಗಳನ್ನು ಬಳಸುತ್ತಿತ್ತು. 1764ರ ಅನಂತರ ಕಲ್ಕತ್ತದ ಮುರ್ಷಿದಾಬಾದ್ ಟಂಕಸಾಲೆಯನ್ನು ಸ್ಥಾಪಿಸಿ ಅಲ್ಲಿಂದ ಸ್ವಂತ ನಾಣ್ಯಗಳನ್ನು ಹೊರಡಿಸಲಾರಂಭಿಸಿತು. 1835ರಿಂದ ಇಡೀ ಭಾರತ ಬ್ರಿಟಿಷ್ ಪ್ರದೇಶಗಳಲ್ಲಿ ಏಕರೂಪದ ನಾಣ್ಯಪದ್ಧತಿ ಜಾರಿಗೆ ಬಂತು. 1947ರ ಅನಂತರ ಸ್ವತಂತ್ರ ಭಾರತದ ನಾಣ್ಯಪದ್ಧತಿ ಜಾರಿಯಲ್ಲಿದೆ.

ಪಶ್ಚಿಮ ಬಂಗಾಳದ ಹೆಮ್ಮೆ: ಈಡನ್ ಗಾರ್ಡನ್ಸ್ ಕ್ರೀಡಾಂಗಣದ ವಿಶಾಲ ದೃಶ್ಯ

ಪಶ್ಚಿಮ ಬಂಗಾಳ ಸರ್ಕಾರ ಬದಲಾಯಿಸಿ

  • ಮುಖ್ಯ ಮಂತ್ರಿ : ಮಮತಾ ಬ್ಯಾನರ್ಜಿ-ಅಧಿಕಾರ ಸ್ವೀಕಾರ= 22 ಮೇ, 2009 –ಅವಧಿ = 19 ಮೇ, 2011 ವರೆಗೆ
  • ೨೦೧೧ ರ ವಿಧಾನ ಸಭೆ ಚುಣಾವಣೆ
  • ಪಕ್ಷಗಳ ಬಲಾಬಲ-
  • 294 ಸದಸ್ಯ ಬಲದ ವಿಧಾನಸಭೆಯಲ್ಲಿ
  • ತೃಣಮೂಲ ಕಾಂಗ್ರೆಸ್‌ 184,
  • ಎಡ ಪಕ್ಷಗಳ ಒಕ್ಕೂಟ 65,
  • ಕಾಂಗ್ರೆಸ್‌ 42 ಸ್ಥಾನಗಳನ್ನು ಗೆದ್ದಿವೆ.
  • ಇತರೆ: 3 ಸ್ಥಾನಗಳು.
  • ಟಿಎಂಸಿ ಶೇ 38.93, ಸಿಪಿಎಂ ಶೇ 30.8ರಷ್ಟು ಮತ ಗಳಿಸಿವೆ. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಿಕೊಂಡಿದೆ. ಶೇ 17ರಷ್ಟು ಮತಗಳನ್ನು ಪಡೆದು, ಎರಡು ಸ್ಥಾನಗಳನ್ನು ಪಡೆದಿದೆ.[೪]
  • ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 29, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಡೆಯಲಿದೆ. ಎರಡು ಮತದಾನ ದಿನಾಂಕ ಹೊಂದಿರುತ್ತದೆ - ಏಪ್ರಿಲ್ 4 ಮತ್ತು ಏಪ್ರಿಲ್ 11. ಇತರ ಹಂತಗಳು ಪ್ರಿಲ್ 17, 21, 25, 30 ಮತ್ತು ಮೇ 5 ರಂದು ನಡೆಯಲಿದೆ.

ಮಮತಾ ಬ್ಯಾನರ್ಜಿ ಪುನಃ ಮುಖ್ಯಮಂತ್ರಿ ಬದಲಾಯಿಸಿ

  • ದಿ.27-05-2016 ರಂದು 12.45pmನಲ್ಲಿ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸತತ ಎರಡನೇ ಅವಧಿಗೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.ಕೋಲ್ಕತ್ತದ ರೆಡ್‌ ರೋಡ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಮತಾ ಅವರಿಗೆ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಅವರ ಜೊತೆಯಲ್ಲಿ 42 ಸಚಿವರು ಸಹ ಪ್ರಮಾಣವಚನ ಸ್ವೀಕರಿಸಿದರು.
  • ತಮ್ಮ ಪಕ್ಷಕ್ಕೆ ಬಹುಮತ ಕೊಟ್ಟದ್ದಕ್ಕಾಗಿ ಜನರಿಗೆ ಅವರು ಧನ್ಯವಾದಗಳನ್ನು ಹೇಳಿದರು. 294 ಸ್ಥಾನಗಳ ಪಶ್ಚಿಮ ಬಂಗಾಲ ವಿಧಾನಸಭೆಯಲ್ಲಿ ಟಿಎಂಸಿ 211 ಸ್ಥಾನಗಳನ್ನು ಪಡೆದಿದೆ. 42 ಸಚಿವರನ್ನೊಳಗೊಂಡ ಮಮತಾ ಅವರ ಸಂಪುಟದಲ್ಲಿ 18 ಮಂದಿ ಹೊಸಬರಿಗೆ ಅವಕಾಶ ಕೊಡಲಾಗಿದೆ.[೫][೬]

ಆರ್ಥಿಕ ಸುಧಾರಣೆಗಳ ಮಾಹಿತಿ ಬದಲಾಯಿಸಿ

ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ ೧.೨ "State animals, birds, trees and flowers" (PDF). Wildlife Institute of India. Archived from the original (PDF) on 15 ಜೂನ್ 2007. Retrieved 5 March 2012. {{cite web}}: Unknown parameter |dead-url= ignored (help)
  2. "Census Population" (PDF). Census of India. Ministry of Finance India. Archived from the original (PDF) on 2008-12-19.
  3. "District Profiles".
  4. "(ಪ್ರಜಾವಾಣಿ ೨೪-೩-೨೦೧೬". Archived from the original on 2021-05-12. Retrieved 2016-03-24.
  5. http://www.hindustantimes.com/assembly-elections/mamata-to-take-oath-as-bengal-cm-all-about-the-venue-guest-list/story-Qm3Shjhx2pUMkOYWpbSARJ.html
  6. https://wbxpress.com/council-ministers-west-bengal-2016/

ಬಾಹ್ಯ ಸಂಪರ್ಕಗಳು ಬದಲಾಯಿಸಿ

Other
  • West Bengal Encyclopædia Britannica entry
  • West Bengal ಓಪನ್ ಡೈರೆಕ್ಟರಿ ಪ್ರಾಜೆಕ್ಟ್
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: