ಕಯ್ಯಾರ ಕಿಞ್ಞಣ್ಣ ರೈ
ಕಯ್ಯಾರ ಕಿಞ್ಞಣ್ಣ ರೈ (ಜೂನ್ ೮, ೧೯೧೫ - ಆಗಸ್ಟ್ ೯, ೨೦೧೫) ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾರಕರಾಗಿ, ನಿರಂತರವಾಗಿ ದುಡಿದವರು. ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು, ಅಖಿಲಭಾರತ ಮಟ್ಟದಲ್ಲಿ ಜರುಗಿದ ೬೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಆರಂಭಿಕ ಜೀವನಸಂಪಾದಿಸಿ
ಕಯ್ಯಾರ ಕಿಞ್ಞಣ್ಣ ರೈ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ ಜೂನ ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಕಯ್ಯಾರರು ಉಞ್ಞಕ್ಕ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ಆರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳ ತುಂಬು ಸಂಸಾರದೊಂದಿಗೆ ಬದಿಯಡ್ಕ ಪೆರಡಾಲ "ಕವಿತಾ ಕುಟೀರ"ದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ರೈಗಳ ಮನೆಮಾತು ತುಳು. ರೈಗಳು ಹಲವು ತುಳು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ. 'ಪರಿವು ಕಟ್ಟುಜಿ, ರಡ್ಡ್ ಕಣ್ಣ್ಡ್' 'ಸಾರೊ ಎಸಳ್ದ ತಾಮರೆ' 'ಲೆಪ್ಪುನ್ಯೇರ್?' 'ಬತ್ತನೊ ಈ ಬರ್ಪನೊ' - ರೈಗಳ ಕೆಲವು ತುಳು ಕವನಗಳು. ರೈಗಳ ಕನ್ನಡ ಕವಿತೆಗಳಲ್ಲಿ ಹೆಚ್ಚಾಗಿ ಕಾಣಸಿಗದ ಪ್ರಾದೇಶಿಕ ರಂಗು, ಜಾನಪದ ಲೋಕ ಅವರ ತುಳು ಕವಿತೆಗಳಲ್ಲಿ ಅರಳಿಕೊಳ್ಳುತ್ತದೆ. 'ಕನ್ನಡಾಂತರ್ಗತವಾದ ತುಳು ಬದುಕ'ನ್ನು ಒಪ್ಪಿದ ಕವಿ ತುಳು ಭಾಷೆಯ ಸ್ಥಿತಿಗತಿಯ ಬಗ್ಗೆ ವ್ಯಥೆಪಡುತ್ತಾರೆ.
ಶಿಕ್ಷಣ/ವೃತ್ತಿಸಂಪಾದಿಸಿ
ರೈಯವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು. ಆನಂತರ ಎಂ.ಎ. ಸ್ನಾತಕೋತ್ತರ ಪದವೀಧರರೂ ಆದರು. ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಸಾಮಾಜಿಕ ಬದುಕುಸಂಪಾದಿಸಿ
ಕಯ್ಯಾರ ಕಿಞ್ಞಣ್ಣ ರೈಯವರು ಸ್ವಾತಂತ್ರ್ಯಸಂಗ್ರಾಮದಲ್ಲಿ ಹೋರಾಡಿದ್ದಾರೆ. ಹರಿಜನ ಸೇವಕ ಸಂಘಟನೆಯಲ್ಲಿ ದುಡಿದಿದ್ದಾರೆ. ಸ್ಥಳೀಯ ಪಂಚಾಯತಿಯ ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದೆ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಸಹ ಹೋರಾಟ ಮಾಡಿದವರು.
ಸಾಹಿತ್ಯಸಂಪಾದಿಸಿ
- 'ಕಯ್ಯಾರ ಕಿಞ್ಞಣ್ಣ ರೈ'ಯವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದಾರೆ.
- ಕಾರ್ನಾಡ ಸದಾಶಿವರಾವ, ರತ್ನರಾಜಿ, ಏ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ಹಾಗು ಕಥಾಸಂಗ್ರಹಗಳನ್ನು ಬರೆದು ಪ್ರಕಟಿಸಿದ್ದಾರೆ.
- ರಾಷ್ಟ್ರಕವಿ ಗೋವಿಂದ ಪೈಯವರ ಬಗೆಗೆ ಮೂರು ಗ್ರಂಥಗಳನ್ನು ಬರೆದಿದ್ದಾರೆ.
- ಪಂಚಮಿ ಮತ್ತು ಆಶಾನ್ರ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳನ್ನು ರಚಿಸಿದ್ದಾರೆ.
- ಸಾಹಿತ್ಯದೃಷ್ಟಿ ಎನ್ನುವ ಲೇಖನಸಂಕಲನ ಪ್ರಕಟಿಸಿದ್ದಾರೆ.
- ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ 'ಪರಶುರಾಮ' ಬರೆದುಕೊಟ್ಟಿದ್ದಾರೆ.
- ನವೋದಯ ವಾಚನ ಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದಾರೆ.
- 'ವಿರಾಗಿಣಿ' ಎನ್ನುವುದು ಇವರು ಬರೆದ ನಾಟಕ.
- 'ದುಡಿತವೆ ನನ್ನ ದೇವರು' ಎನ್ನುವದು ರೈಯವರ ಆತ್ಮಕಥನ.
- ಇದಲ್ಲದೆ ವಿವಿಧ ಪತ್ರಿಕೆಗಳಿಗೆ ಇವರು ಬರೆದ ಲೇಖನಗಳ ಸಂಖ್ಯೆಯೆ ಐದು ಸಾವಿರದಷ್ಟಾಗುತ್ತದೆ.
ಪತ್ರಕರ್ತರಾಗಿಸಂಪಾದಿಸಿ
- ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
- ಕಾಸರಗೋಡು ಬದಿಯಡ್ಕ ಪೆರಡಾಲದ 'ಕವಿತಾ ಕುಟೀರ'ವಾಸಿ, ಕಯ್ಯಾರ ಕಿಞ್ಞಣ್ಣ ರೈ ರವರ ೯೯ ನೆಯ ವರ್ಷದ ಹುಟ್ಟುಹಬ್ಬದ ಶುಭ ಅವಸರದಲ್ಲಿ 'ಅಭಿನಂದನಾ ಪೂರ್ವಕವಾಗಿ ಗೌರವ ಸಮರ್ಪಣೆ'ಯನ್ನು ಮಾಡಲಾಗುವುದು. ಧರ್ಮದರ್ಶಿ ಹರಿಕೃಷ್ಣ ಪುನರೂರುರವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭದ ಉದ್ಘಾಟನೆಯನ್ನು ಮಾಜಿ ವಿಧಾನಸಭಾ ಸದಸ್ಯ, 'ವಾಟಾಳ್ ನಾಗರಾಜ್' ನಡೆಸಿಕೊಡುತ್ತಿದ್ದಾರೆ.
೧೦೦ ನೆಯ ಹುಟ್ಟುಹಬ್ಬದ ಅಭಿನಂದನಾ ಸಮಾರಂಭಸಂಪಾದಿಸಿ
ಸನ್.೨೦೧೪ ರ, ಜೂನ್ ತಿಂಗಳ ೮ ನೇ ತಾರೀಖಿನ ಭಾನುವಾರ, ಜನ್ಮ ಶತಮಾನೋತ್ಸವ ಹಾಗೂ ೨೦೧೩ ನೆ ಸಾಲಿನ "ಪಂಪ ಪ್ರಶಸ್ತಿ" ಪ್ರದಾನ ಸಮಾರಂಭ ೨ ಘಂಟೆಗೆ ಕವಿ ಮನೆ ಇರುವ "ಕವಿತಾ ಕುಟೀರ" , ಬದಿಯಡ್ಕದಲ್ಲಿ ನಡೆಯಿತು.
ಗೌರವಪ್ರಶಸ್ತಿ/ಪುರಸ್ಕಾರಗಳುಸಂಪಾದಿಸಿ
- ಸನ್.೧೯೬೯ ರಲ್ಲಿ ರೈಯವರಿಗೆ 'ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ' ಲಭಿಸಿತು.
- ಸನ್.೧೯೬೯ ರಲ್ಲಿ 'ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ' ಲಭಿಸಿತು.
- ಸನ್.೧೯೮೫ ರಲ್ಲಿ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ದೊರೆಯಿತು.
- ಕಯ್ಯಾರ ಕಿಞ್ಞಣ್ಣ ರೈಯವರು ೧೯೯೭ರಲ್ಲಿ ಮಂಗಳೂರಿನಲ್ಲಿ ಜರುಗಿದ' ೬೬ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು'.
- ಸನ್.೨೦೦೫ ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ದೊರೆಯಿತು.
- ಸನ್.೨೦೦೬ ರಲ್ಲಿ ಹಂಪಿ ವಿಶ್ವವಿದ್ಯಾಲಯದ, ನಾಡೋಜ ಪ್ರಶಸ್ತಿ,
- ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಲಭಿಸಿವೆ.
- ಪಂಪ ಪ್ರಶಸ್ತಿ [೧]
ಹೊರಗಿನ ಸಂಪರ್ಕಗಳುಸಂಪಾದಿಸಿ
ಉಲ್ಲೇಖಸಂಪಾದಿಸಿ
- ↑ ಪ್ರಜಾವಾಣಿ ವರದಿ http://www.prajavani.net/article/%E0%B2%95%E0%B2%AF%E0%B3%8D%E0%B2%AF%E0%B2%BE%E0%B2%B0%E0%B2%B0%E0%B2%BF%E0%B2%97%E0%B3%86-%E0%B2%AA%E0%[ಶಾಶ್ವತವಾಗಿ ಮಡಿದ ಕೊಂಡಿ] B2%82%E0% B2%AA-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF-0