ಸ್ವಾಮಿ ಜೋ ಮೇರಿ ಲೋಬೊ

'ಕಿರು ಪರಿಚಯ' ಬದಲಾಯಿಸಿ

ಸ್ವಾಮಿ ಜ್ಯೋ ಮೇರಿ ಮಾರ್ಕ್ ಲೋಬೊ, ಓರ್ವ ಕ್ರೈಸ್ತ ಗುರು. ಮಹಾನ್ ಸಾಧಕರು. ಮೂಲತಃ ದಕ್ಷಿಣ ಕನ್ನಡದವರಾದ ಗುರುವರ್ಯರು ಹುಟ್ಟಿದ್ದು ಬೆಳ್ತಂಗಡಿಯಲ್ಲಿ. ತಂದೆ ಶ್ರಿ ಫ್ರಾನ್ಸಿಸ್ ಕ್ಸೇವಿಯರ್ ಲೋಬೊ, ತಾಯಿ ಲಿಲ್ಲಿ ಕ್ರಿಸ್ಟಿನ್ ಪಿಂಟೊ. ಜನನ ೧೯೩೩, ಸೆಪ್ಟಂಬರ್ ೭ ರಂದು. ೧೯೫೯, ಏಪ್ರಿಲ್ ೧೫ ರಂದು ಯಾಜಕದೀಕ್ಷೆ. ದೀಕ್ಷೆಯ ನಂತರ ಗುರುವರ್ಯರು ಮೈಸೂರಿನ ಸಂತ ಜೋಸೆಫರ ಪ್ರಧಾನಾಲಯದಲ್ಲಿ ಸಹಾಯಕ ಗುರುವಾಗಿ ಮೊದಲು ಸೇವೆ ಸಲ್ಲಿಸಿದರು. ಅತಿ ವಂ. ಮಥಿಯಾಸ್ ಫೆರ್ನಾ೦ಡಿಸ್ ರು ಆಗ ಅಲ್ಲಿನ ಪ್ರಧಾನ ಗುರುಗಳಾಗಿದ್ದರು. ಅಂದಿನ ಮೈಸೂರು ಧರ್ಮಕ್ಷೇತ್ರವು, ಇಂದಿನ ಚಿಕ್ಕಮಗಳೂರು, ಶಿವಮೊಗ್ಗ ಧರ್ಮಕ್ಷೇತ್ರಗಳನ್ನೊಳಗೊಂಡಂತೆ ಬೃಹತ್ ಧರ್ಮಕ್ಷೇತ್ರವಾಗಿತ್ತು. ಮುಂದೆ ಮೈಸೂರು ಧರ್ಮಕ್ಷೇತ್ರವು ಇಬ್ಬಾಗವಾದಾಗ, ಇವರು ಹೊಸ

 
Right

ಚಿಕ್ಕಮಗಳೂರು ಧರ್ಮಕ್ಷೇತ್ರದಲ್ಲಿ ಭದ್ರಾವತಿ ಧರ್ಮಕೇಂದ್ರದ ಗುರುವಾಗಿ ನೇಮಕಗೊಂಡರು. ಅನಂತರ 'ಜೋಗ್ ಫಾಲ್ಸ್'ಗೆ, ಅಲ್ಲಿಂದ ಮಲೆನಾಡಿನ 'ಹಿರೇಬೈಲ್', 'ಕಡೂರು' ಧರ್ಮಕೇದ್ರಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದರು.

ತಮ್ಮ ಸೇವಾವಧಿಯಲ್ಲಿ ಗುರುವರ್ಯರು ಅನೇಕ ಶಾಲೆಗಳನ್ನು ತೆರೆದರು. ಅವುಗಳಲ್ಲಿ ಭದ್ರಾವತಿಯ 'ನಿರ್ಮಲ ಕಾನ್ವೆಂಟ್ ಕನ್ನಡ ಶಾಲೆ' ಮತ್ತು 'ಸೈಂಟ್ ಚಾರ್ಲ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ', ಜೊಗ್ ಫಾಲ್ಸ್ ನ 'ಕ್ರಿಸ್ತ ಪ್ರಕಾಶ ಕಾನ್ವೆಂಟ್ ಶಾಲೆ', ಕಡೂರಿನ 'ಪ್ರೇಮಜ್ಯೊತಿ ಶಾಲೆ' ಪ್ರಮುಖವಾದವು.

ಕಡೂರಿನ ನಿತ್ಯಾಧಾರ ಮಾತೆ ದೇವಾಲಯದ ಗುರುವಾಗಿದ್ದ ಸಮಯದಲ್ಲೇ ಸಮಾಜ ಸೇವೆಯತ್ತ ಮುಖ ಮಾಡಿದ್ದ ಸ್ವಾಮಿ ಜೋ ಮೇರಿ ಲೋಬೊರವರು,

  • ತನಗಾಗಿ ಅರಳುವುದು ಹೂವಲ್ಲ,
  • ತನಗಾಗಿ ಉರಿಯುವುದು ದೀಪವಲ್ಲ,
  • ತನಗಾಗಿ ಬಾಳುವುದು ಬಾಳಲ್ಲ

ಎಂದುಕೊಂಡು ಪ್ರಸ್ತುತ ಸಮಾಜ ಸೇವಾಕಾರ್ಯದಲ್ಲಿ ತಮ್ಮನ್ನು ಮುಡುಪಾಗಿರಿಸಿಕೊಂಡಿದ್ದಾರೆ. ಅವರು ಕಡೂರು ತಾಲೂಕಿನ ಬೀರೂರು ಎಂಬಲ್ಲಿ ತಮ್ಮ ಸಂಗಡಿಗರೊಂದಿಗೆ ಸೇರಿ ಶ್ರೀ ಕ್ರಿಸ್ತಶರಣ ಸಮಾಜ ವಿಕಾಸ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಎಲ್ಲಾ ಸದಸ್ಯರ ಒತ್ತಡಕ್ಕೆ ಮಣಿದು ಅದರ ನಿರ್ದೇಶಕರೂ ಆಗಿದ್ದಾರೆ. ಒಂದು ಹಳ್ಳಿಯು ಏಳಿಗೆಯನ್ನು ಸಾಧಿಸಬೇಕಾದರೆ ಆ ಹಳ್ಳಿಯ ನಾರಿಯರಿಂದಲೇ ಅದು ಸಾಧ್ಯ ಮತ್ತು ನಾರಿಯರ ಮನ ಗೆಲ್ಲಲು ಸ್ವಯಂ ನಾರಿಯೇ ಬೇಕು, ಎಂಬುದನ್ನು ಮನಗಂಡ ಗುರುವರ್ಯರು ಆ ನಿಟ್ಟಿನಲ್ಲಿ ದಾಪುಗಾಲಿಟ್ಟು ಅನೇಕ ಯುವತಿಯರಿಗೆ ಸಮಾಜ ಸೇವೆಗೆ ಸಂಬಂಧಿಸಿದ ತರಬೇತಿಯನ್ನು ನೀಡಿ, ಅವರ ಮೂಲಕ ಗ್ರಾಮೀಣ ಮಹಿಳೆಯರ ಬಳಿಗೆ ತಲುಪಿದ್ದಾರೆ. ಗ್ರಾಮೀಣ ಜನರ ಸೇವೆಯೇ ತಮ್ಮ ಪರಮ ಗುರಿಯೆಂದು ಬಗೆದು, ಜಾತೀಯ ಮತ್ತು ಧಾರ್ಮಿಕ ಗಂಧ, ಗಾಳಿಯಿಂದ ತಾವೂ ದೂರವುಳಿದರಲ್ಲದೇ ಹಳ್ಳಿಯ ಜನರನ್ನೂ ದೂರವಿರಿಸಿ ಸೇವೆಯನ್ನು ಮುಕ್ತವಾಗಿಸಿದ್ದಾರೆ, ಇಲ್ಲಿ ಹಿಂದು-ಕ್ರೈಸ್ತರೆಂಬ ತಾರತಮ್ಯವಿಲ್ಲ; ಮಾತ್ರವಲ್ಲ ಹಿ೦ದುಗಳ ನಡುವಿನ ಭಿನ್ನತೆ, ಅಸ್ಪೃಷ್ಯತೆಗಳನ್ನೆಲ್ಲ ಒತ್ತಟ್ಟಿಗಿರಿಸಿ ನಾವೆಲ್ಲ ಒಂದು ಎಂಬುದನ್ನು ಅವರಲ್ಲಿ ಬಿಂಬಸುವ ಪ್ರಯತ್ನ ಮಾಡಿದ್ದಾರೆ. ಆ ಜನರನ್ನು ಪ್ರಜ್ಞಾವಂತರನ್ನಾಗಿಸುವ ಕಂಕಣ ತೊಟ್ಟು, ಹಳ್ಳಿಯನ್ನೂ, ಹಳ್ಳಿಯ ಜನರನ್ನೂ ಪರಿವರ್ತಿಸುತ್ತಿದ್ದಾರೆ. ಒಳ್ಳೆಯ ನಾಗರೀಕರನ್ನಾಗಿ ಮಾಡುತ್ತಿದ್ದಾರೆ. ಅವರ ಸತತ ಪ್ರಯತ್ನದ ಫಲವಾಗಿ ಇಂದು ಅನೇಕ ಹಳ್ಳಿಗಳಲ್ಲಿ ಪರಿವರ್ತನೆಯ ಹೊಸ ತಂಗಾಳಿ ಬೀಸುತ್ತಿದೆ.