ಟಿ.ಎಸ್‌. ರಂಗಾ ಅವರು ಕನ್ನಡದ ಹಿರಿಯ ರಂಗಕರ್ಮಿ ಹಾಗೂ ಸಿನೆಮಾ ನಿರ್ದೇಶಕ. ಪ್ರಸಿದ್ಧ ರಂಗಕರ್ಮಿ ಬಿ.ವಿ.ಕಾರಂತರ ಸಹವರ್ತಿಯಾಗಿ ಇವರು ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಹಲವು ಪ್ರಸಿದ್ಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಯೋಗ ಎಂಬ ತಮ್ಮದೇ ತಂಡ ಕಟ್ಟಿಕೊಂಡು ಹಲವು ನಾಟಕಗಳನ್ನೂ ಆಡಿದ್ದಾರೆ. ಕೆಲವು ಕನ್ನಡ ಸಿನೆಮಾಗಳನ್ನು ಹಾಗೂ ಹಿಂದಿ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಟಿ.ಎಸ್. ನಾಗಾಭರಣರೊಡಗೂಡಿ ರಚಿಸಿದ 'ಗ್ರಹಣ’ ಸಿನಿಮಾದ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೇ ಅನೇಕ ಸಾಕ್ಷ್ಯಚಿತ್ರಗಳ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ.[೧]

ಜನನ, ಜೀವನ ಬದಲಾಯಿಸಿ

ರಂಗಾ ಅವರು ೧೯೪೯ರಲ್ಲಿ ಹುಟ್ಟಿದರು.[೨] ಅವರು ರಾಜಕಾರಣದಲ್ಲಿ ಹಾಗೂ ಸಮಾಜಸೇವೆಯಲ್ಲಿ ಹೆಸರು ಮಾಡಿದ್ದ ಗಾಂಧಿವಾದಿ ಟಿ.ಎಸ್‌.ಶಾಮಣ್ಣನವರ ಪುತ್ರ. ಆದರೆ ಅವರ ಒಲವು ರಾಜಕೀಯದೆಡೆಗೆ ಇರಲಿಲ್ಲ. ರಂಗಭೂಮಿಯೇ ಆಪ್ತವಾಗಿದ್ದ ಅವರು ಧಾರವಾಡ ಮತ್ತು ವಿಜಯಪುರಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರು ನಿರ್ದೇಶಿಸಿದ 'ಸಾವಿತ್ರಿ' ಚಿತ್ರದ ನಾಯಕಿ ಅಶ್ವಿನಿಯವರನ್ನು ಅವರು ಮದುವೆಯಾದರು. ಅವರ ಮಗಳ ಹೆಸರು ತನ್ವಿ. ಬೆಂಗಳೂರಿನ ನರಸಿಂಹರಾಜ ಕಾಲೋನಿಯಲ್ಲಿದ್ದ ಅವರ ಕಛೇರಿಯ ಹೆಸರು 'ಕೃತಿ'.

ರಂಗಭೂಮಿ ಹಾಗೂ ಸಿನೆಮಾ ಜೀವನದ ಕೆಲವು ಸಂಗತಿಗಳು ಬದಲಾಯಿಸಿ

  • ಕಾರ್ನಾಡರ 'ಹಯವದನ' ನಾಟಕದಲ್ಲಿ 'ಕಪಿಲ'ನ ಪಾತ್ರ ನಿರ್ವಹಿಸುತ್ತಿದ್ದರು.
  • 1970 ರ ದಶಕದಲ್ಲಿ ಬಿ.ವಿ.ಕಾರಂತರು ಬೆಂಗಳೂರು ನಗರದಲ್ಲಿ ಕಟ್ಟಿದ 'ಬೆನಕ' ನಾಟಕ ತಂಡದ ಸದಸ್ಯರಾಗಿದ್ದರು.
  • ನಾಗಾಭರಣ ನಿರ್ದೇಶನದ 'ಗ್ರಹಣ' ಸಿನೆಮಾಗೆ ಚಿತ್ರಕತೆ ಬರೆದರು.
  • ಆಲನಹಳ್ಳಿಯವರ 'ಗೀಜಗನ ಗೂಡು' ಕತೆಗೆ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದರು. ಇದು ಇವರ ಚೊಚ್ಚಲು ನಿರ್ದೇಶನದ ಸಿನಿಮಾ 'ತುಕ್ರನ ಕತೆ' ಎಂಬ ಸಿನೆಮಾ ಮಾಡಿದರು.
  • ಬೆಳಗಾವಿ ಜಿಲ್ಲೆಯ ಲೇಖಕ ರಂ.ಶಾ. ಲೋಕಾಪುರರ 'ಸಾವಿತ್ರಿ' ಕಾದಂಬರಿಯನ್ನು ನಿರ್ದೇಶಿಸಿ ಬೆಳ್ಳಿತೆರೆಗೆ ತಂದರು. 1975-76ರಲ್ಲಿ ಮಾಡಿದ ಈ ಚಿತ್ರಕ್ಕಾಗಿ ಬೆಳಗಾವಿಯ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು.
  • ದೇವದಾಸಿ ಪದ್ದತಿಯ ನಿರ್ಮೂಲನೆ ಕುರಿತಂತೆ 'ಗಿದ್' ಎಂಬ ಹಿಂದಿ ಚಿತ್ರವನ್ನು ನಿರ್ದೆಶಿಸಿದರು. ಸ್ಮಿತಾ ಪಾಟೀಲ್, ಓಂಪುರಿ, ನಾನಾ ಪಾಟೇಕರ್, ನಾಸಿರುದ್ದೀನ್ ಶಾ, ಕೆ. ಕೆ. ರೈನಾ, ವಿಜಯ ಕಶ್ಯಪ್ ಮುಂತಾದ ಕಲಾವಿದರು ಇದರಲ್ಲಿ ಅಭಿನಯಿಸಿದ್ದರು. 1988 ರಲ್ಲಿ 'ಉದ್ಭವ್' ಎಂಬ ಮತ್ತೊಂದು ಹಿಂದಿ ಚಿತ್ರವನ್ನೂ ನಿರ್ದೇಶಿಸಿದ್ದರು.
  • ದೂರದರ್ಶನಕ್ಕಾಗಿ 'ಮೌನಕ್ರಾಂತಿ' ಎಂಬ ಧಾರಾವಾಹಿ ನಿರ್ಮಿಸಿದರು.
  • ಕೇಂದ್ರ ಹಾಗೂ ರಾಜ್ಯ ವಾರ್ತಾ ಇಲಾಖೆಗಳಿಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿದರು.[೨]

ಕೆಲವು ಪ್ರಮುಖ ನಿರ್ವಹಣೆಗಳು[೩] ಬದಲಾಯಿಸಿ

  • 2008-ಆತ್ಮೀಯ [ಗೀತಸಾಹಿತ್ಯ ರಚನೆ]
  • 1981-ಗ್ರಹಣ [ಚಿತ್ರಕತೆ]
  • 1980-ಸಾವಿತ್ರಿ [ನಿರ್ಮಾಣ, ನಿರ್ದೇಶನ, ಚಿತ್ರಕತೆ, ಸಂಭಾಷಣೆ]
  • 1979-ನಾಳೆಗಳನ್ನು ಮಾಡುವವರು [ನಟನೆ]
  • 1978-ಗೀಜಗನ ಗೂಡು[ನಿರ್ದೇಶನ, ಚಿತ್ರಕತೆ, ಸಂಭಾಷಣೆ]
  • 1975-ಚೋಮನ ದುಡಿ [ಕಂಠದಾನ ಹಾಗೂ ಪ್ರೊಡಕ್ಷನ್ ಮ್ಯಾನೇಜರ್]

ಪ್ರಶಸ್ತಿ, ಗೌರವಗಳು ಬದಲಾಯಿಸಿ

  • 'ಗ್ರಹಣ’ ಸಿನಿಮಾದ ಚಿತ್ರಕಥೆಗಾಗಿ ರಾಷ್ಟ್ರ ಪ್ರಶಸ್ತಿ.
  • 'ಗಿದ್' ಚಿತ್ರಕ್ಕಾಗಿ ಜ್ಯೂರಿಗಳ ವಿಶೇಷ ರಾಷ್ಟ್ರಪ್ರಶಸ್ತಿ - 1984
  • 'ಸಾವಿತ್ರಿ' ಕಾದಂಬರಿಯನ್ನು ಬೆಳ್ಳಿತೆರೆಗೆ ತಂದಿದ್ದಕ್ಕಾಗಿ ರಾಜ್ಯ ಪ್ರಶಸ್ತಿ.

ನಿಧನ ಬದಲಾಯಿಸಿ

೧೮ ಏಪ್ರಿಲ್ ೨೦೧೮ರಂದು ಭಾನುವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ೬೯ ವರ್ಷ ವಯಸ್ಸಾಗಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರು, ಕೆಲವು ಕಾಲದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು.[೪][೫]

ಬಾಹ್ಯ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ವೆಬ್ ದುನಿಯಾ ಕನ್ನಡ
  2. ೨.೦ ೨.೧ ಬಸು ಮೇಗಲಕೇರಿ, ಗಿಳಿ, ಪಂಜರ ಮತ್ತು ರಂಗಾ, ವಾರ್ತಾಭಾರತಿ, ೧೪ಏಪ್ರಿಲ್೨೦೧೮
  3. ಟಿ. ಎಸ್. ರಂಗಾ , ಚಿಲೋಕ.ಕಾಂ
  4. "ಪ್ರಸಿದ್ದ ರಂಗಕರ್ಮಿ, ನಿರ್ದೇಶಕ ಟಿಎಸ್ ರಂಗಾ ಇನ್ನಿಲ್ಲ". www.kannadaprabha.com. Retrieved 14 April 2018.[ಶಾಶ್ವತವಾಗಿ ಮಡಿದ ಕೊಂಡಿ]
  5. ‘Giddh’ director TS Ranga dead, Bangalore Mirror Bureau | Updated: Apr 9, 2018