ವಿಕ್ರಮ ಶೆಟ್ಟಿ ಬಸದಿ

ವಿಕ್ರಮ ಶೆಟ್ಟಿ ಬಸದಿಯು ಮೂಡುಬಿದಿರೆಯ ೧೮ ಬಸದಿಗಳಲ್ಲಿ ಒಂದು. ಇದನ್ನು ೧೨ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ಬಸದಿಯಲ್ಲಿ ಆದಿನಾಥ ಸ್ವಾಮಿಯನ್ನು ಆರಾದಿಸಲಾಗುತ್ತದೆ. [೧]

ಸ್ಥಳ ಬದಲಾಯಿಸಿ

ಈ ವಿಕ್ರಮ ಶೆಟ್ಟಿ ಬಸದಿಯು ಮಂಗಳೂರು ತಾಲೂಕಿನ ಪಡುಮರ್ನಾಡು ಗ್ರಾಮವು ಮೂಡುಬಿದಿರೆಯಲ್ಲಿದೆ. ಈ ಬಸದಿಯ ಸುತ್ತಲೂ ಅನೇಕ ಬಸದಿಗಳಿವೆ. ಈ ಬಸದಿಯ ಎದುರಿಗೆ ಪ್ರವೇಶದ್ವಾರದಲ್ಲಿ ಗೋಪುರವಿದೆ. ಈ ಬಸದಿಯ ಹತ್ತಿರವಿರುವ ಇನ್ನೊಂದು ಬಸದಿ ಎಂದರೆ ಪ್ರಸಿದ್ಧವಾದ ಗುರು ಬಸದಿ. ಈ ಬಸದಿಯು 15 ಅಡಿ ದೂರದಲ್ಲಿದೆ. ವಿಕ್ರಮ ಶೆಟ್ಟಿ ಬಸದಿಗೆ ಆಗಾಗ ಬರುವ ಕುಟುಂಬವೆಂದರೆ ಶ್ರಾವಕ ರಾದ ಶಂಭವಕುಮಾರ್ ಮತ್ತು ಮಾಲತಿ ಚಂದ್ರರಾಜ್ ಬೆಟ್ಟಕೇರಿ ಇವರು.

ಮಾರ್ಗ ಬದಲಾಯಿಸಿ

ಬಸದಿಯು ಮೂಡಬಿದರೆ ಕೇಂದ್ರದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ಜೈನ ಮಠದಿಂದ ಮುಂದೆ ಸಿಗುವ ಜೈನ್ ಹೈಸ್ಕೂಲ್. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಅಲ್ಲಿ ಮೊದಲಿಗೆ ವಿಕ್ರಮ ಶೆಟ್ಟಿ ಬಸದಿ ಸಿಗುತ್ತದೆ. ಇದು ಕರ್ಗಲ್ಲಿನಿಂದ ನಿರ್ಮಾಣಗೊಂಡಿದ್ದು, ಶಿಲಾಮಯವಾಗಿದೆ. ವಿಕ್ರಮ ಶೆಟ್ಟಿ ಬಸದಿಯನ್ನು ಈಗ ಶ್ರೀ ಜೈನಮಠದವರು ನಡೆಸುತ್ತಿದ್ದಾರೆ.

ಇತಿಹಾಸ ಬದಲಾಯಿಸಿ

ಈ ಬಸದಿಯನ್ನು ಸುಮಾರು 12 ನೇ ಶತಮಾನದಲ್ಲಿ ವಿಕ್ರಮ ಶೆಟ್ಟಿ ಎಂಬ ಜೈನ ಶ್ರಾವಕ ಕಟ್ಟಿದ್ದರಿಂದ ವಿಕ್ರಮ ಶೆಟ್ಟಿ ಬಸದಿಯೆಂದೆ ಹೆಸರುವಾಸಿಯಾಗಿದೆ. ಈ ಬಸದಿಯ ಪ್ರಧಾನ ಮೂಲ ನಾಯಕ ಬಿಂಬವು ಅಲಂಕಾರಗೊಂಡಿರುವ ಗಂಧಕುಟಿಯ ಹಿಂಬದಿ ಗರ್ಭಗೃಹದಲ್ಲಿ ವಿರಾಜಮಾನವಾಗಿದೆ. ಕೃಷ್ಣಶಿಲೆಯ ಈ ಸುಂದರ ಬಿಂಬವು ಖಡ್ಗಾಸನ ಭಂಗಿಯಲ್ಲಿದೆ. ಮೇಲ್ಗಡೆ ಪ್ರಭಾವಳಿಯಲ್ಲಿ ಮಕರ ತೋರಣ ಅಲಂಕಾರವಿದೆ. ಇಕ್ಕೆಲಗಳಲ್ಲಿರುವ ಕಂಬದಂತ ರಚನೆಗಳಿಂದಾಗಿ ಇದು 12ನೇ ಶತಮಾನದ ಬಿಂಬವೆನ್ನಬಹುದು. ಈ ಬಸದಿಯು ಇತ್ತೀಚೆಗೆ ಶ್ರೀ ಜೈನ ಮಠದ ವತಿಯಿಂದ ಜರ್ಣೋದ್ಧಾರವಾಗಿದೆ. ವಿಕ್ರಮ ಶೆಟ್ಟಿ ಬಸದಿಯಲ್ಲಿ ಶ್ರೀ ಆದಿನಾಥ ಸ್ವಾಮಿಯ ಪೂಜೆ ನಡೆಯುತ್ತದೆ.

ವಿಗ್ರಹಗಳು ಬದಲಾಯಿಸಿ

ಬ್ರಹ್ಮದೇವರು, ಶ್ರುತ, ಗಣಧರ, ಕೂಷ್ಮಾಂಡಿನಿ ದೇವಿಯ ವಿಗ್ರಹ, ಶ್ರೀ ಚಂದ್ರನಾಥ ಸ್ವಾಮಿಯ ವಿಗ್ರಹ, ಹಸಿರು ಕಲ್ಲಿನ ಒಂದು ಹೆಡೆಯ ಪದ್ಮಾವತಿ ಅಮ್ಮನವರ ವಿಗ್ರಹ ಮುಂತಾದವುಗಳಿವೆ. ಬಸದಿಯ ಎದುರು ಸುಂದರವಾದ ಸುಮಾರು 30 ಅಡಿ ಎತ್ತರದ ಮಾನಸ್ಥಂಭವಿದೆ. ಇದು ಚೌಕಾಕಾರದ ಅಸ್ಥಿರವಾದ ಮೇಲೆ ಸ್ಥಾಪನೆಗೊಂಡಿದ್ದು, ತುದಿಯಲ್ಲಿ ಒಂದು ಮಂಟಪವನ್ನು ಹೊಂದಿದೆ. ಇದರ ಪೂರ್ವ-ಪಶ್ಚಿಮ, ದಕ್ಷಿಣ ಹಾಗೂ ಉತ್ತರ ಮೈಯಲ್ಲಿ ಅರಹಂತರ ಮೂರ್ತಿಗಳು ಇವೆ.

ಪ್ರಾಂಗಣ ಬದಲಾಯಿಸಿ

ವಿಕ್ರಮ ಶೆಟ್ಟಿ ಬಸದಿಯ ಅಂಗಳದ ಬಲಭಾಗದಲ್ಲಿ ಪಾರಿಜಾತ ಮರವಿದೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡಬಾಗದಲ್ಲಿ ವಿಶೇಷ ಪೂಜೆ ನಡೆಯುವಾಗ ಡೋಲು, ವಾಲಗ, ಕಹಳೆ ಮತ್ತು ತಬಲಗಳೊಂದಿಗೆ ಆ ಗೋಪುರದಲ್ಲಿ ಕುಳಿತು ಅವುಗಳನ್ನು ಬಾರಿಸುತ್ತಿದ್ದರು. ಬಸದಿಗೆ ತಾಗಿಕೊಂಡು ಮುನ್ಯಾಸೋ ಎಂಬ ಕೋಣೆ ಇದೆ. ಇದರಲ್ಲಿ ಹಿಂದೆ ಕೆಲವೊಮ್ಮೆ ಶಾಂತಿಕೀರ್ತಿ ಮುನಿ ಎಂಬ ಕನ್ನಡದ ಕವಿಯೊಬ್ಬರು ವಾಸವಾಗಿದ್ದು, ತೀರ್ಥಂಕರರ ಕುರಿತಾಗಿ 7-8 ಕಾವ್ಯಗಳನ್ನು ಬರೆದಿದ್ದರು. ಈ ಬಸದಿಯ ಕಂಬಗಳು ಸುಂದರವಾದ ಶಿಲ್ಪ ಕಲಾಕೃತಿಗಳಿಂದ ಕೂಡಿದೆ. ಹಾಗೆ ಬಸದಿಯ ಮೊದಲಿನ ಪ್ರರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಎರಡು ವರ್ಣಚಿತ್ರಗಳು ಹಾಗೂ ಗೋಡೆಗಳ ಮೇಲೆ ವೈರಾಗ್ಯಕ್ಕೆ ಸಂಬಂಧಿಸಿದ ವಿಭಿನ್ನ ವರ್ಣಚಿತ್ರಗಳು ಕಣ್ಮನ ಸೆಳೆಯುತ್ತಿದ್ದವು. ಇವು ಶ್ರೀ ಆದಿನಾಥ ಸ್ವಾಮಿಯ ಜೀವನಕ್ಕೆ ಸಂಬಂಧಪಟ್ಟವು. ಇವುಗಳ ಅನುಸಾರ ಒಂದು ದಿನ ಆದಿನಾಥ ಸ್ವಾಮಿಯ ವೈಭವೊತ್ಸವದಿಂದ ಇರುವಾಗ ನೃತ್ಯಪ್ರರ್ಶನವೂ ನಡೆಯುತ್ತಿತ್ತು. ಆಗ ಪಕ್ಕನೆ ನೃತ್ಯ ಕಲಾವಿದೆಯು ಕಸಿದು ಬಿದ್ದು ಮರಣವನ್ನಪ್ಪುತ್ತಾಳೆ. ಕೂಡಲೇ ನೃತ್ಯಕ್ಕಾಗಿ ಮತ್ತೊಬ್ಬರನ್ನು ನೇಮಕ ಮಾಡಿದಾಗ ಅದುವೇ ಜೀವನ. ಇದು ಕ್ಷಣಿಕ ಎಂದು ಆದಿನಾಥ ಸ್ವಾಮಿಗೆ ಗೊತ್ತಾಗಿ ತಾನು ವೈರಾಗ್ಯದಿಂದ ಜೀವನವನ್ನು ಲೌಕಿಕ ಸುಖ ಭಾಗ್ಯಗಳನ್ನು ತ್ಯಜಿಸಿ ವೈರಾಗ್ಯ ಹೊಂದಿ ದಾನದ ಮೂಲಕ ಜ್ಞಾನಸ್ಥರಾದರು. <ref>ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. p. ೧೨೩. {{cite book}}: More than one of |pages= and |page= specified (help)</ref

ಪ್ರಾರ್ಥನಾ ಮಂದಿರ ಬದಲಾಯಿಸಿ

ಈ ಬಸದಿಯ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿದ್ದು, ಅಲ್ಲಿ ಜಯಘಂಟೆ ಮತ್ತು ಜಾಗಟೆಗಳನ್ನು ತೂಗು ಹಾಕಲಾಗಿದೆ. ಮುಂದೆ ಇರುವ ಮಂಟಪವನ್ನು ತೀರ್ಥಮಂಟಪ ಎಂದು ಕರೆಯುತ್ತಾರೆ. ಗಂಧಕುಟಿಯು ಈ ತೀರ್ಥಂಕರ ಮಂಟಪದಲ್ಲಿದೆ. ಅದಕ್ಕೆ ಮುಂದೆ ಇರುವುದೇ ಗರ್ಭಗುಡಿ. ಹೀಗೆ ಈ ಜಿನಾಲಯದಲ್ಲಿರುವ ಮಂಟಪಗಳು, ತೀರ್ಥಂಕರ ಮಂಟಪ ಹಾಗೂ ಗರ್ಭಗುಡಿ, ಗಂಧಕುಟಿಯ ಬಳಿಯಲ್ಲಿ ಗಣಧರ ಪಾದ , ಶ್ರುತ, ಬ್ರಹ್ಮದೇವರು ಮತ್ತು ಇನ್ನೂ ಅನೇಕ ಸುಂದರವಾದ ಮೂರ್ತಿಗಳಿವೆ. ಇವುಗಳಿಗೆ ಯಾವಾಗಲೂ ಪೂಜೆ ನಡೆಯುತ್ತದೆ. ಇಲ್ಲಿ ಪೂಜೆಗೊಳ್ಳುವ ಯಕ್ಷಗೋಮುಖ ಯಕ್ಷ ಮತ್ತು ಚಕ್ರೇಶ್ವರಿ ಯಕ್ಷಿ.

ಪೂಜೆ ಬದಲಾಯಿಸಿ

ಈ ಬಸದಿಯ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಮಾತೆ ಪದ್ಮಾವತಿ ದೇವಿಯ ಮೂರ್ತಿ. ಇದಕ್ಕೆ ದಿನವೂ ಪೂಜೆ ನಡೆಯುತ್ತದೆ. ಮಾತೆ ಪದ್ಮಾವತಿ ದೇವಿಯನ್ನು ಸೀರೆ, ಬಳೆ ಮತ್ತು ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಈ ಅಮ್ಮನವರ ಮೂರ್ತಿಯು ಪೂರ್ವಕ್ಕೆ ಮುಖ ಮಾಡಿಕೊಂಡಿದ್ದು, ಕಾಲಿನ ಬಳಿ ಕುಕ್ಕುಟ ಸರ್ಪವಿದೆ. ಈ ಬಸದಿಯಲ್ಲಿ ಅಮ್ಮನವರಿಗೆ ಹೂ ಹಾಕಿ ಪ್ರಸಾದ ನೋಡುವ ಕ್ರಮ ಇಂದಿಗೂ ಜಾರಿಯಲ್ಲಿದೆ. ಇಲ್ಲಿರುವ ಜಿನಬಿಂಬಗಳ ಪೀಠಗಳ ಮೇಲೆ ಕೆಲವು ಹಳೆಗನ್ನಡ ಬರಹಗಳಿವೆ. ಆದರೆ ಇದನ್ನು ಸರಿಯಾಗಿ ಓದಲು ಸಾಧ್ಯವಾಗುವುದಿಲ್ಲ. ಮೂಲ ಸ್ವಾಮಿಗೆ ದಿನಾಲೂ ಜಲಾಭಿಷೇಕ ಮತ್ತು ನಿತ್ಯ ಪೂಜಾವಿಧಿ ವಿಧಾನ ನಡೆಸಲಾಗುತ್ತದೆ. ಸ್ವಾಮಿಗೆ ಅಕ್ಷಯ ತದಿಗೆ ದಿವಸ ಇಕ್ಷು ರಸದ ಅಭಿಷೇವನ್ನು ಮಾಡಲಾಗುತ್ತದೆ.

ಹರಕೆ ಸಂಪ್ರದಾಯ ಬದಲಾಯಿಸಿ

ಈ ಬಸದಿಗೆ ಬರುವ ಜನರು ಕೂಷ್ಮಾಂಡಿನಿ ಅಮ್ಮನವರಿಗೆ ಹರಕೆಯನ್ನು ಸಲ್ಲಿಸುತ್ತಾರೆ. ಕೆಲವರು ಹೆರಿಗೆ ಸಮಯದಲ್ಲಿ ಬೆಳ್ಳಿಯ ತೊಟ್ಟಿಲು ಮತ್ತು ಮಗುವಿನ ಆಕೃತಿಯನ್ನು ಹರಕೆಯ ರೂಪದಲ್ಲಿ ಅರ್ಪಿಸಿ ವಿಶೇಷವಾಗಿ ಪೂಜೆ ನಡೆಸುತ್ತಾರೆ. ಪ್ರತಿವರ್ಷ ಮಾರ್ಚ್ 29ರಂದು ಸಹಸ್ರ ಕುಂಕುಮರ್ಚನೆ ಮತ್ತು ಶ್ರೀ ಆದಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆಯುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಮಂಗಳವಾರ ವಿಶೇಷ ಪೂಜೆ, ಹಬ್ಬದ ಪ್ರಯುಕ್ತ ನೋಂಪು ಮತ್ತು ಜೀವದಯಾಷ್ಟಮಿಯನ್ನು ನಡೆಸಲಾಗುತ್ತದೆ.

ಕಲ್ಲುಗಳು ಬದಲಾಯಿಸಿ

ಬಸದಿಯ ಅಂಗಳದ ಬಲಭಾಗದ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಇಲ್ಲಿ ನಾಗರಕಲ್ಲು ಮತ್ತು ಕೆಲವು ಗುಂಡು ಕಲ್ಲುಗಳನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಈ ಬಸದಿಯಲ್ಲಿ ಯಾವುದೇ ಶಾಸನದ ಕಲ್ಲುಗಳು ದೊರೆತಿಲ್ಲ. ಬಸದಿಯ ಸುತ್ತಲೂ ಮುರಕಲ್ಲಿನ ಪ್ರಕಾರಗೋಡೆ ಇದೆ. ಈ ಬಸದಿಗೆ ಇತ್ತೀಚೆಗಿನ ರ್ಷಗಳಲ್ಲಿ ಮುನಿಗಳಾದ ಶ್ರೀ ತರುಣಸಾಗರ್‍ಜೀ ಮತ್ತು ಶ್ರೀ ವೀರಸಾಗರ ಮುನಿ ಮಹಾರಾಜರು ಭೇಟಿ ನೀಡಿ ಹೋಗಿದ್ದಾರೆ. ವಿಕ್ರಮ ಶೆಟ್ಟಿ ಬಸದಿಗೆ ಮೂಲ ಆದಾಯ ಶ್ರೀ ಜನ ಮಠದಿಂದ ಕೊಡುವ ಕೊಡುಗೆ. ವಿಕ್ರಮ ಶೆಟ್ಟಿ ಬಸದಿಯ ಸ್ಥಿತಿಗತಿಗಳನ್ನು ಜರ್ಣೋದ್ದಾರ ಮಾಡುವ ಮೂಲಕ ಉತ್ತಮಗೊಳಿಸಿದ್ದಾರೆ.


ಉಲ್ಲೇಖಗಳು ಬದಲಾಯಿಸಿ

  1. ಉಮಾನಾಥ ಶೆಣೈ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಬಸದಿಗಳು. ಡಾ. ಎಂ. ಎನ್ ರಾಜೇಂದ್ರ ಕುಮಾರ್,. p. ೧೨೦. {{cite book}}: |access-date= requires |url= (help)CS1 maint: extra punctuation (link)