ಕೂನೂರು (ತಮಿಳು: குன்னூர்) ಭಾರತತಮಿಳು ನಾಡು ರಾಜ್ಯದ ನೀಲಗಿರಿ ಜಿಲ್ಲೆಯ ಒಂದು ನಗರ, ಪುರಸಭೆಯಾಗಿದೆ. ಇದು ನೀಲಗಿರಿ ಚಹಾ ಉತ್ಪಾದನೆಗೆ ಹೆಸರುವಾಸಿಯಾಗಿದೆ.

ಕೂನೂರು
Coonoor
town
Population
 (2001)
 • Total೫೦,೦೭೯

ಕೂನೂರು ಸಮುದ್ರ ಮಟ್ಟಕ್ಕಿಂತ 1,800 ಮೀ ಎತ್ತರದಲ್ಲಿದೆ. ಅಲ್ಲದೇ ಇದು ನೀಲಗಿರಿ ಬೆಟ್ಟಗಳಲ್ಲಿ ಎರಡನೇ ಅತಿ ಎತ್ತರವಾದ ಬೆಟ್ಟವಾಗಿದೆ. ಇದು ನೀಲಗಿರಿ‌ಯ ಹಲವಾರು ಟ್ರೆಕ್ಕಿಂಗ್ ಸಾಹಸಗಳಿಗೆ ಒಂದು ಅನುಕೂಲಕರ ತಾಣವಾಗಿದೆ.

ಭೌಗೋಳಿಕತೆ ಬದಲಾಯಿಸಿ

ಕೂನೂರು 11°21′N 76°49′E / 11.35°N 76.82°E / 11.35; 76.82ನಲ್ಲಿ ನೆಲೆಸಿದೆ.[೧] ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 1502 ಮೀಟರ್ (4927 ಅಡಿ) ಎತ್ತರದಲ್ಲಿದೆ.

ಜನಸಂಖ್ಯಾ ವಿವರಣೆ ಬದಲಾಯಿಸಿ

As of 2001 ಭಾರತದ ಜನಗಣತಿಯ ಪ್ರಕಾರ,[೨] ಕೂನೂರು 50,079 ಜನಸಂಖ್ಯೆ ಹೊಂದಿದೆ. ಜನಸಂಖ್ಯೆಯಲ್ಲಿ 49%ನಷ್ಟು ಪುರುಷರು ಮತ್ತು 51%ನಷ್ಟು ಮಹಿಳೆಯರಿದ್ದಾರೆ. ಕೂನೂರು 79%ನಷ್ಟು ಸರಾಸರಿ ಸಾಕ್ಷರತಾ ಪ್ರಮಾಣ ಹೊಂದಿದೆ, ಇದು ರಾಷ್ಟ್ರದ 59.5%ನಷ್ಟು ಸರಾಸರಿ ಪ್ರಮಾಣಕ್ಕಿಂತ ಹೆಚ್ಚಾಗಿದೆ: ಅದರಲ್ಲಿ ಪುರುಷರ ಸಾಕ್ಷರತಾ ಪ್ರಮಾಣವು 84%ನಷ್ಟು ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣವು 74%ನಷ್ಟಾಗಿದೆ. ಕೂನೂರಿನಲ್ಲಿ, ಜನಸಂಖ್ಯೆಯ 9%ನಷ್ಟು, 6 ವರ್ಷದ ಕೆಳಗಿನ ವಯಸ್ಸಿನ ಮಕ್ಕಳಾಗಿದ್ದಾರೆ.

ಈ ನಗರವು ಜಿಲ್ಲಾ ಪ್ರಧಾನ ಕಛೇರಿಯಾದ ಊಟಿಯ ನಂತರ ನೀಲಗಿರಿ ಬೆಟ್ಟಗಳಲ್ಲಿ ಎರಡನೇ ಅತ್ಯಂತ ಎತ್ತರದ ಬೆಟ್ಟವಾಗಿದೆ. ಕೂನೂರು ಹಲವಾರು ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿದೆ, ಬಹುಶಃ ಇಲ್ಲಿರುವ ಭಾರತೀಯ ಸೈನ್ಯದ ಮದ್ರಾಸ್ ರೆಜಿಮೆಂಟ್‌ನ ಪ್ರಧಾನ ಕಛೇರಿ, ಹತ್ತಿರದ ವೆಲ್ಲಿಂಗ್ಟನ್ ಕಂಟೋನ್ಮೆಂಟ್‌ನಲ್ಲಿನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (DSSC), ಸ್ಥಳೀಯ ಬೋರ್ಡಿಂಗ್-ಶಾಲೆಗಳು ಮತ್ತು ಗಮನಾರ್ಹ ಪ್ರವಾಸಿ ಜನ ಮೊದಲಾದವು ಇದಕ್ಕೆ ಕಾರಣವಾಗಿರಬಹುದು.

ಸ್ಥಳೀಯ ಆರ್ಥಿಕ ಸ್ಥಿತಿ ಬದಲಾಯಿಸಿ

ಕೂನೂರಿನ ಆರ್ಥಿಕ ಸ್ಥಿತಿಯು ಬೇಸಿಗೆ ತಿಂಗಳ ನಿರ್ದಿಷ್ಟಾವಧಿಯ ಪ್ರವಾಸಿ ಜನ ಮತ್ತು ವರ್ಷದಾದ್ಯಂತವಿರುವ ಚಹಾ ಉದ್ಯಮವನ್ನು ಅವಲಂಬಿಸಿದೆ.

ಚಹಾ ಬದಲಾಯಿಸಿ

ಸ್ಥಳೀಯರು ಹೆಚ್ಚು ಕಡಿಮೆ ಸಂಪೂರ್ಣವಾಗಿ ಚಹಾ ವ್ಯಾಪಾರವನ್ನು ಆಧರಿಸಿದ್ದಾರೆ. ಬೆಟ್ಟಗಳನ್ನು ಸುತ್ತುವರಿದಿರುವ ಭಾರಿ ಪ್ರಮಾಣದ ಖಾಸಗಿ ಚಹಾ ತೋಟಗಳು ತಾಜಾ ಹಸಿರು ಚಹಾ ಎಲೆಗಳನ್ನು ಕೊಡುತ್ತವೆ. ಅವನ್ನು ಹೆಕ್ಕಿ ಸ್ಥಳೀಯ ಕಾರ್ಖಾನೆಗಳಲ್ಲಿ ಸಂಸ್ಕರಿಸಿ, ಪ್ಯಾಕ್ ಮಾಡಲಾಗುತ್ತದೆ. ನಂತರ ಅವನ್ನು ಕೂನೂರು, ಕೊಯಂಬತ್ತೂರು ಮತ್ತು ಕೊಚಿನ್‌ನಲ್ಲಿರುವ ಹರಾಜು ಸಂಸ್ಥೆಗಳಿಗೆ ಮಾರಾಟ ಮಾಡಲಾಗುತ್ತದೆ.

ಪ್ರವಾಸೋದ್ಯಮ ಬದಲಾಯಿಸಿ

ಕೂನೂರು ಮೆಟ್ಟುಪಾಳಯಂ (28 ಕಿಮೀ) ಮತ್ತು ಊಟಿಯ ನಡುವಿನ ಮೀಟರ್ ವ್ಯಾಪ್ತಿಯ(ಕಿರಿದಾದ) ರೈಲು ಹಾದಿಯಲ್ಲಿದೆ.

ಇಲ್ಲಿನ ಮುಖ್ಯ ಆಕರ್ಷಣೆಯೆಂದರೆ ಹತ್ತಿರದಲ್ಲಿರುವ ಸಿಮ್ಸ್ ಪಾರ್ಕ್. ಇದು ಉತ್ತಮ ರೀತಿ ನಿರ್ವಹಿಸಲ್ಪಟ್ಟ ಸಸ್ಯೋದ್ಯಾನವಾಗಿದ್ದು, ಹಲವಾರು ಪ್ರಭೇದದ ಸಸ್ಯಗಳನ್ನು ಹೊಂದಿದೆ. ಇದು 12 ಹೆಕ್ಟೇರುಗಳಷ್ಟು ವ್ಯಾಪ್ತಿಯಲ್ಲಿ ಹರಡಿದೆ.ಇದು ಊಟಿಗೆ ಸುಮಾರು 19 ಕಿಮೀ ಅಂತರದಲ್ಲಿ ದಕ್ಷಿಣಕ್ಕಿದೆ, ಹಾಗೂ ಇಲ್ಲಿಗೆ ರೈಲು ಮತ್ತು ರಸ್ತೆಗಳೆರಡರಿಂದಲೂ ತಲುಪಬಹುದು.ಇದು ವಾರ್ಷಿಕವಾಗಿ ಬೇಸಿಗೆಯಲ್ಲಿ “ಹಣ್ಣುಗಳ ಪ್ರದರ್ಶನ”ವನ್ನೂ ನಡೆಸಿಕೊಡುತ್ತದೆ.

ನಗರದಿಂದ ಹೊರಗೆ ಹಲವಾರು ಟ್ರೆಕ್ಕಿಂಗ್ ಹಾದಿಗಳಿವೆ.ಕೂನೂರಿನಿಂದ 9 ಕಿಮೀ ದೂರದಲ್ಲಿರುವ ಲ್ಯಾಂಬ್ಸ್ ರಾಕ್‌ ಪ್ರಸಿದ್ಧ ಟ್ರೆಕ್ಕಿಂಗ್ ಹಾದಿಗಳಲ್ಲಿ ಒಂದಾಗಿದೆ. ಲ್ಯಾಂಬ್ಸ್ ರಾಕ್‌ನಲ್ಲಿ ನಿಂತರೆ ಕೊಯಂಬತ್ತೂರು ಬಯಲು ಪ್ರದೇಶವನ್ನು ಸಂಪೂರ್ಣವಾಗಿ ನೋಡಬಹುದು, ಅಲ್ಲದೆ ಚಹಾ ಮತ್ತು ಕಾಫಿ ತೋಟಗಳ ನಯನಮನೋಹರ ದೃಶ್ಯವನ್ನು ಕಾಣಬಹುದು. ಲ್ಯಾಂಬ್ಸ್ ರಾಕ್‌ಗಿಂತ ಸ್ವಲ್ಪ ಮುಂದಕ್ಕೆ ಲೇಡಿ ಕ್ಯಾನಿಂಗ್ಸ್ ಸೀಟ್ ಇದೆ, ಇಲ್ಲಿಂದ ನೀಲಗಿರಿಯ ಅದ್ಭುತ ದೃಶ್ಯವನ್ನು ಅನುಭವಿಸಬಹುದು.

ಪ್ರವಾಸಿಗರು ಲೇಡಿ ಕ್ಯಾನಿಂಗ್ಸ್ (ಪೀಠಸ್ಥ ಆಸನ)ಸೀಟ್‌ನಿಂದ ಡಾಲ್ಫಿನ್ಸ್ ಸೀಟ್‌ಗೆ ಪ್ರಯಾಣಿಸಬಹುದು, ಇದು ಕೂನೂರಿನಿಂದ 12 ಕಿಮೀ ದೂರದಲ್ಲಿದೆ. ಹೆಚ್ಚು ಹತ್ತಿರದಲ್ಲಿರುವುದು ಲಾಸ್ ಫಾಲ್ಸ್, ಇದು ಕೂನೂರಿನಿಂದ ಕೇವಲ 5 ಕಿಮೀ ದೂರದಲ್ಲಿದೆ. ಕೂನೂರಿನಿಂದ 13 ಕಿಮೀ ದೂರದಲ್ಲಿರುವ ಡ್ರೂಗ್‌ಗೆ ಈ ಜಲಪಾತದಿಂದ ಪ್ರಯಾಣಿಸಬಹುದು. ಡ್ರೂಗ್ಅನ್ನು ಪಕ್ಕಾಸುರನ್ ಕೊಟ್ಟೈ ಎಂದೂ ಕರೆಯುತ್ತಾರೆ. 16ನೇ ಶತಮಾನದ ಕೋಟೆಯೊಂದರ ಅವಶೇಷಗಳನ್ನು ಡ್ರೂಗ್‌ನಲ್ಲಿ ಕಾಣಬಹುದು. ಈ ಕೋಟೆಯು 750 ಮೀ ಎತ್ತರದಲ್ಲಿದೆ.

ಆಕರ್ಷಣೆಗಳು ಬದಲಾಯಿಸಿ

ಸಿಮ್ಸ್ ಪಾರ್ಕ್‌

ಸಿಮ್ಸ್ ಪಾರ್ಕ್‌ ಕೂನೂರಿನಲ್ಲಿ ಭೇಟಿ ನೀಡಬಹುದಾದ ಒಂದು ಪ್ರಮುಖ ಸ್ಥಳವಾಗಿದೆ. ಸುಮಾರು 12 ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಉದ್ಯಾನವು ಮ್ಯಾಗ್ನೋಲಿಯ, ಪೈನ್ ಮರಗಳು, ಜರೀಗಿಡಗಳು ಮತ್ತು ಕ್ಯಾಮೆಲ್ಲಿಯ ಮೊದಲಾದ ಸುಮಾರು 1,000 ಸಸ್ಯ ಜಾತಿಗಳ ಸಂಗ್ರಹವನ್ನು ಹೊಂದಿದೆ. ಈ ಸಸ್ಯೋದ್ಯಾನವು ಭಾಗಶಃ ಜಪಾನೀಸ್ ಶೈಲಿಯಲ್ಲಿ ಅಭಿವೃದ್ಧಿಯಾಗಿದೆ. ಇದರ ಹೆಸರನ್ನು 1874ರಲ್ಲಿ ಮದ್ರಾಸ್ ಕ್ಲಬ್‌ನ ಕಾರ್ಯದರ್ಶಿಯಾಗಿದ್ದ J. D. ಸಿಮ್‌ನಿಂದ ಪಡೆಯಲಾಗಿದೆ. ವರ್ಷಂಪ್ರತಿ ಮೇ ತಿಂಗಳಲ್ಲಿ ನಡೆಸಲಾಗುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನವು ಈ ಉದ್ಯಾನದ ಪ್ರಮುಖ ಆಕರ್ಷಣೆಯಾಗಿದೆ.

ಪೋಮೊಲಾಜಿಕಲ್ ಸ್ಟೇಶನ್

ಈ ಸಂಸ್ಥೆಯು ಪರ್ಸಿಮನ್, ದಾಳಿಂಬೆ ಮತ್ತು ಏಪ್ರಿಕಾಟ್(ಜರದಾಳು) ಮೊದಲಾದವುಗಳ ರಾಜ್ಯ ಕೃಷಿ ವಿಭಾಗದ ಸಂಶೋಧನಾ ಕೇಂದ್ರವಾಗಿದೆ.

ಡಾಲ್ಫಿನ್ಸ್ ನೋಸ್ ವ್ಯೂಪಾಯಿಂಟ್

ಡಾಲ್ಫಿನ್ಸ್ ನೋಸ್ ವ್ಯೂಪಾಯಿಂಟ್ ಕೂನೂರಿನಿಂದ 10 ಕಿಮೀ ದೂರದಲ್ಲಿದೆ. ಇದು ವ್ಯಾಪಕವಾಗಿ ಹರಡಿರುವ ನೀಲಗಿರಿ ಬೆಟ್ಟಗಳು ಮಾತ್ರವಲ್ಲದೆ ಕ್ಯಾಥರಿನ್ ಜಲಪಾತದ ನಯನಮನೋಹರ ದೃಶ್ಯವನ್ನೂ ಒದಗಿಸುತ್ತದೆ.

ಲ್ಯಾಂಬ್ಸ್ ರಾಕ್‌

ಡಾಲ್ಫಿನ್ಸ್ ನೋಸ್‌ಗೆ ಹೋಗುವ ದಾರಿಯಲ್ಲಿ ಕೂನೂರಿನಿಂದ ಸುಮಾರು 5½ ಕಿಮೀ ದೂರದಲ್ಲಿ ಲ್ಯಾಂಬ್ಸ್ ರಾಕ್ ನೆಲೆಯಾಗಿದೆ. ಇದು ಚಹಾ (ಟೀ) ಮತ್ತು ಕಾಫೀ ತೋಟಗಳ ಅದ್ಭುತ ದೃಶ್ಯಾವಳಿ ವೀಕ್ಷಿಸಲು ಇರುವ ಮತ್ತೊಂದು ಅನುಕೂಲ ಸ್ಥಾನವಾಗಿದೆ.

ಡ್ರೂಗ್

ಕೂನೂರಿನಿಂದ ಸುಮಾರು 13 ಕಿಮೀ ದೂರದಲ್ಲಿರುವ ಡ್ರೂಗ್ ಕೋಟೆಯೊಂದರ ಅವಶೇಷಗಳನ್ನು ಹೊಂದುವುದರೊಂದಿಗೆ ನಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುತ್ತದೆ. ಈ ಕೋಟೆಯನ್ನು ಹಿಂದೆ 16ನೇ ಶತಮಾನದಲ್ಲಿ ಟಿಪ್ಪು ಸುಲ್ತಾನನು ಬಳಸಿದ್ದನು.

ಲಾಸ್ ಫಾಲ್ಸ್

ಈ ಭವ್ಯ ಜಲಪಾತವು ಮೆಟ್ಟುಪಾಳಯಂಗೆ ಹೋಗುವ ದಾರಿಯಲ್ಲಿ, ಕೂನೂರಿನಿಂದ 5 ಕಿಮೀ ದೂರದಲ್ಲಿದೆ.

ಊಟಿ

ಗಿರಿಧಾಮಗಳ ರಾಣಿ ಎಂದು ಕರೆಯಲ್ಪಡುವ ಊಟಿ ಗಿರಿಧಾಮವು ಕೂನೂರಿನಿಂದ ಸುಮಾರು 19 ಕಿಮೀ ವಾಯವ್ಯದಲ್ಲಿದೆ. ಊಟಿಯು ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಕೂನೂರಿನಂತೆ ಊಟಿಯೂ ಸಹ ನೀಲಗಿರಿ ಬೆಟ್ಟಗಳ ಅದ್ಭುತ ಹಸಿರು ದೃಶ್ಯಗಳನ್ನು ಒದಗಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ವಾಸ್ತುಶಿಲ್ಪವನ್ನು ಬಿಂಬಿಸುವ ಹಲವಾರು ಕಟ್ಟಡಗಳು, ಸರೋವರಗಳು ಮತ್ತು ಉದ್ಯಾನಗಳನ್ನು ಹೊಂದಿದೆ.

ಕಟರಿ ಫಾಲ್ಸ್

ವಿದ್ಯುತ್ ಕೇಂದ್ರವು ಇಲ್ಲಿನ ಮುಖ್ಯ ಆಕರ್ಷಣೆಯಾಗಿದೆ, ಇದು ಸೆಲಾಸ್‌ನ ಹತ್ತಿರ ಸುಮಾರು 1000KWನಷ್ಟು ವಿದ್ಯುತ್ತನ್ನು ಪೂರೈಸುತ್ತದೆ.

ಪಾಶ್ಚರ್ ಇನ್‌ಸ್ಟಿಟ್ಯೂಟ್

ಈ ಸಂಸ್ಥೆಗೆ ಭೇಟಿ ನೀಡಲು ಪ್ರವಾಸಿಗರಿಗೆ ವಿಶೇಷ ಅನುಮತಿಯ ಅಗತ್ಯವಿರುತ್ತದೆ. ಇದು ಸಿಮ್ಸ್ ಪಾರ್ಕ್‌ನ ಹತ್ತಿರದಲ್ಲಿದೆ. ಈ ಸಂಸ್ಥೆಯನ್ನು 1907ರಲ್ಲಿ ಸ್ಥಾಪಿಸಲಾಗಿತ್ತು. ಇದು ರೇಬೀಸ್‌ (ನಾಯಿ ಕಚ್ಚುವುದರಿಂದ ಬರುವ ರೋಗ) ರೋಗಕ್ಕೆ ಲಸಿಕೆಯನ್ನು ಮತ್ತು ಮೂರು-ಲಸಿಕೆಗಳನ್ನು(ಟ್ರಿಪಲ್-ವ್ಯಾಕ್ಸಿನ್) (DPT, DT ಮತ್ತು TT) ಅಭಿವೃದ್ಧಿಪಡಿಸುತ್ತದೆ.ಆರಂಭಿಕ ದಿನಗಳಲ್ಲಿ ಈ ಸಂಸ್ಥೆಯು ಇನ್‌ಫ್ಲುಯೆಂಜ ಲಸಿಕೆಯ ಸಂಶೋಧನೆಯಲ್ಲಿ ಪ್ರಮುಖ ಪಾತ್ರವಹಿಸಿತ್ತು. ಈಗ ಇದು ಟಿಶ್ಯೂ ಕಲ್ಚರ್ ಆಂಟಿ ರೇಬೀಸ್ ವ್ಯಾಕ್ಸಿನ್ (TCARV) ಮತ್ತು DPT ಗುಂಪಿನ ಲಸಿಕೆಗಳನ್ನು ಸಿದ್ದಪಡಿಸುತ್ತದೆ.

ಇತರ ಉದ್ಯಮಗಳು ಬದಲಾಯಿಸಿ

ಕೂನೂರು ಕೆಲವು ಪ್ರಮಾಣ ರೇಷ್ಮೆ ಕೃಷಿಯನ್ನೂ ಹೊಂದಿದೆ. ಇಲ್ಲಿನ ಸರ್ಕಾರವು ಒಂದು ರೇಷ್ಮೆ ನೂಲಿನ ಕೇಂದ್ರವನ್ನು ನಿರ್ವಹಿಸುತ್ತದೆ, ಆದರೆ ಇದು ಹೆಚ್ಚಾಗಿ ಸಂಶೋಧನಾ ಸೌಕರ್ಯವಾಗಿದೆ. ಇತ್ತೀಚೆಗೆ ಇಲ್ಲಿ ಹೂಕೃಷಿ ಮತ್ತು ಸ್ಟ್ರಾಬೆರಿ ಕೃಷಿಯನ್ನೂ ನಡೆಸಲಾಗುತ್ತಿದೆ.

ಶಿಕ್ಷಣ ಬದಲಾಯಿಸಿ

ಶಾಲೆಗಳು ಸ್ಥಳೀಯ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿವೆ. ಸುಮಾರು ಒಂದು ಶತಮಾನದಿಂದ ಇರುವ ದುಬಾರಿ ಬೋರ್ಡಿಂಗ್ ಶಾಲೆಗಳು ಈಗ ನೀಲ್‌ಗಿರಿಸ್ ಮತ್ತು ಕೂನೂರಿನ ವೈಶಿಷ್ಟ್ಯವಾಗಿವೆ. ಜನರಲ್ ತಿಮ್ಮಯ್ಯ ವಿಶ್ವ ಸಮರ Iರ ನಂತರದ ವರ್ಷಗಳಲ್ಲಿ ಐರಿಷ್ ಸಹೋದರರು ನಡೆಸುತ್ತಿದ್ದ ಕಾನ್ವೆಂಟ್ ಸೇಂಟ್ ಜೋಸೆಫ್ಸ್ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. ಆರಂಭದಲ್ಲಿ ಬ್ರಿಟಿಷ್ ವೃತ್ತಿಪರ ತರಬೇತಿ ಕೇಂದ್ರಗಳಾಗಿದ್ದ ಇವು ಈಗ ಭಾರತೀಯ (ಕೇಂದ್ರ ಅಥವಾ ರಾಜ್ಯ) ಶಾಲಾಶಿಕ್ಷಣ ವ್ಯವಸ್ಥೆಗಳಡಿಯಲ್ಲಿ ವಿವಿಧೋದ್ದೇಶ ಕಿಂಡರ್‌ಗಾರ್ಟನ್ - ಹೈಯರ್ ಸೆಕೆಂಡರಿ (K-12) ಶಾಲೆಗಳಾಗಿವೆ. ಇವುಗಳಲ್ಲಿ ಹೆಚ್ಚಿನ ಶಾಲೆಗಳನ್ನು ಕ್ಯಾಥೋಲಿಕ್ ಮಿಷನರಿಗಳು ಸ್ವಂತವಾಗಿ-ಹೊಂದಿದ್ದು, ಅವುಗಳ ಮೇಲ್ವಿಚಾರಣೆ ನಡೆಸುತ್ತವೆ. ಕೆಲವು ಕಾಲೇಜುಗಳು ಹೀಗಿವೆ:

  • ಪ್ರೋವಿಡೆನ್ಸ್ ಕಾಲೇಜ್ ಫಾರ್ ವುಮೆನ್, ಬಂಡಿಶೋಲ ಸ್ಪ್ರಿಂಗ್ ಫೀಲ್ಡ್, ಕೂನೂರು.
  • ರಿಗ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಕೂನೂರು.
  • M R S ಟೆಕ್ನಿಕಲ್ ಇನ್‌ಸ್ಟಿಟ್ಯೂಟ್, ಕೂನೂರು.

ಗುಣ-ವಿಶೇಷಣವಿರುವ ಪ್ರಸಿದ್ಧ ವ್ಯಕ್ತಿಗಳು ಬದಲಾಯಿಸಿ

ಕೂನೂರು ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ನೆಲೆಯಾಗಿದೆ. ಹೆನ್ನೆಸಿ ಬ್ರ್ಯಾಂಡ್‌ನ ಪ್ರಸಿದ್ಧ ವ್ಯಕ್ತಿ ಕೊಲೊನೆಲ್ ರೋಚರಾಪ್ಟ್ ಆತನ ನಿವೃತ್ತಿ ಜೀವನವನ್ನು ವೆಲ್ಲಿಂಗ್ಟನ್‌ನ ಮೇಲಿರುವ ಭವ್ಯ ಮಹಲಿನಲ್ಲಿ ಕಳೆದನು. ಕೊಚಿನ್ ಮಹಾರಾಜರ ಬೇಸಿಗೆಯ ಅರಮನೆ "ಸ್ಪ್ರಿಂಗ್‌ಫೀಲ್ಡ್" ಕೊಟಗಿರಿ ರಸ್ತೆಯಲ್ಲಿತ್ತು. ಹಾಗೆಯೇ ವಿಜಯನಗರಮ್ ಮಹಾರಾಜರ ಅರಮನೆಯಾದ "ಎಲ್ಕ್ ಹಿಲ್ ಹೌಸ್" ಸಹ ಅಲ್ಲಿತ್ತು. ವಿಜಯನಗರಮ್ ಮಹಾರಾಜರ ಮತ್ತೊಂದು ಅರಮನೆಯು ಟೈಗರ್ ಹಿಲ್ ರಸ್ತೆಯಲ್ಲಿತ್ತು. ಕೊಚಿನ್ ಮಹಾರಾಜನ ಪತ್ನಿ ಪಾರುಕುಟ್ಟಿ ನಿತ್ಯಾರಮ್ಮ ಟೈಗರ್ ಹಿಲ್ ರಸ್ತೆಯಲ್ಲಿನ ಹೋಮ್‌ಡೇಲ್‌ನಲ್ಲಿ ವಾಸಿಸುತ್ತಿದ್ದಳು. ನಂತರ ಆಕೆಯ ಮಗ ಕೊಚಿನ್ ರಾಜ್ಯದ ನಿವೃತ್ತ ಮುಖ್ಯ ಇಂಜಿನಿಯರ್ V. K. ಅರವಿಂದಾಕ್ಷ ಮೆನನ್ ಸಹ ಅಲ್ಲಿ ಜೀವಿಸಿದ್ದನು. ಸೈನ್ಯದ ನಿವೃತ್ತ ಮುಖ್ಯಾಧಿಕಾರಿ ಫೀಲ್ಡ್ ಮಾರ್ಶಲ್ ಸ್ಯಾಮ್ ಮನೆಕ್ಶಾವ್ ಕೂನೂರಿನಲ್ಲಿ ನೆಲೆಸಿದ್ದನು. ಜನರಲ್ ತಿಮ್ಮಯ್ಯ ಕೂನೂರಿನಲ್ಲಿ ಒಂದು ವಾಸದ ಮನೆಯನ್ನು ಹೊಂದಿದ್ದರು. ಚೆಟ್ಟಿನಾಡ್‌‌ನ ರಾಜನು ಪ್ರಸಿದ್ಧ ಸಿಮ್ಸ್ ಪಾರ್ಕ್‌ನ ಹತ್ತಿರ ವಾಸಿಸಿದ್ದನು. ಟಾಟಾ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣನ್ ಆತನ ಬೇಸಿಗೆ ಕಾಲವನ್ನು ಕೂನೂರಿನ ಬ್ರೂಕ್‌ಲ್ಯಾಂಡ್ಸ್‌ನಲ್ಲಿ ಕಳೆಯುತ್ತಾನೆ. ಬ್ಯಾಂಕ್-ಉದ್ಯೋಗಿ ಮತ್ತು ಬರಹಗಾರ ರಘು ಪಾಲಟ್ ಆತನ ಬಾಲ್ಯವನ್ನು ಕೂನೂರಿನಲ್ಲಿ ಕಳೆದನು. "ಆನ್ ಅಬ್ಸ್ಕರ್ ಹಿಂದು" ಎಂಬ ಕಾವ್ಯನಾಮದಲ್ಲಿ ಯಥೇಚ್ಛವಾಗಿ ಕೃತಿಗಳನ್ನು ರಚಿಸಿದ ಲೇಖಕ S.R. ನಾರಾಯಣ ಅಯ್ಯರ್ ಕೂನೂರಿನ ದೇವಿನಿಲಯಮ್‌ನಲ್ಲಿ ನೆಲೆಸಿದ್ದನು. ಶಿವಮ್ ಅರೋರನ ಜನ್ಮಸ್ಥಳ ಕೂನೂರಾಗಿದೆ.

ಸಾರಿಗೆ ಸಂಪರ್ಕಗಳು ಬದಲಾಯಿಸಿ

ರಸ್ತೆ ಸಾರಿಗೆ ಬದಲಾಯಿಸಿ

ಕೂನೂರು ಮತ್ತು ಮೆಟ್ಟುಪಾಳಯಂ ನಡುವಿನ ರಸ್ತೆ ಸಾರಿಗೆಯು ಉತ್ತಮವಾಗಿದೆ. ನೀಲಗಿರಿ ಘಾಟ್ ರಸ್ತೆಗಳಲ್ಲಿ ಒಂದು ಊಟಿಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಈ ಸಂಪೂರ್ಣ ಜಿಲ್ಲೆಗಿರುವ ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ಒಂದಾಗಿದೆ. ಪರ್ಯಾಯವಾಗಿ, ಕೂನೂರನ್ನು ಬಂಡಿಶೋಲ ಮತ್ತು ಬೆಟ್ಟೈ ಟೋಲ್ಗೇಟ್‌ನ ಮೂಲಕ ಕೊಟಗಿರಿಗೆ ಸಂಪರ್ಕಿಸುವ ಮತ್ತೊಂದು ಮಾರ್ಗವಿದೆ. ಈ ರಸ್ತೆಯು ಕೊಟಗಿರಿಯಿಂದ ಊಟಿಗೆ ಹೋಗುವ ರಾಜ್ಯ ಹೆದ್ದಾರಿ 15 (SH15) ಒಂದಿಗೆ ಸಂಪರ್ಕಿಸುತ್ತದೆ.

ಬೆಂಗಳೂರು, ಮೈಸೂರು, ಕೊಯಂಬತ್ತೂರು, ಕ್ಯಾಲಿಕಟ್, ಕನ್ಯಾಕುಮಾರಿ, ತಂಜಾವೂರು, ತಿರುಪತಿ ಮತ್ತು ಕೊಚಿನ್‌ ಮೊದಲಾದ ಸ್ಥಳಗಳಿಂದ ಇಲ್ಲಿಗೆ ನಿಯಮಿತವಾಗಿ ಬಸ್ ಸೌಲಭ್ಯಗಳಿವೆ.

ನೀಲಗಿರಿ ಮೌಂಟೇನ್ ರೈಲ್ವೆ ಬದಲಾಯಿಸಿ

46 ಕಿಮೀ ದೂರದಲ್ಲಿರುವ ಮೆಟ್ಟುಪಾಳಯಂ ಹತ್ತಿರದ ರೈಲುಮಾರ್ಗದ ತುದಿಯಾಗಿದೆ. ಮುಖ್ಯ ರೈಲು ಜಂಕ್ಷನ್ ಕೊಯಂಬತ್ತೂರಿನಲ್ಲಿದೆ (80 ಕಿಮೀ).

ನೀಲಗಿರಿ ಮೌಂಟೇನ್ ರೈಲ್ವೆಯು ಭಾರತದಲ್ಲೇ ಅತ್ಯಂತ ಹಳೆಯ ಬೆಟ್ಟ ಪ್ರದೇಶದ ರೈಲು ವ್ಯವಸ್ಥೆಯಾಗಿದೆ. ನೀಲಗಿರಿ ಮೌಂಟೇನ್ ರೈಲ್ವೆಯನ್ನು UNESCO 2005ರ ಜುಲೈನಲ್ಲಿ ಪ್ರಪಂಚದ ಆಸ್ತಿ ಎಂದು ಪ್ರಕಟಿಸಿತು. ಈ ರೈಲು ವ್ಯವಸ್ಥೆಯು ಕೂನೂರನ್ನು ಬೆಟ್ಟಗಳ ಬುಡದಲ್ಲಿ ಮೆಟ್ಟುಪಾಳಯಂ ನಗರಕ್ಕೆ ಸಂಪರ್ಕಿಸುತ್ತದೆ. ನೀಲಗಿರಿ ಪ್ಯಾಸೆಂಜರ್ ರೈಲು ಕೊಯಂಬತ್ತೂರಿನ ಮೂಲಕ ರಾಜ್ಯದ ರಾಜಧಾನಿ ಚೆನ್ನೈಗೆ ಹೋಗುವ ನೀಲಗಿರಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಅನುಕೂಲಕರ ಸಂಪರ್ಕ ಒದಗಿಸುತ್ತದೆ. ಕೂನೂರು ಆರಂಭದಲ್ಲಿ ಬೆಟ್ಟಗಳಲ್ಲಿ NMRನ ಅಂತಿಮ ಸ್ಥಾನವಾಗಿತ್ತು, ನಂತರ ಆ ರೈಲುಮಾರ್ಗವು ಊಟಿಯವರೆಗೆ ವಿಸ್ತರಿಸಿತು.

ಮೆಟ್ಟುಪಾಳಯಂನಿಂದ ಊಟಿಗೆ ಬೆಟ್ಟ-ಪ್ರದೇಶದ ರೈಲು ವ್ಯವಸ್ಥೆಯನ್ನು ಒದಗಿಸುವ ಪ್ರಯಾಸದಾಯಕ ಕಾರ್ಯವನ್ನು ರಾವ್ ಬಹಾದುರ್ ಬೆಲ್ಲೀ ಗೌಡರ್ ನಿರ್ವಹಿಸಿದನು. ಹುಬ್ಬತಲೈ ಹಳ್ಳಿಗೆ ಸೇರಿದವನಾದ ಆತನು ಸ್ಥಳೀಯ ಸಮುದಾಯದ ಮುಖಂಡ, ಅಲ್ಲದೇ ಬಡಗಸಮುದಾಯಕ್ಕೆ ಸೇರಿದವನಾಗಿದ್ದಾನೆ. ಆತನು "ರಾವ್ ಬಹಾದುರ್" ಮತ್ತು "ರಾವ್ ಸಾಹಿಬ್" ಎಂಬ ಬಿರುದುಗಳನ್ನು ಬ್ರಿಟಿಷ್ ರಾಜನಿಂದ ಪಡೆದನು. ಆತನನ್ನು ನೀಲಗಿರಿಯ ಅನಭಿಷಿಕ್ತ ದೊರೆ ಎಂದೂ ಕರೆಯಲಾಗುತ್ತಿತ್ತು.

ವಾಯುಮಾರ್ಗ/ವಿಮಾನಯಾನ ಬದಲಾಯಿಸಿ

ಹತ್ತಿರದ ವಿಮಾನ ನಿಲ್ದಾಣವು ರಸ್ತೆಯಿಂದ ಸರಿಸುಮಾರು 80 ಕಿಮೀ ದೂರದಲ್ಲಿರುವ ಕೊಯಂಬತ್ತೂರಿನಲ್ಲಿದೆ (IATA ಕೋಡ್ CJB). ಕೊಯಂಬತ್ತೂರು ಹಲವಾರು ರಾಷ್ಟ್ರೀಯ ನಿಲ್ದಾಣಗಳಿಗೆ ಹೋಗುವ ಸೌಲಭ್ಯ ಒದಗಿಸುತ್ತದೆ ಹಾಗೂ ಇದು ಕೊಲೊಂಬೊ, ಸಿಂಗಾಪೂರ್ ಮತ್ತು ಶಾರ್ಜಾಗೆ ಕೆಲವು ಅಂತಾರಾಷ್ಟ್ರೀಯ ಮಾರ್ಗಗಳನ್ನೂ ಹೊಂದಿದೆ.

ಸ್ಥಳೀಯ ಸರ್ಕಾರ ಬದಲಾಯಿಸಿ

ಕೂನೂರು ಆರು ಪಂಚಾಯತ್ ಹಳ್ಳಿಗಳ ಜವಾಬ್ದಾರಿಯನ್ನು ಹೊಂದಿರುವ ತಾಲೂಕು ಪ್ರಧಾನ ಕಛೇರಿಯಾಗಿದೆ.

  • ಬಂಡಿಶೋಲ
  • ಬಿಯರ್‌ಹಟ್ಟಿ
  • ಬುರ್ಲಿಯರ್
  • ಹುಬ್ಬತಲೈ
  • ಮೆಲೂರು
  • ಯೆಡಪಲ್ಲಿ

ಕೂನೂರು ಬ್ಲಾಕ್ ಈ ಕೆಳಗಿನ ಎಂಟು (ಕಂದಾಯ ಗ್ರಾಮ)ರೆವೆನ್ಯೂ ಹಳ್ಳಿಗಳನ್ನೂ ಹೊಂದಿದೆ. (ಅವುಗಳಲ್ಲಿ ಕೆಲವನ್ನು ಮೇಲೆಯೂ ಸೂಚಿಸಲಾಗಿದೆ):

ಅಡಿಗರಟ್ಟಿ, ಬುರ್ಲಿಯರ್, ಕೂನೂರು ಟೌನ್, ಯೆಡಪಲ್ಲಿ, ಹುಬ್ಬತಲೈ, ಹುಲ್ಲಿಕಲ್, ಕೆಟ್ಟಿ, ಮೆಲೂರು

ರಾಜಕೀಯ ಬದಲಾಯಿಸಿ

ಕೂನೂರು ಶಾಸನ ಸಭಾ ಚುನಾವಣಾಕ್ಷೇತ್ರವು (SC) ನೀಲಗಿರಿ (ಲೋಕ ಸಭಾ ಚುನಾವಣಾಕ್ಷೇತ್ರದ)ಯ ಭಾಗವಾಗಿದೆ.[೩]

ಚಿತ್ರ ಸಂಪುಟ ಬದಲಾಯಿಸಿ

ಇವನ್ನೂ ಗಮನಿಸಿ ಬದಲಾಯಿಸಿ

  • ಊಟಿ
  • ನೀಲಗಿರಿ (ಬೆಟ್ಟಗಳು)
  • ನೀಲಗಿರಿ ಚಹಾ
  • ಅರುವಂಕಡು
  • ಕೆಟ್ಟಿ

ಉಲ್ಲೇಖಗಳು ಬದಲಾಯಿಸಿ

  1. ಫಾಲಿಂಗ್ ರೈನ್ ಜಿನೋಮಿಕ್ಸ್, ಇಂಕ್ - ಕೂನೂರು
  2. GRIndia
  3. "List of Parliamentary and Assembly Constituencies" (PDF). Tamil Nadu. Election Commission of India. Archived from the original (PDF) on 2008-10-31. Retrieved 2008-10-09.

ಹೊರಗಿನ ಕೊಂಡಿಗಳು ಬದಲಾಯಿಸಿ

"https://kn.wikipedia.org/w/index.php?title=ಕೂನೂರು&oldid=1124570" ಇಂದ ಪಡೆಯಲ್ಪಟ್ಟಿದೆ