ವಿ.ಸೀ ಜಿ.ವೆಂಕಟಸುಬ್ಬಯ್ಯ ಬದಲಾಯಿಸಿ

==ಪೀಠಿಕೆ==
ವಿನಯನಿಧೀ, ಸ್ನೇಹವತ್ಸಲ,ಧೀಮಂತ ವಿದ್ವಾಂಸ, ವಾಗ್ಮಿ,ಉದಾರಿ,ಶುಚಿರುಚಿ ಚತುರ ವಿ.ಸೀ. ಯವರ ಸಾಹಿತ್ಯಕೃಷಿ ಬಹುಮುಖವಾದದ್ದು.ಅವರು ಮುಖ್ಯವಾಗಿ ಕವಿ, ವಿಮರ್ಷಕ. ಮಿಕ್ಕ ಎಲ್ಲ ಬಗೆಯ ಲೇಖನಗಳೂ, ಗ್ರಂಥಗಳು ಅವರಿಂದ ರಚಿತವಾಗಿದ್ದರೂ ನಮಗೆ ಮುಖ್ಯವಾಗಿ ಎದ್ದುಕಾಣುವುದು ಅವರ ಈ ಎರಡು ಕಾರ್ಯಗಳು. ಕವಿಯಾಗಿ ಮಾಡಿರುವ ಕೃಷಿ, ವಿಮರ್ಷಕರಾಗಿ ನೀಡಿರುವ ದೃಷ್ಟಿ.
 ಅದರೂ ವಿ.ಸೀ.ಯವರ ವ್ಯಕ್ತಿತ್ವ ಅವರ ಈ ಎಲ್ಲ ಕೃತಿಗಳಿಗಿಂತಲೂ ತುಂಬ ಮಹತ್ತರವಾಗಿತ್ತು. ಅವರು ಮಾಡಿರುವ ಕೃತಿ ರಚನೆ, ಅವರು ನೀಡಿದ ಬೋಧನೆ, ಅವರ ಉಪನ್ಯಾಸಗಳು ಇವೆಲ್ಲವೂ ಆ ವ್ಯಕ್ತಿತ್ವದ ಕಿರಿಕುರುಹಾಗಿ ಮಾತ್ರ ಉಳಿಯಬಲ್ಲವು. ಅವರ ಒಟ್ಟು ಸತ್ಯ ಯಾವ ಒಂದು ಕ್ಷೇತ್ರದಲ್ಲೂ ಉಳಿದು ಬರುವುದು ಸಾಧ್ಯವಿಲ್ಲ. ಮಹಾ ಧೀಮಂತನಾದ ಒಬ್ಬನ ನೂರು ಮುಖಗಳ ಸತ್ವಸಮುಚ್ಚಯ ಹೇಗೆ ತಾನೆ ಒಂದೆಡೆ ಮೈತಳೆಯಬಲ್ಲುದು.ಅವರು ಈ ಶತಮಾನದ ಕನ್ನಡ ಜನತೆಯ ಅತ್ಯಪೂರ್ವ ಪ್ರತಿನಿಧಿಯಾಗಿ ಮೆರೆದು ಮರೆಯಾಗಿದ್ದಾರೆ. ಆ ವ್ಯಕ್ತಿಯ ಒಂದು ಮುಖ ಮಾತ್ರ ಅವರ ಸಾಹಿತ್ಯ ಕೃತಿಗಳಲ್ಲಿ ಕಾಣಬರುತ್ತದೆ. 
==ಮೊದಲ ಗ್ರಂಥ ಪಂಪಾಯಾತ್ರೆ==
ಮೊದಲ ಗ್ರಂಥವಾದ `ಪಂಪಾಯಾತ್ರೆ'ಯ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕು. ಅದು ಕನ್ನಡ ಮೊದಲ ಪ್ರವಾಸಕಥನವಷ್ಟೇ ಅಲ್ಲ, ಒಂದು ಚಾರಿತ್ರಿಕ ಸತ್ಯದ ಪುನರ್ದರ್ಶನವಾಗಿ ಇಂದಿಗೂ ಕಂಗೊಳಿಸುತ್ತದೆ. ಹಾಳು ಹಂಪೆ ಬಾಳು ಹಂಪೆಯಾಗಿದ್ದ ಕಾಲದ ವೈಭವದ ಚಿತ್ರ ಕಣ್ಮುಂದೆ ಸುಳಿದು ನಮ್ಮನ್ನು ಎಚ್ಚರಿಸುತ್ತದೆ. ಒಂದು ರಸಿಕ ಮನೋಧರ್ಮ ಇಂಥ ಪ್ರವಾಸದಲ್ಲಿ ಆಲೋಚಿಸಬಹುದಾದ ಅನೇಕ ವಿಷಯಗಳು ಇಲ್ಲಿ ಸುಳಿದು ಬರವಣಿಗೆಗೆ ಕಾವು ಬರುತ್ತದೆ; ಓದುಗನು ಬೇರೊಂದು ಪ್ರಪಂಚಕ್ಕೆ ಸಾಗಿ ಬಂದವವನಾಗುತ್ತಾನೆ. ಪ್ರವಾಸದಲ್ಲಿ ಇಬ್ಬರು ಹಿರಿಯರೂ ಪರಸ್ಪರ ಸ್ನೇಹ, ವಿರೋಧಗಳ ಸಮ್ಮಿಲನ ಎಂಬುದನ್ನು ಅವರು ಈಚೆಗೆ ಬರೆದ ಮುನ್ನುಡಿಯಿಂದ ಎತ್ತಿ ಬರೆಯುತ್ತೇನೆ. ಈ ಭಾಷೆ-ಭಾವಗಳ ಸಂಗಮದ ಸೊಗಸನ್ನು ನೋಡಿ:
  "ಹೀಗಿದ್ದರೂ ಎರಡೂ ಎರಡು ಬೇರೆ ಬೇರೆ ಬಗೆಯ ಜೀವಗಳು. ಯಾವ ವಂಶದಲ್ಲಿ ನೋಡಿದರೂ ಒಂದಕ್ಕೆ ತೀರ ವಿರುದ್ಧ ಪಂಥ ಇನ್ನೊಂದರದು. ಇವು ಸೇರಬಲ್ಲವು ಹೇಗೆ? ಸಮರಸವಾದವು ಹೇಗೆ? ಎಂಬಷ್ಟು ಮಟ್ಟಿನ ಭಿನ್ನತೆ ಇತ್ತು. ಅವುಗಳಲ್ಲಿ, ಆಚಾರ, ವ್ರತ, ನೇಮ, ಮಡಿ, ನಿಷ್ಟುರ ವರ್ತನೆ, ನಿರ್ದಾಕ್ಷಿಣ್ಯವಾದ ಖಂಡಿತವೃತ್ತಿ, ಹಠ ಯಜಮಾನನಾದರೆ, ವೆಂಕಟೇಶ್ವರಯ್ಯನವರದು ನಯ, ಮೃದು, ಓರ್ಪು, ಪಟ್ಟು ಹಿಡಿಯುವ ಅಗತ್ಯವಿಟ್ಟುಕೊಳ್ಳದೆ ಎಲ್ಲವನ್ನೂ ತನ್ನ ಮತಕ್ಕೆ ಒಲಿಸಿಕೊಳ್ಳುವ ಮಾರ್ಗ. ಯಾವುದನ್ನೇ ಆಗಲಿ ಒತ್ತಿನುಡಿಯದ, ಆಡದಂತೆ ಆಡಿ ತೋರಿಸುವ ಒಂದು ಕೆಳೆತನದ ಮಾರ್ಗ.ಅವರು ಸೋತರೆಂದು ಹೊರಗೆ ತೋರುತ್ತಿರುವಾಗ ಗೆದ್ದಿರುತ್ತಿದ್ದರು. ಯಾವುದನ್ನು ಕುರಿತು ಕತ್ತರಿಸಿದಂತೆ ತಿರ್ಮಾನವಾಗಿ ಆಡಿ ಮುಗಿಸರು. ಆಡಿದ ಮಾತು ಹಿತ, ಮಿತ, ಗಂಭೀರ. "ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟಿದಂತೆ". `ಮೆಲ್ಪು ಬಲ್ಪನ್ ಅಳಿಗುಂ' ಎಂದ ಪಂಪನ ಮಾತು, ಅವರ ಮಟ್ಟಿಗೆ ಸಲ್ಲುವುದು.ಆ ಪಂಪನು ಅವರಿಗೆ ಬಹು ಮೆಚ್ಚು. ಆ ಮಾತಿನ ಹಿಂದೆ ಇದ್ದ ಮನಸ್ಸು, ರಸಿಕತೆಯೂ, ಒಂದು ದೊಡ್ಡತನವೂ ಎಂಥ ಕಠಿಣ ಪ್ರಸಂಗದಲ್ಲಿಯೂ ಸರಳತೆ, ಸೌಮನಸ್ಯಗಳನ್ನು ಬೀರುತ್ತಿದ್ದವು. ಆಡುವುದು ಮಿತವಾದರೆ, ಆಡದೆ ಉಳಿಸಿಕೊಂಡ ಅವರ ಮೌನದ ಅರ್ಥ ಇನ್ನೂ ಆಳ. ಅವರನ್ನು ಅರಿತವರೆಲ್ಲರೂ, ಆ ಮೌನದ ಆಳವನ್ನೂ, ಧರ್ಮವನ್ನೂ ಕಡೆಗೆ, ಭಯಂಕರತೆಯನ್ನೂ ಬಲ್ಲರು. ಇತರರು ಕೂಗಿ, ಕನಲಿ, ರೂಪವೃತ್ತಿಯನ್ನು ತೋರಿಸುತ್ತಿರುವಾಗ, ಸೌಮ್ಯವಾಗಿ ಒಂದು ಮಾತಿನಿಂದಲೋ, ಒಂದು ನಸುನಗೆಯಿಂದಲೋ, ಮೀರಿದರೆ ನಿರ್ವಿಕಾರ ಮುಖಭಾವದಿಂದಲೋ ಅಥವಾ ದವಡೆ, ತುಟಿಹಿಡಿದ ಬಿಗಿತದಿಂದಲೋ ಅವರ ಮನಸ್ಸು ಹೇಗೆ ವರ್ತಿಸುತ್ತಿದೆ ಎಂಬುದನ್ನು ಕಾಣಬಹುದಿತ್ತು. ಯಜಮಾನರದು ಒಂದೇಟಿಗೆ ಎರಡು ತುಂಡು ಎಂಬಂತೆ. ಅವರೇ ಮನಸ್ಸನ್ನು ಬದಲಾಯಿಸುವವರೆಗೂ ಅವರನ್ನು ತಿರುಗುಸುವುದು ಹರಿಹರ ಬ್ರಹ್ಮಾದಿಗಳಿಗೂ ಶಕ್ಯವಿರುತ್ತಿರಲಿಲ್ಲ. ಅದು ಸೆಡೆತು ಬಿಗಡಾಯಿತೊ ಪಾಷಾಣವೇ ಸರಿ. ಅರೆ ನಿಮಿಷದಲ್ಲಿ ಅಯ್ಯನವರ ಮನಸ್ಸು ಹೊಸ ಸಮಾಧಾನಕ್ಕೆ ಬರಬಲ್ಲದ್ದೂ, ಸ್ಥಿತಿಜ್ಞವಾಗಿ ವರ್ತಿಸಬಲ್ಲದ್ದೂ ಆಗಿತ್ತು. ಯಜಮಾನರನ್ನು ತಿರುಗಿಸಬಲ್ಲವರು ಯಾರಾದರೂ ಇದ್ದರೆ ಅಂಥ ಅತಿ ವಿರಳರಲ್ಲಿ ವೆಂಕಟೇಶ್ವರಯ್ಯನವರು ಒಬ್ಬರು. ಇಬ್ಬರಿಗೂ ಪರಸ್ಪರ ಗೌರವ, ವಿಶ್ವಾಸ ಅಷ್ಟು ಇದ್ದುದರಿಂದ ಈ ಕಾರ್ಯ ಸಾಧ್ಯವಾಗುತ್ತಿತ್ತು. ಹೀಗೆ ಒಂದು ಇನ್ನೊಂದಕ್ಕೆ ಪೂರಕ. ನಕ್ಕರೆಂದರೆ ನಿಡುಮೊಗದ ಯಜಮಾನರ ನಗುಬಿಳಿಮೋಡಗಳ ಆಟದ ಗುಡುಗಿನ ಮೊಳಗು. ಅದರ ಹಸುಮಗುವಿನಂತಹ ನಿರಾಳತೆಯನ್ನೂ, ನಿಷ್ಕಲ್ಮಷತೆಯನ್ನೂ ಕಡೆಗೆ ಅದರ ಮೈಮರೆತವನ್ನೂ, ಕಾಣಬೇಕು, ಕೇಳಬೇಕು. ವೆಂಕಟೇಶಯ್ಯನವರ ನಗು ಬಹು ಚೆಲುವು. ಮುದ್ದಾಗಿ ಮಾಟವಾದ ಅವರ ದಂತಪಂಕ್ತಿ ನಗುವಿನ ಬೆಳಕಿಗೆ ಬೆಳಗಿ ಚೌಕವಾದ, ಅಗಲವಾದ ಆ ಮುಖಕ್ಕೆ ಅರಳಿದ ಹೂವಿನ ಅಥವಾ ಬಿರಿದ ಹಣ್ಣಿನ ಒಂದು ಕಾಂತಿಶ್ರೀಯನ್ನು ಕೊಡುತಿದ್ದಿತು. ತುಂಬಾ ಉದ್ವೇಗವುಂಟಾದರೆ ಮೈಸೂರಿನ ಹಾಲುಬೆಂಡೆಯಂತೆ ತೆಳುವಾಗಿ ಉದ್ದವಾದ ಅವರ ಕೈಬೆರಳುಗಳನ್ನು ಮೊಳಕಲವರೆಗೂ ಅಥವಾ ಇನ್ನೊಂದು ಕೈಯ ಅಂಥವೇ ನೀಳವಾದ ಬೆರಳ ಉದ್ದಕ್ಕೂ ಕೊನೆಯ ಕೊನೆಯವರೆಗೂ ಉಜ್ಜಿ ಅದು ಮುಗಿಯುಬೇಕು. ಮೈಗೆ ಕಾವೇರಿ, ತುಟಿ ಬೆರಳು ಕಂಪಿಸಿ, ಕಣ್ಣು ಕೆಂಪಾಗಿ, ಭಾವಾವೇಶದ ಅಥವಾ ಕರ್ಕಶತೆ-ಕರುಣೆಗಳ ಸಂಚಾರ ಕಾಣಬೇಕು, ಅಡಗಬೇಕು. ಆ ಸ್ಥಿತಿಯಲ್ಲಿ ಒಂದೊಂದು ಸಲ ಅವರು ನಕ್ಕ ನಗು ವಿಚಿತ್ರ. ಅಂಥ ಒಂದೊಂದು ಸಮಯದಲ್ಲಿ ಒಂದು ಚಿಟಿಕೆ ನಸ್ಯ ಅವರ ಸ್ವಾಸ್ಥ್ಯವನ್ನು ಸಾಧಿಸಲು ನೆರವಾಗುತಿತ್ತು. ಅವರು ನಸ್ಯ ತೆಗೆದುಕೊಳ್ಳುವ ಸನ್ನಿವೇಶವನ್ನು ಕುರಿತೇ ಬರೆಯಬಹುದೇನೋ! ಅದರ ಒಂದು ಅಖಂಡ ಜೀವನ ವಿಲಾಸವನ್ನು ತೋರಿಸಬಲ್ಲಷ್ಟು ವಿಷಯ ಸಿಕ್ಕೀತೆನ್ನಿಸುತ್ತದೆ."
   ಇಂಥ ಗದ್ಯವನ್ನು ರಚಿಸಬಲ್ಲ ಮನಸ್ಸು ಕವಿತ್ವದ್ದು ಎಂದು ಬೇರೆ ಹೇಳಬೇಕೆ?

ಬಹುಶ: ಹಾಡುಗಳಿಗಾಗಿಯೇ ಹುಟ್ಟಿದ `ಗೀತಗಳು' ವಿ.ಸೀ. ಯವರ ಪ್ರಥಮ ಕವನ ಸಂಕಲನ. ಅದರ ಮುನ್ನುಡಿಯನ್ನು ಬಿ.ಎಂ. ಶ್ರೀಕಂಠಯ್ಯನವರು ಬರೆದಿದ್ದಾರೆ. ಅವರ ಮಾತುಗಳು ಇವು : “ಈ ಗೀತಗಳಲ್ಲಿ ಸಂಗೀತ ಕ್ರಮದಲ್ಲಿ ಹಾಡತಕ್ಕವು ಕೆಲವು; ಛಂದಸ್ಸಿಗನುಸಾರವಾಗಿ ಹೇಳತಕ್ಕವು ಕೆಲವು. ಹೊಸ ಛಂದಸ್ಸುಗಳ ಅವಶ್ಯಕತೆಯನ್ನು ತಿಳಿದ ವಿಮರ್ಶಕರು ಇಲ್ಲಿ ಕೆಲವು ಸುಂದರ ರೂಪಗಳನ್ನೂ ಕಾಣಬಹುದಾಗಿದೆ. ಭಾಷೆಯಲ್ಲಿ ಒಂದು ಬಗೆಯ ಸರಳತೆ, ಗಾಂಭೀರ್ಯ ತುಂಬಿದೆ. ಯುವಕರ ರಕ್ತವನ್ನು ಕುದಿಸುವ ದೇಶಾಭಿಮಾನ ಮತ್ತು ಪ್ರೇಮ; ಪ್ರಕೃತಿಮಾತೆಯ ಭಯಂಕರವಾದ ಮತ್ತು ಸೌಮ್ಯವಾದ ದರ್ಶನಗಳು; ಋತುಗಳ ಕುಣಿತ, ದೇವತಾ ವಿಷಯದಲ್ಲಿ ಮನಸ್ಸನ್ನು ತೂಗಾಡಿಸುವ ಸಂದೇಹ, ಭಕ್ತಿ; ಪಾಪದ ಭಯ, ಧರ್ಮದ ಪ್ರೀತಿ ; ಮುಖ್ಯವಾಗಿ ಎಲ್ಲ ಕಡೆಗಳಲ್ಲಿಯೂ ಕಾಣುವ ಸೂಕ್ಷ್ಮವಾದ, ಉದಾರವಾದ, ನಿರ್ಮಸಲವಾದ ಮನಸ್ಸು - ಇವು ಸಹಾನುಭೂತಿಯಿಂದ ನೋಡತಕ್ಕವರಿಗೆ ಈ ಗೀತೆಗಳಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿವೆ, ಕನ್ನಡದ ನವೋದಯ ಆಚಾರ್ಯರ ಈ ವಿವೇಚನೆ ಇಂದಿಗೂ ವಿ.ಸೀ. ಯವರ ಕೃತಿಗಳಿಗೆ ತೋರ್ಗೈಯಾಗಿ ನಿಂತಿದೆ.

   ತಮ್ಮ ಕವನಗಳ ಬಗ್ಗೆ ಕವಿಗಳೇ ಹೀಗೆ ಹೇಳಿದ್ದಾರೆ : “ಇಲ್ಲಿನ ಕೆಲವು ಶಬ್ದರೂಪಗಳು, ಮಿಶ್ರಪ್ರಯೋಗಗಳು ಕೆಲವರಿಗೆ ಅಸಾಧುವೆಂದು ತೋರಿಯಾವು. ದೃಷ್ಟಿಭೇದದಿಂದ ಗುಣಭೇದವು ತೋರುವುದು ಸಹಜವೇ. ಆದರೆ ಬಳಕೆಯಲ್ಲಿದ್ದು ನನ್ನ ಅರ್ಥವನ್ನು ಚೆನ್ನಾಗಿ ಹೇಳುವುವು; ಕೆಲವಕ್ಕೆ ಆಯಾ ರಾಗದ ಧಾಟಿಗಳಲ್ಲಿ ಜೀವಸ್ಥಾನವಿದೆ. ಕೆಲವಕ್ಕೆ ನನಗೆ ಬೇಕಾದ ಒಂದು ಬಗೆಯ ನಾದಗುಣವಿದೆ ಎಂದು ನಾನು ಎಣಿಸಿರುವುದರಿಂದ, ಅವುಗಳನ್ನೂ ಉಪಯೋಗಿಸಿಕೊಂಡಿದ್ದೇನೆ. ನೂರಾರು ವರ್ಷಗಳಿಗೆ ಹಿಂದೆ ರಚಿತವಾಗಿ ಹಿಂದೆ ಬಿದ್ದ ಕಾವ್ಯಭಾಷೆಯ ಆಧಾರದ ಮೇಲೆ ಏರ್ಪಟ್ಟ ವ್ಯಾಕರಣ ಸೂತ್ರಗಳನ್ನೂ, ಛಂದಸ್ಸಿನ ಕಟ್ಟಡಕ್ಕೆ ಸಂಬಂಧಿಸಿದ ನಿಯಮಗಳನ್ನೂ ಕಣ್ಣುಚುಚ್ಚುವಂತೆ ಮುಂದೆ ಹಿಡಿಯದೆ, ಜೀವಂತವಾದ, ದಿನದಿನವು ಬೆಳೆಯುತ್ತಿರುವ, ಬನಿಗೊಳ್ಳಬೇಕಾಗಿರುವ ಈಗಿನ ಭಾಷೆಯ ಗತಿಗೆ ತಡೆಯಾಗಿ ತಂದೊಡ್ಡಿದೆ ; ಕವಿತೆಯಲ್ಲಿ ಕೇವಲ ಸಂಪ್ರದಾಯಬದ್ಧವಾದ ಶಬ್ದರೂಪಕ್ಕೂ, ಸಂಧಿನಿಯಮಗಳಿಗೂ, ಕಡೆಗೆ ನಿರ್ದುಷ್ಟತೆಗೂ ಮೀರಿದ ಗುಣವೊಂದಿದೆ ಎಂಬುದನ್ನು ಒಪ್ಪುವವರು ಯಾರೂ ಇಲ್ಲಿನ ದೋಷಗಳ ಕಡೆಗೆ ಹೆಚ್ಚು ಗಮನ ಹರಿಸಲಾರರೆಂದಿದ್ದೇನೆ.
   ಸ್ವತಂತ್ರ ಪ್ರವೃತ್ತಿಯ ಕವಿ ಧೈರ್ಯವಾಗಿ ನಡೆಯಬಹುದಾದ ಮಾತುಗಳನ್ನು 1931ರಲ್ಲಿಯೇ ಪ್ರಥಮ ಕವನಸಂಕಲನದಲ್ಲಿಯೇ ಹೃದಯಂಗಮವಾಗಿ ವಿವರಿಸಿ ನುಡಿದು ಅವರು ಯುವಕರ ಮನಸ್ಸನ್ನು ಗೆದ್ದರು. ಅವರ ಈ ಸಂಕಲನದಲ್ಲಿ ಪಡೆದ ಯಶಸ್ಸು ಶಾಶ್ವತವಾಗಿ ಅವರನ್ನು ನಮ್ಮ ಹಿರಿಯ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿತು. `ಪ್ರಶ್ನೆ', `ಚಿತ್ತ', `ಯಾನ', `ಸಮಭೂಮಿ',`ಮಧುಮಾಸ',`ವೀಣಗಾನ',`ಸ್ನೇಹ',`ಕೋಗಿಲೆ' ಮುಂತಾದ ಬಲು ಸೊಗಸಾದ ಕವನಗಳು ಈಗಲೂ ಗಾನಮಾಧುರ್ಯವನ್ನು ಬಿಂಬಿಸುತ್ತಿವೆ; ಭಾವವಿಸ್ತಾರವನ್ನು ಚಿತ್ರಿಸುತ್ತಿವೆ. ಸ್ನೇಹದ ಪೂರ್ಣ ಪ್ರಭಾವವನ್ನು ಚೆನ್ನಾಗಿ ಅರಿತಿದ್ದ, ಬಹು ಗಾಢವಾದ ಸ್ನೇಹವನ್ನು ಪಡೆದಿದ್ದ ಅವರ `ಸ್ವರ್ಗದೊಳಗೀಸ್ನೇಹ ದೊರೆವುದೇನೂ' ಎಂಬ ಸಾಲು ಇಂದಿಗೂ ಅನುರಣವಾಗುತ್ತಿದೆ. ಪ್ರಸಿದ್ಧ ವೈಣಿಕ ವಿದ್ವಾಂಸರಾದ ವೀಣೆ ವೆಂಕಟಗಿರಿಯಪ್ಪನವವರ ವೀಣಾವಾದವನ್ನು ಕೇಳಿ ಬರೆದ `ವೀಣಾಗಾನ' ಬಹು ಅಪರೂಪದ ಕವನ.

ಹೀಗೆ ಪ್ರಾರಂಭವಾದ ಕವನರಚನೆ ಕನ್ನಡದ ಕೆಲವು ಅತ್ಯಂತ ಶ್ರೇಷ್ಟವಾದ ಕವನಗಳನ್ನು ಸೃಷ್ಟಿಸಿವೆ. `ಮೃಗಶಾಲೆಯ ಸಿಂಹಗಳು', `ಅಭೀ:', `ಮನೆ ತುಂಬಿಸುವುದು', `ಗಡಿದಾಟು', `ಶಿಲ್ಪಿ', `ಕ್ರೋಧಕೇತನ', `ಕಸ್ಮೈದೇವಾಲಯ', `ಬಾಳಹೆದ್ದಾರಿ', `ಪುರಂದರದಾಸರು'-ಮುಂತಾದ ಅತ್ಯುತ್ತಮ ಕವನಗಳು ವಿ.ಸೀ. ಯವರ ಇತರ ಕವನಸಂಕಲನಗಳಿಂದಲೂ ದೊರೆಯುವ ಮಣಿಗಳು. `ಅದಲು-ಬದಲು' ಕವನ ಸಂಕಲನದ ಮುನ್ನುಡಿಯಲ್ಲಿ ಕಾವ್ಯಮೀಮಾಸೆಯ ತಲಸ್ಪರ್ಶಿಯಾದ ವಿಶ್ಲೇಷಣೆಯಿದೆ. ಸಂಸ್ಕಾರದ ಪರಂಪರೆಯನ್ನು ಗುರುತಿಸಲಾದ ಜನ ಎನೇನೋ ಹೇಳಿ ಹಾರಾಡಬಹುದು. ಕಾವ್ಯದ ಹೃದಯದ ಅನ್ವೇಷಣೆ, ಸೌಂದರ್ಯದ ಸಮೀಕ್ಷೆ ಅಷ್ಟೊಂದು ಸುಲಭವಾಗಿ ಕೈಗತವಾಗುವ ವಸ್ತುವಲ್ಲ ಎಂದಿದ್ದಾರೆ. ಬಹು ನವಿರಾದ ಈ ಬರಹ ಅವರ ಮಾಗಿದ ಪರಿಣತಿಯ ಫಲ. ವಿಮರ್ಶೆಯ ಕ್ಷೇತ್ರದಲ್ಲಿ`ಇದಮಿತ್ಥಂ', ಎಂದು ಹೇಳುವುದು ಎಷ್ಟು ದುಷ್ಕರವಾದದೆಂಬುದನ್ನು ಅವರು ಅನೇಕ ಬಗೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಪೂರ್ಣ ತಿಳಿವಳಿಕೆಯಿಂದ ಬಂದ ವಿಮರ್ಶೆಗಳಲ್ಲಿ ಕೂಡ, ಮೃದು-ಉಗ್ರ ಎಂಬ ಮಾರ್ಗಗಳಿರಬಹುದು. ``ಕೃತಿಯ ಸ್ವರೂಪಕ್ಕೆ ಹೊಂದುವಂತೆ ಭಾವಿಸದೆಸೌಹಾರ್ದದಿಂದ ಅನುಭವಿಸುತ್ತಿರುವವರಿಗೆ ಯಾವುದೆಲ್ಲ ಹೊಳೆದು ಪ್ರಕಟವಾಗುವುದೋ, ಯುಕ್ತವೆನಿಸುವುದೋ ಅದೆಲ್ಲ ಅರ್ಥಮಂಡಲ-ಅದೆಲ್ಲ ಬೆಲೆಯ ಕಲ್ಪನೆಯೇ.ಹೊದದ್ದು ಅನುಚಿತ, ವಿರಸ, ಅಸಂಗತ,

   ಸಹನಶೀಲವಾದ ವಿಮರ್ಶೆಗೆ ಅವರ ಮನ್ನಣೆ. ``ವಿಮರ್ಶೆ ಒದು ಟಾರ್ಚಲೈಟಾಗಬೇಕು. ಸಿಕ್ಕಿದ್ದನ್ನೆಲ್ಲ ಮಣ್ಣುಮುಕ್ಕಿಸುವ ಜಡ್ಡಿಯ ತೀರ್ಪಾಗಬಾರದು ಎಂಬುದು ಆಗಾಗ ಹೇಳುತಿದ್ದ ಮಾತು. ಅಂತರಂಗದ ವಿಶ್ವಾಸ, ಮಾನವೀಯವಾದ ಸೌಹಾರ್ದ,ಸದಭಿರುಚಿಯ ಪರಿಣಾಮ ಹೀಗಿರುವ ವಿಮರ್ಶೆ ಉಪಯುಕ್ತವಾಗಬಲ್ಲುದು ಕವಿಗೆ, ಓದುಗನಿಗೆ. ಮಿಕ್ಕಿದ್ದೆಲ್ಲ ಸ್ವಂತ ಕಹಳೆಯ ಊದು. ಅದರಿಂದ ಯಾವ ಪ್ರಯೋಜನವಿಲ್ಲ.
   ಇಂಥ ನಿಶಿತವಾದ ಮತಿಯಿಂದಲೆ ಅವರು ರಚಿಸಿರುವ ಎರಡು ಮೂರು ಮುಖ್ಯ ವಿಮರ್ಶಾ ಗ್ರಂಥಗಳು ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿರುತ್ತವೆ. `ಕರ್ನಾಟಕ ಕಾದಂಬರಿ', `ಅಭಿಜ್ಞಾನ ಶಾಕುಂತಲ ನಾಟಕ', `ಅಶ್ವತ್ಥಾಮನ್'- ಈ ಮೂರು ಆಯಾ ವಿಷಯವನ್ನೇ ಕುರಿತ ವಿಮರ್ಶೆ, ಅವರ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ರಚಿಸಲಾಗಿದ್ದ `ಆ ಗ್ರಹ' ನಾಟಕ ಇವೆರಡು ಒಂದು ರಸಜೋಡಿ. ಇವುಗಳ ಸ್ವಾರಸ್ಯವನ್ನು ಓದಿ ನೋಡದೆ ಕೇಳಿ ತಿಳಿಯುವುದಸಾಧ್ಯ.
   ವಿ.ಸೀ. ನಾಲ್ಕು ಸ್ವಂತ ನಾಟಕಳನ್ನೂ ಎರಡು ಇಂಗ್ಲಿಷ್ ನಾಟಕಗಳ ಅನುವಾದಗಳನ್ನೂ ರಚುಸಿದ್ದಾರೆ. `ಸೊಹ್ರಾಬ್-ರುಸ್ತುಂ' ಮ್ಯಾಥ್ಯೂ ಆರ್ನಾಲ್ಡನ ಕವಿತೆಯ ನಾಟಕ ರೂಪ. `ಆಗ್ರಹ' ಭಾರತದ ಸೌಪ್ತಿಕಪರ್ವದ ಕಥೆಯ ಅಶ್ವತ್ಥಾಮನನ್ನು ಚಿತ್ರಿಸುವ ರೂಪಕ. `ಚ್ಯವನ' ಆಧುನಿಕ ಜೀವನದ ಸಮಸ್ಯೆಯನ್ನು ಅಧಿಕರಿಸಿ ರಚಿತವಾಗಿರುವ ನಾಟಕ. `ಶ್ರೀಶೈಲ ಶಿಖರ' ಅವರ ಮಿತ್ರರು ಹೇಳಿದ ಕಥೆಯ ರೂಪಾಂತರ. ಒಂದು ಹೆಣ್ಣಿನ ಬಾಳು, ಭಾವನೆಗಳ ಅಂತರವನ್ನು ಚಿತ್ರಸುವ ಈ ನಾಟಕ ಬಹು ಬೆಲೆ ಬಾಳುವ ತತ್ವವನ್ನು ಸಾರುತ್ತದೆ. ಮಾನವಿಯತೆಗೆ ಬೆಲೆ ಕೊಡುವ ಈ ನಾಟಕವೇ ಅವರ ನಾಟಕಗಳಲ್ಲಿ ಅತ್ಯುತ್ತಮವಾದುದು. ಮಿಕ್ಕೆರಡು ಅನುವಾದಗಳಲ್ಲಿ ಅನುವಾದಕನಿಗೆ ಎದುರಾಗುವ ಅನೇಕ ಸಮಸ್ಯೆಗಳನ್ನು ವಿ ಸೀ. ಯವರೂ ಎದುರಿಸಿದ್ದಾರೆ. ಎಷ್ಟು ಸಾರ್ಥಕವಾಗಿದೆ ಈ ಅನುವಾದಗಳು ಎಂಬುದನ್ನು ನಾಟಕ ಪ್ರದರ್ಶನದಲ್ಲಿ ಅಳೆಯಬೇಕು : ಬೆಲೆ ಕಟ್ಟಬೇಕು. ಹಾಗೆಯೇ ಅಭಿಪ್ರಾಯ ಸೂಚುಸುವುದು ಅಷ್ಟು ಉಚಿತವಾಗಿರಲಾರದು.

ವಿ ಸೀ ಸಂಪಾದಿಸಿದಷ್ಟು ಮಿತ್ರವರ್ಗ ಬೇರೆಯವರಿಗೆ ಇರುವುದು ಸಾಧ್ಯವಿಲ್ಲ. ಅವರ ವ್ಯಕ್ತಿತ್ವದ ಸತ್ಯವೇ ಮೈತ್ರಿಯಿಂದ ಕೂಡಿದ್ದು. ಅವರ ಹಿರಿಯರನ್ನು, ಮಿತ್ರರನ್ನು ಕುರಿತ ಗ್ರಂಥಗಳು: 'ಮಹನೀಯರು' 'ಶಿವರಾಮ ಕಾರಂತರು', 'ಕಾಲೇಜಿನ ದಿನಗಳು'- ಇವುಗಳಲ್ಲಿ ಇರುವ ಚಿತ್ರಪರಂಪರೆ ನೆನಪಿಗೆ ಸದ ಹಸಿರನ್ನು ಕೊಡುತ್ತದೆ. ಅವರ 'ಹಣಪ್ರಪಂಚ' ಕನ್ನಡ ಬಾಷೆಯಲ್ಲಿ ರಚಿತವಾದ ಅತ್ಯಮೂಲ್ಯವಾದ ಶಾಸ್ತ್ರ ಗ್ರಂಥ. ಹಣಪ್ರಂಪಚವನ್ನು ಓದುವಾಗ ಒಂದು ಕಾದಂಬರಿಯನ್ನು ಓದಿದಂತೆ ವಿಚಾರಗಳು ರಸವತ್ತಾಗಿರುವುದು ಕಂಡುಬರುತ್ತದೆ. ಅವರು ಕನ್ನಡದಲ್ಲಿ ಮೊದಲು ಪ್ರಯೋಗ ಮಾಡಿರುವ ಹೊಸಸೃಷ್ಟಿಯಾದ ಪದ ಪುಂಜಗಳು ಕೂಡ ನಮಗೆ ಚಿರಪರಿಚಿತವಾಗಿರುವಷ್ಟು ಅರ್ಥಪೂರ್ಣವಾಗಿದೆ. 'ಸಾಹಿತ್ಯ ವಿಮರ್ಶೆಗಳಲ್ಲಿ ಅರ್ಥ ಮತ್ತು ಮೌಲ್ಯ' ಎಂಬ ಗ್ರಂಥದಲ್ಲಿ ಮೂಡಿಬಂದಿರುವ ವಿಚಾರದ ವಿಸ್ತಾರ ಮತ್ತು ಅಳ ಅಪಾರವಾದ ಮತ್ತು ಖಚಿತವಾದ ವಿದ್ವತ್ತಿನಿಂದ ಮಾತ್ರ ಮೂಡುಸುವುದು. ಒಂದು ವಿಷಯವನ್ನು ಎಷ್ಟು ದೃಷ್ಠಿಯಿಂದ ನೋಡಬಹುದು ಎಂಬುದು ಇಲ್ಲಿ ಸ್ಪಷ್ಟವಾಗಿ ರೂಪಗೊಳುತ್ತದೆ. ಅಲ್ಲಲ್ಲಿ ಬರುವ “ ವಿಮರ್ಶಕರೂ ಸರ್ವಜ್ಞರಂತೆ ನುಡಿಬೇಕಿಲ್ಲ. ಅವರಿಗೆ ಎಲ್ಲದರ, ಎಲ್ಲಾ ಬಗೆಯ ಪರಿಚಿತೆಯು ಇದೆ ಎಂಬುದನ್ನು ಯಾರು ಪ್ರಾಮಾಣ ಪ್ರಶಸ್ತಿ ಕೊಟ್ಟಿದ್ದಾರೆ? 'ಎಂಬ ಎಚ್ಚರಿಕೆಯ ಮಾತುಗಲು ಎಷ್ಟು ಸಮಯೋಚಿತವಾಗಿವೆ ಇಂದಿಗೆ ! 'ಸತ್ಯ ಮತ್ತು ಮೌಲ್ಯ' ದರ್ಶನಶಾಸ್ತ್ರ ಪರವಾದ ಗ್ರಂಥ. ಇದು ಬಹು ವ್ಯಾಪಕವಾದ ಕ್ಷೇತ್ರಗಳನ್ನು ಅಳವಡಿಸಿಕೊಂಡು ರಚಿತವಾಗಿರುವ ಗ್ತಂಥ. ಮಾನವನ ಮನಸ್ಸು ಎಷ್ಟು ಅಳವಾಗಿ ವಿಚಾರ ಮಾಡಬಹುದು ಎನ್ನುವುದನ್ನು ತೋರಿಸುವ ಗ್ರಂಥ. ಈ ಎರಡೂ ಗ್ರಂಥಗಳೂ ಉಪನ್ಯಾಸಗಳ ವಿಸ್ತøತರೂಪಗಳು. ಇವೊಂದೊಂದನ್ನು ಕುರಿತು ನಾಲ್ಕಾರು ಸಂಘಟಗಳು ರಚಿಸುವ ಸಾಮಗ್ರಿ ವಿ.ಸೀ. ಯವರಲ್ಲಿ ಸಂಗ್ರಹಿತವಾಗಿತ್ತು. ಈ ಲೇಖನದಲ್ಲಿ ವಿ.ಸೀ. ಯವರ ಕೃತಿಗಳ ಪರಿಚಯಕ್ಕೆ ಪ್ರಯತ್ನ ಮಾಡಿಲ್ಲ. ದಿಗ್ಪ್ರದರ್ಶನಕ್ಕಾಗಿ ಕೆಲವಂಶಗಳನ್ನು ಗುರುತಿಸಿ ತೋರಿಸಲಾಗಿದೆ. ಒಬ್ಬ ವ್ಯಕ್ತಿ ಅವರ ಸಾಹಿತ್ಯ ಸೇವೆಯನ್ನು ಕುರಿತು ಪಿ.ಎಚ್.ಡಿ ಪದವಿಗೆ ಮಹಾಪ್ರಬಂಧವನ್ನು ಬರೆಯುವಷ್ಟು ವಿಷಯವ್ಯಾಪ್ತಿ ಅವರ ಗ್ರಂಥಗಳಲ್ಲಿವೆ ಎಂದು ಹೇಳಿದರೆ ಸಾಕು. ಯುವಕರಾಗಿ ಅವರು ಕೈಗೊಂಡ ವ್ರತವನ್ನು ಈ ಸಾಲುಗಳು ತಿಳಿಸುತ್ತಿವೆ.

    ಹೋರುವೆವು ಮಲ್ಲರೊಲು ಕಾಲದೊಡನೆ
    ಕಾಲವೆಮ್ಮಯದಾಗಿ ಆಗುವತನಕ ;
    ಗರಿಯಿಕ್ಕದೆಳೆವಕ್ಕಿ ಎಮ್ಮಾಸೆ ಇನ್ನೂ
   ತುಂಬುಗರಿವಕ್ಕಿಯದು ಆಗಮನಕ,-
   ಆಗಿ ಭೋರಿಡುವ ಬಿರುಗಾಳಿ ಸಮಕೂ
   ಗಾಳಿ ಕಡೆ ರೆಕ್ಕೆಗಳ ಹರಡುವತನಕ.

ಈ ಕಾರ್ಯದಲ್ಲಿ ಅವರ ವಿಶ್ವಾಸವೆಷ್ಟಿತ್ತೆಂಬುದನ್ನು ಅವರದೆ ಕವನವೊಂದು ಬಲು ಸುಂದರವಾ ಚಿತ್ರಿಸುತ್ತದೆ :

           ವಿಶ್ವಾಸ
   ಮಾನವನೆತ್ತರ ಆಗಸದೇರಿಗೆ
   ಏರುವವರೆಗೂ ಬೆಳೆದವು;
   ಮಾನವ ಹೃದಯಕೆ ವಿಸ್ವಾವಿಶಾಲತೆ
   ಹಾಯುವವರೆಗೂ ಹಾದೇವು.
   ತತ್ವದ ಸಿದ್ಧಿಯ ಕಾಲಕೆ ಕಾದರೆ
   ಯುಗ ಯಗಗಳು ಸಾಕಾದವೇ ?
   ಸಖ್ಯಕೆ ಸಹನೆಗೆ ಕರುಣೆಗೆ ಒಲವಿಗೆ
   ಗಡಿನುಡಿ ಅಡ್ಡಿಯ ತಂದಾವೆ ?
   ಒಡೆಯುವ ಮನಗಳ ಸುಡುವ ನಿರಾಸೆಯ
   ವೇಗದ ಕಟ್ಟಲೆ ತಡಿದೀತೆ?
   ಮೃದು ಸೌಹಾರ್ದವು ನೋವಿಗೆ ಕರಗದೆ
   ಸಾಹ್ಯಕ್ಕೆ ನುಗ್ಗದೆ ನಿಂತೀತೆ ?
   ಶತ ಶತಮಾನವೂ ತಾವೊಪ್ಪುವ ತೆರ 
   ನವ ವಿಶ್ವಾಸವು ತೊಟ್ಟಾವು ;
   ಇಹದಲಿ ಒಪ್ಪಲು ಆಗದ ಪರವನು
   ಬಯಕೆಯ ಕರೆವುದೆ ಕೈಚಾಚಿ ?
   ಬಾಳನು ಶೋಧಿಸಿ ಶುಚಿಯನು ಬೆಳೆದರೆ
   ಇಹವೇ ಅರಳದೆ ಪರವಾಗಿ ?
ಈ ನಂಬಿಕೆಯಿಂದ ಜೀವನ ನಡೆಸಿದ್ ವಿ.ಸೀ. ಕೊನೆಯತನಕ ನಗು ಮುಖವನ್ನು ಜಗತ್ತಿಗೆ ತೋರಿಸಿದರು; ಕಹಿ, ನೋವು, ಕಟಕಿಗಳನ್ನು ನುಂಗಿಕೊಂಡು. ಅವರ ಶಿಷ್ಯವಾತ್ಸಲ್ಯ, ಗುರುಗೌರವ, ಅಧ್ಯಯನ, ಅಧ್ಯಾಪನ, ಕಲಾಸ್ವಾದನೆ, ಎಟುಕದುದರ ಕಡೆಗೆ ಕೈಚಾಚಿ ಗೆಲ್ಲಬೇಕಂಬ ಸಾಹಸ, ಗೆದ್ದಾಗ ಅದನ್ನು ಡಂಗುರ ಹಾಕಿ ಸಾಗರ ವಿನಿತಗುಣ ಇತ್ಯಾದಿಳಿಂದ ಅವರು, ಅವರ ಕಾರ್ಯಗಳೆಲ್ಲವನ್ನು ಮೀರಿದ ದೊಡ್ಡ ಚೈತನ್ಯವಾಗಿದಗದರು. ಆ ಚೈತನ್ಯದ ಅಲ್ಪಾಂಶ ಮಾತ್ರ ನಮಗೆ ಲಭ್ಯವಾಗಿದೆ ಬರಹದ ಮೂಲಕ. ಅವರನ್ನು ಕಂಡವರು ಆ ಮಹಾ ಸತ್ವದ ಚಿಂತನೆಯಲ್ಲಿ ಸದಾ ಆನಂದಪಡಿಸುತ್ತಾರೆ.