ಚಿಕ್ಕಮಗಳೂರು ಧರ್ಮಕ್ಷೇತ್ರ

ಕರ್ನಾಟಕದ ಕ್ರೈಸ್ತರ ಧಾರ್ಮಿಕ ಸೌಲಭ್ಯಗಳ ಪೂರೈಕೆಗಾಗಿ ಉದಯಿಸಿದ 'ಚಿಕ್ಕಮಗಳೂರು ಧರ್ಮಕ್ಷೇತ್ರ' ಹುಟ್ಟುವ ಪೂರ್ವದಲ್ಲಿ ಮೈಸೂರು ಧರ್ಮಕ್ಷೇತ್ರಕ್ಕೆ ಸೇರಿತ್ತು. ೧೯೬೩, ನವೆಂಬರ್ ೧೬ರಲ್ಲಿ ಮೈಸೂರು ಧರ್ಮಕ್ಷೇತ್ರದಿಂದ ಪ್ರತ್ಯೇಕಗೊಂಡ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳು ಒಟ್ಟಾಗಿ ಚಿಕ್ಕಮಗಳೂರು ಧರ್ಮಕ್ಷೇತ್ರವಾಗಿ ಜನ್ಮ ತಾಳಿತು. ಇದರ ಮೊದಲ ಧರ್ಮಾಧ್ಯಕ್ಷರಾಗಿ ಅತಿ ಪೂಜ್ಯ ಆಲ್ಫೋನ್ಸಸ್ ಮಥಿಯಾಸ್ ರವರು ನೇಮಿತರಾದರು. ಬಹು ಬೇಗನೆ ಇವರು ಜನಾನುರಾಗಿ ಧರ್ಮಾಧ್ಯಕ್ಷರಾಗಿ ಜನಮನ್ನಣೆ ಗಳಿಸಿದರು.

ಸಂತ ಜೋಸೆಫರನ್ನು ಪಾಲಕರನ್ನಾಗಿ ಹೊಂದಿರುವ ಈ ಧರ್ಮಕ್ಷೇತ್ರದಿಂದ ೧೯೮೯ರಲ್ಲಿ ಶಿವಮೊಗ್ಗ ಜಿಲ್ಲೆಯು ಪ್ರತ್ಯೇಕಗೊಂಡು ಹೊಸ ಧರ್ಮಕ್ಷೇತ್ರವಾಗಿ ಉದಯಿಸಿತು.

ಅತಿ ಪೂಜ್ಯ ಅಂತೋಣಿ ಸ್ವಾಮಿಯವರು ಈಗ ಈ ಧರ್ಮಕ್ಷೇತ್ರದ ಧರ್ಮಾಧಿಕಾರಿಯಾಗಿದ್ದಾರೆ. ಇವರ ನಿಲಯವಾದ 'ಜ್ಯೋತಿ ನಿಲಯ'ವು ಚಿಕ್ಕಮಗಳೂರಿನಿಂದ ಕಡೂರಿಗೆ ಹೋಗುವ ಮಾರ್ಗದಲ್ಲಿದೆ. ಪ್ರಸ್ತುತ ಈ ಸ್ಥಳವನ್ನು 'ಜ್ಯೋತಿ ನಗರ'ವೆಂದು ಕರೆಯುತ್ತಾರೆ.

ಕನ್ನಡ, ಕೊಂಕಣಿ, ಮಲಯಾಳಮ್, ತುಳು, ತಮಿಳು ಮತ್ತು ಇಂಗ್ಲಿಷ್ ಈ ಪ್ರದೇಶದ ಕ್ರೈಸ್ತರ ಭಾಷೆಗಳು. ೧೪,೦೧೫ ಚದರ ಕಿಲೋಮೀಟರ್ ಗಳ ವ್ಯಾಪ್ತಿಯ ಈ ಧರ್ಮಕ್ಷೇತ್ರದ ಜನಸಂಖ್ಯೆ ಸುಮಾರು ೨೮,೬೦,೭೭೩. ಇವರಲ್ಲಿ ಕ್ರೈಸ್ತರ ಸಂಖ್ಯೆ ಸುಮಾರು ೩೮ ಸಾವಿರ ಅಂದರೆ ಶೇ.೧.೩೩.