ದಾಶರಾಜ್ಞ ಯುದ್ಧ ಪ್ರಾಚೀನ ಭಾರತೀಯ ವೈದಿಕ ಸಂಸ್ಕೃತದ ಸ್ತುತಿಗೀತೆಗಳ ಪವಿತ್ರ ಸಂಕಲನವಾದ ಋಗ್ವೇದದಲ್ಲಿ (ಮಂಡಳ ೭, ಸ್ತುತಿ ೧೮, ೩೩ ಮತ್ತು ೮೩.೪-೮) ಪ್ರಸ್ತಾಪಿಸಲಾದ ಒಂದು ಯುದ್ಧ. ಈ ಯುದ್ಧವು ಮುಖ್ಯ ಅಥವಾ ಮಧ್ಯ ಋಗ್ವೇದಿಕ ಕಾಲದ ಅವಧಿಯಲ್ಲಿ ರಾವಿ ನದಿಯ ಹತ್ತಿರ ನಡೆಯಿತು.[೧] ಇದು ರಾಜರ್ಷಿ ವಿಶ್ವಾಮಿತ್ರರ ಮಾರ್ಗದರ್ಶನದಲ್ಲಿ ಭಾರತರ ಪುರು ವೈದಿಕ ಆರ್ಯ ಬುಡಕಟ್ಟು ರಾಜ್ಯಗಳ ಜೊತೆಗೆ ವಾಯವ್ಯ ಭಾರತದ ಇತರ ಬುಡಕಟ್ಟುಗಳೊಂದಿಗಿನ ಮೈತ್ರಿ ಮತ್ತು ತೃತ್ಸು ಭಾರತ ಪುರು ರಾಜ ಸುದಾಸನ ನಡುವಿನ ಯುದ್ಧ. ಸುದಾಸನು ಇತರ ವೈದಿಕ ಬುಡಕಟ್ಟುಗಳನ್ನು ಸೋಲಿಸುತ್ತಾನೆ.

ತೃತ್ಸುಗಳು ರಾಜ ಸುದಾಸನ ನೇತೃತ್ವದಲ್ಲಿನ ಬುಡಕಟ್ಟು. ಸುದಾಸನನ್ನೂ ಹತ್ತು ರಾಜರುಗಳಲ್ಲಿ ಸೇರಿಸಲಾಗಿದೆ, ಏಕೆಂದರೆ ೭.೩೩.೫ ರಲ್ಲಿ ತೃತ್ಸುಗಳು ಹತ್ತು ರಾಜರಿಂದ ಸುತ್ತುವರಿಯಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಸಂಖ್ಯೆಯನ್ನು ಹೇಗೆ ವಿಭಜಿಸಬೇಕೆಂದು ಸ್ಪಷ್ಟಪಡಿಸಲಾಗಿಲ್ಲ.[೨]

  • ಅಲೀನರು: ದಾಶರಾಜ್ಞದಲ್ಲಿ ಸುದಾಸನಿಂದ ಪರಾಭವಗೊಂಡ ಬುಡಕಟ್ಟುಗಳಲ್ಲಿ ಒಂದು ಮತ್ತು ಇವರು ನುರಿಸ್ತಾನ್‍ಗೆ ವಾಯವ್ಯದಲ್ಲಿ ವಾಸಿಸುತ್ತಿದ್ದರೆಂದು ಸೂಚಿಸಲಾಗಿತ್ತು, ಏಕೆಂದರೆ ಈ ನಾಡನ್ನು ಚೀನಾದ ಯಾತ್ರಿ ‍ಕ್ಸುವಾನ್‍ಜ಼್ಯಾಂಗ್ ಹೆಸರಿಸಿದ್ದನು.
  • ಅನು: ಕೆಲವರು ಇವರನ್ನು ಪರುಷ್ಣಿ ಪ್ರದೇಶದಲ್ಲಿ ಇರಿಸುತ್ತಾರೆ.
  • ಭೃಗುಗಳು: ಸಂಭಾವ್ಯವಾಗಿ ಪ್ರಾಚೀನ ಕವಿ ಭೃಗುವಿನಿಂದ ವಂಶಸ್ಥರಾದ ಪುರೋಹಿತ ಕುಟುಂಬ. ನಂತರ, ಇವರನ್ನು ಅಥರ್ವ ವೇದದ ಭಾಗಗಳ ರಚನೆಗೆ ಸಂಬಂಧಿಸಲಾಗಿದೆ (ಭೃಗ್ವಾಂಗಿರಸ).
  • ಭಾಲನರು: ದಾಸರಾಜ್ಞ ಯುದ್ಧದಲ್ಲಿ ಸುದಾಸನ ವಿರುದ್ಧ ಹೋರಾಡಿದರು. ಭಾಲನರು ಬೋಲನ್ ಕಣಿವೆಮಾರ್ಗ ಪ್ರದೇಶದಲ್ಲಿ ವಾಸಿಸುತ್ತಿದ್ದರೆಂದು ಕೆಲವು ವಿದ್ವಾಂಸರು ವಾದಿಸಿದ್ದಾರೆ.
  • ದ್ರುಹ್ಯುಗಳು: ಕೆಲವರು ಇವರನ್ನು ಗಾಂಧಾರದೊಂದಿಗೆ ಜೊತೆಗೂಡಿಸುತ್ತಾರೆ.
  • ಮತ್ಸ್ಯ ರಾಜ್ಯ ಇವರನ್ನು ಋಗ್ವೇದ (7.18.6) ದಲ್ಲಿ ಮಾತ್ರ ಹೆಸರಿಸಲಾಗಿದೆ, ಆದರೆ ನಂತರ ಶಾಲ್ವನ ಸಂಬಂಧದಲ್ಲಿ.
  • ಪರ್ಷು: ಇವರನ್ನು ಕೆಲವರು ಪ್ರಾಚೀನ ಪರ್ಷಿಯಾ ಜನರೊಂದಿಗೆ ಸಂಬಂಧಿಸಿದ್ದಾರೆ.
  • ಪುರುಗಳು: ಋಗ್ವೇದದಲ್ಲಿನ ಪ್ರಮುಖ ಬುಡಕಟ್ಟು ಒಕ್ಕೂಟಗಳಲ್ಲಿ ಒಂದು.
  • ಪಣಿಗಳು: ರಾಕ್ಷಸರ ಒಂದು ವರ್ಗದ ಹೆಸರು ಕೂಡ; ನಂತರ ಸ್ಕೈತಿಯನ್ನರೊಂದಿಗೆ ಸಂಬಂಧಿಸಲಾಯಿತು.

ಉಲ್ಲೇಖಗಳು ಬದಲಾಯಿಸಿ

  1. Witzel (2000): between approximately 1450 and 1300 BCE
  2. Schmidt, H.P. Notes on Rgveda 7.18.5-10. Indica. Organ of the Heras Institute, Bombay. Vol.17, 1980, 41-47.