ಪೆರ್ಣಂಕಿಲ ಮಹಾಗಣಪತಿ ದೇವಸ್ಥಾನ.

ಸ್ಥಳ ಬದಲಾಯಿಸಿ

ಪೆರ್ಣಂಕಿಲ ಎಂಬ ಗ್ರಾಮವು ಕರ್ನಾಟಕದ ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಒಂದು ಸಣ್ಣ ಗ್ರಾಮವಾಗಿದ್ದು, ಇಲ್ಲಿ ಸುಮಾರು ೨೧೪೭ ಮಂದಿ ಜನಸಂಖ್ಯೆ ವಾಸಿಸುತ್ತದೆ. ಇದು ಉಡುಪಿಯಿಂದ ಸುಮಾರು ೨೨ ಕಿಲೋ ಮೀಟರ್ ಅಂತರದಲ್ಲಿದೆ. ಇಲ್ಲಿನ ಮಹಾಗಣಪತಿ ದೇವಸ್ಥಾನವು ಗ್ರಾಮದ ಜನರ ಹೊಲಗಳ ನಟ್ಟ ನಡುವಿನಲ್ಲಿ ಸ್ಥಾಪಿತವಾಗಿದೆ. ಪೆರ್ಣಂಕಿಲಕ್ಕೆ ತೆರಳಲು ಸಾಕಷ್ಟು ಖಾಸಗಿ ಬಸ್ಸುಗಳು ಉಡುಪಿ ನಗರದಿಂದ ಪ್ರತಿ ಅರ್ಧ ಘಂಟೆಗೊಂದರಂತೆ ದೊರೆಯುತ್ತವೆ. ಬಸ್ಸುಗಳ ಸೇವೆಯನ್ನು ಬೆಳಿಗ್ಗೆಯಿಂದ ರಾತ್ರಿ ೮ ಘಂಟೆಯವರೆಗೂ ಮಾತ್ರವೆ ಪಡೆಯಬಹುದಾಗಿದೆ.

ಇತಿಹಾಸ ಬದಲಾಯಿಸಿ

 

ಈ ದೇವಸ್ಥಾನದಲ್ಲಿರುವ ಗಣೇಶನ ವಿಗ್ರಹ ಅಸಲಿಗೆ ಒಬ್ಬ ದಲಿತ ರೈತನಿಗೆ ಸಿಕ್ಕಿದ್ದು. ಅವನ ಹೆಸರು ಪೆರ್ಣ. ಅದೊಂದು ದಿನ ಅವನು ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಅವನ ನೇಗಿಲಿಗೆ ಇದ್ದಕ್ಕಿದ್ದಂತೆ ಏನೋ ತಾಕಿದಂತಾಗಿ ಅವನು ಬಗ್ಗಿ ನೋಡಿದಾಗ ಜಮೀನಿನಲ್ಲಿ ಹುದುಗಿದ್ದ ಗಣಪತಿಯ ವಿಗ್ರಹ ಅವನಿಗೆ ಕಾಣಿಸುತ್ತದೆ. ನೇಗಿಲು ವಿಗ್ರಹದ ತಲೆ ಭಾಗಕ್ಕೆ ತಾಕಿದ್ದರಿಂದ ಅದರಿಂದ ರಕ್ತ ಚಿಮ್ಮುತ್ತಿರುವುದು ಅವನಿಗೆ ಕಾಣಿಸುತ್ತದೆ. ಅದನ್ನು ಕಂಡು ಭಯಗ್ರಸ್ತನಾದ ಅವನು ಕೆಲಸ ನಿಲ್ಲಿಸಿ ಮನೆಗೆ ಹೋಗುತ್ತಾನೆ. ರಾತ್ರಿಯ ಸಮಯದಲ್ಲಿ ಪೆರ್ಣ ಮಲಗಿ ನಿದ್ರಿಸುತ್ತಿದ್ದಾಗ ವಿಚಿತ್ರವಾದ ಕನಸು ಕಾಣುತ್ತಾನೆ. ಕನಸಿನಲ್ಲಿ ಅವನಿಗೆ ಎರಡು ಕೊಪ್ಪರಿಗೆಗಳನ್ನು ತೆಗೆದುಕೊಂಡು ಅವನು ಕಂಡ ಗಣಪತಿಯ ವಿಗ್ರಹದ ಮೇಲೆ ಮತ್ತೊಂದನ್ನು ಶಿವಾಲಯದಲ್ಲಿ ಬೋರಲು ಹಾಕುವಂತೆ ಅವನಿಗೆ ದೈವಾಜ್ಞೆಯಾಗುತ್ತದೆ. ರಾತ್ರಿ ಹಾಗೆ ಮಾಡಿ ಮರುದಿನ ಎರಡು ಸ್ಥಳಗಳಿಗೆ ಭೇಟಿ ನೀಡುವಂತೆ ಅವನಿಗೆ ಆಜ್ಞೆಯಾಗುತ್ತದೆ. ಪೆರ್ಣ ತನಗೆ ಹೇಳಿದಂತೆ ರಾತ್ರಿ ಮಾಡಿ ಬೆಳಗ್ಗೆ ಪುನಃ ಅಲ್ಲಿಗೆ ಹೋಗುತ್ತಾನೆ. ಗಣಪತಿಯ ವಿಗ್ರಹವಿದ್ದ ಜಾಗದಲ್ಲಿ ಬರಿದಾಗಿದ್ದನ್ನು ಕಂಡು ಪೆರ್ಣ ಗಾಬರಿಯಾಗುತ್ತಾನೆ. ಆದರೆ ಅವನು ಬೋರಲು ಹಾಕಿದ್ದ ಕೊಪ್ಪರಿಗೆಯಲ್ಲಿ ವಿಗ್ರಹವು ಈಶ್ವರನ ದೇಗುಲದ ಬಲಿ ಅವನಿಗೆ ಕಾಣಿಸುತ್ತದೆ. ಸ್ವಲ್ಪ ಸಮಯದ ಬಳಿಕ ಅದೇ ವಿಗ್ರಹದ ಹತ್ತಿರದಲ್ಲೇ ಇದ್ದ ಬಾವಿಯ ಬಳಿ ಕಾಣಿಸುತ್ತದೆ ಮತ್ತು ವಿಗ್ರಹದ ಮೇಲ್ಭಾಗ ಮಾತ್ರ ಗೋಚರಿಸುತ್ತಿರುತ್ತದೆ. ಆಗಿನಿಂದ ಈ ದೇವಸ್ಥಾನಕ್ಕೆ ಪೆರ್ಣಂಕಿಲ (ಪೆರ್ಣ + ಅಂಕಿಲ, ಅಂಕಿಲವೆಂದರೆ ನೇಗಿಲು) ದೇಗುಲ ಎಂದು ಹೆಸರು ಬಂತು. ಮಹಾಗಣಪತಿಯ ಆಶೀರ್ವಾದದಿಂದ ದಲಿತ ರೈತ ಪೆರ್ಣನ ಹೆಸರು ಶಾಶ್ವತವಾಗಿ ಉಳಿಯುವಂತಾಗಲು, ಈ ಊರಿಗೂ ಪೆರ್ಣಂಕಿಲ ಎಂಬ ಹೆಸರು ಬಂದಿದೆ. ಎಂಬ ನಂಬಿಕೆ ಜನರಲ್ಲಿದೆ. ಈ ದೇವಾಲಯದಲ್ಲಿ ಗಣಪತಿಯ ವಿಗ್ರಹವು ಪಶ್ಚಿಮಕ್ಕೆ ಮುಖ ಮಾಡಿದ್ದು ಶಿವನ ದೇವಾಲಯ ಪೂರ್ವಕ್ಕೆ ಮುಖ ಮಾಡಿದೆ. ಪ್ರತಿವರ್ಷವೂ ಜನರು ಕೊಪ್ಪರಿಗೆ ಅಪ್ಪೆ ಸೇವೆಯನ್ನು ಗಣಪನಿಗೆ ಸಲ್ಲಿಸುತ್ತಾರೆ. ಉದ್ಭವ ಗಣಪತಿಯು ತನ್ನನ್ನು ನಿಜವಾದ ಹೃದಯದಿಂದ ಪೂಜಿಸುವವರಿಗೆ ಅಡೆತಡೆಗಳನ್ನು ನಿವಾರಿಸುತ್ತಾನೆ ಎಂದು ವ್ಯಾಪಕವಾಗಿ ನಂಬಲಾಗಿದೆ.

ವಿವರಣೆ ಬದಲಾಯಿಸಿ

 


ಪೆರ್ಣಂಕಿಲ ಮಹಾಗಣಪತಿ ದೇವಸ್ಥಾನವು ಉಡುಪಿ ಪರ್ಯಾಯ ಶ್ರೀಪೇಜಾವರ ಅಧೋಕ್ಷಜ ಮಠದ ಆಡಳಿತಕ್ಕೆ ಒಳಪಟ್ಟಿದ್ದು, ಶ್ರೀ ವಿಶ್ವೇಶ್ವ ತೀರ್ಥ ಶ್ರೀಪಾದರ ದಿವ್ಯ ಮಾರ್ಗದರ್ಶನದಲ್ಲಿ ನಿರ್ವಹಿಸಲ್ಪಡುತ್ತಿದೆ. ಪ್ರತೀ ವರ್ಷ ಗಣೇಶ ಚತುರ್ಥಿ ಮತ್ತು ಮೀನ ಮಾಸದಲ್ಲಿ ರಥೋತ್ಸವ ನಡೆಯುತ್ತದೆ ಮತ್ತು ಸಾವಿರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಪೆರ್ಣಂಕಿಲ ಶ್ರೀ ಮಹಾಗಣಾಪತಿಗೆ ಅನ್ನ, ತೆಂಗಿನಕಾಯಿ, ತುಪ್ಪ ಮತ್ತು ಬೆಲ್ಲದಿಂದ ತಯಾರಿಸಿದ ಅಪ್ಪ ಇಷ್ಟ. ವಾರ್ಷಿಕ ಜಾತ್ರೆ ದಿನ ಹಾಗೂ ಗಣೇಶ ಚತುರ್ಥಿಯಂದು ಲಕ್ಷಗಟ್ಟಲೆ ಅಪ್ಪಗಳನ್ನು ತಯಾರಿಸಿ ಭಕ್ತರಿಗೆ ಹಂಚಲಾಗುತ್ತದೆ. ದೇವಸ್ಥಾನದ ಪ್ರಸಾದದ ರುಚಿ ಸರಿಸಾಟಿಯಿಲ್ಲದ್ದಿದ್ದರೂ, ಈ ಪ್ರಸಿದ್ಧ ಖಾದ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಲು ಮತ್ತು ಅದನ್ನು ಸಂರಕ್ಷಿಸಲು ಪಾಕವಿಧಾನವನ್ನು ಪ್ರಕಟಿಸಲಾಗಿದೆ.

ಛಾಯಾಂಕಣ ಬದಲಾಯಿಸಿ

       

ಉಲ್ಲೇಖಗಳು ಬದಲಾಯಿಸಿ