ಬಿಂದೇಶ್ವರ್ ಪಾಠಕ್

ಬಿಂದೇಶ್ವರ್ ಪಾಠಕ್ (ಏಪ್ರಿಲ್ ೨, ೧೯೩೪ - ೧೫ ಆಗಸ್ಟ್ ೨೦೨೩) ಸುಲಭ್ ಶೌಚಾಲಯ ನಿರ್ಮಾಣದ ಮೂಲಕ ಭಾರತೀಯ ಬದುಕಿನಲ್ಲಿ ಒಂದು ವಿಶಿಷ್ಟ ಕ್ರಾಂತಿಯನ್ನು ತಂದವರು.

ಬಿಂದೇಶ್ವರ್ ಪಾಠಕ್
ಜನನಏಪ್ರಿಲ್ ೨, ೧೯೪೩
ಬಿಹಾರದ ರಾಂಪುರ
ರಾಷ್ಟ್ರೀಯತೆಭಾರತೀಯರು
ಇದಕ್ಕೆ ಖ್ಯಾತರುಸುಲಭ್ ಇಂಟರ್ ನ್ಯಾಷನಲ್ ಸಂಸ್ಥಾಪಕರು

ಜೀವನ ಬದಲಾಯಿಸಿ

ಬಿಂದೇಶ್ವರ್ ಪಾಠಕ್ ಏಪ್ರಿಲ್ ೨, ೧೯೪೩ರಲ್ಲಿ ಬಿಹಾರದ ರಾಂಪುರದಲ್ಲಿ ಜನಿಸಿದವರು. ಅನುಕೂಲಸ್ಥ ಕುಟುಂಬದಲ್ಲಿದ್ದ ಅವರಿಗೆ ಎಲ್ಲವೂ ಇತ್ತು. ಆದರೆ ಅವರಿದ್ದ ಗ್ರಾಮದಲ್ಲಿ ಪಾಯಖಾನೆಗಳೆಂಬುದು ಹಳ್ಳದ ಗುಂಡಿಗಳಂತ ವ್ಯವಸ್ಥೆಗಳದ್ದು. ಈ ಗುಂಡಿಗಳು ಸಾರ್ವಜನಿಕವಾಗಿದ್ದುದರಿಂದ ಸ್ತ್ರೀಯರಂತೂ ಬೆಳಕು ಹರಿಯುವ ಮೊದಲೇ ತಮ್ಮ ಬಹಿರ್ದೆಶೆಯ ಕರ್ಮಗಳನ್ನು ಮುಗಿಸಿಕೊಳ್ಳುವಂತಹ ಅನಿವಾರ್ಯಗಳು ಸೃಷ್ಟಿಯಾಗಿದ್ದವು. ಬಾಲಕನಾದ ಬಿಂದೇಶ್ವರ ಬಹಿರ್ದೆಶೆಗೆ ಹೊರಡುವಾಗ ಅವರ ತಾಯಿಮಗು, ವಿಕ್ಸ್ ಹಚ್ಚಿಕೊಂಡು ಹೋಗು ಇಲ್ಲದಿದ್ದರೆ ವಾಸನೆ ತಡೆಯಲಿಕ್ಕಾಗುವುದಿಲ್ಲ” ಎನ್ನುತ್ತಿದ್ದರು. ಅಂದಿನ ದಿನಗಳಲ್ಲಿ ಈ ಪಾಯಖಾನೆಯ ಗುಂಡಿಗಳನ್ನು ಬಳಿಯಲಿಕ್ಕೆ ಸಾಮಾನ್ಯವಾಗಿ ಮನೆಗಳಲ್ಲಿದ್ದ ಸೊಸೆಯಂದಿರನ್ನು ಉಪಯೋಗಿಸುತ್ತಿದ್ದರು. ಇಲ್ಲವೇ ಸ್ವಲ್ಪ ಹಣವಿರುವವರು ಈ ಕೆಲಸವನ್ನು ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದ ಆಳುಗಳಿಂದ ಮಾಡಿಸುತ್ತಿದ್ದರು. ಈ ಆಳುಗಳನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತಿತ್ತು.

ಒಮ್ಮೆ ಬಾಲಕನಾಗಿದ್ದ ಬಿಂದೇಶ್ವರ್ ಪಾಠಕ್ ಇಂಥಹ ಕಾಯಕ ಮಾಡುತ್ತಿದ್ದ ಆಳೊಬ್ಬನನ್ನು ಮುಟ್ಟಿಬಿಟ್ಟರು. ಅವನನ್ನು ಮುಟ್ಟಿದ ಮೈಲಿಗೆಯನ್ನು ನಿವಾರಿಸಲಿಕ್ಕಾಗಿ ಬಿಂದೇಶ್ವರ ಪಾತಕ್ಕರಿಗೆ ಹಸುವಿನ ಸಗಣಿಯನ್ನು ತಿನ್ನಿಸಲಾಯಿತಂತೆ. ಇದೆಲ್ಲವೂ ಬಾಲಕರಗಿದ್ದ ಬಿಂದೇಶ್ವರ ಪಾಠಕ್ ಅವರ ಮನಸ್ಸಿನಲ್ಲಿ ನಿರಂತರವಾಗಿತ್ತು.

ಓದಿನಲ್ಲಿ ಬುದ್ದಿವಂತರಾಗಿದ್ದ ಬಿಂದೇಶ್ವರ ಪಾಠಕ್ ಅವರಿಗೆ ಮನೆಯಲ್ಲೇನೂ ಹಣಕಾಸಿನ ತೊಂದರೆ ಇರಲಿಲ್ಲ. ಅವರ ಓದಿಗೆ ನೌಕರಿ ದೊರಕಿದರೂ ಮನಸ್ಸು ಅತೃಪ್ತವಾಗಿತ್ತು. ಅವರ ಮನಸ್ಸು ಸಮಾಜದಲ್ಲಿ ಕಂಡ ಮೇಲ್ಕಂಡ ವೈಪರೀತ್ಯಗಳ ಕುರಿತಾಗಿ ನಿರಂತರವಾಗಿ ಮರುಗುತ್ತಿತ್ತು. ತನಗೆ ಬಂದ ಯಾವುದೇ ವಿರೋಧಗಳನ್ನೂ ಲೆಖ್ಖಿಸದೆ “ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಕಾಣುವವರೆಗೂ ನಾನು ವಿಶ್ರಮಿಸುವುದಿಲ್ಲ” ಎಂದು ಅಹರ್ನಿಶಿ ದುಡಿಯತೊಡಗಿದರು.

ಕಂಡು ಹಿಡಿದ ಪರಿಹಾರ ಬದಲಾಯಿಸಿ

ಶ್ರದ್ಧೆ ಮತ್ತು ಹೃದಯಂತರಾಳದ ಸಂವೇದನೆ ಉಳ್ಳವರುಗಳಿಗೆ ಎಂಥದ್ದೇ ಸಮಸ್ಯೆಗಾಗಲಿ ಅತ್ಯುತ್ತಮ ಪರಿಹಾರಗಳೇ ದೊರಕುತ್ತವೆ. ಬಿಂದೇಶ್ವರ್ ಪಾಠಕ್ ಅವರಿಗೂ ಇಂತಹ ಪರಿಹಾರ ಕಾಣಿಸಿತು. ಪಾಠಕ್ಕರು ಕಂಡು ಹಿಡಿದ ಪರಿಹಾರಕ್ಕೆ ಬೇಕಾದ ಹಣಕಾಸು ಕೂಡಾ ಅತ್ಯಲ್ಪದ್ದು. ಸುಲಭ್ ಎಂಬುದು ಎರಡು ಗುಳಿಗಳನ್ನು ಒಳಗೊಂಡ ‘ಪವರ್ ಫ್ಲಶ್ ಕಾಂಪೋಸ್ಟ್ ಟಾಯ್ಲೆಟ್’. ಇದರಲ್ಲಿರುವ ತಂತ್ರಜ್ಞಾನವೆಂದರೆ ಕೇವಲ ಒಂದು ಚೊಂಬು ನೀರಿನಲ್ಲಿ ಸುಲಲಿತವಾಗಿ ಹರಿದು ಹೋಗುವಂತಹ ಅತ್ಯಂತ ಇಳಿಜಾರಾದ ಟಾಯ್ಲೆಟ್ ಪಾತ್ರ ಮತ್ತು ಅದಕ್ಕೆ ಹೊಂದಿಕೊಂಡಂತೆ ‘Y’ ಅಕಾರದ ಸಂಪರ್ಕದ ಮೂಲಕ ಹೊಂದಿಕೊಂಡಂತಹ ಎರಡು ಶೇಕರಣಾ ಘಟಕಗಳೆಂಬ ಹಳ್ಳಗಳು. ಇದರಲ್ಲಿ ಒಂದು ಶೇಕರಣಾ ಹಳ್ಳ ತುಂಬಿಕೊಂಡೊಡನೆಯೇ ಅದರಲ್ಲಿರುವ ಹೆಚ್ಚಳದ ತೇವಾಂಶ ಎರಡನೇ ಹಳ್ಳಕ್ಕೆ ನುಗ್ಗುತ್ತದೆ.

ಯಾವುದೇ ಚರಂಡಿ ಪೈಪುಗಳಾಗಲೀ, ಯಾವುದೇ ನಿರಂತರ ಶುದ್ಧೀಕರಣ ತೊಟ್ಟಿಗಳಾಗಲಿ ಇಲ್ಲಿ ಅವಶ್ಯಕವಿಲ್ಲ. ಇವೆಲ್ಲಕ್ಕೂ ಮಿಗಿಲಾದದ್ದೆಂದರೆ ಮೊದಲನೇ ಹಳ್ಳದಲ್ಲಿ ಶೇಕರಿತಗೊಂಡಿರುವ ಕಲ್ಮಶ ಉಪಯೋಗದಿಸದಿರುವ ಸಮಯಗಳಲ್ಲಿ ಅತ್ಯಂತ ಗುಣಾತ್ಮಕ ಗೊಬ್ಬರವಾಗಿ ಪರಿವರ್ತನಗೊಂಡಿರುತ್ತದೆ. ಯಾವುದೇ ದುರ್ಗಂಧ, ಯಾವುದೇ ನಾರುವಿಕೆಯ ಹಳ್ಳ ನಿರ್ಮಾಣ, ಅಥವಾ ಮನುಷ್ಯರ ಅವಲಂಬನೆಯ ಶುದ್ಧೀಕರಣದ ಅವಶ್ಯಕತೆ ಇಲ್ಲಿರುವುದಿಲ್ಲ. ಇದನ್ನು ಇದನ್ನು ಸ್ವತಃ ಬಿಂದೇಶ್ವರ್ ಅವರೇ ವಿಧ ವಿಧದ ಮೂಲವಸ್ತುಗಳಿಂದ ತಯಾರಿಸಿದ್ದರು. ಇದು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಹಾ ಪರಿಸರ ಸ್ನೇಹಿ, ಮಾನವೀಯ ಹಿತದೃಷ್ಟಿಯ ಅತ್ಯುತ್ತಮ ತಂತ್ರಜ್ಞಾನವೆಂದು ಶ್ಲಾಘಿಸಲ್ಪಟ್ಟಿದೆ.

ಜನರಿಗೆ ತಂತ್ರಜ್ಞಾನವನ್ನು ತಲುಪಿಸಲು ಪಟ್ಟ ಪರಿಪಾಡು ಬದಲಾಯಿಸಿ

ವ್ಯವಸ್ಥೆಯನ್ನು ನಿರ್ಮಿಸುವುದಕ್ಕಿಂತ ಜನಗಳಲ್ಲಿ ಅದರಲ್ಲಿ ನಂಬಿಕೆ ಹುಟ್ಟಿಸುವುದು, ಅದರಲ್ಲೂ ಸರ್ಕಾರಿ ವ್ಯವಸ್ಥೆಗಳಿಂದ ಅದನ್ನು ಜಾರಿಗೊಳಿಸುವುದು ಎಷ್ಟು ಹಿಂಸೆಯ ಕೆಲಸ ಎಂಬುದು ಭಾರತೀಯರಾದ ನಮಗೆ ಗೊತ್ತಿಲ್ಲದ ವಿಚಾರವಲ್ಲ. ಬಿಂದೇಶ್ವರ್ ಈ ಎಲ್ಲಾ ಮೆಟ್ಟಿಲುಗಳನ್ನೂ ಹತ್ತಿ ಇಳಿದಿದ್ದಾರೆ. ಹಲವಾರು ಬಾರೀ ಅರ್ಧ ಚಂದ್ರಾಕಾರ ಪ್ರಯೋಗಗಳಿಂದ ಹೊರದಬ್ಬಲ್ಪಟ್ಟಿದ್ದಾರೆ. ತಮ್ಮ ಪತ್ನಿಯ ಬಳಿಯಲ್ಲಿದ್ದ ಅಲ್ವ ಸ್ವಲ್ಪ ಆಭರಣಗಳನ್ನೂ ಮಾರಾಟ ಮಾಡಿ ಹೀಗೆ ಕೆಲಸ ಮಾಡುವ ಸಂಕಷ್ಟಗಳನ್ನು ಎದುರಿಸಿದ್ದಾರೆ. ಆದರೂ ಛಲ ಬಿಡದೆ ಮಾಡಿದ ಅವರ ಕೆಲಸ ಕ್ರಮೇಣವಾಗಿ ಎಲ್ಲೆಲ್ಲೂ ಪ್ರತಿಫಲಿಸ ತೊಡಗಿದೆ. ಯಾವ ವ್ಯವಸ್ಥೆಗಳು ಅವರನ್ನು ಸಂದೇಹವಾಗಿ ಕಂಡಿದ್ದವೋ ಅದೇ ವ್ಯವಸ್ಥೆಗಳು ಅವರನ್ನು ಸನ್ಮಾನಿಸಿವೆ. ಹೇಗಾದರೂ ಮಾಡಿ ಕೆಲಸ ನಮಗೂ ಈ ಕೆಲಸ ಮಾಡಿಕೊಡು ಎಂದು ದುಂಬಾಲು ಬೀಳುತ್ತಿವೆ.

ಅರಸಿ ಬಂದ ಪ್ರಸಿದ್ಧಿ ಬದಲಾಯಿಸಿ

 
ಇಂಡಿಯಾ ಲೀಡರ್‌ಶಿಪ್ ಕಾನ್ಕ್ಲೇವ್‌ನಲ್ಲಿ ಸುಲಭ್ ನೈರ್ಮಲ್ಯದ ಸಂಸ್ಥಾಪಕ ಡಾ

ಇಂದು ಬಿಂದೇಶ್ವರ್ ಪಾಠಕ್ ಅವರನ್ನು ಅರಿಯದವರೇ ಇಲ್ಲ. ಎಲ್ಲ ರಾಷ್ಟ್ರಗಳ ಮಹಾನ್ ಪ್ರಶಸ್ತಿಗಳೂ ಅವರನ್ನರಸಿ ಬಂದಿವೆ. ಸರ್ಕಾರೇತರ ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಇಂದು ಸುಲಭ್ ಇಂಟರ್ ನ್ಯಾಷನಲ್ ಪ್ರತಿಷ್ಠಿತ ಸ್ಥಾನಮಾನ ಪಡೆದಿದೆ. ವಿಶ್ವಸಂಸ್ಥೆ ಸಹಾ ಈ ಸಂಸ್ಥೆಯನ್ನು ಗೌರವದಿಂದ ಕಾಣುತ್ತಿದೆ. ಇಂದು ಭಾರತದ ಹಳ್ಳಿಹಳ್ಳಿಗಳಲ್ಲೂ ಸುಲಭ್ ಶೌಚಾಲಯಗಳು ಸಾರ್ವಜನಿಕವಾಗಿ ಮತ್ತು ಗೃಹಗಳಲ್ಲಿ ಅಳವಡಿತಗೊಂಡಿವೆ. ನಗರಗಳಲ್ಲೂ ಹಣ ಕೊಟ್ಟು ಉಪಯೋಗಿಸಿ ಎಂಬ ಫಲಕಗಳಡಿಯಲ್ಲಿ ವ್ಯಾಪಿಸಿವೆ. ಒಂದು ರೀತಿಯಲ್ಲಿ ಸಾರ್ವಜನಿಕ ಶೌಚಾಲಯಗಳೆಂದರೆ ಯಾರೂ ಪ್ರವೇಶಿಸಲಾಗದ ದುರ್ಗಮ ದುರ್ಗಂಧ ಪ್ರದೇಶಗಳೆಂಬ ಕುಖ್ಯಾತಿಗಳಿಂದ, ಮೂಲಭೂತ ಅವಶ್ಯಕಗಳ ರೂಪದಲ್ಲಿ ಸಹ್ಯವಾಗಿ ಪರಿಗಣಿತಗೊಂಡಿವೆ.

ಸುಲಭ್ ಇಂಟರ್ ನ್ಯಾಷನಲ್ ಬದಲಾಯಿಸಿ

ಇಂದು ಬಿಂದೇಶ್ವರ್ ಪಾಠಕ್ ಅವರ ಸುಲಭ್ ಸಂಸ್ಥೆಯ ಕಾಯಕದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಠಕ್ಕರು ಹಳ್ಳಿ ಹಳ್ಳಿಗೂ, ಪ್ರತೀ ಊರಿಗೂ ಹೋಗಿ ಬದಲಾವಣೆಯ ಜಾಗೃತಿ ತಂದಿದ್ದಾರೆ. “ಟಾಯ್ಲೆಟ್ ಇಲ್ಲದ ಮನೆಯಲ್ಲಿ ನಾನಿರುವುದಿಲ್ಲ” ಎಂದು ಹೊರಬಂದ ಸೊಸೆಯರಿಗೆ ಬೆಂಬಲ ಕೊಟ್ಟಿದ್ದಾರೆ. ಅವರನ್ನೇ ಜಾಗೃತಿ ಪ್ರಸಾರ ಕಾರ್ಯಕ್ಕೆ ಮುಂದು ಮಾಡಿದ್ದಾರೆ. ಸುಲಭ್ ಕಾರ್ಯನಿರ್ವಹಣೆಯ ಕುರಿತಾಗಿ ತರಭೇತಿ ಸಂಸ್ಥೆಯನ್ನೂ ಪ್ರಾರಂಭಿಸಿದ್ದಾರೆ. ತಮ್ಮ ಕಾರ್ಯಕರ್ತರನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಕಾರ್ಯಾಗಾರಗಳಿಗೆ ಗೌರವಯುತ ಪ್ರತಿನಿಧಿಗಳನ್ನಾಗಿ ಹೊಗಿಬರುವಂತೆ ಅನುವು ಮಾಡಿಕೊಟ್ಟಿದ್ದಾರೆ. ಸ್ವತಃ ವಿಶ್ವಸಂಸ್ಥೆಯ ವೇದಿಕೆಗಳೂ ಸೇರಿದಂತೆ ಎಲ್ಲ ರಾಷ್ಟ್ರಗಳ ವೇದಿಕೆಗಳಲ್ಲಿ ಉಪನ್ಯಾಸ ಮಾಡಿದ್ದಾರೆ. ಎಲ್ಲಾ ರಾಷ್ಟ್ರಗಳಲ್ಲೂ ಪ್ರಶಸ್ತಿ ಗೌರವಗಳನ್ನು ಸ್ವೀಕರಿಸಿದ್ದಾರೆ, ಜೊತೆಗೆ ಅಂತಹ ದೇಶಗಳಲ್ಲೂ ಸುಲಭ್ ತಂತ್ರಜ್ಞಾನವನ್ನು ಅಳವಡಿಸಲು ಸಹಾಯ ಮಾಡಿದ್ದಾರೆ.

ದಾರಿ ದೀಪ ಬದಲಾಯಿಸಿ

ಬಿಂದೇಶ್ವರ್ ಪಾಠಕ್ ಅಂತಹ ಸಮರ್ಥರು, ಧೈರ್ಯವಂತರು, ಹೃದಯವಂತರು, ಶ್ರದ್ಧಾವಂತರು ನಮ್ಮ ಬದುಕಿಗೆ ಇಂದು ಅವಶ್ಯಕವಾದ ದಾರಿ ದೀಪಗಳು.

ಮರಣ ಬದಲಾಯಿಸಿ

ಬಿಂದೇಶ್ವರ್ ಪಾಠಕ್ ೧೫ ಆಗಸ್ಟ್ ೨೦೨೩ ರಂದು ದೆಹಲಿಯಲ್ಲಿ ಎದೆಬಡಿತ ನಿಂತು ಅಸುನೀಗಿದರು[೧]

  1. https://www.bbc.com/news/world-asia-india-66519696