ಪ್ರೊ. ಕೆ. ರಾಮ ದಾಸ್ ಬದಲಾಯಿಸಿ

 
ಪ್ರೊ. ಕೆ. ರಾಮದಾಸ್

ಪ್ರೊ. ಕೆ. ರಾಮ ದಾಸ್ ಅವರು ಮೈಸೂರು ಕಂಡ ಬುದ್ಧಿಜೀವಿಗಳಲ್ಲಿ ಒಬ್ಬರು. ಹುಟ್ಟಿದ್ದು ಮಾರ್ಚಿ ೨೬ ೧೯೪೧ ರಲ್ಲಿ. ಶಿಮೊಗ್ಗದ ಕಳಸಾದಲ್ಲಿ ಹುಟ್ಟಿದರು. ಪಿ. ಲಂಕೇಶ್ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಜೊತೆ ದೀರ್ಘ ಮತ್ತು ಅವಿನಾಭಾವ ಒಡನಾಟ ಇಟ್ಟುಕೊಂಡಿದ್ದರು. ಯುವರಾಜ ಮತ್ತು ಮಹಾರಾಜ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು.

ಲೋಹಿಯಾ ಮತ್ತು ಗಾಂಧಿ ಅವರ ಚಿಂತನೆಗಳಲ್ಲಿ ಗಾಢವಾದ ನಂಬಿಕೆ ಇದ್ದವರು, ಎಲ್ಲೇ ಅನ್ಯಾಯವಾದರು ಅದನ್ನು ಪ್ರತಿಭಟನೆಯ ಮೂಲಕ ವಿರೋಧಿಸುತ್ತಿದ್ದರು. ಎಲ್ಲೇ ಅನ್ಯಾಯವಾದರೂ ಸಹ ಒಂದು ಪತ್ರಿಕಾ ಹೇಳಿಕೆಯನ್ನಾದರೂ ನೀಡುತ್ತಿದ್ದರು.

ಅಂತರ್ಜಾತಿ ವಿವಾಹಗಳಿಗೆ ಬೆಂಬಲವಾಗಿ ನಿಂತು ತಮ್ಮ "ಮಾನವ ಮಂಟಪ"ದಲ್ಲಿ ಲೆಕ್ಕಕ್ಕೆ ಸಿಗದಷ್ಟು ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ್ದರು. ೧೯೭೦ರ ದಶಕದಲ್ಲಿ ಮಹಾದೇವ ಮೂರ್ತಿ ಎಂಬ ದಲಿತನಿಗೆ ಮುಸಲ್ಮಾನ ಹುಡುಗಿಯ ಜೊತೆ ವಿವಾಹ ಮಾಡಿಸಿ ಹೊಸ ಕ್ರಾಂತಿಗೆ ಕಾರಣರಾದರು. ಒಂದು ರೀತಿಯಲ್ಲಿ ಬಸವಣ್ಣನವರ ತತ್ವಳನ್ನು ಆಚರಣೆಯಲ್ಲಿ ತಂದರು.

ಗೋಕಾಕ್ ಚಳುವಳಿ, ಬೂಸ ಚಳುವಳಿ, ನವ ನಿರ್ಮಾಣ ಚಳುವಳಿ, ಸಮಾಜವಾದಿ ಯುವಜನ ಸಭಾ, ಜಾತಿ ವಿನಾಶ ಸಮ್ಮೇಳನ, ತುರ್ತು ಪರಿಸ್ಥಿತಿ ವಿರೋಧ - ಹೀಗೆ ಹಲವಾರು ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದರು. ಹಲವರು ಹೇಳುವಂತೆ ಇವರು ನಿಷ್ಠುರವಾದಿಯಾಗಿದ್ದರು. ಯಾವುದೇ ವಿಚಾರ ಇದ್ದರೆ ಅದನ್ನು ನೇರವಾಗಿ ಹೇಳಿಯೇ ತೀರುತ್ತಿದ್ದರು.

ಹಲವು ಸಮಾಜವಾದಿಗಳ ಹಾಗೆಯೇ ಸಿಗರೇಟಿನ ಚಟ ಇವರಿಗೆ ಇತ್ತು. ಒಂದು ರೀತಿಯಲ್ಲಿ ಈ ಸಿಗರೇಟು ಇವರ ಸಾವಿಗೆ ಕಾರಣವಾಯಿತು. ಆದರೆ ಇವರು ಸಾವಿಗೆ ಹೆದರಲಿಲ್ಲ ಎಂಬುದಕ್ಕೆ ಎರಡು ನಿದರ್ಶನಗಳಿವೆ. ಹತ್ತು ವರ್ಶಗಳ ಹಿಂದೆ ವೈದ್ಯರು ಇವರಿಗೆ ಹ್ರುದಯ ಶಸ್ತ್ರ ಚಿಕಿತ್ಸೆ ಮಾಬೇಕು ಎಂದಾಗ, ಅದನ್ನು ನಿರ್ಲಕ್ಷಿಸಿದ್ದರು. ಸಾವಿನ ದವಡೆಯಲ್ಲಿ ಇದ್ದಾಗಲೂ ವೈದ್ಯರಿಗೆ "ನಾನು dignified ಆಗಿ ಸಾಯಲು ಇಛ್ಛಿಸುತ್ತೇನೆ. ಅದಕ್ಕೆ ಅವಕಶ ಮಾಡಿಕೊಡಿ" ಎಂದು ಕೇಳಿಕೊಂಡಿದ್ದರು. ೨೦೦೭ ರ ಜೂನ್ ೧೯ರಂದು ಮೈಸೂರಿನಲ್ಲಿ ಕೊನೆಯುಸಿರೆಳೆದರು.

ರಾಮ ದಾಸ್ - ಒಂದು ನೆನಪು ಬದಲಾಯಿಸಿ

 
ಪ್ರೊ. ಕೆ. ರಾಮ ದಾಸ್ - ಒಂದು ನೆನಪು ಕಾರ್ಯಕ್ರಮವು ಕಲಾಮಂದಿರದಲ್ಲಿ ನಡೆಯಿತು. ಅಲ್ಲಿನ ವೇದಿಕೆಯ ಮೇಲೆ ಕಂಡು ಬಂದ ಬ್ಯಾನರ್

ರಾಮ ದಾಸ್ ಅವರ ತೀರಿಕೊಂಡಾಗ ಅಪಾರ ಅಭಿಮಾನಿಗಳು, ಸ್ನೇಹಿತರು ಮತ್ತು ವಿದ್ಯಾರ್ಥಿಗಳನ್ನು ಅಗಲಿದರು. ಎಲ್ಲಾ ಸ್ನೇಹಿತರೂ ಸೇರಿ ಅವರ ನೆನಪಿಗಾಗಿ "ರಾಮ ದಾಸ್ - ಒಂದು ನೆನಪು" ಕಾರ್ಯಕ್ರಮವನ್ನು ಜುಲೈ ೧ ೨೦೦೭ ರಂದು ಕಲಾಮಂದಿರದಲ್ಲಿ ಆಯೋಜಿಸಲು ನಿರ್ಧರಿಸಿದ್ದರು.

ಯೋಜನೆಯಂತೆಯೇ ಜುಲೈ ೧ ರಂದು ಕಾರ್ಯಕ್ರಮ ನಡೆಯಿತು. ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯ ನಡುವೆಯೂ ಅಪಾರ ಅಭಿಮಾನಿಗಳು ನೆರೆದಿದ್ದರು. ರಾಮ ದಾಸರು ಬದುಕಿದ್ದಾಗ ಬಹಳ ಪರಿಚಿತರಾದದ್ದು ಅಂತರ್ಜಾತಿ ವಿವಾಹಗಳನ್ನು ಮಾಡುವ ಮೂಲಕ. ತಮ್ಮ ಮಾನವ ಮಂಟಪದಲ್ಲಿ ಅವರು ಬಹಳಷ್ಟು ಅಂತರ್ಜಾತಿ ವಿವಾಹಗಳನ್ನು ಮಾಡಿಸಿದರು, ಮತ್ತು ಅಂತಹ ವಧೂ ವರರಿಗೆ ಬೆಂಬಲಕ್ಕಾಗಿ ನಿಂತಿದ್ದರು. ಅಂದಿನ ಅವರ ನೆನಪಿನ ಕಾರ್ಯಕ್ರಮ ಕೂಡ ಒನ್ಡು ಅಂತರ್ಜಾತಿ ವಿವಾಹದ ಮೂಲಕವೇ ಉದ್ಘಾಟನೆಯಾಯಿತು.

ಕಲಾಮಂದಿರದ ಒಳಗೆ ಚರ್ಚೆಗಳು ನಡೆಯುತ್ತಿದ್ದರೆ, ಕಲಾಮಂದಿರದ ಪಡಸಾಲೆಯಲ್ಲಿ ಕಲಾವಿದರು ರಾಮದಾಸರ ನೆನಪಿಗಾಗಿ ಕೃತಿಯೊಂದನ್ನು ತಮ್ಮ ಕುಂಚದಲ್ಲಿ ಬಿಡಿಸುತ್ತಿದ್ದರು.

ಗೋಷ್ಟಿ - ೧ ಗೋಷ್ಟಿ ೧ ಪ್ರಾರಂಭವಾಗಿದ್ದು ಬೆಳಗ್ಗೆ ೧೦ ಗಂಟೆಗೆ. ಶ್ರೀ ವಿಲಿಯಮ್ ಸಾಗರ ಅವರು ರಾಮ ದಾಸರೋಂದಿಗಿನ ತಮ್ಮ ಬಾಲ್ಯದ ಬಗ್ಗೆ ನೆನಪುಗಳನ್ನು ಹಂಚಿಕೊಂಡರು. ಶ್ರೀ ಕಡಿದಾಳು ಶಾಮಣ್ಣ ಅವರು ರಾಮ ದಾಸರೊಂದಿಗಿನ ತಮ್ಮ "ಒಡನಾಟ"ದ ಬಗ್ಗೆ ಮಾತನಾಡಿದರು. ಡಾ. ಪ್ರಭುಶಂಕರ "ಮೇಷ್ಟರು" ಎಂಬ ಬಗ್ಗೆ ಮಾತನಾಡಿದರೆ, ನಟರಾಜ್ ಹುಳಿಯಾರ್ ಅವರು "ಅಂತರ್ಜಾತಿ ಮದುವೆ, ಜಾತಿ ವಿನಾಶ ಮತ್ತು ಮಾನವ ಮಂಟಪದ ಬಗ್ಗೆ ಮಾತನಾಡಿದರು.

ಗೋಷ್ಟಿ- ೨ ಆತ್ಮೀಯರಿಂದ ಐದು ಮಾತು ಗೋಷ್ಟಿಯಲ್ಲಿ ಪತ್ರಕರ್ತ ರಾಜಶೇಖರ ಕೋಟಿ, ಅಬ್ದುಲ್ ರಶೀದ್, ಕೃಪಾಕರ ಸೇನಾನಿ, ಡಾ. ಕೆ. ಮಹಾದೇವ್, ಕೆ. ಎನ್. ಶಿವತೀರ್ಥನ್, ಕೆ. ಟಿ. ಶಿವಪ್ರಸಾದ್ ಮಾತನಾಡಿದರು.

ಗೋಷ್ಟಿ- ೩ ಮಧ್ಯಾನದ ಚಿಂತನ ಗೋಷ್ಟಿಯಲ್ಲಿ, "ಕರ್ನಾಟಕದಲ್ಲಿ ಸಮಾಜವಾದಿ ಹೋರಾಟ"ದ ಬಗ್ಗೆ ವಿಮರ್ಶಕ ಡಾ. ಡಿ. ಎಸ್. ನಾಗಭೂಷಣ್ ಅವರು ಮಾತನಾಡಿದರು. "ಕೋಮುವಾದ ಹಿಂಸಾವಾದ"ದ ಬಗ್ಗೆ ಸಂವಿಧಾನ ತಜ್ಞ ಪ್ರೊ. ರವಿ ವರ್ಮ ಕುಮಾರ್ ಅವರು ಮಾತನಾಡಿದರು. ರೈತ ಸಂಘದ ಕೆ. ಎಸ್. ಪುಟ್ಟಣ್ಣಯ್ಯ ಅವರು ಕೂಡ ಪಾಲ್ಗೊಂಡಿದ್ದರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ದೇವನೂರ ಮಹಾದೇವ, ಶಾಸಕ ಸಿದ್ಧರಾಮಯ್ಯ ಮತ್ತು ಜಿ. ಕೆ. ಗೋವಿಂದ ರಾವ್ ಅವರು ಪಾಲ್ಗೊಂಡಿದ್ದರು. ಕನ್ನಡ ಜನ್ನಿ (ಜನಾರ್ಧನ್) ಮತ್ತು ತಂಡದವರ "ಓ ನನ್ನ ಚೇತನ" ವಿಶ್ವಮಾನವ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಅಂತ್ಯವಾಯಿತು.


ಕಾರ್ಯಕ್ರಮದ ಒಂದಷ್ಟು ಚಿತ್ರಗಳು:


ಹೊರಗಿನ ಸಂಪರ್ಕಗಳು ಬದಲಾಯಿಸಿ