ನೀಲಕಂಠೇಶ್ವರ ನಾಟ್ಯಸೇವಾ ಸಂಘ

ರಂಗಕಲೆ ಸಂಸ್ಥೆ
(ನೀನಾಸಂ ಇಂದ ಪುನರ್ನಿರ್ದೇಶಿತ)

ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಕೆ.ವಿ.ಸುಬ್ಬಣ್ಣ ಅವರು ಸ್ಥಾಪಿಸಿದ ಒಂದು ರಂಗಕಲಾ ಸಂಘ. ಇದು ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ಹೆಗ್ಗೋಡಿನಲ್ಲಿದೆ. ಸುಬ್ಬಣ್ಣನವರ ಮಗ ಕೆ.ವಿ.ಅಕ್ಷರ ಇದರ ಈಗಿನ ಮುಖ್ಯಸ್ಥರು. ತಿರುಗಾಟ ಎಂಬ ಹೆಸರಿನ ತಂಡ ಎಲ್ಲೆಡೆ ಸಂಚರಿಸಿ ಪ್ರದರ್ಶನ ನೀಡುತ್ತದೆ.

ನೀನಾಸಂ 

ಇತಿಹಾಸ ಬದಲಾಯಿಸಿ

ಸುಬ್ಬಣ್ಣನವರು ೧೯೪೯ರಲ್ಲಿ ಸ್ಥಾಪಿಸಿದ ‘ನೀನಾಸಂ’ ಒಂದು ಅನನ್ಯ ಸಂಸ್ಥೆ. ಹೆಗ್ಗೋಡಿನ ಸುತ್ತು-ಮುತ್ತಲಿನ ರಂಗಾಸಕ್ತರನ್ನು ಒಟ್ಟುಗೂಡಿಸಿ, ಅವರ ಆಸಕ್ತಿಗೆ ಉತ್ತೇಜನ ಕೊಡುವ ಒಂದು ನಮ್ರ ಉದ್ದೇಶದಿಂದ ಪ್ರಾರಂಭಿಸಿದ ಈ ಸಂಸ್ಥೆಯ ಚಟುವಟಿಕೆಗಳು ಈಗ ಹಲವಾರು ಕ್ಷೇತ್ರಗಳಲ್ಲಿ ಹಬ್ಬಿಕೊಂಡು ಒಂದು ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ಬಂದಿದೆ. ಕರ್ನಾಟಕ ನಾಟಕ ಚಳವಳಿಗೆ ಹೆಗ್ಗೋಡಿನ ನೀನಾಸಂ ಚುಕ್ಕಾಣಿಯಾಗಿ ಕೆಲಸ ಮಾಡಿದೆ. ಅಲ್ಲಿಯ ಜನರು ಪ್ರಚುರಪಡಿಸುತ್ತಿರುವ ರಂಗಚಟುವಟಿಕೆಗಳು ಸುಬ್ಬಣ್ಣನವರ ಶ್ರಮಕ್ಕೆ ಸಾಕ್ಷಿಯಾಗಿ ನಿಂತಿವೆ.

ಚಟುವಟಿಗೆಗಳು ಬದಲಾಯಿಸಿ

‘ನೀನಾಸಂ’ ಸಂಸ್ಥೆಯು ನಡೆಸುತ್ತಿರುವ ಹಲವಾರು ಚಟುವಟಿಗೆಗಳಲ್ಲಿ ಕೆಲವು ಮುಖ್ಯವಾದವು:
೧.ಒಂದು ವಿಶಿಷ್ಟ ರಂಗತಂಡವನ್ನು ಸ್ಥಾಪಿಸಿ, ಹಲವಾರು ನಾಟಕಗಳನ್ನು ರಚಿಸಿ, ಅವುಗಳನ್ನು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಪ್ರದರ್ಶಿಸುವ ‘ತಿರುಗಾಟ’ವೆಂಬ ರಂಗ ಸಂಚಾರದ ವ್ಯವಸ್ಠೆ.
೨. ‘ಶಿವರಾಮ ಕಾರಂತ ರಂಗಮಂದಿರ’ವೆಂಬ ಒಂದು ಸುಸಜ್ಜಿತ ರಂಗಮಂದಿರ ಸ್ಥಾಪನೆ.
೩. ‘ನೀನಾಸಂ ರಂಗ ಶಿಕ್ಷಣ ಕೇಂದ್ರ’
೪. ‘ನೀನಾಸಂ’ ಚಿತ್ರಸಮಾಜ
೫. ‘ನೀನಾಸಂ’ ಜನಸ್ಪಂದನ
೬. ‘ನೀನಾಸಂ’ ಮಾತುಕತೆ
೭. ‘ನೀನಾಸಂ ಪ್ರತಿಷ್ಠಾನ’ವೆಂಬ ಸಂಸ್ಥೆಯ ಸ್ಥಾಪನೆ. ಈಗ ಈ ಸಂಸ್ಥೆಯ ಚಟುವಟಿಕೆಗಳು ಹಲವು ಹತ್ತಾರು, ಅಲ್ಲದೆ ಅದು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಮಾಜ ಸೇವೆ ಸಲ್ಲಿಸುವ ಹಿರಿಯ ಉದ್ದೇಶವಿಟ್ಟುಕೊಂಡು ದುಡಿಯುತ್ತಿರುವ ಒಂದು ಹಿರಿಮೆಯ ಸಂಸ್ಥೆ ಎಂದು ಗುರುತಿಸಿಕೊಂಡಿದೆ.
೮. ಅಕ್ಷರ ಪ್ರಕಾಶನ

  1. ನೀನಾಸಂ ಸಂಸ್ಕೃತಿ ಶಿಬಿರ

ಸ್ಥಾಪಿತವಾದಂದಿನಿಂದ ಈ ವರೆಗೆ ನೂರಾರು ನಾಟಕಗಳನ್ನೂ, ಅಭ್ಯಾಸ ಪ್ರಯೋಗಗಳನ್ನೂ ನೀನಾಸಂ ರಂಗದ ಮೇಲೆ ತಂದಿದೆ. ಅಂಥ ಪಟ್ಟಿಯಲ್ಲಿ, ಹಲವು ಪಾಶ್ಚಾತ್ಯ, ಸಂಸ್ಕೃತ, ಹಿಂದಿ ಮತ್ತು ಕನ್ನಡ ನಾಟಕಗಳು ಸೇರಿಕೊಂಡಿವೆ. ‘ತುಘಲಕ್‌’ ‘ಸ್ಮಶಾನ ಕುರುಕ್ಷೇತ್ರಂ’ ‘ಪೋಲಿ ಕಿಟ್ಟಿ, ‘ಅಶ್ವತ್ಥಾಮನ್‌’ ‘ಅಹಲ್ಯೆ’ ‘ಯಾರೋ ಅಂದರು' ಮುಂತಾದ ಜನಪ್ರಿಯ ಕನ್ನಡ ನಾಟಕಗಳನ್ನು ರಂಗದ ಮೇಲೆ ತಂದ ಖ್ಯಾತಿ ನೀನಾಸಂ ಗೆ ಸಲ್ಲುತ್ತದೆ. ‘ತಿರುಗಾಟ’, ತಂಡದವರು ಹೆಸರಾಂತ ರಂಗಕರ್ಮಿಗಳು ನಿರ್ದೇಶಿಸಿದ ಹಲವಾರು ನಾಟಕಗಳನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಿದ್ದಾರೆ. ‘ತದ್ರೂಪಿ’ ‘ಆಲಿಬಾಬ’ ‘ಈ ಕೆಳಗಿನವರು’ ‘ಚಿದಂಬರ ರಹಸ್ಯ’ಸೆಜುವನ್‌ ನಗರದ ಸಾಧ್ವಿ’ ‘ಪಂಜರ ಶಾಲೆ’ ‘ತುಕ್ರನ ಕನಸು’ ‘ಹೂ ಹುಡುಗಿ’ ‘ಗೋಕುಲ ನಿರ್ಗಮನ’ ‘ಅಗ್ನಿ ಮತ್ತು ಮಳೆ’ - ಇವುಗಳಲ್ಲಿ ಕೆಲವು. ಸಂಸ್ಕೃತ ಮಹಾ ಕವಿ, ಕಾಳಿದಾಸನ ‘ಅಭಿಜ್ಞಾನ ಶಾಕುಂತಲಂ’ ನಾಟಕದ ಅದ್ಭುತ ಪ್ರಯೋಗವನ್ನು ನಡೆಸುತ್ತಿದ್ದಾರೆ. ಇವೆಲ್ಲವೂ ಹೆಗ್ಗೋಡಿನ ನೀನಾಸಂ ಚಟುವಟಿಕೆಗಳ ಅಂಗವಾಗಿ ‘ರಂಗ ಶಿಕ್ಷಣ ಕೇದ್ರ’ ಗಳಿಸಿದ ಸಾಧನೆಗಳಲ್ಲಿ ಕೆಲವು.

1971ರಲ್ಲಿ 750 ಆಸನಗಳ ಅಂತರರಾಷ್ಟ್ರೀಯ ಖ್ಯಾತಿಯ ರಂಗಮಂಟಪವಾಗಿ (ಶಿವರಾಮ ಕಾರಂತ ರಂಗಮಂದಿರ) ರೂಪುಗೊಂಡಿತು.

ಬಾಹ್ಯ ಕೊಂಡಿಗಳು ಬದಲಾಯಿಸಿ