ಕೇರಳಕಾಸರಗೋಡು ಜಿಲ್ಲೆಯ ಅನಂತಪುರ ಎನ್ನುವ ವಿಶಾಲವಾದ ಪ್ರದೇಶದಲ್ಲಿ ಕೆರೆಯ ನಡುವೆ ಇರುವ ದೇವಸ್ಥಾನ ಅನಂತಪುರ ಕ್ಷೇತ್ರ. ಇದನ್ನು ಜನರು ಸರೋವರ ಕ್ಷೇತ್ರ ಅನಂತಪುರ ಎಂದೂ ಹೇಳುತ್ತಾರೆ. ಪುರಾಣದ ಪ್ರಕಾರ ಈ ಕ್ಷೇತ್ರ ಕೇರಳದ ತಿರುವಂತಪುರ ಅನಂತಪದ್ಮನಾಭ ಸ್ವಾಮಿಯ ಮೂಲ ಸ್ಥಾನ.

ಸರೋವರ ಕ್ಷೇತ್ರ ಅನಂತಪುರ

ಶ್ರೀ ಅನಂತಪದ್ಮನಾಭಸ್ವಾಮಿ ಇಲ್ಲಿಯ ಪ್ರದಾನ ದೇವರು. ಕಾಸರಗೋಡು ಪೇಟೆಯಿಂದ ೧೨ ಕಿ.ಮಿ ಬಡಗು ಭಾಗಕ್ಕೆ ಬಂದಾಗ ಕುಂಬಳೆ ಪೇಟೆ ಸಿಗುತ್ತದೆ. ಅಲ್ಲಿಂದ ಪೂರ್ವಕ್ಕೆ ಬದಿಯಡ್ಕ ಮಾರ್ಗದಲ್ಲಿ ೪ ಕಿ.ಮಿ ಬಂದಾಗ ನಾಯ್ಕಪು ಎನ್ನುವ ಜಾಗೆ ಸಿಗುತ್ತದೆ. ಅಲ್ಲಿಂದ ೧ ಕಿ. ಮೀ ದೂರದಲ್ಲಿ ಇರುವ ವಿಶಾಲವಾದ ಪ್ರದೇಶದಲ್ಲಿ ಕೆರೆಯ ನಡುವೆ ರಾರಾಜಿಸುವ ಪುರಾತನ ದಿವ್ಯ ಸನ್ನಿಧಿ ಅನಂತಪುರ. ಮಂಗಳೂರಿನಿಂದ ಸುಮಾರು ೪೦ ಕಿ.ಮೀ ತೆಂಕು ಭಾಗಕ್ಕೆಬಂದಾಗ ಕುಂಬಳೆ ಪೇಟೆ ಸಿಗುತ್ತದೆ . ಹಾಗು ಪುತ್ತೂರು-ಬದಿಯಡ್ಕ ಮಾರ್ಗವಾಗಿಯು ಈ ಕ್ಷೇತ್ರಕ್ಕೆ ಬರಲು ಸಾಧ್ಯವಾಗುತ್ತದೆ. [೧]

ಇತಿಹಾಸ ಬದಲಾಯಿಸಿ

ಅನಂತಪುರ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನ ತುಳುನಾಡಿನ ಪುರಾತನ ಪ್ರಸಿದ್ದ ಪುಣ್ಯ ಕ್ಷೇತ್ರ. ವಿಶಾಲ ಕೆರೆಯ ನಡುವೆ ೫ ಹೆಡೆಯ ಸರ್ಪದ ಮೇಲೆ ಕುಳಿತ ಅನಂತಪದ್ಮನಾಭಸ್ವಾಮಿಯ ಮೂರ್ತಿ ಇದೆ. ನಿರ್ಜನ ಪ್ರದೇಶ ದೂರ ದೂರ ಒಂದು ಎರಡು ಮನೆ ಬೆಟ್ಟ ಗುಡ್ಡ ಪಾದೆಕಲ್ಲಿನ ನಡುವೆ ಇರುವ ಹಾದಿಯಲ್ಲಿ ಬಂದಾಗ ಮೊದಲಿಗೆ ದೇವಸ್ಥಾನದ ಆವರಣ ಗೋಡೆ ಸಿಗುತ್ತದೆ . ಇದು ಕೆಂಪು ಕಲ್ಲಿನಿಂದ ಕಟ್ಟಿದ ಪುರಾತನ ಸರ್ಪಕಟ್ಟ್ ಶೈಲಿಯ ಮೂರು ಮೀಟರ್ ಎತ್ತರದ ಆವರಣದ ಗೋಡೆ. ಸರ್ಪಕಟ್ಟ್ ಶೈಲಿಯ ಆವರಣ ಗೋಡೆಗೆ ಸರ್ಪಕ್ಕೂ ಸಮೇತ ಹತ್ತಲು ಸಾದ್ಯ ಆಗುವುದಿಲ್ಲವಂತೆ ಹಾಗಾಗಿ ಇದನ್ನು ಸರ್ಪಕಟ್ಟ್ ಹೇಳುತ್ತಾರೆ. ಆವರಣ ಗೋಡೆ ದಾಟಿ ಮುಂದೆ ಹೋದಾಗ ಬಲಿಕಲ್ಲಿನ ದರ್ಶನ ಆಗುತ್ತದೆ. ಆನಂತರ ಹಲವು ಮೆಟ್ಟಿಲುಗಳನ್ನು ಇಳಿದು ಮುಂದೆ ಹೋದಾಗ ಗೋಪುರ ಸಿಗುತ್ತದೆ. ಗೋಪುರಕ್ಕೂ ನಮಸ್ಕಾರ ಮಂಟಪಕ್ಕು ನಡುವೆ ಇರುವ ನೀರ ಮೇಲಿನ ಚಿಕ್ಕ ಸೇತುವೆಯಲ್ಲಿ ಹೋದರೆ ಗರ್ಭಗುಡಿಯಲ್ಲಿಗೆ ಸೇರುತ್ತದೆ. ಗರ್ಭಗುಡಿಯ ಒಳಗೆ ನೋಡುವಾಗ ಅನಂತಪದ್ಮನಾಭಸ್ವಾಮಿಯ ದರ್ಶನ.

ವಿಶೇಷ ಮೂರ್ತಿಗಳು ಬದಲಾಯಿಸಿ

ಕೆರೆಯ ನಡುವೆ ಗರ್ಭಗುಡಿಯಲ್ಲಿ ಎಡ ಬಲದಲ್ಲಿ ಶ್ರೀದೇವಿ, ಭೂಮಿದೇವಿಯರ ನಡುವೆ ಶ್ರೀಸ್ವಾಮಿಯ ದಿವ್ಯ ವಿಗ್ರಹ. ಎದುರುಗಡೆ ಗರುಡ, ಹನುಮಂತ ಮೊಣಕಾಲೂರಿ ಕೈಮುಗಿದು ಪ್ರಾರ್ಥಿಸುವ ವಿಗ್ರಹಗಳು ಹಾಗು ನಾಗಕನ್ನಿಕೆಯರ ವಿಗ್ರಹಗಳು ಸೇರಿ ಒಟ್ಟು ೭ ವಿಗ್ರಹಗಳು ಇದೆ. ಈ ವಿಗ್ರಹಗಳನ್ನು ಕಡುಶರ್ಕರ ಪಾಕದಿಂದ ತಯಾರಿಸಿದ್ದಾರೆ. ೬೪ ಬಗೆಯ ಸಸ್ಯಜನ್ಯ ಹಾಗು ಪ್ರಾಣಿಜನ್ಯ ವಸ್ತುಗಳಿಂದ ಸಂಗ್ರಹ ಮಾಡಿದ ಮದ್ದಿನ ಗುಣದ ಅಪೂರ್ವ ಪಾಕದಿಂದ ಗರ್ಭಗುಡಿಯ ಒಳಗಡೆಯಲ್ಲೆ ನಿರ್ಮಿಸಿದ ವಿಗ್ರಹಗಳು ನೋಡಲು ತುಂಬಾ ಸುಂದರ. ಕದಿರಮರದ ತಿರುಳಿನಿಂದ ಅಸ್ಥಿಪಂಜರ ತಯಾರಿಸಿ ಅದನ್ನು ಸುರುವಿಗೆ ಪ್ರತಿಷ್ಟೆ ಮಾಡುತ್ತಾರೆ. ಇದನ್ನು ಶೂಲ ಪ್ರತಿಷ್ಟೆ ಎಂದು ಹೇಳುತ್ತಾರೆ. ಆನಂತರ ಕಡುಶರ್ಕರ ಪಾಕವನ್ನು ಹಂತ ಹಂತವಾಗಿ ಲೇಪಸಿ ವಿಗ್ರಹದ ತಯಾರಿ ಮಾಡುತ್ತಾರೆ. ಕಡು ಶರ್ಕರ ಪಾಕದಲ್ಲಿ ಅಮೂಲ್ಯವಾದ ಮದ್ದಿನ ಸತ್ವ ತುಂಬಿರುವುದರಿಂದ ಈ ವಿಗ್ರಹಗಳಿಗೆ ಒಳ್ಳೆ ಪಾವಿತ್ರ್ಯ ಇದೆ. ಈ ರೀತಿಯ ವಿಗ್ರಹ ನಿರ್ಮಿಸಲು ತುಂಬಾ ಜನರ ಶ್ರಮ ಬೇಕಾಗುತ್ತದೆ. ಈ ರೀತಿಯ ಕಡುಶರ್ಕರ ಪಾಕದ ವಿಶೇಷ ವಿಗ್ರಹಗಳನ್ನು ಕೇರಳದ ಮೂರು ಕಡೆಯಲ್ಲಿ ಮಾತ್ರ ನೋಡಲು ಸಾಧ್ಯ. ಒಂದು ಕಣ್ಣೂರಿನ ಮಾಡಾಯಿಕಾವು ಭಗವತಿ ಕ್ಷೇತ್ರದಲ್ಲಿ ಇನ್ನೊಂದು ತಿರುವನಂತಪುರದ ಪದ್ಮನಾಭಸ್ವಾಮಿ ಕ್ಷೇತ್ರದಲ್ಲಿ ಹಾಗು ಕಾಸರಗೋಡಿನ ಈ ಅನಂತಪುರ ಸರೋವರ ಕ್ಷೇತ್ರದಲ್ಲಿ.

ದೇವರ ಮೊಸಳೆ ಬದಲಾಯಿಸಿ

ಅನಂತಪುರ ಕ್ಷೇತ್ರದ ವಿಶಾಲ ಕೆರೆಯಲ್ಲಿ ಒಂದು ಬಬಿಯ ಎನ್ನುವ ಮೊಸಳೆ ಇದೆ. ಈ ಮೊಸಳೆಯ ಬಗ್ಗೆ ಕೆಲವು ಐತಿಹ್ಯಗಳಿವೆ. ಮೊಸಳೆಗಳು ಸಾಮಾನ್ಯವಾಗಿ ಮಾಂಸಾಹಾರಿ ಆದರೆ ಇಲ್ಲಿಯ ಬಬಿಯ ಸಸ್ಯಹಾರಿ ಎನ್ನುವುದು ಒಂದು ವಿಶೇಷವಾದ ಸಂಗತಿ. ಹಿಂದೆ ಬ್ರಿಟಿಷರು ಅಲ್ಲಿ ಟೆಂಟ್ ಹಾಕಿದ್ದ ಸಂದರ್ಭ ಕೆರೆಯಲ್ಲಿ ಮೊಸಳೆ ಇರುವುದು ಗೊತ್ತಾಗಿ ಅದನ್ನು ಕೊಲ್ಲ ಬೇಕೆಂದು ಬಬಿಯ ಎಂದು ಕರೆದು ಹೊರಗೆ ಬಂದಾಗ ಗುಂಡು ಹಾರಿಸಿ ಕೊಲ್ಲುತ್ತಾರೆ. ಅದನ್ನು ಕೊಂದ ಬ್ರಿಟೇಷ್ ಅಧೀಕಾರಿ ಸ್ವಲ್ ಸ್ವಲ್ಪ ದಿವಸದಲ್ಲೆ ವಿಷದ ಹಾವು ಕಚ್ಚಿ ಸತ್ತು ಹೋಗುತ್ತಾನೆ. ಆದರೆ ಅಕಸ್ಮಾತ್ ಇನ್ನೊಂದು ಮೊಸಳೆ ಆ ಕೆರೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಅಲ್ಲಿಯ ಪೂಜಾರಿ ಬಬಿಯ ಎಂಬ ಹೆಸರಿನಿಂದ ಕರೆಯುತ್ತಾರೆ. ಆ ಮೊಸಳೆಗೆ ಪ್ರತಿದಿನ ಮದ್ಯಾಹ್ನ ಮಹಾಪೂಜೆ ಆದ ಮೇಲೆ ನೈವೇದ್ಯ ಕೊಡುವ ಸಮಯಕ್ಕೆ ಬಬಿಯಾ ಎಂದು ಕರೆಯುತ್ತಾರೆ. ಆಗ ಸುರಂಗದಿಂದ ಹೊರಗೆ ಬಂದು ನೈವೇದ್ಯ ಸ್ವೀಕಾರ ಮಾಡುತ್ತದೆ. ಈ ಮೊಸಳೆಗೆ ಜನರು ಹರಕೆಯ ರೂಪದಲ್ಲಿ ನೈವೇದ್ಯ ಸಮರ್ಪಣೆ ಮಾಡುವ ಪದ್ದತಿ ಕೂಡಾ ಇದೆ . ಕೆಲವೊಂದು ಸಲ ಬಬಿಯಾ ಕೆರೆಯಿಂದ ಮೇಲೆ ಬಂದು ಮಲಗಿರುತ್ತದೆ ಎಂದು ನೋಡಿದ ಜನರು ಹೇಳುತ್ತಾರೆ.

ವಿಶೇಷ ಸುರಂಗ ಬದಲಾಯಿಸಿ

ಅನಂತಪುರ ಕ್ಷೇತ್ರದ ಕೆರೆಯಲ್ಲಿ ಇರುವ ವಿಶೇಷ ಸುರಂಗಮಾರ್ಗದಲ್ಲಿ ಹೋದರೆ ತಿರುವನಂತಪುರದ ಪದ್ಮನಾಭಸ್ವಾಮಿಯ ಕ್ಷೇತ್ರಕ್ಕೆ ಸೇರುತ್ತದೆ ಎನ್ನುವುದು ಜನರ ನಂಬಿಕೆ. ಆದರೆ ಈ ಸುರಂಗಮಾರ್ಗದ ಇನ್ನೊಂದು ಬಾಗಿಲು ಮೊಗ್ರಲ್ ಕರಾವಳಿಯ ನಾಂಗುಯಿ ಎನ್ನುವ ಜಾಗದಲ್ಲಿ ಇದೆ ಎನ್ನುವುದನ್ನು ತಿಳಿದ ಹಿರಿಯರು ಹೇಳುತ್ತಾರೆ. ಕೆಲವು ಸಲ ಬಬಿಯಾ ಮೊಸಳೆ ಈ ಸುರಂಗದ ಪ್ರವೇಶ ದ್ವಾರದಲ್ಲಿ ಮಲಗಿರುತ್ತದೆ.

ಅನಂತಪುರ ಶಾಸನ ಬದಲಾಯಿಸಿ

ಅನಂತಪುರ ಕ್ಷೇತ್ರದ ಪರಿಸರದಲ್ಲಿ ಸಿಕ್ಕಿದ ಸುಮಾರ್ ೯೦೦ ವರ್ಷ ಹಳೆಯ ತುಳು ಶಾಸನವೆ ಅನಂತಪುರ ಶಾಸನ. ಶಾಸನದಲ್ಲಿರುವ ತುಳು ಲಿಪಿಗಳು ಅಸ್ಪಷ್ಟವಾಗಿದ್ದು ಮೊಗೆರೆರು ಈ ಗ್ರಾಮವನ್ನು ಕ್ಷೇತ್ರಕ್ಕೆ ಉಂಬಳಿ ಬಿಟ್ಟಿರುವ ಬಗೆಗಿನ ವಿವರಣೆ ತಿಳಿದು ಬರುತ್ತದೆ. ಕುಂಬಳೆಯ ಜಯಸಿಂಹ ಎನ್ನುವ ರಾಜ ಸುಮಾರು ೧೫ನೇ ಶತಮಾನದಲ್ಲಿ ಅನಂತಪುರದಲ್ಲಿ ಸ್ಥಾಪನೆ ಮಾಡಿರುವ ಶಾಸನ ಅನಂತಪುರ ಶಾಸನವೆಂದೆ ಹೆಸರು ಪಡೆದಿರುತ್ತದೆ. ಇದು ತುಳುವಿನಲ್ಲಿ ಮೊದಲಿಗೆ ಸಿಕ್ಕಿದ ಶಾಸನ ಹಾಗು ತುಳುಲಿಪಿಯಲ್ಲೆ ಇರುವುದು ಇದರ ವಿಶೇಷತೆ.

ಪರಿವಾರ ದೈವ ದೇವರು ಬದಲಾಯಿಸಿ

ಅನಂತಪುರ ಕ್ಷೇತ್ರದಲ್ಲಿ ಪದ್ಮನಾಭಸ್ವಾಮಿಯ ಆರಾಧನೆಯ ಜೊತೆಗೆ ಬೇರೆ ಉಪದೇವರುಗಳಾದ ಮಹಾಗಣಪತಿ, ಮಹಿಷಮರ್ದಿನಿ, ವನಶಾಸ್ತರ ಗೋಶಾಲೆಕೃಷ್ಣ ಹಾಗು ಉಳ್ಳಾಕುಳು ದೈವಗಳ ಅರಾಧನೆಯು ಇದೆ.

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-02-28. Retrieved 2017-06-12.