ಭಾರತದಲ್ಲಿ ಪರಮಾಣು ವಿದ್ಯುತ್

ಪೀಠಿಕೆ ಬದಲಾಯಿಸಿ

 
ಕೂಡುಂಕುಳಂ ಪರಮಾಣು ವಿದ್ಯುತ್‌ ಸ್ಥಾವರ ರಷ್ಯಾ ಮತ್ತು ಭಾರತದ ಜಂಟಿ ಕಾರ್ಯ; ‘ದೇಶದಲ್ಲಿ ಶುದ್ಧ ಇಂಧನ ಉತ್ಪಾದನೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ರಷ್ಯಾ–ಭಾರತ ಸಹಯೋಗದಲ್ಲಿ ನಿರ್ಮಾಣವಾಗಿರುವ ಯೋಜನೆ
  • ಭಾರತದಲ್ಲಿ ಉಷ್ಣ ವಿದ್ಯುತ್, ಜಲವಿದ್ಯುತ್ ಮತ್ತು ನವೀಕರಿಸಬಹುದಾದ ಮೂಲಗಳವಿದ್ಯುತ್ ನಂತರ ಅಣುಶಕ್ತಿ ವಿದ್ಯುತ್ ನಾಲ್ಕನೇ ಅತಿದೊಡ್ಡ, ವಿದ್ಯುತ್ ಮೂಲವಾಗಿದೆ. 2013 ರ ಹಾಗೆ, ಭಾರತ 7 ಪರಮಾಣು ಶಕ್ತಿ ಸ್ಥಾವರಗಳ 6780 ಮೆವ್ಯಾ ಸಾಮರ್ಥ್ಯದ ಕಾರ್ಯಾಚರಣೆಯಲ್ಲಿ ಅಳವಡಿಕೆಯಾದ 21 ಪರಮಾಣು ರಿಯಾಕ್ಟರ್ಗಳನ್ನು ಹೊಂದಿದೆ ಮತ್ತು ಒಟ್ಟು 30,292.91 ಗಿವ್ಯಾ ವಿದ್ಯುತ್ ಉತ್ಪಾದಿಸುವ ಪರಮಾಣು ರಿಯಾಕ್ಟರ್ಗಳನ್ನು ಹೊಂದಿದೆ. 6 ವಿದ್ಯುತ್ ಉತ್ಪಾದಿಸುವ ರಿಯಾಕ್ಟರ್ ನಿರ್ಮಾಣ ಹಂತದಲ್ಲಿದೆ ಮತ್ತು 4,300 ಮೆವ್ಯಾ ಹೆಚ್ಚುವರಿ ವಿದ್ಯುತ್ ಉತ್ಪಾದನೆ ನಿರೀಕ್ಷಿಸಲಾಗಿದೆ.
  • ಅಕ್ಟೋಬರ್ 2010 ರಲ್ಲಿ ಭಾರತ "2032 ರಲ್ಲಿ 63,000 ಮೆವ್ಯಾ ಒಂದು ಅಣು ವಿದ್ಯುತ್ ಶಕ್ತಿಯ ಸಾಮರ್ಥ್ಯ ತಲುಪಲು ಮಹತ್ವಾಕಾಂಕ್ಷೆಯ ಯೋಜನೆಯನ್ನು", ರೂಪಿಸಿದೆ. [೧]

ಕೂಡುಂಕುಳಂ ಅಣು ವಿದ್ಯುತ್ ಕೇಂದ್ರ ಉದ್ಘಾಟನೆ ಬದಲಾಯಿಸಿ

ತಮಿಳುನಾಡಿನ ಕೂಡುಂಕುಳನಲ್ಲಿ ನಿರ್ಮಿಸಲಾಗಿರುವ ಒಂದು ಸಾವಿರ ಮೆಗಾವಾಟ್‌ ಸಾಮರ್ಥ್ಯದ ಪರಮಾಣು ವಿದ್ಯುತ್‌ ಸ್ಥಾವರ ಘಟಕ–1ನ್ನು ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ದಿ.1೦-8-2016 ಬುಧವಾರ ಜಂಟಿಯಾಗಿ ಆನ್ ಲೈನ್ ಮೂಲಕ ಉದ್ಘಾಟನೆ ಮಾಡಿದರು. ‘ವಿಶ್ವದಲ್ಲಿರುವ ಅತ್ಯಂತ ಸುರಕ್ಷಿತ ಪರಮಾಣು ಸ್ಥಾನಗಳಲ್ಲಿ ಇದು ಒಂದಾಗಿದೆ’ ಎಂದು ಅವರು ಹೇಳಿದ್ದಾರೆ.[೨]

ಭಾರತದಲ್ಲಿ ಅಣು ವಿದ್ಯುತ್ ಕೇಂದ್ರಗಳು ಬದಲಾಯಿಸಿ

ವಿದ್ಯುತ್ ಕೇಂದ್ರ ಆಪರೇಟರ್ ರಾಜ್ಯ ವಿಧ ಒಟ್ಟು ಘಟಕಗಳು ಒಟ್ಟು ಸಾಮರ್ಥ್ಯ (ಮೆವ್ಯಾ)
ತಾರಾಪುರ NPCIL ಮಹಾರಾಷ್ಟ್ರ BWR&PHWR 160 x 2 & 540 x 2 1,400
ರಾವತ್‍ಭಾಟ NPCIL ರಾಜಸ್ಥಾನ PHWR 100 x 1;200 x 1:220 x 4 1,180
ಕೂಡಂಕುಳಂ NPCIL ತಮಿಳುನಾಡು VVER- 1000 1000 x 2 2,000
ಕೈಗಾ NPCIL ಕರ್ನಾಟಕ PHWR 220 x 2 880
ಕಕ್ರಾಪುರ NPCIL ಗುಜರಾತ್ PHWR 221 x 2 440
ಕಲ್ಪಾಕಮ್ NPCIL ತಮಿಳುನಾಡು PHWR 222 x 2 440
ನರೊರಾ NPCIL ಉತ್ತರ ಪ್ರದೇಶ PHWR 223 x 2 440
ಒಟ್ಟು 1000x2,+ 540x2,+ 220x14+200x1,+160x2, 100x1=6780ಮೆ.ವ್ಯಾ.(5780ಮೆ.ವ್ಯಾ.?)

[೩]

ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ಒತ್ತು ಬದಲಾಯಿಸಿ

  • ದೇಶೀಯವಾಗಿ ಪರಮಾಣು ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟ ಸ್ಥಳೀಯವಾಗಿ 10 ಪರಮಾಣು ರಿಯಾಕ್ಟರ್‌ಗಳ ಸ್ಥಾಪನೆಗೆ ಬುಧವಾರ ಒಪ್ಪಿಗೆ ನೀಡಿದೆ. ಪರಮಾಣು ರಿಯಾಕ್ಟರ್‌ಗಳ ಸ್ಥಾಪನೆಗೆ ಇದ್ದ ಅಡೆತಡೆಗಳನ್ನು ತೆರವುಗೊಳಿಸಿರುವ ಕೇಂದ್ರ ಸರ್ಕಾರ ಹೊಸ 10 ಸ್ಥಾವರ ನಿರ್ಮಾಣಕ್ಕೆ ಒಂದೇ ಬಾರಿಗೆ ಅನುಮೋದನೆ ನೀಡಿದೆ. 10 ರಿಯಾಕ್ಟರ್‌ಗಳು ತಲಾ 700 ಮೆಗಾ ವಾಟ್‌ ವಿದ್ಯುತ್ ಉತ್ಪಾದನೆ ಮಾಡಲಿವೆ. ಪರಮಾಣು ಇಂಧನ ಇಲಾಖೆಯಿಂದ ಪಿಎಚ್‌ಡಬ್ಲ್ಯುಆರ್‌ಗಳು ಸ್ಥಾಪನೆಯಾಗುತ್ತಿದ್ದು, ಒಟ್ಟು 7,000 ಮೆಗಾ ವಾಟ್‌ ವಿದ್ಯುತ್‌ ಉತ್ಪಾನೆ ಸೇರ್ಪಡೆಗೊಳ್ಳಲಿದೆ. ಇದು ಶುದ್ಧ ಶಕ್ತಿಯ ಉತ್ಪಾದನೆಗೆ ನೆರವಾಗಲಿದೆ ಎಂದು ಕೇಂದ್ರ ಇಂಧನ ಪಿಯೂಷ್ ಗೋಯಲ್‌ ಹೇಳಿದ್ದಾರೆ.
  • ಭಾರತವು ಪ್ರಸ್ತುತ 6,780 ಮೆ.ವಾ. ಪರಮಾಣು ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 22 ಘಟಕಗಳನ್ನು ಸ್ಥಾಪಿಸಿದೆ. ಹೊಸದಾಗಿ 6,700 ಮೆಗಾವಾಟ್ ಅಣು ವಿದ್ಯುತ್ ಉತ್ಪಾದನೆ 2021-22ರೊಳಗೆ ಸೇರ್ಪಡೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ನಿರ್ಮಾಣ ಹಂತದ ಯೋಜನೆಗಳು ರಾಜಸ್ಥಾನ, ಗುಜರಾತ್ ಮತ್ತು ತಮಿಳುನಾಡಿನಲ್ಲಿವೆ. ಹೊಸ 10 ರಿಯಾಕ್ಟರ್‌ಗಳನ್ನು ರಾಜಸ್ತಾನದ ಮಣಿ ಬನ್ಸ್ವಾರಾ, ಮಧ್ಯ ಪ್ರದೇಶದ ಚಟ್ಕ, ಕರ್ನಾಟಕದ ಕೈಗಾ ಮತ್ತು ಹರಿಯಾಣದ ಗೋರಖ್‌ಪುರದಲ್ಲಿ ನಿರ್ಮಿಸಲಾಗುವುದು[೪]

ಭಾರತದಲ್ಲಿ ಅಣು ವಿದ್ಯುತ್ ಸಾಮರ್ಥ್ಯ ಬದಲಾಯಿಸಿ

  • 2015-17=2017 ಮೆಗಾವ್ಯಾಟ್ ಜೂನ್ ವರೆಗೆ;

ಈವರೆಗಿನ ಉತ್ಪಾದನೆ:

  • 2015-16 = 37,456ಮೆ.ವ್ಯಾ.
  • 2014-15 = 37,835
  • 2013 -14= 35,333
  • 2012-13 =32,863
  • 2011-12 = 32,455
  • ಆಧಾರ:ಭಾರತೀಯ ಅಣುವಿದ್ಯತ್ ನಿಗಮ;(ವರದಿ ಪ್ರಜಾವಾಣಿ)[೫]

ಪರಮಾಣು ವಿದ್ಯುತ್ತಿಗೆ ವಿರೋಧ ಬದಲಾಯಿಸಿ

  • ಪಶ್ಚಿಮಘಟ್ಟದಲ್ಲಿ ಸಾಧ್ಯವೇ ಇಲ್ಲ: ಭಾರತ ದೇಶದಲ್ಲಿ ಶೇ 2.5ರಷ್ಟು ಮಾತ್ರ ಪಶ್ಚಿಮಘಟ್ಟ ಪ್ರದೇಶವಿದೆ. ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಈ ಸೂಕ್ಷ್ಮ ಪರಿಸರ ವಲಯ ಪ್ರದೇಶವೇ ಯಾಕೆ ಬೇಕು? ದೇಶದ ನೀರು, ಆಹಾರ ಸುಭದ್ರತೆಯ ದೃಷ್ಟಿಯಿಂದ ಅಣು ರಿಯಾಕ್ಟರ್‌ಗಳ ವಿಸ್ತರಣೆ ಸಾಧ್ಯವೇ ಇಲ್ಲ ಎಂಬುದು ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಅವರ ವಾದ.
  • ಉದ್ದೇಶಿತ 5 ಮತ್ತು 6ನೇ ಘಟಕದಿಂದ ಉತ್ಪಾದನೆಯಾಗುವ 1,400 ಮೆಗಾ ವಾಟ್ ವಿದ್ಯುತ್ ಸಾಗಾಟಕ್ಕೆ ಮತ್ತಷ್ಟು ಮರಗಳ ನಾಶ ಖಚಿತ. ಉತ್ತರ ಕನ್ನಡದಲ್ಲಿ ಶೇ 65ರಷ್ಟಿದ್ದ ನಿತ್ಯ ಹರಿದ್ವರ್ಣ ಕಾಡು ಶೇ 32ಕ್ಕೆ ಇಳಿದಿದೆ. ಪಶ್ಚಿಮ ಘಟ್ಟದ ಮೇಲೆ ಯೋಜನೆಗಳ ಹೇರುವಿಕೆ ಪ್ರಸ್ತುತ ಎದುರಾಗಿರುವ ಜಲಕ್ಷಾಮವನ್ನು ಉಲ್ಬಣಿಸುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ದೇಶದಲ್ಲಿ ವಿದ್ಯುತ್ ಕೊರತೆ ನೀಗಿಸಲು ಅಣು ಸ್ಥಾವರವೇ ಬೇಕಾಗಿಲ್ಲ. ಭಾರತದಲ್ಲಿ ಸೌರ ವಿಕಿರಣ ಹೆಚ್ಚಿನ ಪ್ರಮಾಣದಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ರಾಷ್ಟ್ರಗಳನ್ನು ಸೇರಿಸಿಕೊಂಡು ಸೌರ ಮೈತ್ರಿಕೂಟ ರಚಿಸಿದ್ದಾರೆ. ಸೌರ ವಿದ್ಯುತ್‌ಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆ ಈಗಾಗಲೇ ಅನುಷ್ಠಾನದಲ್ಲಿದೆ. ಅನೇಕ ಸಂಘ –ಸಂಸ್ಥೆಗಳು, ರೈತರು ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ವಿದ್ಯುತ್ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ. ಇದನ್ನೇ ವ್ಯಾಪಕಗೊಳಿಸುವ ಜೊತೆ ಗಾಳಿ, ಜೈವಿಕ ಇಂಧನ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ಮಾಡುತ್ತಾರೆ.[೬]

ಅಪಾಯ, ಅಪಾರ ವೆಚ್ಚ ಬದಲಾಯಿಸಿ

  • ಜರ್ಮನಿ, ಆಸ್ಟ್ರಿಯಾ, ಬೆಲ್ಜಿಯಂ, ಇಟಲಿ ಮತ್ತು ಸ್ವೀಡನ್ ಇನ್ನು 15 ವರ್ಷಗಳಲ್ಲಿ ತಮ್ಮ ಎಲ್ಲ ರಿಯಾಕ್ಟರುಗಳನ್ನೂ ಬಂದ್ ಮಾಡಲು ನಿರ್ಧರಿಸಿವೆ. ಅವುಗಳ ಸಮಾಧಿಗೆ ನಿರ್ಮಾಣ ವೆಚ್ಚಕ್ಕಿಂತ ಜಾಸ್ತಿ ಹಣ ಬೇಕಾಗುತ್ತದೆಂದು ಐರೋಪ್ಯ ಸಂಘ ಲೆಕ್ಕಾಚಾರ ಹಾಕಿ ಹೇಳಿದೆ. ಕಳೆದ ಮೇ 21ರಂದು ಸ್ವಿತ್ಸರ್ಲೆಂಡ್‌ನಲ್ಲಿ ನಡೆಸಿದ ರಾಷ್ಟ್ರವ್ಯಾಪಿ ಜನಮತ ಸಂಗ್ರಹದಲ್ಲಿ ಪರಮಾಣು ಯುಗಕ್ಕೆ ಅಂತ್ಯ ಹಾಡಬೇಕೆಂಬ ತೀರ್ಮಾನ ಪ್ರಕಟವಾಗಿದೆ. ಅದಕ್ಕೆ ಮೂರು ದಿನ ಮೊದಲು ನಮ್ಮ ಭಾರತ ಸರ್ಕಾರ ಇನ್ನೂ 10 ಹೊಸ ರಿಯಾಕ್ಟರುಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ.
  • ಅಪಾಯ, ಅಪಾರ ವೆಚ್ಚ, ಅಸಂಖ್ಯ ತಾಂತ್ರಿಕ ತೊಡಕುಗಳು ಮತ್ತು ನಿಧಾನ ಗತಿಯ ನಿರ್ಮಾಣ ಇವೆಲ್ಲವೂ ಸುಧಾರಿತ ದೇಶಗಳನ್ನೇ ಹೈರಾಣುಗೊಳಿಸಿವೆ. ನಮ್ಮಲ್ಲೂ ಅವೆಲ್ಲ ಸಮಸ್ಯೆಗಳಿವೆ; ಜೊತೆಗೆ ಇನ್ನಷ್ಟು ವಿಶೇಷ ಸವಾಲುಗಳಿವೆ. ಭಾರತದಲ್ಲಿ ಯುರೇನಿಯಂ ಸಾಕಷ್ಟಿಲ್ಲ. ಥೋರಿಯಂ ಹೇರಳ ಇದೆಯಾದರೂ ಅದಿನ್ನೂ ನಮ್ಮ ಕೈಗೆ ಹತ್ತಿಲ್ಲ.[೭]

ವೇಗದ ಅಣುವಿದಳನ ರಿಯಾಕ್ಟರ್‌ ಬದಲಾಯಿಸಿ

  • 3 Jul, 2017;
  • ‘ಚೆನ್ನೈ ಬಳಿಯ ಕಡಲ ತೀರದಲ್ಲಿ ಸಾಂಪ್ರದಾಯಿಕ ಅಣು ರಿಯಾಕ್ಟರ್‌ಗಳಿಗಿಂತ ಭಾರಿ ವೇಗದಲ್ಲಿ ಅಣುವಿದಳನ ಕ್ರಿಯೆ ನಡೆಸುವ, ವೇಗದ ಅಣುವಿದಳನ ರಿಯಾಕ್ಟರ್‌ ಇರುವ ಅಣು ವಿದ್ಯುತ್ ಸ್ಥಾವರಕ್ಕೆ ಚಾಲನೆ ನೀಡಲು ಭಾರತದ ಅಣುವಿಜ್ಞಾನಿಗಳು ದಿನಗಣನೆ ಮಾಡುತ್ತಿದ್ದಾರೆ’ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಹೇಳಿದೆ. ‘ಅಣುವಿದ್ಯುತ್ ಕ್ಷೇತ್ರದಲ್ಲೇ ಇದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಕಲ್ಪಾಕಂನಲ್ಲಿ ಸ್ಥಾಪಿತವಾಗಿರುವ ಸ್ಥಾವರದಲ್ಲಿ ಬಳಕೆಯಾಗಲಿರುವ ವೇಗದ ಅಣುವಿದಳನ ರಿಯಾಕ್ಟರ್‌ ಅನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಸ್ಥಾವರ ಈ ವರ್ಷಾಂತ್ಯದಲ್ಲಿ ಕಾರ್ಯಾರಂಭ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ’ ಎಂದು ಐಎಇಎ ಹೇಳಿದೆ.
  • ‘ಇವು ಸಾಂಪ್ರದಾಯಿಕ ರಿಯಾಕ್ಟರ್‌ಗಳಿಗಿಂತ ಗರಿಷ್ಠ ಶೇ 70ರಷ್ಟು ಹೆಚ್ಚು ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ. ಅಲ್ಲದೆ, ಇಲ್ಲಿ ಉತ್ಪತ್ತಿಯಾಗುವ ವಿಕಿರಣ ತ್ಯಾಜ್ಯವನ್ನು ಮತ್ತೆ ಇಂಧನವಾಗಿ ಬಳಸಲು ಅವಕಾಶ ಇದೆ. ಹೀಗಾಗಿ ಇದು ಅನಿಯಮಿತವಾಗಿ ಶಕ್ತಿ ಉತ್ಪಾದಿಸುತ್ತಲೇ ಇರುತ್ತದೆ. ಜತೆಗೆ, ಈ ತ್ಯಾಜ್ಯವನ್ನು ಅಣ್ವಸ್ತ್ರ ತಯಾರಿಕೆಗೂ ಬಳಸಬಹುದು. ಈ ರಿಯಾಕ್ಟರ್‌ಗಳು ಒಂದು ರೀತಿಯಲ್ಲಿ ‘ಅಕ್ಷಯ ಪಾತ್ರೆ’ ಇದ್ದಂತೆ’ ಎಂದು ಐಎಇಎ ಬಣ್ಣಿಸಿದೆ. ಇಂದಿರಾ ಗಾಂಧಿ ಅಣು ಸಂಶೋಧನಾ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಭಾದುರಿ, ‘ವೇಗದ ಅಣುವಿದಳನ ರಿಯಾಕ್ಟರ್‌ನ ಮೂಲ ರೂಪದ ಅಭಿವೃದ್ಧಿ ಮತ್ತು ಪರೀಕ್ಷೆಗಾಗಿ ಭಾರತದ ವಿಜ್ಞಾನಿಗಳು 27 ವರ್ಷ ದುಡಿದಿದ್ದಾರೆ. ಇಂತಹ ಪೂರ್ಣ ಪ್ರಮಾಣದ ರಿಯಾಕ್ಟರ್ ಇರುವ ಸ್ಥಾವರದ ನಿರ್ಮಾಣ ಆರಂಭವಾಗಿ 15 ವರ್ಷ ಕಳೆದಿದೆ. ಸಾಂಪ್ರದಾಯಿಕ ರಿಯಾಕ್ಟರ್ ಇರುವ ಸ್ಥಾವರಗಳಿಗಿಂತ ಇದು ಹಲವು ಪಟ್ಟು ಸುರಕ್ಷಿತ’ ಎಂದು ಹೇಳಿದ್ದಾರೆ.

ವೇಗದ ವಿದಳನ ವೈಶಿಷ್ಟ್ಯ ಬದಲಾಯಿಸಿ

  • ವೇಗದ ವಿದಳನ ರಿಯಾಕ್ಟರ್‌ಗಳಲ್ಲಿ ನ್ಯೂಟ್ರಾನ್‌ಗಳ ಚಲನೆಯ ವೇಗವನ್ನು ಕಾಯ್ದುಕೊಳ್ಳಲಾಗುತ್ತದೆ. ಹೀಗಾಗಿ ಕಡಿಮೆ ಪ್ರತಿರೋಧದ ಭಾರಜಲವನ್ನು ಬಳಸಲಾಗುತ್ತದೆ. ಕಲ್ಪಾಕಂನ ರಿಯಾಕ್ಟರ್‌ನಲ್ಲಿ ದ್ರವ ರೂಪದ ಸೋಡಿಯಂ ಬಳಸಲಾಗಿದೆ. ಇಲ್ಲಿ ನ್ಯೂಟ್ರಾನ್‌ಗಳ ಚಲನೆ ಭಾರಿ ವೇಗದಲ್ಲಿ ಇರುವುದರಿಂದ ಮತ್ತೊಂದು ಹಂತದ ರಾಸಾಯನಿಕ ಕ್ರಿಯೆ ನಡೆದು, ಪ್ಲುಟೋನಿಯಂ ಉತ್ಪತ್ತಿಯಾಗುತ್ತದೆ. ಈ ಹಂತದಲ್ಲಿ ಭಾರಿ ಶಾಖ ಬಿಡುಗಡೆಯಾಗುತ್ತದೆ.
  • ಸಾಮಾನ್ಯ ರಿಯಾಕ್ಟರ್‌ಗಳಲ್ಲಿ ಯುರೇನಿಯಂ 235 ವಿದಳನ ನಡೆದು, ನ್ಯೂಟ್ರಾನ್‌ಗಳು ಉತ್ಪತ್ತಿಯಾಗುತ್ತವೆ. ನ್ಯೂಟ್ರಾನ್‌ಗಳು ಭಾರಿ ವೇಗದಲ್ಲಿ ಚಲಿಸಿ, ಯುರೇನಿಯಂ 235ನ ವಿದಳನ ಸರಪಳಿಯನ್ನು ಮುಂದುವರೆಸುತ್ತವೆ. ವಿದಳನದ ವೇಗವನ್ನು ಕಡಿಮೆ ಮಾಡಲು ಭಾರಜಲವನ್ನು (ಸಾಮಾನ್ಯವಾಗಿ ದ್ರವ ರೂಪದ ಲೋಹವಾಗಿರುತ್ತದೆ) ಬಳಸಲಾಗುತ್ತದೆ.
  • ಭಾರಜಲದ ಅಣುಗಳ ಜತೆ ನ್ಯೂಟ್ರಾನ್‌ಗಳು ಸಂಘರ್ಷ ನಡೆಸುವುದರಿಂದ ಶಾಖ ಉತ್ಪಾದನೆಯಾಗುತ್ತದೆ. ಈ ಶಾಖವನ್ನು ಬಳಸಿಕೊಂಡು, ನೀರನ್ನು ಕುದಿಸಿ ಹಬೆ ಉತ್ಪಾದಿಸಲಾಗುತ್ತದೆ. ಆ ಹಬೆಯ ಮೂಲಕ ಚಕ್ರಗಳನ್ನು ತಿರುಗಿಸಿ, ಜನರೇಟರ್‌ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ.

ರಷ್ಯಾದಲ್ಲಿ ವೇಗದ ಅಣುವಿದಳನ ರಿಯಾಕ್ಟರ್ ಅಭಿವೃದ್ಧಿ ಬದಲಾಯಿಸಿ

  • ವೇಗದ ಅಣುವಿದಳನ ರಿಯಾಕ್ಟರ್ ಅಭಿವೃದ್ಧಿ ಮತ್ತು ಸ್ಥಾವರ ನಿರ್ಮಾಣದಲ್ಲಿ ಈವರೆಗೆ ಯಶ ಕಂಡಿರುವುದು ರಷ್ಯಾ ಮಾತ್ರ. 1980ರಲ್ಲೇ ತನ್ನ ಅರ್ಲ್ ಪರ್ವತ ಪ್ರದೇಶದ ಬಳಿ ಇಂತಹ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿ ಆರಂಭಿಸಿತ್ತು. ಆದರೆ, ಸೋವಿಯತ್ ಒಕ್ಕೂಟದ ವಿಭಜನೆಯ ಕಾರಣ ಯೋಜನೆ ನನೆಗುದಿಗೆ ಬಿದ್ದಿತ್ತು. ಕಳೆದ ದಶಕದಲ್ಲಿ ಅದನ್ನು ಪೂರ್ಣಗೊಳಿಸುವಲ್ಲಿ ರಷ್ಯಾ ಯಶಸ್ವಿಯಾಯಿತು.
  • 2016ರಲ್ಲಷ್ಟೇ ಕಾರ್ಯಾರಂಭ ಮಾಡಿರುವ ಈ ಸ್ಥಾವರ 800 ಮೆಗಾವಾಟ್ ವಿದ್ಯುತ್‌ ಅನ್ನು ಪೂರೈಸುತ್ತಿದೆ. ಇಂತಹ ಮತ್ತಷ್ಟು ಅಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ರಷ್ಯಾ ಯೋಜನೆ ರೂಪಿಸಿದೆ ಎಂದು ಐಎಇಎ ಮಾಹಿತಿ ನೀಡಿದೆ. ಅಮೆರಿಕವೂ ಇಂತಹ ರಿಯಾಕ್ಟರ್‌ಗಳಿರುವ ಅಣುವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತಾದರೂ, ವಿಕಿರಣ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಪ್ರಕ್ರಿಯೆ ಸಂಕೀರ್ಣವಾಗಿದ್ದ ಕಾರಣ ಯೋಜನೆಯನ್ನು ಕೈಬಿಟ್ಟಿತು.
  • ಇನ್ನು ಜಪಾನ್‌ ಮತ್ತು ರಷ್ಯಾಗಳು ಇಂತಹ ರಿಯಾಕ್ಟರ್‌ಗಳ ನಿರ್ಮಾಣಕ್ಕೆ ಪ್ರಯತ್ನ ನಡೆಸಿ, ಹಲವು ಭಾರಿ ವಿಫಲವಾಗಿವೆ. ಹೀಗಾಗಿ ಅಂತಹ ಯೋಜನೆಗಳನ್ನೇ ಕೈಬಿಟ್ಟಿವೆ. ಚೀನಾವಂತೂ ಈ ವಿಚಾರದಲ್ಲಿ ಭಾರತಕ್ಕಿಂತ ಬಹಳ ಹಿಂದೆ ಉಳಿದಿದೆ ಎಂದು ಐಎಇಎ ಅಭಿಪ್ರಾಯಪಟ್ಟಿದೆ.[೮]

ಫಾಸ್ಟ್ ಬ್ರೀಡರ್ ಮೂಲ ತಂತ್ರ ಬದಲಾಯಿಸಿ

  • ಹತ್ತು ಕಿಲೊ ಪರಮಾಣು ಇದ್ದಿಲನ್ನು (ಪ್ಲುಟೋನಿಯಂ) ಸುಡುವಾಗ ಅದರೊಂದಿಗೆ ಒಂದಿಷ್ಟು ಇಂಧನವಲ್ಲದ ಥೋರಿಯಂ ಮರಳನ್ನು ಸೇರಿಸಿರುತ್ತಾರೆ. ಇದ್ದಿಲು(ಪ್ಲುಟೋನಿಯಂ) ಉರಿಯುತ್ತ ಹೋದಂತೆ ಈ ಮರಳು ಕೂಡ ಇದ್ದಿಲಾಗುತ್ತದೆ. ಅದನ್ನು ಮತ್ತೆ ಉರಿಸಬಹುದು. ಎರಡನೆಯ ಮುಖ್ಯ ಕಾರಣ ಏನೆಂದರೆ, ಥೋರಿಯಂ ಎಂಬ ಮೂಲವಸ್ತು ಮರಳಿನ ರೂಪದಲ್ಲಿ ನಿರುಪಯುಕ್ತವೆಂಬಂತೆ ನಮ್ಮಲ್ಲಿ ಹೇರಳವಾಗಿ ಹಾಸಿಬಿದ್ದಿದೆ. ಹೇರಳ ಎಂದರೆ ನಮ್ಮಲ್ಲಿದ್ದಷ್ಟು ಥೋರಿಯಂ ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ! ಕೇರಳದಿಂದ ಹಿಡಿದು ತಮಿಳುನಾಡು, ಆಂಧ್ರ, ಒಡಿಶಾ, ಬಂಗಾಳದವರೆಗೂ ಕಡಲಂಚಿನ ಮರಳರಾಶಿಯಲ್ಲಿ ಅದರದ್ದೇ ದರ್ಬಾರು. ಅದನ್ನು ಅಣು ಇಂಧನವನ್ನಾಗಿ ಕುಲುಮೆಯಲ್ಲಿ ಪರಿವರ್ತನೆ ಮಾಡುತ್ತಿದ್ದರೆ ಮುಂದೆ ನೂರಿನ್ನೂರು ವರ್ಷಗಳ ಕಾಲ ವಿದ್ಯುತ್ತನ್ನು ಉತ್ಪಾದಿಸುತ್ತಿರಬಹುದು. ಮೂರನೆಯ ಮುಖ್ಯ ಕಾರಣ ಎಂದರೆ, ಪರಮಾಣು ತ್ಯಾಜ್ಯಗಳನ್ನೇ ಉರಿಸಿ ಶಕ್ತಿ ಪಡೆಯುವುದರಿಂದ ತ್ಯಾಜ್ಯದ ವಿಲೆವಾರಿಯ ಸಮಸ್ಯೆಯೇ ಇರುವುದಿಲ್ಲ. ಅಂತೂ ಎಲ್ಲ ದೃಷ್ಟಿಯಿಂದಲೂ ಉತ್ತಮ.

ಫಾಸ್ಟ್ ಬ್ರೀಡರ್ ತಂತ್ರ ಬದಲಾಯಿಸಿ

  • ಫಾಸ್ಟ್ ಬ್ರೀಡರ್ ತಂತ್ರವನ್ನು ಸರಳವಾಗಿ ಹೀಗೆ ಹೇಳಬಹುದು: ಮಾಮೂಲು ಅಣುಸ್ಥಾವರಗಳಲ್ಲಿ ಯುರೇನಿಯಂ ಸರಳುಗಳನ್ನು ನೀರಲ್ಲಿ ಅಥವಾ ಭಾರಜಲದಲ್ಲಿ ಉರಿಸಿ, ಉಗಿಯಿಂದ ಚಕ್ರ ತಿರುಗಿಸಿ ವಿದ್ಯುತ್ ಉತ್ಪಾದಿಸುತ್ತಾರೆ. ಉರಿದ ಸರಳುಗಳು ಪ್ಲುಟೋನಿಯಂ ಎಂಬ ಪ್ರಳಯಾಂತಕ ರೂಪ ತಾಳುತ್ತವೆ. ಅದನ್ನು ಹೊರಕ್ಕೆ ತೆಗೆದು ಆ ಜಾಗದಲ್ಲಿ ಹೊಸದಾಗಿ ಯುರೇನಿಯಂ ಸರಳುಗಳನ್ನು ತೂರಿಸಬೇಕು. ಹಾಗೆ ತೆಗೆದ ಪ್ಲುಟೋನಿಯಂ ಭಾರೀ ವಿಕಿರಣ ಸೂಸುತ್ತದೆ. ಅದನ್ನು ಆಸಿಡ್‌ನಲ್ಲಿ ಮುಳುಗಿಸಿಟ್ಟು ಲಕ್ಷಾಂತರ ವರ್ಷ ಸುರಕ್ಷಿತ ಕಾಪಾಡಬೇಕು ಅಥವಾ ಬಾಂಬ್ ತಯಾರಿಕೆಗೆ ಬಳಸಬೇಕು. ಎರಡೂ ಅಪಾಯಕಾರಿಯೇ. ಅದು ಈಗ ಎಲ್ಲೆಡೆ ಚಾಲ್ತಿಯಲ್ಲಿರುವ ತಂತ್ರಜ್ಞಾನ. ಫಾಸ್ಟ್ ಬ್ರೀಡರ್ ತಂತ್ರದಲ್ಲಿ ಇದೇ ನಿಗಿನಿಗಿ ಪ್ಲುಟೋನಿಯಮ್ಮಿಗೆ ಒಂದಿಷ್ಟು ಥೋರಿಯಂ ಮರಳು ಸೇರಿಸಿ ನೀರಿನ ಬದಲು ಸೋಡಿಯಂ ದ್ರವದಲ್ಲಿ ಮುಳುಗಿಸುತ್ತಾರೆ. ಆ ಮಿಶ್ರ ಇಂಧನ ಇನ್ನೂ ‘ಫಾಸ್ಟ್’ ಆಗಿ ಉರಿಯುತ್ತ (ವಿದ್ಯುತ್ ಉತ್ಪಾದಿಸುತ್ತಲೇ) ಹೊಸ ಇಂಧನವನ್ನು ‘ಬ್ರೀಡ್’ ಮಾಡುತ್ತದೆ. ಅರ್ಥಾತ್ ‘ಶೀಘ್ರ ಹೆರುತ್ತದೆ’.
  • ಪ್ಲುಟೋನಿಯಂ ಸ್ಪರ್ಶದಿಂದ ಸೋಡಿಯಂ ಕುದಿತಾಪದಲ್ಲಿರುವಾಗ ಅದರೊಳಗೆ ಸುರುಳಿ ಕೊಳವೆಯ ಮೂಲಕ ನೀರನ್ನು ಹಾಯಿಸಬೇಕು. ನೀರು ಉಗಿಯಾಗಿ ದೂರ ಹೋಗಿ ಚಕ್ರವನ್ನು ತಿರುಗಿಸಿ ವಿದ್ಯುತ್ ಉತ್ಪಾದಿಸಬೇಕು. ಸೋಡಿಯಂ ದ್ರವದಲ್ಲಿರುವ ನೀರಿನ ಕೊಳವೆ ತುಸುವೇ ಸೀಳು ಬಿಟ್ಟರೂ ಗೊತ್ತಲ್ಲ, ಸೋಡಿಯಂ ಸಿಡಿಯುತ್ತದೆ. ಹೀಗೆ ಅತಿ ಶಾಖ, ಅತಿ ಒತ್ತಡ, ಅತಿ ವಿಕಿರಣದ ಬಗ್ಗಡವನ್ನು ದೂರ ನಿಯಂತ್ರಣದಲ್ಲೇ ನಿಭಾಯಿಸಬೇಕು. ಚೂರೇಚೂರು ಹೆಚ್ಚುಕಮ್ಮಿಯಾಗಿ ಬೆಂಕಿ ಹೊತ್ತಿಕೊಂಡಿತೊ, ಎಲ್ಲವನ್ನೂ ಶಟ್‌ಡೌನ್ ಮಾಡಿ, ಇಡೀ ವ್ಯವಸ್ಥೆ ತಂಪಾಗಲು ತಿಂಗಳುಗಟ್ಟಲೆ ಕಾದು, ಬಿರುಕಿಗೆ ದೂರದಿಂದಲೇ ಬೆಸುಗೆ ಹಾಕಿ ಮತ್ತೆ ಚಾಲೂ ಮಾಡಬೇಕು.

ರಷ್ಯದ ಸಾಧನೆ ಬದಲಾಯಿಸಿ

  • ರಷ್ಯ ಯೆಕೇಟರಿಂಗ್‌ಬರ್ಗ್ ಎಂಬಲ್ಲಿ 30 ವರ್ಷಗಳಿಂದ ಚಿಕ್ಕ ಫಾಸ್ಟ್‌ಬ್ರೀಡರ್ ಸ್ಥಾವರವನ್ನು ನಡೆಸುತ್ತಿದೆ. ರಷ್ಯದಲ್ಲಿ ಥೋರಿಯಂ ಇಲ್ಲವಾದ್ದರಿಂದ ಯು-238 ಎಂಬ ನಿಷ್ಪ್ರಯೋಜಕ ಲೋಹದ ಪುಡಿಯನ್ನೇ ಚುರುಕಾಗಿಸಿ ಉರಿಸುತ್ತಿದ್ದಾರೆ. ಕಳೆದ ವರ್ಷವಷ್ಟೆ ಫಾಸ್ಟ್‌ಬ್ರೀಡರಿನ ದೊಡ್ಡ ಮಾದರಿಯೊಂದು 800 ಮೆಗಾವಾಟ್ ವಿದ್ಯುತ್ ಪೂರೈಕೆ ಆರಂಭಿಸಿದೆ. ಹತ್ತು ದಿನಗಳ ಹಿಂದಷ್ಟೆ ಜಗತ್ತಿನ 700 ಪರಮಾಣು ತಂತ್ರಜ್ಞರನ್ನು ಸೇರಿಸಿ ಸಂಭ್ರಮಾಚರಣೆ ನಡೆಸಿದೆ. ಅಲ್ಲಿಗೆ ಹೋಗಿದ್ದ ಭಾರತೀಯ ವಿಜ್ಞಾನಿಗಳು ಅಲ್ಲೇ ನಮ್ಮಭಾರತದ ಕಲ್ಪಾಕ್ಕಮ್ ಸ್ಥಾವರದ ವಿಷಯ ಹೇಳಿದ್ದಾರೆ. ರಷ್ಯದ್ದಕ್ಕಿಂತ ನಮ್ಮದು ಭಿನ್ನವಾಗಿದ್ದು, ಎಲ್ಲೆಡೆ ವಿಫಲವಾಗಿರುವ ಥೋರಿಯಂ ಮರಳಿಗೇ ಚುರುಕು ಮುಟ್ಟಿಸಿ ಇಂಧನವನ್ನಾಗಿ ಪರಿವರ್ತಿಸಲಿದೆ ಎಂದು ಹೇಳಿದ್ದಾರೆ.[೯]

ನೋಡಿ ಬದಲಾಯಿಸಿ

ಹೆಚ್ಚಿನ ಓದಿಗೆ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. KUDANKULAM NUCLEAR PLANT BEGINS POWER GENERATION Oct 22, 2013
  2. "ಕೂಡುಂಕುಳಂ ಸ್ಥಾವರ ಲೋಕಾರ್ಪಣೆ,11/ 08/2016". Archived from the original on 2016-08-11. Retrieved 2016-08-11.
  3. Construction work on Gorakhpur nuckear plant to begin in January Dec 20, 2013,
  4. 33 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಪರಮಾಣು ವಿದ್ಯುತ್‌ ಉತ್ಪಾದನೆಗೆ 10 ರಿಯಾಕ್ಟರ್‌ ನಿರ್ಮಾಣಕ್ಕೆ ಸಂಪುಟ ಅಸ್ತು;ಪಿಟಿಐ;17 May, 2017
  5. "ಕೂಡುಂಕುಳಂ ಸ್ಥಾವರ ಲೋಕಾರ್ಪಣೆThu, 08/11/2016". Archived from the original on 2016-08-11. Retrieved 2016-08-11.
  6. ಅಣು ವಿದ್ಯುತ್-ಕರಾಳ ಭವಿಷ್ಯಕ್ಕೆ ಬಣ್ಣದ ಆಮಿಷ;ಸಂಧ್ಯಾ ಹೆಗಡೆ ಆಲ್ಮನೆ;27 May, 2017
  7. "ನಾಗೇಶ್ ಹೆಗಡೆ;ರೋಬಾಟ್ ಆಳ್ವಿಕೆಯಲ್ಲಿ ನಾಳೆಗಳ ಸಮಾಧಿ;15 Jun, 2017". Archived from the original on 2017-06-14. Retrieved 2017-06-16.
  8. "ಭಾರತದ ವಿಶಿಷ್ಟ ರಿಯಾಕ್ಟರ್‌ನ ಅಣುಸ್ಥಾವರ ಸಿದ್ಧ;ಪಿಟಿಐ;3 Jul, 2017". Archived from the original on 2017-07-02. Retrieved 2017-07-03.
  9. "ನಾಗೇಶ್ ಹೆಗಡೆ;ಬೂದಿಯೇ ಕೆಂಡವಾಗುವ ಅಕ್ಷಯ ಮಾಯಾದಂಡ;13 Jul, 2017". Archived from the original on 2017-07-15. Retrieved 2017-07-14.