ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲ ಪೇಟೆಯಲ್ಲಿನ ಪಡುವನ್ನೂರು ಮತ್ತು ನೆಟ್ಟನಿಗೆ ಗ್ರಾಮಗಳ ಗಡಿ ಪ್ರದೇಶದಲ್ಲಿ “ಹನುಮಗಿರಿ” ಎಂದು ಕರೆಯಲ್ಪಡುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರವು ಒಂದು.

ವಿಶೇಷತೆ ಬದಲಾಯಿಸಿ

ಧರ್ಮಶ್ರೀ ಪ್ರತಿಷ್ಟಾನ(ರಿ) ಈಶ್ವರಮಂಗಲ ಸೇವಾಸಂಸ್ಥೆಯವರಿಂದ ವಿಶ್ವದ ಅತೀ ಎತ್ತರದ ಶ್ರೀ ಪಂಚಮುಖಿ [[ಹನುಮಂತ|ಆಂಜನೇಯನ] ವಿಗ್ರಹವು ಪ್ರತಿಷ್ಟಾಪನೆಯಾಗಿದೆ. ಆಂಜನೇಯ ವಿಗ್ರಹವು ೧೧ ಅಡಿ ಎತ್ತರವಿದ್ದು ಕಾರ್ಕಳದ ಕೃಷ್ಣಶಿಲೆಯಿಂದ ರೂಪಗೊಂಡ ಏಕಶಿಲಾ ವಿಗ್ರಹವಾಗಿದೆ. ದಕ್ಷಿಣಕ್ಕೆ ನರಸಿಂಹ, ಉತ್ತರಕ್ಕೆ ವರಾಹ, ಊರ್ಧ್ವಮುಖಕ್ಕೆ ಹಯಗ್ರೀವ, ಪಶ್ಚಿಮಕ್ಕೆ ಗರುಡ ಇರುವ ಪಂಚಮುಖಿ ಆಂಜನೇಯ ವಿಗ್ರಹವು ಶನಿದೋಷ ನಿವಾರಣೆಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ದೇವರಿಗೆ ಗರ್ಭಗುಡಿ ಇಲ್ಲವಾದರು ಬೆಳಿಗ್ಗೆಯಿಂದ ಸಂಜೆಯ ತನಕ ಪೂಜೆ, ಪುನಸ್ಕಾರಗಳು ನಡೆಯುತ್ತಲೇ ಇರುವುದು ಇಲ್ಲಿಯ ವಿಶೇಷತೆ.

ಪರಿಚಯ ಬದಲಾಯಿಸಿ


ಈಶ್ವರಮಂಗಲ ಪೇಟೆಯ ಪ್ರವೇಶ ದ್ವಾರವನ್ನು ದಾಟಿ ಹತ್ತಾರು ಹೆಜ್ಜೆ ಮುಂದಿಟ್ಟಾಗ ಪ್ರವೇಶ ಮಂಟಪವು ನಮ್ಮನ್ನು ಸ್ವಾಗತಿಸುತ್ತದೆ. ಹನುಮಗಿರಿಯಲ್ಲಿ ನಮಗೆ ಮೊದಲಿಗೆ ಕಾಣಸಿಗುವುದು “ರಾಮಾಯಾಣ ಥೀಮ್ ಪಾರ್ಕ್”. ಇದರ ಎಡಭಾಗದಲ್ಲಿ ರಾಮಾಯಣದ ಕಥಾನಕಗಳನ್ನು ಶಿಲೆಗಳಲ್ಲಿ ಕೆತ್ತಿ ಫಲಕಗಳ ಮೂಲಕ ಗೋಡೆಗಳಿಗೆ ತಾಗಿಸಿ ವಿವರಿಸಿದ್ದಾರೆ. ಈ ಪಾರ್ಕ್ನಲ್ಲಿ ಸಂಪೂರ್ಣ ರಾಮಾಯಾಣವೇ ನೋಡಲು ಸಾಧ್ಯ. ನಂತರ ಸುಂದರ ಉದ್ಯಾವನದ ಮಧ್ಯೆ ನಡೆದಾಡುವಾಗ ಕ್ಷೇತ್ರದ ಪ್ರಧಾನ ಭಾಗವಾದ ಆಂಜನೇಯನ ಮಂದಿರವು ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಭಕ್ತರ ವಿಶ್ರಾಂತಿಗಾಗಿ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನರಸಿಂಹ ಮಂಟಪವಿದೆ.

ಪಕ್ಕದಲ್ಲಿರುವ ಗರುಡ ಮಂಟಪವನ್ನು ದಾಟಿ ಹೋದಾಗ ಸಂಜೀವಿನಿ ದಿವ್ಯೌಷಧ ಸಸ್ಯಗಳ ವನ ಹಾಗೂ ಹನುಮಾನ್ ಮಾನಸೋದ್ಯಾನವಿದೆ. ಶಿಲೆಗಳಲ್ಲಿ ಕೆತ್ತಲಾಗಿರುವ ಕಥಾನಕಗಳು ಅಲ್ಲಲ್ಲಿ ಕಾಣಸಿಗುವುದು ಇಲ್ಲಿಯ ವಿಶೇಷತೆ. ಇದು ಪ್ರವಾಸಿಗರಿಗೆ ತೇತ್ರಾಯುಗದ ನೆನಪನ್ನು ಮರುಕಳಿಸುತ್ತದೆ. ಸಂಜೀವಿನಿಯಂತಹ ಜೀವ ರಕ್ಷಕ ಗಿಡಮೂಲಿಕೆಗಳನ್ನು, ಔಷಧೀಯ ಸಸ್ಯಗಳನ್ನು ಪೋಷಿಸಿ ಪರಿಚಯಿಸುವ ಮತ್ತು ರಕ್ಷಿಸುವ ಉದ್ದೇಶದಿಂದ ಶ್ರೀ ಕ್ಷೇತ್ರದಲ್ಲಿ ಸಂಜೀವಿನಿ ಮಾನಸೋದ್ಯಾನ ನಿರ್ಮಿಸಲಾಗಿದೆ. ಇಲ್ಲಿ ೩೦೦ಕ್ಕೂ ಹೆಚ್ಚು ಬಗೆಯ ಗಿಡಗಳು ಕಾಣಸಿಗುತ್ತದೆ. ರಾಮಭಜನೆಯಲ್ಲಿ ತಲ್ಲೀನನಾದ ಆಂಜನೇಯನ ವಿಗ್ರಹಗಳಿವೆ. ಗೋವುಗಳ ಸಂರಕ್ಷಣೆಗಾಗಿ ಗೋಶಾಲೆ, ಅತಿಥಿ ಗೃಹ, ಮಕ್ಕಳ ಅನಾಥಶ್ರಮ, ಧ್ಯಾನಮಂದಿರ, ಸಭಾಭವನವಿದೆ ಹಾಗೂ ದಿನನಿತ್ಯ ಅನ್ನದಾನ ನಡೆಯುತ್ತದೆ. ಇದರೊಂದಿಗೆ ೨೦೧೭ರಲ್ಲಿ ೨೨ ಅಡಿ ಎತ್ತರದ ಶ್ರೀ ರಾಮನ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದಾರೆ.ಇದಲ್ಲದೆ ಬದುಕು ಸಮಾಜಕ್ಕೆ ಪ್ರಾಣ ದೇಶಕ್ಕೆ ಎಂಬ ಕಲ್ಫನೆಯೊಂದಿಗೆ ತಾಯಿ ಭಾರತಾಂಬೆಯ ಅಮರಜ್ಯೋತಿ ಮಂದಿರವನ್ನುಇಲ್ಲಿ ನಿರ್ಮಿಸಲಾಗಿದೆ.ಪ್ರಕೃತಿ ಮಾತೆಯ ಮಡಿಲಲ್ಲಿ ಮಲಗಿರುವ ಅಪರೂಪದ ದೇಗುಲ 'ಹನುಮಗಿರಿ'. ಇದು ಸುಂದರ ಪ್ರವಾಸಿ ತಾಣವೂ ಆಗಿದ್ದು ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ರಾಮಾಯಣ ಮಹಾಕಾವ್ಯವನ್ನು ತಿಳಿಯುವ ಮನಸ್ಸಿದ್ದಲ್ಲಿ ಹನುಮಗಿರಿ ಕ್ಷೇತ್ರಕ್ಕೊಮ್ಮೆ ಭೇಟಿ ನೀಡಬಹುದು.

ಉಲ್ಲೇಖಗಳು ಬದಲಾಯಿಸಿ