ಒತ್ತೆಕೋಲ ಬದಲಾಯಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ 'ಭೂತಕೋಲ" ಅಥವಾ 'ಭೂತನೇಮ' ದಂದು ನಾಲ್ಕೈದು ದೈವಗಳ ಆರಾಧನೆಯಿರುತ್ತದೆ. ಆದರೆ 'ಒತ್ತೆಕೋಲದಲ್ಲಿ ಆರಾಧಿಸಲ್ಪಡುವುದು ವಿಷ್ಣುಮೂರ್ತಿ ದೈವ ಮಾತ್ರ. ಆದ್ದರಿಂದಲೇ ಈ ಆರಾಧನೆಗೆ ಒಂದೇ ಕೋಲ(ಕನ್ನಡ) ಅಥವಾ ಒತ್ತೆಕೋಲ(ತುಳು) ಎಂದು ಹೆಸರು ಬಂದಿದೆ.

ಇತಿಹಾಸ ಬದಲಾಯಿಸಿ

ಪಂಜುರ್ಲಿ ದೈವವು ಹಿರಣ್ಯಾಕ್ಷನನ್ನು ಕೊಲ್ಲಲೋಸುಗ ವರಾಹಾವತಾರವಾದರೆ ವಿಷ್ಣುಮೂರ್ತಿ ದೈವವು ಪ್ರಿಯಭಕ್ತ ಪ್ರಹಲ್ಲಾದನನ್ನು ಉಳಿಸಿ, ಹಿರಣ್ಯಕಶಿಪುವನ್ನು ಕೊಲ್ಲಲು ತಾಳಿದ ನರಸಿಂಹಾವತಾರ. ನರಸಿಂಹಾವತಾರದ ರೌದ್ರಮೂರ್ತಿಯೇ ಒತ್ತೆಕೋಲದಲ್ಲಿ ಆರಾಧಿಸಲ್ಪಡುವ ವಿಷ್ಣುಮೂರ್ತಿ.

ಆಚರಣೆ ಬದಲಾಯಿಸಿ

ಒತ್ತೆಕೋಲ ಆಗುವುದಕ್ಕೆ ಕೆಲವು ದಿನಗಳ ಮುಂಚೆಯೆ ವಿಷ್ಣುಮೂರ್ತಿ ದೈವದ ಪೂಜಾರಿಗೆ ದರ್ಶನ ಬರುತ್ತದೆ. ದರ್ಶನ ಬಂದುಪೂಜಾರಿ ಆದೇಶದ ಮೇರೆಗೆ ಊರಿನವರು ಐದು ಹಲಸಿನ ಮರದ ಕೊಂಬೆಗಳನ್ನು ಕಡಿದು ವಿಶಾಲವಾದ ಬಯಲಲ್ಲಿ ಹಾಕಿ ಮಹೂರ್ತ ನಿಶ್ಚಯಿಸುತ್ತಾರೆ. ಮಹೂರ್ತ ತಿಳಿಸಿದ ನಂತರ ಭಕ್ತಾದಿಗಳು ಸೇವೆಯ ರೂಪದಲ್ಲಿ ಕೊಳ್ಳಿ(ಸೌದೆ) ತಂದು ಹಾಕಬಹುದು. ಕೇರಳದ ಮಲಯರು ವಿಷ್ಣಮೂರ್ತಿ ದೈವವನ್ನು ಕಟ್ಟುತ್ತಾರೆ. ಊರ ಜನರು ಕ್ರಿಯಾ ಭಾಗಗಳನ್ನು ನೀಡಿದ ನಂತರ ದೈವವೇಷಧಾರಿಗೆ ದರ್ಶನ(ಆವೇಶ) ಬರುತ್ತದೆ. ಈ ಸಮಯದಲ್ಲಿ ಬಿಲ್ಲವ. ಗಾಣಿಗ, ಬಂಟ, ಗೌಡ ಹಾಗೂ ಮಣಿಯಾಣಿ ಸಮುದಾಯದವರು ವಿಷ್ಣುಮೂರ್ತಿ ಬಳಿಯಿರುವ ಕತ್ತಿ ಹಿಡಿಯುತ್ತಾರೆ. ಈ ವೇಳೆ ವಿವಿಧ ಜಾತಿಯ ಪೂಜಾರರಿಗೆ ದರ್ಶನ ಬಂದು ಆರ್ಭಟ ಮಾಡುತ್ತಾ ಕತ್ತಿಯನ್ನು ಎದೆಗೆ ಬಡಿದುಕೊಳ್ಳುತ್ತಾರೆ. ಅಲ್ಲಿಗೆ ಆ ದಿವಸದ ಕಾರ್ಯಕ್ರಮ ಮುಗಿಯುತ್ತದೆ. ಒತ್ತೆಕೋಲದಲ್ಲಿ ಹಸಿ ಸೌದೆಯನ್ನು ಬಳಸಲಾಗುತ್ತದೆ. ಒಣಗಿದ ಸೌದೆ ಬೇಗ ಉರಿದು ಬೂದಿಯಾಗುವುದೇ ಕಾರಣ. ಹಸಿಸೌದೆ ರಾತ್ರಿಯೆಲ್ಲಾ ಉರಿದು ಬೆಳಗಿನ ಹೊತ್ತಿಗೆ ದೊಡ್ಡ ಕೆಂಡದ ರಾಶಿ ಸಿದ್ದವಾಗಿರುತ್ತದೆ. ಮಾರನೆಯದಿನ ವಿಷ್ಣು ಮೂರ್ತಿ ವೇಷ ನೂರ ಒಂದು ಬಾರಿ ವಿವಿಧ ಭಂಗಿಗಳಲ್ಲಿ ಕೆಂಡದ ಮೇಲೆ ಬೀಳುತ್ತದೆ. ವಿವಿಧ ಪೂಜಾರಿಗಳು 101 ಸಾರಿಯೂ ಕೆಂಡದ ರಾಶಿಯಿಂದ ಹೊರಗೆಳೆಯುತ್ತಾರೆ. ಆನಂತರ ಅಲ್ಲಿಂದ ವಿಷ್ನು ಮೂರ್ತಿ ವೇಷವು ದೈವದ ಭಂಡಾರಕ್ಕೆ ಬಂದು ಅರಿಶಿನ ಪುಡಿಯನ್ನು ಪ್ರಸಾದ ರೂಪದಲ್ಲಿ ವಿತರಣೆ ನಡೆಯುತ್ತದೆ.

ವೇಷಭೂಷಣ ಬದಲಾಯಿಸಿ

ಗೋಳಾಕಾರದಲ್ಲಿ ಕಟ್ಟಿದ ತೆಳುವಾದ ಬಿದಿರಿನಿಂದ ಮೈಕೈಕಾಲುಗಳನ್ನು ಮುಚ್ಚಿಕೊಂಡು ತೆಂಗಿನಗರಿಯಿಂದ ಕ್ರಮಬದ್ಧವಾಗಿ ಅಲಂಕರಿಸಿಕೊಳ್ಳುತ್ತಾರೆ. ತೆಂಗಿನ ಸಿರಿಯಲ್ಲೆ ಮಾಡಿದ ಉಡುಪುಗಳನ್ನೆ ಬಳಸಲಾಗುತ್ತದೆ. ತಲೆಗೆ ಹೂವಿನ ಹಾರದಿಂದ ಮಾಡಿದ ದಂಡೆ, ಬೆಳ್ಳಿಯಪಟ್ಟಿಯನ್ನು ಕಟ್ಟಿ ಕಾಲಿಗೆ ಗೆಜ್ಜೆ ಕಟ್ಟುತ್ತಾರೆ.

ಮೂಲ ಬದಲಾಯಿಸಿ

ಉಗಮಸ್ಥಾನ ಕೇರಳ ಜಿಲ್ಲೆಯ ಕುಂಬಳೆ ಹಾಗೂ ಮಂಜೇಶ್ವರದು ತಿಳಿದುಬರುತ್ತದೆ. ಈ ಸಮಯದಲ್ಲಿ ಹಾಡುವ ಪಾಡ್ದನಗಳು ಸಂಪೂರ್ಣ ಮಲೆಯಾಳಿ ಭಾಷೆಯಲ್ಲಿದೆ. ಇತರೆ ಭೂತಕೋಲಗಳ ಸಮಯದಲ್ಲಿ ಬಳಸುವ ವಾದ್ಯಗಳನ್ನೇ ಒತ್ತೆಕೋಲದ ಸಮಯದಲ್ಲೂ ಬಳಸುತ್ತಾರೆ. ಒತ್ತೆಕೋಲ ಕಲಾತಂಡದಲ್ಲಿ 15-20 ಮಂದಿ ಇರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಪುತ್ತೂರು ತಾಲ್ಲೂಕಿನಲ್ಲಿ ವಿಷ್ಣುಮೂರ್ತಿ ಆರಾಧನೆಯ ಒತ್ತೆಕೋಲ ಹೆಚ್ಚು ಪ್ರಚಲಿತದಲ್ಲಿದೆ. ಇತರ ಭೂತಾರಾಧನೆಗಳಂತೆ ಆಗಾಗ ಒತ್ತೆಕೋಲದ ಸಮಯದಲ್ಲಿ ಆಗುವ ಖರ್ಚು ಹೆಚ್ಚು. ಆದ್ದರಿಂದ ಒಬ್ಬರಿಬ್ಬರು ಆಚರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಗ್ರಾಮದವರೆಲ್ಲರೂ ಈ ಆರಾಧನೆಯಲ್ಲಿ ಆಸಕ್ತಿ ವಹಿಸುತ್ತಾರೆ.

ಆಚರಣೆಯ ಕಾಲ ಬದಲಾಯಿಸಿ

ಸಾಮಾನ್ಯವಾಗಿ ಒತ್ತೆಕೋಲ ನಡೆಯುವುದು ಬೇಸಿಗೆಕಾಲದಲ್ಲಿ. ಹಸಿ ಸೌದೆಯ ಕೆಂಡದ ರಾಶಿ ಮಳೆಗಾಲದಲ್ಲಿ ಮಳೆಯಿಂದಾಗಿಆರುವ ಸಂಭವವಿದೆ.

ಉಲ್ಲೇಖ ಬದಲಾಯಿಸಿ

ಗೋ.ರು ಚನ್ನಬಸವಪ್ಪ,ಕನಾ‍ಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೧೫-೧೬