ಐತಿಹಾಸಿಕ ಪ್ರಸಿದ್ಧಿಯ ಈ ಊರನ್ನು ಪ್ರವೇಶಿಸುವಾಗ ದೂರದಿಂದಲೇ ಕಾಣುವ ಸುಂದರವಾದ ಪುರಾತನ ದೇವಾಲಯಗಳು ಮತ್ತು ಎತ್ತರವಾದ ಹುಡೆ ನಿಮ್ಮನ್ನು ಆಕರ್ಷಿಸುತ್ತವೆ. ಬನ್ನಿ, ನೋಡಿ ಸಂತೋಷಪಡಿ. ೧೧ನೇಯ ಶತಮಾನದಲ್ಲಿ ಗದಗ ಜಿಲ್ಹೆ ಸೂಡಿಯು ಕಲ್ಯಾಣ ಚಾಲುಕ್ಯ ಅರಸರ ಮಗಳಾದ ಅಪ್ರತಿಮ ಮಹಿಳೆ ಅಕ್ಕಾದೇವಿಯ ಆಡಳಿತ ಕಾಲದಲ್ಲಿ ಶಿಲ್ಪ ಕಲೆಯ ವೈಭವಕ್ಕೆ ಬಹಳ ಪ್ರಶಿದ್ಧಿ ಪಡೆದಿತ್ತೆಂದು ಮತ್ತು ಇಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಶಿಲ್ಪಕಲೆ,ಲಲಿತಕಲೆ, ಆಚಾರಸಂಹಿತೆ,ನಾಟ್ಯಶಾಸ್ತ್ರ, ಭಾಷಾ ಅಧ್ಯಯನ, ಕಲಿಸಲಾಗುತ್ತಿತ್ತೆಂದು ಪ್ರಾಚ್ಯ ವಸ್ತು ಇಲಾಖೆಯವರಿಂದ ೧೯೮೯ರಲ್ಲಿ ಇಲ್ಲಿಯ ಅನೇಕ ಶಿಲಾ ಲಿಪಿಗಳಿಂದ ಕಂಡುಬಂದಿದೆ. ಶ್ರೀ ಸತ್ಯನಾರಾಯಣರಾವ್ ಮತ್ತು ಶ್ರೀ ಎಸ್. ಕೆ. ವಾಸುದೇವರಾವ್ ಅವರ ಯೋಜನೆಯಂತೆ ಈ ಸ್ಮಾರಕಗಳ ಅಭಿವೃದ್ಧಿ ಕಾರ್ಯ ಯಶಸ್ವಿಯಾಗಿದೆ.

ನಾಗೇಶ್ವರ ದೇವಸ್ಥಾನ (ಜೋಡು ಕಳಸದ ಗುಡಿ)

ಇಲಾಖೆಯವರು ಬಹಳ ಸಿಥಿಲಗೊಂಡ ಆ ಪುರಾತನ ಕಟ್ಟಡಗಳ ಜೀರ್ಣೋದ್ಧಾರಕ್ಕೆ ೧೯೯೨ರಲ್ಲಿ ಐದಾರು ಲಕ್ಷ ರೂಪಾಯಿ ವ್ಯಯಿಸಿದ್ದರೂ ಇನ್ನೂ ಮಾಡಬೇಕಾದ ಕೆಲಸ ಬಹಳವಿದೆ. ಈ ಹಂತದಲ್ಲಿ ನಾಗೇಶ್ವರ ದೇವಸ್ಥಾನ (ಜೋಡು ಕಳಸದ ಗುಡಿ), ಈಶ್ವರ, ನಂದಿಮಂಟಪ, ಹನ್ನೊಂದು ಅಡಿ ಎತ್ತರದ ಬೃಹತ್ ಗಣಪತಿಯ ದೇವಾಲಯ ಮತ್ತು ಎಂಬತ್ತು ಅಡಿ ಸುತ್ತಳತೆಯ ಐವತ್ತು ಅಡಿ ಆಳದ ಬೃಹತ್ ನಾಗಕುoಡ ಭಾವಿ (ರಸ್ತ ಭಾವಿ) ಜೀರ್ಣೋದ್ಧಾರಗೊಂಡು ನೋಡುವಂತಾಗಿವೆ. ಜೋಡು ಕಳಸದ ದೇವಸ್ಥಾನವನ್ನು ಬಿಚ್ಚಿ ಪುನರ್ ಜೋಡಿಸಲಾಗಿದೆ.

ಅಚಲೇಶ್ವರ (ಮಲ್ಲಿಕಾರ್ಜುನ) ದೇವಾಲಯ

ಈ ಗುಡಿಯು ಮೊದಲು ಗಿಡಮರ, ಮುಳ್ಳುಕಂಟಿಗಳಲ್ಲಿ ಮುಚ್ಚಿ ಹೋಗಿತ್ತು. ಈಗ ಗುಡಿಯ ಹತ್ತಿರ ಶ್ರೀ ಗುರು ಮಹಾಂತೇಶ ಪ್ರೌಢಶಾಲೆಯ ಕ್ರೀಡಾಂಗಣ ಮತ್ತು ಕಟ್ಟಡಗಳ ವಿದ್ಯಾಕೇಂದ್ರವು ರಾಜ್ಯ ಹೆದ್ದಾರಿಯಲ್ಲಿಯೇ ಇರುವದರಿಂದ ಗುಡಿಯು ಕಾಣುವಂತಾಗಿದೆ. ಈ ದೇವಾಲಯವು ಎರಡು ಗೋಪುರಗಳನ್ನು ಹೊಂದಿದ್ದು ಅವು ಪೂರ್ವ ಮತ್ತು ಪಶ್ಚಿಮ ಮುಖವಾಗಿವೆ. ಗುಡಿಯು ಏಕ ನವರಂಗ, ಮುಖ ಮಂಟಪ, ಎರಡು ಗರ್ಭಗೃಹ ಒಳಗೊಂಡು ದ್ವಿಕೂಟಾಚಲ ಮಾದರಿಯಲ್ಲಿದೆ. ಪೂರ್ವಾಭಿಮುಖಿ ಗರ್ಭಗುಡಿಯಲ್ಲಿ ಅಪೂರ್ವ ಕೆತ್ತನೆಯ ಈಶ್ವರನ ಉಬ್ಬು ಶಿಲ್ಪವಿದೆ. ಸೂರ್ಯನ ಉಬ್ಬು ವಿಗ್ರಹ ಲಲಾಟಬಿಂದುವಿನಲ್ಲಿ ಇದ್ದು ಇದು ಇಲ್ಲಿಯ ಇನ್ನೊಂದು ವೈಶಿಷ್ಟ್ಯವಾಗಿದೆ. ಹನ್ನೆರಡು ಕಂಬಗಳನ್ನು ಹೊಂದಿ ವೃತ್ತಾಕಾರವಾಗಿರುವ ನವರಂಗದಲ್ಲಿ ಸುಂದರ ನಂದಿಯ ವಿಗ್ರಹವಿದೆ. ಇಡೀ ದೇವಾಲಯದ ಒಳಗೆ ಮತ್ತು ಹೊರಗೆ ಮತ್ತು ನಾಗಕುಂಡ ಭಾವಿಯ ಒಳಗೋಡೆಯಲ್ಲಿ ಉಬ್ಬುಕಂಬದ ಗೋಪುರ ಮಾದರಿಯ ಕೆತ್ತನೆ ಸಹ ಬೆರಗುಗೊಳಿಸುವಂತೆ ಇದೆ. ಭಾವಿಯ ತಳಭಾಗದಲ್ಲಿ ಸುತ್ತಲೂ ಮೆಟ್ಟಲುಗಳಿದ್ದು ನಡುವೆ ದ್ವಾರಮಂಟಪವಿದೆ. ಈ ಎಲ್ಲ ಶಿಲ್ಪ ಕಲಾವೈಭವ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಂತೆ ಇವೆ. ಈ ಪುಷ್ಕರಣಿ ಕಲ್ಯಾಣ ಚಾಲುಕ್ಯರ ಅತಿ ವೈಭವದ ಕೊಳ ಎಂಬುದಕ್ಕೆ ಐತಿಹಾಸಿಕ ದಾಖಲೆ ಇದೆ.

ನಾಗಕುoಡ ಭಾವಿ

ಶಿಲಾಮಂಟಪದಲ್ಲಿ ಇರುವ, ಸೂಕ್ಷ್ಮ ಕೆತ್ತನೆಯ ಗೆಜ್ಜೆ ಸರಗಳಿಂದ ಅಲಂಕರಿಸಿದ ಬೃಹದಾಕಾರದ ನಂದಿಯ ವಿಗ್ರಹ ಮತ್ತು ವೇದಿಕೆ, ಗುಡಿಯಲ್ಲಿರುವ ನಂದಿ ವಿಗ್ರಹಗಳನ್ನು ನುಣುಪಾದ ಕಪ್ಪು ಏಕಶಿಲಾ ಬಂಡೆಗಳಲ್ಲಿಯೇ ನಿರ್ಮಿಸಲಾಗಿದೆ. ಎಲ್ಲ ಕಡೆಗೂ ಸೂಕ್ಷ್ಮ ಕುಸುರಿ ಕೆಲಸವನ್ನು ಕಾಣಬಹುದು. ಮಹಾಸಾಮಂತಾಧಿಪತಿ ನಾಗದೇವನು ಹನ್ನೊಂದನೆ ಶತಮಾನದಲ್ಲಿ ಕಟ್ಟಿಸಿದನು. ಊರೊಳಗಿರುವ ಮಲ್ಲಿಕಾರ್ಜುನ (ಶಾಸನಗಳಲ್ಲಿ ಅಚಲೇಶ್ವರ ಗುಡಿ) ದೇವಾಲಯ ಜೀರ್ಣೋದ್ಧಾರ ಆಗಬೇಕಾಗಿದೆ. ಈ ಗುಡಿಯಲ್ಲಿ ಗರ್ಭಗುಡಿಯ ಎಡ ಬಲಗಳಲ್ಲಿ ಸುಂದರ ಶಿಲ್ಪಕಲೆಯ ಶಿವ ಪಾರ್ವತಿ ವಿಗ್ರಹ ಮತ್ತು ಅನಂತಶಯನ ವಿಗ್ರಹಗಳು ಏಕಶಿಲೆಯಲ್ಲಿವೆ. ಈ ಶಿಲ್ಪಕಲೆಗಳು ದ್ವಿಕೂಟಾಚಲ ಮಾದರಿಯಲ್ಲಿವೆ. ಈ ದೇವಸ್ಥಾನದ ಹತ್ತಿರ ಶ್ರೀ ಮೈಸೂರು ಮಠದ ಪುರಾತನ ಕಟ್ಟಡ ಮತ್ತು ಶಿಕ್ಷಣ ಸಂಸ್ಥೆಯ ಹೊಸ ಕಟ್ಟಡಗಳಿದ್ದು ಐವತ್ತು ವರ್ಷಗಳ ಹಿಂದೆ ಈ ಗ್ರಾಮೀಣ ಭಾಗದ ಶಿಕ್ಷಣ ಕ್ರಾಂತಿಗಾಗಿ ಬಡಮಕ್ಕಳಿಗಾಗಿ ಪ್ರಸಾದ ನಿಲಯವನ್ನೂ, ಶಿಕ್ಷಣ ಸಂಸ್ಥೆಗಳನ್ನೂ ಪ್ರಾರಂಭಿಸಿದ ಪೂಜ್ಯ ಜಗದ್ಗುರು ಗುರುಮಹಾಂತೇಶ್ವರ ಸ್ವಾಮಿಗಳ ಗದ್ದಿಗೆಯ ಮಂದಿರವು ನಿರ್ಮಾಣಗೂ೦ಡಿದೆ. ಈ ಸಂಸ್ಥೆಯ ಇಂದಿನ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ವಿಜಯ ಮಹಾಂತ ಶಿವಯೋಗಿಗಳು ಹೊಸ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿರುವರು.

ನಂದಿಮಂಟಪ

ಈ ಎಲ್ಲ ದೇವಸ್ಥಾನಗಳ ಹತ್ತಿರವೇ ಹೊಸ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡಗಳು, ಶ್ರೀ ಅನ್ನದಾನೇಶ್ವರ ಕಲ್ಯಾಣಮಂಟಪ (ಸಮುದಾಯ ಭವನ)ಮತ್ತು ಚಿದಂಬರೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ಈಗ ಈ ಪುರಾತನ ಮಂದಿರಗಳ ಸುತ್ತಲೂ ಸುಂದರ ಪರಿಸರವಿದ್ದು ಪ್ರವಾಸಿಗರನ್ನು ಆಕರ್ಷಿಸುವಂತಾಗಿದೆ.

ಊರ ಮಧ್ಯದಲ್ಲಿ ದೀರ್ಘ ವ್ಯಾಸವುಳ್ಳ ವೃತ್ತಾಕಾರದ ಅತಿ ಎತ್ತರವಾದ ಒಂದು ಹುಡೆ ಇದ್ದು ಪ್ರಾಚ್ಯವಸ್ತು ಇಲಾಖೆಯವರ ಗಮನಕ್ಕೆ ಬಂದಂತೆ ಕಾಣುವದಿಲ್ಲ. ಈ ಹುಡೆಯು ಈಗ ಜೀರ್ಣಗೊಂಡಿದ್ದು ಜೀರ್ಣೋದ್ಧಾರ ಆಗಬೇಕಾದುದು ಅವಶ್ಯವಿದೆ.
ದೊಡ್ಡ ಈಶ್ವರ
ಈ ಹುಡೆಯ ಅತಿ ಎತ್ತರದಲ್ಲಿರುವ ಬಾಗಿಲಕ್ಕೆ ಹೋಗಲು ಪಾವಟಿಗೆಗಳನ್ನು ಕಟ್ಟಿಸಿ ಮೇಲೆ ಹೋದರೆ ಸುತ್ತಲಿನ ಹತ್ತಿಪ್ಪತ್ತು ಮೈಲು ದೂರದ ವರೆಗೆ ನೋಡಬಹುದು. ಹುಡೆಯ ಸಮೀಪದಲ್ಲಿ ಮಾಜಿ ದೇಸಾಯರ ಮನೆಯ ಕೆಳಗಿನ ಪುರಾತನ ನೆಲಮನೆಯನ್ನು ಕಾಣುವಂತೆ ಮಾಡಬೇಕಾಗಿದೆ. ಈ ಅಗಾಧ ಕಲಾಸಂಪತ್ತನ್ನು ಎಲ್ಲರೂ ರಕ್ಷಿಸುವದು ಮತ್ತು ಈ ಜವಾಬ್ದಾರಿಯನ್ನು ಸರಕಾರ ವಹಿಸಿಕೋಳ್ಳುವಂತೆ ಈ ಭಾಗದ ಜನತಾ ಪ್ರತಿನಿಧಿಗಳು ಪ್ರಯತ್ನಿಸುವದು ಆದ್ಯ ಕರ್ತವ್ಯವಾಗಿದೆ. ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು ಮೊದಲಾದ ಸ್ಥಳಗಳಂತೆ ಸರಕಾರದ ಟ್ಯೂರಿಸಂ ಖಾತೆಯವರು ಈ ವೈಭವದ ಪ್ರಚಾರ ಮಾಡಬೇಕು. ಈ ಕಾರ್ಯಗಳು ಬೇಗ ಈಡೇರುವಂತೆ ಸ್ಥಳೀಯ ಪಂಚಾಯತಿಯವರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು.
ಹನ್ನೊಂದು ಅಡಿ ಎತ್ತರದ ಬೃಹತ್ ಗಣಪತಿ ದೇವಾಲಯ
ಆದಷ್ಟು ಬೇಗ ರಕ್ಷಣಾ ಶಿಬ್ಬಂದಿಯನ್ನು ನಿಯಮಿಸಬೇಕಾಗಿದೆ. ಸೂಡಿಯ ಸಮೀಪದಲ್ಲಿ ಎಲ್ಲಿಯೂ ದೊರೆಯಲಾರದ ದೊಡ್ಡ ದೊಡ್ಡ ನುಣುಪಾದ ಕಪ್ಪು ಮತ್ತು ಬಿಳಿಯ ಕಲ್ಲುಗಳಿಂದ ಎಲ್ಲ ಸ್ಮಾರಕಗಳನ್ನು ನಿರ್ಮಿಸಿದ್ದು ಎಲ್ಲಿಂದ ಹೇಗೆ ತಂದರೆನ್ನುವದೇ ಅಚ್ಚರಿಯ ಸಂಗತಿಯಾಗಿದೆ. ಯಾಕಂದರೆ ಆಗಿನ ಕಾಲದಲ್ಲಿ ರಸ್ತೆ ಮತ್ತು ವಾಹನ ಸೌಕರ್ಯಗಳಿರಲಿಲ್ಲ. ಇಷ್ಟೊಂದು ಮಹಾ ಕಾರ್ಯ ಮಾಡಲು ಹತ್ತಾರು ಸಾವಿರ ಆಳುಗಳು ಹತ್ತಿಪ್ಪತ್ತು ವರ್ಷ, ಸಾವಿರಾರು ಕುಶಲ ಕಲಾವಿದರೊಂದಿಗೆ ದುಡಿದಿರಬಹುದು.
ಈಶ್ವರ
ಆ ಕಾಲದಲ್ಲಿ ನಾಣ್ಯಗಳ ಟಂಕಶಾಲೆ,ವಿದ್ಯಾಕೇಂದ್ರ ಮತ್ತು ಶಿಲ್ಪಕಲೆಗೆ ಪ್ರಶಿದ್ಧಿಪಡೆದ ಈ ಊರಿನಲ್ಲಿ (ಅ)ನಾಗರಿಕತೆಯ ಹೊಲಸಿನಲ್ಲಿ ಮುಳುಗಿದ್ದ ಕಲಾವೈಭವ ಮರುಜನ್ಮ ಪಡೆದು, ಅಲಕ್ಷಿಸಿದ ಜನರೇ "ಇಂಥ ಸಂಪತ್ತು ನಮ್ಮೂರೊಳಗಿತ್ತೇ!" ಎಂದು ಕಣ್ಣರಳಿಸಿ ನೋಡುವಂತಾಗಿದೆ. ದಿನಾಂಕ ೨೨ ಜಾನೇವರಿ ೨೦೦೭ರಂದು ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಗದಗ ಜಿಲ್ಹಾಧಿಕಾರಿಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯವರು "ಸೂಡಿ ಜಾನಪದ ಜಾತ್ರೆ"ಯನ್ನು ಭಾರಿ ವಿಜೃಂಬಣೆಯಿಂದ ಆಚರಿಸಿದರು. ಸೂಡಿಯ ಎಲ್ಲ ಪುರಾತನ ಸ್ಮಾರಕಗಳ ಕಂಪ್ಯೂಟರ್ ಮುದ್ರಿತ ದೊಡ್ಡ ಪರದೆಗಳನ್ನು ಮೆರವಣಿಗೆಯಿಂದ ಒಯ್ದು, ಜೋಡು ಕಳಸದ ಗುಡಿಯ ಹತ್ತಿರ ಶ್ರೀ ಗುರುಮಹಾಂತೇಶ ಪ್ರೌಢ ಶಾಲೆಯ ಬಯಲಿನಲ್ಲಿ ಅಂದು ಶಿಕಾರಿಪುರ, ಶಿವಮೊಗ್ಗ, ಹಿರಿಯೂರು, ಬೆಂಗಳೂರು, ಮುಳಗುಂದ ಮತ್ತು ಇನ್ನೂ ಅನೇಕ ಕಡೆಯ ಮತ್ತು ಸ್ಥಾನಿಕ ಸುಪ್ರಶಿದ್ಧ ಕಲಾವಿದರಿಂದ ನೃತ್ಯ, ಚೌಡಿಕಿ ಪದ, ಭರತನಾಟ್ಯ, ಕೋಲಾಟ, ತಮಟೆ, ವೀರಗಾಸೆ, ಯಕ್ಷಗಾನ, ಡೊಳ್ಳುಕುಣಿತ, ನಂದಿಧ್ವಜ ಮತ್ತು ಪುರುಷ ಪುರವಂತರು, ಸ್ತ್ರೀಪುರವಂತರು, ಜಾನಪದ ಗಾಯಕರು ಮತ್ತು ವಾದ್ಯ ಕಲಾವಿದರಿಂದ ಸ್ಮರಣೀಯ ಕಾರ್ಯಕ್ರಮ ನಡೆಸಿದರು. ಸೂಡಿಯ ಈ ಕಲಾವೈಭವವನ್ನು ಬೆಳಕಿಗೆ ತರುವ ಕಾರ್ಯದಲ್ಲಿ ಸ್ವಾತಂತ್ರ್ಯಯೋಧರಾದ ಶ್ರೀ ಅಬ್ಬೀಗೇರಿ ವಿರುಪಾಕ್ಷಪ್ಪನವರು ಪುರಾತತ್ವ ಇಲಾಖೆಯವರನ್ನು ಕಂಡು ಎಂಟು ಹತ್ತು ವರ್ಷ ಪತ್ರವ್ಯವಹಾರ ಮಾಡಿದರು. ಆದ್ದರಿಂದ ಅವರನ್ನು ಅದೇ ಸಭೆಯಲ್ಲಿ ಸನ್ಮಾನಿಸಿದರು. ಸೂಡಿ ಗ್ರಾಮವು ಹಿಂದೆ ಬ್ರಿಟಿಶ್ ಸರಕಾರದ ಮುಂಬಯಿ ರಾಜ್ಯದ ಧಾರವಾಡ ಜಿಲ್ಹೆಯ (ಈಗ ಗದಗ ಜಿಲ್ಹೆ) ಗಡಿಯಲ್ಲಿ ಹೈದರಾಬಾದ ರಾಜ್ಯದ ರಾಯಚೂರ ಜಿಲ್ಹೆಯ (ಈಗ ಕೊಪ್ಪಳ ಜಿಲ್ಹೆ) ಹಳ್ಳಿಗಳಿಂದ ಕೇವಲ ಒಂದೆರಡು ಕಿಲೋಮೀಟರುಗಳಿಂದ ಸುತ್ತುವರಿದ ಹಳ್ಳಕೊಳ್ಳಗಳ ನಡುವೆ ಕರ್ನಾಟಕ ರಾಜ್ಯ ನಿರ್ಮಾಣದವರೆಗೂ ದುರ್ಗಮ ಪ್ರದೇಶದಲ್ಲಿತ್ತು.
ಊರ ಮಧ್ಯದಲ್ಲಿ ವೃತ್ತಾಕಾರದ ಎತ್ತರದ ಹುಡೆ
ಇದರಿಂದಾಗಿ ಇನ್ನೂ ಅಭ್ಯಸಿಸಲು ಊರೊಳಗೆ ಅಲ್ಲಲ್ಲಿ ಇರುವ ಶಿಲಾಲೇಖನಗಳು ಪ್ರಾಚ್ಯವಸ್ತು ಸಂಶೋಧಕರ ದೃಷ್ಟಿಗೆ ಬಂದಂತಿಲ್ಲ. ಈ ಶಿಲಾಲೇಖನಗಳಿಂದ, ಇಷ್ಟೊಂದು ಮಹಾಕಾರ್ಯಕ್ಕೆ ಕಾರಣರಾದ ಇಲ್ಲಿ ಆಳಿದ ಚಾಲುಕ್ಯ ಅರಸು ಮನೆತನದ ರಾಣಿ ಅಕ್ಕಾದೇವಿಯ ಚರಿತ್ರೆ ವಿವರವಾಗಿ ತಿಳಿಯಬೇಕಾಗಿದೆ. ಸುಪ್ರಶಿದ್ಧ ಕವಿಗಳಾದ ಶ್ರೀ ಎಮ್. ಡಿ. ಗೋಗೇರಿಯವರು ತಮ್ಮ ಕವನದಲ್ಲಿ "ಇದೋ ನೋಡಿ ನೋಡಿ ಇದುವೆ ನಮ್ಮ ಸೂಡಿ, ಅಕ್ಕಾದೇವಿ ಆಳಿದಂಥ ಭವ್ಯವಾದ ನಾಡಿದು" ಎಂದು ಹಾಡಿದ್ದಾರೆ. ಊರ ಮಧ್ಯದಲ್ಲಿ ಪ್ರತಿ ತಿಂಗಳ ಶಿವಾನುಭವ ಸಭೆ ನಡೆಸುತ್ತಿರುವ ಜುಕ್ತಿಹಿರೇಮಠ ಮತ್ತು ಅನೇಕ ದೇವಾಲಯಗಳಿವೆ. ಮತ್ತು ನೂರಾರು ವರ್ಷಗಳ ಹಿಂದಿನ ಭವ್ಯ ಮಸೀದೆ ಇದೆ. ಸೂಡಿ ಗ್ರಾಮವು ಹುಬ್ಬಳ್ಳಿ ರಾಯಚೂರು ಹೆದ್ದಾರಿಯಲ್ಲಿ ರೋಣದಿಂದ ೧೫ ಕಿ.ಮೀ.; ಸೂಡಿಯಿಂದ ಗಜೇಂದ್ರಗಡ ಹತ್ತು ಕಿ.ಮಿ. ಇದೆ. ಅಲ್ಲಿ ಈಗ ಬೆಂಗಳೂರು, ಹೈದರಾಬಾದ, ಮುಂಬಯಿ, ಬಸವಕಲ್ಯಾಣ ಮೊದಲಾದ ಸ್ಥಳಗಳಿಂದ ನೂರಾರು ಬಸ್ ಗಳು ಬರುತ್ತವೆ. ಈಗ ಶಿಲ್ಪಕಲಾ ಸಂಪತ್ತು ಬೆಳಕಿಗೆ ಬರುವಂತಾಗಿದೆ.
ಸೂಡಿ ಗ್ರಾಮ ಬಹಳ ವರ್ಷಗಳಿಂದ ಸುತ್ತಮುತ್ತಲ್ಲಿನ ಪ್ರದೇಶಕ್ಕೆ ಶಿಕ್ಷಣ ಕೇಂದ್ರವಾಗಿದೆ. ಇದಕ್ಕೆ ಸೂಡಿಯ ಪ್ರಮುಖ ಜನರು ಧನಸಹಾಯ ಮಾಡಿದ್ದಾರೆ. ಇವರಲ್ಲಿ ಮುಖ್ಯವಾಗಿ ಪೂಜ್ಯ ಶ್ರೀ ಗುರು ಮಹಾoತೇಶ ಸ್ವಾಮಿಗಳು ಶಿಕ್ಷಣ ಸಮಿತಿ ಸ್ಥಾಪಿಸಿದರು. ಪೂಜ್ಯ ಶ್ರೀ ವಿಜಯ ಮಹಾoತೇಶ ಸ್ವಾಮಿಗಳು ಶಿಕ್ಷಣ ಸಮಿತಿಯನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಶ್ರೀ. ಅಂದಾನಪ್ಪ ವೀ. ಕoಬಳ್ಯಾಳ ಗುರು ಮಹಾoತೇಶ ಶಿಕ್ಷಣ ಸಮಿತಿಗೆ ಹಾಗು ಪ್ರಾಥಮಿಕ ಶಾಲೆಗೆ " ಶ್ರೀ. ವೀರಭದ್ರಪ್ಪ. ಅ೦. ಕಂಬಳ್ಯಾಳ ಸ್ಮಾರಕ" ಕ್ರೀಡಾಗಣಕ್ಕೆ ಧನಸಹಾಯ ಮಾಡಿದ್ದಾರೆ.
ಈಗ ಅಮೇರಿಕೆಯಲ್ಲಿ ಸಾಫ್ಟವೆಯರ್ ಎಂಜಿನಿಯರ್ ಆಗಿರುವ ಶ್ರೀ ಚನ್ನಬಸವಣ್ಣ. ತಮ್ಮ ತಂದೆ ಶ್ರೀ ಅಂದಾನಪ್ಪ ಕoಬಳ್ಯಾಳ ಅವರಿಗೆ ಕಾಂಪ್ಯೂಟರ್ ಬರವಣಿಗೆಯಲ್ಲಿ ಸಹಾಯ ಮಾಡಿ, ಸೂಡಿಯ ಮಾಹಿತಿಯನ್ನು ವಿಕಿಪೀಡಿಯ ವೆಬ್ ಸೈಟಿಗೆ ಕೊಟ್ಟು, ತಮ್ಮ ಮಾತೃಭೂಮಿಯ ಸೇವೆಯ ಸ್ತುತ್ಯ ಕಾರ್ಯ ಮಾಡಿದ್ದಾರೆ. ಈ ಹಿಂದೆ ಸೂಡಿ ಗ್ರಾಮಕ್ಕೆ ಅನೇಕ ಲೇಖಕರು ಬಂದು ದೇವಸ್ಥಾನಗಳನ್ನು ಸಂದರ್ಶಿಸಿ ಕನ್ನಡ ಮತ್ತು ಇಂಗ್ಲೀಷ ಪತ್ರಿಕೆಗಳಲ್ಲಿ ಲೇಖನ ಬರೆದಿದ್ದಾರೆ. ಅವುಗಳಿಂದ ಬಹಳ ಸಹಾಯವಾಗಿದ್ದು ಅವರೆಲ್ಲರಿಗೂ ಕೃತಜ್ಞತೆಗಳು.

ಇವನ್ನೂ ನೋಡಿ ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ಸೂಡಿ&oldid=640206" ಇಂದ ಪಡೆಯಲ್ಪಟ್ಟಿದೆ