ಜನಪ್ರಿಯ ವೈದ್ಯೆಯಾಗಿ, ಶಸ್ತ್ರಚಿಕಿತ್ಸಾ ಪರಿಣಿತೆಯಾಗಿ, ವೈದ್ಯಕೀಯ ಕಾಲೇಜು ಪ್ರಾಧ್ಯಾಪಕಿಯಾಗಿ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿ ವೈದ್ಯಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಲೀಲಾವತಿ ದೇವದಾಸ್‌ರವರು ಹುಟ್ಟಿದ್ದು ಬೆಂಗಳೂರು (೩೧ ಮಾರ್ಚ್ ೧೯೩೦). ತಂದೆ ಡಬ್ಲೂ. ಡಿ. ಪಿಚ್ಚುಮುತ್ತು, ತಾಯಿ ರತ್ನ. ತಂದೆ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದರೆ ತಾತ ಕೂಡಾ ಯುನೈಟೆಡ್ ಮಿಷಿನ್ ಶಾಲೆಯ ಶಿಕ್ಷಕರಾಗಿ ಬೆಂಗಳೂರಿಗೆ ಬಂದು ನೆಲೆಸಿದವರು. ಸ್ವತಃ ಕವಿಗಳಾಗಿದ್ದು ಇಂಗ್ಲಿಷ್ ಮತ್ತು ತಮಿಳು ಭಾಷಾ ವಿದ್ವಾಂಸರು.

ಆರಂಭಿಕ ಜೀವನ ಮತ್ತು ಶಿಕ್ಷಣ ಬದಲಾಯಿಸಿ

  • ಹುಟ್ಟಿದ್ದು ತಮಿಳು ಕುಟುಂಬದಲ್ಲಾದರೂ ಕಲಿತಿದ್ದೆಲ್ಲ ಕನ್ನಡ. ಆರಂಭಿಕ ಶಿಕ್ಷಣ ಗ್ರಾಮೀಣ ಪರಿಸರದ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಶಾಲೆಯಲ್ಲಿ. ಮಾಧ್ಯಮಿಕ ಶಾಲೆಗೆ ಸೇರಿದ್ದು ಮಹಾರಾಣಿ ಮಿಡ್ಲ್ ಸ್ಕೂಲು. ಮಹಾರಾಣಿ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೋದರತ್ತೆ ಶ್ರೀಮತಿ ಗ್ರೇಸ್‌ರವರೇ ಇವರ ವಿದ್ಯೆ ಹಾಗೂ ಬೌದ್ಧಿಕ ವಿಕಾಸದ ಮಾರ್ಗದರ್ಶಕರು. ಹೈಸ್ಕೂಲು ಸೇರಿದಾಗ ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಪ್ಪದೆ ವೀಕ್ಷಿಸುತ್ತಾ ಬಂದಿದ್ದರಿಂದಲೇ ಬೆಳೆದದ್ದು ಉತ್ತಮ ಸಾಂಸ್ಕೃತಿಕ ವಾತಾವರಣದಲ್ಲಿ.
  • ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ದೇಶದ ತುಂಬೆಲ್ಲ ತುಂಬಿದ್ದ ಕ್ವಿಟ್ ಇಂಡಿಯಾ ಚಳುವಳಿಯಿಂದ ಪ್ರಭಾವಿತರಾದರೂ ಶಿಕ್ಷಕಿ ಸೋದರತ್ತೆ, ಹೈಸ್ಕೂಲು ಮುಖ್ಯೋಪಾಧ್ಯಾರಾಗಿದ್ದ ತಂದೆ, ಸೆಂಟ್ರಲ್ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ದೊಡ್ಡಪ್ಪನವರು, ಇವರುಗಳ ಕಣ್ಣು ತಪ್ಪಿಸಿ ಶಾಲೆಗೆ ಚಕ್ಕರ್ ಹೊಡೆಯಲಾರದೆ ಒಳಗೊಳಗೆ ನಡೆಯುತ್ತಿದ್ದ ಚಳುವಳಿಯಿಂದ ಹೃದಯ ತಲ್ಲಣಗೊಂಡು ರೊಚ್ಚಿಗೆದ್ದರೂ ಏನೂ ಮಾಡಲಾಗದ ಪರಿಸ್ಥಿತಿ.
  • ಹೈಸ್ಕೂಲಿನಲ್ಲಿ ಸಹಪಾಠಿಯಾಗಿದ್ದವರು ಪ್ರಸಿದ್ಧ ಕಾದಂಬರಿಕಾರ್ತಿ ವಾಣಿಯವರ ಮಕ್ಕಳು ಹಾಗೂ ತ್ರಿವೇಣಿಯವರ ಅಣ್ಣನ ಮಗಳು. ಇದರಿಂದ ದೊರೆತ ಒಡನಾಟದಿಂದ ವಾಣಿ ಹಾಗೂ ತ್ರಿವೇಣಿಯವರ ಕಾದಂಬರಿಗಳನ್ನೋದುವ ಅವಕಾಶ ದೊರೆತು ಕನ್ನಡ ಸಾಹಿತ್ಯಕಾದಂಬರಿಗಳ ಓದಿನಲ್ಲಿ ಬೆಳೆದ ಆಸಕ್ತಿ -ರೂಢಿಸಿಕೊಂಡ ಬರವಣಿಗೆ.
  • ಹೈಸ್ಕೂಲಿನಲ್ಲಿದ್ದಾಗಲೇ ಇವರು ಬರೆದ ಮೊದಲ ಕವನ ಪ್ರಕಟವಾದದ್ದು ಮಾಸ್ತಿಯವರ ‘ಜೀವನ’ ಪತ್ರಿಕೆಯಲ್ಲಿ. ನಂತರ ವಿಶ್ವಕರ್ನಾಟಕ, ಜಯಕರ್ನಾಟಕ, ಪೌರವಾಣಿ, ತಾಯಿನಾಡು ಮುಂತಾದವುಗಳಲ್ಲೂ ಪ್ರಕಟಗೊಂಡವು. ಗೆಳತಿಯರೊಡನೆ ಪ್ರಾರಂಭಿಸಿದ್ದು ಜ್ಯೋತ್ಸ್ನಾ ಎಂಬ ಕೈಬರಹ ಪತ್ರಿಕೆ.
  • ಎಸ್.ಎಸ್.ಎಲ್.ಸಿ.ಯ ನಂತರ ಇಂಟರ್‌ಮೀಡಿಯಟ್ ತರಗತಿಗಳಲ್ಲಿ ಪ್ರಥಮ ದರ್ಜೆಗಳಿಸಿದ ನಂತರ ಸೇರಿದ್ದು ಮೈಸೂರಿನ ಮೆಡಿಕಲ್ ಕಾಲೇಜು. ಕಾಲೇಜಿನಲ್ಲಿಯೂ ಮುಂದುವರೆದ ಸಾಹಿತ್ಯ – ಸಾಂಸ್ಕೃತಿಕ ಚಟುವಟಿಕೆಗಳು.
  • ಮೈಸೂರು ವಿ.ವಿ.ಯ. ಎಂ.ಬಿ.ಬಿ.ಎಸ್. ಪರಿಕ್ಷೆಯಲ್ಲಿ ಸರ್ಜರಿಯಲ್ಲಿ ಸುವರ್ಣಪದಕ ಗಳಿಸಿದರು. ಎಂ.ಬಿ.ಬಿ.ಎಸ್. ಪದವಿ ಪಡೆದ ನಂತರ ಸೇವಾ ಮನೋಭಾವದಿಂದ ಸೇರಿದ್ದು ‘ಗಾಂಧಿ ಸ್ಮಾರಕ ಕುಷ್ಠರೋಗ ನಿವಾರಣಾ ಸಂಸ್ಥೆ’ಗೆ. ಗಾಂಧೀಜಿಯವರ ಆಶ್ರಮದ ಸುತ್ತಮುತ್ತಲ ಗ್ರಾಮಗಳಲ್ಲಿ ಕಾರ್ಯನಿರ್ವಹಣೆ. ಮುಂಬೈನಲ್ಲಿ ಹೆಚ್ಚಿನ ತರಬೇತಿ ಪಡೆದು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಸೇವಾ ಮನೋಭಾವದಿಂದ ತೆರೆದ ಕುಷ್ಠರೋಗ ನಿವಾರಣಾ ಕೇಂದ್ರ.

ವೃತ್ತಿಜೀವನ ಬದಲಾಯಿಸಿ

  • ನಂತರ ಸೇರಿದ್ದು ರಾಜ್ಯ ಸರಕಾರದ ಆರೋಗ್ಯ ಇಲಾಖೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಸರಕಾರಿ ಉದ್ಯೋಗ ಆರಂಭ. ಮುಂದೆ ದಾವಣಗೆರೆ, ಬಳ್ಳಾರಿಗಳಲ್ಲಿ ಅಸಿಸ್ಟೆಂಟ್ ಸರ್ಜನ್ ಆಗಿ, ಬಳ್ಳಾರಿ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಲಕ್ನೋದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ (ಎಫ್.ಐ.ಸಿ.ಎಸ್. ಪದವಿ ಪಡೆದರು) ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಅಸಿಸ್ಟೆಂಟ್ ಪ್ರೊಫೆಸರಾಗಿ, ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಸರ್ಜನ್‌ಆಗಿ, ಗುಲಬರ್ಗದ ಆಸ್ಪತ್ರೆಯಲ್ಲಿ ಸರ್ಜನ್ ಆಗಿ, ಇವಲ್ಲದೆ ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆ, ಎಂ.ಆರ್. ಮೆಡಿಕಲ್ ಕಾಲೇಜು, ಬೆಂಗಳೂರಿನ ಅಂಬೇಡ್ಕರ್ ಕಾಲೇಜು, ತುಮಕೂರಿನ ಸಿದ್ಧಗಂಗಾ ಮೆಡಿಕಲ್ ಕಾಲೇಜು – ಹೀಗೆ ರಾಜ್ಯದ ಹಲವಾರು ಕಾಲೇಜುಗಳಲ್ಲಿ ಪ್ರಾಧ್ಯಾಪಕಿಯಾಗಿ, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿಯಾಗಿ, ಆಡಳಿತಾತ್ಮಕ ಹಾಗೂ ವೈದ್ಯಕೀಯ ರಂಗಗಳಲ್ಲಿ ಕಾರ್ಯನಿರ್ವಹಿಸಿ ೧೯೮೮ರಲ್ಲಿ ನಿವೃತ್ತಿ.
  • ಗ್ರಾಮೀಣ ಪ್ರದೇಶದಲ್ಲಿ ವೈದ್ಯೆಯಾಗಿ ದುಡಿಯಲು ಪ್ರಾರಂಭಿಸಿದ ನಂತರ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ವಹಿಸಿದ ಕಾಳಜಿ. ಆಕಾಶವಾಣಿ ಭಾಷಣಗಳ ಮೂಲಕ, ಆರೋಗ್ಯ ಶಿಬಿರಗಳ ಮೂಲಕ, ಸಂಜೆ ತರಗತಿಗಳ ಮೂಲಕ ಕೈಗೊಂಡ ಆರೋಗ್ಯ ಶಿಕ್ಷಣ. ಕುಟುಂಬ ಯೋಜನೆಯ ಮಹತ್ವವನ್ನು ವಿವರಿಸಿ ಗ್ರಾಮೀಣ ಪ್ರದೇಶದಲ್ಲಿ ಕುಟುಂಬ ಯೋಜನ ಶಿಬಿರಗಳನ್ನೇರ್ಪಡಿಸಿ ಜನಪ್ರಿಯಗೊಳಿಸಿದ ಉದರ ದರ್ಶಕ ಚಿಕಿತ್ಸೆ. ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತೆಯಾದ ಇವರು ಸುಮಾರು 80,000ಕ್ಕೂ ಮಿಕ್ಕಿ ಉದರದರ್ಶಕ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.
  • ಮೈಸೂರು ವಿಭಾಗದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿಯಾಗಿದ್ದಾಗ ಸಾಹಿತ್ಯ ಪರಂಪರೆಯ ಪರಿಚಯ ಪಡೆಯಲು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ ಪದವಿ. ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಚಂದ್ರಶೇಖರ ಕಂಬಾರರ ಪ್ರೇರಣೆಯಿಂದ ಡಾ.ಪಿ.ಎಸ್. ಶಂಕರ್‌ರವರ ನೇತೃತ್ವದಲ್ಲಿ ‘ಕನ್ನಡ ವೈದ್ಯ ವಿಶ್ವಕೋಶ’ದ ಸ್ತ್ರೀವಿಭಾಗದ ಸಂಪಾದಕಿಯಾಗಿ ನಿರ್ವಹಿಸಿದ ಜವಾಬ್ದಾರಿಯುತ ಕಾರ್ಯ.
  • ಡಾ|| ಲೀಲಾವತಿ ದೇವದಾಸ್‌ರವರು ವೈದ್ಯರಾಗಿ ವೈದ್ಯಸಾಹಿತಿಯಾಗಿ ಮಾತ್ರವಲ್ಲದೇ ಉತ್ತಮ ಸಂಘಟಕರಾಗಿಯೂ ಹೆಸರು ಪಡೆದಿದ್ದಾರೆ. ಕನ್ನಡ ವೈದ್ಯಸಾಹಿತ್ಯ, ವಾತ್ಸಲ್ಯ ಚಾರಿಟಬಲ್ ಟ್ರಸ್ಟ್, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

ಕೃತಿಗಳು ಬದಲಾಯಿಸಿ

  • ವ್ಯಾಪಕವಾದ ಅನುಭವಗಳಿಸಲು ಪ್ರವಾಸವನ್ನು ಕೈಗೊಂಡು ಯೂರೋಪ್, ಇಂಗ್ಲೆಂಡ್, ಅಮೆರಿಕ, ಇಸ್ರೆಲ್ ಮುಂತಾದ ದೇಶಗಳಲ್ಲಿ ಪ್ರವಾಸ. ಇಸ್ರೆಲ್ ಪ್ರವಾಸದ ನಂತರ ರಚಿಸಿದ ಕೃತಿ ‘ಪವಿತ್ರನಾಡಿನಲ್ಲಿ ಪ್ರವಾಸ’. ಸದಾ ಚಟುವಟಿಕೆಯ ಬುಗ್ಗೆಯಂತಿದ್ದ ಇವರು ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನೇಪಾಳ, ಶ್ರೀಲಂಕಾ, ಯೂರೋಪ್, ಈಜಿಪ್ಟ್, ಇಸ್ರೇಲ್ ಮುಂತಾದೆಡೆ ಸಂಚರಿಸಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡಿದ್ದಾರೆ. ಕನ್ನಡದಲ್ಲಿ ಇವರ 26 ಪುಸ್ತಕಗಳು ಪ್ರಕಟಗೊಂಡಿವೆ.  ಸರಳವಾಗಿ, ತಿಳಿಗನ್ನಡದಲ್ಲಿ ಬರೆಯುವಲ್ಲಿ ಸಿದ್ಧಹಸ್ತರು.
  • ಆರೋಗ್ಯ – ಅದರಲ್ಲೂ ಸ್ತ್ರೀಯರ ಆರೋಗ್ಯದ ವಿಷಯದಲ್ಲಿ ಅತಿ ಕಾಳಜಿವಹಿಸಿ ವೈದ್ಯಕೀಯ ವಿಶ್ಲೇಷಣೆಗಳನ್ನು ಸರಳವಾಗಿ ವಿವರಿಸಿ, ಜನಸಾಮಾನ್ಯರಿಗೂ ತಿಳಿಯುವಂತೆ ಬರೆದ ಕೃತಿ ‘ನಾನು ಗೌರಿಯ ಗರ್ಭಕೋಶ’. ಇದು ತುಮಕೂರಿನ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ನಂತರ ದೊರೆತ ಉತ್ತೇಜನದಿಂದ ಬರೆದ ಕೃತಿ ‘ಹೆಣ್ಣೇ ನಿನ್ನ ಆರೋಗ್ಯ ಕಾಪಾಡಿಕೊ’. ಆಸ್ಪತ್ರೆಗಳಲ್ಲಿ ರೋಗಿಗಳೊಡನೆ ಬೆರೆತಾಗ ಅನುಭವಿಸಿದ ಹಾಸ್ಯ ಪ್ರಸಂಗಗಳನ್ನು ರೋಚಕವಾಗಿ ವಿವರಿಸಿ ಬರೆದ ಕೃತಿ ‘ಆಸ್ಪತ್ರೆಯಲ್ಲಿ ಹಾಸ್ಯ’.[೧]
  • ಹೀಗೆ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಮತ್ತು ಇತರ ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ‘ಮುಸುಕಿನಲ್ಲಿ ಗುದ್ದು’ (ಕವನ ಸಂಕಲನ), ‘ಸ್ತ್ರೀ ಆರೋಗ್ಯ ರಕ್ಷಣೆ ಹೇಗೆ?’, ‘ಹೆರಿಗೆ’, 'ಹಳಿ ತಪ್ಪಿದ ಹೆರಿಗೆ’, 'ಬೈಬಲಿನ ಅನಾಮಿಕ ಸ್ತ್ರೀಯರು’ ಮುಂತಾದ ಕೃತಿಗಳಲ್ಲದೆ ‘ನಿಮ್ಮ ದೇಹದ ಪರಿಚಯ ಮಾಡೊಕೊಳ್ಳಿ’, ‘ಸುಖ ಸಂಸಾರಕ್ಕೆ ಸೂತ್ರಗಳು’, ‘ಅಪೋಸ್ತಲರ ಕೃತ್ಯಗಳು’, ‘ಗಲೇತ್ಯದವರೆಗೆ’, ‘ಶಿಶುಪಾಲನೆ’, ‘ಮಕ್ಕಳ ಆಹಾರ’, ‘ಏಡ್ಸ್ ತಡೆಗಟ್ಟಲು ಶಿಕ್ಷಕರಿಗೆ ಶಿಕ್ಷಣ’, ‘ಶಿಶು ಆರೈಕೆ’ ಮತ್ತು ‘ವ್ಯಕ್ತಿತ್ವ ವಿಕಸನ’ ಮುಂತಾದ ೩೦ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.

ಪ್ರಶಸ್ತಿಗಳು ಬದಲಾಯಿಸಿ

ಈ ರೀತಿಯಾಗಿ ವೈದ್ಯಕೀಯ ಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ನಿಷ್ಠೆಯಿಂದ ದುಡಿದ ಲೀಲಾವತಿ ದೇವದಾಸ್‌ರವರಿಗೆ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಸದ್ಯೋದಿತ ಶಾಶ್ವತಿ ಪ್ರಶಸ್ತಿ, ಬೈಬಲ್ ಸೊಸೈಟಿಯಿಂದ ಜಾನ ಹ್ಯಾಂಡ್ಸ್ ಪ್ರಶಸ್ತಿ, ಪವಿತ್ರ ನಾಡಿನಲ್ಲಿ ಪ್ರವಾಸ ಕೃತಿಗೆ ವಿಶ್ವೇಶ್ವರಯ್ಯ ಮತ್ತು ನವರತ್ನ ಪ್ರಶಸ್ತಿಗಳು, ವೈದ್ಯಕೀಯ ಸಾಹಿತ್ಯಕ್ಕಾಗಿ ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಬಿಜಾಪುರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ವಿಜ್ಞಾನ ಸಾಹಿತ್ಯ ಪ್ರಶಸ್ತಿ, ಪುಸ್ತಕ ಪ್ರಾಧಿಕಾರದಿಂದ ವೈದ್ಯ ವಿಜ್ಞಾನ ಪ್ರಶಸ್ತಿ, ರಾಜ್ಯ ಆರೋಗ್ಯ ಇಲಾಖೆಯಿಂದ ಮೂರು ಬಾರಿ ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಸೂತಿ ತಜ್ಞರ ಸಮ್ಮೇಳನದಲ್ಲಿ ಸನ್ಮಾನ – ಹೀಗೆ ಹಲವಾರು ಗೌರವ ಪ್ರಶಸ್ತಿಗಳು ದೊರೆತಿವೆ.[೨]

ನಿಧನ ಬದಲಾಯಿಸಿ

ಲೀಲಾವತಿ ದೇವದಾಸ್‍ರವರು ೧೮ ಡಿಸೆಂಬರ್, ೨೦೧೮ ರಂದು ಬೆಂಗಳೂರಿನಲ್ಲಿ ನಿಧನರಾದರು.[೩]

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-10-14. Retrieved 2016-10-11.
  2. http://vijaykarnataka.indiatimes.com/state/karnataka/-/articleshow/12019514.cms
  3. https://kannada.asianetnews.com/news/dr-leelavathi-devadas-passes-away-pjwyd4
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: