ಸರ್ ಉದಯನ್ ಚಿನುಭಾಯ್ ಬ್ಯಾರೋನೆಟ್ (೨೫ ಜುಲೈ ೧೯೨೯ - ೧ ಸೆಪ್ಟೆಂಬರ್ ೨೦೦೬) ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಶಹಾಪುರದ ೩ ನೇ ಬ್ಯಾರೋನೆಟ್ ಸರ್ ಚಿನುಭಾಯ್ ಮಧೋಲಾಲ್ ರಾಂಚೋಡ್‍ಲಾಲ್, ಭಾರತದ ಗುಜರಾತ್‍ನ ಅಹಮದಾಬಾದ್‍ನ ಉದ್ಯಮಿ, ಪ್ರಸಿದ್ಧ ಕ್ರೀಡಾಪಟು ಮತ್ತು ಗುಜರಾತ್ ಗೃಹರಕ್ಷಕರ ಕಮಾಂಡೆಂಟ್ ಜನರಲ್ ಆಗಿದ್ದರು.[೧][೨][೩]

ಉದಯನ್ ಚಿನುಭಾಯ್
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ಜನನಜುಲೈ ೨೫, ೧೯೨೯
ಮರಣಸೆಪ್ಟೆಂಬರ್ ೧, ೨೦೦೬
ಉದ್ಯೋಗಕ್ರೀಡಾಪಟು

ಬಾಲ್ಯದ ಜೀವನ ಬದಲಾಯಿಸಿ

ಉದಯನ್ ಚಿನುಭಾಯ್ ಅವರು ರಾಂಚೋಡ್‍ಲಾಲ್ ಬ್ಯಾರೋನೆಟ್‍ಗಳ ಶ್ರೀಮಂತ ಮತ್ತು ವಿಶಿಷ್ಟ ಕುಟುಂಬದಲ್ಲಿ ಜನಿಸಿದರು. ಇವರು ೨ ನೇ ಬ್ಯಾರೋನೆಟ್ ಸರ್ ಗಿರಿಜಾಪ್ರಸಾದ್ ಚಿನುಭಾಯ್ ಮಧೋಲಾಲ್ ರಾಂಚೋಡ್‍ಲಾಲ್, ಮತ್ತು ಲೇಡಿ ತನುಮತಿ ಅವರ ಹಿರಿಯ ಮಗನಾಗಿದ್ದರು.[೧]

ಕುಟುಂಬದ ವ್ಯವಹಾರದ ಜವಾಬ್ದಾರಿಗಳು ಚಿಕ್ಕ ವಯಸ್ಸಿನಲ್ಲಿ ಅವರ ಹೆಗಲ ಮೇಲೆ ಬಿದ್ದವು. ಅವರು ಬಾಂಬೆ ವಿಶ್ವವಿದ್ಯಾಲಯದಿಂದ ೧೯೫೦ ರಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು ಮತ್ತು ಶೀಘ್ರದಲ್ಲೇ ಜವಳಿ ಗಿರಣಿಗಳ ಕುಟುಂಬ ವ್ಯವಹಾರಕ್ಕೆ ಸೇರಿದರು.[೪] ಅವರು ೧೯೫೩ ರಲ್ಲಿ ಮುನೀರಾ (ಮುನೀರಾ ಖೋಡಾದ್ ಫೋಜ್ದಾರ್) ಅವರನ್ನು ವಿವಾಹವಾದರು ಮತ್ತು ಒಬ್ಬ ಮಗನನ್ನು ಹೊಂದಿದ್ದರು.[೧]

ಉದ್ಯಮಿ ಬದಲಾಯಿಸಿ

ಅವರು ವಿಶ್ವವಿದ್ಯಾಲಯದಿಂದ ಪದವಿ ಪಡೆದ ಕೂಡಲೇ ತಮ್ಮ ತಂದೆ ಸರ್ ಗಿರಿಜಾಪ್ರಸಾದ್ ಅವರೊಂದಿಗೆ ಅವರ ಕುಟುಂಬದ ಒಡೆತನದ ಜವಳಿ ವ್ಯವಹಾರದ ಜವಾಬ್ದಾರಿಗಳನ್ನು ವಹಿಸಿಕೊಂಡರು. ನಂತರ, ಅವರು ಅಹಮದಾಬಾದ್ ನಗರದಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಆಗಿಯೂ ಹೆಸರು ಗಳಿಸಿದರು.

ಕ್ರೀಡಾಪಟು ಬದಲಾಯಿಸಿ

ಅವರು ಶಾಲಾ ದಿನಗಳಿಂದ ಕ್ರಿಕೆಟ್ ಆಟಗಾರರಾಗಿದ್ದರು ಮತ್ತು ರಣಜಿ ಟ್ರೋಫಿ ಪಂದ್ಯಾವಳಿಗಳಲ್ಲಿ ಆಡಿದರು ಮತ್ತು ೧೯೫೨ ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸಂಯೋಜಿತ ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸಿದರು.[೪] ನಂತರ ವ್ಯಾಪಾರದ ಕಾರಣ ಅವರು ಆಟದ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಪಿಸ್ತೂಲ್ ಶೂಟಿಂಗ್‍ನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು.

ಅವರು ಶೂಟರ್ ಆಗಿದ್ದರು ಮತ್ತು ೧೯೬೧ ರಲ್ಲಿ ಅವರು ರಾಷ್ಟ್ರೀಯ ಚಾಂಪಿಯನ್‍ಶಿಪ್‍ನಲ್ಲಿ ಪಿಸ್ತೂಲ್ ರಿವಾಲ್ವರ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು ಮತ್ತು ಈ ಪ್ರಶಸ್ತಿಯನ್ನು ೧೪ ವರ್ಷಗಳ ಕಾಲ ಉಳಿಸಿಕೊಂಡರು. ಅವರು ೧೯೭೪ ರಲ್ಲಿ ಸಕ್ರಿಯ ಕ್ರೀಡೆಯಿಂದ ನಿವೃತ್ತರಾದರು. ಈ ಅವಧಿಯಲ್ಲಿ ಅವರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಾಲ್ಕು ಬಾರಿ ದೇಶವನ್ನು ಪ್ರತಿನಿಧಿಸಿದ್ದರು ಮತ್ತು ಬೆಳ್ಳಿ ಪದಕವನ್ನು ಗೆದ್ದಿದ್ದರು.[೫] ಸಕ್ರಿಯ ಕ್ರೀಡೆಗಳಿಂದ ನಿವೃತ್ತರಾದ ನಂತರ, ಅವರನ್ನು ಗುಜರಾತ್ ಕ್ರೀಡಾ ಮಂಡಳಿಯ ಸದಸ್ಯರಾಗಿ ನೇಮಿಸಲಾಯಿತು ಮತ್ತು ಗುಜರಾತ್ ರಾಜ್ಯ ರೈಫಲ್ ಅಸೋಸಿಯೇಷನ್‍ನ ಸ್ಥಾಪಕ ಅಧ್ಯಕ್ಷರಾಗಿದ್ದರು.[೪]

ಇವರು ೧೯೭೨ ರಲ್ಲಿ ಶೂಟಿಂಗ್ ಕ್ಷೇತ್ರದಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.[೬]

ಕಮಾಂಡೆಂಟ್, ಗೃಹರಕ್ಷಕ ದಳ ಬದಲಾಯಿಸಿ

೧೯೬೦ ರಲ್ಲಿ ಗುಜರಾತ್ ರಾಜ್ಯ ರಚನೆಯಾದಾಗ, ಆಗಿನ ಬಾಂಬೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ಉದಯನ್ ಚಿನುಭಾಯ್ ಅವರನ್ನು ಗುಜರಾತ್ ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್ ಆಗಿ ಅಧಿಕಾರ ವಹಿಸಿಕೊಳ್ಳಲು ಆಹ್ವಾನಿಸಿದರು. ಅವರು ಈ ಸಂಸ್ಥೆಯಲ್ಲಿ ೨೮ ವರ್ಷಗಳ ಕಾಲ ಸ್ವಯಂಪ್ರೇರಿತ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸಿದರು. ೧೯೬೦ ರಲ್ಲಿ ಪ್ರಾರಂಭವಾದಾಗ ೬೦೦೦ ಬಲವನ್ನು ಹೊಂದಿದ್ದ ಗೃಹರಕ್ಷಕ ದಳವು ೧೯೮೭ ರಲ್ಲಿ ಇವರ ನಿವೃತ್ತಿಯ ಸಮಯದಲ್ಲಿ ೪೨೦೦೦ ಕ್ಕೆ ವಿಸ್ತರಿಸಿತು. ಅವರ ಅಧಿಕಾರಾವಧಿಯಲ್ಲಿ ಅವರು ೧೯೬೨ ರ ಚೀನಾದ ಆಕ್ರಮಣ, ೧೯೬೫ ಮತ್ತು ೧೯೭೧ ರ ಪಾಕಿಸ್ತಾನದೊಂದಿಗಿನ ಯುದ್ಧಗಳು, ಮೊರ್ವಿ ಅಣೆಕಟ್ಟು ದುರಂತ ಮತ್ತು ಇತರ ನೈಸರ್ಗಿಕ ವಿಪತ್ತುಗಳು ಮತ್ತು ಗಲಭೆಗಳ ಸಮಯದಲ್ಲಿ ಅಮೂಲ್ಯವಾದ ಸೇವೆಗಳನ್ನು ನೀಡಿದರು.[೭][೮][೯][೧೦][೧೧] ರಾಷ್ಟ್ರಪತಿ ಆಳ್ವಿಕೆ ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ, ಅವರಿಗೆ ನಾಗರಿಕ ರಕ್ಷಣಾ ಗೌರವ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು.[೧೦]

ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆಯಲ್ಲಿ ಅವರ ಶ್ಲಾಘನೀಯ ಸ್ವಯಂಪ್ರೇರಿತ ಸೇವೆಯನ್ನು ಗುರುತಿಸಿ, ಶೌರ್ಯ ಮತ್ತು ವಿಶಿಷ್ಟ ಸೇವೆಗಳಿಗಾಗಿ ಭಾರತದ ರಾಷ್ಟ್ರಪತಿಯಿಂದ ಅತ್ಯುನ್ನತ ಗೌರವವನ್ನು ಪಡೆದರು.[೧೨]

ಬ್ಯಾರೋನೆಟ್ ಬದಲಾಯಿಸಿ

೧೯೯೦ ರಲ್ಲಿ, ಅವರ ತಂದೆ ಸರ್ ಗಿರಿಜಾಪ್ರಸಾದ್ ಅವರ ಮರಣದ ನಂತರ, ಅವರು ಶಹಾಪುರದ ೩ ನೇ ಬ್ಯಾರೋನೆಟ್ ಸರ್ ಚಿನುಭಾಯ್ ಮಧೋಲಾಲ್ ರಾಂಚೋಡ್‍ಲಾಲ್ ಆಗಿ ನೇಮಕಗೊಂಡರು.

ಲೋಕೋಪಕಾರಿ ಬದಲಾಯಿಸಿ

ತಮ್ಮ ಜೀವನದ ಕೊನೆಯ ಭಾಗದಲ್ಲಿ, ಅವರು ಗುಜರಾತ್ ಕಾಲೇಜಿನ ಪೋಷಕರಾಗಿ ಲೋಕೋಪಕಾರಿ ಕಾರ್ಯಗಳಿಗೆ ಮತ್ತು ಅವರ ಪೂರ್ವಜರು ಪ್ರಾರಂಭಿಸಿದ ವಿಕ್ಟೋರಿಯಾ ಜುಬಿಲಿ ಆಸ್ಪತ್ರೆಯ ವಿಸ್ತರಣೆಗಾಗಿ ತಮ್ಮ ಸಮಯ ಮತ್ತು ಹಣವನ್ನು ಮೀಸಲಿಟ್ಟರು.

ಮರಣ ಬದಲಾಯಿಸಿ

ಅವರು ಸೆಪ್ಟೆಂಬರ್ ೧, ೨೦೦೬ ರಂದು ಅಹಮದಾಬಾದ್‍ನಲ್ಲಿ ನಿಧನರಾದರು. ಗುಜರಾತ್ ರಾಜ್ಯಪಾಲರು ತಮ್ಮ ಸಂತಾಪ ಸಂದೇಶದಲ್ಲಿ ರಾಜ್ಯಕ್ಕೆ ಅವರು ಮಾಡಿದ ಕಾರ್ಯಗಳನ್ನು ಉಲ್ಲೇಖಿಸಿದ್ದರು..[೧೩]

ಅವರ ಮಗ ಪ್ರಶಾಂತ್ ಚಿನುಭಾಯಿ ಅವರ ನಂತರ, ಸರ್ ಚಿನುಭಾಯ್ ಮಧೋಲಾಲ್ ರಾಂಚೋಡ್‍ಲಾಲ್ ಆಗಿ ೪ ನೇ ಬ್ಯಾರೋನೆಟ್ ಆದರು. ಪ್ರಶಾಂತ್, ಹೃಷಿಕೇಶ್ ಜನಕ್ರೆ ಮೆಹ್ತಾ ಅವರ ಪುತ್ರಿ ಸ್ವಾತಿ ಅವರನ್ನು ವಿವಾಹವಾದರು. ಅವರು ಮೂವರು ಹೆಣ್ಣು ಮಕ್ಕಳ ಪೋಷಕರಾಗಿದ್ದಾರೆ.

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ ೧.೨ "Sir Chinubhai Madhowlal Ranchhodlal". The Peerage. Retrieved 5 April 2013.
  2. Debrett's peerage & baronetage 2008 by Charles Kidd, Christine Shaw. Debrett's Limited. 2008. p. B-203, B-204. ISBN 9781870520805.
  3. Gatha of Indian Shooters
  4. ೪.೦ ೪.೧ ೪.೨ "Gujarat College, Patron". Archived from the original on 2017-02-25. Retrieved 2024-04-13.
  5. Careers Digest , Volume 5. 1965. p. 67.
  6. Udayan Chinubhai Baronet Arjun Awardee-1972 (Shooting)
  7. Police Administration Report Including Railways - Page 45
  8. Report on the incident of police firing at Ahmedabad on the 5th ... - Page 43
  9. Report: inquiry into the communal disturbances at Ahmedabad and ... - Page 124
  10. ೧೦.೦ ೧೦.೧ Those ten months: President's rule in Gujarat - Page 185|Main railway and road bridges were afforded proper protection by the Home Guards, day and night. Udayan Chinubhai, the Commandant of Home Guards, was also appointed the honorary Director of Civil Defence.
  11. 73 Magazine for Radio Amateurs. 73, Incorporated. 1980. p. 61.
  12. National honours encyclopaedia - Volume 1 - Page 108
  13. [೧] a press release dated 2 Sept. 2006 stated that "The Gujarat Governor... expressed profound grief over the demise of Shri Udayan Chinubhai Baronet..."