ಉದಯನ (ಮಗಧರಾಜ) ಮಗಧ ರಾಜ್ಯದ ಶಿಶುನಾಗ ಸಂತತಿಯಲ್ಲಿ ಪ್ರಸಿದ್ಧನಾದ ಅಜಾತಶತ್ರುವಿನ ಮಗ. ಕೆಲವು ಗ್ರಂಥಗಳಲ್ಲಿ ಈತನನ್ನು ಉದಯಭದ್ರ ಎಂದೂ ಹೆಸರಿಸಲಾಗಿದೆ. ತಂದೆಯ ಕಾಲದಲ್ಲಿ ಚಂಪ ರಾಜ್ಯದ ಪ್ರಾಂತ್ಯಾಧಿಕಾರಿಯಾಗಿದ್ದು ತಂದೆಯ ಮರಣಾನಂತರ ಮಗಧರಾಜ್ಯದ ಸಿಂಹಾಸನವನ್ನೇರಿದ. ಕುಸುಮಪುರವೆಂಬ ಹೊಸ ನಗರವನ್ನು ಕಟ್ಟಿಸಿದ. ಕೆಲಕಾಲಾನಂತರ ಜೈನಮತವನ್ನವಲಂಬಿಸಿದ ಜೈನ ಸಂನ್ಯಾಸಿಗಳಿಗೆ ವಿಶೇಷ ಮನ್ನಣೆ ಕೊಡುತ್ತಿದ್ದ. ಅವಂತಿಯ ರಾಜನಾದ ಪಾಲಕನಿಗೂ ಉದಯನಿಗೂ ವೈರವಿತ್ತು. ಜೈನ ಸಂನ್ಯಾಸಿಗಳಿಗೆ ಉದಯನ ವಿಶೇಷ ಪ್ರೋತ್ಸಾಹ ಕೊಡುತ್ತಿದ್ದುದನ್ನು ಅರಿತ ಪಾಲಕ ಕೊಲೆಗಡುಕನೊಬ್ಬನನ್ನು ಜೈನ ಸನ್ಯಾಸಿಯ ವೇಷದಲ್ಲಿ ಕಳುಹಿಸಿ ಉದಯನನ್ನು ಕೊಲ್ಲಿಸಿದ.