ಆಧುನಿಕ ಕೃಷಿ ಪದ್ಧತಿ ಮತ್ತು ಹಸಿರು ಕ್ರಾಂತಿಯ ಪರಿಣಾಮ ಕೃಷಿಯಲ್ಲಿ ಸುದೀರ್ಘ ವರ್ಷಗಳಿಂದ ರಾಸಾಯನಿಕ ಗೊಬ್ಬರಗಳನ್ನು ಅತೀಯಾಗಿ ಮಣ್ಣಿಗೆ ಸೇರಿಸುತ್ತಿರುವುದರಿಂದ ಮಣ್ಣಿನ ಗುಣ ಮತ್ತು ಫಲವತ್ತತೆ ಕಡಿಮೆಯಾಗಿದೆ. ಕೃಷಿಯಲ್ಲಿ ಬರುವ ಅಧಾಯ ಕೃಷಿಗೆ ಮಾಡುತ್ತಿರುವ ಖರ್ಚಿಗೂ ಸಾಕಾಗುತ್ತಿಲ್ಲ. ಇಂತಹ ಭೂಮಿಯಲ್ಲಿ ರೈತನ ಮಿತ್ರ ಎಂದು ಕರೆಸಿಕೊಳ್ಳುವ ಎರೇಹುಳುಗಳುನ್ನು ಹುಡುಕಿದರೂ ಸಿಗುವುದಿಲ್ಲ.

ಇತ್ತೀಚಗೆ ಇದನ್ನುಅರಿತುಕೊಳ್ಳುತ್ತಿರುವ ಜನರು ಸಾಮಯವ ಕೃಷಿಯತ್ತ ಮುಖ ಮಾಡಿದ್ದಾರೆ. ಎರೇಹುಳುಗಳ ಸಂಖ್ಯೆಗಳನ್ನು ಭೂಮಿಯಲ್ಲಿ ಹೆಚ್ಚು ಮಾಡಿ ಮಣ್ಣಿನ ಸ್ವಾಭಾವಿಕ ಗುಣಗಳನ್ನು ಉತ್ತಮ ಪಡಿಸಲು ಪ್ರಯತ್ನಗಳ ನಡೆಯುತ್ತಿವೆ. ಇದರ ಫಲವಾಗಿ ಇಂದು ಎರೇಹುಳುಗಳನ್ನು ಕೃಷಿ ಮಾಡಿ ಅವುಗಳ ಗೊಬ್ಬರಗಳನ್ನು ಮಾರಾಟ ಮಾಡುವ ಉದ್ಯಮಗಳೂ ಹೆಚ್ಚುತ್ತಿವೆ. ಈಗ ಪ್ರತಿಯೋಬ್ಬರ ಮಿತ್ರನೂ ಆಗಿರುವ ಎರೇಹುಳ ಕೆಲ ಮನೆಗಳ ತ್ಯಾಜ್ಯಗಳ ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸಿವೆ.  ಇಂತಹ ಎರೇಹುಳುಗಳ ಸಾಕಾಣಿಕೆ ಮಾಡಲು ಎರೇಹುಳ ಘಟಕ ನಿರ್ಮಾಣವೂ ಬಹುಮುಖ್ಯ ಪಾತ್ರ ವಹಿಸುತ್ತದೆ.

       ಎರೇಹುಳುಗಳು ಗೊಬ್ಬರ ಘಟಕವನ್ನು ತಾತ್ಕಾಲಿಕವಾಗಿ ಫಾಲಿಥಿನ್‌ ಬ್ಯಾಗ್‌ಗಳನ್ನು ಬಳಸಿ ಅಥವಾ ಕಡಿಮೆ ವೆಚ್ಚದ ತಾತ್ಕಾಲಿಕ ಘಟಕಗಳನ್ನು ಹಲವು ಬಗೆಗಳಲ್ಲಿ ನಿರ್ಮಾಣ ಮಾಡಬಹುದು, ಆದರೆ ಹೆಚ್ಚು ಕಾಲ ಬಾಳಿಕೆ ಬರಬೇಕಾದರೆ ಸೂಕ್ತ ವಿಧಾನ ಅನುಸರಿಸಬೇಕು.

ಎರೇ ಗೊಬ್ಬರ ಘಟಕ ನಿರ್ಮಾಣ ಮಾಡಬೇಕಾದಲ್ಲಿ ಘಟಕದ ಅಳತೆಯು ಗೊಬ್ಬರ ತಯಾರಿಕೆಗೆ ತ್ಯಾಜ್ಯಗಳ ಲಭ್ಯತೆಯ ಪ್ರಮಾಣ ಮತ್ತು ಗೊಬ್ಬರದ ಅಗತ್ಯತೆಗೆ ಅನುಗುಣವಾಗಿರಬೇಕು. ಸಾಮಾನ್ಯವಾಗಿ ಒಂದೇ ತೊಟ್ಟಿ ನಿರ್ಮಾಣ ಮಾಡುವುದಕ್ಕಿಂತ ಕನಿಷ್ಟ ಎರಡು ತೊಟ್ಟಿಗಳನ್ನು ನಿರ್ಮಾಣ ಮಾಡುವುದು ಸೂಕ್ತ. ಗೊಬ್ಬರ ಘಟಕದ ಅಗಲ ಮತ್ತು ಉದ್ದವನ್ನು ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು ಆದರೆ ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಎರೇಹುಳುಗಳನ್ನು ಬಿಡಬೇಕು. ಆದರೆ ತೊಟ್ಟಿಯ ಎತ್ತರವನ್ನು ಎರಡು ಅಡಿಗಳಿಗೆ ಸೀಮಿತಗೊಳಿಸುವುದು ಸೂಕ್ತ.

ಎರೇಹುಳುಗಳಿರುವ ತೊಟ್ಟಿಗೆ ತ್ಯಾಜ್ಯವನ್ನು ಒಂದೇ ಬಾರಿಗೆ ಪೂರ್ಣವಾಗಿ ಭರ್ತಿ ಮಾಡುವುದಕ್ಕಿಂತ  ಒಂದೊಂದೇ ಅಡಿ ಭರ್ತಿ ಮಾಡುವುದು ಸೂಕ್ತ. ತ್ಯಾಜ್ಯವನ್ನು ಪೂರ್ಣವಾಗಿ ಭರ್ತಿ ಮಾಡಿದರೆ ತಳಭಾಗದಲ್ಲಿ ತ್ಯಾಜ್ಯ ಕಳಿಯುವಾಗ ಉಂಟಾಗುವ ಉಷ್ಣವು ಎರೇಹುಳುಗಳ ಉಳಿವಿಗೆ ಸೂಕ್ತವಾಗಿರುವುದಿಲ್ಲ. ಎರೇಹುಳು ಘಟಕದ ತ್ಯಾಜ್ಯವು  ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು ಬಹುಮುಖ್ಯ. ತ್ಯಾಜ್ಯವನ್ನು ನೇರವಾಗಿ ಎರೇಹುಳುಗಳಿಗೆ ನೀಡುವುದಕ್ಕಿಂತ ಎರಡರಿಂದ ಮೂರು ತಿಂಗಳು ಮೊದಲೇ ಕಳಿಸಿ ನಂತರ ನೀಡುವುದು ಹೆಚ್ಚು ಸೂಕ್ತ. ತೊಟ್ಟಿಯನ್ನು ಇಟ್ಟಿಗೆ ಅಥವಾ ಚಪ್ಪಡಿ ಕಲ್ಲಿನಿಂದ ನಿರ್ಮಿಸಿದರೆ ಹೆಚ್ಚು ಬಾಳಿಕೆ ಬರುತ್ತದೆ. ತೊಟ್ಟಿಯ ತಳಬಾಗದಲ್ಲಿ ನೀರು ಬಸಿಯುವಂತಿದ್ದು ಹುಳುಗಳು ಹೊರಹೋಗದಂತೆ ನಿರ್ಮಿಸಬೇಕು. ಅದಕ್ಕಾಗಿ ತೊಟ್ಟಿಯ ತಳಭಾಗದಲ್ಲಿ ನೀರು ಹರಿದು ಹೋಗುವಷ್ಟರ ಮಟ್ಟಿಗೆ ಸ್ವಲ್ಪ ಇಳಿಜಾರು ಮಾಡಿ ನೀರು ಮಾತ್ರ ಬಸಿದು ಹೋಗುವಂತೆ ಪೈಪ್‌ಗಳನ್ನು ಅಳವಡಿಸಿ ಅದರ ಸುತ್ತ ನೈಲಾನ್‌ ಪರದೆ ಕಟ್ಟಿ ಸುತ್ತ ತೆಂಗಿನ ಸಿಪ್ಪೆಗಳನ್ನು ಅಥವಾ ನಾರಿನ ಅಂಶ ಹೆಚ್ಚಿರುವ ತ್ಯಾಜ್ಯವನ್ನು ಹಾಕಬೇಕು, ಇದು ಎರೇಹುಳುಗಳು ಹೊರಹೋಗದಂತೆ ತಡೆದು ಕೇವಲ ನೀರು ಬಸಿಯುವಂತೆ ಮಾಡುತ್ತವೆ.

ಎರೇಹುಳು ಘಟಕದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳವುದು ಅತೀ ಪ್ರಮುಖವಾದ ಅಂಶ. ಎರಡು ತೊಟ್ಟಿಗಳನ್ನು ಒಂದಕ್ಕೊಂದು ಜೋಡಿಯಾಗಿರುವಂತೆ ನಿರ್ಮಿಸುವುದು ಸೂಕ್ತ, ಇಂತಹ ಎರಡು ತೊಟ್ಟಿಗಳ ಮಧ್ಯೆ ಅಲ್ಲಲ್ಲಿ ದೊಡ್ಡದಾದ ರಂದ್ರಗಳನ್ನು ಮಾಡಿ ಚಪ್ಪಡಿಯಂತಹ ಕಲ್ಲಿನಿಂದ ಮುಚ್ಚಿರಬೆಕು. ಒಂದು ತೊಟ್ಟಿಯಲ್ಲಿ ಎರೇಹುಳುಗಳು ತ್ಯಾಜ್ಯವನ್ನೆಲ್ಲ ಗೊಬ್ಬರ ಮಾಡಿದ ನಂತರ ಪಕ್ಕದ ತೊಟ್ಟಿಯ ರಂದ್ರಗಳನ್ನು ತೆರೆಯುವುದರಿಂದ ಕೆಲ ದಿನಗಳಲ್ಲಿ ಎರೇಹುಳುಗಳೆಲ್ಲ ತ್ಯಾಜ್ಯವನ್ನು ಹುಡುಕಿಕೊಂಡು ಹೋಗುತ್ತವೆ. ಇದರಿಂದ ತಯಾರಾಗಿರುವ ಗೊಬ್ಬರವನ್ನು ಹೊರತೆಗೆಯಲು ಅನುಕೂಲವಾಗುವುದು.

ಎರೇಗೊಬ್ಬರ ಘಟಕಕ್ಕೆ ಬಹು ಮುಖ್ಯವಾಗಿ ನೆರಳನ್ನು ಒದಗಿಸಬೇಕು, ಮಳೆಗಾಲದಲ್ಲಿ ಬೀಳುವ ಮಳೆ ತೊಟ್ಟಿಯೊಳಗೆ ಬೀಳದೆ ಹೊರಬೀಳುವಂತಿರುವುದು ಸೂಕ್ತ. ಇದರಿಂದ ಹೆಚ್ಚು ನೀರು ಎರೇಹುಳು ತೊಟ್ಟಿ ಸೇರುವುದನ್ನು ತಡೆಗಟ್ಟಿ ಗುಣಮಟ್ಟದ ಗೊಬ್ಬರ ಪಡೆಯಲು ಅನುಕೂಲವಾಗುವುದು.

ಎರೇಹುಳುಗಳನ್ನು ಹೆಚ್ಚು ಬಿಡುವುದರಿಂದ ಬೇಗನೇ ಗೊಬ್ಬರವನ್ನು ಪಡೆಯಬಹುದು ಆದರೇ ಕ್ರಮೇಣ ಹುಳುಗಳು ಸಂತಾನಾಭಿವೃದ್ಧಿ ಮಾಡಿಕೊಂಡು ಕಡಿಮೆ ಅವಧಿಯಲ್ಲಿ ತ್ಯಾಜ್ಯವನ್ನೆಲ್ಲ ಗೊಬ್ಬರವನ್ನಾಗಿಸುತ್ತವೆ. ಗೊಬ್ಬರ ಒದಗುವ ಪ್ರಮಾಣ ಹುಳುಗಳ ಸಂಖ್ಯೆ, ಸೂಕ್ತ ಆರೈಕೆ ಮತ್ತು ಸೂಕ್ತ ರೀತಿಯಲ್ಲಿ ನಿರ್ಮಾಣಮಾಗಿರುವ ತೊಟ್ಟಿಯನ್ನು ಅವಲಂಭಿಸಿದೆ.