ಹೆಸರು ಟಿ. ಜಿ. ಶ್ರೀನಿಧಿ, ಬೆಂಗಳೂರಿನ ಸಾವಿರಾರು ಸಾಫ್ಟ್‌ವೇರಿಗರಲ್ಲಿ ಒಬ್ಬ. ಕನ್ನಡದಲ್ಲಿ ಬರೆಯುವುದು ಹವ್ಯಾಸ. ಈವರೆಗೂ ಪ್ರಕಟವಾಗಿರುವ ಪುಸ್ತಕಗಳು ಹದಿಮೂರು, ಬರಹಗಳು ಹೆಚ್ಚೂಕಡಿಮೆ ಒಂದು ಸಾವಿರ.

ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ಕನ್ನಡ ಜಾಲತಾಣ 'ಇಜ್ಞಾನ ಡಾಟ್ ಕಾಮ್' ಸಂಪಾದಕನಾಗಿ ಹಾಗೂ 'ಇಜ್ಞಾನ ಟ್ರಸ್ಟ್' ಸ್ವಯಂಸೇವಾ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಕೆಲಸಮಾಡುತ್ತಿದ್ದೇನೆ. ಕರ್ನಾಟಕ ಸರಕಾರದ ಅಂತರಜಾಲ ಜ್ಞಾನಕೋಶ 'ಕಣಜ'ದ ಸಂಪಾದಕೀಯ ಸಲಹೆಗಾರನೂ ಹೌದು.

ವಿಜಯವಾಣಿ, ಉದಯವಾಣಿ, ತುಷಾರ, ವಿಜಯ ಕರ್ನಾಟಕ, ಉಷಾಕಿರಣ, ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರನಾಗಿದ್ದ ಅನುಭವ ಇದೆ. ಉದಯವಾಣಿ ಬೆಂಗಳೂರು ಆವೃತ್ತಿಯಲ್ಲಿ ನನ್ನ 'ವಿಜ್ಞಾಪನೆ' ಅಂಕಣ ಸತತ ೧೨೨ ವಾರಗಳವರೆಗೆ ಪ್ರಕಟವಾಗಿತ್ತು. ಸದ್ಯ ೨೫೦+ ದಿನಗಳಿಂದ ವಿಜಯವಾಣಿಯಲ್ಲಿ 'eಜ್ಞಾನ' ಎನ್ನುವ ದೈನಿಕ ಅಂಕಣ ಬರೆಯುತ್ತಿದ್ದೇನೆ.

೨೦೧೧ರಲ್ಲಿ ಹೊರಬಂದ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಪುಸ್ತಕಕ್ಕೆ ಪ್ರೊ. ಜೀವಿಯವರ ಕೈಯಿಂದ ಲೋಕಾರ್ಪಣೆಯಾಗುವ ಭಾಗ್ಯ ಸಿಕ್ಕಿತು. ಅದೇ ಪುಸ್ತಕಕ್ಕಾಗಿ ನನಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿಯೂ ಬಂತು. ೨೦೧೩ರ ಸೆಪ್ಟೆಂಬರ್ ತಿಂಗಳಲ್ಲಿ ನನ್ನ ಹತ್ತನೆಯ ಪುಸ್ತಕ 'ಕ್ಲಿಕ್ ಮಾಡಿ ನೋಡಿ!' ನವಕರ್ನಾಟಕ ಪ್ರಕಾಶನದಿಂದ ಹೊರಬಂತು. ೨೦೧೬ರಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರಿಂದ ಲೋಕಾರ್ಪಣೆಯಾದ 'ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!' ನನ್ನ ಹದಿಮೂರನೆಯ ಕೃತಿ.