ಕನ್ನಡ ಕಲಾಲೋಕದಲ್ಲಿ ಕಳೆದ ಮೂರು ದಶಕದಿಂದ ನಡೆಯುವ ಯಾವುದೇ ಘಟನೆಗೆ ಸಾಕ್ಷಿ ಪ್ರಜ್ಞೆಯಾಗುತಿದ್ದವರು ಅಗ್ರಹಾರದ ಲಕ್ಷ್ಮಿನರಸಿಂಹನ್. ಕಲಾವಲಯದಲ್ಲಿ ಅ.ಲ.ನರಸಿಂಹನ್ ಎಂದೆ ಸುಪರಿಚಿತರು. ಕಲಾಪ್ರದರ್ಶನ ಆತ್ಮೀಯರಿಗೆ ಅಲನ. ಕಲಾಶಿಬಿರ,ಕಲಾ ಪುಸ್ತಕದ ಲೋಕಾರ್ಪಣೆ, ಅದು ಎಲ್ಲಿಯೇ ನಡೆಯಲಿ ಅವರು ಅಲ್ಲಿ ಅವರು ಹಾಜರು. ಕಲಾವಿಮರ್ಶೆ ಕಲಾಇತಿಹಾಸ ಅವರ ಹೃದಯಕ್ಕೆ ಹತ್ತಿರ. ಕಲಾಪ್ರಪಂಚವು ಒಬ್ಬ ಸಕ್ರಿಯ ಸಹೃದಯಿಯನ್ನು ಮೊನ್ನೆ ಶುಕ್ರವಾರ ಕಳೆದುಕೊಂಡಿತು. ಕಲಾ ಪ್ರಪಂಚದ ದಾಖಲೀಕರಣದ ಸರದಾರರವರು.ಉತ್ತಮ ಛಾಯಾಗ್ರಾಹಕ. ನೂರಾರು ಕಲಾವಿದರ ಅಸಂಖ್ಯ ಚಿತ್ರಗಳು ಅವರ ಕ್ಯಾಮೆರಾ `ಚಿಪ್'ನಲ್ಲಿ ಸೆರೆಯಾಗಿವೆ. ಅನೇಕ ವರ್ಷಗಳವರೆಗೆ ತೆಗೆದ ಅವರು ಚಿತ್ರದ ರೀಲುಗಳು ಕಿಲೋ ಮೀಟರ್‌ಗಟ್ಟಲೆ ಉದ್ದ ಚಾಚಿಕೊಳ್ಳುತ್ತವೆ.`ಅವರೊಬ್ಬ ಚಿತ್ರಕಲಾ ವಿಶ್ವಕೋಶವಾಗಿದ್ದರು' ಎಂದು ಎಸ್.ಜಿ. ವಾಸುದೇವ ನೆನೆಯುತ್ತಾರೆ.

ಬಾಲ್ಯ ಬದಲಾಯಿಸಿ

ಅ.ಲ.ನರಸಿಂಹನ್ ೧೯೪೬ನೆಯ,ಡಿಸೆಂಬರ್ ೧೯ರಂದುಬೆಂಗಳೂರಿನಲ್ಲಿ ಜನಿಸಿದರು. ತಂದೆ ಅಗ್ರಹಾರದ ತಿರುಮಲಾಚಾರ್‌ ಮತ್ತು ತಾಯಿ ಅಲಮೇಲಮ್ಮ. ಅವರದು ಮಂಡ್ಯದ ವಿಶಿಷ್ಟಾದ್ವೈತ ಸಂಪ್ರದಾಯದ ಮನೆತನ.ಅದಕ್ಕೆ ಮೊದಲಿನಿಂದಲೂ ಮೇಲುಕೋಟೆ ಮತ್ತು ಪು.ತಿ.ನ ಎಂದರೆ ಅಚ್ಚು ಮೆಚ್ಚು. ಬಾಲಕ ನರಸಿಂಹನಿಗೆ ಎಳವೆಯಲ್ಲಿಯೇ ಪುಸ್ತಕ ದೀಕ್ಷೆ. ಕಾರಣ ತಂದೆಯದು ವೃತ್ತಿಯಿಂದ ಹಳೇಪತ್ರಿಕೆ ಮತ್ತು ಪುಸ್ತಕಗಳ ವ್ಯವಹಾರ. ಹಾಗಾಗಿ ಸದಾ ಪುಸ್ತಗಳ ಮಧ್ಯದಲ್ಲಿಯೇ ಅವರ ಬಾಲ್ಯ ಕಳೆಯಿತು. ಮುದ್ರಣ ಮಾದ್ಯಮದೊಂದಿಗೆ ಅವರ ನಂಟು ಗಾಢವಾಯಿತು. ಓದಿದ್ದು ಮಲ್ಲೇಶ್ವರದಲ್ಲಿ. ಅವರ ಗುರು ಡಾ.ಎಂ. ಬಿ .ಪಾಟೀಲರ ಪ್ರಕಾರ ವಿದ್ಯಾರ್ಥಿ ದೆಶೆಯಲ್ಲಿ ಪ್ರತಿಭಾವಂತ. ವಯಸ್ಸಿಗೆ ಸಹಜವಾದ ಹುಡುಗಾಟವಿದ್ದರೂ ಗುರುಗಳು ಹೇಳಿದರೆ ಗಪ್‌ಚುಪ್ .ಹೈಸ್ಕೂಲು ಶಿಕ್ಷಣದ ನಂತರ ಪ್ರಿಂಟಿಂಗ್‌ನಲ್ಲಿ ಡಿಪ್ಲೊಮೋ ಪಡೆದರು. ಸರ್ಕಾರಿ ಪ್ರಿಂಟಿಂಗ್‌ಪ್ರೆಸ್‌ನಲ್ಲಿ ೧೯೬೫ ರಲ್ಲಿ ಕೆಲಸಕ್ಕೆ ಸೇರಿದರು .ಅಲ್ಲಿ ೧೯೭೮ರತನಕ ಕೆಲಸ ಮಾಡಿದರು. ನಂತರ ಕರ್ನಾಟಕ ಗೆಜೆಟಿಯರ್‌ನಲ್ಲಿ ಅನ್ವೇಷಕನಾಗಿ ಕೆಲಸಕ್ಕೆ ಸೇರಿದರು. ಹೊಸ ಕೆಲಸ ಅವರ ವೃತ್ತಿ ಮತ್ತು ಪ್ರವೃತ್ತಿ ಪೂರಕವಾಯಿತು.ಗೆಳೆಯರ ಬಳಗವೂ ಬೆಳೆಯಿತು. ಅಲ್ಲಿ ೨೦೦೪ ರಲ್ಲಿ ನಿವೃತ್ತರಾದರೂ ತಮ್ಮ ಕಲಾಕಾಯಕ ಕೊನೆಯವರೆಗೆ ಮುಂದುವವರಿಸಿದರು.

ವೃತ್ತಿ ಜೀವನ ಬದಲಾಯಿಸಿ

ಕಲೆಯ ಗೀಳು ಎಳೆಯವಯಸ್ಸಿನಲ್ಲಿಯೇ ಹತ್ತಿತು. ಹಿರಿಯ ಕಲಾವಿದ ಎಂ ಆರ್‌ ಹಡಪದ ಅವರ ಕೆನ್‌ಕಲಾ ಶಾಲೆಯಲ್ಲಿ ಚಿತ್ರಕಲೆಯ ಅಧ್ಯಯನ ಮಾಡಿದರು. ಚಿತ್ರಕಲೆಯಲ್ಲಿ ಹೊಸ ಆಯಾಮಗಳ ಕುರಿತ ಕುತೂಹಲ. ಅದರ ಜೊತೆ ಫೊಟೊಗ್ರಫಿಯಲ್ಲಿ. ಅತೀವ ಆಸಕ್ತಿ. ವಿದ್ಯಾರ್ಥಿ ದೆಶೆಯಲ್ಲಿಯೇ ಕ್ಯಾಮರಾ ಕೈಗೆ ಬಂತು. ಆಗಿನ್ನೂ ಫಿಲ್ಮ್ ಕ್ಯಾಮರಾಗಳ ಕಾಲ. ಅವರು ತೆಗೆದ ಪೋಟೋಗಳ ಫಿಲ್ಮ್ ರೀಲುಗಳ ಉದ್ದವೇ ಹಲವು ಮೈಲು ಆಗಬಹುದು. ಸಾಹಿತ್ಯ ಶಾಸನ, ಇತಿಹಾಸಗಳಲ್ಲಿ ಸಮಾನ ಆಸಕ್ತಿ. ಅವರು ಶಾಸನ ಶಾಸ್ತ್ರವನ್ನು ಡಾ. ದೇವರಕೊಂಡಾರೆಡ್ಡಿ ಮತ್ತು ಡಾ.ಶೇಷಶಾಸ್ತ್ರಿಗಳಿಂದ ಕಲಿತರು ಡಾ. ಪಿ.ವಿ.ಕೆ. ಸೇರಿದಂತೆ ಇಂದಿನ ಅನೇಕ ಸಂಶೋಧಕರು ಅವರ ಸಹಪಾಠಿಗಳು.ತಾವು ಬರೆಯುವವರ ಜೊತೆಗೆ ಗೆಳೆಯರಿಗೂ ಉತ್ತೇಜನ ನೀಡಿದರು. ಹಿರಿಯಲಿಪಿ ತಜ್ಞರಾದ ಡಾ. ಪಿ.ವಿ. ಕೃಷ್ಣಮೂರ್ತಿಯವರು, "ತಾವು ಸಂಶೋಧಕರಾಗಿ ಮತ್ತು ಬರಹಗಾರರಾಗಿ ಬೆಳೆಯಲು ಕಲಾಪ್ರಪಂಚದ ಸಂಪಾದಕರಾಗಿದ್ದ ಅ.ಲ.ನ ನೀಡಿದ ಉತ್ತೇಜನವೇ ಕಾರಣ” ಎಂದು ನೆನೆದರು.“ಹೀಗೆ ಅಲನ ಅವರ ಪ್ರೋತ್ಸಾಹ ಪಡೆದವರ ದೊಡ್ಡ ಪಡೆಯೇ ಇದೆ. ಅ.ಲ . ನರಸಿಂಹನ್ ಗೆಳೆಯರು ಯಾರೇ ಆದರೂ ಅವರ ಪುಸ್ತಕ ರಚನೆಯಿಂದ ಹಿಡಿದು ಮುದ್ರಣ ಕರಡು ತಿದ್ದುವಿಕೆ, ಚಿತ್ರರಚನೆ ಮುಖಪುಟ,ವಿನ್ಯಾಸ ಕೊನೆಗೆ ಬಿಡುಗಡೆ ಆಗುವವರೆಗಿನ ಎಲ್ಲ ಕೆಲಸದಲ್ಲೂ ತೊಡಗಿಸಿಕೊಳ್ಳುತಿದ್ದರು.ಯಾರದೇ ಗೌರವಾರ್ಥ ಬಂದ ಅಭಿನಂದನ ಗ್ರಂಥವಾದರೂ ಅಲ್ಲಿ ಅವರ ಕೊಡುಗೆ ಎದ್ದು ಕಾಣಣುತಿತ್ತು. ಹೀಗಾಗಿ ಅವರ ಗೆಳೆಯರ ಬಳಗ ಬಹುದೊಡ್ಡದು. ಕಲಾ ದಾಖಲೀಕರಣದ ಕಡೆ ಅವರ ಮನಸ್ಸು ಹರಿಯಿತು. ಚಿತ್ರ ರಚನೆಗಿಂತ ಚಿತ್ರ ವಿಮರ್ಶೆ, ಚಿತ್ರಕಲೆಯ ಇತಿಹಾಸ ಅವರ ಮೆಚ್ಚಿನ ಹವ್ಯಾಸವಾಯಿತು.ಅಷ್ಟೇನೂ ಹಣಕಾಸಿನ ಅನುಕೂಲವಿಲ್ಲದೆ ಇದ್ದರೂ ಹೊಸ ಕ್ಯಾಮರಾ ಪೇಟೆಗೆ ಬಂದರೆ ಅದು ಅವರ ಕೈಗೆ ಬರುತಿತ್ತು. ಹೀಗಾಗಿ ಅವರಲ್ಲಿ ಹಣ ಸಂಗ್ರಹಣೆಗಿಂತ ಚಿತ್ರ ಸಂಗ್ರಹಣೆಯೇ ಆದ್ಯತೆ ಪಡೆಯಿತು. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಲೆಗೆ ಸಂಬಂಧಿಸಿದ ಲೇಖನ ಮತ್ತು ಚಿತ್ರಗಳನ್ನು ಸಂಗ್ರಹಿಸಿ ಇಡುವುದು ಅವರ ಹವ್ಯಾಸವಾಗಿತ್ತು. ಅವರ ಮನೆಯಲ್ಲಿ ನೆಲದಿಂದ ಸೂರಿನವರೆಗೆ ಇರುಕಿಸಿದ ಪುಸ್ತಕಗಳ ರಾಶಿ. ಒಳಗೆ ಹೋಗುವವರು ಪುಸ್ತಕ ಸ್ಪರ್ಶ ಪಡೆಯದೆ ಇರುವುದು ಅಸಾಧ್ಯದ ಮಾತು. ಕಲಾಕೃತಿಗಳ ರಚನೆಗಿಂತ, ಕಲಾ ಸಾಹಿತ್ಯ ರಚನೆಯಲ್ಲೇ ಅವರು ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದ ಅವರು, `ಕರ್ನಾಟಕ ಚಿತ್ರಕಲೆಯ ಸಾಂಸ್ಕೃತಿಕ ಅಧ್ಯಯನ', ದ ವಿಷಯವಾಗಿ ಪ್ರಬಂಧಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪಡೆದಿದ್ದರು. ಸರ್ಕಾರಿ ಪ್ರಿಂಟಿಂಗ್‌ಪ್ರೆಸ್‌ನಲ್ಲಿ ನೌಕರಿ ಬಿಟ್ಟು ೧೯೭೮ ರಲ್ಲಿ ಅನ್ವೇಷಕನಾಗಿ ಗೆಜೆಟಿಯರ್ ಸೇರಿದ ಮೇಲೆ ಪ್ರವೃತ್ತಿಯೇ ವೃತ್ತಿಯಾಯಿತು. ತಮ್ಮ ಗೆಳೆಯರ , ಆತ್ಮೀಯರ ಮನೆಯಲ್ಲಿ ಯಾವುದೇ ಸಮಾರಂಭವಾದರೂ ಅದನ್ನು ಚಿತ್ರದಲ್ಲಿ ಸೆರೆ ಹಿಡಿಯುವುದು ಅವರ ಕೆಲಸ. ಅದೂ ಸ್ವಯಂ ಇಚ್ಛೆಯಿಂದ. ಅವರು ತೆಗೆದ ಫೊಟೊಗಳ ವೆಚ್ಚ ಪಡೆಯಲು ಹಿಂಜರಿಕೆ. ಅವರ ಗೆಳೆಯರು ಅದಕ್ಕೆ ಫಿಲ್ಮ ರೋಲ್‌ ಕೊಟ್ಟರೂ ಪಡೆಯಲು ಹಿಂದುಮುಂದು ನೋಡುವಷ್ಟು ಸಂಕೋಚದ ಪ್ರಾಣಿ. ೧೯೭೮ರಲ್ಲಿ ಕರ್ನಾಟಕ ಗಜೆಟಿಯರ್ ಇಲಾಖೆಗೆ ಅನ್ವೇಷಕರಾಗಿ ಸೇರ್ಪಡೆಯಾದರು. ಸುಮಾರು ನಾಲ್ಕು ದಶಕ ಫೋಟೊಗ್ರಫಿ ಅವರ ಉಸಿರಾಯಿತು. ೨೦೦೪ರಲ್ಲಿ ನಿವೃತ್ತಿ ಹೊಂದಿದರು. ನಂತರ ಕಲಾನ್ವೇಷಣೆ ಪೂರ್ಣಾವಧಿ ಕೆಲಸವಾಯಿತು.

ವೈವಾಹಿಕ ಜೀವನ ಬದಲಾಯಿಸಿ

ಡಾ.ಮಂಜುಳಾ ಅವರ ಜೀವನ ಸಂಗಾತಿ. ಅವರದು ಹಿರಿಯರು ಮಾಡಿದ ಮದುವೆಯಲ್ಲ. ಆದರೆ ಅಂತರ್‌ಜಾತಿಯ ಮದುವೆಯೂ ಅಲ್ಲ. ಆರ್ಯ ಸಮಾಜದಲ್ಲಿ ಗುರುಗಳ ಗೆಳೆಯರ ಬೆಂಬಲದಿಂದ ಮದುವೆಯಾದರು. ಆದರೂ ಹಿರಿಯರ ಕೆಂಗಣ್ಣಿಗೆ ಗುರಿಯಾಗಿ ಹಲವು ವರ್ಷ ಅವರ ವಿಶ್ವಾಸ ಗಳಿಸಲು ತುಂಬ ಹೆಣಗಬೇಕಾಯಿತು. ಹೀಗಾಗಿ ಮದುವೆಯಾದ ನಂತರ ಮಲ್ಲೇಶ್ವರದಲ್ಲಿ ಪ್ರತ್ಯೇಕ ಸಂಸಾರ ಹೂಡಿದರು. ಮಡದಿ ಮಂಜುಳಾ ಸಾಹಿತ್ಯದಲ್ಲಿ ಡಾಕ್ಟರೇಟ್‌ ಪಡೆದವರು, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಉದ್ಯೋಗಿ. ಪತಿ ತನ್ನ ಹವ್ಯಾಸವಾದ ಕಲಾಪ್ರಪಂಚದಲ್ಲಿ ರೆಕ್ಕೆ ಬಿಚ್ಚಿಹಾರುವ ಹಕ್ಕಿಯಾಗಲು ಅವರ ಸಹಕಾರವೂ ಕಾರಣ. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಕಲೆಗೆ ಸಂಬಂಧಿಸಿದ ಲೇಖನ ಮತ್ತು ಚಿತ್ರಗಳನ್ನು ಸಂಗ್ರಹಿಸಿ ಇಡುವುದು ಅವರ ಹವ್ಯಾಸವಾಗಿತ್ತು. ಕಲಾಕೃತಿಗಳ ರಚನೆಗಿಂತ, ಕಲಾ ಸಾಹಿತ್ಯ ರಚನೆಯಲ್ಲೇ ಅವರು ಹೆಚ್ಚಾಗಿ ತೊಡಗಿಕೊಂಡಿದ್ದರು. ಕಲಾಪ್ರಪಂಚದ ದೊಡ್ಡ ಭಂಡಾರವೇ ಅವರ ಮನೆಯಾಗಿತ್ತು. ತಾಳೆಗರಿ ಕಾಲದಿಂದ ಇತ್ತೀಚಿನ ಕಲಾಪ್ರಪಂಚದ ಇತಿಹಾಸ ಹೇಳುವ ಸುಮಾರು ಹತ್ತು ಸಾವಿರಕ್ಕೂ ಅಧಿಕ ಕೃತಿಗಳು ಅವರ ಮನೆಯಲ್ಲಿವೆ. ಡಾ.ಅ.ಲ.ನ ಅವರ ಕರ್ನಾಟಕದ ಚಿತ್ರಕಲೆಯಲ್ಲಿ ಸಾಂಸ್ಕೃತಿಕ ಅಂಶಗಳು ಪಿಎಚ್.ಡಿ. ಮಹಾಪ್ರಬಂಧ ಇದು ಚಿತ್ರಕಲಾ ಕ್ಷೇತ್ರದ ಎರಡನೆಯ ಸಂಶೋಧನೆಯ ಗ್ರಂಥ. ಇದರ ವಿಸ್ತೃತ ರೂಪ ಕರ್ನಾಟಕದ ಭಿತ್ತಿ ಚಿತ್ರ ಪರಂಪರೆ ಕೃತಿ (೧೯೯೮)ರಲ್ಲಿ ಬಂದಿದೆ. ಮೊದಲಿನದು ದೇಸಿ ಪರಂಪರೆಯ ಅಧ್ಯಯನವಾದರೆ ಇದು ಮಾರ್ಗ (ಶಿಷ್ಟ) ಪರಂಪರೆಯ ಅಧ್ಯಯನವಾಗಿದೆ. ಕರ್ನಾಟಕದ ಚಿತ್ರಕಲಾ ಪರಂಪರೆಯಲ್ಲಿ ಬಹುಮುಖ್ಯ ಆಯಾಮಗಳಾದ ‘ದೇಸಿ’ ಮತ್ತು ‘ಮಾರ್ಗ’ ಸಂಪ್ರದಾಯದ ಮೂಲಭೂತ ವಿಶಿಷ್ಟ ನೆಲೆಗಳನ್ನು ಶೋಧಿಸುವ ಕಾರಣಕ್ಕಾಗಿ ಈ ಎರಡು ಸಂಶೋಧನ ಮಹಾಪ್ರಬಂಧಗಳಿಗೆ ಸಹಜವಾಗಿಯೇ ಪ್ರಾಮುಖ್ಯತೆ ಪ್ರಾಪ್ತವಾಗಿದೆ. ಅವರು ಚಿತ್ರರಚನೆ ಕಡೆ ಹೆಚ್ಚು ಗಮನವಿಲ್ಲ. ಚಿತ್ರ ಪ್ರಪಂಚವನ್ನು ಜಗತ್ತಿಗೆ ಪರಿಚಯಿಸುವುದು ಅವರ ಅದಮ್ಯ ಹಂಬಲ. ಉತ್ತಮವಾದುದನ್ನು ಎಲ್ಲರ ಗಮನಕ್ಕೆ ತರುವ ಬಯಕೆ ಅದರ ಪರಿಣಾಮ ಚಿತ್ರಕಲಾವಿಮರ್ಶೆ ಮತ್ತು ಕಲಾ ಇತಿಹಾಸಗಳ ದಾಖಲೀಕರಣಕ್ಕೆ ಆದ್ಯತೆ ನೀಡಿದರು.

ಸಾಹಿತ್ಯ ಸಾಧನೆ ಬದಲಾಯಿಸಿ

ಚಿತ್ರಕಲೆಗೆ ಸಂಬಂಧಿಸಿದಂತೆ ಆರು ಕೃತಿಗಳನ್ನು ಅವರು ರಚನೆ ಮಾಡಿದ್ದಾರೆ. 30ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ೧೦೦ಕ್ಕೂ ಹೆಚ್ಚು ಲೇಖನ ಬರೆದಿದ್ದಾರೆ.ಲಲಿತಕಲಾ ಅಕಾಡೆಮಿಯ `ಕಲಾವಾರ್ತೆ' ಮತ್ತು `ಕಲಾವಿಕಾಸ' ಪತ್ರಿಕೆಗಳಿಗೆ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಆ ಅವಧಿಯಲ್ಲಿ ಬರೆದುದಕ್ಕಿಂತ ಬರೆಸಿದುದೇ ಹೆಚ್ಚು. ಅದರಿಂದ ಹಲವಾರು ಬರಹಗಾರರು ಬೆಳಕಿಗೆ ಬರಲು ಕಾರಣರೂ ಆಗಿದ್ದಾರೆ. ಲಲಿತಕಲಾ ಅಕಾಡೆಮಿ ಸದಸ್ಯರಾಗಿಯೂ ಅವರು ದುಡಿದಿದ್ದಾರೆ. ೧೯೯೩ರಲ್ಲಿ ಅ.ಲ.ನ. ಮತ್ತು ಎನ್. ಮರಿಶಾಮಾಚಾರ ಅವರು ಸಂಪಾದಿಸಿರುವ ‘ಚಿತ್ರ ಕಲಾ ಪ್ರಪಂಚ’ ಒಂದು ಗಮನಾರ್ಹವಾದ ಸಂಪಾದನೆ ಕೃತಿ. ಈ ಸಂಪುಟದಲ್ಲಿ ೭೦ ಲೇಖನಗಳಿದ್ದು ಪ್ರಕಟವಾದ ಈ ಲೇಖನಗಳನ್ನು ಬೇರೆ ಬೇರೆ ಗ್ರಂಥಗಳ ಮೂಲದಿಂದ ಸಂಗ್ರಹಿಸಿ ಆಯ್ಕೆ ಮಾಡಿದ್ದಾರೆ. ಇತಿಹಾಸ ಪೂರ್ವಕಾಲದ ಗುಹಾಚಿತ್ರಗಳಿಂದ ಹಿಡಿದು ಆಧುನಿಕ ಮತ್ತು ಮಕ್ಕಳ ಚಿತ್ರ ಕಲೆಯವರೆಗೆ ಹಲವಾರು ಲೇಖನಗಳು ಸಂಗ್ರಹಗೊಂಡಿವೆ. ಇಲ್ಲಿಯ ಲೇಖನಗಳು ಚಿತ್ರ ಕಲೆಯ ವಿವಿಧ ಆಯಾಮಗಳನ್ನು ಪರಿಚಯಿಸುತ್ತವೆ. ಅನೇಕ ಲೇಖನಗಳು ವಿದ್ವತ್‌ಪೂರ್ಣವಾಗಿದ್ದು ಸಂಶೋಧಕರಿಗೆ ಅಧ್ಯಯನಕಾರರಿಗೆ ಇದೊಂದು ಉತ್ತಮ ಆಕರ ಗ್ರಂಥವಾಗಿದೆ. ಅ.ಲ. ನರಸಿಂಹನ್ ಅವರ (ಸಂಪಾದಿಸಿದ) ’ಶುಭರಾಯ’ ಕೃತಿ – (೧೯೯೩)ಯಲ್ಲಿ ಅಜ್ಞಾತ ಕಲಾವಿದನೊಬ್ಬನ ಬಗ್ಗೆ ೬ ಜನರು ವಿಭಿನ್ನ ನೆಲೆಯಲ್ಲಿ ಶುಭರಾಯ ಚಿತ್ರ ಕಲಾವಿದನನ್ನು ಅಧ್ಯಯನಕ್ಕೆ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಕಲಾವಿದನ ಅನೇಕ ಕಲಾ ಕೃತಿಗಳು ತೌಲನಿಕವಾಗಿ ವಿವೇಚನೆಗೊಂಡಿವೆ. .‘ಇಂಪ್ರೆಷನಿಸಂ’ (೧೯೯೪). ಅ.ಲ.ನ. ಅವರ ಕೃತಿ. ಅವರ ಹಲವಾರು ವರ್ಷಗಳ ಚಿಂತನೆಯ ವಿಭಿನ್ನ ನೆಲೆಗಳು ಇಲ್ಲಿ ಆಕಾರ ಪಡೆದಕೊಂಡಿವೆ. ಡಾ.ಅ.ಲ.ನ. ಅವರ ಇಂತಹದೆ ಒಂದು ಗ್ರಂಥ ‘ಆಲೇಖ್ಯ’ (೧೯೯೯). ೧೯೮೫ರಿಂದ ೧೯೯೮ ಅವಧಿಯಲ್ಲಿ ಬರೆದ ಲೇಖನಗಳ ಸಂಗ್ರಹವಿದು. ಚಿತ್ರ ಕಲೆಯ ವಿಭಿನ್ನ ನೆಲೆಗಳನ್ನು ಕುರಿತು ಅವರು ನಡೆಸಿದ ಅಧ್ಯಯನದ ಹಿನ್ನಲೆಯಲ್ಲಿ ಇಲ್ಲಿನ ಲೇಖನಗಳು ಆಕಾರ ಪಡೆದಿವೆ. ಅಧ್ಯಯನಕಾರರಿಗೆ ತುಂಬ ಉಪಯುಕ್ತ ವಿವರಗಳನ್ನು ಇಲ್ಲಿನ ಲೇಖನಗಳು ಒದಗಿಸುತ್ತವೆ "ವಿಕಾಸ ಕಂಡ ಕರ್ನಾನಾಟಕ ಚಿತ್ರಕಲೆ " ಮಕ್ಕಳಿಗಾಗಿ ಬರೆದ ಪುಸ್ತಕ. ಅದು ಸರಳ ಶೈಲಿಯಲ್ಲಿ ಚಿತ್ರಕಲೆಯ ಪರಿಚಯ ಮಾಡಿಕೊಡುವುದು. ಅಂದಹಾಗೆ ವಿಕಾಸ ಅವರ ಏಕಮಾತ್ರ ಪುತ್ರ . ಇಂದು ಅವರ ಸಂಗ್ರಹದಲ್ಲಿರುವ ಸಹಸ್ರಾರು ಅಮೂಲ್ಯ ಪುಸ್ತಕಗಳ ಸದ್ವಿನಿಯೋಗ ಮಾಡುವ ಭಾದ್ಯತೆ ಅವನ ಹೆಗಲಿಗೆ ಬಿದ್ದಿದೆ,ಕರ್ನಾಟಕ ಕಲಾಪರಿಷತ್ತಿನಲ್ಲಿ ಅವನ್ನು ಸಂರಕ್ಷಿಸುವ ಹೊಣೆ ಕಲಾರಸಿಕರು ಮತ್ತು ಕಲಾಭಿಮಾನಿಗಳು ಮಾಡಬೇಕಿದೆ.

ಗೌರವ ಬದಲಾಯಿಸಿ

ನಾಡೋಜ, ಆರ್.ಎಂ. ಹಡಪದ ಪ್ರಶಸ್ತಿ, ಮೈಸೂರು ದಸರಾ ಉತ್ಸವ ಮತ್ತು ಲಲಿತಕಲಾ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳು ಅವರಿಗೆ ಒಲಿದಿವೆ.

ಅಂತ್ಯ ಬದಲಾಯಿಸಿ

ನರಸಿಂಹನ್ ಅವರ ಪತ್ನಿ ಡಾ. ಮಂಜುಳಾ . ಐದು ವರ್ಷಗಳ ಹಿಂದೆ ಅವರನ್ನು ಅಗಲಿದರು.ಆ ನೋವು ಅವರನ್ನು ಬಹಳ ಕಾಡುತಿತ್ತು. ನರಸಿಂಹನ್ ತಮ್ಮ ಅನಾರೋಗ್ಯದ ನಡುವೆಯೂ ಈಚೆಗೆ ವಿಜಾಪುರದಲ್ಲಿ ನಡೆದ ಇತಿಹಾಸ ಮತ್ತು ಪುರಾತತ್ತ್ವ ಸಮ್ಮೇಳನದಲ್ಲಿ ಹಾಗೂ `ವೃಕ್ಷ ವಾಸುದೇವ್ ಅವರ ಕಲೆ ಮತ್ತು ಬದುಕು'ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಷ್ಟಪಟ್ಟು ವೇದಿಕೆ ಏರಿದ್ದ ಅವರು, ಯು.ಆರ್. ಅನಂತಮೂರ್ತಿ ಅವರಿಂದ ಪುಸ್ತಕದ ಪ್ರತಿ ಪಡೆದಿದ್ದರು. ಅಂದಿನ ಕಾರ್ಯಕ್ರಮ ಸಂಘಟಿಸಿದ್ದ ಕೃತಿಯ ಸಂಪಾದಕ ಎನ್. ಮರಿಶಾಮಾಚಾರ್ ಬಾರದ ಪ್ರಪಂಚದ ಹಾದಿ ಹಿಡಿದ ಎರಡೇ ದಿನಗಳಲ್ಲಿ ನರಸಿಂಹನ್ ಸಹ ಅವರನ್ನು ಹಿಂಬಾಲಿಸಿದರು. ಕಲಾಪ್ರಪಂಚ ಬಡವಾಯಿತು. ಇತ್ತೀಚೆಗೆ ಅನಾರೋಗ್ಯದಿಂದ ಮೆತ್ತಗಾದ ಮೇಲೆ ಓಡಾಟ ಕಡಿಮೆಮಾಡಿ ಅವರು ಚಿತ್ರರಚನೆಗೆ ತೊಡಗಲು ನಿರ್ಧರಿಸಿಕೊಂಡಿದ್ದರು. ಅದಕ್ಕೆ ಅಗತ್ಯವಾದ ಎಲ್ಲ ಪೂರ್ವಸಿದ್ಧತೆಯಾಗಿತ್ತು. ಆದರೆ ಬಹಳ ಕಾಲದಿಂದ ಕಾಡುತಿದ್ದ ಅವರ ಕಾಲು ಅವಕಾಶ ಕೊಡಲಿಲ್ಲ ಮತ್ತು ಕಾಲನೂ ಕಾಯಲಿಲ್ಲ.