ಬಾದಾಮಿ ಶಾಸನ: ಶಾಸನದ ಕಾಲ ಸುಮಾರು ೭ನೆ ಶತಮಾನ ಹಳಗನ್ನಡ ಶಾಸನ. ಬಾದಾಮಿಯ ೧ ಬಂಡೆಗಲ್ಲ ಮೇಲೆ ಕೊರೆದ ಆರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ದೊರೆಯುತ್ತವೆ. ಇದು ಒಂದು ವೀರ ಗೀತೆ ಪರಿಯ ಶಾಸನವಾಗಿದೆ.ಈ ಶಾಸನಕ್ಷರಗಳು ಸುಮಾರು ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿವೆ. ಪ್ರಾರಂಭದ ಗದ್ಯ ಮತ್ತು ಸಂಸ್ಕೃತ ಶ್ಲೋಕ ವೊಂದನ್ನು ಬಿಟ್ಟರೆ ಉಳಿದವು ತ್ರಿಪದಿಯಲ್ಲಿವೆ. ಇಲ್ಲಿರುವ ತ್ರಿಪದಿಗಳನ್ನು ಗಮನಿಸಿದರೆ ಇವು ಕನ್ನಡದಲ್ಲಿ ಸಿಕ್ಕಿರುವ ತ್ರಿಪದಿಗಳಲ್ಲಿ ಮೊದಲನೆಯವು. ಈ ಶಾಸನದಿಂದ ಪೂರ್ವದ ಹಳಗನ್ನಡವು ಹಳಗನ್ನಡಕ್ಕೆ ವಾಲುತ್ತಿರುವುದನ್ನು ಕಾಣಬಹುದು. ಶಾನದ ತ್ರಿಪದಿಯೊಂದು ಹೀಗಿದೆ.

ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನೈರನಲ್ಲ ||

ಕಪ್ಪೆ ಅರಭಟ್ಟ ಎಂಬುವನು ಪ್ರಸಿದ್ದ ಐತಿಹಾಸಿಕ ವ್ಯಕ್ತಿಯಾಗಿರಬಹುದು. ಇವನ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿಯೂ ದೊರೆಯುವುದಿಲ್ಲ. ಅವನು ತನ್ನ ರಾಜನ ಬಗ್ಗೆ ಅಭಿಮಾನ ಪೂರ್ವಕವಾಗಿ ಮಾತನಾಡಿರುವುದನ್ನು ಇಲ್ಲಿ ಕಾಣಬಹುದಾಗಿದೆ. ನಮ್ಮ ಅರಸ ಒಳ್ಳೆಯವರಿಗೆ ಒಳ್ಳೆಯವನು(ಸಾಧುಗೆ ಸೂಕ್ಷ್ಮವಾಗಿ ಮಧುರ ಭಾವನೆಯುಳ್ಳವರಿಗೆ ಮಧುರವಾದವನು) ತೊಂದರೆ ಕೊಡುವವರಿಗೆ ವಿಪರೀತ ತೊಂದರೆ ಕೊಡುತ್ತಾನೆ. ಇದರಿಂದಾಗಿ 'ಮಾಧವ'ಎಂದು ಗುರುತಿಸಿಕೊಂಡಿದಾನೆ . ಇವನು ಒಂದು ರೀತಿಯಲ್ಲಿ ಶ್ರೀಕೃಷ್ಣನಿದ್ದಂತೆ ಎಂದಿರುವುದು ಗೋಚರವಾಗುತ್ತದೆ.

ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ