ಕರ್ದಮ: ಬ್ರಹ್ಮನ ಮಾನಸಪುತ್ರರಾದ ಬ್ರಹ್ಮಋಷಿಗಳಲ್ಲಿ ಒಬ್ಬ. ಮಹಾಭಾರತದಲ್ಲಿ ಇವನ ವಿಚಾರವಾಗಿ ಹೆಚ್ಚು ವಿವರಗಳಿವೆ. ಈತ ಸರಸ್ವತೀ ತೀರದಲ್ಲಿ ವಿಷ್ಣುವನ್ನು ಕುರಿತು ತಪಸ್ಸು ಮಾಡಿದ. ಪ್ರತ್ಯಕ್ಷನಾದ ವಿಷ್ಣುವನ್ನು ಸಂತಾನಾರ್ಥವಾಗಿ ತನಗೆ ಪತ್ನಿಯೊಬ್ಬಳು ಬೇಕೆಂದು ಬೇಡಿದ. ನೀನಿದ್ದೆಡೆಗೇ ಸ್ವಯಂಭುವ ಮನು ಬಂದು ತನ್ನ ಮಗಳನ್ನು ಕೊಡುವನು ಎಂದು ಹೇಳಿ ವಿಷ್ಣು ಅಂತರ್ಧಾನನಾದ. ಸ್ವಲ್ಪಕಾಲದಲ್ಲೆ ಸ್ವಯಂಭುವ ಮನು ತನ್ನ ಮಗಳಾದ ದೇವಹೂತಿಯನ್ನು ಅಲ್ಲಿಗೆ ಕರೆತಂದು ಕರ್ದಮನಿಗೆ ಕೊಟ್ಟು ಮದುವೆ ಮಾಡಿದ. ದೇವಹೂತಿಯಲ್ಲಿ ಕರ್ದಮನಿಗೆ ಕಳಾ, ಅನಸೂಯಾ, ಶ್ರದ್ಧಾ, ಹವಿರ್ಭುಕ್, ಅರುಂಧತಿ, ಶಾಂತಿ, ಗತಿ, ಕ್ರಿಯಾ, ಖ್ಯಾತಿ ಎಂಬ ಒಂಬತ್ತು ಮಂದಿ ಹೆಣ್ಣುಮಕ್ಕಳಾದರು. ಮುಂದೆ ಇವರು ಕ್ರಮವಾಗಿ ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ವಸಿಷ್ಠ, ಅಥರ್ವಮುನಿ, ಪುಲಹ, ಕ್ರತು, ಭೃಗು ಎಂಬ ಒಂಬತ್ತು ಮಹರ್ಷಿಗಳನ್ನು ಮದುವೆಯಾದರು. ಇದಾದ ಅನಂತರ ಕರ್ದಮನಿಗೆ ಸಂನ್ಯಾಸ ತೆಗೆದುಕೊಳ್ಳಬೇಕೆಂಬ ಇಚ್ಛೆ ಹುಟ್ಟಿತು. ಇದನ್ನು ಕರ್ದಮ ತನ್ನ ಹೆಂಡತಿಗೆ ತಿಳಿಸಲು ಅವಳು ತನಗೆ ಪುತ್ರ ಸಂತಾನವಾದ ಹೊರತು ಸಂನ್ಯಾಸವನ್ನು ತೆಗೆದುಕೊಳ್ಳಕೂಡದೆಂದು ಹೇಳಿದಳು. ಕರ್ದಮ ದೇವಹೂತಿಯಲ್ಲಿ ಕಪಿಲನೆಂಬ ಮಗನನ್ನು ಪಡೆದ ಅನಂತರ ಸಂನ್ಯಾಸಾಶ್ರಮಕ್ಕೆ ತೆರಳಿದ. (ಜಿ.ಎಚ್.)

ಕರ್ದಮ

ಉಲ್ಲೇಖನಗಳು ಬದಲಾಯಿಸಿ

[೧]

  1. http://www.hindupedia.com/en/Kardama
"https://kn.wikipedia.org/w/index.php?title=ಕರ್ದಮ&oldid=740468" ಇಂದ ಪಡೆಯಲ್ಪಟ್ಟಿದೆ