ಕಯಾಮತ್ ಸೇ ಕಯಾಮತ್ ತಕ್ (ಚಲನಚಿತ್ರ)

ಕಯಾಮತ್ ಸೇ ಕಯಾಮತ್ ತಕ್ (ಅನುವಾದ: ವಿನಾಶದಿಂದ ವಿನಾಶದವರೆಗೆ) (ಕ್ಯೂಎಸ್‍ಕ್ಯೂಟಿ ಎಂಬ ಆದ್ಯಕ್ಷರ ಗುಚ್ಛದಿಂದಲೂ ಪರಿಚಿತವಾಗಿದೆ) ೧೯೮೮ರ ಒಂದು ಹಿಂದಿ ಸಂಗೀತಾತ್ಮಕ ಪ್ರಣಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಮನ್ಸೂರ್ ಖಾನ್ ನಿರ್ದೇಶಿಸಿದ್ದಾರೆ. ಅವರ ತಂದೆ ನಾಸಿರ್ ಹುಸೇನ್ ಇದನ್ನು ಬರೆದು ನಿರ್ಮಾಣ ಮಾಡಿದ್ದಾರೆ. ಮುಖ್ಯಪಾತ್ರಗಳಲ್ಲಿ ಅವರ ಸೋದರಸಂಬಂಧಿ ಆಮಿರ್ ಖಾನ್‌ ಮತ್ತು ಜೂಹಿ ಚಾವ್ಲಾ ನಟಿಸಿದ್ದಾರೆ. ಚಿತ್ರವು ೨೯ ಎಪ್ರಿಲ್ ೧೯೮೮ರಂದು ಬಿಡುಗಡೆಯಾಗಿ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು. ಇದು ಒಂದು ಪ್ರಮುಖ ವಾಣಿಜ್ಯಿಕ ಯಶಸ್ಸೆನಿಸಿಕೊಂಡು ಬ್ಲಾಕ್‍ಬಸ್ಟರ್ ಆಯಿತು. ಈ ಚಿತ್ರವು ಆಮಿರ್ ಖಾನ್ ಮತ್ತು ಜೂಹಿ ಚಾವ್ಲಾರನ್ನು ಭಾರಿ ಜನಪ್ರಿಯ ತಾರೆಗಳನ್ನಾಗಿ ಮಾಡಿತು.[೩] ಕಥಾವಸ್ತುವು ಲೈಲಾ ಮತ್ತು ಮಜನು, ಹೀರ್ ರಾಂಝಾ,[೪] ಮತ್ತು ರೋಮಿಯೋ ಜೂಲಿಯೆಟ್‍ನಂತಹ ಶ್ರೇಷ್ಠ ದುರಂತಾಂತ್ಯದ ಪ್ರಣಯಪ್ರಧಾನ ಕಥೆಗಳ ಆಧುನಿಕ ದಿನದ ನಿರೂಪಣೆಯಾಗಿತ್ತು.[೫] ಬಾಲಿವುಡ್‍ನಲ್ಲಿ ಪ್ರಣಯಪ್ರಧಾನ ಸಂಗೀತಾತ್ಮಕ ಚಿತ್ರಶೈಲಿಯನ್ನು ಪುನಃ ಸೃಷ್ಟಿಸಿದ ಈ ಚಿತ್ರವು,[೬] ಹಿಂದಿ ಸಿನಿಮಾದ ಇತಿಹಾಸದಲ್ಲಿ ಮೈಲಗಲ್ಲಾಗಿತ್ತು ಮತ್ತು ೧೯೯೦ರ ದಶಕದಲ್ಲಿ ಹಿಂದಿ ಸಿನಿಮವನ್ನು ವ್ಯಾಖ್ಯಾನಿಸಿದ ಬಾಲಿವುಡ್ ಸಂಗೀತಮಯ ಪ್ರಣಯಪ್ರಧಾನ ಚಲನಚಿತ್ರಗಳಿಗೆ ಮಾದರಿಯನ್ನು ಸ್ಥಾಪಿಸಿತು.[೭][೮]

ಕಯಾಮತ್ ಸೇ ಕಯಾಮತ್ ತಕ್
ಚಲನಚಿತ್ರದ ಭಿತ್ತಿಪತ್ರ
ನಿರ್ದೇಶನಮನ್ಸೂರ್ ಖಾನ್
ನಿರ್ಮಾಪಕನಾಸಿರ್ ಹುಸೇನ್
ಲೇಖಕನಾಸಿರ್ ಹುಸೇನ್
ಪಾತ್ರವರ್ಗಆಮಿರ್ ಖಾನ್
ಜೂಹಿ ಚಾವ್ಲಾ
ದಲಿಪ್ ತಾಹಿಲ್
ಅಲೋಕ್ ನಾಥ್
ಸಂಗೀತಆನಂದ್-ಮಿಲಿಂದ್
ಛಾಯಾಗ್ರಹಣಕಿರಣ್ ದೇವ್‍ಹನ್ಸ್
ಸಂಕಲನಜ಼ಫ಼ರ್ ಸುಲ್ತಾನ್
ಸ್ಟುಡಿಯೋನಾಸಿರ್ ಹುಸೇನ್ ಫ಼ಿಲ್ಮ್ಸ್
ಬಿಡುಗಡೆಯಾಗಿದ್ದು
  • 29 ಏಪ್ರಿಲ್ 1988 (1988-04-29)[೧]
ಅವಧಿ163 ನಿಮಿಷಗಳು
ದೇಶಭಾರತ
ಭಾಷೆಹಿಂದಿ
ಬಾಕ್ಸ್ ಆಫೀಸ್ 50 ದಶಲಕ್ಷ ಅಥವಾ 1.4 ಶತಕೋಟಿ (೨೦೧೭ರಲ್ಲಿ ಸರಿಹೊಂದಿಸಿದಾಗ)[೨]

ಈ ಚಿತ್ರಕ್ಕಾಗಿ ಆನಂದ್-ಮಿಲಿಂದ್ ಸಂಯೋಜಿಸಿದ್ದ ಮತ್ತು ಮಜ್‍ರೂಹ್ ಸುಲ್ತಾನ್‍ಪುರಿ ಬರೆದಿದ್ದ ಸಾಹಿತ್ಯವಿರುವ ಧ್ವನಿವಾಹಿನಿಯು ಅಷ್ಟೇ ಯಶಸ್ವಿಯಾಗಿತ್ತು, ಮತ್ತು ೧೯೮೦ರ ದಶಕದ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನ ಸಂಗ್ರಹಗಳ ಪೈಕಿ ಒಂದಾಯಿತು. ಇದರ ೮ ದಶಲಕ್ಷಕ್ಕಿಂತೆ ಹೆಚ್ಚು ಧ್ವನಿವಾಹಿನಿ ಸಂಗ್ರಹದ ಪ್ರತಿಗಳು ಮಾರಾಟವಾದವು. (ಉದಿತ್ ನಾರಾಯಣ್ ಹಾಡಿದ ಮತ್ತು ಆಮಿರ್ ಖಾನ್ ಮೇಲೆ ಚಿತ್ರೀಕರಿಸಲಾದ) "ಪಾಪಾ ಕೆಹತೆ ಹೇ" ಹಾಡು ಈ ಧ್ವನಿಸಂಗ್ರಹದ ಅತಿ ಜನಪ್ರಿಯ ಹಿಟ್ ಹಾಡಾಗಿತ್ತು. ಈ ಧ್ವನಿವಾಹಿನಿಯು ಆನಂದ್-ಮಿಲಿಂದ್‍,[೯] ಜೊತೆಗೆ ಭಾರತದ ಮುಂಚೂಣಿಯ ಧ್ವನಿಮುದ್ರಣ ಗುರುತುಗಳಲ್ಲಿ ಒಂದಾದ ಟೀ-ಸೀರಿಸ್‍ಗಳ ವೃತ್ತಿಜೀವನಗಳಿಗೆ ಮಹತ್ವದ ತಿರುವಾಯಿತು.[೧೦] ಈ ಚಿತ್ರವು ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು. ಜೊತೆಗೆ ಹನ್ನೊಂದು ನಾಮನಿರ್ದೇಶನಗಳಿಂದ, ಅತ್ಯುತ್ತಮ ಚಲನಚಿತ್ರ, ಮನ್ಸೂರ್ ಖಾನ್‍ರಿಗೆ ಅತ್ಯುತ್ತಮ ನಿರ್ದೇಶಕ, ಆಮಿರ್ ಖಾನ್‍ರಿಗೆ ಅತ್ಯುತ್ತಮ ಪುರುಷ ಪ್ರಥಮ ಪ್ರವೇಶ, ಮತ್ತು ಜೂಹಿ ಚಾವ್ಲಾರಿಗೆ ಅತ್ಯುತ್ತಮ ಮಹಿಳ ಪ್ರಥಮ ಪ್ರವೇಶ ಪ್ರಶಸ್ತಿ ಸೇರಿದಂತೆ, ಎಂಟು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿತು.

ಕಥಾವಸ್ತು ಬದಲಾಯಿಸಿ

ಧನಕ್‍ಪುರ್ ಗ್ರಾಮದ ರೈತರಾದ ಠಾಕುರ್ ಜಸ್ವಂತ್ ಸಿಂಗ್ (ಅಲೋಕ್ ನಾಥ್) ಮತ್ತು ಧನ್‍ರಾಜ್ ಸಿಂಗ್ (ದಲೀಪ್ ತಾಹಿಲ್) ಸೋದರರಾಗಿರುತ್ತಾರೆ. ಅವಳ ತಂಗಿ ಮಧುಮತಿಯನ್ನು ಒಂದು ಶ್ರೀಮಂತ ರಾಜಪೂತ್ ಕುಟುಂಬದ ಠಾಕುರ್ ರಘುವೀರ್ ಸಿಂಗ್‍ನ ಮಗ ರತನ್ ಸಿಂಗ್ (ಅರ್ಜುನ್) ಬಸಿರು ಮಾಡಿ ಬಿಟ್ಟುಬಿಡುತ್ತಾನೆ. ತನ್ನ ತಂಗಿಯನ್ನು ರತನ್‍ಗೆ ಮದುವೆಮಾಡುವ ಜಸ್ವಂತ್ ಸಿಂಗ್‍ನ ವಿನಂತಿಯನ್ನು ಕುಟುಂಬವು ನಿರಾಕರಿಸುತ್ತದೆ ಮತ್ತು ಮಧುನ ಪ್ರಸ್ತುತ ಪರಿಸ್ಥಿತಿಯಲ್ಲಿ ರತನ್‍ನ ಪಾತ್ರವನ್ನು ನಿರಾಕರಿಸುತ್ತದೆ ಏಕೆಂದರೆ ಅವರು ತಮ್ಮ ಸ್ಥಾನಮಾನದಲ್ಲಿ ಆಸಕ್ತರಾಗಿರುತ್ತಾರೆ.

ಅವಮಾನಗೊಂಡು, ಜಸ್ವಂತ್ ಹಳ್ಳಿಯನ್ನು ಬಿಡುತ್ತಾನೆ. ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ, ಮಧುಮತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನಿರಾಶೆಗೊಂಡ ಧನ್‍ರಾಜ್ ರತನ್‍ನನ್ನು ಅವನ ಮದುವೆಯಲ್ಲಿ ಕೊಂದು ಸೆರೆಯಾಗುತ್ತಾನೆ. ಎರಡೂ ಕುಟುಂಬಗಳು ಈಗ ನಿರ್ದಯ ಶತ್ರುಗಳಾಗಿರುತ್ತಾರೆ. ಜಸ್ವಂತ್ ದೆಹಲಿಗೆ ಹೋಗಿ ತನ್ನ ವ್ಯಾಪಾರವನ್ನು ಅಭಿವೃದ್ಧಿಗೊಳಿಸಿ ಉತ್ತಮ ಸ್ಥಾನಮಾನವನ್ನು ತಲುಪುತ್ತಾನೆ; ಅವನು ಧನ್‍ರಾಜ್‍ನ ಮಕ್ಕಳನ್ನೂ ಬೆಳೆಸುತ್ತಾನೆ. ವರ್ಷಗಳ ನಂತರ, ಧನ್‍ರಾಜ್ ಸೆರೆಮನೆಯಿಂದ ಬಿಡುಗಡೆಯಾಗಿ, ಉತ್ಕಟ ಸಂಗೀತಪ್ರೇಮಿಯಾದ ತನ್ನ ಮಗ ರಾಜ್‍ನಿಂದ (ಆಮಿರ್ ಖಾನ್) ಒಂದು ಪತ್ರವನ್ನು ಪಡೆಯುತ್ತಾನೆ. ರಾಜ್ ತನ್ನ ಶಿಕ್ಷಣವನ್ನು ರಾಜ್‍ಪುತ್ ಕಾಲೇಜಿನಿಂದ ಮುಗಿಸುತ್ತಾನೆ. ಭಾವನಾತ್ಮಕ ಧನ್‍ರಾಜ್ ರಾಜ್‍ನ ಕಾಲೇಜ್‍ನ ಬೀಳ್ಕೊಡುಗೆ ಪಾರ್ಟಿಗೆ ಕದ್ದು ಹೋಗಿ ತನ್ನ ಮಗನು ಅವನ ಕನಸುಗಳನ್ನು ಈಡೇರಿಸಿಕೊಂಡಿದ್ದಕ್ಕೆ ಸಂತೋಷಗೊಳ್ಳುತ್ತಾನೆ.

ಅನಿರೀಕ್ಷಿತ ತಿರುವಿನಲ್ಲಿ, ರಾಜ್ ಮತ್ತು ಅವನ ಸೋದರಸಂಬಂಧಿ ತಮ್ಮ ಕುಟುಂಬದ ಭೂ ವ್ಯವಹಾರವನ್ನು ತೀರಿಸಲು ಧನಕ್‍ಪುರ್‌ಗೆ ಹೋಗುತ್ತಾರೆ. ಮನೆಗೆ ಹಿಂತಿರುಗುವಾಗ, ರಾಜ್ ರಘುವೀರ್ ಸಿಂಗ್‍ನ ಸಂಬಂಧಿಯಾದ ರಶ್ಮಿಯನ್ನು (ಜೂಹಿ ಚಾವ್ಲಾ) ಪ್ರೀತಿಸತೊಡಗುತ್ತಾನೆ. ರಾಜ್ ರಶ್ಮಿಯ ಹುಟ್ಟುಹಬ್ಬದ ಪಾರ್ಟಿಗೆ ಕದ್ದು ಹೋಗುತ್ತಾನೆ. ಇಬ್ಬರೂ ಒಂದು ರಜಾ ತಾಣದಲ್ಲಿ ಮತ್ತೆ ಭೇಟಿಯಾಗುತ್ತಾರೆ. ಅವರು ಅರಣ್ಯದಲ್ಲಿ ಕಳೆದುಹೋಗಿ ಹೊರಗೆ ಬರಲು ಪ್ರಯತ್ನಿಸುವಾಗ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ರಾಜ್‍ಗೆ ರಶ್ಮಿಯ ಕುಟುಂಬದ ಬಗ್ಗೆ ಗೊತ್ತಾಗುತ್ತದೆ ಆದರೆ ಅವಳಿಗೆ ಸತ್ಯವನ್ನು ಹೇಳಲು ಸಾಧ್ಯವಾಗುವುದಿಲ್ಲ. ರಶ್ಮಿಯ ತಂದೆ ರಣ್‍ಧೀರ್ ಸಿಂಗ್‍ಗೆ ಈ ಪ್ರೇಮ ಪ್ರಕರಣದ ಬಗ್ಗೆ ಗೊತ್ತಾದಾಗ, ಅವನು ತಕ್ಷಣವೇ ರಶ್ಮಿಯ ಮದುವೆಯನ್ನು ಮತ್ತೊಬ್ಬನ ಜೊತೆಗೆ ಏರ್ಪಡಿಸುತ್ತಾನೆ. ಆ ಪ್ರೇಮಿಗಳು ತಮ್ಮ ಕುಟುಂಬಗಳ ವಿರುದ್ಧ್ ಹೋಗಿ ಓಡಿಹೋಗುತ್ತಾರೆ, ಮತ್ತು ಜೊತೆಯಾಗಿ ಸುಖಶಾಂತಿಯ ಜೀವನದ ಕನಸು ಕಾಣುತ್ತಾರೆ.

ಕೋಪಗೊಂಡು, ರಾಜ್‍ನನ್ನು ಗುರಿಯಾಗಿಸಲು ರಣ್‍ಧೀರ್ ಒಬ್ಬ ಬಾಡಿಗೆ ಕೊಲೆಗಾರನನ್ನು ಗೊತ್ತುಮಾಡುತ್ತಾನೆ. ಪ್ರೇಮಿಗಳು ಸಂತೋಷದ ಸಂಕ್ಷಿಪ್ತ ವಿರಾಮವನ್ನು ಅನುಭವಿಸುತ್ತಾರೆ. ಅವರು ಒಂದು ನಿರ್ಜನ ಕೋಟೆಯಲ್ಲಿ ತಮ್ಮದೇ ಸ್ವರ್ಗದಲ್ಲಿ ಸಂತೋಷವಾಗಿ ವಾಸಿಸುತ್ತಾರೆ. ರಣ್‍ಧೀರ್‌ಗೆ ಅವರು ಇರುವ ಸ್ಥಳದ ಬಗ್ಗೆ ಗೊತ್ತಾಗಿ, ರಶ್ಮಿಯನ್ನು ಮನೆಗೆ ಕರೆತರಲು ಮತ್ತು ರಾಜ್ ಕೊಲ್ಲಲ್ಪಡುವುದನ್ನು ಖಚಿತಪಡಿಸಲು ಅಲ್ಲಿಗೆ ಹೋಗುತ್ತಾನೆ. ರಣ್‍ಧೀರ್‌ನ ತಾಯಿ ಇದನ್ನು ಬಯಸುವುದಿಲ್ಲ ಹಾಗಾಗಿ ಅವಳು ಧನ್‍ರಾಜ್ ಬಳಿ ಹೋಗಿ ಈ ಪ್ರೇಮಪಕ್ಷಿಗಳನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾಳೆ. ತಮ್ಮ ಮನೆಗೆ ಉರುವಲನ್ನು ತರಲು ರಾಜ್ ಕೋಟೆಯನ್ನು ಬಿಡುತ್ತಾನೆ. ರಾಜ್ ಹೊರಹೋದಾಗ, ರಣ್‍ಧೀರ್ ರಶ್ಮಿಯನ್ನು ಭೇಟಿಯಾಗಿ ಮನೆಗೆ ಬರುವಂತೆ ಕೇಳಿಕೊಳ್ಳುತ್ತಾನೆ ಮತ್ತು ಅವರ ಪ್ರೀತಿಯನ್ನು ಒಪ್ಪಿಕೊಂಡಿರುವುದಾಗಿ ಭರವಸೆ ಕೊಡುತ್ತಾನೆ. ರಶ್ಮಿ ತನ್ನ ತಂದೆಯ ಮಾತುಗಳಿಂದ ಬಹಳ ಸಂತೋಷಗೊಳ್ಳುತ್ತಾಳೆ. ಆದರೆ ಅವಳಿಗೆ ಸತ್ಯ ತಿಳಿದಿರುವುದಿಲ್ಲ. ಕಾಡಿನಲ್ಲಿ, ಬಂಟರು ರಾಜ್‍ನನ್ನು ಬೆನ್ನಟ್ಟುತ್ತಾರೆ.

ಧನ್‍ರಾಜ್ ಕೋಟೆಯನ್ನು ತಲುಪಿ ತನ್ನ ಮಗನು ಇರುವ ಸ್ಥಳದ ಬಗ್ಗೆ ಮತ್ತೆಮತ್ತೆ ಕೇಳುತ್ತಾನೆ. ಅವರ ಮಧ್ಯೆ ಜಗಳವಾಗಿ ಒಂದು ಗುಂಡಿನ ಹೊಡೆತ ಕೇಳಿಸುತ್ತದೆ. ರಾಜ್ ಸರಿಯಾಗಿರುವುದನ್ನು ಖಚಿತಪಡಿಸಲು ರಶ್ಮಿ ದೃಶ್ಯದಿಂದ ಹೊರಟು ಹೋಗುತ್ತಾಳೆ. ಅವನಿಗೆ ಇನ್ನೇನು ಗುಂಡು ಬೀಳುವುದರಲ್ಲಿರುತ್ತದೆ. ಆದರೆ ರಶ್ಮಿಯನ್ನು ನೋಡಿ ಬಂಟನು ಬದಲಾಗಿ ಅವಳಿಗೆ ಗುಂಡು ಹೊಡೆಯುತ್ತಾನೆ. ಅವಳಿಗೆ ಎರಡು ಗುಂಡುಗಳು ಬಡಿದು ಗುಡ್ಡದಿಂದ ಕೆಳಗೆ ಉರುಳಿಕೊಂಡು ಬರುತ್ತಾಳೆ. ರಾಜ್ ಆ ಬಂಟನನ್ನು ಸೋಲಿಸಿ ರಶ್ಮಿಯ ಬದಿಯನ್ನು ಅಳುತ್ತ ತಲುಪುತ್ತಾನೆ. ಅವರು ಒಬ್ಬರನ್ನೊಬ್ಬರು ಎಂದೂ ಬಿಡುವುದಿಲ್ಲವೆಂದು ಮಾತುಕೊಡುತ್ತಾರೆ. ಅದನ್ನು ಹೇಳಿ, ರಶ್ಮಿ ರಾಜ್‍ನ ತೋಳುಗಳಲ್ಲಿ ಕೊನೆಯುಸಿರೆಳೆಯುತ್ತಾಳೆ. ದುಃಖಭರಿತ ರಾಜ್ ರಶ್ಮಿಯ ಸಾವಿನಿಂದ ಆಘಾತಗೊಂಡು ತಮ್ಮನ್ನು ಯಾವುದೂ ಬೇರ್ಪಡಿಸಲಾಗುವುದಿಲ್ಲವೆಂದು ಹೇಳುತ್ತಾನೆ. ಅವನು ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಅಂತಿಮ ದೃಶ್ಯದಲ್ಲಿ ಎರಡೂ ಕುಟುಂಬಗಳು ಅವರ ಕಡೆಗೆ ಓಡಿ ಬರುತ್ತವೆ; ಪ್ರೇಮಿಗಳು ಎಂದೂ ಬೇರ್ಪಡದಂತೆ ಒಟ್ಟಾಗುತ್ತಾರೆ. ಅವರ ಹಿಂದೆ ಸೂರ್ಯಾಸ್ತವಾಗುತ್ತದೆ.

ಪಾತ್ರವರ್ಗ ಬದಲಾಯಿಸಿ

  • ರಾಜ್ವೀರ್ "ರಾಜ್" ಸಿಂಗ್ ಪಾತ್ರದಲ್ಲಿ ಆಮಿರ್ ಖಾನ್
  • ರಶ್ಮಿ ಪಾತ್ರದಲ್ಲಿ ಜೂಹಿ ಚಾವ್ಲಾ
  • ರಣ್‍ಧೀರ್ ಸಿಂಗ್ ಪಾತ್ರದಲ್ಲಿ ಗೋಗಾ ಕಪೂರ್
  • ಧನ್‍ರಾಜ್ ಸಿಂಗ್ ಪಾತ್ರದಲ್ಲಿ ದಲೀಪ್ ತಾಹಿಲ್
  • ಧರಮ್‍ಪಾಲ್ ಸಿಂಗ್ ಪಾತ್ರದಲ್ಲಿ ರವೀಂದ್ರ ಕಪೂರ್
  • ಮಿಸಸ್ ಸರಸ್ವತಿ ಸಿಂಗ್ ಪಾತ್ರದಲ್ಲಿ ಆಶಾ ಶರ್ಮಾ
  • ಜಸ್ವಂತ್ ಸಿಂಗ್ ಪಾತ್ರದಲ್ಲಿ ಅಲೋಕ್ ನಾಥ್
  • ಶ್ಯಾಮ್ ಪಾತ್ರದಲ್ಲಿ ರಾಜೇಂದ್ರನಾಥ್ ಜ಼ುಟ್ಷಿ
  • ಕವಿತಾ ಪಾತ್ರದಲ್ಲಿ ಶೆಹನಾಜ಼್ ಕುಡಿಯಾ
  • ಪಾರ್ವತಿ ಪಾತ್ರದಲ್ಲಿ ಚಾರುಶೀಲಾ
  • ಸರೋಜ್ ಪಾತ್ರದಲ್ಲಿ ಬೀನಾ ಬ್ಯಾನರ್ಜಿ
  • ಮಿಸಸ್ ಕಮಲಾ ಸಿಂಗ್ ಪಾತ್ರದಲ್ಲಿ ರೀಮಾ ಲಾಗೂ
  • ಇಂದುಮತಿ ಪಾತ್ರದಲ್ಲಿ ನಂದಿತಾ ಠಾಕುರ್
  • ಭಗವಾನ್‍ದಾಸ್ ಪಾತ್ರದಲ್ಲಿ ಅಹಮದ್ ಖಾನ್
  • ರತನ್ ಸಿಂಗ್ ಪಾತ್ರದಲ್ಲಿ ಅರ್ಜುನ್
  • ವಕೀಲ್ ಬಿಹಾರಿಲಾಲ್ ಪಾತ್ರದಲ್ಲಿ ಅಜೀತ್ ವಾಛಾನಿ
  • ಟ್ರಕ್ ಡ್ರೈವರ್ ಆಗಿ ಯೂನುಸ್ ಪರ್ವೇಜ಼್
  • ಮಾನ್ ಸಿಂಗ್ ಪಾತ್ರದಲ್ಲಿ ವಿಜು ಖೋಟೆ
  • ತೋತಾರಾಮ್ ಪಾತ್ರದಲ್ಲಿ ಬಬ್ಬನ್‍ಲಾಲ್ ಯಾದವ್
  • ರಘುವೀರ್ ಸಿಂಗ್ ಪಾತ್ರದಲ್ಲಿ ಅರುಣ್ ಮಾಥುರ್
  • ಮಧುಮತಿ ಪಾತ್ರದಲ್ಲಿ ಸೀಮಾ ವಾಜ಼್
  • ಹಮೀದ್ ಖಾನ್ ಪಾತ್ರದಲ್ಲಿ ಮುಕೇಶ್
  • ಶಾಹಿದ್ ಖಾನ್ ಪಾತ್ರದಲ್ಲಿ ಶೆಹಜ಼ಾದ್ ಖಾನ್
  • ಬಾಬಾ ಪಾತ್ರದಲ್ಲಿ ಮಕರಂದ್ ದೇಶ್ಪಾಂಡೆ
  • ಬಲ್ವಂತ್ ಸಿಂಗ್ ಪಾತ್ರದಲ್ಲಿ ಶಿವ ರಿಂದಾನಿ
  • ಸೀಮಾ ಪಾತ್ರದಲ್ಲಿ ಉಷಾ
  • ಬಾಲ ರಾಜ್ ಆಗಿ ಇಮ್ರಾನ್ ಖಾನ್

ತಯಾರಿಕೆ ಬದಲಾಯಿಸಿ

ಈ ಚಿತ್ರವು ನಾಸಿರ್ ಹುಸೇನ್‍ರ ಮಗ ಮತ್ತು ಆಮಿರ್ ಖಾನ್‍ರ ಸೋದರಸಂಬಂಧಿ ಮನ್ಸೂರ್ ಖಾನ್ ನಿರ್ದೇಶನದ ಮೊದಲ ಚಲನಚಿತ್ರವಾಗಿತ್ತು. ಈ ಚಿತ್ರವು ಪ್ರತಿಯಾಗಿ ಹಿಂತಿರುಗಿಸದ ಪ್ರೀತಿ ಮತ್ತು ಹೆತ್ತವರ ವಿರೋಧದ ಕಥೆಯಾಗಿತ್ತು. ಖಾನ್ ಒಬ್ಬ ಲಕ್ಷಣವಾಗಿರುವ, ಆರೋಗ್ಯವಂತ ಪಕ್ಕದ ಮನೆಯ ಹುಡುಗ ರಾಜ್‍ನ ಪಾತ್ರವಹಿಸಿದರು.[೫]

ನಾಸಿರ್ ಆಮಿರ್‌ರನ್ನು ನಾಯಕ ನಟನಾಗಿ ಪರಿಚಯಿಸಲು ಬಯಸಿದ್ದರು. ತಮ್ಮ ದೂರದರ್ಶನ ಚಲನಚಿತ್ರ ನೋಡಿದ ಬಳಿಕ ಮನ್ಸೂರ್ ಚಲನಚಿತ್ರವನ್ನು ನಿರ್ದೇಶಿಸುವರು ಎಂದು ಅವರಿಗೆ ಮನವರಿಕೆಯಾಯಿತು.[೧೧][೧೨] ಮೊದಲು ಚಲನಚಿತ್ರದ ಶೀರ್ಷಿಕೆ ಬೇರೆಯಾಗಿತ್ತು. ನಂತರ ಇದಕ್ಕೆ ಮೂಲ ಶೀರ್ಷಿಕೆಯನ್ನು ವಾಪಸು ಇಡಲಾಯಿತು.[೧೩]

ಚಿತ್ರದ ಮಾರಾಟಗಾರಿಕೆಗಾಗಿ, ಆಮಿರ್ ಖಾನ್ ಚಿತ್ರದ ಪ್ರಚಾರದಲ್ಲಿ ಒಳಗೊಂಡಿದ್ದರು. ಅವರು ಮುಖವಿರದ ಭಿತ್ತಿಪತ್ರವಾಗಿದ್ದ ಒಂದು ಹೊರಾಂಗಣ ಜಾಹೀರಾತು ಪ್ರಚಾರದ ಏರ್ಪಾಟು ಮಾಡಿದರು. ತಮ್ಮ ಭಾವ ರಾಜ್ ಜ಼ುಟ್ಷಿ ಸಹಾಯದಿಂದ, ಖಾನ್ ಸುತ್ತಲೂ ಓಡಾಡಿ ಮುಂಬೈಯಾದ್ಯಂತದ ಆಟೊರಿಕ್ಷಾಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸಿದರು.[೧೪]

ಸಂಗೀತ ಬದಲಾಯಿಸಿ

ಧ್ವನಿವಾಹಿನಿಯು ಐದು ಹಾಡುಗಳನ್ನು ಹೊಂದಿದೆ. ಇದನ್ನು ಆನಂದ್-ಮಿಲಿಂದ್ ಜೋಡಿಯು ಸಂಯೋಜಿಸಿತು ಮತ್ತು ಹಾಡುಗಳನ್ನು ಹಿರಿಯ ಗೀತಸಾಹಿತಿ ಮಜರೂಹ್ ಸುಲ್ತಾನ್‍ಪುರಿ ಬರೆದರು. ಎಲ್ಲ ಹಾಡುಗಳನ್ನು ಉದಿತ್ ನಾರಾಯಣ್ ಹಾಡಿದರು. ಅವರು ಆಮಿರ್ ಖಾನ್‍ರಿಗಾಗಿ ಹಾಡಿದರು. ಅಲ್ಕಾ ಯಾಗ್ನಿಕ್ ಜೂಹಿ ಚಾವ್ಲಾರಿಗಾಗಿ ಹಾಡಿದರು.

ಪಂಚಮ್ (ಆರ್‌.ಡಿ.ಬರ್ಮನ್) ಧ್ವನಿವಾಹಿನಿಯನ್ನು ಸಂಯೋಜಿಸಬೇಕಿತ್ತು. ಆದರೆ ಒಬ್ಬ ಯುವ ಸಂಗೀತ ನಿರ್ದೇಶಕನನ್ನು ಬಯಸಿದ ಮನ್ಸೂರ್ ಖಾನ್, ಹಿಂದೆ ಈ ದೂರದರ್ಶನ ಚಲನಚಿತ್ರದಲ್ಲಿ ಅವರೊಂದಿಗೆ ಕೆಲಸಮಾಡಿದ್ದ ಆನಂದ್-ಮಿಲಿಂದ್‍ರಿಗೆ ಕೆಲಸವಹಿಸಿದರು.[೧೧] ಉದಿತ್‍ರ ಧ್ವನಿ ಆಮಿರ್‌ಗೆ ಸರಿಹೊಂದುವುದೆಂದು ಮನ್ಸೂರ್‌ರಿಗೆ ಅನಿಸಿ ಅವರು ಎಲ್ಲ ಹಾಡುಗಳನ್ನು ಹಾಡಲು ಉದಿತ್‍ರನ್ನು ಆಯ್ಕೆ ಮಾಡಿದರು.

"ಪಾಪಾ ಕೆಹತೆ ಹೇ" ಈ ಧ್ವನಿವಾಹಿನಿ ಸಂಗ್ರಹದ ಅತ್ಯಂತ ಹಿಟ್ ಗೀತೆಯಾಗಿತ್ತು.[೧೫] ಈ ಹಾಡನ್ನು ಮಜರೂಹ್ ಸಾಬ್ ೭೦ರ ವಯಸ್ಸಿನಲ್ಲಿ ಬರೆದರು.

ಕಯಾಮತ್ ಸೇ ಕಯಾಮತ್ ತಕ್ ೧೯೮೮ರಲ್ಲಿ ಅತಿ ಹೆಚ್ಚು ಮಾರಾಟವಾದ ಧ್ವನಿವಾಹಿನಿ ಸಂಗ್ರಹವಾಗಿತ್ತು.[೧೬] ಇದು ಟಿ-ಸೀರೀಸ್ ಧ್ವನಿಮುದ್ರಣ ಗುರುತು ಬಿಡುಗಡೆ ಮಾಡಿದ ಮೊದಲ ಪ್ರಮುಖ ಹಿಟ್ ಧ್ವನಿಸಂಗ್ರಹವಾಗಿತ್ತು. ನಾಸಿರ್ ಹುಸೇನ್ ಚಿತ್ರದ ಸಂಗೀತ ಹಕ್ಕುಗಳನ್ನು ಟಿ-ಸೀರೀಸ್ ಸ್ಥಾಪಕ ಗುಲ್ಷನ್ ಕುಮಾರ್‌ರಿಗೆ ಕೇವಲ ರೂ. ೪೦೦,೦೦೦ ಕ್ಕೆ ಮಾರಾಟಮಾಡಿದ್ದರು ಎಂದು ವರದಿಯಾಗಿತ್ತು.[೧೭]

೩೪ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ, ಆನಂದ್-ಮಿಲಿಂದ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು, ಮಜರೂಹ್ ಸುಲ್ತಾನ್‍ಪುರಿ ಅತ್ಯುತ್ತಮ ಗೀತಸಾಹಿತಿ ಪ್ರಶಸ್ತಿಯನ್ನು ಗೆದ್ದರು, ಮತ್ತು ಉದಿತ್ ನಾರಾಯಣ್ "ಪಾಪಾ ಕೆಹತೆ ಹೇ" ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಗೆದ್ದರು.

ಎಲ್ಲ ಹಾಡುಗಳು ಮಜರೂಹ್ ಸುಲ್ತಾನ್‍ಪುರಿ ಅವರಿಂದ ರಚಿತ; ಎಲ್ಲ ಸಂಗೀತ ಆನಂದ್-ಮಿಲಿಂದ್ ಅವರಿಂದ ರಚಿತ

ಸಂ.ಹಾಡುಗಾಯಕ(ರು)ಸಮಯ
1."ಪಾಪಾ ಕೆಹತೆ ಹೇ"ಉದಿತ್ ನಾರಾಯಣ್05:55
2."ಏ ಮೇರೆ ಹಮ್‍ಸಫ಼ರ್"ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್05:53
3."ಅಕೇಲೆ ಹೇ ತೊ ಕ್ಯಾ ಗಮ್ ಹೇ"ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್05:59
4."ಗಜ಼ಬ್ ಕಾ ಹೇ ದಿನ್"ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್04:26
5."ಕಾಹೆ ಸತಾಯೆ"ಅಲ್ಕಾ ಯಾಗ್ನಿಕ್02:19
6."ಪಾಪಾ ಕೆಹತೆ ಹೇ (ದುಃಖಭರಿತ)"ಉದಿತ್ ನಾರಾಯಣ್04:01

ಬಾಕ್ಸ್ ಆಫ಼ಿಸ್ ಬದಲಾಯಿಸಿ

ಕಯಾಮತ್ ಸೇ ಕಯಾಮತ್ ತಕ್ ೫೦ ವಾರಗಳು ಓಡಿದ ಬಳಿಕ ಸುವರ್ಣ ಮಹೋತ್ಸವವನ್ನು ಆಚರಿಸಿತು.[೧೮] ಇದು ದೇಶದಲ್ಲಿ ಒಟ್ಟು ₹೫೦ ದಶಲಕ್ಷದಷ್ಟು ಗಳಿಸಿತು. ಇದು ಆ ವರ್ಷದ ಮೂರನೇ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವೆನಿಸಿಕೊಂಡಿತು.

ಈ ಚಲನಚಿತ್ರವನ್ನು ಚೈನಾದಲ್ಲಿ ಕೂಡ ೧೯೯೧ರಲ್ಲಿ ಬಿಡುಗಡೆ ಮಾಡಲಾಯಿತು. ಇದು ಚೈನಾದಲ್ಲಿ ಬಿಡುಗಡೆಗೊಂಡ ಆಮಿರ್‌ರ ಮೊದಲ ಚಲನಚಿತ್ರವಾಗಿತ್ತು.

ಪ್ರಶಸ್ತಿ ಗೌರವಗಳು ಬದಲಾಯಿಸಿ

೩೪ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು

  • ಅತ್ಯುತ್ತಮ ಚಲನಚಿತ್ರ - ಗೆಲುವು
  • ಅತ್ಯುತ್ತಮ ನಿರ್ದೇಶಕ - ಮನ್ಸೂರ್ ಖಾನ್ - ಗೆಲುವು
  • ಅತ್ಯುತ್ತಮ ಪುರುಷ ಪ್ರಥಮ ಪ್ರವೇಶ - ಆಮಿರ್ ಖಾನ್ - ಗೆಲುವು
  • ಅತ್ಯುತ್ತಮ ಮಹಿಳಾ ಪ್ರಥಮ ಪ್ರವೇಶ - ಜೂಹಿ ಚಾವ್ಲಾ - ಗೆಲುವು
  • ಅತ್ಯುತ್ತಮ ಸಂಗೀತ ನಿರ್ದೇಶಕ - ಆನಂದ್-ಮಿಲಿಂದ್ - ಗೆಲುವು
  • ಅತ್ಯುತ್ತಮ ಹಿನ್ನೆಲೆ ಗಾಯಕ - ಉದಿತ್ ನಾರಾಯಣ್ - ಗೆಲುವು
  • ಅತ್ಯುತ್ತಮ ಚಿತ್ರಕಥೆ - ನಾಸಿರ್ ಹುಸೇನ್ - ಗೆಲುವು
  • ಅತ್ಯುತ್ತಮ ಛಾಯಾಗ್ರಹಣ - ಕಿರನ್ ದೇವ್‍ಹನ್ಸ್ - ಗೆಲುವು
  • ಅತ್ಯುತ್ತಮ ನಟ - ಆಮಿರ್ ಖಾನ್ - ನಾಮನಿರ್ದೇಶಿತ
  • ಅತ್ಯುತ್ತಮ ನಟಿ - ಜೂಹಿ ಚಾವ್ಲಾ - ನಾಮನಿರ್ದೇಶಿತ
  • ಅತ್ಯುತ್ತಮ ಗೀತಸಾಹಿತಿ - ಮಜರೂಹ್ ಸುಲ್ತಾನ್‍ಪುರಿ - ಗೆಲುವು

೩೬ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ಹಿತಕರ ಮನೋರಂಜನೆ ಒದಗಿಸುವ ಅತ್ಯಂತ ಜನಪ್ರಿಯ ಚಲನಚಿತ್ರ - ಗೆಲುವು
  • ವಿಶೇಷ ಉಲ್ಲೇಖ - ಆಮಿರ್ ಖಾನ್ - ಗೆಲುವು

ರೀಮೇಕ್‍ಗಳು ಬದಲಾಯಿಸಿ

ಈ ಚಿತ್ರವನ್ನು ತೆಲುಗಿನಲ್ಲಿ ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ ಎಂದು ರೀಮೇಕ್ ಮಾಡಲಾಯಿತು. ಇದನ್ನು ಬಾಂಗ್ಲಾದೇಶದಲ್ಲಿ ಕೂಡ ಕೆಯ್ಮಾತ್ ಠೇಕೆ ಕೆಯಾಮತ್ ಎಂದು ೧೯೯೩ರಲ್ಲಿ ರೀಮೇಕ್ ಮಾಡಲಾಯಿತು.

ಚಿತ್ರದ ಕೊಡುಗೆ ಬದಲಾಯಿಸಿ

ಈ ಚಿತ್ರವು ಈಗ ಅಭಿಮಾನಿಗಳಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದಿದೆ.[೧೯] ಬಾಲಿವುಡ್ ಹಂಗಾಮಾ ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಮಾರ್ಗ ಪ್ರವರ್ತಕ ಚಲನಚಿತ್ರವೆಂದು ಗುರುತಿಸಿತು.[೨೦]

ಈ ಚಿತ್ರವು ಹಿಂದಿ ಸಿನಿಮಾವನ್ನು ಪುನರುಜ್ಜೀವನಗೊಳಿಸಿತು ಎಂದು ಗೌತಮ್ ಚಿಂತಾಮಣಿ ಗುರುತಿಸುತ್ತಾರೆ.[೮] ೧೯೮೦ರ ದಶಕದ ದ್ವಿತೀಯಾರ್ಧದಲ್ಲಿ, ಹೆಚ್ಚುತಿರುವ ಹಿಂಸಾಚಾರ, ಸಂಗೀತದ ಮಾಧುರ್ಯದ ಗುಣಮಟ್ಟದಲ್ಲಿ ಪತನ, ವೀಡಿಯೊ ಕೃತಿಚೌರ್ಯದಲ್ಲಿ ಏರಿಕೆಯ ಕಾರಣ ಹಿಂದಿ ಸಿನಿಮಾ ಬಾಕ್ಸ್ ಆಫ಼ಿಸ್ ಉತ್ಪಾದನೆಯಲ್ಲಿ ಕುಗ್ಗುವಿಕೆಯನ್ನು ಅನುಭವಿಸುತ್ತಿತ್ತು. ಪರಿಣಾಮವಾಗಿ ಮಧ್ಯಮ ವರ್ಗದ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗುತ್ತಿದ್ದಿಲ್ಲ. ಕಯಾಮತ್ ಸೇ ಕಯಾಮತ್ ತಕ್ ಚಿತ್ರದ ನವಯೌವನ, ಹಿತಕರ ಮನೋರಂಜನೆ, ಭಾವನಾತ್ಮಕ ಅಂಶಗಳು ಮತ್ತು ಪ್ರಬಲ ಮಾಧುರ್ಯಗಳು ಕುಟುಂಬ ಪ್ರೇಕ್ಷಕರನ್ನು ವಾಪಸು ದೊಡ್ಡ ಪರದೆಗೆ ಸೆಳೆಯಿತು ಎಂದು ಗುರುತಿಸಲಾಗಿದೆ.[೨೦] ಈ ಚಿತ್ರವು ಬಾಲಿವುಡ್‍ನಲ್ಲಿ ಪ್ರಣಯಪ್ರಧಾನ ಸಂಗೀತ ಶೈಲಿಯನ್ನು ಪುನಃ ಸೃಷ್ಟಿಸಿತು ಎಂದು ಗುರುತಿಸಲಾಗಿದೆ.[೬] ಚಿಂತಾಮಣಿ ಇದನ್ನು ಕೊನೆಯ ಮೂರು ದಶಕಗಳ ಅತ್ಯಂತ ಮಹತ್ವದ ಚಲನಚಿತ್ರಗಳಲ್ಲಿ ಒಂದೆಂದು ಗುರುತಿಸುತ್ತಾರೆ.

ಉಲ್ಲೇಖಗಳು ಬದಲಾಯಿಸಿ

  1. "Qayamat Se Qayamat Tak release date". NDTV. 28 April 2013. Archived from the original on 26 ಡಿಸೆಂಬರ್ 2018. Retrieved 28 April 2013.
  2. "Fifty shades of K". ದಿ ಟೈಮ್ಸ್ ಆಫ್‌ ಇಂಡಿಯಾ. 22 February 2015.
  3. "Domestic Box Office". 2013. Retrieved 4 November 2014.
  4. Panjwani, Narendra (2006). Emotion pictures: cinematic journeys into the Indian self (in ಇಂಗ್ಲಿಷ್). Rainbow Publishers. p. 112. ISBN 9788186962725.
  5. ೫.೦ ೫.೧ Tejaswini Ganti (2004). Bollywood: A Guidebook to Popular Hindi Cinema. Psychology Press. pp. 122–123. ISBN 978-0-415-28854-5.
  6. ೬.೦ ೬.೧ Viswamohan, Aysha Iqbal; John, Vimal Mohan (2017). Behind the Scenes: Contemporary Bollywood Directors and Their Cinema (in ಇಂಗ್ಲಿಷ್). SAGE Publications. p. 30. ISBN 9789386062406.
  7. Ray, Kunal (18 December 2016). "Romancing the 1980s". ದಿ ಹಿಂದೂ (in Indian English).
  8. ೮.೦ ೮.೧ Chintamani, Gautam (2016). Qayamat Se Qayamat Tak: The Film That Revived Hindi Cinema (in ಇಂಗ್ಲಿಷ್). HarperCollins. ISBN 9789352640980.
  9. "India Today". India Today. Living Media. 18: 52. 1993. Anand-Milind did six films before hitting the jackpot with Qayamat se Qayamat Tak in 1988.
  10. Booth, Gregory D. (2008). Behind the Curtain: Making Music in Mumbai's Film Studios. Oxford University Press. p. 80. ISBN 978-0-19-971665-4.
  11. ೧೧.೦ ೧೧.೧ "The man who made Aamir Khan a star". www.rediff.com.
  12. Srinivasan, Pankaja (5 May 2013). "Silver lining..." The Hindu – via www.thehindu.com.
  13. Manwani, Akshay (6 November 2016). "The Majrooh Sultanpuri of writers". The Hindu – via www.thehindu.com.
  14. "The marketing genius – Aamir Khan". Filmfare (in ಇಂಗ್ಲಿಷ್). 14 March 2016.
  15. "Hindi films: There's now big bucks in audio rights". India Today. 31 December 1992. Retrieved 21 May 2013.
  16. "Music Hits 1980-1989". Box Office India. 5 February 2010. Archived from the original on 5 February 2010.
  17. "Official exchange rate (LCU per US$, period average)". World Bank. 1988. Retrieved 9 December 2018.
  18. Jain, Madhu (15 May 1990). "Hindi cinema makes an emphatic return to romance". India Today. Archived from the original on 6 February 2019. Retrieved 6 February 2019.
  19. Chatterjee, Rituparna (5 August 2011). "Holi to Munna Bhai: Aamir Khan, Bollywood's evolving genius". CNN-IBN. Archived from the original on 25 ಫೆಬ್ರವರಿ 2014. Retrieved 20 February 2014.
  20. ೨೦.೦ ೨೦.೧ Vijaykar, Rajeev (18 June 2012). "Qayamat Se Qayamat Tak: Turning-point". Bollywood Hungama. Archived from the original on 20 June 2012. Retrieved 26 January 2014.

ಹೊರಗಿನ ಕೊಂಡಿಗಳು ಬದಲಾಯಿಸಿ