ನರಸಿಂಹರಾಜು

ಭಾರತೀಯ ನಟ

ಟಿ.ಆರ್.ನರಸಿಂಹರಾಜು (ಜುಲೈ ೨೪,೧೯೨೩ - ಜುಲೈ ೧೧,೧೯೭೯) ಕನ್ನಡ ಚಿತ್ರರಂಗದ ಪ್ರಮುಖ ಹಾಸ್ಯ ನಟ ಮತ್ತು ನಿರ್ಮಾಪಕರು. ಅವರು ಹಾಸ್ಯ ಚಕ್ರವರ್ತಿ ಎಂದೇ ಚಿತ್ರರಂಗದಲ್ಲಿ ಪ್ರಸಿದ್ಧರು.

ಟಿ. ಆರ್. ನರಸಿಂಹರಾಜು
ನರಸಿಂಹರಾಜು
ಜನನಜುಲೈ ೨೪, ೧೯೨೩
ತಿಪಟೂರು
ಮರಣಜುಲೈ ೨೦, ೧೯೭೯
ಉದ್ಯೋಗಚಲನಚಿತ್ರ ನಟ,ನಿರ್ಮಾಪಕ ಮತ್ತು ರಂಗಭೂಮಿ ಕಲಾವಿದ

ನರಸಿಂಹರಾಜು ಅವರ ಕುರಿತ ಪ್ರಸಿದ್ಧ ಮಾತಿದೆ. "ಜನ ಮೆಚ್ಚಿರುವ ಯಾವುದೇ ಶ್ರೇಷ್ಠ ನಟ ನಟಿಯರಿರಲಿ, ಅವರು ನಟಿಸಿರುವ ನೂರಿನ್ನೂರು ಚಿತ್ರಗಳು ಇರುತ್ತವೆಂದರೂ ಅವರ ಬೆರಳೆಣಿಕೆಯಷ್ಟು ಪಾತ್ರಗಳು ಪ್ರೇಕ್ಷಕರನ್ನು ಸೆಳೆದಿರುತ್ತವೆ. ಕೆಲವೊಂದು ಜನ ಅವರ ಅಪಾರ ಅಭಿಮಾನಿಗಳಾಗಿರುತ್ತಾರೆ ಎಂದುಕೊಂಡರೂ ಆ ಸಂಖ್ಯೆ ಇನ್ನೊಂದಷ್ಟು ಎಂಬಂತಿರಬಹುದು ಅಷ್ಟೇ. ಆದರೆ ನರಸಿಂಹರಾಜು ಅಂತಹ ಕಲಾವಿದನಿಗೆ ಈ ಮಾತು ಅನ್ವಯಿಸುವುದಿಲ್ಲ. ಅವರ ಪ್ರತೀ ಪಾತ್ರವೂ ಜನತೆಗೆ ಪ್ರಿಯವಾಗಿತ್ತು".

ಜೀವನ ಬದಲಾಯಿಸಿ

ನರಸಿಂಹರಾಜು ಅವರು ಜುಲೈ ೨೪, ೧೯೨೬ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು. ತಂದೆ ರಾಮರಾಜು ಪೋಲೀಸ್‌ ಇಲಾಖೆಯ ನೌಕರರಾಗಿದ್ದರು, ತಾಯಿ ವೆಂಕಟಲಕ್ಷ್ಮಮ್ಮನವರು. ಬಾಲ್ಯದಲ್ಲೇ ಅಭಿನಯಕ್ಕೆ ಬಂದ ಅವರ ಜೀವನವೇ ಕಲೆಯ ಬದುಕು.

ರಂಗಭೂಮಿಯಲ್ಲಿ ಬದಲಾಯಿಸಿ

ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಸಿ.ಬಿ.ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಂಡ ನರಸಿಂಹರಾಜು ಅವರಿಗೆ ಅಲ್ಲಿಯೇ ಬದುಕಿನ ಶಿಕ್ಷಣವೂ ಆರಂಭವಾಯಿತು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಸಹಜವಾಗಿ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ಸಹಜವಾಗಿತ್ತು. ರಂಗಮಂಚದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರು ನಗೆಹೊನಲು ಹರಿಸುತ್ತಿದ್ದರು.

ನರಸಿಂಹರಾಜು ಅವರು ಪೌರಾಣಿಕ ಪಾತ್ರಗಳನ್ನು - ವಿಶ್ವಾಮಿತ್ರ, ರಾಮ, ಕೆಲವೊಮ್ಮೆ ರಾವಣ. ಭರತ, ಇನ್ನು ಕೆಲವು ಸಲ ಲಕ್ಷ್ಮಿಯ ಪಾತ್ರವನ್ನೂ ನಿರ್ವಹಿಸುತ್ತಿದ್ದರು. ಆಗಲೇ ಜನಪ್ರಿಯತೆ ಪಡೆದಿದ್ದ `ಬೇಡರ ಕಣ್ಣಪ್ಪ` ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ನರಸಿಂಹರಾಜು ತುಂಬಾ ಜನಪ್ರಿಯತೆ ಪಡೆದರು.

`ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ`, `ಎಡತೊರೆಯ ಕಂಪೆನಿ`, `ಹಿರಣ್ಣಯ್ಯನವರ ಮಿತ್ರಮಂಡಲಿ`, `ಭಾರತ ಲಲಿತ ಕಲಾ ಸಂಘ`, ಬೇಲೂರಿನ `ಗುಂಡಾ ಜೋಯಿಸರ ಕಂಪೆನಿ`, ಗುಬ್ಬಿಯ `ಚೆನ್ನಬಸವೇಶ್ವರ ನಾಟಕ ಕಂಪೆನಿ`ಯ ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ ೨೭ ವರ್ಷಗಳನ್ನು ನರಸಿಂಹರಾಜು ಕಳೆದಿದ್ದರು.

ರಾಜ್‌ಕುಮಾರ್ ಅವರೊಂದಿಗೆ `ಬೇಡರ ಕಣ್ಣಪ್ಪ` ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ನಂತರವೂ ಅವರು ರಂಗಭೂಮಿಯನ್ನು ಕಡೆಗಣಿಸಲಿಲ್ಲ. ಬಾಲನಟನಾಗಿ ರಂಗ ಪ್ರವೇಶಿಸಿದ ನರಸಿಂಹರಾಜು ಬೆಳೆಯುತ್ತಿದ್ದಂತೆ ದೊಡ್ಡವರ ಪಾತ್ರಗಳಿಗೆ ಭಡ್ತಿ ಪಡೆದರು. ತಮ್ಮ ವಿಶಿಷ್ಟ ಅಭಿನಯದಿಂದ ಹಾಸ್ಯನಟರಾಗಿ ರೂಪುಗೊಂಡರು. ರಂಗಭೂಮಿಯಲ್ಲಿ ಪಡೆದ ಎಲ್ಲ ಬಗೆಯ ಅನುಭವ, ಅವರಿಗೆ ಸಿನಿಮಾ ಜಗತ್ತಿನಲ್ಲಿ ಉಪಯೋಗಕ್ಕೆ ಬಂದಿತು. ಚಿತ್ರರಂಗದ ಪ್ರವೇಶಕ್ಕೆ ನಿಮಿತ್ತವಾದ `ಬೇಡರ ಕಣ್ಣಪ್ಪ`ದಲ್ಲಿನ ಕಾಶಿಯ ಪಾತ್ರ ಅವರಿಗೆ ಲೀಲಾಜಾಲವಾಗಿತ್ತು. `ಬೇಡರ ಕಣ್ಣಪ್ಪ` ನಾಟಕದಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಅವರು ಕಾಶಿಯ ಪಾತ್ರ ವಹಿಸಿದ್ದರು. ಪ್ರತಿ ಪ್ರದರ್ಶನದಲ್ಲಿಯೂ ಅವರು ತೋರಿಸುತ್ತಿದ್ದ ತನ್ಮಯತೆ, ಬೆರಗು ಮೂಡಿಸುವಂತಿತ್ತು ಎಂದು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಾಸ್ಟರ್ ಹಿರಣ್ಣಯ್ಯ ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.

ಚಿತ್ರರಂಗದಲ್ಲಿ ಪ್ರಸಿದ್ಧಿ ಬದಲಾಯಿಸಿ

ನರಸಿಂಹರಾಜು ಅವರ ಬಗ್ಗೆ ಅವರ ಪುತ್ರಿ ಸುಧಾನರಸಿಂಹರಾಜು ಅವರು ದೂರದರ್ಶನದಲ್ಲಿ ಕಾರ್ಯಕ್ರಮ ಮಾಡಿದಾಗ ಸಂದರ್ಶನದಲ್ಲಿ ಭಾಗವಹಿಸಿದ್ದ ವರನಟ ರಾಜ್ ಕುಮಾರ್ ಅವರು ಹೇಳುತ್ತಿದ್ದರು: “ಅಂದಿನ ದಿನದಲ್ಲಿ ನಿರ್ಮಾಪಕ ನಿರ್ದೇಶಕರು, ಚಲನಚಿತ್ರಗಳಿಗೆ ಮೊದಲು ನರಸಿಂಹರಾಜು ಅವರ ದಿನಗಳನ್ನು ಗುರುತುಪಡಿಸಿಕೊಂಡು ಉಳಿದ ನಮ್ಮಂತಹ ಕಲಾವಿದರನ್ನು ಸಂಪರ್ಕಿಸುತ್ತಿದ್ದರು“. ರಾಜ್ ಅವರು ಹೇಳಿದ ಮಾತು ನರಸಿಂಹರಾಜು ಅವರು ಗಳಿಸಿದ ಶ್ರೇಷ್ಠತೆಗೆ ಮತ್ತು ಅಂತಹ ಮಾತನ್ನು ಹೇಳುವ ರಾಜ್ ಅವರ ಸಜ್ಜನತೆಯ ಶ್ರೇಷ್ಠತೆಗೆ ಕನ್ನಡಿ ಹಿಡಿದಂತಿದೆ. ರಾಜ್ ಕುಮಾರ್ ಮತ್ತು ನರಸಿಂಹರಾಜು ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ಅದ್ಭುತಗಳಲ್ಲೊಂದು. ಈ ಜೋಡಿಗೆ ಬಾಲಣ್ಣ ಅವರನ್ನು ಕೂಡಾ ಸೇರಿಸಬಹುದು.

ಅಂದಿನ ದಿನದಲ್ಲಿ ಬಾಲಕೃಷ್ಣ ಮತ್ತು ನರಸಿಂಹರಾಜು ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಪೂರಕವಾಗಿ ಅಭಿನಯಿಸುತ್ತಿದ್ದುದು ನೆನಪಾಗುತ್ತದೆ. ಬಾಲಣ್ಣ ಅವರದು ರೇಗುವ ಅಸಹನತೆಯ ಪಾತ್ರವೋ, ಕೆಲವೊಂದು ಭಾರೀ ಕೃತ್ರಿಮ ಪಾತ್ರವೋ ಆಗಿರಬಹುದಾದರೂ ನರಸಿಂಹರಾಜು ಅವರ ಪಾತ್ರ ಮಾತ್ರ ಸರಳ ಸಜ್ಜನಿಕೆಯ ನೆರಳಲ್ಲೇ ಮೂಡುವ ಪೆದ್ದನದೋ, ಪೆಚ್ಚನದೋ, ತುಂಟನದೋ, ಮೂರ್ಖನದೋ ಆದ, ಹಾಗೆ ತಾವಾಗಲು ಪ್ರೇಕ್ಷಕ ಇಷ್ಟಪಡದಿದ್ದರೂ ಇಂಥಹ ಪಾತ್ರ ಯಾವಾಗಲೂ ತಮ್ಮ ಮುಂದೆ ಇರಬೇಕು ಎನಿಸುವಂತೆ ಆಪ್ತವಾಗಿರುತ್ತಿದ್ದ ಸುಂದರತೆಯ ಹೃದ್ಭಾವದ ಸೃಜನಸೃಷ್ಠಿಗಳು. ನರಸಿಂಹರಾಜು ಅವರ ಹಿಂದೆ ಹಾಗೂ ಅವರ ನಂತರ ಅನೇಕ ಕಲಾವಿದರು ಚಿತ್ರರಂಗದಲ್ಲಿ ಮೂಡಿದ್ದಾರೆ. ಹೀಗೆ ಮೂಡಿದ ಹಲವಾರು ಕಲಾವಿದರು ಜನರಿಗೆ ಇಷ್ಟವೂ ಆಗಿದ್ದಾರೆ ನಿಜ. ಆದರೆ ನರಸಿಂಹರಾಜು ಅಂತಹ ಆಳವಾದ ಆಪ್ತತೆ ಮೂಡಿಸಿದ ನಟರು ಚಾರ್ಲಿ ಚಾಪ್ಲಿನ್ ಅಂತಹವರು ಮಾತ್ರ.

ಕನ್ನಡದಲ್ಲಿ ಹೊಸಬಗೆಯ ಪ್ರಯೋಗ, ವೈವಿಧ್ಯಪೂರ್ಣ ಕಥೆಗಳು, ಯಶಸ್ವೀ ಚಿತ್ರಗಳು ಹೊರಬಂದದ್ದು ಕಳೆದ ಶತಮಾನದ ಐದು, ಆರು ಮತ್ತು ಏಳನೆಯ ದಶಕಗಳಲ್ಲಿ. ಈ ಅವಧಿ ಕನ್ನಡ ಚಿತ್ರರಂಗದ ಸುವರ್ಣ ಯುಗ. ಈ ಯುಗದಲ್ಲಿ ರಾರಾಜಿಸಿದ ನರಸಿಂಹರಾಜು, ೧೯೫೪ರಲ್ಲಿ ಬಿಡುಗಡೆಯಾದ `ಬೇಡರ ಕಣ್ಣಪ್ಪ`ದಿಂದ ಆರಂಭವಾಗಿ ೧೯೭೯ರವರೆಗಿನ ೨೫ ವರ್ಷಗಳಲ್ಲಿ ೨೫೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯನಟರಾಗಿ ಬೆಳಗಿದವರು.

ಶ್ರೇಷ್ಠ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ನರಸಿಂಹರಾಜು ಅವರ ಪೀಚು ಶರೀರ, ವಿಶಿಷ್ಟ ಬಗೆಯ ಹಾವಭಾವಗಳ ಮ್ಯಾನರಿಸಂಗಳು ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು. ಅವರ ಚಿತ್ರಗಳನ್ನು ಟೆಂಟ್‌ಗಳಲ್ಲಿ ನೋಡುತ್ತಿದ್ದ ಗ್ರಾಮೀಣರು ಉಬ್ಬು ಹಲ್ಲಿನ ತಮ್ಮ ಮಿತ್ರರನ್ನು `ನರಸಿಂಹರಾಜು` ಎಂದೇ ಕರೆಯುವಷ್ಟು ದಟ್ಟ ಪ್ರಭಾವವನ್ನು ನರಸಿಂಹರಾಜು ಮೂಡಿಸಿದ್ದರು. ಇದು ಜನಪದ ನಾಯಕನೊಬ್ಬ ಬೀರಿದ ಪ್ರಭಾವದಂತೆ ಈಗ ತೋರುತ್ತದೆ. ‘ಬೇಡರ ಕಣ್ಣಪ್ಪ’ದಿಂದ ಪ್ರಾರಂಭಗೊಂಡು ಅವರು ನಟಿಸಿರುವ ಪಾತ್ರಗಳ ವೈವಿಧ್ಯ ಅದರಲ್ಲಿ ಅವರು ಹರಿಸಿರುವ ಹಾಸ್ಯವೆಂಬ ಚೈತನ್ಯದ ವೈವಿಧ್ಯ ನಿತ್ಯ ಸ್ಮರಣೀಯವಾದುದು.

ಕೆಲವೊಂದು ಅವಿಸ್ಮರಣೀಯ ಪಾತ್ರಗಳು ಬದಲಾಯಿಸಿ

‘ಸ್ಕೂಲ್ ಮಾಸ್ಟರ್’ ಚಿತ್ರದ ಭಾಮೆಯ ನೋಡಲು ತಾ ಬಂದ ಹಾಡಿನಲ್ಲಿ ‘ಕಣ್ ಸನ್ನೆಯಲೇ ಕನ್ಯೆಯ ಮನ ಸೆಳೆದ’ ಎಂದು ತಾನು ನೋಡಲು ಬಂದ ಹುಡುಗಿ ಹಾಡಿದರೆ ‘ಆ ಚಿನ್ಮಯ ಮೂರುತಿ ಶ್ರೀಗೋವಿಂದ’ನ ಸ್ಥಾನದಲ್ಲಿ ಕುಳಿತ ಈ ಪೆಚ್ಚು ನರಸಿಂಹರಾಜು ಪಿಳಿ ಪಿಳಿ ಕಣ್ಸನ್ನೆ ಮಾಡಿದ್ದು ಕೂಡಾ ಅಷ್ಟೇ ಮನಮೋಹಕವಾದದ್ದು. ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ನರಸಿಂಹರಾಜು ಅವರಂತೆ ತೆನಾಲಿ ರಾಮಕೃಷ್ಣನಾಗಿ ಮತ್ತ್ಯಾರೂ ಅಭಿನಯಿಸಿರಲಾರರು. ‘ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ಉದಯ್ ಕುಮಾರ್ ಅವರ ಶ್ರೇಷ್ಠ ಸಿಡುಕು ಮತ್ತು ರಾಜ್ ಕುಮಾರ್ ಅವರ ಸರ್ವೋತ್ಕೃಷ್ಟ ಸೌಮ್ಯತೆಯ ನಡುವೆ ಕಪಿ ಚೇಷ್ಟೆಯ ಆದರೆ ಕಡೆಯಲ್ಲಿ ಅಷ್ಟೇ ಗೌರವಯುತವಾಗಿ ಪರಿವರ್ತಿತವಾಗುವ ನಕ್ಷತ್ರಿಕನಾದ ನರಸಿಂಹರಾಜು ಅಭಿನಯ ಮತ್ತೊಂದು ಶ್ರೇಷ್ಠ ಮಜಲಿನದು. ಜೊತೆಗೆ ಆ ಚಿತ್ರದಲ್ಲಿನ ಸಶಕ್ತ ಕೊಂಡಿಯಾಗಿ ಇಡೀ ಚಿತ್ರವನ್ನೇ ತನ್ನ ಹಿಡಿತದಲ್ಲಿ ನಡೆಸುವಷ್ಟು ಸಮರ್ಥವಾದದ್ದು ಕೂಡಾ. ‘ಅಂಡ ಪಿಂಡ ಬ್ರಹ್ಮಾಂಡ’ ಎಂದು ಮೂರ್ಖನಾಗಿ ಮಾತನಾಡಿ ‘ನಿನ್ನ ಪಿಂಡ’ ಎಂದು ವಿಶ್ವಾಮಿತ್ರರಿಂದ ಬೈಸಿಕೊಳ್ಳುವುದಾಗಲಿ, ‘ಏನಿದೀ ಗ್ರಹಚಾರವೋ’ ಎಂದು ಹರಿಶ್ಚಂದ್ರನ ಪ್ರಾಣ ತಿನ್ನುವುದಾಗಲೀ, ‘ಅಪ್ಪಾ ನನ್ನನ್ನು ಕ್ಷಮಿಸಿ ಬಿಡಪ್ಪ’ ಎಂದು ಹರಿಶ್ಚಂದ್ರನ ಕ್ಷಮಾಪಣೆ ಯಾಚಿಸುವ ಧೈನ್ಯತೆಯಾಗಲೀ, ಕಡೆಗೆ ಗುರು ವಿಶ್ವಾಮಿತ್ರರಿಗೇ “ಗುರುಗಳೇ ಒಂದು ಮಾತು ಮಾತ್ರ ನನ್ನ ಅನುಭಾವಕ್ಕೆ ಬಂತು, ಈ ಅಂಡ ಪಿಂಡ ಬ್ರಹ್ಮಾಂಡದಲ್ಲಿ ಅವರರವರ ಕರ್ಮ ಅವರದು” ಎಂದು ಹೇಳುವ ವೇದಾಂತ’ವಾಗಲಿ ಚಿತ್ರರಂಗದ ನಾನು ಕಂಡ ಪಾತ್ರಗಳಲ್ಲಿ ನನ್ನನ್ನು ಅತೀವವಾಗಿ ಹಿಡಿದಿಟ್ಟ ಒಂದು ಅದಮ್ಯತೆ. ಸಂಧ್ಯಾರಾಗ, ವೀರ ಕೇಸರಿ, ರತ್ನ ಮಂಜರಿ, ಕಣ್ತೆರೆದು ನೋಡು, ರಾಯರ ಸೊಸೆ ಹೀಗೆ ನೀವು ಅವರ ಇನ್ನೂರೈವತ್ತು ಚಿತ್ರಗಳಲ್ಲಿ ನೋಡಿರುವಷ್ಟನ್ನೂ ಒಂದಕ್ಕೊಂದು ಪೋಣಿಸಿಕೊಂಡು ಹೋಗಬಹುದು.

ನಿರ್ಮಾಪಕ ಬದಲಾಯಿಸಿ

ನರಸಿಂಹರಾಜು ತಮ್ಮ ಚಿತ್ರಗಳಲ್ಲೆಲ್ಲಾ ಹಾಸ್ಯಪಾತ್ರವಾಗಿಯೇ ಉಳಿದರು. ನರಸಿಂಹ ರಾಜು ಅವರು ತಾವೇ ನಿರ್ಮಿಸಿದ ‘ಪ್ರೊಫೆಸರ್ ಹುಚ್ಚೂರಾಯ’ ಚಿತ್ರದಲ್ಲಿ ಕೂಡಾ ತಮ್ಮನ್ನೇ ತಾವು ವಿಜ್ರಂಭಿಸಿಕೊಳ್ಳದೆ ಹಲವಾರು ಸಾಮಾಜಿಕ ನಿಲುವುಗಳ ಒಂದು ಸುಂದರ ಕಥೆ ಹೆಣೆದು ಅದರಲ್ಲಿ ತಾವೊಂದು ಉತ್ತಮ ಹೃದಯವಂತ ವ್ಯಕ್ತಿಯಾಗಿ ಮತ್ತು ತಮ್ಮ ಸಾಮರ್ಥ್ಯದ ಕುರುಹಾದ ಹಾಸ್ಯ ಲೇಪನದ ಪಾತ್ರವಾಗಿ ಮಾತ್ರ ಮೂಡಿದ್ದು, ನರಸಿಂಹರಾಜು ತಮ್ಮನ್ನು ಎಂದೂ ಅಗತ್ಯಕ್ಕಿಂತ ತೋರಿಕೊಳ್ಳದೆ ತಮ್ಮ ಕಲಾವಿದನನ್ನು ಮಾತ್ರ ಹೊರತಂದ ಶ್ರೇಷ್ಠತೆಯನ್ನು ಸಾರಿ ಹೇಳುತ್ತದೆ.

“ನಗಬೇಕು ನಗಿಸಬೇಕು, ಇದೇ ನನ್ನ ಧರ್ಮ ನಗಲಾರೆ ಅಳುವೇ ಎಂದರೆ ಅದೇ ನಿನ್ನ ಕರ್ಮ” ಎಂಬುದು ನರಸಿಂಹ ರಾಜು ಅವರ ಮೇಲೆ ಚಿತ್ರಿತವಾದ ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ಗೀತೆ. ಇದನ್ನು ಚಾಚೂ ತಪ್ಪದೆ ತಮ್ಮ ಬಾಳಿನ ತಿರುಳನ್ನಾಗಿ ಮಾಡಿಕೊಂಡವರು ನರಸಿಂಹರಾಜು. ಅವರು ಯಾರ ಬಗ್ಗೆ ಕೆಟ್ಟ ಮಾತನ್ನು ಆಡಿದ್ದಾಗಲೀ, ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಿದ್ದಾಗಲೀ ಮಾಧ್ಯಮದಲ್ಲಿ ಎಂದೂ ಕಾಣಬರಲಿಲ್ಲ.

ವಿದಾಯ ಬದಲಾಯಿಸಿ

ಕೆಲವು ವರ್ಷ ಮದ್ರಾಸಿನಲ್ಲಿ ನೆಲೆಸಿದ್ದ ನರಸಿಂಹರಾಜು ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆಗಳು ಬೆಂಗಳೂರಿನಲ್ಲಿ ಆರಂಭವಾದಾಗ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿದರು. ಮಕ್ಕಳು ಮೊಮ್ಮಕ್ಕಳೊಂದಿಗೆ ನೆಲೆಸಿದ್ದ ಕುಟುಂಬವತ್ಸಲ ನರಸಿಂಹರಾಜು, ತಮ್ಮ ೫೬ನೇ ವಯಸ್ಸಿನಲ್ಲಿ ೧೯೭೯ರ ಜುಲೈ ೨೦ರಂದು ಎಂದಿನಂತೆ ರಾತ್ರಿ ಉಪಾಹಾರ ಸೇವಿಸಿ ಮಲಗಿದ್ದರು. ಮುಂಜಾನೆ ೪.೩೦ರ ವೇಳೆಗೆ ತೀವ್ರ ಹೃದಯಾಘಾತದಿಂದ ನಿಧನರಾದರು.

ಸುಧಾ ನರಸಿಂಹರಾಜು ಬದಲಾಯಿಸಿ

ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ಚಿರಸ್ಮರಣೀಯ ಬದಲಾಯಿಸಿ

ನರಸಿಂಹರಾಜು ಅವರು ಕನ್ನಡ ಚಿತ್ರರಂಗದ ಸುವರ್ಣ ಕಾಲ ಎನ್ನಬಹುದಾದ ಅರವತ್ತು ಎಪ್ಪತ್ತರ ದಶಕದಲ್ಲಿ ಹಾಸ್ಯಚಕ್ರವರ್ತಿಯಾಗಿ ಕನ್ನಡಿಗರನ್ನು ರಂಜಿಸಿದ್ದರು. ಇಂತಹ ನಟನಾ ಚಕ್ರವರ್ತಿಗೆ ಒಮ್ಮೆಯೂ ರಾಜ್ಯ ಸರ್ಕಾರದ ಪ್ರಶಸ್ತಿ ಕೂಡಾ ಬರಲಿಲ್ಲ. ಅವರ ಹೆಸರಿನಲ್ಲಿ ಯಾವೊಂದು ಸ್ಮಾರಕ, ರಸ್ತೆ, ಕಟ್ಟಡಗಳು ಮೂಡಲಿಲ್ಲ. ಆದರೆ ಅವರು ಚಿತ್ರರಸಿಕರ ಹೃದಯದಲ್ಲಿ ಮೂಡಿರುವಷ್ಟು ಉಳಿದವರು ನಿಲ್ಲಬಲ್ಲರು ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ.

ನರಹಿಂಹರಾಜು ಅಭಿನಯದ ಕೆಲವೊಂದು ಚಿತ್ರಗಳು ಬದಲಾಯಿಸಿ

ಛಾಯಾಚಿತ್ರ ಬದಲಾಯಿಸಿ

ಚಿತ್ರ:Narasimharaju1.jpg
ನರಸಿಂಹರಾಜು

ಉಲ್ಲೇಖಗಳು ಬದಲಾಯಿಸಿ