ಗೋಪಕವಿ : - ಕ್ರಿ.ಶ.೧೬೦೦ ರಲ್ಲಿ ವಿಜಯಪುರ ಜಿಲ್ಲೆಯ ಕವಿ.ಇವನ ಮೂಲ ಹೆಸರು ಗೋವಿಂದ ಕವಿ. 16ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದ ಭಾಗವತ ಸಂಪ್ರದಾಯದ ಒಬ್ಬ ಕನ್ನಡ ಕವಿ.

ಜೀವನ ಬದಲಾಯಿಸಿ

ತಾನು ಭೀಮರಥೀ ತೀರದ ಬೇಡಬುಯ್ಯರ ಗ್ರಾಮದ ಜ್ಯೋತಿ ಎಂಬ ಕರಣಿಕನ ಮಗನೆಂದೂ ಶ್ರೀಕೃಷ್ಣ ಮದನಗೋಪಾಲ ತನ್ನ ಆರಾಧ್ಯ ದೈವವೆಂದೂ ಹೇಳಿಕೊಂಡಿದ್ದಾನೆ. ಈತ ರಚಿಸಿದ ಕಾವ್ಯಗಳು ಚಿತ್ರಭಾರತ ಮತ್ತು ನಂದಿಮಹಾತ್ಯ್ಮೆ . ಕಾವ್ಯಾರಂಭದಲ್ಲಿ ಕುಮಾರವ್ಯಾಸ, ಲಕ್ಷ್ಮೀಶರನ್ನು ಸ್ತುತಿಸಿದ್ದಾನೆ.

ಕಾವ್ಯ ರಚನೆ ಬದಲಾಯಿಸಿ

ಚಿತ್ರಭಾರತದ ಕಾವ್ಯವಸ್ತು ಮಹಾಭಾರತದ್ದೇ ಆಗಿದೆ. ಮೂವತ್ತು ಸಂಧಿಗಳಿಂದ ಕೂಡಿದ ಈ ಕೃತಿ ಭಕ್ತಿಪ್ರಧಾನವಾದುದು. ಕಾವ್ಯದ ಮೊದಲರ್ಧದಲ್ಲಿ ರಾಜಸೂಯಯಾಗ, ದ್ಯೂತಪ್ರಸಂಗ, ವನವಾಸಗಳ ಕಥಾನಿರೂಪಣೆಯಿದೆ. ಉಳಿದರ್ಧ ವತ್ಸಲಾಹರಣಕ್ಕೆ ಮೀಸಲಾಗಿದೆ. ಮರಾಠಿ ಭಾಷೆಯಲ್ಲಿ ಈ ಕಥೆ ಜನಪ್ರಿಯವಾಗಿರುವುದನ್ನು ಗಮನಿಸಿ ಕನ್ನಡದಲ್ಲಿ ತಾನು ರಚಿಸಿರುವುದಾಗಿ ಕವಿ ಹೇಳುತ್ತಾನೆ. ಸಾರಮಿದು ಹರಿಕಥಾಮೃತಂ ಎಂಬ ಮಾತು ಈತನ ಕುಮಾರವ್ಯಾಸ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಚಿತ್ರಕವಿತ್ವದ ಚಮತ್ಕಾರ ಇದರಲ್ಲಿ ವಿಶೇಷವಾಗಿ ಕಂಡುಬರುವುದರಿಂದ ಈ ಕೃತಿಗೆ ಚಿತ್ರಭಾರತವೆಂಬ ಹೆಸರು ಸೂಕ್ತವಾಗಿದೆ.

ನಂದಿಮಹಾತ್ಮೆ ಈತನ ಪರಿಪಕ್ವ ಕೃತಿ. ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ ಈ ಕೃತಿ 50 ಸಂಧಿಗಳಷ್ಟು ದೀರ್ಘವಾಗಿದೆ. ಇದರ ಕಥಾವಸ್ತುವನ್ನು ಸೂತಪುರಾಣದಿಂದ ಆಯ್ದುಕೊಳ್ಳಲಾಗಿದೆ. ಪಾರ್ವತಿಯನ್ನು ಒಡ್ಡೋಲಗಕ್ಕೆ ಕರೆತರುವಂತೆ ಶಿವನಿಂದ ನಂದಿಗೆ ಅಪ್ಪಣೆಯಾಗುತ್ತದೆ. ನಂದಿ ಇಂದುಧರನ ರೂಪದಿಂದ ಪಾರ್ವತಿಯನ್ನು ಕರೆತರಲು ಹೋಗುತ್ತಾನೆ. ನಂದಿಯನ್ನು ಪಾರ್ವತಿ ಪರಶಿವನೆಂದೇ ಬಗೆದು ಸನ್ಮಾನಿಸುತ್ತಾಳೆ. ಈ ಅಚಾತುರ್ಯಕ್ಕಾಗಿ ಪಶ್ಚಾತ್ತಾಪಗೊಂಡ ನಂದಿ ಪ್ರಾಯಶ್ಚಿತ್ತಕ್ಕಾಗಿ ತಪಸ್ಸು ಮಾಡಲು ತೀರ್ಮಾನಿಸುತ್ತಾನೆ. ತನ್ನ ತಪಸ್ಸಿಗೆ ತಕ್ಕ ಸ್ಥಳವಾವುದೆಂದು ಗಣನಾಥ ಕೂಷ್ಮಾಂಡನನ್ನು ಕೇಳಲು ಆತ ಶ್ರೀಶೈಲ, ಕೇದಾರ, ವಾರಾಣಸಿ, ಕಂಚಿ ಮೊದಲಾದ ಶೈವಕ್ಷೇತ್ರಗಳ ಮಹಿಮೆಯನ್ನು ನಿರೂಪಿಸುತ್ತಾನೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೋಪಕವಿ&oldid=820898" ಇಂದ ಪಡೆಯಲ್ಪಟ್ಟಿದೆ