ಎರೆಯಂಗ: (-ಮರಣ 1099). ಹೊಯ್ಸಳ ಇಮ್ಮಡಿ ವಿನಯಾದಿತ್ಯ (1047-1100) ಮತ್ತು ಆತನ ಪಟ್ಟದರಾಣಿ ಕೆಳೆಯಬ್ಬರಸಿಯ ಮಗ. ತಂದೆಗಿಂತಲೂ ಮೊದಲೇ ಮರಣಹೊಂದಿದ್ದರಿಂದ ಸಿಂಹಾಸನಕ್ಕೆ ಬರಲಿಲ್ಲ. ಮರಣ ಕಾಲದವರೆಗೂ ಯುವರಾಜನಾಗಿದ್ದ. ಆದರೆ ಆಡಳಿತದಲ್ಲಿ ಸಾಕಷ್ಟು ಪಾಲ್ಗೊಂಡಿದ್ದ. ಮಹಾಮಂಡಲೇಶ್ವರ ಎಂಬ ಬಿರುದಿತ್ತು. ಈತ ಜೈನಧರ್ಮಾವಲಂಬಿ. ಗುರು ಗೋಪನಂದಿ. ಚಾಲುಕ್ಯ ಸಾಮ್ರಾಟ ಆರನೆಯ ವಿಕ್ರಮಾದಿತ್ಯನಿಗೆ ಎರೆಯಂಗ ಬಲಭುಜದಂತಿದ್ದನೆಂಬುದಾಗಿ ಅನೇಕ ಶಾಸನಗಳಲ್ಲಿ ವರ್ಣಿಸಲಾಗಿದೆ. ಚಾಲುಕ್ಯ ಸೈನ್ಯದ ದಂಡನಾಯಕನಾಗಿ ಮಾಳವ, ಧಾರ ಮುಂತಾದ ರಾಜ್ಯಗಳನ್ನು ಎರೆಯಂಗ ಗೆದ್ದ. ಅನೇಕ ಕೆರೆ ಕಾಲುವೆಗಳನ್ನು ತೋಡಿಸಿದನಲ್ಲದೆ ಜೈನಬಸದಿಗಳನ್ನು ಕಟ್ಟಿಸಿದ. ಈತನಿಗೆ ಏಚಲದೇವಿ (ನೋಡಿ- ಏಚಲದೇವಿ) ಮತ್ತು ಮಹಾದೇವಿ ಎಂಬ ಇಬ್ಬರು ರಾಣಿಯರಿದ್ದರು. ಏಚಲೆಯಲ್ಲಿ ಬಲ್ಲಾಳ I, ಬಿಟ್ಟಿಗ (ವಿಷ್ಣುವರ್ಧನ) ಮತ್ತು ಉದಯಾದಿತ್ಯ ಎಂಬ ಮೂರುಜನ ಗಂಡುಮಕ್ಕಳಾದರು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಎರೆಯಂಗ&oldid=716123" ಇಂದ ಪಡೆಯಲ್ಪಟ್ಟಿದೆ