ಟಿ. ಎಸ್. ಗೋಪಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumbnail|right|ಟಿ. ಎಸ್. ಗೋಪಾಲ್ ಟಿ. ಎಸ್. (ತಿರು ಶ್ರೀನಿವಾ...
( ಯಾವುದೇ ವ್ಯತ್ಯಾಸವಿಲ್ಲ )

೨೧:೩೪, ೩೦ ಮಾರ್ಚ್ ೨೦೧೬ ನಂತೆ ಪರಿಷ್ಕರಣೆ

ಟಿ. ಎಸ್. (ತಿರು ಶ್ರೀನಿವಾಸಾಚಾರ್ಯ) ಗೋಪಾಲ್ ಕನ್ನಡದ ಲೇಖಕರು. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳನ್ನು ಕುರಿತ ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ[೧].

ಟಿ. ಎಸ್. ಗೋಪಾಲ್

ವೃತ್ತಿಜೀವನ

ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕಗಳೊಡನೆ ಬಿ. ಎ. ಹಾಗೂ ಎಂ. ಎ. ಪದವಿ ಪಡೆದ ಟಿ. ಎಸ್. ಗೋಪಾಲ್ ದಕ್ಷಿಣ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದಾರೆ. ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ ಅವರು ೨೦೧೩ರಲ್ಲಿ ಸೇವೆಯಿಂದ ಸ್ವಯಂನಿವೃತ್ತಿ ಪಡೆದುಕೊಂಡಿದ್ದಾರೆ.

ನಾಗರಹೊಳೆ ವನ್ಯಜೀವಿ ಸಂರಕ್ಷಣಾ ಶಿಕ್ಷಣ ಯೋಜನೆಯ ಸಂಯೋಜಕರಾಗಿ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿಮಂಡಳಿಯ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಣೆಯ ಅನುಭವ ಕೂಡ ಅವರಿಗಿದೆ. 'ನಿಸರ್ಗ' ಹಾಗೂ 'ಹಸಿರು-ಉಸಿರು' ಪತ್ರಿಕೆಗಳ ಸಂಪಾದಕತ್ವವನ್ನೂ ನಿರ್ವಹಿಸಿದ್ದಾರೆ.

ಸಾಹಿತ್ಯಕೃಷಿ

ಹಲವಾರು ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಹಾಗೂ ವನ್ಯಜೀವಿಸಂರಕ್ಷಣೆಯನ್ನು ಕುರಿತ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಚುರವಾಗಿವೆ. ವನ್ಯಜೀವನ ಹಾಗೂ ಪರಿಸರವನ್ನು ಕುರಿತ ಅನೇಕ ಆಕಾಶವಾಣಿ ಕಾರ್ಯಕ್ರಮ ಸರಣಿಗಳನ್ನೂ ನಿರ್ವಹಿಸಿದ್ದಾರೆ.

ಕನ್ನಡ ಕಲಿಕೆಯ ಬಗ್ಗೆ ವಿದ್ಯಾರ್ಥಿಗಳಿಗಾಗಿ ಬರೆದ 'EASY ಗ್ರಾಮರ್' ಅಂಕಣ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಕರ್ನಾಟಕದ ದೇವಾಲಯಗಳು ಹಾಗೂ ಶಿಲ್ಪಕಲೆ ಕುರಿತ 'ಪುರಾತನ ದೇಗುಲಗಳು' ಅಂಕಣ ವಿಜಯ ಕರ್ನಾಟಕ ಬಳಗದ ಬೋಧಿವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದೆ.

ಕೌಟುಂಬಿಕ ಹಿನ್ನೆಲೆ

ಗೋಪಾಲ್ ಅವರ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯ ಹಾಗೂ ತಾತ ಶ್ರೀನಿವಾಸರಂಗಾಚಾರ್ಯರು ಕೂಡ ಲೇಖಕರೇ.

ಮೈಸೂರು ಟ್ರೇನಿಂಗ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀನಿವಾಸರಂಗಾಚಾರ್ಯರು 'ಮೈಸೂರ ಮೈಸಿರಿ', 'ಕರ್ಣಾಟಕ ಮೂಲಾದರ್ಶ ಅಥವಾ ಕನ್ನಡದ ಕನ್ನಡಿ' ಮುಂತಾದ ಕೃತಿಗಳನ್ನು ರಚಿಸಿದ್ದರು. ಪಂಡಿತ ತಿರು ಶ್ರೀನಿವಾಸಾಚಾರ್ಯರು ಪ್ರೌಢಶಾಲಾ ಕನ್ನಡ ವ್ಯಾಕರಣ, ಸಂಸ್ಕೃತಿ ಪ್ರದೀಪ ಮುಂತಾದ ಕೃತಿಗಳನ್ನು ರಚಿಸಿದ್ದರು.

'ಸಂಸ್ಕೃತಿ ಸಲ್ಲಾಪ' ಜಾಲತಾಣ ಹಾಗೂ 'ಕನ್ನಡ ಸಂಪದ' ಫೇಸ್‌ಬುಕ್ ಪುಟವನ್ನು ನಿರ್ವಹಿಸುತ್ತಿರುವ ತಿರು ಶ್ರೀಧರ ಟಿ. ಎಸ್. ಗೋಪಾಲ್ ಅವರ ಕಿರಿಯ ಸಹೋದರ. ಗೋಪಾಲ್ ಅವರ ಪುತ್ರ ಟಿ. ಜಿ. ಶ್ರೀನಿಧಿ ಕನ್ನಡದಲ್ಲಿ ವಿಜ್ಞಾನ ವಿಷಯಗಳ ಕುರಿತು ಬರೆಯುತ್ತಿರುವ ಲೇಖಕ.

ಕೃತಿಗಳು

ಭಾಷೆ, ವ್ಯಾಕರಣ

  • ಕನ್ನಡ ವ್ಯಾಕರಣ ಪ್ರವೇಶ
  • ಕನ್ನಡ ವ್ಯಾಕರಣದ ಪ್ರಾಯೋಗಿಕ ಪಾಠಗಳು
  • ಕನ್ನಡ ಕೌಶಲ (ಏಳು ಪುಸ್ತಕಗಳ ಸರಣಿ)
  • ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆ (ಹನ್ನೆರಡು ಪುಸ್ತಕಗಳ ಸರಣಿ)
  • ಕೊಡವ - ಕನ್ನಡ ಶಬ್ದಕೋಶ

ವನ್ಯಜೀವನ, ಪರಿಸರ

  • ಕಾಡಿನೊಳಗೊಂದು ಜೀವ (ನಿರೂಪಣೆ)
  • ಹುಲಿರಾಯನ ಆಕಾಶವಾಣಿ (ನಿರೂಪಣೆ)
  • ವನ್ಯಜೀವಿಗಳ ರಮ್ಯಲೋಕ (ಸಂಪಾದನೆ)
  • ಜೈವಿಕ ಇಂಧನ ಬಾಳಿನ ನಂದನ (ಸಂಪಾದನೆ)
  • ಭವಿಷ್ಯದ ಭರವಸೆ: ಹಸಿರು ಇಂಧನ
  • ಕಾಡು ಕಲಿಸುವ ಪಾಠ

ಶಿಲ್ಪಕಲೆ, ಇತಿಹಾಸ

  • ಪುರಾತನ ದೇಗುಲಗಳು
  • ಹಂಪೆ: ಒಂದು ಸುಂದರ ದೃಶ್ಯಕಾವ್ಯ

ಇತರ

  • ನವಕರ್ನಾಟಕ 'ವಿಶ್ವಮಾನ್ಯರು' ಸರಣಿಯಲ್ಲಿ ಹನ್ನೆರಡು ಕೃತಿಗಳು
  • ಅಯಾಸ್ ನಾಟಕ ವಿಮರ್ಶೆ
  • ಗಾಂಪವಿಜಯ ಮತ್ತಿತರ ನಾಟಕಗಳು

ಪ್ರಶಸ್ತಿಗಳು

  • 'ಕಾಡು ಕಲಿಸುವ ಪಾಠ' ಕೃತಿಗೆ ೨೦೧೩ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ [೧]

ಬಾಹ್ಯ ಕೊಂಡಿಗಳು

  1. 'ಕನ್ನಡ ವ್ಯಾಕರಣ ಪ್ರವೇಶ' ಕೃತಿಪರಿಚಯ
  2. 'ಕಾಡು ಕಲಿಸುವ ಪಾಠ' ಕೃತಿಪರಿಚಯ

ಉಲ್ಲೇಖಗಳು

  1. ೧.೦ ೧.೧ http://vijaykarnataka.indiatimes.com/state/shettar-cokkadi-sahitya-academy-honorary-award/articleshow/51606664.cms