ಹಮ್ ಹೇ ರಾಹಿ ಪ್ಯಾರ್ ಕೇ (ಚಲನಚಿತ್ರ)

ಹಿಂದಿ ಚಲನಚಿತ್ರ

ಹಮ್ ಹೇ ರಾಹಿ ಪ್ಯಾರ್ ಕೇ (ಅನುವಾದ: ಪ್ರೀತಿಯ ಹಾದಿಯಲ್ಲಿ ನಾವು ಪ್ರಯಾಣಿಕರು) ೧೯೯೩ರ ಒಂದು ಹಿಂದಿ ಪ್ರಣಯಭರಿತ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಮಹೇಶ್ ಭಟ್ ಈ ಚಿತ್ರದ ನಿರ್ದೇಶಕರು, ತಾಹಿರ್ ಹುಸೇನ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರಕಥೆಯನ್ನು ಆಮಿರ್ ಖಾನ್‌ ಮತ್ತು ರಾಬಿನ್ ಭಟ್ ಬರೆದಿದ್ದಾರೆ. ನದೀಮ್-ಶ್ರವಣ್ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಜೂಹಿ ಚಾವ್ಲಾ ಮತ್ತು ಆಮಿರ್ ಖಾನ್ ನಟಿಸಿದ್ದಾರೆ. ಶಾರೊಖ್ ಭರೂಚಾ ಮತ್ತು ಕುನಾಲ್ ಖೇಮು[೨] ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ ಮೇಲೆ ಈ ಚಿತ್ರವು ಜೂಹಿ ಚಾವ್ಲಾರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಚಿತ್ರವು ವಿಶೇಷ ತೀರ್ಪುಗಾರರ / ವಿಶೇಷ ಉಲ್ಲೇಖ (ಚಲನಚಿತ್ರ) ರಾಷ್ಟ್ರಪ್ರಶಸ್ತಿ, ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಗೆದ್ದಿತು. ಚಿತ್ರದ ಕಥಾವಸ್ತುವು ೧೯೫೮ರ ಚಲನಚಿತ್ರ ಹೌಸ್ ಬೋಟ್‍ನಿಂದ ಬಹಳವಾಗಿ ಸ್ಫೂರ್ತಿಪಡೆದಿದೆ.

ಹಮ್ ಹೇ ರಾಹಿ ಪ್ಯಾರ್ ಕೇ
ಭಿತ್ತಿಪತ್ರ
ನಿರ್ದೇಶನಮಹೇಶ್ ಭಟ್
ನಿರ್ಮಾಪಕತಾಹಿರ್ ಹುಸೇನ್
ಚಿತ್ರಕಥೆರಾಬಿನ್ ಭಟ್ (ಸಂಭಾಷಣೆ ಕೂಡ)
ಆಮಿರ್ ಖಾನ್
ಕಥೆರಾಬಿನ್ ಭಟ್
ಪಾತ್ರವರ್ಗಜೂಹಿ ಚಾವ್ಲಾ
ಆಮಿರ್ ಖಾನ್
ಶಾರೊಖ್ ಭರೂಚಾ
ಕುನಾಲ್ ಖೇಮೂ
ಬೇಬಿ ಅಶ್ರಫ಼ಾ
ಸಂಗೀತಹಾಡುಗಳು:
ನದೀಮ್-ಶ್ರವಣ್
ಹಿನ್ನೆಲೆ ಸಂಗೀತ:
ಶ್ಯಾಮ್ ಸುರೇಂದರ್
ಛಾಯಾಗ್ರಹಣಪ್ರವೀಣ್ ಭಟ್
ಸಂಕಲನಸಂಜಯ್ ಸಂಕ್ಲಾ
ಸ್ಟುಡಿಯೋತಾಹಿರ್ ಹುಸೇನ್ ಎಂಟರ್‌ಪ್ರೈಸಸ್
ವಿತರಕರುಟಿ. ವಿ. ಫ಼ಿಲ್ಮ್ಸ್ ಪ್ರೈ ಲಿ
ಬಿಡುಗಡೆಯಾಗಿದ್ದು
  • 23 ಜುಲೈ 1993 (1993-07-23)
ಅವಧಿ150 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಬಾಕ್ಸ್ ಆಫೀಸ್ರೂ. 97 ದಶಲಕ್ಷ[೧]

ಕಥಾವಸ್ತು ಬದಲಾಯಿಸಿ

ರಾಹುಲ್ ಮಲ್ಹೋತ್ರಾ (ಆಮಿರ್ ಖಾನ್) ಒಂದು ಉಡುಪುಗಳ ಕಂಪನಿಯ ಉಸ್ತುವಾರಿಗಾರನಾಗಿರುತ್ತಾನೆ. ಇದು ಮಿ. ಬಿಜ್ಲಾನಿಗೆ ಒಂದು ಲಕ್ಷ ಶರ್ಟುಗಳನ್ನು ಒದಗಿಸುವ ಬಾಕಿ ಉಳಿದಿರುವ ವ್ಯಾಪಾರಾದೇಶವನ್ನು ಹೊಂದಿರುತ್ತದೆ. ರಾಹುಲ್ ತನ್ನ ಮೃತ ಸೋದರಿಯ ಕಿಡಿಗೇಡಿ ಮಕ್ಕಳಾದ ಸನಿ, ಮುನ್ನಿ ಮತ್ತು ವಿಕಿಯ ಪೋಷಕನೂ ಆಗಿರುತ್ತಾನೆ. ಅವನು ಇದಕ್ಕೆ ಹೊಸಬನಾಗಿರುವುದರಿಂದ ಮಕ್ಕಳನ್ನು ನಿಯಂತ್ರಿಸುವುದು ಅವನಿಗೆ ಕಷ್ಟವೆನಿಸುತ್ತದೆ. ಮಕ್ಕಳು ತೊಂದರೆ ಉಂಟುಮಾಡಿದಾಗ, ಅವರನ್ನು ತಮ್ಮ ಕೋಣೆಯಲ್ಲಿ ಕೂಡಿಹಾಕುವ ಮೂಲಕ ರಾಹುಲ್ ಅವರನ್ನು ಶಿಕ್ಷಿಸುತ್ತಿರುತ್ತಾನೆ. ಆದರೆ, ಮಕ್ಕಳು ತಪ್ಪಿಸಿಕೊಂಡು ಪಟ್ಟಣದಲ್ಲಿನ ಜಾತ್ರೆಗೆ ಹೋಗುತ್ತಾರೆ.

ವೈಜಯಂತಿ (ಜೂಹಿ ಚಾವ್ಲಾ) ದಕ್ಷಿಣ ಭಾರತದ ಒಬ್ಬ ಉದ್ಯಮಿ ಮತ್ತು ಸಂಗೀತಪ್ರೇಮಿಯ ಲವಲವಿಕೆಯುಳ್ಳ ಮಗಳಾಗಿರುತ್ತಾಳೆ. ಅವಳ ತಂದೆ ಅವಳನ್ನು ಸ್ವಲ್ಪಮಟ್ಟಿಗೆ ವಿಲಕ್ಷಣವಾಗಿರುವ ಐಯರ್ ಕುಲದ ಸಂಗೀತದ ದಂತಕಥೆಯಾದ ನಟರಾಜನ್‍ಗೆ ಕೊಟ್ಟು ಮದುವೆ ಮಾಡಬೇಕೆಂದು ಬಯಸಿರುತ್ತಾನೆ. ವೈಜಯಂತಿ ಅವನನ್ನು ಮದುವೆಯಾಗಲು ನಿರಾಕರಿಸುತ್ತಾಳೆ; ಶಿಕ್ಷೆಯಾಗಿ, ಅವಳನ್ನೂ ಕೂಡಿಹಾಕಲಾದಾಗ ಅವಳು ತಪ್ಪಿಸಿಕೊಳ್ಳುತ್ತಾಳೆ. ಜಾತ್ರೆಯಲ್ಲಿ ಅವಳು ಆ ಮೂರು ಮಕ್ಕಳನ್ನು ಭೇಟಿಯಾಗಿ ಅವರೆಲ್ಲರೂ ಸ್ನೇಹಿತರಾಗುತ್ತಾ. ತನಗೆ ಮನೆಯಿಲ್ಲ ಎಂದು ವೈಜಯಂತಿ ವಿವರಿಸಿದಾಗ ಮಕ್ಕಳು ಅವಳನ್ನು ತಮ್ಮ ಜೊತೆ ಇರಲು ಆಹ್ವಾನಿಸುತ್ತಾರೆ.

ವೈಜಯಂತಿಯನ್ನು ರಾಹುಲ್‍ನಿಂದ ಬಚ್ಚಿಡಲು ಮಕ್ಕಳು ಬಹಳ ಪ್ರಯಾಸಪಡುತ್ತಾರೆ. ನಗೆಯುಕ್ಕಿಸುವ ಘಟನೆಗಳ ಗದ್ದಲದಲ್ಲಿ, ರಾಹುಲ್ ವೈಜಯಂತಿಯನ್ನು ಕಂಡುಹಿಡಿಯುವುದಕ್ಕೆ ಮೊದಲು ಅವರು ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತಾರೆ. ಆದರೆ ಎರಡು ರಾತ್ರಿಗಳ ನಂತರ, ವೈಜಯಂತಿ ಸಿಕ್ಕಿಬೀಳುತ್ತಾಳೆ. ಆರಂಭದಲ್ಲಿ ಕೋಪಗೊಂಡರೂ, ಮಕ್ಕಳು ಅವಳನ್ನು ಪ್ರೀತಿಸುವುದನ್ನು ನೋಡಿ ರಾಹುಲ್ ಅವಳಿಗೆ ಮಕ್ಕಳ ಪಾಲಕಿಯ ಕೆಲಸವನ್ನು ಕೊಡುತ್ತಾನೆ. ವೈಜಯಂತಿ ರಾಹುಲ್ ಮತ್ತು ಮಕ್ಕಳೊಂದಿಗೆ ಇರಲು ಆರಂಭಿಸುತ್ತಾಳೆ ಮತ್ತು ನಿಧಾನವಾಗಿ ಅವನನ್ನು ಪ್ರೀತಿಸತೊಡಗುತ್ತಾಳೆ.

ಆಗ ಅಲ್ಲಿ ರಾಹುಲ್‍ನಲ್ಲಿ ಮನಸ್ಸಿರುವ ಬಿಜ್ಲಾನಿಯ ಮಗಳು, ಪ್ರಲೋಭಕ, ಆಡಂಬರ ಸ್ವಭಾವದ ಮಾಯಾಳ ಪ್ರವೇಶವಾಗುತ್ತದೆ. ಅವಳು ರಾಹುಲ್‍ನನ್ನು ಮದುವೆಯಾಗಲು ಬಯಸುತ್ತಾಳೆ. ಅದರಿಂದ ಮಕ್ಕಳಿಗೆ ಪ್ರಯೋಜನವಾಗುವುದೆಂದು ನಿರ್ಧರಿಸಿ ರಾಹುಲ್ ಒಪ್ಪುತ್ತಾನೆ. ವೈಜಯಂತಿ ಮತ್ತು ಮಕ್ಕಳಿಗೆ ರಾಹುಲ್‍ನ ಮುಂಬರುವ ನಿಶ್ಚಿತಾರ್ಥ ಸಮಾರಂಭದ ಬಗ್ಗೆ ಗೊತ್ತಾದಾಗ, ವೈಜಯಂತಿಯ ಹೃದಯ ಒಡೆಯುತ್ತದೆ, ಮತ್ತು ಮಕ್ಕಳು ಮಾಯಾಳನ್ನು ಇಷ್ಟಪಡದಿರುವುದರಿಂದ ಅವರಿಗೆ ಬೇಸರವಾಗುತ್ತದೆ. ನಿಶ್ಚಿತಾರ್ಥದ ದಿನದಂದು, ತಾನು ರಾಹುಲ್‍ನನ್ನು ಪ್ರೀತಿಸುತ್ತೇನೆ ಮತ್ತು ಅವನನ್ನು ಮದುವೆಯಾಗಲು ಬಯಸುತ್ತೇನೆ ಎಂದು ವೈಜಯಂತಿ ಮಕ್ಕಳಿಗೆ ವಿವರಿಸಿ ಹೇಳುತ್ತಾಳೆ. ನಿಶ್ಚಿತಾರ್ಥವನ್ನು ನಿಲ್ಲಿಸಲು ಮಕ್ಕಳು ಒಂದು ಯೋಜನೆಯನ್ನು ರೂಪಿಸುತ್ತಾರೆ. ಅವರು ಒಂದು ನಾಟಕೀಯ ಕೃತ್ಯದೊಂದಿಗೆ ಪಾರ್ಟಿಗೆ ಹೇಳದೆ ಕೇಳದೆ ನುಗ್ಗುತ್ತಾರೆ. ಇದು ನಿಶ್ಚಿತಾರ್ಥವನ್ನು ಮುಂದೂಡುತ್ತದೆ ಆದರೆ ರಾಹುಲ್ ಸಿಟ್ಟಾಗುತ್ತಾನೆ. ಮನೆಗೆ ವಾಪಸಾದ ಮೇಲೆ, ಅವನು ವೈಜಯಂತಿಗೆ ಬಯ್ಯುತ್ತಾನೆ ಮತ್ತು ಅವಳು ಅವನನ್ನು ಪ್ರೀತಿಸುತ್ತಿದ್ದೇನೆ ಎಂದು ಒಪ್ಪಿಕೊಳ್ಳುತ್ತಾಳೆ ಮತ್ತು ಅವನಿಗೆ ಆಘಾತವಾಗುತ್ತದೆ.

ಮರುದಿನ ಬೆಳಿಗ್ಗೆ, ಬಿಜ್ಲಾನಿ ಮಾಯಾಳೊಂದಿಗೆ ಬಂದು ರಾಹುಲ್‍ಗೆ ಎರಡನೇ ಅವಕಾಶ ನೀಡುತ್ತಾನೆ. ರಾಹುಲ್ ಅವರ ಅಪಮಾನಗಳ ವಿರುದ್ಧ ವೈಜಯಂತಿಯನ್ನು ರಕ್ಷಿಸಿ ಆ ಮೂಲಕ ಅವಳ ಬಗ್ಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಕಿಡಿಗೇಡಿ ಮಕ್ಕಳು ಕೊಳೆತ ಮೊಟ್ಟೆಗಳು ಮತ್ತು ಟೊಮೇಟೊಗಳನ್ನು ಎಸೆದು ಬಿಜ್ಲಾನಿ ಮತ್ತು ಮಾಯಾಳನ್ನು ಮನೆಯಿಂದ ಹೊರಗೆ ಓಡಿಸುತ್ತಾರೆ. ಸೇಡಾಗಿ, ಬಿಜ್ಲಾನಿ ಮತ್ತು ಮಾಯಾ ರಾಹುಲ್‍ನ ಮನೆಯನ್ನು ಹರಾಜು ಹಾಕಲು ಯತ್ನಿಸುತ್ತಾರೆ. ಶರ್ಟ್‌ಗಳ ವ್ಯಾಪಾರಾದೇಶವನ್ನು ಇತ್ಯರ್ಥಮಾಡಲು ವೇಳೆ ಮೀರಿ ಕೆಲಸಮಾಡುವಂತೆ ರಾಹುಲ್ ಕಾರ್ಮಿಕರನ್ನು ಕೇಳಿಕೊಳ್ಳುತ್ತಾನೆ. ಬೆಂಬಲ ನೀಡಿ ಅವರು ಒಪ್ಪುತ್ತಾರೆ. ಯಶಸ್ವಿಯಾಗಿ ಎರಡು ಲಕ್ಷ ಶರ್ಟ್‌ಗಳು ತಯಾರಾಗುತ್ತವೆ ಮತ್ತು ಅವನ್ನು ಬಿಜ್ಲಾನಿಗೆ ಒಪ್ಪಿಸಲು ಟ್ರಕ್‍ಗೆ ತುಂಬಿಸಲಾಗುತ್ತದೆ. ಟ್ರಕ್ ಸಮಯಕ್ಕೆ ಸರಿಯಾಗಿ ಬರದಿರುವಂತೆ ಮಾಡಲು ಬಿಜ್ಲಾನಿ ಕೆಲವು ಕೊಲೆಗಡುಕರನ್ನು ಬಾಡಿಗೆ ಪಡೆಯುತ್ತಾನೆ. ಅವರಿಗೆ ಹಿಡಿಸದಿರುವಂತೆ, ರಾಹುಲ್ ವ್ಯಾಪಾರಾದೇಶದೊಂದಿಗೆ ಸಮಯಕ್ಕೆ ಸರಿಯಾಗಿ ಬರುತ್ತಾನೆ ಮತ್ತು ಬಿಜ್ಲಾನಿ ಹಾಗೂ ಮಾಯಾ ಬಂಧನಕ್ಕೊಳಗಾಗುತ್ತಾರೆ.

ವೈಜಯಂತಿ ಮತ್ತು ಅವಳ ಅಪ್ಪ ಮತ್ತೆ ಸೇರುತ್ತಾರೆ. ಅವಳ ಅಪ್ಪ ಅವಳು ಐಯರ್ ಕುಲದ ಹೊರಗೆ ಯಾರನ್ನೂ ಮದುವೆಯಾಗುವುದಕ್ಕೆ ಒಪ್ಪುವುದಿಲ್ಲ. ಕಾರ್ಖಾನೆಯ ಎಲ್ಲ ಕಾರ್ಮಿಕರು, ರಾಹುಲ್‍ನ ಸಹೋದ್ಯೋಗಿಗಳು ಮತ್ತು ಮಕ್ಕಳು ವೈಜಯಂತಿ ಹಾಗೂ ರಾಹುಲ್ ಮದುವೆಯಾಗುವುದಕ್ಕೆ ಅವಕಾಶ ಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಇಷ್ಟು ಹಟಮಾಡಿದ ಮೇಲೆ, ಅವನು ಒಪ್ಪಿಕೊಂಡು ರಾಹುಲ್ ಮತ್ತು ವೈಜಯಂತಿಯ ಮದುವೆಯನ್ನು ದಕ್ಷಿಣ ಭಾರತೀಯ ಶೈಲಿಯಲ್ಲಿ ಮಾಡುತ್ತಾನೆ.

ಪಾತ್ರವರ್ಗ ಬದಲಾಯಿಸಿ

  • ವೈಜಯಂತಿ ಮಲ್ಹೋತ್ರಾ ಐಯರ್ ಪಾತ್ರದಲ್ಲಿ ಜೂಹಿ ಚಾವ್ಲಾ
  • ರಾಹುಲ್ ಮಲ್ಹೋತ್ರಾ ಪಾತ್ರದಲ್ಲಿ ಆಮಿರ್ ಖಾನ್
  • ಬಿಜ್ಲಾನಿ ಪಾತ್ರದಲ್ಲಿ ದಲೀಪ್ ತಾಹಿಲ್
  • ಮಾಯಾ ಪಾತ್ರದಲ್ಲಿ ನವ್‍ನೀತ್ ನಿಶಾನ್
  • ಮಿ. ಐಯರ್ ಪಾತ್ರದಲ್ಲಿ ಕೆ.ಡಿ. ಚಂದ್ರನ್
  • ನಟರಾಜ್ ಐಯರ್ ಪಾತ್ರದಲ್ಲಿ ವೀರೂ ಕೃಷ್ಣನ್
  • ಅಡ್ವೊಕೇಟ್ ಹೋಮಿ ವಾಡಿಯಾ ಪಾತ್ರದಲ್ಲಿ ಟಿಕು ತಲ್ಸಾನಿಯ
  • ಭಗವತಿ ಪ್ರಸಾದ್ ಮಿಶ್ರಾ "ಮಿಶ್ರಾಜಿ" ಪಾತ್ರದಲ್ಲಿ ಮುಶ್ತಾಕ್ ಖಾನ್
  • ಛೋಟ್ಯಾ ಕಳ್ಳನ ಪಾತ್ರದಲ್ಲಿ ಜಾವೇದ್ ಖಾನ್
  • ಮುನ್ನಿ ಪಾತ್ರದಲ್ಲಿ ಬೇಬಿ ಅಶ್ರಫ಼ಾ
  • ವಿಕಿ ಪಾತ್ರದಲ್ಲಿ ಶಾರೋಖ್ ಭರೂಚಾ
  • ಸನಿ ಪಾತ್ರದಲ್ಲಿ ಕುನಾಲ್ ಖೇಮೂ

ಧ್ವನಿವಾಹಿನಿ ಬದಲಾಯಿಸಿ

ಚಿತ್ರದ ಧ್ವನಿವಾಹಿನಿಯನ್ನು ಸಂಗೀತ ಜೋಡಿಗಳಾದ ನದೀಮ್ ಶ್ರವಣ್ ಸಂಯೋಜಿಸಿದರು. ಹಾಡುಗಳ ಸಾಹಿತ್ಯವನ್ನು ಸಮೀರ್ ಬರೆದರು. 'ಘೂಂಘಟ್ ಕೀ ಆಡ್ ಸೇ', 'ವೊ ಮೇರಿ ನೀಂದ್ ಮೇರಾ ಚೇನ್' ಮತ್ತು 'ಬಂಬಯಿ ಸೆ ಗಯಿ ಪಟ್ನಾ'ದಂತಹ ಹಾಡುಗಳು ಬಹಳ ಜನಪ್ರಿಯವಾದವು. 'ಘೂಂಘಟ್ ಕೀ ಆಡ್ ಸೇ' ಹಾಡಿಗಾಗಿ ಅಲ್ಕಾ ಯಾಜ್ಞಿಕ್ ರಾಷ್ಟ್ರಪ್ರಶಸ್ತಿಯನ್ನು ಗೆದ್ದರು.

ಸಂ ಶೀರ್ಷಿಕೆ ಗಾಯಕ(ರು) ಕಾಲಾವಧಿ
1 "ಘೂಂಘಟ್ ಕೀ ಆಡ್ ಸೆ ದಿಲ್ಬರ್ ಕಾ" ಕುಮಾರ್ ಸಾನು, ಅಲ್ಕಾ ಯಾಗ್ನಿಕ್ 06:17
2 "ಮುಝಸೆ ಮೊಹಬ್ಬತ್ ಕಾ ಇಜ಼ಹಾರ್" ಕುಮಾರ್ ಸಾನು, ಅಲ್ಕಾ ಯಾಗ್ನಿಕ್ 05:07
3 "ಯ್ಞೂಹಿ ಕಟ್ ಜಾಯೇಗಾ ಸಫ಼ರ್ ಸಾಥ್" ಕುಮಾರ್ ಸಾನು, ಅಲ್ಕಾ ಯಾಗ್ನಿಕ್ 07:40
4 "ವೋ ಮೇರಿ ನೀಂದ್ ಮೇರಾ ಚೇನ್ ಮುಝೆ" ಸಾಧನ ಸರ್ಗಮ್ 04:48
5 "ಬಂಬಯಿ ಸೆ ಗಯಿ ಪೂನಾ" ಅಲ್ಕಾ ಯಾಗ್ನಿಕ್ 04:23
6 "ಚಿಕನಿ ಸೂರತ್ ತೂ ಕಹ್ಞಾ ಥಾ" ಕುಮಾರ್ ಸಾನು 04:24

ಕ್ಷುದ್ರವಿಷಯಗಳು ಬದಲಾಯಿಸಿ

  • ಕಥೆ ಮತ್ತು ಚಿತ್ರಕಥೆಗೆ ರಾಬಿನ್ ಭಟ್ ಹಾಗೂ ಆಮಿರ್ ಖಾನ್ ಇಬ್ಬರ ಕೊಡುಗೆಯನ್ನೂ ಗುರುತಿಸಲಾಗಿದೆ. ಇದು ಮಕ್ಕಳಿಗೆ ಪ್ರಾಧಾನ್ಯ ಕೊಟ್ಟ ಆಮಿರ್‌ರ ಮೊದಲ ಚಿತ್ರವಾಗಿತ್ತು. ಆದರೆ ಇದು ಕುಟುಂಬ ನಾಟಕವಾಗಿತ್ತು, ಮಕ್ಕಳ ಚಿತ್ರವಲ್ಲ. ನಂತರ ಆಮಿರ್ ಮಕ್ಕಳು ಮುಖ್ಯ ಪಾತ್ರಗಳಲ್ಲಿರುವ ಚಿತ್ರಗಳನ್ನು ನಿರ್ಮಿಸಿದರು, ಉದಾ. ತಾರೆ ಜ಼ಮೀನ್ ಪರ್ ಮತ್ತು ಸೀಕ್ರೆಟ್ ಸೂಪರ್‌ಸ್ಟಾರ್.
  • ಹಮ್ ಹೇ ರಾಹಿ ಪ್ಯಾರ್ ಕೇ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗುವುದರ ಜೊತೆಗೆ, ಗೃಹ ವೀಡಿಯೊ ಮಾರಾಟದಲ್ಲೂ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು.

ಬಾಕ್ಸ್ ಆಫ಼ಿಸ್ ಬದಲಾಯಿಸಿ

ಹಮ್ ಹೇ ರಾಹಿ ಪ್ಯಾರ್ ಕೇ ಬಾಕ್ಸ್ ಆಫ಼ಿಸ್‍ನಲ್ಲಿ 'ಸೂಪರ್‌ಹಿಟ್' ಆಯಿತು. ಇದು ೧೯೯೩ರ ಅತಿ ದೊಡ್ಡ ಹಿಟ್‌ಗಳಲ್ಲಿ ಒಂದೆನಿಸಿಕೊಂಡಿತು.[೩] ಜೂಹಿ ಚಾವ್ಲಾ ಮತ್ತು ಆಮಿರ್ ಖಾನ್‍ರ ಅಭಿನಯಗಳನ್ನು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಮೆಚ್ಚಲಾಯಿತು. ಜೂಹಿ ಚಾವ್ಲಾ ೧೯೯೩ರ ಬಾಕ್ಸ್ ಆಫ಼ಿಸ್ ರಾಣಿಯಾದರು.

ಪ್ರಶಸ್ತಿಗಳು ಬದಲಾಯಿಸಿ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ಬದಲಾಯಿಸಿ

೩೯ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು

ಗೆಲುವುಗಳು

  • ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ - ತಾಹಿರ್ ಹುಸೇನ್
  • ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ - ಜೂಹಿ ಚಾವ್ಲಾ
  • ಫಿಲ್ಮ್‌ಫೇರ್ ಅತ್ಯುತ್ತಮ ಗೀತಸಾಹಿತಿ ಪ್ರಶಸ್ತಿ - ಸಮೀರ್ ಘೂಂಘಟ್ ಕೀ ಆಡ್ ಸೇ ಹಾಡಿಗಾಗಿ
  • ರಾಷ್ಟ್ರೀಯ ಚಲನಚಿತ್ರ ವಿಶೇಷ ತೀರ್ಪುಗಾರರ ಪ್ರಶಸ್ತಿ - ಮಹೇಶ್ ಭಟ್
  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಹಿನ್ನೆಲೆ ಗಾಯಕಿ - ಅಲ್ಕಾ ಯಾಗ್ನಿಕ್ "ಘೂಂಘಟ್ ಕೀ ಆಡ್ ಸೇ" ಹಾಡಿಗಾಗಿ

ನಾಮನಿರ್ದೇಶನಗಳು

  • ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ - ಮಹೇಶ್ ಭಟ್
  • ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ - ಆಮಿರ್ ಖಾನ್
  • ಫಿಲ್ಮ್‌ಫೇರ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ - ನದೀಮ್ ಶ್ರವಣ್
  • ಫಿಲ್ಮ್‌ಫೇರ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ - ಅಲ್ಕಾ ಯಾಗ್ನಿಕ್ ಹಮ್ ಹೇ ರಾಹಿ ಪ್ಯಾರ್ ಕೇ ಹಾಡಿಗಾಗಿ

ಉಲ್ಲೇಖಗಳು ಬದಲಾಯಿಸಿ

  1. "Box Office 1993". Box Office India. 10 April 2008. Archived from the original on 10 ಏಪ್ರಿಲ್ 2008. Retrieved 9 ಆಗಸ್ಟ್ 2021.
  2. "24 years of Hum Hain Rahi Pyar Ke: Kunal Kemmu recalls being bribed by Mahesh Bhatt". Hindustan Times (in ಇಂಗ್ಲಿಷ್). 2017-07-23. Retrieved 2019-03-02.
  3. http://www.koimoi.com/box-office-filmometer/aamir-khan/

ಹೊರಗಿನ ಕೊಂಡಿಗಳು ಬದಲಾಯಿಸಿ