ಯಶವಂತ ಹಳಿಬಂಡಿ ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಮುಖರ ಸಾಲಿನಲ್ಲಿ ನಿಲ್ಲುವವರು. ವರಕವಿ ಬೇಂದ್ರೆಯವರ ಧಾರವಾಡ ಶೈಲಿಯ ನುಡಿಗಳಿಂಪನ್ನು ಯಶವಂತ ಹಳಿಬಂಡಿ ಅವರ ಧ್ವನಿಯಲ್ಲಿ ಸವಿಯಬಹುದಾದ ಸುಖ ಮನೋಜ್ಞವಾದದ್ದು. ಸ್ವತಃ ಬೇಂದ್ರೆಯವರ ಎದುರೇ ಅವರ ಗೀತೆಯನ್ನು ಹಾಡಿ ಅವರ ಮನಮೆಚ್ಚಿಸಿ ಆಶೀರ್ವಾದ ಪಡೆದವರು ಯಶವಂತ ಹಳಿಬಂಡಿ.

ಯಶವಂತ ಹಳಿಬಂಡಿ
ಜನನಮೇ ೨೫, ೧೯೫೦
ಧಾರವಾಡ
ಮರಣಜನವರಿ ೨೨, ೨೦೧೪
ಉದ್ಯೋಗಸುಗಮ ಸಂಗೀತ ಗಾಯಕರು

ಜೀವನ ಬದಲಾಯಿಸಿ

ಯಶವಂತ ಹಳಿಬಂಡಿ ಅವರು ೧೯೫೦ರ ಮೇ ೨೫ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಶ್ರೀ ಹನುಮಂತ ಹಳಿಬಂಡಿ ಹಾಗೂ ತಾಯಿ ಬಸವೇಶ್ವರಿ. ಚಿಕ್ಕಂದಿನಲ್ಲೇ ಧಾರವಾಡದ ಪರಿಸರದಲ್ಲಿ ಹಾಸುಹೊಕ್ಕಾಗಿದ್ದ ಹಿಂದೂಸ್ಥಾನೀ ಸಂಗೀತಕ್ಕೆ ಮಾರುಹೋದ ಯಶವಂತರು ಶ್ರೀ ಲಕ್ಷ್ಮಣರಾವ್ ದೇವಾಂಗರಲ್ಲಿ ಮೊದಲಿಗೆ ಶಿಷ್ಯವೃತ್ತಿಯನ್ನು ಆರಂಭಿಸಿದರು. ಕೆಲವು ವರ್ಷಗಳ ನಂತರ ಹೆಚ್ಚಿನ ಪರಿಣಿತಿಗಾಗಿ ಶ್ರೀ ನಾರಾಯಣ ರಾವ್ ಮಜುಂದಾರ್ ಅವರಲ್ಲಿ ಶಿಕ್ಷಣ ಮುಂದುವರಿಸಿದರು. ಹೀಗೆ ಬಹಳಷ್ಟು ವರ್ಷ ಹಿಂದೂಸ್ತಾನಿ ಗಾಯನದ ತಾಲೀಮು ನಡೆಸಿದರು.

ಬಾಳಪ್ಪ ಹುಕ್ಕೇರಿ, ಅನುರಾಧ ಧಾರೇಶ್ವರ್ ಮುಂತಾದವರ ಗಾಯನವನ್ನು ಆಗಾಗ ಕೇಳುತ್ತಿದ್ದ ಯಶವಂತರು ಸುಗಮ ಸಂಗೀತದ ಕಡೆ ಆಕರ್ಷಿತರಾದರು. ಕನ್ನಡ ಗೀತೆಗಳನ್ನು ಹಾಡಲು ಮುಂದಾದರು. ಅಷ್ಟರಲ್ಲಿಯೇ ಪದವಿಪೂರ್ವ ಶಿಕ್ಷಣ ಹಾಗೂ ಚಿತ್ರಕಲೆಯಲ್ಲಿ ತರಬೇತಿ ಹೊಂದಿದ್ದರು.

ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದ ಮೇಲೆ ಹಳಿಬಂಡಿ, ಕೆಲಸದ ಜೊತೆಜೊತೆಗೆ ಹಾಡಿನ ಕಾಯಕವನ್ನು ಮುಂದುವರಿಸಿದರು. ಆಕಾಶವಾಣಿಯ ಸುಗಮ ಸಂಗೀತ ವಿಭಾಗದಲ್ಲಿ ಗಾಯಕರಾಗಿ ಅಯ್ಕೆಯಾದ ಹಳಿಬಂಡಿ ದೂರದರ್ಶನದಲ್ಲಿ ಕೂಡ ಜನಪ್ರಿಯ ಗಾಯಕರೆನಿಸಿದರು.

ಕರ್ನಾಟಕದ ಜಾನಪದ ಹಾಡುಗಾರಿಕೆಯ ಮನೆತನದಲ್ಲಿ ಉತ್ತರ ಕರ್ನಾಟಕದ ತೇರಗಾಂನಲ್ಲಿ ಹುಟ್ಟಿದ ಯಶವಂತ ಹಳಿಬಂಡಿಯವರು ಜಾನಪದ, ಸುಗಮ ಸಂಗೀತ, ಚಲನ ಚಿತ್ರಗೀತೆ ಹೀಗೆ ಹಲವಾರು ಪ್ರಕಾರಗಳ ಯಶಸ್ವಿ ಹಾಡಗಾರರು. ತಂದೆ ಹನುಮಂತಪ್ಪ, ತಾಯಿ ಬಸವೇಶ್ವರಿ. ಅಮ್ಮ ನಿಂದ ಪಡೆದ ಸಂಗೀತ ಸಂಸ್ಕಾರ. ಅಮ್ಮ ಹೇಳಿಕೊಳ್ಳುತ್ತಿದ್ದ ಪದಗಳನ್ನು ಕೇಳಿ ಕೇಳಿ ಬಾಲಕನ ಮನಸ್ಸಿನಲ್ಲಿ ಹಾಡುಗಾರನಾಗಬೇಕೆಂಬ ಬಯಕೆ. ಧಾರವಾಡದ ಆಕಾಶವಾಣಿ ಮಕ್ಕಳ ಕಾರ್ಯಕ್ರಮ ’ಗಿಳಿವಿಂಡು’ ವಿನಲ್ಲಿ ಹಾಡಿ ಸೈ ಎನ್ನಿಸಿಕೊಂಡ ಹುಡುಗ. ಹುಡುಗನ ಕಂಡಶ್ರೀಯನ್ನ ಮೆಚ್ಚಿದ ಗುರುಗಳಿಂದ ಲಕ್ಷ್ಮಣರಾವ್ ದೇವಾಂಗ ಮಠ ನಂತರ ನಾರಾಯಣರಾವ್ ಮಜುಮದಾರರಿಂದ ಕಲಿತ ಸಂಗೀತ ಶಿಕ್ಷಣ, ಹಿಂದೂಸ್ತಾನಿ, ಸುಗಮ ಸಂಗೀತ, ಜಾನಪದ ಇವರ ಪ್ರೀತಿಯ ಹಾಡುಗಾರಿಕೆಯ ಪ್ರಕಾರಗಳು.

೧೯೭೧ ರಿಂದ ಧಾರವಾಡದ ಆಕಾಶವಾಣಿಯ ಅನುಮೋದಿತ ಗಾಯಕರಾಗಿ ನೇಮಕಗೊಂಡ ನಂತರ ಆಕಾಶವಾಣಿಯ ಸಂಗೀತ ನಿರ್ದೇಶಕರಾದ ಕೇಶವ ಗುರವ್, ವಸಂತ ಕನಕಾಪುರ್ ರವರಲ್ಲಿ ಕಲಿತದ್ದು ಅಪಾರ. ಧಾರವಾಡದ ಆಕಾಶವಾಣಿಯಿಂದ ಬೇಂದ್ರೆಯವರ ಕವನ ಮೂಡಲ ಮನೆಯ…. ಹಾಡಿದಾಗ, ತಾವರೆಗೇರಿ ಆಸ್ಪತ್ರೆಯಲ್ಲಿದ್ದ ಬೇಂದ್ರೆಯವರು ರೇಡಿಯೋ ಮೂಲಕ ಹಾಡುಕೇಳಿ, ಬರಮಾಡಿಕೊಂಡು “ಏನಹಾಡಿದ್ಯೋ ಮುಂಜಾನಿ ಹುಚ್ಚು ಹಿಡಿಸಿದಿ ನನಗ….” ಎಂದಾಗ ಹುಡುಗ ಹಳಿಬಂಡಿಗೆ ಮಾತೇ ಹೊರಡದಾಯಿತಂತೆ. ನಾಡಿನ ಪ್ರಸಿದ್ಧ ಕವಿಯೊಬ್ಬರಿಂದ ಪ್ರಶಂಸೆ, ಯಾವ ಪ್ರಶಸ್ತಿಯೂ ಸರಿಗಟ್ಟಲಾಗದ್ದು. ಮುಂದೆ ಬೇಂದ್ರೆ ಕಾವ್ಯವಾಣಿ ಎಂಬ ವಿಶೇಷ ಸಂಗೀತ ರೂಪಕ ರಚನೆ. ನಾಡಿನಾದ್ಯಂತ ನಡೆಸಿಕೊಟ್ಟ ಕಾರ್ಯಕ್ರಮ. ಕೊನೆಯವರೆಗೂ ಬೇಂದ್ರೆಯವರಲ್ಲಿಗೆ ಹೋಗಿ ಹಾಡಿ ಸಂತೋಷ ಪಡಿಸಿದ ಗಾಯಕ.

ಸುಗಮ ಸಂಗೀತ ಕ್ಷೇತ್ರದಲ್ಲಿ ಬದಲಾಯಿಸಿ

ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸುಗಮ ಸಂಗಿತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಸ್ರಾರು ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡಿರುವ ಹಳಿಬಂಡಿ ತಮ್ಮದೇ ಆದ ತಂಡ ಕಟ್ಟಿ, ನಾಡಿನಉದ್ದಗಲಗಳಲ್ಲಿ ಸಂಚರಿಸಿ ಸುಪ್ರಸಿದ್ಧ ಕವಿಗಳ ಕವಿತಾಮೃತವನ್ನು ಸಂಗೀತಪ್ರಿಯರಿಗೆ ಉಣಬಡಿಸುತ್ತಾ ಸಾಗಿದ್ದಾರೆ.

ಯಶವಂತ ಹಳಿಬಂಡಿ ಅವರು ಹಾಡಿರುವ ಬೇಂದ್ರೆಯವರ ‘ಪಾತರಗಿತ್ತಿಪಕ್ಕ ನೋಡಿದ್ದೇನ ಅಕ್ಕ’ ಅಂತೂ ಜನಮನದಲ್ಲೆಲ್ಲಾ ಸಂತಸ ಉಕ್ಕಿಹರಿಸುವಂತದ್ದು. ಅವರ ಮಧುರ ಕಂಠದಿಂದ ಹೊರಹೊಮ್ಮುವ ಹೋಗು ಮನಸೆ ಹೋಗು ನಲ್ಲೆ ಇರುವಲ್ಲಿ ಹೋಗು..., ಕುಣಿಯೋಣು ಬಾರಾ ಕುಣಿಯೋಣು ಬಾ..., ನಾ ಸಂತಿಗಿ ಹೋಗಿನ್ನಿ ಆಕೆ ತಂದಿದ್ದಳೂ ಬೆಣ್ಣಿ..., ಎಲ್ಲೋ ಜೋಗಪ್ಪ ನಿನ್ನ ಅರಮಾನೆ... ಕುಂಬಾರಕ್ಕಿ ಈಕಿ ಕುಂಬಾರಕ್ಕಿ, ಬಾರೊ ಸಾಧನ ಕೇರಿಗೆ ಗೀತೆಗಳಂತೂ ಶ್ರೋತೃಗಳನ್ನು ಆನಂದದ ಸಾಗರದಲ್ಲಿ ತೇಲಿಸುತ್ತಾ ಮುದನೀಡುತ್ತವೆ.

ಹಳಿಬಂಡಿಯವರ ನೂರಾರು ಧ್ವನಿ ಸುರುಳಿಗಳು ಜನಪ್ರಿಯಗೊಂಡಿವೆ. ನೂರಾರು ಸುಗಮ ಸಂಗೀತ ಕಮ್ಮಟಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಗೀತೆಗಳನ್ನು ಕಲಿಸಿ ಅವರಿಂದಲೇ ಹಾಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇಂದು ಮೈಸೂರು ಸೀಮೆಯಲ್ಲಿ ಸುಗಮ ಸಂಗೀತವನ್ನು ಧಾರವಾಡದ ಶೈಲಿಯಲ್ಲಿ ಹಾಡುವ ಗಾಯಕರೆಂದರೆ ಹಳಿಬಂಡಿ ಮಾತ್ರ ಎಂಬುದು ಅತಿಶಯೋಕ್ತಿಯ ಮಾತಲ್ಲ. ಮಕ್ಕಳು ಹಿರಿಯರು ಎಂದು ಭೇದವಿಲ್ಲದೇ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವ ಹಳಿಬಂಡಿ ಸರಳ ವ್ಯಕ್ತಿತ್ವದ ಸಜ್ಜನ.

ಭಾವಗೀತೆಗಳ ಜೊತೆ ಜೊತೆಗೆ ಭಕ್ತಿಗೀತೆ, ಜಾನಪದಗೀತೆ, ಶರಣರ ಪದ, ವಚನ , ತತ್ವಪದ ಹೀಗೆ ಹಲವು ಪ್ರಕಾರದಲ್ಲಿ ಹಳಿಬಂಡಿ ತಮ್ಮ ದನಿಯಿಂದ ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ಸರ್ಕಾರ ಆಯೋಜಿಸುವ ಹಂಪಿ ಉತ್ಸವ, ಕದಂಬೊತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗು ಗಾಯಕರಾಗಿ ಮನಗೆದ್ದಿದ್ದಾರೆ.

ಗಾಯಕರಷ್ಟೇ ಅಲ್ಲ ಬದಲಾಯಿಸಿ

ಯಶವಂತ ಹಳಿಬಂಡಿ ಕೇವಲ ಗಾಯಕರಷ್ಟೇ ಅಲ್ಲ, ಉತ್ತಮ ಸಂಗೀತ ಸಂಯೋಜಕರು, ಸಂಗೀತ ನಿರ್ದೇಶಕರು ಕೂಡ.. ಜೊತೆಗೆ ಇವರು ವಾಸ್ತುಶಿಲ್ಪಿ ಕೂಡಾ.. ಮರದ ಹಲಗೆಗಳಲ್ಲಿ ಹಾಗೂ ದಪ್ಪ ಕಾಗದದಲ್ಲಿ ಮನೆ, ಮಹಲುಗಳ ವಿನ್ಯಾಸ ಮಾಡುವುದರಲ್ಲಿ ಹಳಿಬಂಡಿ ಸಿದ್ಧ ಹಸ್ತರು. ಓದಿದ್ದು ಪಿ.ಯು. ವರೆಗೆ, ಡ್ರಾಯಿಂಗ್ ಟೀಚರ್ಸ್ ಕೋರ್ಸ್ ಮುಗಿಸಿ ಟ್ರೀಸರ್ ಆಗಿ ಸೇರಿದ್ದು ಕರ್ನಾಟಕ ಪವರ್ ಕಾರ್ಪೋರೇಶನ್, ಧಾರವಾಡದಲ್ಲಿ. ವಿವಿಧ ಹಂತಗಳಲ್ಲಿ ೩೬ ವರ್ಷ ಸುದೀರ್ಘಸೇವೆ. ಹಾಡುಗಾರಿಕೆಯ ಜೊತೆಗೆ ಕಟ್ಟಡಗಳ ಮಾದರಿ ವಿನ್ಯಾಸ (ಮಿನಿಯೇಚರ್ ಮಾಡಲಿಂಗ್) ರಚನೆ ಮತ್ತೊಂದು ಪ್ರಮುಖ ಹವ್ಯಾಸ. ಇವರು ರಚಿಸಿದ ಮಾದರಿಯಲ್ಲೇ ಹಲವಾರು ಕಟ್ಟಡಗಳ ನಿರ್ಮಾಣ. ಕರ್ನಾಟಕ ಪತ್ರಕರ್ತರ ಸಹಕಾರಿ ಸಂಘದ ಸುವರ್ಣಭವನ ಇವರ ಮಿನಿಯೇಚರ ಮೇಲೆ ರಚಿಸಿದ ಕಟ್ಟಡ.

ಪ್ರಶಸ್ತಿ ಗೌರವಗಳು ಬದಲಾಯಿಸಿ

ಅನೇಕ ಸಂಘ ಸಂಸ್ಥೆಗಳು ಹಳಿಬಂಡಿ ಅವರ ಗಾಯನ ಪ್ರತಿಭೆ ಗುರುತಿಸಿ ಪುರಸ್ಕರಿಸಿವೆ. ರಾಜ್ಯ ಸರ್ಕಾರ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಭಾವಗೀತೆ, ಭಕ್ತಿಗೀತೆ, ಜಾನಪದ, ವಚನ ಮುಂತಾದ ೨೫೦ಕ್ಕೂ ಹೆಚ್ಚು ಧ್ವನಿ ಸುರುಳಿಗಳ ಹಾಡುಗಾರರು. ಹಲವಾರು ಚಲನಚಿತ್ರಗಳಿಗೂ ಗಾಯನ, ಕರ್ನಾಟಕ ಸರಕಾರದ ಹಂಪಿ ಉತ್ಸವ, ಕದಂಬ ಉತ್ಸವ, ಕಿತ್ತೂರು ಉತ್ಸವ, ಕರಾವಳಿ ಉತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವಗಳಲ್ಲಿ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಭಾಗಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ರಾಜ್ಯಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು. ಸುಗಮ ಸಂಗೀತ ಸಾರ್ವಭೌಮ, ಬೆಂಗಳೂರು ರತ್ನ ಮುಂತಾದ ಬಿರುದುಗಳು.

ವಿದಾಯ ಬದಲಾಯಿಸಿ

ಯಶವಂತ ಹಳಿಬಂಡಿ ಅವರು ಜನವರಿ ೨೨, ೨೦೧೪(2014)ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು.

ಮಾಹಿತಿ ಆಧಾರ ಬದಲಾಯಿಸಿ

ಉಪಾಸನಾ ಮೋಹನ್ ಅವರ ಲೇಖನ ಸುಗಮಸಂಗೀತಾ.ಕಾಂ

ಆಕರಗಳು ಬದಲಾಯಿಸಿ

ಯಶವಂತ ಹಳಿಬಂಡಿ ವಿಧಿವಶ