ಬಾಜಿ ಪ್ರಭು ದೇಶಪಾಂಡೆ

ಬಾಜಿಪ್ರಭು ದೇಶಪಾಂಡೆ ಛತ್ರಪತಿ ಶಿವಾಜಿ ಮಹಾರಾಜರ ಸೇನಾಮುಖ್ಯಸ್ಥರಾಗಿದ್ದರು. ಈ ಬಾಜಿಪ್ರಭು ದೇಶಪಾಂಡೆ ಹುಟ್ಟಿದ್ದು 1615ರಲ್ಲಿ ಮಹಾರಾಷ್ಟ್ರದ 'ಚಂದ್ರಸೇನೀಯ ಕಾಯಸ್ಥ ಪ್ರಭು' ಎಂಬ ದಾಖಲೆಪತ್ರಗಳನ್ನು ನೋಡಿಕೊಳ್ಳುವ ಜಾತಿಯಲ್ಲಿ. ಆದರೆ ಜಾತಿಯ ಕಾರಣದಿಂದ ಬಾಜಿಪ್ರಭುವಿನ ಕ್ಷತ್ರಿಯತ್ವಕ್ಕೆ ಯಾವುದೇ ತೊಂದರೆ ಬರಲಿಲ್ಲ. ಸಣ್ಣ ವಯಸ್ಸಿನಲ್ಲಿಯೇ ದೇಶೀಯ ಸಮರಕಲೆಗಳಲ್ಲಿ ಪರಿಣತಿಯನ್ನು ಹೊಂದಿದರು. ಶಸ್ತ್ರಾಸ್ತ್ರಗಳ ಪ್ರಯೋಗದಲ್ಲಿ ಪ್ರಾವೀಣ್ಯತೆ ಪಡೆದರು. ದಿನಾಲೂ 12 ಗಂಟೆಗಳ ಕಾಲ ಕತ್ತಿವರಸೆ ಮುಂತಾದ ಸಮರಾಭ್ಯಾಸಗಳನ್ನು ಮಾಡುತ್ತಿದ್ದರು. ಹೀಗೆ ಅವರು ಎರಡು 'ದಂಡಪಟ್ಟ" ಎಂಬ ಖಡ್ಗಗಳನ್ನು ಹಿಡಿದು ಯುದ್ಧ ಮಾಡುವ ವಿಶೇಷ ಕಲೆಯನ್ನೂ ಕರಗತ ಮಾಡಿಕೊಂಡರು.

ಬಾಜಿ ಪ್ರಭು ದೇಶಪಾಂಡೆ ಪ್ರತಿಮೆ

ಅದೇ ಸಮಯದಲ್ಲಿ ಒಂದು ಕಡೆಯಿಂದ ಬಿಜಾಪುರದ ಆದಿಲ್ ಶಾಹಿಗಳು ಮತ್ತೊಂದು ಕಡೆಯಿಂದ ಮೊಘಲರು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡುತ್ತಿದ್ದರು. ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುವುದು, ಅತ್ಯಾಚಾರ ಮತ್ತು ಹತ್ಯೆಗಳು ಸಾಮಾನ್ಯವಾಗಿದ್ದವು.ಇದನ್ನೆಲ್ಲ ಕಂಡ ಬಾಜಿಪ್ರಭು ಈ ಅನ್ಯಾಯ-ಅನಾಚಾರಗಳನ್ನು ಕೊನೆಗೊಳಿಸಲೇಬೇಕೆಂದುಕೊಂಡರು. ದೇಶಕ್ಕಾಗಿ ಏನಾದರೂ ಮಾಡಬೇಕು ಮತ್ತು ಭಾರತವನ್ನು ಪರಕೀಯರಿಂದ ಮುಕ್ತಗೊಳಿಸಿ ಸ್ವರಾಜ್ಯದ ಸ್ಥಾಪನೆ ಮಾಡಬೇಕೆಂದು ಯೋಚಿಸುತ್ತಿದ್ದರು.

ಅದೇ ಸಮಯದಲ್ಲಿ ಶಿವಾಜಿ ನೇತೃತ್ವದಲ್ಲಿ ಹಿಂದೂ ಮರಾಠ ಸಾಮ್ರಾಜ್ಯದ ಉತ್ಥಾನವಾದದ್ದು ಬಾಜಿಪ್ರಭುಗೆ ವರದಾನವಾಗಿ ಪರಿಣಮಿಸಿತು. ಬಾಜಿಪ್ರಭುವಿನ ಅಪಾರ ದೇಶಭಕ್ತಿ, ಶಕ್ತಿ-ಸಾಮರ್ಥ್ಯ,ಶೌರ್ಯ,ನಾಯಕತ್ವದ ಗುಣಗಳನ್ನು ಗಮನಿಸಿದ ಶಿವಾಜಿ ಮಹಾರಾಜರು ತಮಗಿಂತ 15ವರ್ಷ ಹಿರಿಯರಾದ ಭಾಜಿಪ್ರಭುವಿಗೆ ದಕ್ಷಿಣ ಮಹಾರಾಷ್ಟ್ರದ ಕೊಲ್ಲಾಪುರ ಪ್ರಾಂತದ ಸೇನಾಮುಖ್ಯಸ್ಥನಾಗಿ ನೇಮಿಸಿದರು.

ಬಿಜಾಪುರದ ಸುಲ್ತಾನ ಎರಡನೇ ಆದಿಲ್ ಶಾಹಿಯು ಶಿವಾಜಿ ಮಹಾರಾಜರನ್ನು ಹತ್ಯೆ ಮಾಡಿ ಹಿಂದೂ ಸಾಮ್ರಾಜ್ಯವನ್ನು ನಾಶ ಮಾಡಬೇಕೆಂದು ತನ್ನ ಬಂಟ ಅಫ್ಜಲ್ ಖಾನ್ ನನ್ನು ಕಳುಹಿಸಿದಾಗ ಅದನ್ನು ವಿಫಲಗೊಳಿಸುವಲ್ಲಿ ಬಾಜಿಪ್ರಭು ಪ್ರಮುಖ ಪಾತ್ರ ವಹಿಸಿದ್ದರು. ಅಫ್ಜಲ್ ಖಾನನಂತೆ ದೇಹದಾರ್ಢ್ಯ ಹೊಂದಿದ್ದ ವಿಸಾಜಿ ಮುರಂಬಕ್ ಮುಂತಾದ ವೀರಕಲಿಗಳ ಪಡೆಯನ್ನು ಸಂಘಟಿಸಿ ಶಿವಾಜಿ ಮಹಾರಾಜರ ಸಹಾಯಕ್ಕೆ ಕಳುಹಿಸಿದರು.

ಪನ್ಹಾಲ ಕೋಟೆಯಲ್ಲಿ ಬದಲಾಯಿಸಿ

ಅಫ್ಜಲ್ ಖಾನ್ ಸಂಹಾರದ ( ಕ್ರಿ.ಶ. 1659) ನಂತರ ಹಿಂದೂ ಮರಾಠ ಸಾಮ್ರಾಜ್ಯವು ಬಿಜಾಪುರ ಸುಲ್ತಾನರ ವಿರುದ್ಧ ಯುದ್ಧಗಳನ್ನು ಗೆಲ್ಲುತ್ತಾ ಅವರ ಕೋಟೆಗಳನ್ನು ತನ್ನದಾಗಿಸಿಕೊಳ್ಳುತ್ತಾ ಸಾಗಿತು. ಶಿವಾಜಿ ಮಹಾರಾಜರೊಡನೆ ನೇರವಾಗಿ ಯುದ್ಧ ಮಾಡಲು ಸಾಧ್ಯವಿಲ್ಲ ಎಂದರಿತ ಬಿಜಾಪುರ ಸುಲ್ತಾನನು ತಮ್ಮ ಎದುರಾಳಿಗಳಾದ ಮೊಘಲರೊಂದಿಗೆ ಮೈತ್ರಿ ಮಾಡಿಕೊಂಡನು.

ಸಿದ್ದಿ ಜೋಹರನು ಇಥಿಯೋಪಿಯ-ಆಫ್ರಿಕನ್ ಗುಲಾಮ. ಇವನ ಒಡೆಯನಾದ ಮಾಲಿಕ್ ಅಬ್ದುಲ್ ವಹಾಹನ ಮರಣದನಂತರ ಬಿಜಾಪುರದ ಆಡಳಿತಕ್ಕೊಳಪಟ್ಟಿದ್ದ 'ಕರ್ನೂಲ್' ಪ್ರಾಂತ್ಯವನ್ನು ಸ್ವತಂತ್ರವೆಂದೂ ತಾನು ಅದರ ರಾಜನೆಂದು ಘೋಷಿಸಿದ. ಈ ತಪ್ಪಿಗಾಗಿ ಬಿಜಾಪುರ ಸುಲ್ತಾನನಾದ ಆದಿಲ್ ಶಾಹಿಯು ಅವನಿಗೆ ಮರಣದಂಡನೆಯನ್ನು ನೀಡಿದ. ತನ್ನ ತಪ್ಪನ್ನು ಮನ್ನಿಸುವಂತೆ ಸಿದ್ದಿ ಜೋಹರನು ಪರಿಪರಿಯಾಗಿ ಬೇಡಿಕೊಂಡು ಆದಿಲ್ ಶಾಹಿಯು ಮರಣ ಸದೃಶವಾದ ನಿಬಂಧನೆಯೊಂದನ್ನು ಹಾಕಿದ. ಅದೇನೆಂದರೆ ಹಿಂದೂ ಮರಾಠ ಸಾಮ್ರಾಜ್ಯವನ್ನು ನಾಶ ಮಾಡಿದರೆ ತಪ್ಪನ್ನು ಮನ್ನಿಸುವುದಾಗಿಯೂ ಸೂಕ್ತ ಸ್ಥಾನಮಾನ ನೀಡುವೆನೆಂದು ಹೇಳಿದ.[೧]

ಅಫ್ಜಲ್ ಖಾನನ ಸಂಹಾರದ ನಂತರ ಶಿವಾಜಿ ನೇತೃತ್ವದ ಮರಾಠ ಸೇನೆಯು ಬಿಜಾಪುರ ಸುಲ್ತಾನರ ಪನ್ಹಾಲಾ ಕೋಟೆಯನ್ನು ವಶಪಡಿಸಿಕೊಂಡಿತು. ಆದರೆ ಮರಾಠರ ಕಡೆಯಿಂದಲೇ ಮಾಹಿತಿಗಳು ಸೋರಿಕೆಯಾದ ಕಾರಣ ಆದಿಲ್ ಶಾಹಿಯು ಕೋಟೆಯ ಪುನರ್ ವಶಕ್ಕಾಗಿ ಸಿದ್ಧಿ ಜೋಹರ್ ನೇತೃತ್ವದಲ್ಲಿ 40,000ರಷ್ಟು ಬಲದ ಸೇನೆಯನ್ನು ಕಳುಹಿಸಿದ. ಈ ಸೇನೆಯು ಪನ್ಹಾಲಾ ಕೋಟೆಯನ್ನು ಸುತ್ತುವರೆಯಿತು. ಶಿವಾಜಿ, ಬಾಜಿಪ್ರಭು ಮತ್ತು 600ರಷ್ಟಿದ್ದ ಮರಾಠ ಸೇನೆಯು ಸುದೀರ್ಘ ಐದು ತಿಂಗಳುಗಳ ಕಾಲ ಕೋಟೆಯಲ್ಲೇ ಬಂಧಿಯಾಯಿತು.

ಬಾಜಿಪ್ರಭುವಿನ ಪ್ರವರ್ಧಮಾನ ಬದಲಾಯಿಸಿ

ಮರಾಠ ಸೇನೆಗೆ ಕೋಟೆಯಿಂದ ತಪ್ಪಿಸಿಕೊಳ್ಳುವುದು ಬಿಟ್ಟು ಅನ್ಯಥ ಮಾರ್ಗ ಇರಲಿಲ್ಲ. ಏಕೆಂದರೆ ಕೋಟೆಯಲ್ಲಿ ಆಹಾರವು ಕಡಿಮೆಯಾಗುತ್ತಿತ್ತು ಮತ್ತು ಯಾವುದೇ ಕ್ಷಣದಲ್ಲೂ ಕೂಡ ಸುತ್ತುವರಿದಿರುವ ಶತ್ರುಸೈನ್ಯದ ಕೈಗೆ ಸಿಕ್ಕಿ ಬೀಳುವ ಅಪಾಯವಿತ್ತು. 63 ಕಿ.ಮಿ. ದೂರದಲ್ಲಿದ್ದ ವಿಶಾಲಗಡವನ್ನು ಹಿಂದೂ-ಮರಾಠ ರಾಜ ರಂಗೂ ನಾರಾಯಣ ಓರ್ಪೆ ಆಳುತ್ತಿದ್ದ. ಮೊಘಲರೊಂದಿಗೆ ಆತ ಉತ್ತಮ ಬಾಂಧವ್ಯವನ್ನು ಹೊಂದಿದ್ದ. ಆದರೆ ದೇಶಪ್ರೇಮಿಯಾಗಿದ್ದರಿಂದ ಆತ ಶಿವಾಜಿ ಮಹಾರಾಜರಿಗೆ ಸಹಾಯ ಮಾಡಲು ಸಿದ್ಧನಿದ್ದ. ಅಲ್ಲಿನ ಆಗುಹೋಗುಗಳನ್ನು ಗಮನಿಸಲು ಮೋಘಲರು ತಮ್ಮ ಸೈನಿಕರನ್ನು ನೇಮಿಸಿದ್ದರು. ಶಿವಾಜಿ ಮಹಾರಾಜರು ಪನ್ಹಾಲಾ ಕೋಟೆಯಿಂದ ಪಲಾಯನ ಮಾಡಿದರೂ ವಿಶಾಲಗಡದಲ್ಲಿದ್ದ ಮೊಘಲ್ ಸೈನ್ಯದೊಂದಿಗೆ ಹೋರಾಡಬೇಕಾಗಿತ್ತು. ಸೂಕ್ತ ಸಮಯ ನೋಡಿ ಪನ್ಹಾಲ ಕೊಟೆಯಿಂದ ತಪ್ಪಿಸಿಕೊಳ್ಳಲು ಉಪಾಯ ಮಾಡಿದರು.

ಒಂದು ರಾತ್ರಿ ಶಿವಾಜಿ, ಬಾಜಿಪ್ರಭು ನೇತೃತ್ವದ ಮರಾಠ ಸೇನೆಯು ರಾತ್ರಿವೇಳೆ ಏಕಾಏಕಿ ಆದಿಲ್ ಶಾಹಿಯ ಸೇನೆಯ ಮೇಲೆ ದಾಳಿ ಮಾಡಿದರು. ಮೊದಲೇ ಯೋಚಿಸಿದಂತೆ ನೋಡಲು ಶಿವಾಜಿಯಂತಿದ್ದ ಶಿವ ಕಶೀದ ಎಂಬ ಕ್ಷೌರಿಕನಿಗೆ ಅವರ ಹಾಗೆಯೇ ವೇಷಭೂಷಣಗಳನ್ನು-ಅಲಂಕಾರವನ್ನು ಮಾಡಿ ಯುದ್ಧ ನಡೆಯುವ ಸಂದರ್ಭದಲ್ಲಿ ಶತ್ರುಸೈನ್ಯಕ್ಕೆ ಸಿಕ್ಕಿಬೀಳುವಂತೆ ಮಾಡಲಾಯಿತು. ಶಿವ ಕಶೀದನನ್ನೇ ಶಿವಾಜಿ ಮಹಾರಾಜರೆಂದು ಭಾವಿಸಿದ ಶತ್ರುಸೇನೆ ಅವನನ್ನು ಬಂಧಿಸಿ ಕರೆದೊಯ್ಯಿತು. ಆದರೆ ಅವನು ಶಿವಾಜಿ ಅಲ್ಲ ಎಂದು ಅರಿವಾಗುವಷ್ಟರಲ್ಲಿ ಮರಾಠ ಸೇನೆ ಪನ್ಹಾಲದಿಂದ ತಪ್ಪಿಸಿಕೊಂಡಾಗಿತ್ತು. ಮುಂದಿರುವ ಭಯಾನಕ ಸಾವನ್ನು ಅರಿತ ಶಿವ ಕಶೀದ "ಜೈ ಭವಾನಿ" ಎಂದು ಶಿವಾಜಿಗೆ ಬೀಳ್ಕೊಡುತ್ತ ಸ್ವರಾಜ್ಯಕ್ಕಾಗಿ ಬಲಿದಾನ ಮಾಡಿದ.


ಪಾವನಖಿಂಡಿ ಯುದ್ಧ (13 ಜುಲೈ 1660) ಬದಲಾಯಿಸಿ

ರಾತ್ರಿವೇಳೆಯಲ್ಲಿ ತಪ್ಪಿಸಿಕೊಂಡಿದ್ದ ಮರಾಠ ಸೇನೆಗೆ ಆದಿಲ್ ಶಾಹಿಯ ಸೇನೆ ಪ್ರತಿದಾಳಿ ಮಾಡಲು ಹಿಂಬಾಲಿಸಿ ಕೊಂಡು ಬರುತ್ತದೆ ಎಂಬುದು ಖಾತ್ರಿ ಇತ್ತು. ಮರಾಠ ಸೈನ್ಯಯು ಎರಡು ಸೇನೆಗಳನ್ನು ಎದುರಿಸಬೇಕಾಗಿತ್ತು. ಒಂದು ಹಿಂಬಾಲಿಸಿಕೊಂಡು ಬರುವ ಆದಿಲ್ ಶಾಹಿಯ ಸೈನ್ಯ ಇನ್ನೊಂದು ವಿಶಾಲಗಡದಲ್ಲಿರುವ ಮೊಘಲ್ ಸೈನ್ಯ. ಒಟ್ಟಾಗಿದ್ದರೆ ಎರಡು ಸೇನೆಗಳ ನಡುವೆ ಸಿಕ್ಕಿಹಾಕಿಕೊಳ್ಳಬಹುದು ಹಾಗಾಗಿ ಸೇನೆಯನ್ನು ವಿಭಜನೆ ಮಾಡುವ ಅನಿವಾರ್ಯತೆ ಉಂಟಾಯಿತು. ಒಂದು ಸೇನೆ ಅಲ್ಲೇ ನಿಂತು ಆದಿಲ್ ಶಾಹಿಯ ಸೈನ್ಯದೊಂದಿಗೆ ಯುದ್ಧ ಮಾಡಿ ಅದು ಮುಂದುವರಿಯದಂತೆ ತಡೆಯುವುದು. ಇನ್ನೊಂದು ಸೇನೆ ಪ್ರಯಾಣ ಮುಂದುವರಿಸಿ ಮೊಘಲ್ ಸೈನ್ಯದೊಂದಿಗೆ ಯುದ್ಧ ಮಾಡಿ ಸುರಕ್ಷಿತವಾಗಿ ವಿಶಾಲಗಢವನ್ನು ಸೇರುವುದು. ಬಾಜಿಪ್ರಭು ತಾನು ಅಲ್ಲೇ ನಿಂತು ಯುದ್ಧ ಮಾಡುವುನೆಂದು ಮುಂದೆ ಬಂದರು. ವಿಶಾಲಗಢಕ್ಕೆ ಸುರಕ್ಷಿತವಾಗಿ ಸೇರಿದ್ದೇವೆ ಎಂಬ ಸಂದೇಶವನ್ನು ಮೂರು ಫಿರಂಗಿ ಸದ್ದಿನೊಂದಿಗೆ ತಿಳಿಸಲು ನಿರ್ಧರಿಸಲಾಯಿತು.

ಬಾಜಿಪ್ರಭುವಿನ ಪಡೆಯು ಯುದ್ಧಾನುಕೂಲದ 'ಗೋಡ್ಕಿಂಡಿ' ಹಿಂದಿನ ಭಾಗವನ್ನು ಆರಿಸಿದರು. ಇದು ತುಂಬಾ ಸಂಕೀರ್ಣವಾದ ಮತ್ತು ಏಕಕಾಲದಲ್ಲಿ ಕೆಲವೇ ಸೈನಿಕರು ಸಾಗಬಹುದಾದ ಕಣಿವೆ ಮಾರ್ಗ.ಬಾಜಿಪ್ರಭು ಮತ್ತು ತನ್ನ ತಮ್ಮ ಫಲೂಜಿ ಹಾಗೂ 300ರಷ್ಟಿದ್ದ ಮರಾಠ ಸೇನೆಯು 40,000 ಮುಸ್ಲಿಂ ಸೈನ್ಯದೊಂದಿಗೆ ಯುದ್ಧಕ್ಕೆ ನಿಂತಿತ್ತು. ಪ್ರಾರಂಭದಲ್ಲಿ ಮರಾಠ ಸೇನೆಗೆ ಅಷ್ಟೊಂದು ದೊಡ್ಡ ನಷ್ಟ ಆಗಲಿಲ್ಲ. ಮುಸ್ಲಿಂ ಸೈನ್ಯಕ್ಕೆ ಹೆಚ್ಚಿನ ಹಾನಿ ಉಂಟಾಯಿತು. ಹೀಗೆ ನಾಲ್ಕು ಗಂಟೆಗಳ ಕಾಲ ಯುದ್ಧ ಮುಂದುವರಿಯಿತು. ಶಿವಾಜಿ ಮಹಾರಾಜರು ಸುರಕ್ಷಿತವಾಗಿ ತಲುಪುವವರೆಗೆ ಕಣಿವೆ ಮಾರ್ಗವನ್ನು ಒಂದಿಷ್ಟೂ ಬಿಡಲಾರೆವು ಎಂದು ದೃಢನಿರ್ಧಾರದಿಂದ ಮರಾಠಸೇನೆಯು ಕಾದಾಡುತ್ತಿತ್ತು. ಸಮಯ ಕಳೆದಂತೆ ಸೈನ್ಯಬಲವು ಕ್ಷಿಣಿಸುತ್ತಾ ಸಾಗಿತ್ತು.

ಫಜಲ್ ಖಾನ್ ನೇತೃತ್ವದ 12,000 ಮ್ಲೆಚ್ಚ ಕಾಲುಳುಗಳ ದಾಳಿಯು ಮರಾಠ ಸೇನೆಗೆ ಭಾರಿ ಹೊಡೆತವನ್ನು ನೀಡಿತು. ಅರ್ಧದಷ್ಟು ಸೈನಿಕರನ್ನು ಕಳೆದುಕೊಂಡರೂ ಧೃತಿಗೆಡದೆ ಬಾಜಿಪ್ರಭು 2 ಕೈಯಲ್ಲಿ 'ದಂಡಪಟ್ಟ' ಖಡ್ಗಗಳನ್ನು ಹಿಡಿದು ಝಳಪಿಸುತ್ತಾ ಎದುರಾಳಿಗಳ ಮಾರಣಹೋಮಕ್ಕೆ ಶುರುಮಾಡಿದರು. ಇವರ ರೌದ್ರರೂಪಕ್ಕೆ ಹೆದರಿದ ಫಜಲ್ ಖಾನ್ ಹಿಂದೆ ಸರಿದು ತನ್ನ ಸೈನ್ಯದ ಮೂಲಕ ಯುದ್ಧ ಮುಂದುವರಿಸಿದ.[೨]

ಬಾಜಿಪ್ರಭುವನ್ನು ಮ್ಲೆಚ್ಚರ ಸೈನ್ಯವು ಸುತ್ತುವರಿಯಿತು. ಆದರೂ ಬಾಜಿಪ್ರಭುವಿನಿಂದ ಸೈನ್ಯನಷ್ಟ ಉಂಟಾಗುವುದನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದಾಗ ಮದ್ದುಗುಂಡುಗಳ ಮೂಲಕ ದಾಳಿ ಮಾಡಲಾಯಿತು. ಇದರಿಂದ ಬಾಜಿಪ್ರಭು ತೀವ್ರವಾಗಿ ಗಾಯಗೊಂಡರೂ ಯುದ್ಧ ಮುಂದುವರಿಸಿದರು. ಯುದ್ಧ ಪ್ರಾರಂಭವಾಗಿ 5 ಗಂಟೆಗಳ ನಂತರ ವಿಶಾಲಗಢದ ಕಡೆಯಿಂದ ಮೂರು ಫಿರಂಗಿ ಸದ್ದುಗಳು ಕೇಳಿಬಂತು. ಸಾಕಷ್ಟು ಗಾಯಗೊಂಡಿದ್ದ ಇದನ್ನು ಕೇಳುತ್ತಲೇ ಬಾಜಿಪ್ರಭು 'ಜೈ ಭವಾನಿ' ಎಂದು ಘೋಷಣೆ ಕೂಗುತ್ತಾ ಕುಸಿದುಬಿದ್ದರು. ಹೀಗೆ ಅವರು ವೀರಮರಣ ಹೊಂದಿದರು( 14 ಜುಲೈ 1660) . ಬಹುತೇಕ ಹಿಂದೂ ಯೋಧರು ಹುತಾತ್ಮರಾಗಿದ್ದರು. ಈ ಮೂಲಕ ಶಿವಾಜಿ ಮಹಾರಾಜರಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡರು. ಬಾಜಿಪ್ರಭುವಿನ ಸೇನೆಯ ಅದ್ವಿತೀಯ ಶೌರ್ಯ-ಪರಾಕ್ರಮದಿಂದ ಶಿವಾಜಿ ಮಹಾರಾಜರು ಸುರಕ್ಷಿತವಾಗಿ ವಿಶಾಲಗಢವನ್ನು ತಲುಪಿದರು.[೩] ಬಾಜಿಪ್ರಭುವಿನ ಶರೀರವನ್ನು ವಿಶಾಲಗಡಕ್ಕೆ ತರಲಾಯಿತು. ಶಿವಾಜಿ ಮಹಾರಾಜರು 'ಗೋಡ್ಕಿಂಡಿ' ಕಣಿವೆಯನ್ನು 'ಪಾವನಕಿಂಡಿ'( ಎಂದರೆ ಹಿಂದೂ ಯೋಧರ ರಕ್ತದಿಂದ ಪಾವನವಾದುದು ಎಂದರ್ಥ) ಎಂದು ನಾಮಕರಣ ಮಾಡಿದರು. ಬಾಜಿಪ್ರಭು ಅವರ ಕುಟುಂಬಕ್ಕೆ ಆಸ್ಥಾನದಲ್ಲಿ ಮೊದಲ ಗೌರವ ನೀಡಲಾಯಿತು. ಮುಂದೆ ಭಾರತದ ಸ್ವಾತಂತ್ರ್ಯ ಹೋರಾಟಗಾರ, ಯೋಗಿ ಶ್ರೀ ಅರವಿಂದರು 1909 ರಲ್ಲಿ ಬಾಜಿಪ್ರಭುವಿನ ತ್ಯಾಗ ಪರಾಕ್ರಮವನ್ನು ವರ್ಣಿಸುವ 'ಬಾಜಿ ಪ್ರಭೋ' ಎಂಬ ಗೀತೆಯನ್ನು ಬರೆದರು Mapping the Nation: An Anthology of Indian Poetry in English, 1870–1920. Anthem Press. June 25, 2012.. ಸ್ವಾತಂತ್ರವೀರ ಸಾವರ್ಕರ್ ಕೂಡ ಬಾಜಿಪ್ರಭು ಕುರಿತಾಗಿ ಗೀತೆಯನ್ನು ರಚಿಸಿದ್ದರು. ಅದನ್ನು ಅಂದಿನ ಬ್ರಿಟಿಷ್ ಸರ್ಕಾರ ನಿಷೇಧಿಸಿತ್ತು. ಮೇ 24,1946 ರಂದು ಆ ನಿಷೇಧವನ್ನು ಹಿಂಪಡೆಯಲಾಯಿತು.

ಮತ್ತಷ್ಟು ತಿಳಿದುಕೊಳ್ಳಿರಿ ಬದಲಾಯಿಸಿ

  1. ತಾನಾಜಿ ಮಲ್ಸೂರೆ
  2. ನೆತಾಜಿ ಫಾಲ್ಕರ್

ಬಾಹ್ಯ ಸಂಪರ್ಕ ಬದಲಾಯಿಸಿ

  1. A history of the Maratha people p.168-171
  2. Read about Bajiprabhu deshpande
  3. HinduJagruti.org
  4. Full text of "Ethnographical notes on Chandraseniya Kayastha Prabhu"
  5. bajiprabhu-deshpande with hindu sena of 300 men fought against 40000 mlecchas Archived 2020-08-09 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು ಬದಲಾಯಿಸಿ