ಜೆ. ಜಯಲಲಿತಾ

ಭಾರತೀಯ ನಟಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ
(ಜಯಲಲಿತ ಇಂದ ಪುನರ್ನಿರ್ದೇಶಿತ)

ಜಯಲಲಿತಾ ಜಯರಾಮ್(ஜெயலலிதா ஜயராம்) ಅಥವಾ ಜೆ. ಜಯಲಲಿತಾ (ಫೆಬ್ರುವರಿ ೨೪, ೧೯೪೮- ಡಿಸೆಂಬರ್ ೦೫, ೨೦೧೬ ) ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಮತ್ತು ಮಾಜಿ ವಿರೋಧ ಪಕ್ಷದ ನಾಯಕಿಯಾಗಿದ್ದವರು. ಅವರು ಮೇಲುಕೋಟೆ, ಮಂಡ್ಯ ಜಿಲ್ಲೆ, ಕರ್ನಾಟಕದಲ್ಲಿ ಜನಿಸಿದರು. ಎಂ.ಜಿ.ರಾಮಚಂದ್ರನ್ ಅವರ ನೈತಿಕ ಬೆಂಬಲದೊಂದಿಗೆ ಅವರು ರಾಜ್ಯದ ಒಂದು ದ್ರಾವಿಡ ಪಕ್ಷವಾದ ಎ ಐ ಎ ಡಿ ಎಂ ಕೆಯ ಅಧಿಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ನಾಲ್ಕು(ಐದು) ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಅನುಯಾಯಿಗಳಿಂದ ಜನಪ್ರಿಯವಾಗಿ ಅಮ್ಮ ಮತ್ತು ಪುರಚ್ಚಿ ತಲೈವಿ (ಕ್ರಾಂತಿಕಾರಿ ನಾಯಕಿ) ಎಂದು ಕರೆಯಲ್ಪಡುತ್ತಾರೆ. ರಾಜಕೀಯ ಪ್ರವೇಶಿಸುವುದಕ್ಕಿಂತ ಮೊದಲು ಅವರು ತಮಿಳು ಚಿತ್ರರಂಗ ದಲ್ಲಿ ಒಬ್ಬ ಜನಪ್ರಿಯ ನಟಿಯಾಗಿದ್ದರು. ನಟಿಯೊಬ್ಬರು ರಾಜಕೀಯರಂಗದಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದು ವಿಸ್ಮಯವನ್ನುಂಟು ಮಾಡುತ್ತದೆ.

ಜಯಲಲಿತಾ
ಜೆ. ಜಯಲಲಿತಾ- 2015

ಅಧಿಕಾರ ಅವಧಿ
16 ಮೇ 2011 – 27 ಸೆಪ್ಟೆಂಬರ್ 2014
ಪೂರ್ವಾಧಿಕಾರಿ ಎಂ. ಕರುಣಾನಿಧಿ
ಮತಕ್ಷೇತ್ರ ಶ್ರೀರಂಗಂ

ಅಧಿಕಾರ ಅವಧಿ
2 ಮಾರ್ಚ್ 2002 – 12 ಮೇ 2016
ಪೂರ್ವಾಧಿಕಾರಿ ಓ. ಪನ್ನೀರ್ ಸೆಲ್ವ
ಉತ್ತರಾಧಿಕಾರಿ ಎಂ. ಕರುಣಾನಿಧಿ
ಮತಕ್ಷೇತ್ರ ಆಂಡಿಪಟ್ಟಿ

ತಮಿಳುನಾಡು ಮುಖ್ಯ ಮಂತ್ರಿಯಾಗಿ[೧]
ಅಧಿಕಾರ ಅವಧಿ
14 ಮೇ 2001 – 21 ಸೆಪ್ಟೆಂಬರ್ 2001
ಪೂರ್ವಾಧಿಕಾರಿ ಎಂ. ಕರುಣಾನಿಧಿ
ಉತ್ತರಾಧಿಕಾರಿ ಓ. ಪನ್ನೀರ್ ಸೆಲ್ವ
ಮತಕ್ಷೇತ್ರ ಸ್ಫರ್ದಿಸಲಾಗಿಲ್ಲ

ಅಧಿಕಾರ ಅವಧಿ
24 ಜೂನ್ 1991 – 12 ಮೇ 1996
ಪೂರ್ವಾಧಿಕಾರಿ ರಾಷ್ಟಪತಿ ಆಡಳಿತ
ಉತ್ತರಾಧಿಕಾರಿ ಎಂ. ಕರುಣಾನಿಧಿ
ಮತಕ್ಷೇತ್ರ ಬರಗೂರ್
ವೈಯಕ್ತಿಕ ಮಾಹಿತಿ
ಜನನ (1948-02-24) ೨೪ ಫೆಬ್ರವರಿ ೧೯೪೮ (ವಯಸ್ಸು ೭೬)
ಮೇಲುಕೋಟೆ, ಮಂಡ್ಯ ಜಿಲ್ಲೆ, ಕರ್ನಾಟಕ
ಮರಣ 5,ಡಿಸೆಂಬರ್, 2016,ಸೋಮವಾರದ ರಾತ್ರಿ 11.30 ಕ್ಕೆ,ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ
ರಾಜಕೀಯ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(AIADMK)
ವಾಸಸ್ಥಾನ ಚೆನ್ನೈ, ತಮಿಳುನಾಡು
ಧರ್ಮ ಹಿಂದು

ವೈಯುಕ್ತಿಕ ಜೀವನ ಬದಲಾಯಿಸಿ

  • ಜೆ.ಜಯಲಲಿತಾ 1948ರ ಫೆಬ್ರುವರಿ 24 ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಮಧ್ಯಮ ವರ್ಗದ ಅಯ್ಯಂಗಾರ್ ಮನೆತನದ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್‌, ಸಂಧ್ಯಾ ದಂಪತಿಗೆ ಜನಿಸಿದರು. ಅವರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಜನಿಸಿದರು. ಹುಟ್ಟು ಹೆಸರು ‘ಕೋಮಲವಲ್ಲಿ.’ ತಾತ (ತಂದೆಯ ತಂದೆ) ಮೈಸೂರು ಒಡೆಯರ್‌ ಬಳಿ ಕೆಲಸ ಮಾಡುತ್ತಿದ್ದರಿಂದ ಜಯಲಲಿತಾ ಎಂದು ಮರುನಾಮಕರಣ ಮಾಡಿದರು. ಮೈಸೂರು ಲಕ್ಷ್ಮಿಪುರಂನಲ್ಲಿರುವ ಇವರ ‘ಸ್ವರ್ಣವಿಲಾಸ’ ನಿವಾಸ ಈಗ ಕ್ಲಬ್‌ ಆಗಿ ಪರಿವರ್ತನೆಯಾಗಿದೆ. ಕ್ಲಬ್‌ನಲ್ಲಿರುವ ಜಯಲಲಿತಾ ಅವರ ಭಾವಚಿತ್ರ ಇತಿಹಾಸದ ಕುರುಹುವಾಗಿ ಉಳಿದಿದೆ.[೨]
  • ಜಯಾ ಅವರ ತಾಯಿಯ ತಂದೆ ರಂಗಸ್ವಾಮಿ ಅಯ್ಯಂಗಾರ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಉದ್ಯೋಗದಲ್ಲಿದ್ದರು.ಜಯಾ ಎರಡು ವರ್ಷದವರಾಗಿದ್ದಾಗ ತಂದೆ ಜಯರಾಮ್ ತೀರಿಕೊಂಡರು. ನಂತರ ತಾಯಿ ವೇದವಲ್ಲಿ, ಬೆಂಗಳೂರಿನ ತಂದೆಯ ಮನೆಗೆ ಮರಳಿದರು. ಜಯಾ ಎರಡು ವರ್ಷದ ಹಸುಳೆಯಾಗಿದ್ದಾಗ ತಂದೆಯ ಹಠಾತ್‌ ಮರಣಹೊಂದಿದ್ದರಿಂದ ತಾಯಿ ಸಂಧ್ಯಾ ತಮ್ಮ ತವರು ಬೆಂಗಳೂರಿಗೆ ಮರಳಿದರು. 1952ರಲ್ಲಿ ಮದ್ರಾಸಿಗೆ ತೆರಳಿದ ವೇದವಲ್ಲಿ, ಅಲ್ಲಿ ‘ಸಂಧ್ಯಾ’ ಎಂಬ ಹೆಸರಿನಲ್ಲಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಅಜ್ಜ, ಅಜ್ಜಿ ಕಣ್ಣಳತೆಯಲ್ಲಿ ಬಿಷಪ್‌ ಕಾಟನ್‌ ಗರ್ಲ್‌್ಸ ಸ್ಕೂಲ್‌ನಲ್ಲಿ ಜಯಾ ಪ್ರಾಥಮಿಕ ಶಿಕ್ಷಣ ಪಡೆದರು. ಎಲ್ಲ ಅಯ್ಯಂಗಾರ್ ಹೆಣ್ಣು ಮಕ್ಕಳಂತೆ ಸಂಗೀತ, ಭರತನಾಟ್ಯದಲ್ಲಿ ಪಳಗಿದರು. 1950ರಿಂದ 1958ರವೆಗೆ ಜಯಲಲಿತಾ ಅವರು ಮೈಸೂರಿನಲ್ಲಿ ತಮ್ಮ ಅಜ್ಜ–ಅಜ್ಜಿ ಜತೆ ಇದ್ದರು.
  • 1960 ಮೇ ತಿಂಗಳಲ್ಲಿ ಮೈಲಾಪುರದಲ್ಲಿ ಭರತನಾಟ್ಯ ಕಲಾವಿದೆಯಾಗಿ ರಂಗ ಪ್ರವೇಶ. 1961ರಲ್ಲಿ ಕನ್ನಡದ ’ಶ್ರೀಶೈಲ ಮಹಾತ್ಮೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದರು. 1964ರಲ್ಲಿ ಬಿ.ಆರ್. ಪಂತುಲು ಅವರ ‘ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಜೊತೆ ಅಭಿನಸಿದರು. 1964ರಲ್ಲಿ ವೈ.ಜಿ. ಪಾರ್ಥಸಾರಥಿ ನಾಟಕ ತಂಡದ ಮೂಲಕ, ರಂಗಭೂಮಿಗೆ ಪ್ರವೇಶ. 1965ರಲ್ಲಿ ವೆನ್ನಿರ ಅಡೈ ಚಿತ್ರದ ಮೂಲಕ ತಮಿಳು ಸಿನಿಮಾ ರಂಗ ಪ್ರವೇಶ. ತಮಿಳು ಸಿನಿಮಾದಲ್ಲಿ ಸ್ಕರ್ಟ್ ಧರಿಸಿ ಅಭಿನಯಿಸಿದ ಮೊದಲ ನಟಿ ಜಯಾ![೩]ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜನನ.

ನಟನಾವೃತ್ತಿ ಅರಸಿ ಮದ್ರಾಸಿಗೆ ಪಯಣ ಬದಲಾಯಿಸಿ

  • ತಾಯಿ ಸಂಧ್ಯಾ ಸಹ ಆ ಕಾಲದ ಪ್ರಖ್ಯಾತ ಭರತನಾಟ್ಯ ಕಲಾವಿದೆ. ಬಣ್ಣದ ಬದುಕು ಅರಸಿ ಸಂಧ್ಯಾ ಮದ್ರಾಸ್‌ಗೆ ಹೋದರು. ತಮಿಳು ಸಿನಿಮಾಗಳಲ್ಲಿ ಮಿಂಚತೊಡಗಿದರು.ಸೆಕ್ರೇಡ್‌ ಹಾರ್ಟ್‌ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಜಯಾ ಆಗಷ್ಟೇ ಅರಳುತ್ತಿದ್ದರು. ತಾಯಿ ಸಂಧ್ಯಾಗೆ ಮಗಳ ಉಜ್ವಲ ಭವಿಷ್ಯ ಕಣ್ಣಿಗೆ ಕಟ್ಟತೊಡಗಿತು. ಬೇಸಿಗೆ ರಜೆಯಲ್ಲಿ ಚಿತ್ರರಂಗಕ್ಕೆ ಪರಿಚಯಿಸೇಬಿಟ್ಟರು.

ಸಹಾಯಾರ್ಥ ಉಚಿತ ನೃತ್ಯ ಬದಲಾಯಿಸಿ

  • ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನ ಹಳ್ಳಿಯಲ್ಲಿ ತಾಲ್ಲೂಕು ಬೋರ್ಡ್ ಪ್ರೌಢಶಾಲೆ ಕಟ್ಟಡ ನಿರ್ಮಾಣದ ಸಹಾಯರ್ಥವಾಗಿ ನೃತ್ಯ ಪ್ರದರ್ಶನ ನೀಡಿದ್ದರು.1967ರಲ್ಲಿ ಮೈಸೂರು ವಿಶ್ವವಿಶ್ವವಿದ್ಯಾಲಯ ಕ್ರಾಫರ್ಡ್‌ ಹಾಲಿನಲ್ಲಿ ನಟಿ ಜಯಲಲಿತಾ ಅವರು ಶಾಲೆಯ ಕಟ್ಟಡ ನಿರ್ಮಾಣದ ನೆರವಿಗಾಗಿ ಹೆಜ್ಜೆ ಹಾಕಿದ್ದರು.
  • ಹಾಸ್ಯ ನಟ ಬಾಲಕೃಷ್ಣ ಅವರ ನೆರವಿನಿಂದ ಜಯಲಲಿತಾ ಅವರನ್ನು ಭೇಟಿಯಾಗಿ ಶಾಲೆ ಕಟ್ಟಡ ನಿರ್ಮಾಣ ಸಹಾಯಾರ್ಥ ನೃತ್ಯ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನೆರವಾಗಬೇಕು ಎಂದು ಕೋರಿದರು.
  • 1967 ಮಾರ್ಚ್‌ 19ರಂದು ಮೈಸೂರು ವಿ.ವಿ ಕ್ರಾಫರ್ಡ್‌ ಹಾಲಿನಲ್ಲಿ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಯಿತು. ರೂ. 10, 25, 50 ಪ್ರವೇಶ ಧನ ನಿಗದಿಯಾಯಿತು. ಕಿಕ್ಕಿರಿದು ಜನರು ಸೇರಿದ್ದರಿಂದ ರೂ.48 ಸಾವಿರ ಹಣ ಸಂಗ್ರಹವಾಯಿತು. ಕಾರ್ಯಕ್ರಮಕ್ಕೆ ರೂ.18 ಸಾವಿರ ಖರ್ಚಾಗಿತ್ತು. ರೂ.30 ಸಾವಿರ ಉಳಿಯಿತು. ಒಂದು ರೂಪಾಯಿಯೂ ಸಂಭಾವನೆ ಪಡೆಯದ ಅವರು, ಎಲ್ಲ ಹಣವನ್ನು ಶಾಲಾ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಹೇಳಿದರು ಎಂದು ಗ್ರಾಮದ ಜನತೆ ಸ್ಮರಿಸುತ್ತಾರೆ.[೪]

ಸಿನೇಮಾ ರಂಗಕ್ಕೆ ಪ್ರವೇಶ ಬದಲಾಯಿಸಿ

  • 1961 ರಲ್ಲಿ ಬಿಡುಗಡೆಯಾದ ‘ಎಪಿಸ್ಟಲ್‌’ ಎಂಬ ಇಂಗ್ಲಿಷ್‌ ಚಿತ್ರದಲ್ಲಿ ಜಯಾ ಮೊದಲ ಬಾರಿ ಕ್ಯಾಮೆರಾ ಎದುರಿಸಿದ್ದರು. 1964 ರಲ್ಲಿ 15 ವರ್ಷದವರಿದ್ದಾಗ ಬಿಡುಗಡೆಯಾದ ‘ಚಿನ್ನದ ಗೊಂಬೆ’ ಕನ್ನಡ ಚಿತ್ರ ಅವರು ನಾಯಕಿಯಾಗಿ ಅಭಿನಯಿಸಿದ್ದ ಮೊದಲ ಚಿತ್ರ. ದಿ. ಕಲ್ಯಾಣ್‌ ಕುಮಾರ್‌ ಚಿತ್ರ ನಾಯಕ.
  • ತಮಿಳು ಚಿತ್ರರಂಗದಲ್ಲಿ ಮೊತ್ತಮೊದಲ ಬಾರಿ ಸ್ಕರ್ಟ್‌ ಧರಿಸಿದ್ದ ಗ್ಲಾಮರಸ್‌ ನಾಯಕಿ ಜಯಾ ಆಗಿನ ಸೂಪರ್‌ ಸ್ಟಾರ್‌ ಎಂ.ಜಿ. ರಾಮಚಂದ್ರನ್‌ ಕಣ್ಣಿಗೆ ಬಿದ್ದರು. ಅಲ್ಲಿಂದ ಮುಂದೆ ಅವರ ಚಿತ್ರ ಬದುಕು, ಖಾಸಗಿ ಬದುಕು ಎಲ್ಲವೂ ಬದಲಾಯಿತು. 1964 ರಿಂದ 1971ರ ಅವಧಿಯಲ್ಲಿ ಈ ಜೋಡಿ 20ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ಅಭಿನಯಿಸಿತು. ಅವರು ನಂತರ ನಟಿಸಿದ ಎಲ್ಲಾ ಸಿನೇಮಾ ಗಳ ಸಂಖ್ಯೆ 140ಕ್ಕೂ ಹೆಚ್ಚು.
ಶಾಲಾ ವಿದ್ಯಾರ್ಥಿಗಳ ಶ್ರದ್ಧಾಂಜಲಿ
  • ಕರ್ನಾಟಕಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ, ನಗುವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
  • 1967ರ ಮಾರ್ಚ್‌ 9ರಂದು ಶಾಲಾ ಕಟ್ಟಡ ನಿರ್ಮಾಣಕ್ಕೆ ಧನ ಸಂಗ್ರಹಿಸಲು ಜಯಲಲಿತಾ ಅವರು ನೃತ್ಯ ಪ್ರದರ್ಶನ ಮಾಡಿದ್ದರು. ಹತ್ತು ಸಾವಿರ ಸಂಭಾವನೆ ಪಡೆದು ನೃತ್ಯ ಮಾಡಿದ್ದರು. ನೃತ್ಯ ನೋಡಲು ಬಂದವರಿಂದ ಒಟ್ಟು 24 ಸಾವಿರ ಹಣ ಸಂಗ್ರಹವಾಗಿತ್ತು. ಸಂಗ್ರಹವಾದ ಹಣದಿಂದ ಶಾಲಾ ಕಟ್ಟಡ ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಯಲಲಿತಾ ಅವರ ಸಹಾಯವನ್ನು ಸ್ಮರಿಸಿದರು.ನಂತರ 1967 ಮಾರ್ಚ್‌ 19ರಂದು ಮೈಸೂರಿನ ಕ್ರಾಫರ್ಡ್ ಹಾಲಿನಲ್ಲಿಯೂ ಉಚಿತವಾಗಿ ಜಯಲಲಿತಾ ನೃತ್ಯ ಮಾಡಿದ್ದರು.[೫].

ಜೆ.ಜಯಲಲಿತಾ ಅತ್ಯುತ್ತಮ ನಟಿ ಪ್ರಶಸ್ತಿ ಪಟ್ಟಿ ಬದಲಾಯಿಸಿ

  • ಜೆ.ಜಯಲಲಿತಾ ಅತ್ಯುತ್ತಮ ನಟಿ ಪ್ರಶಸ್ತಿ ಪಟ್ಟಿ
ವಿವರ ಪ್ರಶಸ್ತಿ
ಅತ್ಯುತ್ತಮ ನಟಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ 5
ಅತ್ಯುತ್ತಮ ನಟಿ ತಮಿಳುನಾಡು ಸಿನಿಮಾ ಫ್ಯಾನ್ ಪ್ರಶಸ್ತಿ 8
ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿ - ತಮಿಳು 5
ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿ - ತೆಲುಗು 1
ರಷ್ಯಾದ ಚಲನಚಿತ್ರೋತ್ಸವದಲ್ಲಿ 1
ಮದ್ರಾಸ್ ಫಿಲ್ಮ್ ಅಸೋಸಿಯೇಷನ್ ಪ್ರಶಸ್ತಿ ಅತ್ಯುತ್ತಮ ನಟಿಗಾಗಿ 7
  • 1972 ರಲ್ಲಿ ಜಯಲಲಿತಾ ಅವರಿಗೆ ತಮಿಳುನಾಡು ಸರ್ಕಾರವು ಕಲೈಮಾಮಣಿ ಪ್ರಶಸ್ತಿ ನೀಡಿತು. ಅವರು 1991 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಅಲ್ಲದೆ ಮತ್ತೂ ಹಲವಾರು ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಮತ್ತು ಇತರ ಗೌರವಗಳನ್ನು ಪಡೆದಿದ್ದಾರೆ.[೬]

ರಾಜಕೀಯ ಪ್ರವೇಶ ಬದಲಾಯಿಸಿ

  • 1972 ರಲ್ಲಿ ಕರುಣಾನಿಧಿ ಜತೆ ಜಗಳವಾಡಿಕೊಂಡು ಎಂಜಿಆರ್‌ (ಎಂ.ಜಿ. ರಾಮಚಂದ್ರನ್‌) ಅಣ್ಣಾ ಡಿಎಂಕೆ ಸ್ಥಾಪಿಸಿದಾಗಲೇ ಜಯಲಲಿತಾ ರಾಜಕೀಯದ ಮೊದಲ ಪಾಠ ಕಲಿತರು. ಜಯಾರನ್ನು ಆಗಲೇ ಪಕ್ಷದಲ್ಲಿ ಬೆಳೆಸುವ ಎಂಜಿಆರ್‌ ಆಸೆಗೆ ಹಿರಿಯ ನಾಯಕರು ಒಪ್ಪಿಗೆ ಇರಲಿಲ್ಲ. 70ರ ದಶಕದ ಉತ್ತರಾರ್ಧದಲ್ಲಿ ಜಯಾ ತೆಲುಗು ನಟರೊಬ್ಬರಿಗೆ ಆಪ್ತರಾಗಿದ್ದರು ಎಂಬ ಸುದ್ದಿ ಇತ್ತು.ಆದರೆ, ಈ ಸಂಬಂಧ ಹೆಚ್ಚು ದಿನ ಬಾಳಲಿಲ್ಲ.
  • 1977ರ ಚುನಾಣೆಯಲ್ಲಿ ಜಯಗಳಿಸಿ ಮಖ್ಯಮಂತ್ರಿಯಾದ ಎಂಜಿಆರ್‌ 1980ರಲ್ಲಿ ಜಯಲಲಿತಾರನ್ನು ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿ ನೇಮಿಸಿದರು. 1984 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಜಯಾ, ಸಂಸತ್‌ನಲ್ಲಿ ಮಾಡಿದ ನಿರರ್ಗಳ ಭಾಷಣಕ್ಕೆ ಅಂದಿನ ಪ್ರಧಾನಿ ಇಂದಿರಾ ತಲೆದೂಗಿದ್ದರು. ಇಂಗ್ಲಿಷ್‌ ಬರುತ್ತದೆ ಎನ್ನುವ ಕಾರಣಕ್ಕೆ ಜಯಾ ಅವರನ್ನು ರಾಜ್ಯಸಭೆ ಅಭ್ಯರ್ಥಿಯಾಗಿ ಹೆಸರಿಸಲಾಗಿತ್ತು. ರಾಜ್ಯಸಭೆಯಲ್ಲಿ ಜಯಾ ಅಣ್ಣಾದೊರೈ ಕುಳಿತಿದ್ದ ಜಾಗದಲ್ಲಿ ಕೂರುತ್ತಿದ್ದರಂತೆ.
  • ಎಂಜಿಆರ್‌ ಆಪ್ತಸಖಿ ಜಯಾ ರಾಜಕೀಯವಾಗಿ ಬೆಳೆಯತೊಡಗಿದಾಗ ಪಕ್ಷದೊಳಗೆ ಅಸಮಾಧಾನ ಹೊಗೆಯಾಡ ತೊಡಗಿತು. 1984 ರಲ್ಲಿ ಎಂಜಿಆರ್‌ ಅವರಿಗೆ ಆದ ಹೃದಯಾಘಾತ, ಮೂತ್ರಪಿಂಡ ವೈಫಲ್ಯದ ನಂತರ ಅವರ ಆರೋಗ್ಯ ಕುಸಿಯತೊಡಗಿತ್ತು. ಅವರ ಆಪ್ತರು ಆಗ ಜಯಾರನ್ನು ದೂರ ಇಟ್ಟರು.

ಎಂಜಿಆರ್ ಸಾವು ಮತ್ತು ಜಯಾ ಸಂಕಷ್ಟ ಬದಲಾಯಿಸಿ

  • 1987ರ ಡಿಸೆಂಬರ್‌ 24ರ ನಸುಕಿನಲ್ಲಿ ಎಂಜಿಆರ್‌ ಕೊನೆಯುಸಿರೆಳೆದಿದ್ದರು. ಅಂದು ನಡೆದಿದ್ದು ತಮಿಳುನಾಡು ಎಂದೂ ಮರೆಯಲಾರದ ಅಸಹ್ಯ ಪ್ರಹಸನ. ಸಾವಿನ ಸುದ್ದಿ ತಿಳಿದು ಜಯಾ ಎಂಜಿಆರ್‌ ನಿವಾಸಕ್ಕೆ ಧಾವಿಸಿ ಬಂದಾಗ ಮೃತದೇಹ ಇರಿಸಿದ್ದ ಕೋಣೆಯ ಬಾಗಿಲುಗಳನ್ನು ಮುಚ್ಚಲಾಯಿತು. ಅಲ್ಲಿಂದ ಜಯಾರನ್ನು ಅಕ್ಷರಶಃ ಹೊರಹಾಕಲಾಯಿತು.
  • ಎಂಜಿಆರ್‌ ಕಳೇಬರವನ್ನು ರಾಜಾಜಿ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಅಲ್ಲಿ ನುಸುಳಿ ಬಂದ ಜಯಲಲಿತಾ ಅಖಂಡ 30 ಗಂಟೆಗಳ ಕಾಲ ಎಂಜಿಆರ್‌ ತಲೆಯ ಬಳಿ ದುಃಖಿಸುತ್ತ ಕುಳಿತರು. ಎದೆಯ ಮೇಲೆ ಬಿದ್ದು ರೋದಿಸಿದರು. ಭಾವಾನಾತ್ಮಕ ತಮಿಳರ ಹೃದಯ ಕದಿಯಲು ಇಷ್ಟು ಸಾಕಾಯಿತು. ಎಂಜಿಆರ್‌ ಧರ್ಮಪತ್ನಿ ಜಾನಕಿಗೆ ಪಾರ್ಥಿವ ಶರೀರದ ಕೈಹಿಡಿದು ನಮಸ್ಕರಿಸಲು ಮಾತ್ರ ಸಾಧ್ಯವಾಯಿತು.

ಜಾನಕಿ ರಾಮಚಂದ್ರನ್‌ ಮುಖ್ಯಮಂತ್ರಿ ಬದಲಾಯಿಸಿ

  • ಎಂಜಿಆರ್‌ ಅಂತ್ಯ ಸಂಸ್ಕಾರಕ್ಕೆ ತೆರೆದ ಮಿಲಿಟರಿ ಟ್ರಕ್‌ನಲ್ಲಿ ಕಳೇಬರ ಒಯ್ಯುತ್ತಿದ್ದಾಗ ಟ್ರಕ್‌ ಏರಲು ಯತ್ನಿಸಿದ ಜಯಲಲಿತಾರನ್ನು ಜಾನಕಿ ಸಂಬಂಧಿಗಳು ಬೆಂಬಲಿಗರು ಎಳೆದುಹಾಕಿದರು. ಆಗ ನಡೆದ ಗಲಾ ಟೆಯಲ್ಲಿ ಜಾನಕಿ ಸಹ ಕೆಳಗಿಳಿಯ ಬೇಕಾಯಿತು. ತಮಿಳುನಾಡು ಕಂಡ ಮಹಾನ್‌ ನಟ, ಪ್ರಭಾವಿ ರಾಜಕಾರಣಿಯ ಅಂತ್ಯಸಂಸ್ಕಾರ ಪತ್ನಿ, ಆಪ್ತಸಖಿಯ ಗೈರುಹಾಜರಿಯಲ್ಲಿ ನಡೆಯಿತು.
  • ಎಂಜಿಆರ್‌ ಉತ್ತರಾಧಿಕಾರಿಯೆಂದು ಘೊಷಿಸಿಕೊಂಡ ಜಾನಕಿ ರಾಮಚಂದ್ರನ್‌ ಮುಖ್ಯಮಂತ್ರಿಯಾದರು. ಪಕ್ಷ ಎರಡು ಹೋಳಾಯಿತು. ರಾಜೀವ್‌ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಜಯಾರನ್ನು ಬೆಂಬಲಿಸಿತು. ಸಂವಿಧಾನದ 356ನೇ ವಿಧಿಯಡಿ ಜಾನಕಿ ರಾಮಚಂದ್ರನ್‌ ಸರ್ಕಾರವನ್ನು 21 ದಿನಗಳಲ್ಲಿ ವಜಾ ಮಾಡಿತು. ಕೆಲ ತಿಂಗಳಲ್ಲೇ ಜಾನಕಿ ತೆರೆಮರೆಗೆ ಸರಿದರು. 1988 ರಲ್ಲಿ ಹೋಳಾಗಿದ್ದ ಪಕ್ಷ ಜಯಾ ನೇತೃತ್ವದಲ್ಲಿ ಮತ್ತೆ ಒಂದಾಯಿತು.

ವಿರೋಧ ಪಕ್ಷದ ನಾಯಕಿ ಬದಲಾಯಿಸಿ

  • ವಿಧಾನಸಭೆ ವಿಸರ್ಜನೆ ನಂತರ ನಡೆದ ಚುನಾವಣೆಯಲ್ಲಿ ಡಿಎಂಕೆ ಅಧಿಕಾರ ಹಿಡಿಯಿತು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ಜಯಾ ಸೀರೆಯನ್ನು ಡಿಎಂಕೆ ಶಾಸಕರು ಸೆಳೆದ ದುಶ್ಶಾಸನ ಪ್ರಸಂಗವೂ ನಡೆಯಿತು. ಅಂದಿನಿಂದ ಜಯಾ ಸೀರೆ ಮೇಲೆ ಮೇಲಂಗಿ ಧರಿಸತೊಡಗಿದರು. ಈ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಶಪಥ ತೊಟ್ಟರು.

1991–1996ರ ಅವಧಿಗೆ ಮುಖ್ಯಮಂತ್ರಿ ಬದಲಾಯಿಸಿ

  • ಎಂಜಿಆರ್‌ ಯುಗ ಮರಳಿ ತರುತ್ತೇನೆ ಅನ್ನುತ್ತಲೇ ಕಣಕ್ಕಿಳಿದಿದ್ದ ಜಯಾಗೆ 1991ರ ಚುನಾವಣೆಯಲ್ಲಿ ತಮಿಳು ಮತದಾರರು ಕೈಬಿಚ್ಚಿ ಮತ ನೀಡಿದ್ದರು. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ 1991–1996ರ ಅವಧಿಯಲ್ಲೇ ಜಯಾ ರಾಜಕೀಯವಾಗಿ, ವ್ಯಕ್ತಿಯಾಗಿ ಎದುರಿಲ್ಲದ ತ್ರಿವಿಕ್ರಮನಂತೆ ಬೆಳೆದರು.
  • ಎಐಎಡಿಎಂಕೆ ನಾಯಕರು, ಜಯಾ ಸಂಪುಟದ ಸಚಿವರು, ಸಾರ್ವಜನಿಕ ವೇದಿಕೆಗಳಲ್ಲಿ, ಪಕ್ಷದ ಸಭೆಯಲ್ಲಿ ಯಾವುದೇ ಮುಜುಗರವಿಲ್ಲದೇ ಆಕೆಯ ಕಾಲಿಗೆ ಬೀಳತೊಡಗಿದರು. ಮದ್ರಾಸ್‌ನಲ್ಲಿ 50, 60 ಅಡಿಯ ಜಯಾ ಕಟೌಟ್‌ಗಳು ರಾಜಾಜಿಸ ತೊಡಗಿದವು. ಜಯಾರನ್ನು ಅದಿಪರಾಶಕ್ತಿಯ ಅವತಾರ, ಮದರ್‌ ಮೇರಿ ಪ್ರತಿರೂಪ ಎಂದೆಲ್ಲ ಬಿಂಬಿಸತೊಡಗಿದರು. ಎಂಜಿಆರ್‌ ನೆರಳಾಗಿ ರಾಜಕೀಯ ಪ್ರವೇಶಿಸಿದ್ದ ಈ ಕೆನೆಬಣ್ಣದ ಅಯ್ಯಂಗಾರ್ ಮನೆತನದ ಹೆಣ್ಣುಮಗಳು ದ್ರಾವಿಡ ಪ್ರಜ್ಞೆಯ ತಮಿಳು ಜನಮಾನಸದಲ್ಲಿ ಅಮ್ಮನಾಗಿ ಬೆಳೆಯತೊಡಗಿದಳು.

ದತ್ತು ಮಗನ ವೈಭವದ ಮದುವೆ ಬದಲಾಯಿಸಿ

  • ಇದೇ ಸಮಯದಲ್ಲೇ ಜಯಾ ದತ್ತುಪುತ್ರನ ಮದುವೆಯಾ ಯಿತು. ಆ ಕಾಲದ ಅತಿ ಆಡಂಬರದ ಮದುವೆ ಎಂಬ ಕುಖ್ಯಾ ತಿಯೂ ಅಂಟಿತು. ಜಯಾ, ಗೆಳತಿ ವಿಕೆ ಶಶಿಕಲಾ ಜತೆ ಸೇರಿ ಖರೀದಿಸಿದ್ದ ಕೇಜಿಗಟ್ಟಲೇ ಆಭರಣ, ಲೆಕ್ಕವಿಲ್ಲದಷ್ಟು ಸೀರೆ, ಚಪ್ಪಲಿ ಅವರ ಮತ್ತೊಂದು ಮುಖ ಪರಿಚಯಿಸಿತು.
  • ಬಡವರ ದನಿಯಾಗುವುದಾಗಿ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದಿದ್ದ ಜಯಾ, ಅಳತೆ ಮೀರಿ ಚರಾಸ್ತಿ. ಸ್ಥಿರಾಸ್ತಿ ಖರೀದಿಸಿದ್ದರು.ಇದರಿಂದ ಭ್ರಷ್ಟಾಚಾರದ ಕೆಟ್ಟ ಹೆಸರು ಸುತ್ತಿಕೊಂಡಿದ್ದು ಕೊನೆಯವರೆಗೂ ಅದರಿಂದ ಬಿಡಿಸಿಕೊಳ್ಳಲು ನ್ಯಾಯಾಲಯದಲ್ಲಿ ಹೋರಾಡಬೇಕಾಯಿತು.

1996ರ ಚುನಾವಣೆ: ಕೇಂದ್ರದಲ್ಲಿ ಪ್ರಭಾವ ಬದಲಾಯಿಸಿ

  • 1996ರ ಚುನಾವಣೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬಂತು. ಆದರೆ, 1998ರ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದ ಜಯಾ ಕಿಂಗ್‌ ಮೇಕರ್‌ ಆದರು. ವಾಜಪೇಯಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು 13 ತಿಂಗಳಲ್ಲಿ ಹಠಾತ್‌ ಹಿಂತೆಗೆದುಕೊಂಡು ಸರ್ಕಾರ ಬೀಳಿಸಿದರು.

ಪುನಃ ಮುಖ್ಯಮಂತ್ರಿ ಪದವಿ: ಏಳು-ಬೀಳು ಬದಲಾಯಿಸಿ

  • 2001ರಲ್ಲಿ ಚುನಾವಣೆಯಾಗಿ ಬಹುಮತ ಪಡೆದು ಮತ್ತೆ ತಮಿಳುನಾಡಿನಲ್ಲಿ ಅಧಿಕಾರ ಹಿಡಿದರು. 2006ರ ಚುನಾವಣೆಯಲ್ಲಿ ಕರುಣಾನಿಧಿಗೆ ಮೇಲುಗೈ. ಕಾಂಗ್ರೆಸ್‌ ಸಾಮೀಪ್ಯದಿಂದ ಡಿಎಂಕೆ ಮೆರೆಯುತ್ತಿದೆ ಎಂದುಕೊಳ್ಳುವಾಗಲೇ 2011ರ ಚುನಾವಣೆಯಲ್ಲಿ ಅಮ್ಮಾಗೆ ಗೆಲವು. ಈ ಚುನಾವಣೆಯ ನಂತರ ಜಯಾ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂತು. ವಯಸ್ಸಿನ ಪರಿಣಾಮವೋ ಏನೋ ಅವರ ಮಾತು, ಕೃತಿಗಳಲ್ಲಿ ಪಕ್ವತೆ, ಪ್ರಬುದ್ಧತೆ ಕಾಣಿಸಿಕೊಂಡಿತು.

ಜೈಲುವಾಸ ಬದಲಾಯಿಸಿ

  • ಅಕ್ರಮ ಆಸ್ತಿ ಪ್ರಕರಣದಲ್ಲಿ 2014ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದಾಗ ಒಂದು ತಿಂಗಳು ಜೈಲುವಾಸವನ್ನೂ ಅನುಭವಿಸಿದರು. ಅವರ ಶಾಸಕ ಸ್ಥಾನಕ್ಕೂ ಕುತ್ತುಬಂತು. ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದ ನಂತರ 2015ರ ಮೇ ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತರು.

ನಾಲ್ಕನೇ ಬಾರಿ ಮುಖ್ಯಮಂತ್ರಿ ಬದಲಾಯಿಸಿ

  • 2016ರ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಜಯ ಅವರಿಗೆ ಒಲಿಯಿತು. ಆದರೆ, ಮುಖ್ಯಮಂತ್ರಿಯಾಗಿ ನಾಲ್ಕು ತಿಂಗಳ ಒಳಗಾಗಿ ಅವರ ಆರೋಗ್ಯ ಕ್ಷೀಣಿಸುತ್ತ ಬಂತು.ಬಹಿರಂಗ ಸಭೆಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತ ಬಂತು. ಹಸುಳೆ ಯಾಗಿದ್ದಾಗ ಮೈಸೂರಿನ ಲಕ್ಷ್ಮಿಪುರದ ಮನೆಯಲ್ಲಿ ಆಟವಾಡಿಕೊಂಡಿದ್ದ ಜಯಾರನ್ನು ನೋಡಿದ್ದ ಹಿರಿಯರು ಅವರನ್ನು ‘ಅತಿ ಮುದ್ದಾಗಿದ್ದ ಮಗು’ ಎಂದೇ ನೆನಪಿಸಿಕೊಳ್ಳುತ್ತಿದ್ದರು.[೭]

ಅಪೋಲೊ ಆಸ್ಪತ್ರೆಯಲ್ಲಿ ಬದಲಾಯಿಸಿ

  • ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕಳೆದ 74 ದಿನಗಳಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಾ ಅವರು ಆಸ್ಪತ್ರೆಗೆ ದಾಖಲಾದ ದಿನದಿಂದ ಇಂದಿನವರೆಗೆ ಅವರ ಆರೋಗ್ಯ ಸ್ಥಿತಿಯಲ್ಲಾದ ಏರುಪೇರುಗಳ ಬಗ್ಗೆ ಇಲ್ಲಿದೆ ಮಾಹಿತಿ.
  • ಸೆಪ್ಟೆಂಬರ್ 22 : ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲು
  • ಸೆಪ್ಟೆಂಬರ್ 29: ಚಿಕಿತ್ಸೆಗೆ ಸ್ಪಂದನೆ. ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯಲು ಸೂಚನೆ
  • ಅಕ್ಟೋಬರ್ 1 : ಜಯಾ ಆರೋಗ್ಯವಾಗಿದ್ದು, ಕಚೇರಿ ಕೆಲಸ ಮಾಡುತ್ತಿದ್ದಾರೆ ಎಂಬ ವದಂತಿ ತಳ್ಳಿ ಹಾಕಿದ ಎಐಎಡಿಎಂಕೆ
  • ಅಕ್ಟೋಬರ್ 2 : ಲಂಡನ್‍ನ ತಜ್ಞ ಡಾ. ರಿಚರ್ಡ್ ಬೀಲೆ ಅವರಿಂದ ಚಿಕಿತ್ಸಾ ಸಲಹೆ
  • ಅಕ್ಟೋಬರ್ 6: ಹೆಚ್ಚಿನ ಚಿಕಿತ್ಸೆ ನೀಡಲು ಎಐಐಎಂಎಸ್ ವೈದ್ಯದ ತಂಡ ಚೆನ್ನೈಗೆ ಆಗಮನ
  • ನವೆಂಬರ್ 3: ಜಯಾ ಸಂಪೂರ್ಣ ಗುಣಮುಖ- ಅಪೋಲೊ ಆಸ್ಪತ್ರೆ ಹೇಳಿಕೆ
  • ನವೆಂಬರ್ 13 : ಕೆಲಸಕ್ಕೆ ಮರಳಲು ಸಾಧ್ಯ ಎಂದು ಪತ್ರಕ್ಕೆ ಸಹಿ ಹಾಕಿದ ಜಯಾ
  • ನವೆಂಬರ್ 19: ಐಸಿಯುನಿಂದ ವಾರ್ಡ್‍ಗೆ ಶಿಫ್ಟ್
  • ಡಿಸೆಂಬರ್ 4 : ತೀವ್ರ ಹೃದಯ ಸ್ತಂಭನ
  • ಡಿಸೆಂಬರ್ 5 : ತೀವ್ರ ಹೃದಯಾಘಾತದಿಂದ ಕೋಮಾಗೆ ಜಾರಿದ್ದ ಜಯಲಿಲಿತಾ ರಾತ್ರಿ 11.30 ರ ಸುಮಾರಿಗೆ ವಿಧಿವಶ.

ಅಕ್ರಮ ಆಸ್ತಿ ಪ್ರಕರಣ ಬದಲಾಯಿಸಿ

  • (ಶನಿವಾರ, ಸೆಪ್ಟೆಂಬರ್ 27, 2014,ಬೆಂಗಳೂರು, ಸೆ.27 ) ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಪ್ರಕಟಗೊಂಡಿದೆ. ಜಯಲಲಿತಾ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಕೋರ್ಟ್ ತೀರ್ಪು ನೀಡಿದೆ. ಈ ಬಗ್ಗೆ ಪರಪ್ಪನ ಅಗ್ರಹಾರದ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ತೀರ್ಪು ನೀಡಿದ್ದು, 4 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
  • ಜಯಲಲಿತಾ ಅವರು 1991 ರಿಂದ 1996ರ ಅವಧಿಯಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 66.65 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪವಿದಾಗಿತ್ತು. 18 ವರ್ಷಗಳ ಸುಧೀರ್ಘ ವಿಚಾರಣೆ ನಂತರ ಸಿಬಿಐ ವಿಶೇಷ ನ್ಯಾಯಾಲಯ ಜಯಲಿತಾ ಅವರು ಅಪರಾಧಿ ಎಂದು ತೀರ್ಪು ನೀಡಿದೆ. [ಜಯಾ ಆರೋಪ ಸಾಬೀತು ಮುಂದೇನು?]
  • ಅಕ್ರಮ ಆಸ್ತಿ ಪ್ರಕರಣ, 'ಜಯಾ'ಗೆ ಅಪಜಯ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಅವರ ಪೀಠ ತೀರ್ಪು ನೀಡಿದ್ದು, ಪ್ರಕರಣದಲ್ಲಿನ ಆರೋಪಿಗಳಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿ ಎಂದು ತೀರ್ಪು ನೀಡಿದ್ದಾರೆ.
  • ಜಯಲಲಿತಾ ಸೇರಿದಂತೆ ನಾಲ್ವರು ಆರೋಪಿಗಳಿಗೂ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. [ಜಯಾ ಕೇಸ್ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ. ಇದರಿಂದಾಗಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13 (1) ಇ ಅಡಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿಗಳಿಗೆ ಆರೋಪ ಸಾಬೀತಾದಂತಾಗಿದೆ. ಕೋರ್ಟ್‌ ಜೈಲು ಶಿಕ್ಷೆಯ ಜೊತೆಗೆ 100 ಕೋಟಿ ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.
  • ಜಯಾ ಮತ್ತು ಸಿಬಿಐ ವಕೀಲರು ಜೈಲು ಶಿಕ್ಷೆಯ ಬಗ್ಗೆ ವಾದ ಮಂಡನೆ ಮಾಡಿದ ನಂತರ ತೀರ್ಪನ್ನು ಪ್ರಕಟಿಸಲಾಗಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದ ಕುರಿತು ನ್ಯಾಯಮೂರ್ತಿಗಳು 1300 ಪುಟಗಳ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಜಯಲಲಿತಾ ಮೊದಲನೇ ಅಪರಾಧಿಯಾಗಿದ್ದರೆ, ಶಶಿಕಲಾ 2ನೇ ಅಪರಾಧಿಯಾಗಿದ್ದು, ಸುಧಾಕರನ್ ಮತ್ತು ಇಲವರಸಿ ಮೂರು ಮತ್ತು ನಾಲ್ಕನೆಯ ಅಪರಾಧಿಗಳಾಗಿದ್ದಾರೆ.(ಆಧಾರ:ಒನ್ ಇಂಡಿಯಾ » ಕನ್ನಡ » ಬೆಂಗಳೂರು: Saturday, September 27, 2014)([[೧]])

ಜಯಾ ನಿರಪರಾಧಿ ಬದಲಾಯಿಸಿ

  • ದಿ.27-8-2014 ರಂದು, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರನ್ನು ಕರ್ನಾಟಕ ಹೈಕೋರ್ಟ್ ದೋಷಮುಕ್ತಗೊಳಿಸಿದೆ. ಜಯಾ ಮತ್ತು ಇತರ ಮೂವರು ಅಪರಾಧಿಗಳ ಮೇಲ್ಮನವಿ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಸೋಮವಾರ ಬೆಳಗ್ಗೆ ಪ್ರಕಟಿಸಿದರು.
  • ‘ಒಬ್ಬ ವ್ಯಕ್ತಿಯು ತನ್ನ ಒಟ್ಟು ಆದಾಯದಲ್ಲಿ ಶೇ 10ರಿಂದ 20ರವರೆಗೆ ಅಕ್ರಮ ಆಸ್ತಿ ಹೊಂದಿದ್ದರೆ ಅದನ್ನು ಮಾನ್ಯ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳುತ್ತದೆ. ಹೀಗಿರುವಾಗ ಈ ಪ್ರಕರಣದಲ್ಲಿ ಜಯಾ ಅವರು ಒಟ್ಟಾರೆ ಶೇ 8.12ರಷ್ಟು ಮಾತ್ರವೇ ಅಕ್ರಮ ಆಸ್ತಿ ಹೊಂದಿರುವುದು ಕಂಡು ಬಂದಿದೆ. ಆದ್ದರಿಂದ ಮುಖ್ಯ ಆರೋಪಿ ವಿರುದ್ಧದ ಆರೋಪಗಳು ಉತ್ಪ್ರೇಕ್ಷೆಯಿಂದ ಕೂಡಿವೆ ಎಂದು ಆದೇಶದಲ್ಲಿ ಹೇಳಲಾಗಿದೆ.
  • ತಮ್ಮ ಈ ಆದೇಶಕ್ಕೆ ನ್ಯಾಯಮೂರ್ತಿಗಳು ಕೃಷ್ಣಾನಂದ ಮತ್ತು ಮಧ್ಯಪ್ರದೇಶದ ನಡುವಿನ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ್ದಾರೆ. ‘ಒಬ್ಬ ವ್ಯಕ್ತಿ ಶೇ 10 ರಷ್ಟು ಅಕ್ರಮ ಆಸ್ತಿ ಹೊಂದಿದ್ದರೆ ಅದಕ್ಕೆ ಮಾನ್ಯತೆ ನೀಡಲಾಗಿದೆ. ಇದೇ ರೀತಿ ಆಂಧ್ರಪ್ರದೇಶ ಸರ್ಕಾರದ ಸುತ್ತೋಲೆಯೊಂದರ ಅನುಸಾರ ಶೇ 20 ಅಕ್ರಮ ಆಸ್ತಿ ಕಾನೂನು ಬಾಹಿರವಲ್ಲ ಎಂಬ ಅಂಶ ಇಲ್ಲಿ ಗಮನಾರ್ಹ’ ಎಂದು ಆದೇಶದಲ್ಲಿ ಕಾಣಿಸಲಾಗಿದೆ.
  • ‘ಜಯಾ ಅವರ ಆದಾಯ ಲೆಕ್ಕ ಹಾಕುವಾಗ ಕಂಪೆನಿಗಳು, ಕೃಷಿ ಮತ್ತು ಇತರ ಆದಾಯದ ಮೂಲಗಳನ್ನು ಮಿಶ್ರಣ ಮಾಡಲಾಗಿದೆ. ವಡನಾಡು, ಗ್ರೇಪ್ಸ್‌ ಗಾರ್ಡನ್‌ನಂತಹ ಆಸ್ತಿಗಳ ಆದಾಯವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಯೇ ಇಲ್ಲ. ಎಲ್ಲವನ್ನೂ ಸುಮ್ಮನೇ ಒಂದು ಅಂದಾಜಿನ ಲೆಕ್ಕಾಚಾರದಲ್ಲಿ ಅಕ್ರಮ ಆಸ್ತಿ ಎಂದು ಗುರುತಿಸಲಾಗಿದೆ.
  • ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ವಿಶೇಷ ವಿಚಾರಣಾ ನ್ಯಾಯಾಲಯ ಹಾಗೂ ಅದರ ನಿಲುವುಗಳು ಕಾನೂನು ಪ್ರಕಾರ ಊರ್ಜಿತವಲ್ಲ. ಹೀಗಾಗಿ ಅರ್ಜಿದಾರರ ಕ್ರಿಮಿನಲ್‌ ಮೇಲ್ಮನವಿಗಳನ್ನು ವಿಚಾರಣೆಗೆ ಅಂಗೀಕರಿಸಿದ್ದೇನೆ ಹಾಗೂ ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ನೀಡಿದ ದಂಡ ಮತ್ತು ಶಿಕ್ಷೆಯನ್ನು ಅನೂರ್ಜಿತಗೊಳಿಸುತ್ತೇನೆ’ ಎಂದು ವಿವರಿಸಲಾಗಿದೆ.
  • ‘ಆರೋಪಿ ನಿಗದಿತ ಪ್ರಮಾಣ ಮೀರಿ ಆದಾಯ ಹೊಂದಿದ್ದಾರೆ ಎಂಬ ದೂರಿನಲ್ಲಿ ಯಾವುದೇ ಹುರುಳಿಲ್ಲ. 2,3 ಮತ್ತು 4ನೇ ಆರೋಪಿಗಳು ಒಂದನೇ ಆರೋಪಿ ಜೊತೆಗೆ ವಾಸಿಸುತ್ತಿದ್ದರು ಅಂದ ಮಾತ್ರಕ್ಕ ಇವರೆಲ್ಲಾ ಸೇರಿ ಕೂಟ ರಚಿಸಿಕೊಂಡು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ’ ಎಂದು ಆದೇಶದಲ್ಲಿ ಅಭಿಪ್ರಾಯಪಡಲಾಗಿದೆ. ‘2, 3 ಮತ್ತು 4ನೇ ಆರೋಪಿಗಳು ಸ್ಥಿರಾಸ್ತಿಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದು ಖರೀದಿಸಿದ್ದಾರೆ.
  • ಇವುಗಳಿಗೆ ಕಾಲಕಾಲಕ್ಕೆ ಸೂಕ್ತ ಆದಾಯ ತೆರಿಗೆಯನ್ನೂ ಪಾವತಿಸಲಾಗಿದೆ. ಆದ್ದರಿಂದ ಇವನ್ನೆಲ್ಲಾ ಅಕ್ರಮ ಆಸ್ತಿ ಗಳಿಕೆ ಎಂದು ಪರಿಗಣಿಸಲು ಕಷ್ಟವಾಗುತ್ತದೆ. ಹೀಗಾಗಿ ಚರ ಮತ್ತು ಸ್ಥಿರಾಸ್ತಿಗಳ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆಯ ದೂರುಗಳಲ್ಲಿ ಯಾವುದೇ ಕಾನೂನು ಮಾನ್ಯತೆ ಕಾಣುತ್ತಿಲ್ಲ’ ಎಂದು ವಿವರಿಸಲಾಗಿದೆ.
  • ‘ವಿಚಾರಣಾ ನ್ಯಾಯಾಲಯವು ಆದಾಯ ತೆರಿಗೆ ಪ್ರಕ್ರಿಯೆಗಳನ್ನು ಕನಿಷ್ಠ ಮಟ್ಟಕ್ಕೂ ಪರಿಗಣಿಸಿಲ್ಲ. ಅಷ್ಟೇಕೆ ಈ ಸಂಗತಿಗಳಿಗೆ ಸಂಬಂಧಿಸಿದ ಸಾಕ್ಷಿಗಳನ್ನೂ ಪುರಸ್ಕರಿಸಿಲ್ಲ. ಸಾಕ್ಷಿಗಳು ಒಂದೊಂದು ಹಂತದಲ್ಲಿ ಒಂದೊಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಆರೋಪಗಳು ವಾಸ್ತವಾಂಶಗಳಿಗೆ ದೂರವಾಗಿವೆ’ ಎಂದು ಹೇಳಲಾಗಿದೆ.ಜಯಲಲಿತಾ ಅಪರಾಧಿಯಲ್ಲ;ಪ್ರಜಾವಾಣಿ ವಾರ್ತೆ;12 May, 2015[ಶಾಶ್ವತವಾಗಿ ಮಡಿದ ಕೊಂಡಿ]

ಅನಾರೋಗ್ಯ ಬದಲಾಯಿಸಿ

  • 2016 ಸೆಪ್ಟೆಂಬರ್ 22 ರಂದು ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದು ಕಳೆದ 74 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ನವೆಂಬರ್ 19ರಂದು ಐಸಿಯುನಿಂದ ವಾರ್ಡ್‍ಗೆ ಶಿಫ್ಟ್ ಆಗಿದ್ದ ಜಯಾ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದಂತೆ ದಿ.4-12-2016ಭಾನುವಾರ ಸಂಜೆ ತೀವ್ರ ಹೃದಯಾಘಾತ(ಹೃದಯಸ್ತಂಭನ)ವಾಗಿತ್ತು.
  • ಇತ್ತೀಚಿನ ದಿನಗಳಲ್ಲಿ 68 ವರ್ಷದ ಜಯಲಲಿತಾ ಅವರ ಆರೋಗ್ಯ ಏರು ಪೇರಾಗುತ್ತಲೇ ಇತ್ತು. ಹೃದಯ ಸ್ತಂಭನಕ್ಕೊಳಗಾಗಿದ್ದ ಜಯಾ ಅವರಿಗೆ ಲಂಡನ್‍ನ ತಜ್ಞ ಡಾ. ರಿಚರ್ಡ್ ಬೀಲೆ ಅವರ ಸಲಹೆಯಂತೆ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಡಿಸೆಂಬರ್ 4ರ ನಡುರಾತ್ರಿಯೇ ತೀವ್ರ ಹೃದಯಾಘಾತವಾಗಿ ಕೋಮಾಗೆ ಜಾರಿದ್ದ ಜಯಲಲಿತಾ ಮತ್ತೆ ಮರಳಿ ಸಾಮಾನ್ಯ ಸ್ಥಿತಿಗೆ ಮರಳಿರಲೇ ಇಲ್ಲ.
  • ತಮಿಳುನಾಡಿನ ಜನತೆಯಿಂದ ಅಮ್ಮಾ ಎಂದೇ ಕರೆಯಲ್ಪಡುವ ಜಯಲಲಿತಾ ಅವರ ಈ ಸುದ್ದಿ ಕೇಳುತ್ತಿದ್ದಂತೆ ಇಡೀ ರಾಜ್ಯದ ಜನತೆ ಶೋಕ ಸಾಗರದಲ್ಲಿ ಮುಳುಗಿತು. ಆಸ್ಪತ್ರೆ ಎದುರು ನೆರೆದ ಅಭಿಮಾನಿಗಳ ದಂಡು: ಹಲವು ದಿನಗಳ ಅನಾರೋಗ್ಯ ದಿಂದ ಚೇತರಿಸಿಕೊಂಡಿದ್ದ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯ ಸ್ತಂಭನ ಸುದ್ದಿ ಹರಡಿದ ಬೆನ್ನಲ್ಲೇ ಅಪೋಲೊ ಆಸ್ಪತ್ರೆಯ ಹೊರಭಾಗದಲ್ಲಿ ಡಿಸೆಂಬರ್ 4ರ ರಾತ್ರಿಯಿಂದಲೇ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.
  • ಗುಂಪು ಗುಂಪಾಗಿ ಆಸ್ಪತ್ರೆ ಮುಂಭಾಗಕ್ಕೆ ಧಾವಿಸಿದ ಜನಸಾಗರದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಸ್ಪತ್ರೆಯ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಲಾಗಿತ್ತು.[೮]
  • ಮುಖ್ಯಮಂತ್ರಿ ಜಯಲಲತಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಲಂಡನ್‍ನ ತಜ್ಞ ಡಾ, ರಿಚರ್ಡ್ ಬೀಲೆ ಪ್ರತಿಕಾ ಪ್ರಕಟಣೆಯೊಂದನ್ನು ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ಹೀಗಿದೆ:
  • ತಮಿಳುನಾಡು ಮುಖ್ಯಮಂತ್ರಿ ಅವರಿಗೆ ನಿನ್ನೆ (ಭಾನುವಾರ) ಹೃದಯ ಸ್ತಂಭನ ಆಗಿದೆ ಎಂಬ ಸುದ್ದಿ ಕೇಳಿ ಅತೀವ ಬೇಸರವಾಗಿದೆ. ಅಪೋಲೊದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿತಿ ಬಗ್ಗೆ ನಾನು ತೀವ್ರ ನಿಗಾ ಇರಿಸುತ್ತಾ ಬಂದಿದ್ದೇನೆ. ದುರದೃಷ್ಟವಶಾತ್, ಆಕೆ ಸ್ವಲ್ಪ ಚೇತರಿಸಿಕೊಂಡರೂ, ಅವರು ಮತ್ತೆ ಅನಾರೋಗ್ಯಕ್ಕೀಡಾಗುವ ಭೀತಿ ಸದಾ ಇತ್ತು. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರೂ, ಅವರನ್ನು ಬದುಕುಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ.
  • ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿದ್ದು ಜೊತೆಗೆ, ಎಕ್ಸ್ಟ್ರಾ ಕಾರ್ಪೊರಲ್ ಲೈಫ್ ಸಪೋರ್ಟ್ ಮೂಲಕ ಜೀವ ರಕ್ಷಕವನ್ನೂ ಅಳವಡಿಸಲಾಗಿತ್ತು. ದೆಹಲಿಯ ಏಮ್ಸ್ ನ ತಜ್ಞ ವೈದ್ಯರ ತಂಡ ಸ್ಥಳದಲ್ಲೇ ಇದ್ದು ತೀವ್ರ ನಿಗಾ ವಹಿಸಿದ್ದರು.

[೯]

ನಿಧನ ಬದಲಾಯಿಸಿ

ಹೃದಯ ಸ್ತಂಭನದಿಂದ ಚೆನ್ನೈ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರು 05-12-2016 ರ ರಾತ್ರಿ 11.30ಕ್ಕೆ ನಿಧನರಾಗಿದ್ದಾರೆ ಎಂದು ಅಪೋಲೊ ಆಸ್ಪತ್ರೆಯ ಪ್ರಕಟಣೆ ಧೃಡೀಕರಿಸಿತು. [೧೦][೧೧]. ಅವರಿಗೆ ೬೮ ವರ್ಷ ವಯಸ್ಸಾಗಿತ್ತು.

ಅಭಿಮಾನಿಗಳ ಸಾವು ಬದಲಾಯಿಸಿ

  • ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಸುದ್ದಿ ಕೇಳಿ ದಿಗ್ಭಾಂತರಾಗಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಸಿಂಗನಲ್ಲೂರ್ ಎಂಬಲ್ಲಿ 65ರ ಹರೆಯದ ವ್ಯಕ್ತಿಯೊಬ್ಬರು ಜಯಾ ಅವರ ಮರಣ ವಾರ್ತೆಯನ್ನು ಟೀವಿಯಲ್ಲಿ ವೀಕ್ಷಿಸುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟರು . ಡಿಸೆಂಬರ್ 4 ರ ಭಾನುವಾರ ಮಧ್ಯಾಹ್ನ ತುಡಿಯಾಲೂರ್ ಎಂಬಲ್ಲಿ ಪಳನಿಯಮ್ಮಾಳ್ ಎಂಬವರು ಹೃದಯಾಘಾತದಿಂದ ಸಾವಿಗೀಡಾಗಿದ್ದು, ಈರೋಡ್‍ನಲ್ಲಿ 38ರ ಹರೆಯದ ಎಐಎಡಿಎಂಕೆ ಕಾರ್ಯಕರ್ತರೊಬ್ಬರು ಅದೇ ದಿನ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದರು.[೧೨]

[೧೩]

ಶ್ರದ್ಧಾಂಜಲಿ ಬದಲಾಯಿಸಿ

  • ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ, ರಾಜಾಜಿ ಹಾಲ್‍ನಲ್ಲಿ ಜಯಲಲಿತಾ ಅವರ ಅಂತಿಮ ದರ್ಶನ ಪಡೆದು, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.[೧೪]

ಅಂತ್ಯಕ್ರಿಯೆ ಬದಲಾಯಿಸಿ

  • ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ಅಮ್ಮ ಜಯರಾಮನ್ ಜಯಲಲಿತಾ ಅವರ ಅಂತ್ಯ ಸಂಸ್ಕಾರ ಮಂಗಳವಾರ ಸಂಜೆ ಚೆನ್ನೈನ ಮರೀನಾ ಬೀಚ್ ನಲ್ಲಿರುವ ಎಂಜಿಆರ್ ಸ್ಮಾರಕದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
  • ಆ ಸಂದರ್ಭದಲ್ಲಿ ಉಸ್ತುವಾರಿ ರಾಜ್ಯಪಾಲ ಸಿ.ವಿದ್ಯಾಸಾಗರ್, ಮಾಜಿ ರಾಜ್ಯಪಾಲರಾದ ಕೆ.ರೋಸಯ್ಯ, ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯಾತಿಗಣ್ಯರು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಜಯಲಲಿತಾ ಅವರಿಗೆ ಅಂತಿಮ ನಮನ ಸಲ್ಲಿಸಿದರು.
  • ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಅವರು ಬ್ರಾಹ್ಮಣ ಅಯ್ಯಂಗಾರ್ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಿದ ನಂತರ ಶ್ರೀಗಂಧದ ವಿಶೇಷ ಪೆಟ್ಟಿಗೆಯಲ್ಲಿ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಸೇನಾ ಸಿಬ್ಬಂದಿ ಸಮಾಧಿಯೊಳಗೆ ಇಳಿಸಿದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಸಮಾಧಿ ಸಮೀಪವೇ ಜಯಲಲಿತಾ ಅವರ ಸಮಾಧಿ ಸಹ ನಿರ್ಮಿಸಲಾಗಿದೆ.[೧೫][೧೬]

ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಬದಲಾಯಿಸಿ

  • 13 Dec, 2016
  • ಪಶ್ಚಿಮ ವಾಹಿನಿಯಲ್ಲಿ ಮಂಗಳವಾರ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಂತ್ಯ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.ಜಯಾಲಲಿತಾ ಅವರ ಅಣ್ಣ ವಾಸುದೇವನ್ ಅನುಮತಿ ಹಿನ್ನೆಲೆಯಲ್ಲಿ ವರದರಾಜನ್ ನೇತೃತ್ವದಲ್ಲಿ ಮರು ಸಂಸ್ಕಾರ ನಡೆಯಿತು. ಅರ್ಚಕ ರಾಮಾನುಜಾ ಅಯ್ಯಂಗಾರ್, ರಂಗರಾಜ ಅಯ್ಯಂಗಾರ್ ನೇತೃತ್ವದಲ್ಲಿ ವಿಧಿವಿಧಾನ ನಡೆದಿದ್ದು, ದರ್ಬೆ ಹುಲ್ಲಿನಲ್ಲಿ ಜಯಲಲಿತಾ ಪ್ರತಿಕೃತಿ ಸಿದ್ಧಪಡಿಸಿ ಅಗ್ನಿ ಸ್ಪರ್ಶ ನೀಡಲಾಯಿತು.[೧೭]

ಅಂತಿಮ ಯಾತ್ರೆಯ ಫೋಟೊಗಳು ಬದಲಾಯಿಸಿ

[[೨]][[೩]]

ಜಯಲಲಿತಾರ ವಿಶೇಷ ಜನಪ್ರಿಯತೆ ಮತ್ತು ಅವರ ಬಗೆಗೆ ಜನರ ಪ್ರೀತಿ ಬದಲಾಯಿಸಿ

  • 2016 ಡಿಸೆಂಬರ್ 5ರಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ನಿಧನರಾದ ಸುದ್ದಿ ಕೇಳಿ ಆಘಾತದಿಂದ ಮೃತಪಟ್ಟ 203 ಮಂದಿಯ ಮಾಹಿತಿಯನ್ನು ಎಐಎಡಿಎಂಕೆ ಶನಿವಾರ ಪ್ರಕಟಿಸಿದೆ. ತಮಿಳುನಾಡಿನ ಚೆನ್ನೈ, ವೆಲ್ಲೂರ್, ತಿರುವಲ್ಲೂರ್, ತಿರುವಣ್ಣಾಮಲೈ, ಕಡಲೂರ್, ಕೃಷ್ಣಗಿರಿ, ಈರೋಡ್ ಮತ್ತು ತಿರುಪೂರ್ ಮೊದಲಾದ ಜಿಲ್ಲೆಗಳಲ್ಲಿ ಮೃತಪಟ್ಟ ಜನರ ಹೆಸರನ್ನು ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಹಿರಂಗ ಪಡಿಸಲಾಗಿದೆ. ಪಕ್ಷದ ಕಚೇರಿಯಲ್ಲಿ ಶ್ರದ್ದಾಂಜಲಿ ಅರ್ಪಿಸಿದ ನಂತರ ಮೃತರ ಕುಟುಂಬಗಳಿಗೆ ತಲಾ ರೂ.3 ಲಕ್ಷ ಪರಿಹಾರ ಧನ ಘೋಷಿಸಲಾಗಿದೆ. ಜಯಲಲಿತಾ ಅವರ ನಿಧನ ಸುದ್ದಿ ಕೇಳಿ ಮೃತಪಟ್ಟಿದ್ದ 77 ಮಂದಿಯ ಕುಟುಂಬಕ್ಕೆ ಈಗಾಗಲೇ ಪರಿಹಾರ ಧನ ನೀಡಲಾಗಿದೆ ಎಂದು ಎಐಎಡಿಎಂಕೆ ಪಕ್ಷದ ಮೂಲಗಳು ಹೇಳಿವೆ.
  • ಇಲ್ಲಿಯವರೆಗೆ ಜಯಾ ನಿಧನದ ಆಘಾತದಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 280 ಆಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.[೧೮]
  • ಜಯಲಲಿತಾ ಅವರಿಗೆ ಹಿಂದೆ ನ್ಯಾಯಾಲದಲ್ಲಿ ಶಿಕ್ಷೆಯಾದಾಗಲೇ ೨೫ಕ್ಕೂ ಹೆಚ್ಚು ಮಂದಿ ದುಃಖತಡೆಯಲಾರದೆ ಸತ್ತಿದ್ದರು.(ಮೇಲಿದ್ದ ಈ ವಿವರವನ್ನು ಅಳಿಸಿದ್ದಾರೆ)
  • ದಿ.೧೧.ಭಾನುವಾರ ೨೦೧೬ರಂದು,ಆಘಾತದಿಂದ 470 ಮಂದಿ ಮೃತಪಟ್ಟಿದ್ದಾರೆ ಎಂದು ಎಐಎಡಿಎಂಕೆ ತಿಳಿಸಿದೆ.[೧೯]

ಜಯಲಲಿತಾ ನಿರ್ಗಮನ ಬದಲಾಯಿಸಿ

  • ಸ್ವಾತಂತ್ರ್ಯೋತ್ತರ ರಾಜಕೀಯ ಇತಿಹಾಸದಲ್ಲಿ ಯಾರೂ ಕಡೆಗಣಿಸಲಾಗದ ಛಾಪು ಅವರದು. ಸಿನಿಮಾ ನಟಿಯಾಗಿದ್ದವರು ರಾಜಕಾರಣದಲ್ಲೂ ಸೈ ಎನಿಸಿಕೊಂಡು ರಾಜ್ಯವೊಂದರ ಚುಕ್ಕಾಣಿ ಹಿಡಿದು ದಶಕಗಳ ಕಾಲ ಮುನ್ನಡೆಸುವುದು, ಮಹಿಳೆಯರು ಮತ್ತು ಬಡವರ ಪಾಲಿನ ಆರಾಧ್ಯದೈವವಾಗಿ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸುವುದು ಸಣ್ಣ ಸಂಗತಿಯಲ್ಲ. ಅವರ ಈ ದಾರಿ ಹೂವಿನ ಹಾಸಿಗೆಯಂತೂ ಆಗಿರಲಿಲ್ಲ. ಸಾಕಷ್ಟು ಮುಳ್ಳುಗಳೂ ಇದ್ದವು.
  • ಸಂಕೋಚ, ನೋವು, ಅವಮಾನಗಳನ್ನೆಲ್ಲ ಮೆಟ್ಟಿ ನಿಂತು ರಾಜಕಾರಣದಲ್ಲಿ ಅವರು ಬೆಳೆದು ಬಂದ ಬಗೆ, ಅವರ ಕಾರ್ಯವೈಖರಿ, ಆಲೋಚನಾ ವಿಧಾನ, ಗುಣಾವಗುಣಗಳು... ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಅವರನ್ನು ಇನ್ನೊಬ್ಬರ ಜತೆ ಹೋಲಿಸಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದಾಗ ರಾಷ್ಟ್ರ ಮಟ್ಟಕ್ಕೂ ಅವರ ಪ್ರಭಾವ ವಿಸ್ತರಿಸಿತು.
  • ರಾಜಕೀಯವಾಗಿ ಜಯಲಲಿತಾ ಆಗ ಅಷ್ಟೇನೂ ಬೆಳೆದಿರಲಿಲ್ಲ. ಮೂರೇ ವರ್ಷದಲ್ಲಿ ಪಕ್ಷವನ್ನು ಜಯಲಲಿತಾ ಗಟ್ಟಿ ಮಾಡಿದರು. ಚುನಾವಣೆಯಲ್ಲಿ ಗೆದ್ದರು. ಅಧಿಕಾರ ರಾಜಕಾರಣದಲ್ಲಿ ಸಹಜವಾದ ಏಳು ಬೀಳುಗಳನ್ನು ಅನುಭವಿಸಿದರೂ, ಅರಗಿಸಿಕೊಂಡು ಸ್ವತಃ ಕಲಿಯುತ್ತ ಮುಂದೆ ಬಂದದ್ದು ಅವರ ಹೆಚ್ಚುಗಾರಿಕೆ.[೨೦]

ಜಯಲಿತಾ ಅವರ ಜೀವನದ ಘಟ್ಟಗಳು ಬದಲಾಯಿಸಿ

  • 1948, ಫೆಬ್ರುವರಿ 24: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಅಯ್ಯಂಗಾರಿ ಬ್ರಾಹ್ಮಣ ಕುಟುಂಬದಲ್ಲಿ ಜನನ.
  • ತಂದೆ ಹೆಸರು ಜಯರಾಮ್, ತಾಯಿ ಹೆಸರು ವೇದವಲ್ಲಿ (ನಟಿ ಸಂಧ್ಯಾ). ಜನಿಸಿದಾಗ ಜಯಾ ಅವರಿಗೆ ಇಟ್ಟ ಹೆಸರು ‘ಕೋಮಲವಲ್ಲಿ’.
  • ಕೋಮಲವಲ್ಲಿಗೆ ಒಂದು ವರ್ಷ ವಯಸ್ಸಾಗಿದ್ದಾಗ, ಜಯಲಲಿತಾ ಎಂದು ನಾಮಕರಣ ಮಾಡಲಾಯಿತು.
  • ಜಯಾ ಅವರ ತಂದೆಯ ತಂದೆ ನರಸಿಂಹನ್ ರಂಗಾಚಾರಿ ಅವರು ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಆಸ್ಥಾನದಲ್ಲಿ ವೈದ್ಯರಾಗಿದ್ದರು.
  • ಜಯಾ ಅವರ ತಾಯಿಯ ತಂದೆ ರಂಗಸ್ವಾಮಿ ಅಯ್ಯಂಗಾರ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಉದ್ಯೋಗದಲ್ಲಿದ್ದರು.
  • ಜಯಾ ಎರಡು ವರ್ಷದವರಾಗಿದ್ದಾಗ ತಂದೆ ಜಯರಾಮ್ ತೀರಿಕೊಂಡರು. ನಂತರ ತಾಯಿ ವೇದವಲ್ಲಿ, ಬೆಂಗಳೂರಿನ ತಂದೆಯ ಮನೆಗೆ ಮರಳಿದರು.
  • 1952ರಲ್ಲಿ ಮದ್ರಾಸಿಗೆ ತೆರಳಿದ ವೇದವಲ್ಲಿ, ಅಲ್ಲಿ ‘ಸಂಧ್ಯಾ’ ಎಂಬ ಹೆಸರಿನಲ್ಲಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.
  • 1950ರಿಂದ 1958ರವೆಗೆ ಜಯಲಲಿತಾ ಅವರು ಮೈಸೂರಿನಲ್ಲಿ ತಮ್ಮ ಅಜ್ಜ–ಅಜ್ಜಿ ಜತೆ ಇದ್ದರು.
  • ಜಯಾ ಅವರು ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯ ವಿದ್ಯಾರ್ಥಿನಿಯೂ ಹೌದು.
  • ಮದ್ರಾಸಿಗೆ ವಾಸ್ತವ್ಯ ಬದಲಾಯಿಸಿದ ನಂತರ ಜಯಾ ಅವರು, ಅಲ್ಲಿ ಬಾಲ್ಯದ ಶಿಕ್ಷಣ ಪೂರೈಸಿದರು.
  • 1960 ಮೇ ತಿಂಗಳಲ್ಲಿ ಮೈಲಾಪುರದಲ್ಲಿ ಭರತನಾಟ್ಯ ಕಲಾವಿದೆಯಾಗಿ ರಂಗ ಪ್ರವೇಶ.
  • 1961ರಲ್ಲಿ ಕನ್ನಡದ ’ಶ್ರೀಶೈಲ ಮಹಾತ್ಮೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯ.
  • 1964ರಲ್ಲಿ ಬಿ.ಆರ್. ಪಂತುಲು ಅವರ ‘ಚಿನ್ನದ ಗೊಂಬೆ’ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಜೊತೆ ಅಭಿನಯ.
  • 1964ರಲ್ಲಿ ವೈ.ಜಿ. ಪಾರ್ಥಸಾರಥಿ ನಾಟಕ ತಂಡದ ಮೂಲಕ, ರಂಗಭೂಮಿಗೆ ಪ್ರವೇಶ.
  • 1965ರಲ್ಲಿ ವೆನ್ನಿರ ಅಡೈ ಚಿತ್ರದ ಮೂಲಕ ತಮಿಳು ಸಿನಿಮಾ ರಂಗ ಪ್ರವೇಶ. ತಮಿಳು ಸಿನಿಮಾದಲ್ಲಿ ಸ್ಕರ್ಟ್ ಧರಿಸಿ ಅಭಿನಯಿಸಿದ ಮೊದಲ ನಟಿ ಜಯಾ!
  • ಜಯಾ ಅವರು ತೆಲುಗು, ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
  • 1982ರಲ್ಲಿ ಎಐಎಡಿಎಂಕೆ ಪಕ್ಷ ಸೇರ್ಪಡೆ.
  • 1983ರಲ್ಲಿ ಪಕ್ಷದ ಪ್ರಚಾರ ವಿಭಾಗದ ಕಾರ್ಯದರ್ಶಿಯಾಗಿ ನೇಮಕ.
  • 1984ರಲ್ಲಿ ರಾಜ್ಯಸಭೆ ಪ್ರವೇಶ.
  • 1989ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು, ತಮಿಳುನಾಡು ವಿಧಾನಸಭೆ ಪ್ರವೇಶ. ವಿರೋಧ ಪಕ್ಷದ ನಾಯಕಿಯಾಗಿ ಕರ್ತವ್ಯ ನಿರ್ವಹಣೆ.
  • 1989ರ ಮಾರ್ಚ್‌ 25ರಂದು ವಿಧಾನಸಭೆಯಲ್ಲಿ ನಡೆದ ಗಲಾಟೆಯಲ್ಲಿ, ಜಯಾ ಮೇಲೆ ಹಲ್ಲೆ.
  • 1991ರಲ್ಲಿ ತಮಿಳುನಾಡಿನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
  • 1996ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಾ ನೇತೃತ್ವದ ಎಐಎಡಿಎಂಕೆ ಪಕ್ಷಕ್ಕೆ ಭಾರಿ ಸೋಲು.
  • ಕಲರ್ ಟಿ.ವಿ. ಹಗರಣದಲ್ಲಿ ಲಂಚ ಪಡೆದ ಆರೋಪದ ಅಡಿ 1996ರ ಡಿಸೆಂಬರ್‌ನಲ್ಲಿ ಜಯಲಲಿತಾ ಬಂಧನ.
  • 2000ನೇ ಇಸವಿಯಲ್ಲಿ ಈ ಆರೋಪದಿಂದ ಮುಕ್ತರಾದ ಜಯಾ.
  • ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜಯಾ ತಪ್ಪಿತಸ್ಥೆ ಎಂದು ನ್ಯಾಯಾಲಯ ಘೋಷಿಸಿದ್ದ ಕಾರಣ, 2001ರ ಚುನಾವಣೆ ಸ್ಪರ್ಧಿಸದಂತೆ ನಿರ್ಬಂಧ. ಆದರೂ ಚುನಾವಣೆ ನಂತರ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
  • ಆದರೆ, ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಘೋಷಣೆ ಆಗಿರುವಾಗ ಮುಖ್ಯಮಂತ್ರಿ ಆಗುವಂತಿಲ್ಲ ಎಂದು ನ್ಯಾಯಾಲಯ ಹೇಳಿದ ಕಾರಣ, ಅಧಿಕಾರದಿಂದ ಕೆಳಗಿಳಿದ ಜಯಾ.
  • ಕೆಲವು ಆರೋಪಗಳಿಂದ ಜಯಾ ಅವರನ್ನು ಮದ್ರಾಸ್ ಹೈಕೋರ್ಟ್ ದೋಷಮುಕ್ತಗಿಳಿಸಿದ ಕಾರಣ, 2003ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
  • 2011ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಯಾ ಅವರಿಂದ ಮೂರನೆಯ ಬಾರಿ ಅಧಿಕಾರ ಸ್ವೀಕಾರ.
  • 2014, ಸೆಪ್ಟೆಂಬರ್ 27: ಅಕ್ರಮ ಆಸ್ತಿ ಸಂಪಾದಿಸಿದ ಪ್ರಕರಣದಲ್ಲಿ ಜಯಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರಿನ ವಿಶೇಷ ನ್ಯಾಯಾಲಯ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಜಯಾ.
  • 2015 ಮೇ 11: ಈ ಪ್ರಕರಣದಲ್ಲಿ ಜಯಾ ತಪ್ಪು ಮಾಡಿಲ್ಲ ಎಂದು ಆದೇಶಿಸಿದ ಕರ್ನಾಟಕ ಹೈಕೋರ್ಟ್‌. ಮತ್ತೆ ಮುಖ್ಯಮಂತ್ರಿಯಾದ ಜಯಾ.
  • 2016ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಜಯ ಸಾಧಿಸಿದ ಜಯಾ ಪಕ್ಷ. ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ಸ್ವೀಕಾರ.[೨೧]

ನೋಡಿ ಬದಲಾಯಿಸಿ

ಮುಖ್ಯಮಂತ್ರಿಯಾಗಿ ಬದಲಾಯಿಸಿ

ಪೂರ್ವಾಧಿಕಾರಿ
ಕರುಣಾನಿಧಿ
ತಮಿಳನಾಡು ಮುಖ್ಯಮಂತ್ರಿಗಳು:ಜಯಲಲಿತಾ
ಮೊದಲ ಬಾರಿ

೧೯೯೧-೧೯೯೬
ಉತ್ತರಾಧಿಕಾರಿ
ಕರುಣಾನಿಧಿ
ಪೂರ್ವಾಧಿಕಾರಿ
ಕರುಣಾನಿಧಿ
ತಮಿಳನಾಡು ಮುಖ್ಯಮಂತ್ರಿಗಳು:ಜಯಲಲಿತಾ
ಎರಡನೇ ಬಾರಿ

೧೪ ಮೇ ೨೦೦೧-೧೬ ಸೆಪ್ಟೆಂಬರ್ ೨೦೦೧
ಉತ್ತರಾಧಿಕಾರಿ
O. ಪನ್ನೀರ್ಸೆಲ್ವಂ
ಪೂರ್ವಾಧಿಕಾರಿ
O.ಪನ್ನೀರ್ಸೆಲ್ವಂ
ತಮಿಳನಾಡು ಮುಖ್ಯಮಂತ್ರಿಗಳು:ಜಯಲಲಿತಾ
ಮೂರನೇ ಬಾರಿ

೨೦೦೨-೨೦೦೬
ಉತ್ತರಾಧಿಕಾರಿ
ಕರುಣಾನಿಧಿ
ಪೂರ್ವಾಧಿಕಾರಿ
ಜಯಲಲಿತಾ
ತಮಿಳನಾಡು ಮುಖ್ಯಮಂತ್ರಿಗಳು:ಜಯಲಲಿತಾ
ನಾಲ್ಕನೇ ಬಾರಿ

23 ಮೇ 2015= 23 ಮೇ 2016
ಉತ್ತರಾಧಿಕಾರಿ
O.ಪನ್ನೀರ್ಸೆಲ್ವಂ
ಪೂರ್ವಾಧಿಕಾರಿ
O.ಪನ್ನೀರ್ಸೆಲ್ವಂ
ತಮಿಳನಾಡು ಮುಖ್ಯಮಂತ್ರಿಗಳು:ಜಯಲಲಿತಾ
ನಾಲ್ಕನೇ ಬಾರಿ 2ನೇಸಲ

23 ಮೇ 2016 =5 ಡಿಸೆಂಬರ್ 2016
ಉತ್ತರಾಧಿಕಾರಿ
O.ಪನ್ನೀರ್ಸೆಲ್ವಂ

ಉಲ್ಲೇಖಗಳು ಬದಲಾಯಿಸಿ

  1. On 21 September 2001, a five-judge constitutional bench of the Supreme Court of India ruled in a unanimous verdict that "a person who is convicted for a criminal offence and sentenced to imprisonment for a period of not less than two years cannot be appointed the Chief Minister of a State under Article 164 (1) read with (4) and cannot continue to function as such". Thereby, the bench decided that "in the appointment of Ms. Jayalalithaa as Chief Minister there has been a clear infringement of a Constitutional provision and that a writ of quo warranto must issue". In effect her appointment as Chief Minister was declared null and invalid with retrospective effect. Therefore, technically, she was not the Chief Minister in the period between 14 May 2001 and 21 September 2001 (The Hindu — SC unseats Jayalalithaa as CM Archived 2004-11-28 ವೇಬ್ಯಾಕ್ ಮೆಷಿನ್ ನಲ್ಲಿ., Full text of the judgment from official Supreme Court site Archived 2006-06-27 ವೇಬ್ಯಾಕ್ ಮೆಷಿನ್ ನಲ್ಲಿ.).
  2. ಮೈಸೂರಿನಲ್ಲಿ ಬಾಲ್ಯ ಕಳೆದಿದ್ದ ಜಯಲಲಿತಾ;6 Dec, 2016
  3. ತಮಿಳು ನೆಲದವಳಾದ ಕನ್ನಡದ ‘ಕೋಮಲವಲ್ಲಿ’;6 Dec, 2016
  4. ಶಾಲಾ ಕಟ್ಟಡ ಧನಸಹಾಯಾರ್ಥ ನೃತ್ಯ ಮಾಡಿದ್ದ ಜಯಲಲಿತಾ;ಬಸವರಾಜ ಹವಾಲ್ದಾರ;6 Dec, 2016
  5. ಜಯಲಲಿತಾಗೆ ನಗುವನಹಳ್ಳಿ ಶಾಲಾ ವಿದ್ಯಾರ್ಥಿಗಳ; ಶ್ರದ್ಧಾಂಜಲಿ;ಪ್ರಜಾವಾಣಿ ;6 Dec, 2016
  6. ["Awards". NDTV. Retrieved10 November 2013.]
  7. ವರ್ಣರಂಜಿತ ಬದುಕು ಮುಗಿಸಿದ ‘ಅಮ್ಮ’;6 Dec, 2016
  8. ತಮಿಳುನಾಡಿನ ಕಣ್ಮಣಿ ವಿಧಿವಶ?; ಪ್ರಜಾವಾಣಿ ವಾರ್ತೆ;5 Dec, 2016
  9. extracorporeal heart assist device;TNN | Updated: Dec 5, 2016, 02.23 PM IST
  10. http://www.prajavani.net/
  11. http://vijayavani.net/
  12. ಜಯಾ ವಿಧಿವಶ: ಮೂವರು ಅಭಿಮಾನಿಗಳು ಸಾವು
  13. ಇಬ್ಬರು ಅಭಿಮಾನಿಗಳು ಸಾವು;ಪ್ರಜಾವಾಣಿ ವಾರ್ತೆ;5 Dec, 2016
  14. ತಮಿಳುನಾಡಿನ 'ಅಮ್ಮ'ನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ;ಪ್ರಜಾವಾಣಿ ವಾರ್ತೆ;6 Dec, 2016
  15. "ಜಯಾ ಯುಗಾಂತ್ಯ, ಮಣ್ಣಲ್ಲಿ ಮಣ್ಣಾದ 'ಅಮ್ಮ'; 06 Dec 2016 06:18 PM IST | Updated: 06 Dec 2016 08:00 PM". Archived from the original on 7 ಡಿಸೆಂಬರ್ 2016. Retrieved 6 ಡಿಸೆಂಬರ್ 2016.
  16. "ಅಯ್ಯಂಗಾರ್ ಜಯಾ ಪಾರ್ಥಿವ ಶರೀರ ದಹನ ಮಾಡುವ ಬದಲು ದಫನ ಮಾಡಿದ್ದು ಯಾಕೆ?". Archived from the original on 2016-12-10. Retrieved 2016-12-07.
  17. ಶಾಸ್ತ್ರೋಕ್ತವಾಗಿ ಜಯಲಲಿತಾ ಅಂತ್ಯ ಸಂಸ್ಕಾರ;13 Dec, 2016
  18. ಜಯಲಲಿತಾ ನಿಧನ ಸುದ್ದಿ ಕೇಳಿ 'ಆಘಾತ'ದಿಂದ ಮೃತಪಟ್ಟವರ ಸಂಖ್ಯೆ 280;ಪಿಟಿಐ;10 Dec, 2016
  19. 470 ಮಂದಿ ಮೃತಪಟ್ಟಿದ್ದಾರೆ
  20. "ಜನಪ್ರಿಯತೆಯ ಉತ್ತುಂಗದ ವ್ಯಕ್ತಿಕೇಂದ್ರಿತ ರಾಜಕಾರಣಕ್ಕೆ ವಿದಾಯ;7 Dec, 2016". Archived from the original on 2016-12-07. Retrieved 2016-12-07.
  21. ತಮಿಳು ನೆಲದವಳಾದ ಕನ್ನಡದ ‘ಕೋಮಲವಲ್ಲಿ’;6 Dec, 2016

External links ಬದಲಾಯಿಸಿ