ಈಶ್ವರ ಚಂದ್ರ (ಜುಲೈ ೧೪, ೧೯೪೬) ಎಂದು ಪ್ರಸಿದ್ಧರಾದ ಎಚ್. ಆರ್. ಈಶ್ವರಚಂದ್ರ ವಿದ್ಯಾಸಾಗರ ಅವರು ಕನ್ನಡದ ಜನಪ್ರಿಯ ಕಥೆಗಾರರಲ್ಲೊಬ್ಬರಾಗಿದ್ದಾರೆ.

ಎಚ್. ಆರ್. ಈಶ್ವರ ಚಂದ್ರ ವಿದ್ಯಾಸಾಗರ
ಜನನಜುಲೈ ೧೪, ೧೯೪೬
ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ
ಕಾವ್ಯನಾಮಈಶ್ವರಚಂದ್ರ
ವೃತ್ತಿಕಥೆಗಾರರು, ಭಾರತೀಯ ವಿಮಾನ ಕಾರ್ಖಾನೆಯಲ್ಲಿ ನಿವೃತ್ತ ತಂತ್ರಜ್ಞರು
ವಿಷಯಕನ್ನಡ ಸಾಹಿತ್ಯ

ಜೀವನ ಬದಲಾಯಿಸಿ

ಕನ್ನಡದ ಪ್ರಸಿದ್ಧ ಕಥೆಗಾರ ಈಶ್ವರಚಂದ್ರರು ಜುಲೈ ೧೪, ೧೯೪೬ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆಯಲ್ಲಿ ಜನಿಸಿದರು. ತಂದೆ ಎಚ್.ಎನ್. ರಾಮರಾವ್ ಅವರು ಮತ್ತು ತಾಯಿ ಪದ್ಮಾವತಮ್ಮನವರು. ಈಶ್ವರ ಚಂದ್ರರ ಪ್ರಾರಂಭಿಕ ಶಿಕ್ಷಣ ಚನ್ನಗಿರಿ, ಸಾಗರ, ಶಿವಮೊಗ್ಗಗಳಲ್ಲಿ ನಡೆದವು. ಮುಂದೆ ಭದ್ರಾವತಿಯಲ್ಲಿ ಡಿಪ್ಲೊಮಾ ಪೂರೈಸಿದ ಅವರು ಬೆಂಗಳೂರು ವಿಮಾನ ಕಾರ್ಖಾನೆಯ ‘ವಿಮಾನ ಸಂಶೋಧನೆ ಮತ್ತು ವಿನ್ಯಾಸ’ ಕೇಂದ್ರವನ್ನು ಸೇರಿ ನಲವತ್ತು ವರ್ಷಗಳ ಸುದೀರ್ಘಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು ತಳೆದ ಈಶ್ವರಚಂದ್ರರು ತಂದೆ ಹೇಳುತ್ತಿದ್ದ ಭಾರತ, ಭಾಗವತ, ರಾಮಾಯಣ ಕಾವ್ಯ, ಕಥೆಗಳಿಂದ ಪ್ರೇರಣೆ ಪಡೆದರು. ಉದ್ಯೋಗದ ನಡುವೆಯೂ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪರೀಕ್ಷೆಯಲ್ಲಿ ಐದು ಚಿನ್ನದ ಪದಕ, ಮೂರು ನಗದು ಬಹುಮಾನ ಪಡೆದು ಉತ್ತೀರ್ಣರಾದ ಹೆಗ್ಗಳಿಕೆ ಅವರದು.

ಕಥಾಲೋಕದಲ್ಲಿ ಬದಲಾಯಿಸಿ

ಈಶ್ವರಚಂದ್ರರ ಹಲವಾರು ಸಣ್ಣಕಥೆ, ಪ್ರಬಂಧ, ಲೇಖನಗಳು ನಾಡಿನ ಪ್ರಖ್ಯಾತ ಬಹಳಷ್ಟು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈಶ್ವರ ಚಂದ್ರ ಕಥಾಸಂಕಲನಗಳಲ್ಲಿ ರಾತ್ರಿರಾಣಿ, ತೀರ, ಗುಂಪಿನಲ್ಲಿ ಕಂಡ ಮುಖ, ಮುನಿತಾಯಿ, ಕತ್ತಲಗರ್ಭ ಮುಂತಾದವು ಸೇರಿವೆ. ಒಂದೇ ಸೂರಿನ ಕೆಳಗೆ, ಸಿಮೆಂಟ್ ಮನುಷ್ಯರು ಈಶ್ವರ ಚಂದ್ರರ ಕಾದಂಬರಿಗಳು. ಮಕ್ಕಳ ಸಾಹಿತ್ಯದಲ್ಲೂ ಗಣನೀಯ ಕಾಯಕ ಮಾಡಿರುವ ಈಶ್ವರ ಚಂದ್ರರು ಮಕ್ಕಳ ನರೇಂದ್ರ ವಿವೇಕಾನಂದ, ಭಗತ್‌ಸಿಂಗ್, ಮಾರ್ಕೊನಿ, ಜಾರ್ಜ್ ಸೈಮನ್ ಓಂ, ಅ.ನ.ಕೃಷ್ಣರಾವ್, ಸುಬೋಧ ರಾಮರಾವ್, ಕಲ್ಯಾಣಸ್ವಾಮಿ, ಬೆಂಗಳೂರು ಜಿಲ್ಲೆಯ ದರ್ಶನ, ಗೆಳೆತನ, ಬೆಂಗಳೂರು ನಗರ ದರ್ಶನ, ಕೆಂಪೇಗೌಡ ನಗರ ದರ್ಶನ, ಚೈತ್ರಪಲ್ಲವ, ಸುವರ್ಣಶಕ್ತಿ, ಎಚ್.ಎ.ಇ.ಎ. ಹೆಜ್ಜೆ ಗುರುತುಗಳು, ನಕಾಶೆ ಕಲೆ, ವೆಲ್ಡಿಂಗ್ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಎಕ್ಕೋರಿಯ ಕನಸು, ನಮ್ಮ ಭೂ ಸೇನೆ, ಬ್ರಹ್ಮಾಂಡದ ಬಳುವಳಿ, ಕಿವುಡು ವನದೇವತೆ, ಅಕ್ಬರನಿಂದ ಔರಂಗಜೇಬ್‌ವರೆಗೆ, ಭೂಕಂಪ, ನಾಳೆ ಸಂಭವಿಸಿದ್ದು ಮೊದಲಾದವು ಅವರ ಅನುವಾದ ಕೃತಿಗಳು. ಈಶ್ವರಚಂದ್ರರು ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞೆ ಸಂಘ - ಇಸ್ಕಾನ್ ಅವರಿಗಾಗಿ ೧೩೦೦ ಪುಟಗಳ ಶ್ರೀಮದ್ ಭಾಗವತವನ್ನು ರಚಿಸಿರುವುದಲ್ಲದೆ, ೧೪೦೦ ಪುಟಗಳ ಶ್ರೀ ಚೈತನ್ಯ ಚರಿತಾಮೃತವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಚಲನಚಿತ್ರಗಳಲ್ಲಿ ಬದಲಾಯಿಸಿ

ಈಶ್ವರ ಚಂದ್ರರ ‘ಮುನಿತಾಯಿ’ ಪುಟ್ಟಣ್ಣ ಕಣಗಾಲರ ಕಥಾಸಂಗಮ ಚಿತ್ರದ ಮೂರು ಸುಂದರ ಕಥೆಗಳಲ್ಲಿ ಒಂದು. ಈಶ್ವರ ಚಂದ್ರರ ‘ಹಬ್ಬಿದಾಮಲೆ ಮಧ್ಯದೊಳಗೆ ಕೃತಿ ‘‘ಕಾಡಿಗೆ ಹೋದವರು’ ಎಂಬ ಹೆಸರಿನಿಂದ ಚಲನಚಿತ್ರಗೊಂಡಿದೆ.

ಇತರ ಭಾಷೆಗಳಿಗೆ ಬದಲಾಯಿಸಿ

ಈಶ್ವರ ಚಂದ್ರರ ಕೃತಿಗಳು ಇತರ ಹಲವಾರು ಭಾಷೆಗಳಿಗೆ ತರ್ಜುಮೆ ಗೊಂಡಿವೆ. ಅವರ ಭಗತ್‌ಸಿಂಗ್ ಕೃತಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ; 'ಒಂದೇ ಸೂರಿನ ಕೆಳಗೆ' ಕೃತಿ 'ಒಕೇ ಗೂಟಲೋ' ಎಂಬ ಹೆಸರಿನಿಂದ ತೆಲುಗಿಗೆ; ಸಿಮೆಂಟ್ ಮನುಷ್ಯರು ಕೃತಿ 'ಸಿಮೆಂಟ್ ಮನಿದರ್ಗಳ್' ಎಂದು ತಮಿಳಿಗೆ; ಮುನಿತಾಯಿ ಕೃತಿ ‘ಮುನಿತಾಯಿ ವ ಇತರ ಕಥಾ’ ಎಂದು ಮರಾಠಿಗೆ ಅನುವಾದಗೊಂಡಿವೆ. ಇದಲ್ಲದೆ ಇವರ ಅನೇಕ ಬಿಡಿ ಕಥೆಗಳೂ ಸಹಾ ತೆಲುಗು, ತಮಿಳು, ಮರಾಠಿ, ಉರ್ದು, ಮಲೆಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗೊಂಡಿವೆ.

ಪ್ರಶಸ್ತಿ ಗೌರವಗಳು ಬದಲಾಯಿಸಿ

  • ‘ತೀರ’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
  • ಮಕ್ಕಳ ನರೇಂದ್ರ ವಿವೇಕಾನಂದ ಕೃತಿಗೆ ಸಾಹಿತ್ಯ ಸ್ಪರ್ಧೆ ವಿಶೇಷ ಪ್ರಶಸ್ತಿ
  • ಮುನಿತಾಯಿ ಕಥಾಸಂಕಲನಕ್ಕೆ ದೇವರಾಜ ಬಹದ್ದೂರ್ ಪ್ರಶಸ್ತಿ
  • ಚಿತ್ರಪ್ರೇಮಿಗಳ ಸಂಘದ ಪ್ರಶಸ್ತಿ
  • ಹಲವಾರು ಸಂಘ ಸಂಸ್ಥೆಗಳಿಂದ ರಾಜ್ಯೋತ್ಸವ ಸನ್ಮಾನ
  • ಚೆನ್ನಗಿರಿ ತಾಲ್ಲೂಕು ಸಮ್ಮೇಳನ
  • ಎಚ್.ಎ.ಎಲ್. ಕೇಂದ್ರೀಯ ಕನ್ನಡ ಸಂಘದ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
  • ........ ಇನ್ನೂ ಅನೇಕ ಪ್ರಶಸ್ತಿ ಗೌರವಗಳು ಈಶ್ವರ ಚಂದ್ರರಿಗೆ ಸಂದಿವೆ.

ಮಾಹಿತಿ ಕೃಪೆ ಬದಲಾಯಿಸಿ

ಕಣಜ Archived 2016-06-09 ವೇಬ್ಯಾಕ್ ಮೆಷಿನ್ ನಲ್ಲಿ.