ಉತ್ಸವದಹಳ್ಳಿಯ ಶ್ರೀ ಮುಖ್ಯಪ್ರಾಣ ದೇವರ ಚರಿತ್ರೆ

ಸಂಗ್ರಹಣೆ ಮಾಧವನ್ ಜಿ.

ಸಂಪಾದಕರು

ಶ್ರೀ ವಿಜಯ ಪ್ರಸನ್ನ ಆಂಜನೇಯ ಸೇವಾ ಸಮಿತಿ ಟ್ರಸ್ಟ್ (ರಿ.)

ಉಚ್ಚೋದನಹಳ್ಳಿ

(ಉತ್ಸವದಹಳ್ಳಿ) ಮೇಳ್ಯಾ (ಪೋ), ಗೌರಿಬಿದನೂರು (ತಾ) ಚಿಕ್ಕಬಳ್ಳಾಪುರ (ಜಿ) - 561208.

ಆಶಯ

ಸಾಧನ ಶರೀರವಿದು ನೀ ಎನಗೆ ದಯದಿ ಕೊಟ್ಟಿದ್ದು ಸಾದಾರಣವೆಲ್ಲಾ ಸಾಧು ಪ್ರಿಯನೇ ವೇದವಾಧೋತಿತ ಜಗನ್ನಾಥ ವಿಠಲನ ಪಾದ ಭಜನೆಯನಿತ್ತು ಮೊದ ಕೊಡೊ ಸತತ...

ಅಸ್ಮತ್ ಗುರುಗಳಾದ ಶ್ರೀ ಮತ್ ಪರಮಹಂಸ ಪರಿರ್ವಾಜಕಾಚಾರ್ಯ 1008 ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀ ಶ್ರೀ ಸತ್ಯಾತ್ಮ ಶ್ರೀ ಪಾದಂಗಳವರ ಉಪಾಸ್ಯ ಮೂರ್ತಿ, ಶ್ರೀ 1008 ಶ್ರೀ ಸತ್ಯಪ್ರಮೋದತೀರ್ಥ ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ದಿಗ್ವಿಜಯ ಶ್ರೀಮೂಲಸೀತಾರಾಮಚಂದ್ರ ದೇವರ ಅನುಗ್ರಹ ಬಲದಿಂದ ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಉತ್ಸವದ ಹಳ್ಳಿಯ ಶ್ರೀ ಮುಖ್ಯಪ್ರಾಣ ದೇವರ ದೇವಸ್ಥಾನವನ್ನು ಜೀರ್ಣೋದ್ಧಾರ ಹಾಗೂ ಪ್ರತಿದಿನ ಪುಜಾದಿ ಸತ್ಕಾರ್ಯಗಳನ್ನು ನೆರವೇರಿಸಬೇಕೆಂದು ಈ ಗ್ರಾಮದ ಎಲ್ಲಾ ಭಗವತಕ್ತರು ಸೇವೆಯಲ್ಲಿ ನಿರತರಾಗಿದ್ದಾರೆ.

ಉತ್ಸವದಹಳ್ಳಿಯು ಸಂತೇಬಿದನೂರಿನ ಜನಮೇಜಯ ಮಹಾರಾಜರಿಂದ ಪ್ರತಿಷ್ಠಿತ ಪ್ರಾಣದೇವರ ಉತ್ಸವಾದಿ ಕಾರ್ಯ ಮಾಡುತ್ತಿರುವ ಕಾರಣದಿಂದ ಈ ಗ್ರಾಮಕ್ಕೆ ಉತ್ಸವದಹಳ್ಳಿ ಎಂದೂ ನಾಮಕರಣವಾಗಿದೆ. ಇತ್ಯಾದನೇಕ ಐತಿಹಾಸಿಕ ಕಥೆಗಳಿಂದ ಕೂಡಿದ ಉತ್ಸವದಹಳ್ಳಿಯ ಗ್ರಾಮ ದೇವರ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವ ನಿಟ್ಟಿನಲ್ಲಿ ಶ್ರೀ ವಿಜಯ ಪ್ರಸನ್ನ ಅಂಜನೇಯ ಸೇವಾ ಸಮಿತಿ ಟ್ರಸ್ಟ್ (ರಿ) ಧಾರ್ಮಿಕ ಕಾರ್ಯಕ್ರಮ ಗಳನ್ನು ಪ್ರಾರಂಭಿಸಿದೆ.

ಈ ಮಹತ್ವಕಾರ್ಯದಲ್ಲಿ ಪುಷ್ಪ ಮಾಲಾನುಸಂಗ್ರೇನ ಸೂತ್ರಂ ಶಿರಸಿ ದಾಯೇತೆ ಎಂಬ ಮಾತಿನಂತೆ ಎಲ್ಲಾ ಭಗವಂತ ಭಕ್ತರು ತಮ್ಮ ಯಶೋದಿತ ಮತಿಯಿಂದ ಶಾರೀರಿಕ, ಧನಮೂಲ, ವಸ್ತುರೂಪೇಣಾ ಸೇವೆ ಸಲ್ಲಿಸಿ ವಾಯುಪುತ್ರ ಹನುಮನ ಪ್ರಿಯನಾದ ಸೀತಾಪತಿ ಶ್ರೀ ರಾಮಚಂದ್ರನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಸ್ಕತ್ ಗುರುಗಳಾದ ಶ್ರೀ ಶ್ರೀ 1008 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅಂತರ್ಗತನಾದ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಸೀತಾಸಮೇತ ದ್ವಿಗಿಜಯ ಶ್ರೀರಾಮಚಂದ್ರನನ್ನು ಪ್ರಾರ್ಥಿಸುತ್ತೇವೆ.

ಕಪಿ ಶ್ರೇಷ್ಠಾಯ ಶೂರಾಯ ಸುಗ್ರೀವ ಪ್ರಿಯೇ ಮಂತ್ರಿಣೆ | ಜಾನಕೀ ಶೋಕಾನಾಶಾಯ ಅಂಜನೇಯಾಯ ಮಂಗಳಮ್ ||

ಪ್ರಮಾಣ,

ಶ್ರೀ ವಿಜಯ ಪ್ರಸನ್ನ ಆಂಜನೇಯ ಸೇವಾ ಸಮಿತಿ (ರಿ) ಉಚ್ಚೋದನಹಳ್ಳಿ (ಉತ್ಸವದಹಳ್ಳಿ), ಮೇಳ್ಯಾ (ಪೋ)

ಗೌರಿಬಿದನೂರು ತಾ ಚಿಕ್ಕಬಳ್ಳಾಪುರ ಜಿಲ್ಲೆ -561208

ಅನುಗ್ರಹ ಸಂದೇಶ

ಶ್ರೀ ಮನ್ಮಧ್ವಾಚಾರ್ಯಮೂಲ ಮಹಾಸಂಸ್ಥಾನ ಉತ್ತರಾದಿ ಮಠಾಧೀಶರಾದ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹ ಸಂದೇಶ.

ಸರ್ವೋತ್ತಮನಾದ ಶ್ರೀ ಹರಿಯನ್ನು ನಂಬಿದ ಭಂಟ ಹನುಮಂತ ಶ್ರೀರಾಮನ ನಿರ್ವ್ಯಾಜ ಭಕ್ತ ಹನುಮಂತ, ಜೀವಕೋಟಿಯ ಪ್ರಾಣ ಮುಖ್ಯಪ್ರಾಣ ಹೀಗಾಗಿ ಹನುಮಂತನಿಲ್ಲದ ಪ್ರದೇಶ ಭಾರತದಲ್ಲಿಲ್ಲ. ಇಂತಹ ಹನುಮಂತದೇವರ ಸನ್ನಿಧಾನದಿಂದ ಸಂಪನ್ನವಾದ ಪ್ರದೇಶ ಉತ್ಸವದಹಳ್ಳಿ,

ಈ ಉತ್ಸವದಳ್ಳಿಯಲ್ಲಿ ನೆಲೆನಿಂತ ಹನುಮಂತ ದೇವರ ಪವಾಡ ತಿಳಿಸುವ ಹೊತ್ತಿಗೆಯನ್ನು ಅಲ್ಲಿಯ ಅರ್ಚಕರು ಸಿದ್ಧಪಡಿಸಿದ್ದಾರೆ. ಅವರಿಗೆ ಅಸ್ಪತ ಉಪಾಸ್ಯನಾದ ಶ್ರೀ ಮೂಲಸೀತಾ ಸಮೇತ ಶ್ರೀ ಮೂಲರಾಮ ದಿಗ್ವಿಜಯ ರಾಮ ಶ್ರೀ ಪ್ರಸನ್ನ ವಿಠಲ ಶ್ರೀ ವಂಶರಾಮ ಶ್ರೀ ವೇದವ್ಯಾಸದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.

ಮೊಕ್ಕಾಂ :

ಪಾಲಮೂರು (ಮೆಹಬೂಬ್ ನಗರ) 22ನೇ ಚಾತುರ್ಮಾಸ 3 ನೇ ಸೆಪ್ಟೆಂಬರ್ 2017

ಇಂತಿ ನಾರಾಯಣ ಸ್ಮರಣೆಗಳು

ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಗುರುಗಳು

ಉತ್ತರಾದಿಮಠ

ಶ್ರೀ ಮುಖ್ಯ ಪ್ರಾಣದೇವರು, ಉತ್ಸವದಹಳ್ಳಿ (    )

ಉತ್ಸವದಹಳ್ಳಿ (ಉಚ್ಚೋದನಹಳ್ಳಿ) :- ಈ ಗ್ರಾಮವು ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿಯ ಸರಹದ್ದಿನಲ್ಲಿದೆ. ಪುರಾಣ ಕ್ಷೇತ್ರವೆಂದು ಕರೆಯಲ್ಪಡುವ ಅಶ್ವತ್ಥನಾರಾಯಣ ದೇವರ ಸನ್ನಿಧಾನವಾದ ಹಾಗೂ ಸ್ವಾತಂತ್ರ್ಯ ಸಮರ ಕಾಲದಲ್ಲಿ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಹೆಸರು ಪಡೆದ ವಿಧುರಾಶ್ವತ್ಥಕ್ಕೆ 5 ಕಿ.ಮೀ. ದೂರದಲ್ಲಿದೆ.

450 ವರ್ಷಗಳ ಹಿಂದೆ ಮೈಸೂರು ಸಂಸ್ಥಾನದ ದಿವಾನರಾದ ದಿವಾನ್ ಪೂರ್ಣಯ್ಯನವರು ತಮ್ಮ ಅನ್ನದಲ್ಲಿ ಹುಳುಗಳು ಕಾಣುತ್ತಿದ್ದ ದೋಷವನ್ನು (ಶಾಪ) ಹೊಂದಿದ್ದರು. ಅವರಿಗೆ ಶ್ರೀಮುಖ್ಯ ಪ್ರಾಣ ಅನುಗ್ರಹ ಅರಿಯದ ಅವರಿಗೆ ನಮ್ಮ ಸಂತೇಬಿದನೂರಿನ ಶ್ರೀ ಮುಖ್ಯಪ್ರಾಣದೇವರ ದರ್ಶನದಿಂದ ಆ ದೋಷ ವಿಮುಕ್ತಿಗೊಂಡ ಕಾರಣಕ್ಕೆ ಅವರ ಉದಾರತೆಯ ಮನೋಭಾವದಿಂದ, ನಮಗೆ ಉತ್ಸವದಹಳ್ಳಿಯನ್ನು ಈಗಿನ ಉತ್ಸವದ ಹಳ್ಳಿಯನ್ನು ಈಗಿನ ಸಂತೇಬಿದನೂರಿನ ಜೋಡಿಗ್ರಾಮವಾಗಿ ದಯಪಾಲಿಸಿ ಕೊಟ್ಟರು. ಅಂದಿನಿಂದ ಉತ್ಸವದ ಹಳ್ಳಿಯನ್ನು ಸಂತೇಬಿದನೂರು ಜೋಡಿಗ್ರಾಮವೆಂದೂ ಕರೆಯಲಾಗಿದೆ.

ವೈಶಾಖ ಮಾಸದ ಹುಣ್ಣಿಮೆಯಂದು ಸಂತೇಬಿದನೂರಿನ ಶ್ರೀ ಮುಖ್ಯಪ್ರಾಣದೇವರಿಗೆ ಉತ್ಸವ ಮತ್ತು ಮೊದಲನೇ ದೀಪ ಬೆಳಗಿಸುವ ಅಧಿ ಕಾರವನ್ನು ಉತ್ಸವದಹಳ್ಳಿ ಜೋಡಿದಾರರು ಅದನ್ನು ನಮಗೆ ನೀಡಿದ್ದಾರೆ. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷಕೊಮ್ಮೆ ಸಂತೇಬಿದನೂರಿನ ಶ್ರೀ ಮುಖ್ಯಪ್ರಾಣ ದೇವರಿಗೆ ಉತ್ಸವ ಮತ್ತು ದಿಪೋತ್ಸವ ನೆರವೇರಿಸಿಕೊಂಡು ಬರುತ್ತಿದ್ದೇವೆ.

ಅದರಂತೆ ಉತ್ಸವದಳ್ಳಿಯಲ್ಲಿ ನಮ್ಮ ಪೂರ್ವಿಕರು ನಮಗೂ ಒಂದು ಶ್ರೀ ಮುಖ್ಯಪ್ರಾಣದೇವರ ದೇವಾಲಯ ಇರಲೆಂದು ಅಪೇಕ್ಷಿಸಿದರು.

ಪರಮಾತ್ಮನ ಅನುಗ್ರಹದಿಂದ ಹಾಗೂ ನಮ್ಮ ಪೂರ್ವಿಕರು ಆಶಿಸಿದಂತೆ ಶ್ರೀ 1008 ಶ್ರೀ ವ್ಯಾಸರಾಜರು ಹಾಗೂ ಪರಿವಾರ ಸಂಚಾರ ಮಾಡಿಕೊಂಡು ಉತ್ಸವದಹಳ್ಳಿಯ ಸಮೀಪದಲ್ಲಿದ್ದರು. ನಮ್ಮ ಪೂರ್ವಿಕರು ಒಂದು ದಿನ

ಉತ್ಸವದಹಳ್ಳಿಯ ಶ್ರೀ ಮುಖ್ಯ ಪ್ರಾಣ ದೇವರ ಚರಿತ್ರೆ

ಶ್ರೀಪಾದಂಗಳವರನ್ನು ಸಂದರ್ಶಿಸಿ ಫಲ ಮಂತ್ರಾಕ್ಷತೆಯನ್ನು ಪಡೆದು ನಮ್ಮ ಗ್ರಾಮದಲ್ಲಿ ಶ್ರೀ ಮುಖ್ಯಪ್ರಾಣ ದೇವರನ್ನು ಪ್ರತಿಷ್ಠಾಪಿಸಬೇಕೆಂಬ ತಮ್ಮ ಆಶಯವನ್ನು ಪ್ರಾರ್ಥಿಸಿ ವ್ಯಕ್ತಪಡಿಸಿದರು. ಅದರಂತೆ ಶ್ರೀಪಾದಂಗಳವರು ನಮ್ಮ ಗ್ರಾಮಕ್ಕೆ ಆಗಮಿಸಿ ತಮ್ಮ ಅಮೃತ ಹಸ್ತದಿಂದ ಅಂಗಾರದಲ್ಲಿ ಶ್ರೀ ಮುಖ್ಯಪ್ರಾಣನನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿಗೂ ನಮ್ಮ ಪೂರ್ವಿಕರು ಹಾಗೂ ಮಕ್ಕಳು ಮೊಮ್ಮಕ್ಕಳಾದ ನಾವು ನಿತ್ಯ ಪೂಜಾ ಕೈಂಕರ್ಯಾದಿಗಳನ್ನು ನೆರವೇರಿಸುತ್ತಾ ಬರುತ್ತಿದ್ದೇವೆ.

ಉತ್ಸವದಹಳ್ಳಿಯ ಹಿನ್ನಲೆ :- ಭಗವಂತನಿಂದ ಸೃಷ್ಟಿಯಾದ ಸತ್ಯಭೂತವಾದ

ಅಖಂಡ ಭೂಮಂಡಲದಲ್ಲಿ ಅತಿ ಪುಣ್ಯವಾದ ಕರ್ಮ ಭೂಮಿಯಾದ ಭರತಖಂಡ ಅತಿ ಶ್ರೇಷ್ಠವಾದ ಭೂ ಪ್ರದೇಶವಾಗಿರುತ್ತದೆ. ಭರತಖಂಡದ ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿನವರೆಗೂ ಪೂರ್ವದಿಂದ ಪಶ್ಚಿಮ ದಿಕ್ಕಿನವರೆಗೂ ಅನೇಕ ಪುಣ್ಯ ಕ್ಷೇತ್ರಗಳಿದ್ದು, ಈ ಭಾರತ ದೇವ ಪುಣ್ಯ ಭೂಮಿ, ಕರ್ಮ ಭೂಮಿ, ತಪೋಭೂಮಿಯೆಂದು ಹೆಸರು ಪಡೆದ ದಿವ್ಯ ಪ್ರದೇಶವಾಗಿದೆ. ಇಂತಹ ಪುಣ್ಯ ಭೂಮಿಯು ಸ್ವಯಂ ಭಗವಂತನ ಅವತಾರದಿಂದ ಪುಣ್ಯಕ್ಷೇತ್ರವೆಂದು, ಅನೇಕ ನದ್ಯಾಭಿಮಾನಿ (ನದಿಗಳ) ದೇವತೆಗಳ ಸನ್ನಿಧಾನದಿಂದ, ಪುಣ್ಯ ಕ್ಷೇತ್ರವೆಂದು ಕರೆಯಲ್ಪಟ್ಟಿರುವುದು ಒಂದು ಭಾಗವಾದರೆ, ಶ್ರೀ ಹರಿಯ ಅಂತರಂಗ ಭಕ್ತರು, ಭಗವಂತನ ಪೂರ್ಣಾನುಗ್ರಹ ಪಾತ್ರರಾದ ಅನೇಕ ಮಹನೀಯರು, ತಪಸ್ವಿಗಳು, ಯೋಗಿಗಳು, ಜ್ಞಾನಿಗಳು ಈ ಭಾರತ ದೇಶದಲ್ಲಿ ಅವತರಿಸಿ ಪುಣ್ಯ ಕ್ಷೇತ್ರವನ್ನಾಗಿ ಮಾಡಿರುವ ನಿದರ್ಶನಗಳು ನಮಗೆ ದೃಷ್ಟಿಗೋಚರವಾಗಿ ಕಾಣುತ್ತಿರುತ್ತವೆ.

ಈ ಭಾರತ ದೇಶದ ದಕ್ಷಿಣ ಭಾಗವನ್ನು ತ್ರೇತಾಯುಗದಿಂದಲೂ ದಂಡಕಾರಣ್ಯವೆಂದು ಪ್ರಸಿದ್ದಿ ಪಡೆದ ಸ್ಥಳವಾಗಿದ್ದು. ಇದೇ ದ್ವಾಪರಯುಗದಲ್ಲಿಯೂ ಸಹ ದಂಡಕಾರಣ್ಯವೆಂದೇ ಪ್ರಸಿದ್ದಿಯನ್ನು ಪಡೆದ ಕ್ಷೇತ್ರವಾಗಿರುತ್ತದೆ. ಜನಮೇಜಯರಾಜ ಸರ್ಪಯಾಗವನ್ನು ಮಾಡಿ. ಇದರಿಂದ ಉಂಟಾದ ದೋಷ ಪರಿಹಾರಕ್ಕಾಗಿ ತೀರ್ಥಯಾತ್ರೆಯ ನಿಮಿತ್ತ ಅಖಂಡ ಭಾರತವನ್ನು ಸಂಚರಿಸಿದರು. ಸಂಚರಿಸುವಾಗ ಈ ಭರತ ಭೂಮಿಯ ಸೌಂದರ್ಯ, ಸಿರಿ ಸಂಪತ್ತು. ಹಾಸುಹೊಕ್ಕಾಗಿರುವ ಲತೆ ಬಳ್ಳಿಗಳ ಮರಗಿಡಗಳು, ಪ್ರಕೃತಿ ಸೌಂದರ್ಯವನ್ನು ವರ್ಣಿಸಲು ಅನೇಕ ಕೋಶಗಳೇ ಸಾಲದಾಗಿರುತ್ತದೆ. ಅಂತಹ ತೀರ್ಥಯಾತ್ರೆಯನ್ನು ಕೈಗೊಂಡ ಸಂದರ್ಭದಲ್ಲಿ ದಕ್ಷಿಣ ಭಾರತದ ದಂಡಕಾರಣ್ಯವೆಂದು ಪ್ರಸಿದ್ಧವಾಗಿರುವ

10

ಉತ್ಸವದಹಳ್ಳಿಯ ಶ್ರೀ ಮುಖ್ಯಪ್ರಾಣ ದೇವರ ಚರಿತ್ರೆ

ಈಗಿನ ಆಂಧ್ರ, ಕರ್ನಾಟಕ, ತಮಿಳುನಾಡಿನ ಸೀಮೆಗಳು ಒಳಗೊಂಡಿರುವ ಪ್ರದೇಶವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶ್ರೀ ಜನಮೇಜಯರಾಜರು ದೇಶದ ನಾನಾ ಕಡೆಗಳಲ್ಲಿ ಈ ಸರ್ಪಯಾಗದ ದೋಷದ ನಿಮಿತ್ತವಾಗಿ ಅನೇಕ ಪ್ರಾಣದೇವರ ಪ್ರತೀಕಗಳನ್ನು ಸ್ಥಾಪಿಸಿರುವುದು ಇತಿಹಾಸದಿಂದ ಕಂಡು ಬರುತ್ತಿದೆ. ಇಂತಹ ಪ್ರಾಣದೇವರ ಪ್ರತೀಕಗಳಲ್ಲಿ ಒಂದಾಗಿರುವುದೇ ಈ ಗ್ರಂಥದ ಪ್ರತಿಪಾದ್ಯದೈವ ''ಸಂತೇಬಿದನೂರು ಶ್ರೀ ಮುಖ್ಯ ಪ್ರಾಣದೇವರು" ಸುಮಾರು 600 ವರ್ಷಗಳ ಹಿಂದಿನ ಕಾಲ ಬಹಳ ವೈಭವದಿಂದ ಹಿಂದು ಧರ್ಮ ಸ್ಥಾಪನೆಗಾಗಿ ವಿಜಯ ನಗರ ಸಾಮ್ಯಾಜ್ಯವು ಭಾರತದ ದೇಶದ ಮೂಲೆ ಮೂಲೆಗಳಿಗೂ ಹಾಗೂ ಪಾಶ್ಚಾತ್ಯ ದೇಶದವರೆಗೂ ವಿಸ್ತಾರವಾಗಿ ಹರಡಿದ ಸುವರ್ಣ ಯುಗವೆಂದು ಪ್ರಸಿದ್ದಿ ಪಡೆದ ನಾಡಾಗಿತ್ತು. ಇಂತಹ ಕಾಲದಲ್ಲಿ ರಾಜ ಮಹಾರಾಜರು ಹಿಂದು ಧರ್ಮದ ತತ್ವಗಳಿಗೆ ಸನಾತನವಾದ ಧರ್ಮಗಳ ಸಂರಕ್ಷಣೆಗೆ, ತಪಸ್ವಿಗಳಿಗೆ, ಜ್ಞಾನಿಗಳಿಗೆ, ಯೋಗಿಗಳಿಗೆ, ಅನೇಕ ದಾರ್ಶನಿಕರಿಗೆ ಆಶ್ರಯ ಪೋಷಣೆ ಪ್ರೋತ್ಸಾಹ ಹೀಗೆ ಎಲ್ಲಾ ರೀತಿಯಿಂದಲೂ ಸಂರಕ್ಷಿಸಿದ ಕಾಲವಾಗಿತ್ತು. ಇಂತಹ ಕಾಲಘಟ್ಟದಲಿ ಅವತರಿಸಿದ ಮಹಾನುಭಾವರೇ ''ಶ್ರೀ 1008 ಶ್ರೀ ವ್ಯಾಸರಾಜತೀರ್ಥ ಶ್ರೀಪಾದಂಗಳವರು.''

ಶ್ರೀ ವ್ಯಾಸರಾಜರು ಮಾಡಿದ ಶ್ರೀಮದಾಚಾರ್ಯರ ಸೇವೆ ಅಪ್ರತಿಮವಾದದ್ದು, ಅವಿಸ್ಮರಣೀಯವಾದದ್ದು. ಶ್ರೀ ವ್ಯಾಸರಾಜರು ಅರವತ್ತನಾಲ್ಕು (64) ವಿದ್ಯಾಪಾರಂಗತರಾಗಿ ದೈತ ವಾಹ್ಮಯದ ಮುನಿತ್ರಯರಲ್ಲಿ ಒಬ್ಬರಾಗಿ ಶ್ರೇಷ್ಠದಾರ್ಶನಿಕರಾಗಿ, ತಪಸ್ವಿಗಳಾಗಿ, ಜ್ಞಾನಿಗಳಾಗಿ, ಯೋಗಿಗಳಾಗಿ, ಪರಮಹಂಸ ಪಾರಿವ್ರಾಜಕರಾಗಿ ಸಮಾಜ ಸುಧಾರಕರಾಗಿ ರಾಜ್ಯಾಡಳಿತ ನಿಪುಣರಾಗಿ, ಅಸಾಧಾರಣ ವಿದ್ವತ್ ಪ್ರೌಢಗ್ರಂಥಗಳ ಕರ್ತೃಗಳಾಗಿ ಸಂತರಾಗಿ, ಶ್ರೇಷ್ಠರಾಗಿ ಇದ್ದಂತಹ ಮಹಾನುಭಾವರು.

ಇವರ ಕಾಲದಲ್ಲಿ ಸುಮಾರು 732 ಶ್ರೀ ಪ್ರಾಣದೇವರನ್ನು ಪ್ರತಿಷ್ಠಾಪಿಸಿದ ಕೀರ್ತಿಯನ್ನು ಪಡೆದ ತಪಸ್ವಿಗಳಾಗಿರುತ್ತಾರೆ. ವ್ಯಾಸರಾಜರು ತಮ್ಮ ಸಂಚಾರ ಕಾಲದಲ್ಲಿ ಅನೇಕ ನಗರಗಳ ಮುಖ್ಯದ್ವಾರದಲ್ಲಿ ಮಧ್ಯದಲ್ಲಿ, ಬೆಟ್ಟಗಳ ಪ್ರದೇಶದಲ್ಲಿ ಪ್ರಾಣದೇವರನ್ನು ಸ್ಥಾಪಿಸಿರುವುದು ಇತಿಹಾಸದಿಂದ ತಿಳಿದು ಬಂದಿರುತ್ತದೆ. ಅಷ್ಟೇ ಅಲ್ಲದೆ ಇವರು ಸ್ಥಾಪಿಸಿರುವ ಅಷ್ಟೂ ಪ್ರಾಣ ಪ್ರತೀಕದಲ್ಲಿ ಇಂದಿಗೂ

ಅಸಾಧಾರಣವಾದ ಪ್ರಾಣದೇವರ ಸನ್ನಿಧಾನ, ಪವಾಡ, ಜಾಗೃತವಾಗಿರುವುದನ್ನು ನಾವು ಕಾಣುತ್ತಿದ್ದೇವೆ ಕೆಳುತ್ತಿದ್ದೇವೆ. ಶ್ರೀ ವ್ಯಾಸರಾಜರಿಗಿಂತಲೂ ಪೂರ್ವದಲ್ಲಿ ಪ್ರತಿಷ್ಠಾಪನೆಗೊಂಡ ಅನೇಕ ದೇವಾಲಯಗಳು ಕಲಿಗಾಲದ ವೈದುಷ್ಯದಿಂದ ಶಿಥಿಲಗೊಂಡು ನಶಿಸಿಹೋಗಿದ್ದ ದೇವಾಲಯಗಳನ್ನು ಪುನಃ ಜೀರ್ಣೋದ್ದಾರ ಮಾಡಿ ಪುನಃ ಪ್ರತಿಷ್ಠೆ ಮಾಡಿ ಆಗಮೋಕ್ತವಾಗಿ ನಿತ್ಯ ಪೂಜೆ ಕೈಂಕರ್ಯವನ್ನು ಮಾಡಿಸಿದಂತಹ ಕೀರ್ತಿ ಶ್ರೀ ವ್ಯಾಸರಾಜರಿಗೆ ಸಲ್ಲುತ್ತದೆ. ಅಂತಹ ದೇವಾಲಯಗಳಲ್ಲಿ ''ಸಂತೇಬಿದನೂರಿನ ಶ್ರೀ ಮುಖ್ಯಪ್ರಾಣದೇವರು" ಒಂದು.

ಸಂತೇಬಿದನೂರು ಶ್ರೀ ಮುಖ್ಯಪ್ರಾಣ ದೇವರು :- ಸುಮಾರು 600 ವರ್ಷಗಳ ಹಿಂದಿನ ಕಾಲವಾದ್ದರಿಂದ ಕಾಲಘಟ್ಟದ ಅವನತಿಯಿಂದ ನಗರಗಳು ಕಾಡುಗಳಾದವು. ಕಾಡುಗಳು ನಗರಗಳಾಗಿ ಇಂದು ಕಾಣುತ್ತಿದ್ದೇವೆ ಹಾಗೂ ಕಲಿ ದೋಷದ ನಿಮಿತ್ತವಾಗಿ ಅನೇಕ ದೇವ ಮಂದಿರಗಳು ಸನಾತನ ಹಿಂದು ಧಾರ್ಮಿಕ ಕೇಂದ್ರಗಳೆಲ್ಲಾ ಅವನತಿ ಹೊಂದಿ ಕಾಲಘಟ್ಟದಲ್ಲಿ ಲೀನವಾಗಿ ಹೋಗಿರುತ್ತದೆ.

ಅಂತಹ ಸಂದರ್ಭದಲ್ಲಿ ಸುಪ್ರಸಿದ್ಧವಾದ ಮಂಗಳಗಿರಿ ಶ್ರೀಪಾನಕ ಲಕ್ಷ್ಮೀನರಸಿಂಹ ದೇವರ ಕ್ಷೇತ್ರದಲ್ಲಿದ್ದ ಶ್ರೀ ಮುಖ್ಯ ಪ್ರಾಣದೇವರ ಪೂಜಾರಾಧಕರಾಗಿದ್ದ ಪರಮ ಸಾತ್ವಿಕ ಶ್ರೀ ನರಹರಿಚಾರ್ ದಂಪತಿಗಳು ಆ ಸ್ಥಳದಿಂದ ಆಕಸ್ಮಿಕವಾಗಿ ಅಂದಿನ ಕಾಲದ ಸಂಚಾರದ ಕ್ರಮದಲ್ಲಿ ಕಾಲ್ನಡಿಗೆಯಲ್ಲಿ ದಂಪತಿಗಳು ಸಂಚರಿಸುತ್ತಾ ಇಂದಿನ ಆಂಧ್ರಪ್ರದೇಶ ಪ್ರಾಂತ್ಯದ ಕಡಗತ್ತೂರು ಎಂಬ ಸಣ್ಣ ಗ್ರಾಮಕ್ಕೆ ತನ್ನ ಮಗಳ ಮನೆಗೆ ಬಂದು ವಾಸ್ತವ್ಯ ಮಾಡುತ್ತಾರೆ. ಆ ದಂಪತಿಗಳು ಏನೇ ಕಷ್ಟ ಬಂದರೂ ಸುಖ ಬಂದರೂ ಭಗವತ್ಸಂಕಲ್ಪದಂತೆ ತಮ್ಮ ಸ್ವಧರ್ಮ ನಿಷ್ಠೆಯನ್ನು ಬಿಡದೆ ನಿಯತವಾದ ಕರ್ಮವನ್ನು ಮಾಡುತ್ತಾ ಹರಿ ತೋಷಣೆಗಾಗಿ ಜೀವನ ನಡೆಸುತ್ತಿದ್ದರು.

ಈಗಿನ ಸಂತೇಬಿದನೂರಿನ ದಡದಲ್ಲಿರುವ ಉತ್ತರ ಪಿನಾಕಿನೀ ನದಿಯ ದಂಡೆಯ ಮೇಲೆ ಕುಳಿತು ಪ್ರತಿನಿತ್ಯದ ವಿಹಿತವಾದ ಆತ್ಮೀಕಾದಿಗಳನ್ನು ಮಾಡಿಕೊಂಡು ಯದೃಚ್ಛಾಲಾಭ ಸಂತುಷ್ಠತೆಯಿಂದ ಮನೆಗೆ ಹಿಂತಿರುಗಿ ಶ್ರೀ ಹರಿ ಕೊಟ್ಟಿದ್ದನ್ನು ಭುಂಜಿಸಿ ಜೀವನ ಸಾಗಿಸುತ್ತಿದ್ದರು.

ಪ್ರತಿ ನಿತ್ಯ ತನ್ನ ಮಗಳ ಹತ್ತಿರ ದೇವರ ನೈವೇದ್ಯಕ್ಕೆಂದು ಐದು ಉಂಡೆ ಬೆಲ್ಲವನ್ನು ತೆಗೆದುಕೊಂಡು ಉತ್ತರ ಪಿನಾಕಿನೀ ನದಿಯ ದಂಡೆಯ ಮೇಲೆ ತನ್ನಲ್ಲಿದ್ದ ಸಾಲಿಗ್ರಾಮ

ಸೀತಾರಾಮ ಲಕ್ಷ್ಮಣ ದೇವರ ವಿಗ್ರಹಗಳಿಗೆ ಪೂಜೆಯನ್ನು ಸಲ್ಲಿಸಿ ನೈವೇದ್ಯಾದಿಗಳನ್ನು ಮಾಡಿ ಮನೆಗೆ ಹಿಂತಿರುಗುತ್ತಿದ್ದರು.

ದಿನ ಕಳೆದಂತೆ ಪ್ರತಿನಿತ್ಯ ಐದು ಉಂಡೆ ಬೆಲ್ಲವನ್ನು ನೈವೇದ್ಯಕ್ಕಿಟ್ಟು ಮಂಗಳಾರತಿ ಮಾಡುವ ಸಮಯದ ವೇಳೆಗೆ ಆ ಐದು ಉಂಡೆ ಬೆಲ್ಲದಲ್ಲಿ ಒಂದು ಉಂಡೆ ಬೆಲ್ಲ ಮಾಯವಾಗುತ್ತಿತ್ತು. ಆಶ್ಚರ್ಯಚಕಿತನಾದ ಆ ಬ್ರಾಹ್ಮಣ ತನ್ನ ಮಗಳ ಬಳಿ ಬಂದು ನೀನು ನಾಲ್ಕು ಉಂಡೆ ಬೆಲ್ಲವನ್ನು ಕೊಟ್ಟಿದ್ದೀಯಾ ಎಂದು ವಾದಿಸುತ್ತಿದ್ದ. ತಾನಾಗಿಯೇ ಐದು ಉಂಡೆ ಬೆಲ್ಲವನ್ನು ಎಣಿಸಿಕೊಂಡು ಪೂಜೆ ಮಾಡಿ ಕಣ್ಣು ಮುಚ್ಚಿ ತೆರೆಯುವ ವೇಳೆಗೆ ಅಲ್ಲಿ ಒಂದು ಉಂಡೆ ಬೆಲ್ಲ ಮಾಯವಾಗುತ್ತಿತ್ತು. ಇದನ್ನು ಅರಿತ ಆ ಬ್ರಾಹ್ಮಣ ಬೆಲ್ಲದ ಬದಲಾಗಿ ಅನ್ನ ನೈವೇದ್ಯವನ್ನು ಮಾಡಲಾರಂಭಿಸಿದ.

ಅನ್ನವನ್ನು ಮಾಡಲು ಒಲೆಯನ್ನು ಕೂಡಿಸುವ ಸಮಯದಲ್ಲಿ ಮೂರು ಕಲ್ಲುಗಳನ್ನು ಹುಡುಕಲು ಎರಡು ಕಲ್ಲು ಸಿಕ್ಕಿತು ಇನ್ನೊಂದು ಕಲ್ಲನ್ನು ಹುಡುಕುತ್ತಿರಲು ಒಂದು ದೊಡ್ಡ ಬಂಡೆಯನ್ನು ಕಂಡು ಅಲ್ಲಿಯೇ ತಾನು ಪೂಜೆ ಮಾಡಲು ನೈವೇದ್ಯಕ್ಕೆ ಅನ್ನ ಮಾಡಲು ಆ ಬಂಡೆಯನ್ನು ಬಳಸಿಕೊಂಡು ಆ ಬಂಡೆಯ ಮೇಲೆ ಒಲೆ ಉರಿಸಿ ಅನ್ನವನ್ನು ಮಾಡುತ್ತಿದ್ದ ನೈವೇದ್ಯವನ್ನು ಮಾಡಿ ತಾನೂ ತಿನ್ನಲು ಊಟಕ್ಕೆ ಕುಳಿತುಕೊಳ್ಳುವ ವೇಳೆಗೆ ಆ ಬಿಳಿ ಅನ್ನವು ಕೆಂಪು ಬಣ್ಣಕ್ಕೆ ತಿರುಗುತ್ತಿತ್ತು. ಆ ಬ್ರಾಹ್ಮಣ ದೇವರ ನೈವೇದ್ಯವಾದ ಅನ್ನವಿದು ನನಗೇನು ಆಗದು ಎಂದು ದೇವರನ್ನು ಸ್ಮರಿಸಿ ಊಟ ಮಾಡುತ್ತಿದ್ದರು. ದಿನೇ ದಿನೇ ಅನ್ನವನ್ನು ಮಾಡುವ ಜಾಗವನ್ನೇಲ್ಲಾ ಪ್ರತಿನಿತ್ಯ ಶುದ್ಧ ಶುಚಿಗೊಳಿಸಿ ಗೊಮಯದಿಂದ ಸಾರಿಸಿ ದಿನಕ್ಕೊಂದು ಜಾಗ ಬದಲಾಯಿಸಿ ಅನ್ನಮಾಡಿ ನೈವೇದ್ಯ ಮಾಡುತ್ತಿದ್ದ.

ದಿನ ಕಳೆದಂತೆ ಆ ಬ್ರಾಹ್ಮಣನ ಕನಸಿನಲ್ಲಿ ನನ್ನನ್ನು ದಿನಕ್ಕೊಂದು ಭಾಗವನ್ನು ಸುಡುತ್ತಿದ್ದೀಯಾ ನನಗೆ ತುಂಬಾ ನೋವಾಗುತ್ತಿದೆ ಇವತ್ತು ನನ್ನ ಶಿರಭಾಗವನ್ನು ಸುಟ್ಟಿದ್ದೀಯಾ ನನಗೆ ತಲೆ ನೋವಾಗುತ್ತಿದೆ ಎಂದು ಕಪಿ ಬಂದು ಹೇಳಿದಂತ ಸ್ವಪ್ನವನ್ನು ಕಂಡರು. ಯೋಚನೆಯೊಳಗೆ ಮುಳುಗಿದ ಆ ಬ್ರಾಹ್ಮಣ ಬಂಡೆಯಲ್ಲಿ ಏನೋ ಮಹಿಮೆ ಇರಬೇಕೆಂದು ಊಹಿಸಿ ಆ ಬ್ರಾಹ್ಮಣ ತನ್ನ ರೈತರ ಸಹಾಯದಿಂದ ಆ ದೊಡ್ಡ ಬಂಡೆಯನ್ನು ತಿರುಗಿಸಲು ಪ್ರಯತ್ನಿಸಿದ. ಆ ದೊಡ್ಡ ಬಂಡೆಯನ್ನು ನಿಲ್ಲಿಸಿದರೆ ತೇಜೋಮಯವಾದ ಜನಮೇಜಯರಾಜರ ಕಾಲದಲ್ಲಿ ಸ್ಥಾಪಿತಗೊಂಡಿದ್ದ

ಮುಖ್ಯಪ್ರಾಣದೇವರು ಕಾಣಿಸಿತು. (ಈಗಿನ ಸಂತೇಬಿದನೂರಿನ ಶ್ರೀ ಮುಖ್ಯಪ್ರಾಣ ದೇವರು)

ತದನಂತರ ಮಂಗಳಗಿರಿ ವಂಶಸ್ಥರಿಂದ ಆ ಮುಖ್ಯ ಪ್ರಾಣದೇವರ ಪೂಜೆ ಮುಂದುವರೆಯಿತು. ಆ ಬೃಹತಾಕಾರದ ಪ್ರಾಣ ದೇವರ ಪೂಜೆಯ ಸುಲಭಕ್ಕಾಗಿ ಮಂಗಳಗಿರಿ ವಂಶಸ್ಥರಾದ ಸಹೋದರರು ಪ್ರತಿನಿತ್ಯ ಪೂಜೆಗೆ ಗಂಧಾಕ್ಷತೆಯನ್ನು ತೇಯಲು, ಹೂ, ತುಳಸಿಗಳನ್ನು ತರಲು ಅಭಿಷೇಕಕ್ಕೆಂದು ತಮ್ಮ ತಮ್ಮವರನ್ನು ನಿರ್ಧರಿಸಿಕೊಂಡು ಪೂಜಾ ನೈವೇದ್ಯಗಳನ್ನು ಸಮರ್ಪಿಸುತ್ತಾ ಬಂದರು.

ಎಂದಿನಂತೆಯೇ ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ತಿಳಿದು ಶ್ರೀ ಪ್ರಾಣದೇವರ ಸೇವೆಯನ್ನು ಮಾಡುತ್ತಿದ್ದರು. ದಿನ ಕಳೆಯುತ್ತಿದ್ದಂತೆಯೇ ಒಂದು ದಿನ ಮೈಸೂರಿನ ಮಹಾರಾಜರು ಹಾಗೂ ದಿವಾನರು ಬಳ್ಳಾರಿಯ ರಾಣಿಯನ್ನು ಭೇಟಿಮಾಡಲು ಬರುತ್ತಿದ್ದರು. ತನ್ನ ಪ್ರಯಾಣವನ್ನು ಈಗಿನ ಕರ್ನಾಟಕ ಬಾರ್ಡರ್ (ಆಂಧ್ರ ಚೆಕ್‌ಪೋಸ್ಟ್) ಹತ್ತಿರ ವಿಶ್ರಾಂತಿಸಲು ತಂಗಿದಾಗ ತನ್ನ ಕುದುರೆಗಳು ಜ್ಞಾನ ತಪ್ಪಿ ಮನಬಂದಂತೆ ವರ್ತಿಸುತ್ತಿದ್ದವು. ಹೆದರಿದ ಮಹಾರಾಜರು ಈಗ ಏನು ಮಾಡುವುದು ಪ್ರಯಾಣ ಅರ್ಧದಲ್ಲಿ ಯಾಕೇ ಈ ಅಡಚಣೆ ಎಂದು ಯೋಚಿಸತೊಡಗಿದರು. ಬ್ರಾಹ್ಮಣನಾದ ದಿವಾನರು ಸ್ನಾನವಿಲ್ಲದೆ ಸಂಧ್ಯಾವಂದನೆ ಇಲ್ಲದೆ ಪರಿತಪಿಸುತ್ತಿದ್ದರು. ಆಗ ಇವರಿದ್ದ ಕಡೆಗೆ ಒಂದು ಘಂಟಾನಾದವು ಕೇಳಿಸಿತು. ಯಾವುದೋ ದೇವರ ಪೂಜೆ ನಡೆಯುತ್ತಿದೆ ಬನ್ನಿ ಹೋಗಿ ಬರೋಣ ಎಂದು ಮಹಾರಾಜರ ಸಮೇತ ಆ ಉತ್ತರ ಪಿನಾಕಿನೀ ನದಿಯ ದಂಡೆಯ ಮೇಲೆ ನೆಲೆಸಿದ್ದ ಶ್ರೀ ಮುಖ್ಯ ಪ್ರಾಣದೇವರನ್ನು ಕಂಡರು.

ಮೈಸೂರು ಮಹಾರಾಜರು ಹಾಗೂ ದಿವಾನ್ ಪೂರ್ಣಯ್ಯನವರು ಅಲ್ಲಿ ಪೂಜಿಸುತ್ತಿದ್ದ ಬ್ರಾಹ್ಮಣರನ್ನು ಭೇಟಿ ಮಾಡಿ ಹಾಗೂ ಆ ದೇವರಿಗೆ ನಮಸ್ಕರಿಸಿ ತನ್ನ ಪ್ರಯಾಣವನ್ನು ಮುಂದುವರೆಸುವಂತೆ ಬೇಡಿಕೊಂಡು ತೀರ್ಥಪ್ರಸಾದವನ್ನು ಸ್ವೀಕರಿಸಿ ಕುದುರೆ ಮತ್ತು ತನ್ನ ಭಟರು ಇರುವ ಕಡೆಗೆ ಹೊರಟರು. ಅವರು ಅಲ್ಲಿಗೆ ಬರುವ ವೇಳೆಗೆ ಕುದುರೆಗಳು ಆರೋಗ್ಯಹೊಂದಿ ಆನಂದದಿಂದ ಮೇವನ್ನು ಮೇಯುತ್ತಿದ್ದವು. ಇದನ್ನು ಕಂಡ ಮಹಾರಾಜರು ಸಂತಸಗೊಂಡು ಇದು ಶ್ರೀ ಮುಖ್ಯಪ್ರಾಣ ದೇವರ

ದರ್ಶನದಿಂದ ದೊರೆತ ಅನುಗ್ರಹ ಎಂದು ಅರಿತು ಮರುದರ್ಶನಕ್ಕೆಂದು ಶ್ರೀಮುಖ್ಯ ಪ್ರಾಣದೇವರನ್ನು ಕಾಣಲು ಹಿಂದಿರುಗಿದರು.

ಮೈಸೂರು ಮಹಾರಾಜರು ಹಾಗೂ ದಿವಾನ್ ಪೂರ್ಣಯ್ಯನವರು ಅಂದು ಅಲ್ಲಿಯೇ ಉಳಿದು ಆ ದೇವರಿಗಾಗಿ ಒಂದು ಗುಡಿಯನ್ನು ಕಟ್ಟಿಸಿದರು ಹಾಗೂ ಆ ಬ್ರಾಹ್ಮಣರಿಗೆ ಅಲ್ಲಿಯೇ ಇರುವಂತೆ ಹೇಳಿ ಅವರಿಗೂ ಒಂದು ಸೂರನ್ನು ಕಟ್ಟಿಸಿಕೊಟ್ಟರು. ಪ್ರತಿನಿತ್ಯದಂತೆ ದಿವಾನರು ಬೆಳಿಗ್ಗೆ ಎದ್ದು ತನ್ನ ನಿತ್ಯ ಕರ್ಮಾದಿಗಳನ್ನು ಮುಗಿಸಿ ಶ್ರೀ ಮುಖ್ಯಪ್ರಾಣದೇವರ ಸೇವೆಯನ್ನು ಮಾಡಿ ತೀರ್ಥಪ್ರಸಾದ ಸ್ವೀಕರಿಸುತ್ತಿದ್ದರು.

ದಿವಾನ್ ಪೂರ್ಣಯ್ಯನವರಿಗೆ ತಾನು ತಿನ್ನುವ ಅನ್ನವೆಲ್ಲಾ ಹುಳುವಾಗಿ ಕಾಣುತ್ತಿದ್ದ ದೋಷವೊಂದನ್ನು ಹೊಂದಿದ್ದರು. ಈ ದೋಷದ ವಿಮೋಚನೆಗೆ ಅವರು ಕಾಶಿಗೆ ಹೋಗಬೇಕಾಗಿತ್ತು. ಆದರೆ ಸಂತೇಬಿದನೂರು ಶ್ರೀ ಮುಖ್ಯಪ್ರಾಣದೇವರ ಸ್ಮರಣೆ, ಸೇವೆಯಿಂದ ಅಲ್ಲಿ ದೊರೆತ ಅನ್ನ ಪ್ರಸಾದದಲ್ಲಿ ಯಾವ ಹುಳುಗಳು ಕಾಣಲಿಲ್ಲ. ದಿಗ್ಧಮೆಗೊಂಡ ದಿವಾನರು ಬಹಳ ಸಂತೋಷಗೊಂಡರು ತನ್ನ ದೋಷವು ಇಲ್ಲಿಯೇ ವಿಮೋಚನೆಗೊಂಡಿತು ಧನ್ಯನಾದೆ ಎಂದು ಹೇಳಿ ಆ ಬ್ರಾಹ್ಮಣನಿಗೆ ಧನ, ಒಡವೆ, ವೈಡೂರ್ಯಗಳನ್ನು ಕೊಡಲು ಹೋದಾಗ ಆ ಬ್ರಾಹ್ಮಣರು ನಮಗೆ ಈ ಒಡವೆ ಧನಗಳು ಬೇಡ ಇಲ್ಲಿ ಕಳ್ಳರು ದರೋಡೆಕೋರರು ಇದ್ದಾರೆ ನಮಗೆ ನೀವು ಕೊಡುವುದಾದರೆ 'ನಮಗೆ ಇಲ್ಲಿಂದ ಕೂಗಿದರೆ ಎಲ್ಲಿಯವರೆಗೂ ಕೇಳುವುದೋ ಅಷ್ಟು ಭೂಮಿಯನ್ನು ನೀಡಿ'' ಎಂದು ಕೇಳಿದರು. ದಿವಾನರು ಆ ಬ್ರಾಹ್ಮಣರ ಆಸೆಯನ್ನು ಕೇಳಿ ನಕ್ಕರು ನಿಮ್ಮ ಈ ಸೇವೆಗೆ ಋಣಿಯಾಗಿದ್ದೇನೆ ನಿಮಗೆ ಎಷ್ಟು ಕೊಟ್ಟರು ನನಗೆ ತೃಪ್ತಿಯಾಗದು ಎಂದು ಹೇಳಿ ಉದಾರ ಮನಸ್ಸಿನಿಂದ ಈಗಿನ ನಕ್ಕಲಹಳ್ಳಿ ಉತ್ಸವದಳ್ಳಿ (ಉಚ್ಚೇದನಹಳ್ಳಿ) ಹಾಗೂ ದೇವರಹಳ್ಳಿಯನ್ನು ಜೋಡಿ ಗ್ರಾಮವೆಂದು ಹೇಳಿ ಬಳುವಳಿಯಾಗಿ ಕೊಟ್ಟರು ದಿವಾನರ ದೋಷ ವಿಮುಕ್ತಿಗೊಂಡು ಸಂತೋಷದಿಂದ ಅವರು ಮತ್ತು ಮಹಾರಾಜರು ಮತ್ತೊಮ್ಮೆ ನಮಸ್ಕರಿಸಿ ಅವರ ಪ್ರಯಾಣವನ್ನು ಬೆಳೆಸಿದರು.

ತದನಂತರ ನದಿಯನ್ನು ಊರಿನ ಕಡೆ ತಿರುಗಿಸಿ ನದಿಯನ್ನು ಊರನ್ನಾಗಿ ಮಾಡಿದರು ತನ್ನ ವಂಶದ ಬೆಳವಣಿಗೆಯಾದಾಗ ತನ್ನ ಅಣ್ಣ ತಮ್ಮಂದಿರನ್ನು ನಿತ್ಯ ದೇವರ

ಪೂಜೆಗೆ ದೇವರಹಳ್ಳಿ, ಉತ್ಸವ ಮತ್ತು ದೇವರಿಗೆ ಮೊದಲನೆಯ ದೀಪ ಬೆಳಗಿಸುವ ಅಧಿಕಾರವನ್ನು ಉತ್ಸವದಳ್ಳಿಗೆ ಹಾಗೂ ಉತ್ಸವ ಮೂರ್ತಿಯ ಪೂಜೆಗೆಂದು ನಕ್ಕಲಹಳ್ಳಿ ಎಂದು ನೇಮಿಸಿ ಅವರವರಿಗೆ ದೊರೆತ ಊರುಗಳಿಗೆ ಬಂದು ನೆಲೆಸಿದರು.

ಉತ್ಸವದಹಳ್ಳಿ (ಉಚ್ಚೇದನಹಳ್ಳಿ) :- ಶ್ರೀ 1008 ಶ್ರೀ ವ್ಯಾಸರಾಜರ ಅಮೃತ ಹಸ್ತದಿಂದ ಪ್ರತಿಷ್ಠಾಪಿಸಲ್ಪಟ್ಟ ಮುಖ್ಯ ಪ್ರಾಣದೇವರು ಊರಿನ ಮಧ್ಯಭಾಗದಲ್ಲಿದ್ದು 450 ವರ್ಷಗಳ ಇತಿಹಾಸವಿದೆ.

ಶ್ರೀ ಮುಖ್ಯಪ್ರಾಣದೇವರು ಸಜ್ಜನರಿಗೆ ಅನುಗ್ರಹ ಮಾಡುತ್ತಾ ಉತ್ಸವದಹಳ್ಳಿ (ಉಚ್ಚೋದನಹಳ್ಳಿ) ಸ್ಥಳದಲ್ಲಿ ನಿಂತು ಅನುಗ್ರಹಿಸುತ್ತಿರುವ ಜೀವೋತ್ತಮರಾದ ಭಾರತೀ ರಮಣ ಶ್ರೀ ಮುಖ್ಯಪ್ರಾಣದೇವರನ್ನು ಪೂರ್ವಿಕರೂ ಪೂಜಿಸುತ್ತಾ ಬಂದಿದ್ದು ಇಂದಿಗೂ ಮಕ್ಕಳು ಮೊಮ್ಮಕ್ಕಳಾದ ನಾವು ಪೂಜಿಸುತ್ತಾ ಬರುತ್ತಿದ್ದೇವೆ.

ಪ್ರತಿನಿತ್ಯ ಶ್ರೀ ಪ್ರಾಣದೇವರ ಸ್ಮರಣೆ, ಪೂಜಾದಿಗಳನ್ನು ನೆರವೇರಿಸಿ ಸಕಲ ಇಷ್ಟಾರ್ಥಗಳನ್ನು ಸಿದ್ಧಿಸುವುದಲ್ಲದೆ ಸುಖ ನೆಮ್ಮದಿಯನ್ನು ಕರುಣಿಸುವನು ಯಾರು ಈ ಕಥೆಯನ್ನು ಓದುವರೋ, ಕೇಳುವರೋ ಅವರಿಗೆ ಮುಖ್ಯ ಪ್ರಾಣದೇವರು ಕೃಪೆಯನ್ನು ಕರುಣಿಸಿ ಹಾಗೂ ಮಂಗಳವನ್ನು ಉಂಟುಮಾಡಲಿ

ಶ್ರೀ ಸಂತೇಬಿದನೂರು ಹಾಗೂ ಉತ್ಸವದಹಳ್ಳಿ ಶ್ರೀ ಮುಖ್ಯಪ್ರಾಣದೇವರ ಕಥಾ ಸಂಪೂರ್ಣ೦ || ಶ್ರೀಕೃಷ್ಣಾರ್ಪಣಮಸ್ತು ||