ಕುಂಚ ಹಿಡಿದು ಬಣ್ಣ ತುಂಬಿ ಬಿಡಿಸಿಟ್ಟ ಚಿತ್ರಗಳಲ್ಲಿ ಮಕ್ಕಳು ಆಕರ್ಷಿತರಾದಂತೆ ಸುಂದರವಾದ ಮಕ್ಕಳ ಪದ್ಯ ಬರೆದು, ಮಕ್ಕಳ ಮನಸ್ಸನ್ನು ಗೆದ್ದಿರುವ ಪರಗೊಂಡ ಗುರುಪಾದಪ್ಪ ಸಿದ್ಧಾಪುರರವರು.

ಜನನ ಬದಲಾಯಿಸಿ

ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ. ತಂದೆ ಗುರುಪಾದಪ್ಪ, ತಾಯಿ ಯಮುನಾ ಬಾಯಿ.

ಶಿಕ್ಷಣ ಬದಲಾಯಿಸಿ

ಬಾಲ್ಯದಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರಾದರೂ ಪ್ರಾರಂಭಿಕ ಶಿಕ್ಷಣ ಪಡೆದಿದ್ದು ತಾಯಿಯ ತವರೂರಾದ ದಾಶ್ಯಾಳದಲ್ಲಿ. ಪ್ರೌಢಶಾಲಾ ಶಿಕ್ಷಣ ಬಬಲೇಶ್ವರದಲ್ಲಿ. ಗದಗದ ವಿಜಯ ಕಲಾಮಂದಿರದಲ್ಲಿ ಕಲೆಯಲ್ಲಿ ಪಡೆದ ಸ್ನಾತಕೋತ್ತರ ಪದವಿ. (ಎಂ.ಎ. ಆರ್ಟ್ ಮಾಸ್ಟರ್) ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ (ಕನ್ನಡ) ಪದವಿ.

ಉದ್ಯೋಗ ಬದಲಾಯಿಸಿ

ಉದ್ಯೋಗಕ್ಕಾಗಿ ಸೇರಿದ್ದು ಬಸವನಬಾಗೇವಾಡಿ ತಾಲ್ಲೂಕಿನ ಮುಳವಾಡ ಗ್ರಾಮದ ಶ್ರೀ ಚನ್ನ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ. ಚಿತ್ರಕಲೆಯಲ್ಲಿ ತಮ್ಮ ಬಣ್ಣಗಳ ಸಂಯೋಜನಾ ಕುಶಲತೆಯಿಂದ ಮುಗ್ಧ ವಿದ್ಯಾರ್ಥಿಗಳ ಮನಗೆದ್ದಂತೆ ಹಲವಾರು ಮಕ್ಕಳ ಪದ್ಯಗಳನ್ನು ರಚಿಸಿ ಚಿಣ್ಣರ ನಾಲಗೆಯಲ್ಲಿ ಸದಾ ಹರಿದಾಡುವಂತೆ ಮಾಡಿದ್ದಾರೆ. ಇರುಳಿನ ಕೆಸರಲಿ ಅರಳಿದ ತಾವರೆ ಚಂದಿರ ನಗುತಿಹನು ಮಜ್ಜಿಗೆಯೊಳಗಿನ ಬೆಣ್ಣೆಯ ಹಾಗೆ ತೇಲುತ ಬರುತಿಹನು ಲಯಬದ್ಧ, ಸರಳ ಮಾತುಗಳ, ಆಕರ್ಷಕ ಶೈಲಿಯ ಇಂತಹ ಪದ್ಯಗಳನ್ನು ಮಕ್ಕಳು ಹಾಡಿ ಕುಣಿಯುವಂತಹ ಗುಣವನ್ನು ಹೊಂದಿವೆ.

ಸಾಹಿತ್ಯ ಬದಲಾಯಿಸಿ

ಮಕ್ಕಳ ಪದ್ಯಗಳ ರಚನೆಯಲ್ಲಿ ತಮ್ಮದೇ ಆದ ಹಾದಿ ಹಿಡಿದು ಸಾಗುತ್ತಾ ಅನೇಕ ಮಕ್ಕಳ ಪದ್ಯಗಳ ಸಂಕಲನಗಳನ್ನು ಪ್ರಕಟಸಿದ್ದಾರೆ. ಬರೆದ ಹಲವಾರು ಪದ್ಯಗಳು ಸುಧಾ, ಮಯೂರ, ಕರ್ಮವೀರ, ಮಲ್ಲಿಗೆ. ವಿಜಯಕರ್ನಾಟಕ, ಪ್ರಜಾವಾಣಿ ಮುಂತಾದ ದಿನಪತ್ರಿಕೆಗಳು, ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮೊದಲ ಮಕ್ಕಳ ಕವಿತೆಗಳ ಸಂಕಲನ ‘ಬಣ್ಣದ ಚಿಟ್ಟೆ’ (೧೯೮೯): ಬಾಬಾ ಚಿಟ್ಟೆ ಬಣ್ಣದ ಚಿಟ್ಟೆ ಎಲ್ಲಿಗೆ ಹೊರಟಿರುವೆ ? ಹೆದರುವಿಯೇಕೆ ಪರಿಮಳ ಬೇಕೆ ಈಗಲೆ ನಾ ತರುವೆ ! ಬಣ್ಣದ ಚಿಟ್ಟೆ ಸಂಕಲನದ ನಂತರ ‘ತಾರಾಲೋಕಕ್ಕೆ ಹಾರುವೆನು’, ‘ಮಳೆರಾಯ’, ‘ಪುಟ್ಟನ ಪ್ರಶ್ನೆ’, ಸಕ್ಕರೆ ತುಪ್ಪ, ಮುತ್ತಿನ ಕುಂಜಿಗೆ’, ‘ಮಂಗನ ಅಂಗಳಕೆ’, ಚಿನ್ನದ ಜಿಂಕೆ’, ನಂದನದಲ್ಲಿ ಚಂದನ’, ಆಯ್ದ ಮಕ್ಕಳ ಕವಿತೆಗಳ ಸಂಕಲನವಾದ ‘ಮಕ್ಕಳ ನೂರಾರು ಕವಿತೆಗಳು’ ಮುಂತಾದ ಕವಿತಾ ಸಂಕಲನಗಳಲ್ಲದೆ, ‘ಹಸಿರು ತೋರಣ’ (ಪರಿಸರ ಗೀತೆ), ‘ಪಣತೊಟ್ಟ ಪ್ರಾಣಿಗಳು’ (ಮಕ್ಕಳ ಕಥೆಗಳು), ‘ಹೊಸ ಹೆಜ್ಜೆ’ (ನವಸಾಕ್ಷರರಿಗಾಗಿ ಕಥೆಗಳು), ‘ಯಾವೂರಾನೆ, ವಿಜಾಪುರದಾನೆ!’ (ಮಕ್ಕಳ ಕಥೆಗಳು), ‘ಕರಡಿ ಹೇಳಿದ ಕಥೆ’ (ಮಕ್ಕಳ ಕಥನ ಕವನ), ‘ಅಥಣಿ ಶಿವಯೋಗಿಗಳು’ (ಮಕ್ಕಳಿಗಾಗಿ ವ್ಯಕ್ತಿ ಪರಿಚಯ), ‘ಬಂಗಾರದ ಬಳೆ’ (ಮಕ್ಕಳ ಕಥೆಗಳು) ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ನವ ಸಾಕ್ಷರರಿಗಾಗಿ ಬರೆದ ಕಥಾಸಂಕಲನ ‘ಹೊಸ ಹೆಜ್ಜೆಯು’.

ಇವಲ್ಲದೆ ರಾಜ್ಯ ಚಿತ್ರಕಲಾ ಶಿಕ್ಷಕರ ೪ನೇ ಶೈಕ್ಷಣಿಕ ಮಹಾ ಸಮ್ಮೇಳನದ ಸ್ಮರಣ ಸಂಚಿಕೆ ‘ನಿಸರ್ಗ’, ಗೊಳಸಂಗಿ ದಳವಾಯಿ ಪ್ರೌಢಶಾಲಾ ಸ್ಮರಣ ಸಂಚಿಕೆ ‘ಬೆಳ್ಳಿ ಬೆಳಕು’ ಹಾಗೂ ಅಭಿನಂದನಾ ಗ್ರಂಥಗಳಾದ ‘ಹೂವಿನ ಹಂದರ’, ‘ಚಿಂತಾಮಣಿ’, ‘ದಾಂಪತ್ಯ ದೀಪ್ತಿ’, ‘ಮನಗೂಳಿ ಮಾಣಿಕ್ಯ’, ‘ಗೊಳಸಂಗಿ ಗೌರವ’, ‘ಸುವರ್ಣ ಸಂಭ್ರಮ’ ಮುಂತಾದ ಕೃತಿಗಳ ಸಂಪಾದಕರಾಗಿಯೂ ದುಡಿದಿದ್ದಾರೆ.

ಪ್ರಶಸ್ತಿ ಬದಲಾಯಿಸಿ

‘ಪಣ ತೊಟ್ಟ ಪ್ರಾಣಿಗಳು’, ಕಥಾಸಂಕಲನಕ್ಕೆ ಚಿಕ್ಕೋಡಿ ತಮ್ಮಣ್ಣಪ್ಪ ಸಾಹಿತ್ಯ ಪುರಸ್ಕಾರ, ‘ತಾರಾ ಲೋಕಕ್ಕೆ ಹಾರುವೆನು’, ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ಮಹಾದೇವಪ್ಪ ಕರ್ಲಟ್ಟಿ ಮಕ್ಕಳ ಸಾಹಿತ್ಯ ಪುರಸ್ಕಾರ, ಕಂಚ್ಯಾಣಿ ಶರಣಪ್ಪ ಮಕ್ಕಳ ಸಾಹಿತ್ಯ ಪುರಸ್ಕಾರಗಳು; ‘ಹುಯ್ಯೋ ಹುಯ್ಯೋ ಮಳೆರಾಯ’ ಕವನ ಸಂಕಲನಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠ ಸಾಹಿತ್ಯ ಪುರಸ್ಕಾರ, ‘ಸಕ್ಕರೆ ತುಪ್ಪ’ ಮಕ್ಕಳ ಕವನ ಸಂಕಲನಕ್ಕೆ ನಾಲತವಾಡ ವಿಜಯ ಪ್ರಕಾಶನದಿಂದ ಮಕ್ಕಳ ರತ್ನ ಪ್ರಶಸ್ತಿ,, ‘ಮಂಗಳನ ಅಂಗಳಕೆ’ ಕವನ ಸಂಕಲನಕ್ಕೆ ಮೂಡುಬಿದಿರೆಯಲ್ಲಿ ನಡೆದ ೭೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹಸ್ತಪ್ರತಿಗೆ ಗೌರವಧನ, ರಾಷ್ಟ್ರಕೂಟ ಸಾಹಿತ್ಯಶ್ರೀ ಪುರಸ್ಕಾರ, ಇವುಗಳಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ, ಬಾಲವಿಕಾಸ ಅಕಾಡಮಿ, ಕಲಬುರ್ಗಿಯ ತಪೋವನ ಮಠ ಮುಂತಾದವುಗಳಿಂದ ದೊರೆತ ಗೌರವಗಳ ಜೊತೆಗೆ ವಿಜಾಪುರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶಿಕ್ಷಕರ ಸಂಘದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ರಾಜ್ಯ ಸರಕಾರದ ಶಿಕ್ಷಣ ಇಲಾಖೆಯಿಂದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಮುಂತಾದ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.

ಉಲ್ಲೇಖ ಬದಲಾಯಿಸಿ