ಇತರೆ ಝೂಗಳಿಗಿಂತಲೂ 'ಔಟ್ ಆಫ್ ಆಫ್ರಿಕ' ವಿಭಿನ್ನ ಎಂದು ಗುರುತಿಸಿಕೊಂಡಿರುವುದು 'ಹೆಬ್ಬಾವಿನ ಪ್ರಭಾವ'ದಿಂದ. ಕೇವಲ ಹೆಬ್ಬಾವಿನೊಡನೆ ಸರಸ ಮಾತ್ರವಲ್ಲ. ಹುಲಿಯೊಂದಿಗೆ ಸ್ವಿಮ್ಮಿಂಗ್, ತೋಳಗಳು ಕರಡಿಗಳು ಜಿರಾಫೆಗಳೊಂದಿಗೆ ಕಿಸ್ಸಿಂಗ್ ಹಾಗೂ ಬಣ್ಣಬಣ್ಣದ ಗಿಣಿಗಳೊಂದಿಗೆ ಚಾಟಿಂಗನ್ನೂ ಮಾಡಬಹುದು ಇಲ್ಲಿ...

ಆರ್ ಯು ಸ್ಕೇರ್ಡ್...?!!'...ಅಲ್ಲೊಬ್ಬ ಕೌಬಾಯ್ ಮಾದರಿಯಲ್ಲಿ ವೇಷತೊಟ್ಟು ನಿಂತಿರುವಾತ ನೆರೆದವರೆಲ್ಲರನ್ನೂ ಪ್ರಶ್ನಿಸುತ್ತಾನೆ. ಎಲ್ಲರೂ ಹೋ ಎಂದು ಕೂಗುತ್ತಿದ್ದಂತೆ 'ಧೈರ್ಯಶಾಲಿ ಮಕ್ಕಳು ಈ ಗುಂಪಿನಲ್ಲಿದ್ದರೆ ಮುಂದೆ ಬನ್ನಿ' ಎನ್ನುತ್ತಾನೆ. ಮುಂದೆ ಬಂದ ಮಕ್ಕಳನ್ನು ಕಬ್ಬಿಣದ ಸರಳುಗಳ ತಡೆಗೋಡೆಯ ಗೇಟ್ ತೆಗೆದು ಒಳಗೆ ಬರಮಾಡಿಕೊಳ್ಳುತ್ತಾನೆ. ನೆಲದ ಮೇಲಿಟ್ಟಿರುವ ಬಾಕ್ಸಿನ ಒಳಗಿರುವ ವಸ್ತುವನ್ನು ಹೊರತೆಗೆಯುವ ಸಾಹಸ ಮಾಡುವಿರೇ? ಎಂದೆಲ್ಲಾ ಪ್ರಶ್ನಿಸಿ ನೆರೆದವರನ್ನು ಹತ್ತು ನಿಮಿಷ ಮಾತಿನಲ್ಲೇ ರಂಜಿಸಲೆತ್ನಿಸುತ್ತಾನೆ. ಆದರೆ ಎಲ್ಲರ ದೃಷ್ಟಿ ಆ ಪೆಟ್ಟಿಗೆ ಕಡೆ. ಈತನ ಮಾತು ಯಾರಿಗೂ ರುಚಿಸಲ್ಲ. ಸರಿ ಮಕ್ಕಳೆಲ್ಲರನ್ನೂ ಪೆಟ್ಚಿಗೆ ಸುತ್ತಲೂ ನಿಲ್ಲಿಸಿ ನಿಧಾನವಾಗಿ ಪೆಟ್ಟಿಗೆ ಬಾಗಿಲು ತೆಗೆಸುತ್ತಾನೆ.

ಒಳಗಿರುವುದನ್ನು ಮೇಲೆತ್ತಲು ಸೂಚಿಸುತ್ತಾನೆ. ಮಕ್ಕಳೆಲ್ಲರೂ ಸೇರಿ ಆ 'ಜೀವಂತ' ಭಾರವಾದ ವಸ್ತುವನ್ನು ಹೊರ ತೆಗೆಯುತ್ತಾರೆ! ಸುಮಾರು 15 ಅಡಿ ಉದ್ದನೆಯ ಹೆಬ್ಬಾವು ಅದು! ಭಯಗೊಂಡರೂ ಆತನ ಭರವಸೆಯ ಮೇಲೆ ಮಕ್ಕಳು ಹೆಬ್ಬಾವನ್ನು ಮುಟ್ಟಿ ಮೇಲೆತ್ತುವ ಸಾಹಸಕ್ಕೆ ಕೈ ಹಾಕಿರುತ್ತಾರೆ!

ಪೆಟ್ಟಿಗೆಯಿಂದ ಹೊರ ತೆಗೆಯಲಾದ ಹೆಬ್ಬಾವನ್ನು ನಿಧಾನವಾಗಿ ನೆಲದ ಮೇಲಿಡುತ್ತಿದ್ದಂತೆ ಅದು ಅತ್ತಿಂದಿತ್ತ ಇತ್ತಿಂದತ್ತ ತಲೆ ಆಡಿಸುತ್ತಾ ತೆವಳಲು ಮುಂದಾಗುತ್ತದೆ. ಆದರೂ ಒಮ್ಮೆ ಹಾವನ್ನು ಮುಟ್ಟಿ ಧೈರ್ಯವಂತರಾದ ಮಕ್ಕಳು ಅದರೊಂದಿಗೆ ಆಡಲು ಮುಂದಾಗುತ್ತಾರೆ.

ಜೊತೆಜೊತೆಗೆ ಸಾಹಸಕ್ಕೂ ಕೈ ಹಾಕುತ್ತಾರೆ. ಅಷ್ಟರಲ್ಲಾಗಲೇ ಬಾಲಕನೊಬ್ಬ ಇನ್ನತರೆ ಮಕ್ಕಳಿಗಿಂತಲೂ ತಾನೇ ಧೈರ್ಯವಂತ ಎಂದು ತೋರಿಸಿಕೊಳ್ಳಲು ನೂರಾರು ಪೌಂಡುಗಳ ಭಾರದ ಹೆಬ್ಬಾವನ್ನು ಮೈ ಮೇಲೆ ಮಲಗಿಸಿಕೊಳ್ಳಲು ಮುಂದಾಗುತ್ತಾನೆ. ಈ ಎಲ್ಲಾ ಸರ್ಕಸ್ ಜಾರಿಯಲ್ಲಿರುವಾಗಲೇ, 'ಪುಕ್ಕಲು ಜನ ಧೈರ್ಯ ತಂದುಕೊಳ್ಳಲು ಬಯಸಿದರೆ ಇದೊಂದು ಉತ್ತಮ ಅವಕಾಶ, ಮಿಸ್ ಮಾಡಿಕೊಳ್ಳಬೇಡಿ' ಎಂಬ ಒಗ್ಗರಣೆ ಮಾತು ಅದೇ ಸಂಚಾಲಕನಿಂದ ಕೇಳಿಬರುತ್ತದೆ. ಅದುವರೆಗೂ ಈ ಎಲ್ಲವನ್ನೂ ತಡೆಗೋಡೆಯ ಆಚೆಯಿಂದ ನೋಡುತ್ತಾ ನಿಂತಿದ್ದ ಜನತೆ ಮುಗಿಬಿದ್ದು ಹೆಬ್ಬಾವನ್ನು ಮುಟ್ಟಲು ಸಾಲಿನಲ್ಲಿ ಕಾದು ನಿಲ್ಲುತ್ತಾರೆ.

ಭಾರತವೇ ಮೇಲು!

ಇತ್ತೀಚೆಗೆ ಅನೇಕ ದೇಶಗಳಲ್ಲಿ ಝೂಗಳು ಕೇವಲ ಪ್ರಾಣಿಗಳನ್ನು ಪ್ರದರ್ಶಿಸುವ ಕಾರ್ಯವೊಂದಕ್ಕೆ ಸೀಮಿತವಾಗಿರದೆ, ಅಪರೂಪದ ವನ್ಯ ಜೀವಿಗಳನ್ನು ಸಂರಕ್ಷಿಸುವ ಕಾರ್ಯದಲ್ಲೂ ತೊಡಗಿವೆ. ಎಝಿಎ ಪ್ರಕಾರ ಜಗತ್ತಿನ 80 ರಾಷ್ಟ್ರಗಳಲ್ಲಿ ಈ ಕಾರ್ಯ ಜಾರಿಯಲ್ಲಿದೆ. ಆದರೆ ಏಷ್ಯಾ ಭಾಗದ ಕೆಲ ದ್ವೀಪ ರಾಷ್ಟ್ರಗಳು ಸೇರಿದಂತೆ ಬಹುತೇಕ ಎಲ್ಲೆಡೆ ಝೂಗಳಲ್ಲಿ ಪ್ರಾಣಿಗಳನ್ನು ನೋಡಿ ಆನಂದಿಸುವ ಬದಲಿಗೆ, ಜನತೆ ಅದರಿಂದ ಸರ್ಕಸ್ ಮಾದರಿಯ ಮನರಂಜನೆ ಬಯಸುತ್ತಿರುವುದು ದುರದೃಷ್ಟಕರ. ಸಮಾಧಾನಕರ ಸಂಗತಿ ಎಂದರೆ ವನ್ಯ ಜೀವಿಗಳ ಸಂರಕ್ಷಣೆಗಾಗಿ ಭಾರತದಲ್ಲಿರುವ ಕಠಿಣ ಕಾನೂನಿನಿಂದಾಗಿ ಭಾರತದಲ್ಲಿ ವನ್ಯ ಜೀವಿಗಳು ನೆಮ್ಮದಿಯಿಂದ ಉಸಿರಾಡುತ್ತಿವೆ.