ಜೈನ ಧರ್ಮವನ್ನು ಉಪದೇಶಿಸಿದ ಮೊದಲನೆಯ ತೀರ್ಧಂಕರರು ವೃಷಭನಾಥರು. ಇವರಿಗೆ ಸುನಂದ ಮತ್ತು ನಂದಾ ಯೆಂಬ ಇಬ್ಬರು ಪತ್ನಿಯರು.ಇವರಿಂದ ನೂರುಜನ ಗಂಡು ಮಕ್ಕಳೂ ಮತ್ತು ಇಬ್ಬರು ಹೆಣ್ಣು ಮಕ್ಕಳೂ ಜನಿಸಿದರು.ಬಾಹುಬಲಿಯು ಸುನಂದೆಯ ಮಗ.ವೃಷಭನಾಥರಿಗೆ ವೈರಾಗ್ಯ ಉಂಟಾದಾಗ ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿದರು. ಸಕಲ ಕರ್ಮಗಳನ್ನು ಜಯಿಸಿ ಕೈವಲ್ಯಜ್ಞಾನ ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಉಪದೇಶಿಸುತ್ತಿದ್ದರು.

ಪ್ರಥಮ ಪುತ್ರನಾದ ಭರತನು ದಿಗ್ವಿಜಯವನ್ನು ಮುಗಿಸಿಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಭರತನು ತನ್ನ ತಮ್ಮಂದಿರನ್ನು ಜಯಿಸಿಲ್ಲವೆಂದು ಪುರೊಹಿತರು ಹೇಳಿದರು. ಕಾಣಿಕೆಗಳೊಡನೆ ಬರುವ೦ತೆ ತಮ್ಮಂದಿರಿಗೆ ಹೇಳಿಕಳಿಸಿದಾಗ ಬಾಹುಬಲಿಯನ್ನುಳಿದು ಇತರರು ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆದರು. ಬಾಹುಬಲಿಯು ತಂದೆಯ ಹೊರತು ಇನ್ನಾರಿಗೂ ತಲೆ ಬಾಗುವುದಿಲ್ಲವೆಂದು, ತಂದೆಯಿಂದ ತನಗೆ ದೊರೆತ ರಾಜ್ಯವನ್ನು ಕೊಡುವುದಿಲ್ಲವೆ೦ದೂ, ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆಂದು ಭರತನ ದೂತರಿಗೆ ಹೇಳಿದನು. ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸ್ಯೆನ್ಯಗಳು ಯುದ್ಧ ಪ್ರಾರಂಭಿಸುವ ಮುಂಚೆ ಮಂತ್ರಿಗಳು ಯೋಚಿಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿಂದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ಆಗುವುದಿಲ್ಲ. ಆದ್ದರಿಂದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು.

ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವಂತೆ ನೀರೆರೆಚುವುದು ಜಲಯುದ್ಧ. ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ವಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ತಾನು ಹೀಗೆ ಮಾಡಬಾರದೆಂದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಅವಮಾನ ಹೊಂದಿದ ಭರತನು ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಪ್ರದಕ್ಷಿಣೆ ಮಾಡಿ ಅವನ ಬಲಗಡೆನಿಂತಿತು. ಬಾಹುಬಲಿ ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉಂಟಾಗಿ ರಾಜ್ಯವನ್ನು ತೊರೆದು ತಂದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿನಲ್ಲಿ ತೊಡಗಿದನು.

ಬಹುಕಾಲ ತಪಸ್ಸು ಆಚರಿಸಿದರೂ ಕೈವಲ್ಯಜ್ಞಾನವನ್ನು ಪಡೆಯಲಾಗಲಿಲ್ಲ. ಇದಕ್ಕೆ ತಾನು ತನ್ನದೇ ಭೂಮಿಯಲ್ಲಿ ನಿಂತಿರುವೆನೆಂಬ ಅಹಂಭಾವ ಕಾರಣವಾಗಿತ್ತು. ಇದನ್ನು ತಿಳಿದ ನಂತರ ಬಾಹುಬಲಿಯು ಭರತನ ಬಳಿಗೆ ಹೋಗಿ ಭೂಮಿಯನ್ನು ದಾನ ಪಡೆದನು. ನಂತರ ಬಾಹುಬಲಿಯು ನಿರ್ಮಲವಾದ ಮನದಿಂದ ತಪಸ್ಸನ್ನು ಮಾಡಿ ಕೈವಲ್ಯಜ್ಞಾನ ಪಡೆದನು.