ನಂದನ್ ನಿಲೇಕಣಿ
ನಂದನ್ ನಿಲೇಕಣಿ (1955 ರ ಜೂನ್ 2 ರಂದು ಜನಿಸಿದರು) ಒಬ್ಬ ಭಾರತೀಯ ಉದ್ಯಮಿ, ರಾಜಕಾರಣಿಯಾಗಿದ್ದಾರೆ. ಅವರು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಅಧ್ಯಕ್ಷರಾಗಿದ್ದರು. ಇನ್ಫೋಸಿಸ್ನ ಯಶಸ್ವಿ ವೃತ್ತಿಜೀವನದ ನಂತರ, ಅವರು ಭಾರತದ ತಂತ್ರಜ್ಞಾನ ಸಮಿತಿ TAGUPನ ಮುಖ್ಯಸ್ಥರಾಗಿರುತ್ತಾರೆ.ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದಾರೆ.[೧][೨]
ಜೀವನ ಸಂಪಾದಿಸಿ
ಭಾರತದ ಉದ್ಯಮಿಗಳಲ್ಲಿ ಪ್ರಮುಖ ಹೆಸರಾಗಿರುವ ನಂದನ್ ನಿಲೇಕಣಿ ಅವರ ಜನ್ಮದಿನ ದಿನಾಂಕ ಜೂನ್ 2, 1955. ನಂದನ್ ಜನಿಸಿದ್ದು ಬೆಂಗಳೂರು. ಧಾರವಾಡದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ನಡೆಸಿದ ನಂದನ್ ಮುಂದೆ ಮುಂಬಯಿ ಐ ಐ ಟಿ ಪದವೀಧರರಾದರು. ಮುಂಬಯಿ ಮೂಲದ 'ಪಟ್ನಿ ಕಂಪ್ಯೂಟರ್ಸ್' ಸಂಸ್ಥೆಯಲ್ಲಿ ನಾರಾಯಣ ಮೂರ್ತಿಗಳಿಂದ ಆಯ್ಕೆಗೊಂಡ ನಂದನ್ ಮುಂದೆ ನಾರಾಯಣ ಮೂರ್ತಿಗಳೊಂದಿಗೆ ಇನ್ಫೋಸಿಸ್ ಸಂಸ್ಥೆಗೂ ಜೊತೆಗೂಡಿದರು.
ಇನ್ಫೋಸಿಸ್ ಸಂಸ್ಥೆಯಲ್ಲಿ ಸಂಪಾದಿಸಿ
ಪ್ರಾರಂಭದಿಂದಲೂ ನಾರಾಯಣ ಮೂರ್ತಿಗಳ ಒಡನಾಡಿಯಾದ ನಂದನ್, ಹಿಂದೆ ನಾರಾಯಣ ಮೂರ್ತಿಗಳು ನಿವೃತ್ತಿ ತಲುಪಿದಾಗ ಇನ್ಫ್ಪೋಸಿಸ್ ಸಂಸ್ಥೆಯ ಸಾರಥ್ಯವಹಿಸಿದರು.
ಪ್ರತಿಷ್ಟಿತ ಸ್ಥಾನಗಳು ಸಂಪಾದಿಸಿ
ಮುಂದೆ ನಂದನ್ ನಿಲೇಕಣಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಆಧಾರ್ ಗುರುತಿನ ಚೀಟಿ ವ್ಯವಸ್ಥೆಯ ಮುಖ್ಯಸ್ಥರಾಗಲು ಒಪ್ಪಿ ತಮ್ಮ ಪ್ರತಿಷ್ಠಿತ ಇನ್ಫೋಸಿಸ್ ಹುದ್ದೆಯಿಂದ ಹೊರಬಂದರು. ಹೀಗಾಗಿ ಅವರು ಪ್ರಸಕ್ತದಲ್ಲಿ ಕೇಂದ್ರಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನಕ್ಕೆ ಸಮನಾದ Unique Identification Authority of India (UIDAI)ದ ಮುಖ್ಯಸ್ಥರು.
ಜೊತೆಗೆ ಭಾರತ ಸರ್ಕಾರದ ತಂತ್ರಜ್ಞಾನ ಸಲಹಾ ಸಮಿತಿಯ ಮುಖ್ಯಸ್ಥರು ಕೂಡಾ ಹೌದು.
ಪ್ರತಿಷ್ಠಿತ National Association of Software and Service Companies (NASSCOM) ಮತ್ತು The Indus Entrepreneurs (TiE)ನ ಬೆಂಗಳೂರು ಚಾಪ್ಟರ್ ಸ್ಥಾಪನೆಯಲ್ಲಿ ನಂದನ್ ಅವರ ಪ್ರಧಾನ ಪಾತ್ರವಿದೆ. ಥಾಮಸ್ ಫ್ರೀಡ್ ಮನ್ ಅವರ ಪ್ರಸಿದ್ಧ ಕೃತಿ The World is Flat ಪುಸ್ತಕದಲ್ಲಿ ಗಣನೀಯವಾಗಿ ಉಲ್ಲೇಖಗೊಂಡಿರುವ ನಂದನ್ ನಿಲೇಕಣಿ, ವಿಶ್ವದಾದ್ಯಂತ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಬೆಳಗಿದ್ದಾರೆ.
ಭಾರತದ ಕುರಿತಾದ ಚಿಂತನ ಸಂಪಾದಿಸಿ
ಅವರು ಬರೆದಿರುವ ಬೃಹತ್ ಪುಸ್ತಕ ‘Imagining India’ ಇಪ್ಪತ್ತನೆಯ ಶತಮಾನದ ಭಾರತೀಯ ಸ್ಥಿತಿಗತಿಗಳ ಅವಲೋಕನವಾಗಿಯೂ, ಇಪ್ಪತ್ತೊಂದನೆಯ ಶತಮಾನದ ಭಾರತೀಯ ಕನಸುಗಾರಿಕೆಗಳಿಗೊಂದು ದಿಕ್ಸೂಚಿಯಂತೆಯೂ ಗಮನ ಸೆಳೆದಿದೆ ಎಂಬುದು ಮಹತ್ವದ ಅಂಶ.
ಭಾರತದ ಚರಿತ್ರೆಯ ಬಗೆಗೆ, ಕಳೆದುರುಳಿರುವ ಸ್ವಾತಂತ್ರ್ಯಾನಂತರದ ದಶಕಗಳ ಬಗೆಗೆ, ಭಾರತದಲ್ಲಿ ಮೂಡಿದ ಆರ್ಥಿಕ ಪ್ರಗತಿಗಳ ಕಾರಣೀಭೂತ ನೆಲೆಗಳು, ಹಿಂದಿನ ಸಮಾಜವಾದೀ ಚಿಂತನೆಗಳು, ಭಾರತೀಯ ಜನಸಮುದಾಯ, ಮಾಹಿತಿ ತಂತ್ರಜ್ಞಾನ, ಜಾತಿಪದ್ಧತಿ, ಕಾರ್ಮಿಕ ಸುಧಾರಣೆ, ಮೂಲಭೂತ ಸೌಕರ್ಯಗಳು, ಶಿಕ್ಷಣ ವ್ಯವಸ್ಥೆ, ಇಂಗ್ಲಿಷ್ ಭಾಷೆ, ಭಾರತಕ್ಕಿರುವ ವಿದ್ಯಾವಂತ ಜನಸಂಖ್ಯಾ ಗತಿಯಲ್ಲಿರುವ ಹೆಚ್ಚಳದಿಂದ ವಿಶ್ವ ಮಾರುಕಟ್ಟೆಯಲ್ಲಿ ಇರುವ ಅನುಕೂಲಗಳು, ಹಲವು ವಿಧದಲ್ಲಿ ಇನ್ನೂ ಮನ್ನಡೆಯುತ್ತಿರುವ ಹಿನ್ನೆಡೆಗಳು, ಹೀಗೆ ಭಾರತದ ಸಮಗ್ರ ಅಧ್ಯಯನದ ಬಗೆಗೆ ಗಮನ ಹರಿಸಿರುವ ಅವರ ‘Imagining India’ ಒಂದು ಗಮನಾರ್ಹ ಕೊಡುಗೆಯೆಎನಿಸಿದೆ.
ಪ್ರಶಸ್ತಿ ಗೌರವಗಳು ಸಂಪಾದಿಸಿ
World Economic Forumನ ಪ್ರಶಸ್ತಿಗೆ ಆಯ್ಕೆಗೊಂಡ ಪ್ರಮುಖ ಇಪ್ಪತ್ತು ಕಿರಿಯ ಗೌರವಾನ್ವಿತರಲ್ಲಿ ಒಬ್ಬರೆನಿಸಿರುವ ನಂದನ್ ನಿಲೇಕಣಿ ಫೋರ್ಬ್ಸ್ ನಿರ್ಣಯಿಸಿದ ಉತ್ಕೃಷ್ಟ ಏಷ್ಯಾ ಖಂಡದ ಉದ್ಯಮಿಗೆ ಸಲ್ಲುವ ಪ್ರಶಸ್ತಿ ಪಡೆಯುವುದರ ಜೊತೆಗೆ ಫೈನಾನ್ಸಿಯಲ್ ಟೈಮ್ಸ್ ಮತ್ತು ಪ್ರೈಸ್ ವಾಟರ್ ಹೌಸ್ ಕೂಪರ್ಸ್ ನಡೆಸಿದ ಸಮೀಕ್ಷೆಯಲ್ಲಿನ ವಿಶ್ವದ ಗೌರವಾನ್ವಿತರ ಸಾಲಿನಲ್ಲಿ ಅಲಂಕೃತರಾಗಿದ್ದವರು.
ಅವರಿಗೆ ವಿಶ್ವದೆಲ್ಲೆಡೆ ಸಂದಿರುವ ಹಲವು ಗೌರವಗಳ ಜೊತೆಗೆ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯ ಗರಿಮೆ ಕೂಡಾ ಜೊತೆಗೂಡಿದೆ.