ಎಂ. ಎಂ. ಕಲಬುರ್ಗಿ

ಭಾರತೀಯ ಲೇಖಕ, ಸಂಶೋಧಕ, ವಿದ್ವಾಂಸ
(ಎಂ.ಎಂ.ಕಲಬುರ್ಗಿ ಇಂದ ಪುನರ್ನಿರ್ದೇಶಿತ)

ಡಾ. ಎಂ. ಎಂ. ಕಲಬುರ್ಗಿ (ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ)ಯವರು ೧೯೩೮ ನವಂಬರ ೨೮ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ.

ಡಾ. ಎಂ. ಎಂ. ಕಲಬುರ್ಗಿ
ಜನನ೧೯೩೮
ಗುಬ್ಬೇವಾಡ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ
ಮರಣ೩೦.೦೮.೨೦೧೫
ಧಾರವಾಡ
ವೃತ್ತಿಲೇಖಕ, ಪ್ರಾಧ್ಯಾಪಕ, ಕುಲಪತಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಸಂಶೋಧನೆ, ಸಂಪಾದನೆ, ಶಾಸನ
ವಿಷಯಹಳಗನ್ನಡ, ವಚನ ಸಾಹಿತ್ಯ, ಲಿಂಗಾಯತ

ಪ್ರಭಾವಗಳು
  • ಬಸವಣ್ಣ

ಕಲಬುರ್ಗಿಯವರು, ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದು ಕವನ ಸಂಕಲವನ್ನು ಪ್ರಕಟಿಸಿದ್ದಾರೆ.

ಪರಿಚಯ ಬದಲಾಯಿಸಿ

  • 1962ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಭೋಧಕರಾಗಿ ಸೇವೆ ಆರಂಭಿಸಿದ ಅವರು 1966ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಅಧ್ಯಾಪಕರಾದರು[೧]. ಹಂಪಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
  • ಸಾಹಿತ್ಯ , ಶಾಸನ, ಜಾನಪದ, ನಾಮ ವಿಜ್ಞಾನ, ಗ್ರಂಥ ಸಂಪಾದನೆ,ಹಸ್ತಪ್ರತಿಶಾಸ್ತ್ರ, ಮೊದಲಾದ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆಯನ್ನು ಕೊಟ್ಟಿದ್ದಾರೆ.
  • ಕನ್ನಡ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಶಾಸನ, ಜಾನಪದ, ವ್ಯಾಕರಣ, ಹಸ್ತಪ್ರತಿ, ಗ್ರಂಥ ಸಂಪಾದನಾ ಶಾಸ್ತ್ರ ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಹಲವಾರು ಸಂಶೋಧನೆಗಳನ್ನು ಮಾಡಿದ್ದರು. ಗದಗದಲ್ಲಿ ಶ್ರೀ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಸಂಸ್ಥಾಪಕರು. ಕಲಬುರ್ಗಿಯವರು, ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು.
  • ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದು ಕವನ ಸಂಕಲವನ್ನು ಪ್ರಕಟಿಸಿದ್ದಾರೆ.
  • ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ.(1960) ಮತ್ತು ಎಂ.ಎ(1962) ಪದವಿಗಳನ್ನು ಪ್ರಥಮ ದರ್ಜೆ, ಪ್ರಥಮ ಸ್ಥಾನದೊಂದಿಗೆ ಪಡೆದರು. 1962 ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
  • ಕಲಬುರ್ಗಿಯವರು 1966ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ 'ಕನ್ನಡ ಅಧ್ಯಯನ ಪೀಠ'ದಲ್ಲಿ ಅಧ್ಯಾಪಕರಾಗಿ ನೇಮಕವಾದರು. ಅಲ್ಲಿ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದರು. ಸುಮಾರು ಹತ್ತೊಂಬತ್ತು ವರ್ಷಗಳು ಪ್ರಾಧ್ಯಾಪಕರಾಗಿದ್ದ ಕಲಬರ್ಗಿಯವರು, ಒಟ್ಟಿನಲ್ಲಿ ಮೂವತ್ತೊಂಬತ್ತು ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಅವರು ಆ ಅವಧಿಯಲ್ಲಿ ಅನೇಕ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
  • 1998-2001ರ ಕಾಲಾವಧಿಯಲ್ಲಿ ಕಲಬುರ್ಗಿಯವರು ಹಂಪಿಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದರು. ಅಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಆಗುಮಾಡಿದ ಕಲಬುರ್ಗಿಯವರು ನಿವೃತ್ತಿಯ ನಂತರವೂ ಸಂಶೋಧನಾ ಚಟುವಟಿಕೆಗಳಲ್ಲಿಯೇ ಮಗ್ನರಾಗಿದ್ದಾರೆ. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ 'ವಚನ ಸಾಹಿತ್ಯ ಸಂಪುಟಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ‘ಸಮಗ್ರ ಕೀರ್ತನ ಸಂಪುಟ’ಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು.

ಶಿಕ್ಷಣ ಬದಲಾಯಿಸಿ

ಕಲಬುರ್ಗಿಯವರ ಪ್ರಾಥಮಿಕ ಶಿಕ್ಷಣ ಯರಗಲ್ಲನಲ್ಲಿ, ಮಾಧ್ಯಮಿಕ ಶಿಕ್ಷಣ ಸಿಂದಗಿಯಲ್ಲಿ ಜರುಗಿತು.ಅವಿಭಕ್ತ ಕುಟುಂಬದಿಂದ ಬಂದವರು. ವಿಜಾಪುರ ವಿಜಯಾ ಕಾಲೇಜ್ ನಲ್ಲಿ ಬಿ.ಎ.(ಕನ್ನಡ) ಪದವಿಯನ್ನು ಯು.ಜಿ.ಸಿ. ಶಿಷ್ಯವೇತನದ ಸಹಾಯ ಪಡೆದು ಪ್ರಥಮ ವರ್ಗದಲ್ಲಿ ಮತ್ತು ಪ್ರಥಮ ರ್ಯಾಂಕ್ನೊಂದಿಗೆ ಗಳಿಸಿದರು. ಬಳಿಕ, ೧೯೬೨ರಲ್ಲಿ ಧಾರವಾಡಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. 1968 ರಲ್ಲಿ, ಅವರು ಸಲ್ಲಿಸಿದ, 'ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ' ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಬಂತು.

ವೃತ್ತಿ ಜೀವನ ಬದಲಾಯಿಸಿ

೧೯೬೨ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಪ್ರಾರಂಭಿಸಿದ ಕಲಬುರ್ಗಿಯವರು, ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾದರು. ೧೯೮೨ರಲ್ಲಿ ಅಲ್ಲಿಯೆ ವಿಭಾಗ ಮುಖ್ಯಸ್ಥರಾದರು. ಹಂಪಿಯಲ್ಲಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ವ್ಯಕ್ತಿತ್ವ ಬದಲಾಯಿಸಿ

ಈ ಶತಮಾನದ ಶ್ರೇಷ್ಠ ಚಿಂತಕರಲ್ಲೊಬ್ಬರೆಂದು ಹೆಸರುವಾಸಿಯಾದ ಕಲಬುರ್ಗಿಯವರು ಸದಾ ಓದು, ಬರಹ, ಚಿಂತನೆ, ಪ್ರಕಟಣೆ, ಮಾರ್ಗದರ್ಶನ ಮತ್ತಿತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅತ್ಯಂತ ಸರಳ ವ್ಯಕ್ತಿತ್ವದ ವಿನಯಶೀಲರಾದ ಅವರು ಕನ್ನಡದ ಕ್ರಿಯಾಶೀಲ ಚೇತನವೆಂದು ಹೆಸರಾಗಿದ್ದಾರೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು ಕಾಣಬಹುದು. ತನ್ನ ಸಂಶೋಧನೆಯ ಫಲಿತಗಳ ನಿಕರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದಿಲ್ಲ.

ಸಂಶೋಧನೆ ಬದಲಾಯಿಸಿ

  • ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಡಾ| ಎಂ.ಎಂ.ಕಲಬುರ್ಗಿಯವರು ಸಾಹಿತ್ಯ, ಸಂಸ್ಕೃತಿ, ಜಾನಪದ, ಶಾಸನ, ಇತಿಹಾಸ, ಹಸ್ತಪ್ರತಿಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡಿದ್ದಾರೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ, ನಾನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಈ ಬರವಣಿಗೆಯ ವ್ಯಾಪ್ತಿ ಮತ್ತು ಆಳಗಳು ಗಮನೀಯವಾಗಿವೆ.
  • ಕರ್ನಾಟಕದ ಸಂಸ್ಕೃತಿಯನ್ನು ಕುರಿತ ಅನೇಕ ಸಂಶೋಧನಾ ಲೇಖನಗಳನ್ನು ಒಳಗೊಂಡಿವೆ.
  • ತನ್ನ ಸಂಶೋಧನೆಯ ಫಲಿತಗಳ ನಿಕರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದಿಲ್ಲ. ಅವರು ತಮ್ಮ ಆಕರಗಳನ್ನು ಖಚಿತಪಡಿಸಿಕೊಂಡಿರುತ್ತಾರೆ ಮತ್ತು ಮಹತ್ವದ ಒಳನೋಟಗಳನ್ನು ನೀಡುತ್ತಾರೆ. ಆಕರಗಳ ಶೋಧನೆಯಲ್ಲಿ ಹಲವು ದೇಶಗಳನ್ನು ಸುತ್ತಿರುವ ಕಲಬರ್ಗಿಯವರು ಅವುಗಳನ್ನು ವಿವೇಚನೆಯಿಂದ ಬಳಸಿಕೊಂಡಿದ್ದಾರೆ.

ಸಂಘಟನೆ ಬದಲಾಯಿಸಿ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾನಪದ ಸಮ್ಮೇಲನವನ್ನು ರೂಪಿಸಿದವರಲ್ಲಿ ಒಬ್ಬರು. ಕನ್ನಡ ವಿಶ್ವವಿದ್ಯಾಲಯದಲ್ಲಿ ದೇಸಿ ಸಮ್ಮೇಲನವನ್ನು ಸ್ಥಾಪಿಸಿದವರು ಡಾ| ಕಲಬುರ್ಗಿ. ಗದಗಿನ ಶ್ರೀ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಸಂಸ್ಥಾಪಕರು. ಇದಲ್ಲದೆ ಮೈಸೂರಿನ ಸುತ್ತೂರು ಮಠದ ಸಮಗ್ರ ವಚನ ಸಾಹಿತ್ಯ ಪ್ರಕಟಣಮಾಲೆಯ , ಬೆಳಗಾವಿಯ ನಾಗನೂರು ಮಠದ ವೀರಶೈವ ಅಧ್ಯಯನ ಅಕಾಡೆಮಿಯ ಹಾಗು ಶಿವಮೊಗ್ಗೆಯ ಆನಂದಪುರ ಮಠದ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಕೃಷಿ ಬದಲಾಯಿಸಿ

'ಬಸವಣ್ಣನವರ ಕುರಿತ ಶಾಸನಗಳು' ಎಂ.ಎಂ.ಕಲಬುರಗಿ ಅವರ ಮೊದಲ ಕೃತಿ. 41 ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿರುವ ಅವರು, 100 ಕೃತಿಗಳನ್ನು ರಚನೆ ಮಾಡಿದ್ದಾರೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.

ಕೃತಿಗಳು ಬದಲಾಯಿಸಿ

ಕವನ ಸಂಕಲನ ಬದಲಾಯಿಸಿ

  • ನೀರು ನೀರಡಿಸಿತ್ತು

ನಾಟಕ ಬದಲಾಯಿಸಿ

  • ಕೆಟ್ಟಿತ್ತು ಕಲ್ಯಾಣ

ಸಂಶೋಧನಾ ಗ್ರಂಥಗಳು ಬದಲಾಯಿಸಿ

  1. ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’, 1973
  2. ಮಾರ್ಗ’ - ನಾಲ್ಕು ಸಂಪುಟಗಳು 1988-2004
  3. ಐತಿಹಾಸಿಕ’, 1984
  4. ಮಾರ್ಗ (೧,೨,೩,೪)
  5. ಕನ್ನಡ ನಾಮವಿಜ್ಞಾನ
  6. ಮಹಾರಾಷ್ಟ್ರದ ಕನ್ನಡ ಶಾಸನಗಳು
  7. ಶಾಸನಗಳಲ್ಲಿ ಶಿವಶರಣರು
  8. ಶಬ್ದಮಣಿದರ್ಪಣ ಸಂಗ್ರಹ
  9. ಕನ್ನಡ ಕೈಫಿಯತ್ತುಗಳು
  10. ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ
  11. ಸ್ವಾದಿ ಅರಸು ಮನೆತನ
  12. ಸಾರಂಗಶ್ರೀ

ಶಾಸನಶಾಸ್ತ್ರ ಬದಲಾಯಿಸಿ

  1. ಶಾಸನ ವ್ಯಾಸಂಗ, ಭಾಗ 1 ಮತ್ತು ಭಾಗ 2, 1974, 1975
  2. ಶಾಸನ ವ್ಯಾಸಂಗ: ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು, 1980
  3. ಶಾಸನ ಸಂಪದ, 1968
  4. ಧಾರವಾಡ ಜಿಲ್ಲೆಯ ಶಾಸನಸೂಚಿ, 1975

ವಿವಿಧ ಶೈಕ್ಷಣಿಕ ಶಿಸ್ತುಗಳನ್ನು ಕುರಿತ ಗ್ರಂಥಗಳು ಬದಲಾಯಿಸಿ

  1. ಕನ್ನಡ ಗ್ರಂಥಸಂಪಾದನಾಶಾಸ್ತ್ರ, 1972
  2. ಕನ್ನಡ ಹಸ್ತಪ್ರತಿಶಾಸ್ತ್ರ
  3. ಕನ್ನಡ ಸಂಶೋಧನಾಶಾಸ್ತ್ರ
  4. ಕನ್ನಡ ಸ್ಥಳನಾಮವಿಜ್ಞಾನ

ಗ್ರಂಥಸಂಪಾದನೆ ಬದಲಾಯಿಸಿ

ಕಲಬುರ್ಗಿಯವರು 30 ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.

  1. ಶಿವಯೋಗ ಪ್ರದೀಪಿಕಾ, 1976
  2. ಕೊಂಡಗುಳಿ ಕೇಶಿರಾಜನ ಕೃತಿಗಳು, 1978
  3. ಬಸವಣ್ಣನ ಟೀಕಿನ ವಚನಗಳು. 1978
  4. ಸಿರುಮನಾಯಕನ ಸಾಂಗತ್ಯ, 1983.

ಜಾನಪದ ಬದಲಾಯಿಸಿ

  1. ಜಾನಪದ ಮಾರ್ಗ, 1995
  2. ಉತ್ತರ ಕರ್ನಾಟಕದ ಜನಪದ ಸಾಹಿತ್ಯ, 1978

ಸಂಪಾದನೆ ಬದಲಾಯಿಸಿ

ಕನ್ನಡ ವಿಶ್ವವಿದ್ಯಾಲಯದ ಮೂಲಕ (೧)ಶಿವಶರಣರ ಸಮಗ್ರ ವಚನ ಸಂಪುಟಗಳನ್ನು ಹಾಗು (೨)ಹರಿದಾಸರ ಸಮಗ್ರ ಕೀರ್ತನ ಸಂಪುಟಗಳನ್ನು ಪ್ರಕಟಗೊಳಿಸಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು ಬದಲಾಯಿಸಿ

ಕಲಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಅವುಗಳಲ್ಲಿ ಕೆಲವು. ಅವರ ‘ಮಾರ್ಗ-4’ ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ.

  1. 'ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ಪ್ರಶಸ್ತಿ'
  2. 'ಆರು ಪುಸ್ತಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ'
  3. 'ರಾಜ್ಯೋತ್ಸವ ಪ್ರಶಸ್ತಿ'
  4. 'ಪಂಪ ಪ್ರಶಸ್ತಿ'
  5. 'ವರ್ಧಮಾನ ಪ್ರಶಸ್ತಿ'
  6. 'ವಿಶ್ವಮಾನವ ಪ್ರಶಸ್ತಿ'
  7. ೨೦೦೬ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  8. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
  9. ಚಿದಾನಂದ ಪ್ರಶಸ್ತಿ,
  10. ನೃಪತುಂಗ ಪ್ರಶಸ್ತಿ,
  11. ನಾಡೋಜ ಪ್ರಶಸ್ತಿ
ಗೌರವಗಳು

ಡಾ. ಎಂ.ಎಂ. ಕಲಬುರ್ಗಿಯವರ ಸೇವೆಯನ್ನು ಅನುಲಕ್ಷಿಸಿ ಅನೇಕ ಗೌರವಗಳು ಅವರಿಗೆ ಸಂದಿವೆ. ತಂಜಾವೂರಿನಲ್ಲಿ ನಡೆದ All India Placename Confernceಕ್ಕೆ ಕಲಬುರ್ಗಿಯವರು ಅಧ್ಯಕ್ಷರಾಗಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶ್ರೀಕೃಷ್ಣ ಪಾರಿಜಾತ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2011 ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆದ "ಆಳ್ವಾಸ್ ನುಡಿಸಿರಿ 2011" ಇದರ ಸರ್ವಾಧ್ಯಕ್ಷರಾಗಿದ್ದರು.

ಅಭಿನಂದನಾ ಗ್ರಂಥಗಳು ಬದಲಾಯಿಸಿ

'ಕಲಬುರ್ಗಿ-60' ಮತ್ತು 'ಮಹಾಮಾರ್ಗ'ಗಳು ಈ ವಿದ್ವಾಂಸರಿಗೆ ಸಲ್ಲಿಸಿರುವ ಅಭಿನಂದನಾ ಗ್ರಂಥಗಳಲ್ಲಿ ಮುಖ್ಯವಾದವು.

ಹತ್ಯೆ ಬದಲಾಯಿಸಿ

30ನೇ ಆಗಸ್ಟ್, 2015ರಂದು, ಮುಸುಕುಧಾರಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಎಂ.ಎಂ.ಕಲಬುರ್ಗಿ ಸಾವನ್ನಪ್ಪಿದರು. ಧಾರವಾಡದಲ್ಲಿನ ಅವರ ಮನೆಗೆ ನುಗ್ಗಿದ ಅಪರಿಚಿತ ದಾಳಿಕೋರರು ಹಾರಿಸಿದ ಎರಡು ಸುತ್ತು ಗುಂಡುಗಳು ಹಣೆ ಮತ್ತು ಎದೆಗೆ ತಗುಲಿದ್ದವು. ಕಲಬುರ್ಗಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.[೨]

ಹೆಚ್ಚಿನ ಮಾಹಿತಿಗೆ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "ಸಾಹಿತಿ ಎಂ.ಎಂ ಕಲಬುರ್ಗಿ ದುಷ್ಕರ್ಮಿಗಳ ಗುಂಡಿಗೆ ಬಲಿ". prajavani.net. Archived from the original on 2015-08-31. Retrieved 2015-08-31.{{cite web}}: CS1 maint: bot: original URL status unknown (link)
  2. "ಡಾ.ಎಂ.ಎಂ.ಕಲಬುರ್ಗಿ ಸಂಕ್ಷಿಪ್ತ ಪರಿಚಯ". kannada.oneindia.com. Archived from the original on 2015-08-31. Retrieved 2015-08-31.{{cite web}}: CS1 maint: bot: original URL status unknown (link)