ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ

ಹಿನ್ನೆಲೆ:
ಜಗತ್ತು ನಿರಂತರ ಬದಲಾವಣೆಯಿಂದ ಕೂಡಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅದರಲ್ಲಿಯೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆ ಹೆಚ್ಚು ವೇಗದಿಂದ ಕೂಡಿದೆ. ಇದು ಸಮಾಜದ ಎಲ್ಲ ಸ್ಥರಗಳ ಮೇಲೆ ತನ್ನದೇ ಆದ ಪರಿಣಾಮವನ್ನುಂಟು ಮಾಡುತ್ತಿದೆ. ಬದಲಾದ ಕಾಲಕ್ಕೆ ಅಗತ್ಯವಾದ ಶಿಕ್ಷಣ ನೀಡಬೇಕಾಗಿರುವುದು ನಾಗರೀಕ ಸಮಾಜದ ಕರ್ತವ್ಯ. ಇಂಥ ಬದಲಾವಣೆಗಳ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷ್ಷಣಾಸಕ್ತರು ಆಗಿಂದಾಗ್ಯೆ ಒಂದೆಡೆ ಕಲೆತು ಚರ್ಚೆ ನಡೆಸುವುದು ಅಗತ್ಯವಾಗಿರುತ್ತದೆ. ಇದು ಔಪಚಾರಿಕವಾದಿ ತರಬೇತಿಗಳಲ್ಲಿ ಸಾಮಾನ್ಯವಾಗಿ ನಡೆಯುವುದಿಲ್ಲ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಾಗೂ ಸಾರ್ವಜನಿಕರ ನೆರವಿನಿಂದ ಸಂಘಟಿಸುತ್ತಾ ಬಂದಿದೆ. ಶಿಕ್ಷಣದ ಸಾರ್ವತ್ರೀಕರಣಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯವಾದರೆ ಮಗುವನ್ನು ಶಾಲೆಯತ್ತ ಆಕರ್ಷಿಸುವ ಹಾಗೂ ಸಮುದಾಯವನ್ನು ಶಾಲೆಯ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸುವ ಪ್ರಯತ್ನದಲ್ಲಿ ಸಂಘ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬಹುದು ಎಂಬುದು ಕೆಜೆವಿಎಸ್ ನಂಬಿಕೆ. ಈ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೆಜೆವಿಎಸ್ ಸಂಘಟಿಸಿದೆ. ಅವುಗಳಲ್ಲಿ ಪ್ರಮುಖವಾದವು:

ವಾತಾವರಣ ನಿರ್ಮಾಣ

  • ತರಬೇತಿ ಹಾಗೂ ಓದುವ ಸಾಮಗ್ರಿ ತಯಾರಿಕೆ
  • ಆಕಾಶವೀಕ್ಷಣೆ, ಗ್ರ್ರಹಣ/ಧೂಮಕೇತುಗಳ ವೀಕ್ಷಣೆ, ಮಕ್ಕಳಿಗಾಗಿ ಬೇಸಿಗೆ ಶಿಬಿರಗಳು
  • ಪತ್ರಿಕೆ ಹಾಗೂ ಪುಸ್ತಕಗಳ ಪ್ರಕಟಣೆ
  • ವಿಜ್ಞಾನ ಹಾಗೂ ವ್ಶೆಜ್ಞಾನಿಕ ಮನೋಭಾವಕ್ಕೆ ಸಂಬಂಧಿಸಿದ ಜಾಥಾ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ, ಹಾಗೂ ಕಾರ್ಯಾಗಾರಗಳು


ಕೆಜೆವಿಎಸ್ ನಡೆಸುವ ತರಬೇತಿಗಳು/ಕಾರ್ಯಕ್ರಮಗಳು ಬಹುತೇಕ ಅನೌಪಚಾರಿಕವಾಗಿರುತ್ತವೆ. ಇಲ್ಲಿ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಹಾಗೂ ರಜಾ ದಿನಗಳಲ್ಲಿ ತಮಗೆ ಇಷ್ಟವಾದ ವಿಷಯವನ್ನು ಕಲಿಯುತ್ತಾರೆ. ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿಕೊಂಡು ಹೋಗುವುದಕ್ಕಿಂತ ತಮ್ಮ ನಡುವೆಯಿರುವ ಪರಿಣಿತ ಶಿಕ್ಷಕರನ್ನೇ ಬಳಸಿಕೊಳ್ಳುತ್ತಾರೆ. ಬೇಸಿಗೆ ಶಿಬಿರಗಳು ಹಾಗೂ ಗ್ರಹಣ/ಧೂಮಕೇತುಗಳ ವೀಕ್ಷಣೆಯ ಸಂದರ್ಭದಲ್ಲಿ ಸಮುದಾಯವನ್ನು ಪರಿಣಾಮಕಾರಿಯಾಗಿ ಒಳಗೊಳ್ಳಲಾಗುತ್ತದೆ. ಸಮಿತಿ ಸಂಘಟಿಸುವ ಬಹುತೇಕ ಕಾರ್ಯ ಕ್ರಮಗಳನ್ನು ಸಾರ್ವಜನಿಕರ ನೆರವಿನಿಂದಲೇ ಸಂಘಟಿಸಲಾಗುತ್ತದೆ.

ಇಂತಹ ತರಬೇತಿಗಳು ಹಾಗೂ ಕಾರ್ಯಕ್ರಮಗಳ ಸಂದರ್ಭದಲ್ಲಿ ಗಳಿಸಿದ ಶಿಕ್ಷಕರೊಂದಿಗಿನ ಸಂಪರ್ಕವನ್ನು ಮುಂದುವರೆಸುವ, ಅವರಿಗೆ ಅಗತ್ಯವಾದ ಮಾಹಿತಿಗಳನ್ನು ಕಾಲ ಕಾಲಕ್ಕೆ ಒದಗಿಸುವ ಉದ್ದೇಶದಿಂದ ಶಿಕ್ಷಣ ಶಿಲ್ಪಿ ಮಾಸ ಪತ್ರಿಕೆಯನ್ನು ಕೆಜೆವಿಎಸ್ ಪ್ರಕಟಿಸುತ್ತಿದೆ. ಶಿಕ್ಷಕರು ತಾವೇ ಚಂದಾ ಹಣವನ್ನು ನೀಡಿ ಪತ್ರಿಕೆಯನ್ನು ತರಿಸಿಕೊಳ್ಳುವುದರಿಂದ ಪತ್ರಿಕೆಯಲ್ಲಿನ ಲೇಖನಗಳನ್ನು ಓದುವಲ್ಲಿ, ಪತ್ರಿಕೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸುವಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳುತ್ತಾರೆ. ಬಹಳ ಮುಖ್ಯವಾಗಿ ಶಿಕ್ಷಕರು ತಮ್ಮ ಅಭಿವ್ಯಕ್ತಿಯನ್ನು ಪ್ರದರ್ಶಿಸಲು, ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶಿಕ್ಷಣ ಶಿಲ್ಪಿ ಒಂದು ವೇದಿಕೆಯಾಗಲಿದೆ. ಇದು ಶಿಕ್ಷಕರ ಸೃಜನಶೀಲತೆಯನ್ನು ಕ್ರಿಯಾಶೀಲಗೊಳಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಲಿದೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್) ಬದಲಾಯಿಸಿ

ವಿಜ್ಞಾನವನ್ನು ಜನಪ್ರಿಯಗೊಳಿಸುವುದು, ವೈಜ್ಞಾನಿಕ ಚಿಂತನೆ ಬೆಳೆಸುವುದು, ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳು ಜನಸಾಮಾನ್ಯರ ದಿನ ನಿತ್ಯದ ಸಮಸ್ಯೆಗಳಿಗೆ ಪರಿಹಾರವಾಗಿ ರೂಪುಗೊಳ್ಳುವಂತೆ ಒತ್ತಾಯಿಸುವುದು, ಜನಪರ ವಿಜ್ಞಾನ ಮತ್ತು ತಂತ್ರಜ್ಞಾನಗಳಿಗಾಗಿ ಸಕಾರಾತ್ಮಕವಾಗಿ ಕೆಲಸ ಮಾಡುವುದು, ಓದುವ ಹವ್ಯಾಸ ಬೆಳೆಸುವುದು ಇವೇ ಮೊದಲಾದ ಉದ್ದೇಶಗಳನ್ನಿಟ್ಟುಕೊಂಡು ಕಳೆದ ಒಂದು ವರ್ಷದಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ(ಕೆಜೆವಿಎಸ್)ಕಾರ್ಯ ನಿರ್ವಹಿಸುತ್ತಿದೆ.

ಕರ್ನಾಟಕದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಸಂಸ್ಥೆಗಳಿದ್ದರೂ ವಿಜ್ಞಾನ ಕಾರ್ಯಕ್ರಮಗಳು ತಲುಪದೇ ಇರುವ ಗ್ರಾಮಗಳು ಹಲವಿವೆ ಎಂದರೆ ಅತಿಶಯೋಕ್ತಿಯಲ್ಲ. ಜೊತೆಗೆ ಕೇವಲ ಸರ್ಕಾರದ ನೆರವನ್ನಷ್ಟೆ ನಿರೀಕ್ಷಿಸಿ ಕೂರದೇ ಸಮುದಾಯದ ನೆರವಿನಿಂದಲೂ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುವ ಹಾಗೂ ಕೆಲವು ಘಟನೆಗಳು ಸಂಭವಿಸಿದಾಗ ತಕ್ಷಣ ಪ್ರತಿಕ್ರಿಯಿಸುವ ಸಂಸ್ಥೆಗಳ ಅಗತ್ಯ ಇರುವುದನ್ನು ಮನಗಂಡು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯನ್ನು ಅಸ್ಥಿತ್ವಕ್ಕೆ ತರಲಾಗಿದೆ. ಸಂಸ್ಥೆ ಈವರೆಗೆ ನಡೆಸಿರುವ ಎಲ್ಲ ಕಾರ್ಯಕ್ರಮಗಳನ್ನು ಸಮುದಾಯದ ಹಾಗೂ ಸದಸ್ಯರ ನೆರವಿನಿಂದ ನಡೆಸಲಾಗಿರುತ್ತದೆ. ಈ ಸಂಸ್ಥೆಯಲ್ಲಿರುವ ಎಲ್ಲರೂ ಜನವಿಜ್ಞಾನ ಸಂಘಟನೆಗಳೊಂದಿಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿರುತ್ತಾರೆ. ಜೊತೆಗೆ ಶಿಕ್ಷಣ ಇಲಾಖೆಯಲ್ಲಿಯೂ ಉನ್ನತ ಸ್ಥಾನದಲ್ಲಿ ಕೆಲಸ ಮಾಡಿರುತ್ತಾರೆ.

ಸಮಿತಿ ರಾಜ್ಯದ ೨೮ ಜಿಲ್ಲೆಗಳ ೬೦ ತಾಲೂಕುಗಳಲ್ಲಿ ಸುಮಾರು ೬೦೦ ಸದಸ್ಯರನ್ನು ಹೊಂದಿದೆ. ಸಮಿತಿಯ ಸದಸ್ಯರುಗಳಲ್ಲಿ ಹೆಚ್ಚಿನವರು ಶಿಕ್ಷಕರಾಗಿದ್ದರೂ ಇತರ ಕ್ಷೇತ್ರಗಳಿಂದಲೂ ಸಮಿತಿಗೆ ಸದಸ್ಯರಿದ್ದಾರೆ. ಅವರು ಕಾಲೇಜುಗಳು, ತಾಂತ್ರಿಕ ಕಾಲೆಜುಗಳು, ಎನ್.ಎಸ್.ಎಸ್ ಅಧಿಕಾರಿಗಳು, ವೈದ್ಯರು, ವಕೀಲರು, ಉಪನ್ಯಾಸಕರು, ವಿದ್ಯಾರ್ಥಿಗಳು, ಯುವಕರು ಹೀಗೆ ಸಮಾಜದ ವಿವಿಧ ಭಾಗಗಳನ್ನು ಪ್ರತಿನಿಧಿಸಿರುತ್ತಾರೆ. ಸಮಿತಿಯ ಸದಸ್ಯರು ಲೇಖಕರಾಗಿ, ಹಾಡುಗಾರರಾಗಿ, ಜನಪ್ರಿಯ ಉಪನ್ಯಾಸ ನೀಡುವವರಾಗಿ, ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಮಿತಿಯ ಸದಸ್ಯರಿಗೆ ರಾಜ್ಯದಾದ್ಯಂತ ನಡೆಯುವ ಚಟುವಟಿಕೆಗಳನ್ನು ಪರಿಚಯಿಸುವ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೆಜೆವಿಎಸ್ ನ್ಯೂಸ್ ಎಂಬ ಮಾಸಿಕವನ್ನು ಪ್ರಕಟಿಸಲಾಗುತ್ತಿದೆ. ಇದು ಪ್ರತಿ ತಿಂಗಳೂ ಎಲ್ಲ ಸದಸ್ಯರನ್ನೂ ತಲುಪಿ ಅವರಲ್ಲಿ ಜಾಗೃತಿಯನ್ನುಂಟು ಮಾಡುತ್ತಿದೆ.

ಸಮಿತಿಯ ವತಿಯಿಂದ ಸುಮಾರು ಹತ್ತು ಪುಸ್ತಕಗಳನ್ನು ತರಲಾಗುತ್ತಿದೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಸಂಘಟಿಸಿರುವ ಕಾರ್ಯಕ್ರಮಗ ಳು:

ಶುಕ್ರ ಸಂಕ್ರಮ ರಾಜ್ಯ ಮಟ್ಟದ ಕಾರ್ಯಾಗಾರ: ಮಾರ್ಚಿ ೯-೧೦ ರಂದು ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಶಿಕ್ಷಕರು ಹಾಗೂ ಕಾರ್ಯಕರ್ತರಿಗೆ ರಾಜ್ಯಮಟ್ಟದ ಶುಕ್ರಸಂಕ್ರಮ ಕಾರ್ಯಾಗಾರ ವನ್ನು ಶ್ರವಣಬೆಳಗೊಳದಲ್ಲಿ ಸಂಘಟಿಸಲಾಗಿತ್ತು. ರಾಜ್ಯದ ೧೬ ಜಿಲ್ಲೆಗಳಿಂದ ೧೦೫ ಪ್ರತಿನಿಧಿಗಳು ಭಾಗವಹಿಸಿ ತರಬೇತಿ ಪಡೆದರು. ಪ್ರೊ.ಎಸ್.ವಿ.ಸುಬ್ರಮಣ್ಯಂ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಶುಕ್ರ ಸಂಕ್ರಮ ವೀಕ್ಷಣೆ : ೨೦೧೨ರ ಜೂನ್ ೬ ರಂದು ಬೆಂಗಳೂರಿನ ಲಾಲ್ ಭಾಗ್ ನಲ್ಲಿ ಶುಕ್ರ ಸಂಕ್ರಮ ವೀಕ್ಷಣೆ ವ್ಯವಸ್ಥೆಯನ್ನು ಬೆಂಗಳೂರು ಅಸ್ಟ್ರನಾಮಿಕಲ್ ಸೊಸೈಟಿ ಇವರ ಸಹಯೋಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಿದ್ದರು. ಇದೇ ರೀತಿಯಲ್ಲಿ ತುಮಕೂರು, ಹೊಸಪೇಟೆ, ಧಾರವಾಡ, ಹರಿಹರ, ಶಿವಮೊಗ್ಗ, ಹಾಸನ, ಹೊಳೆನರಸೀಪುರ, ಪಾಂಡವಪುರ ಮುಂತಾದ ಸ್ಥಳಗಳಲ್ಲಿಯೂ ವೀಕ್ಷಣಾ ಕಾರ್ಯಕ್ರಮವನ್ನು ನಡೆಸಲಾಗಿದೆ.

ಪವಾಡ ರಹಸ್ಯ ಬಯಲು ಕಾರ್ಯಕ್ರಮ: ೨೦೧೨ರ ಡಿಸೆಂಬರ್ ನಲ್ಲಿ ಬೆಂಗಳೂರು ನಗರದ ಯಲಹಂಕ ಸುತ್ತಮುತ್ತಲಿನ ೫ ಗ್ರಾಮಗಳ ಸ್ವಸಹಾಯ ಸಂಘದ ಸದಸ್ಯರಿಗೆ ಕಲ್ಪತರು ಗ್ರಾಮೀಣ ಬ್ಯಾಂಕ್ ನವರ ಸಹಯೋಗದಲ್ಲಿ ಹಾಗೂ ಟಿ.ದಾಸರಹಳ್ಳಿ ವ್ಯಾಪ್ತಿಯ ರುಕ್ಮಿಣಿನಗರದಲ್ಲಿ ಪವಾಡ ರಹಸ್ಯಬಯಲು ಕಾರ್ಯಕ್ರಮಗಳನ್ನು ನೀಡಲಾಗಿದೆ.

ವನ್ಯಜೀವಿ ಸಪ್ತಾಹದ ಅಂಗವಾಗಿ ಉಪನ್ಯಾಸ: ಬೆಂಗಳೂರಿನ ಹೊಸರಸ್ತೆಯಲ್ಲಿ, ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ ವನ್ಯಜೀವಿ ಸಪ್ತಾಯದ ಅಂಗವಾಗಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಉಪನ್ಯಾಸಗಳನ್ನು ನೀಡಿದೆ.

ಪ್ರಳಯ ಹಾಗೂ ವೈಜ್ಞಾನಿಕ ಚಿಂತನೆ ಉಪನ್ಯಾಸ: ದಿನಾಂಕ ೨೩.೧೨.೨೦೧೨ ರಂದು ದಾವಣಗೆರೆ ಜಿಲ್ಲೆ ಹರಪನಹಳ್ಳಿಯಲ್ಲಿ ಪ್ರಳಯ ಮತ್ತು ವೈಜ್ಞಾನಿಕ ಚಿಂತನೆಗೆ ಸಂಬಂದಿಸಿದ ವಿಚಾರ ಸಂಕಿರಣವನ್ನು ಸಂಘಟಿಸಲಾಗಿದೆ. ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲಸ್ವಾಮೀಜಿ ಭಾಗವಹಿಸಿದ್ದರು.

ಸಸಿ ನೆಡುವ ಕಾರ್ಯಕ್ರಮ: ೨೦೧೨ರ ಜುಲೈ ೧೨ ರಂದು ತುಮಕೂರು ಬಳಿಯ ಶೆಟ್ಟಿಹಳ್ಳಿಪಾಳ್ಯದಲ್ಲಿ ಎರ್ಪಡಿಸಲಾಗಿತ್ತು. ೨೫೦ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯ್ತು.

ಪ್ರಳಯ ಹಾಗೂ ಫಲ ಜ್ಯೋತಿಷ್ಯ ಕುರಿತ ವಿಚಾರ ಸಂಕಿರಣ: ದಿನಾಂಕ ೨೩.೧೨.೨೦೧೨ ರಂದು ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಪ್ರಳಯ ಹಾಗೂ ಫಲ ಜ್ಯೋತಿಷ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಅಖಿಲ ಕರ್ನಾಟಕ ವಿಚಾರವಾದಿ ಸಂಘಟನೆಯ ಅಧ್ಯಕ್ಷರಾದ ಪ್ರೊ.ಎ.ಎಸ್.ನಟರಾಜ್ ಭಾಗವಹಿಸಿದ್ದರು.

ಮಕ್ಕಳಿಗಾಗಿ ಬೇಸಿಗೆ ವಿಜ್ಞಾನ ಶಿಬಿರ: ೨೦೧೨ ರ ಮೇ ಮೊದಲ ವಾರದಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಕ್ಕಳಿಗಾಗಿ ವಿಜ್ಞಾನ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಒಂದು ವಾರ ಕಾಲ ನಡೆದ ಈ ಶಿಬಿರದಲ್ಲಿ ೧೫೦ ಮಕ್ಕಳು ಭಾಗವಹಿಸಿದ್ದರು.

ವಿಜ್ಞಾನ ಸಂವಹನ ಕಾರ್ಯಾಗಾರ: ೨೦೧೨ರ ನವೆಂಬರ್ ೧೫ರಂದು ಧಾರವಾಡ ಗುರುಭವನದಲ್ಲಿ ಶಿಕ್ಷಕರಿಗಾಗಿ ವಿಜ್ಞಾನ ಸಂವಹನ ತರಬೇತಿಯನ್ನು ಏರ್ಪಡಿಸಲಾಗಿತ್ತು. ಶ್ರೀಅಬ್ದುಲ್ ರೆಹಮಾನ್ ಪಾಷ ತರಬೇತಿ ನೀಡಿದರು.

ಮಕ್ಕಳ ದಿನಾಚರಣೆ: ಹಾಸನ ಜಿಲ್ಲೆ, ಹೊಳೆ ನರಸೀಪುರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಪರಿಸರ ಕುರಿತ ಸ್ಥಳದಲ್ಲೇ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉತ್ತಮ ಚಿತ್ರಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ನೀಡಲಾಯ್ತು.

ಹವಾಮಾನ ಬದಲಾವಣೆ ಕಾರ್ಯಾಗಾರ: ದಿನಾಂಕ ೨೯.೦೭.೨೦೧೨ ರಂದು ಮೈಸೂರು ಜಿಲ್ಲೆ, ಕೆ.ಆರ್.ನಗರದಲ್ಲಿ ಹವಾಮಾನ ಬದಲಾವಣೆ, ಪರಿಣಾಮಗಳು ಹಾಗೂ ಪರ್ಯಾಯಗಳು ಕುರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನ ಗ್ರೀನ್ ಪವರ್ ಕ್ಲೈಮೇಟ್ ಸಂಸ್ಥೆಯ ಶ್ರೀ ಧನರಾಜ್ ಪರಿಣಿತರಾಗಿ ಆಗಮಿಸಿದ್ದರು.

ಪುಸ್ತಕ ಪ್ರಕಟಣೆ: ಪ್ರಳಯ ದ ಬಗ್ಗೆ ಜನರಿಗೆ ವಾಸ್ತವಾಂಶಗಳನ್ನು ವಿವರಿಸುವ ಪ್ರಳಯ ವಾಸ್ತವ ಎಂಬ ಕಿರು ಪುಸ್ತಕವನ್ನು ಪ್ರಕಟಿಸಲಾಗಿದೆ.

ಕೆಜೆವಿಎಸ್ ನ್ಯೂಸ್: ಸಮಿತಿಯ ಸದಸ್ಯರಿಗೆ ಸಮಿತಿಯ ಚಟುವಟಿಕೆಗಳನ್ನು ವಿವರಿಸುವ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಒದಗಿಸುವ ಕೆಜೆವಿಎಸ್ ನ್ಯೂಸ್ ಎಂಬ ಮಾಸಿಕವನ್ನು ಪ್ರಕಟಿಸಲಾಗುತ್ತಿದೆ.

ಶಿಕ್ಷಣ ಶಿಲ್ಪಿ: ಶಿಕ್ಷಕರು ಹಾಗೂ ಶಿಕ್ಷಣಾಸಕ್ತರನ್ನು ಗುರಿಯಾಗಿಟ್ಟುಕೊಂಡು ಶಿಕ್ಷಣ ಶಿಲ್ಪಿ ಎಂಬ ಶೈಕ್ಷಣಿಕ ಮಾಸಿಕವನ್ನು ೨೦೧೩ರ ಜನವರಿಯಿಂದ ಪ್ರಕಟಿಸಲಾಗುತ್ತಿದೆ. ವಿಜ್ಞಾನಕ್ಕೆ ಸಂಬಂಧಿಸಿದ ಹೆಚ್ಚಿನ ಲೇಖನಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಗೆ ಸಂಬಂಧಿಸಿದ ವೆಬ್ ತಾಣಗಳು : http://kjvs.org Archived 2013-04-22 ವೇಬ್ಯಾಕ್ ಮೆಷಿನ್ ನಲ್ಲಿ.

http://kjvs-india.blogspot.in

Email ID: karjvs@gmail.com