ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು

ಉತ್ತರ ಕನ್ನಡ ಜಿಲ್ಲೆಯ ಪ್ರವಾಸವನ್ನು ಕಾರವಾರದಿಂದ ಪ್ರಾರಂಭಿಸುವದು ಒಳಿತು. ಇಲ್ಲಿ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರಗಳಿವೆ. ಉತ್ತರ ಕನ್ನಡ ಜಿಲ್ಲೆಯು ಕರಾವಳಿ ಪ್ರದೇಶದಿಂದ ಕೂಡಿದುದರಿಂದ ಇನ್ನಷ್ಟು ಮೆರಗನ್ನು ಹೊಂದಿದೆ. ಪ್ರಸಿಧ್ಧವಾದ ಸಮುದ್ರ ತೀರಗಳು ಮತ್ತು ಪುರಾಣ-ಪ್ರಸಿದ್ಧ ಐತಿಹಾಸಿಕ ಸ್ಥಳಗಳು ಪ್ರೇಕ್ಷಕರನ್ನು ಕೈ ಬೀಸಿ ಕರೆಯುತ್ತವೆ.

ಬನವಾಸಿ ಬದಲಾಯಿಸಿ

ಬನವಾಸಿಯು ಕಾರವಾರದಿಂದ ೧೨೪ ಕಿ. ಮೀ. ಮತ್ತು ಸಿರ್ಸಿಯಿಂದ ಕೇವಲ ೨೪ ಕಿ.ಮೀ. ದೂರದಲ್ಲಿದೆ. ಬನವಾಸಿ ಕದಂಬರ ರಾಜಧಾನಿಯಾಗಿತ್ತು. ಮಹಾ ಕವಿ ಪಂಪ, ಬನವಾಸಿಯನ್ನು ವರ್ಣಿಸುತ್ತಾ, "ಆರಂಕುಶ ವಿಟ್ಟೊಡಂ ನೆನೆವುದೆನ್ನ ಎನ್ನ ಮನ್ ಬನವಾಸಿ ದೇಶಮಂ " ಅಂದರೆ ಬನವಾಸಿ ದೇಶ ಏಷ್ಟು ಸಂಪದ್ಭರಿತವಾಗಿತ್ತು ಎಂಬುದನ್ನು ಕವಿ ಕೊಂಡಾಡಿದ್ದಾನೆ ಕವಿರತ್ನ ಕಾಳಿದಾಸ ಮತ್ತು ಅಶೋಕನ ಧರ್ಮ ಪ್ರಚಾರಕರು ಬನವಾಸಿಯನ್ನು ಸಂದರ್ಶಿಸಿದ್ದಾರೆ. ಬನವಾಸಿಯಲ್ಲಿ "ಮಧುಕೇಶ್ವರ " ದೇವಾಲಯವಿದೆ. ಏಕಶಿಲ್ಪದ ಆಸ್ಥಾನ ಮಂಟಪ ಹಾಗು ತ್ರಿಲೋಕ ಮಂಟಪಗಳು ಸೊಂದಾ ಕಲೆಯ ಕುರುಹಗಳು. ದೇವಸ್ಥಾನದ ಹತ್ತಿರ ವಸ್ತು ಪ್ರದರ್ಶನಾಲಯವೂ ಇದೆ.

ಬೆಲೆಕೇರಿ ಬದಲಾಯಿಸಿ

ಬೆಲೆಕೇರಿ ಅಂಕೋಲಾ ದಿಂದ ೫ ಕಿ. ಮೀ. ದೂರದಲ್ಲಿದೆ. ಇದು ಅತ್ಯಂತ ಪುರಾತನ ಬಂದರು ಮತ್ತು ಸಮುದ್ರತೀರ ವಾಗಿದೆ. ಇತ್ತೀಚಿಗೆ ಅದಿರು ನಾಪತ್ತೆ ಪ್ರಕರಣದಲ್ಲಿ ಬೆಲೆಕೇರಿ ಹೆಸರು ಪ್ರಖ್ಯಾತವಾಗಿದೆ .ಈ ಬಂದರದಿಂದ ಮರದ ದಿಮ್ಮೆಗಳು, ಕಡಿದ ಮರಗಳು ಮತ್ತು ಬಿದಿರುಗಳು ಸಾಗಣೆಯಾಗುತ್ತವೆ. ಇದು ವ್ಯಾಪಾರ ಕೇಂದ್ರವೂ ಹೌದು. ಇಲ್ಲಿ "ಜೇನುಬೀರ " ಮತ್ತು ಶಿವನ ದೇವಸ್ಥಾನಗಳಿವೆ. ಹದಿನೈದನೇ ಶತಮಾನದ ಶಿಲಾಲಿಪಿ ಕೂಡ ಇದೆ.

ಭಟ್ಕಳ ಬದಲಾಯಿಸಿ

ಹೊನ್ನಾವರದಿಂದ ೪೫ ಕಿ. ಮೀ. ದೂರದಲ್ಲಿದೆ.ಇದು ಅತ್ಯಂತ ಹಳೆಯದಾದ ಬಂದರು. ವಿಜಯ ನಗರ ಸಾಮ್ರಾಜ್ಯದ ಹೆಬ್ಬಾಗಿಲಾಗಿತ್ತು. ಅರಬ ಮೂಲದ ನವಯಾತ ವ್ಯಾಪಾರಿಗಳು ಇಲ್ಲಿ ನೆಲೆಸಿದ್ದಾರೆ. ವಿಜಯನಗರ ಕಾಲದ ದೇವಸ್ಥಾನಗಳೂ ಕಾಣಸಿಗುತ್ತವೆ. ಪ್ರಸಿಧ್ಧವಾದ ದೇವಾಲಯವೆಂದರೆ ಖಾಟಪ್ಪಯ್ಯ ನಾರಾಯಣ ದೇವಸ್ಥಾನ: ಇಲ್ಲಿ ರಾಮಾಯಣದ ಕಥೆಯನ್ನು ಶಿಲೆಯಲ್ಲಿ ಕೆತ್ತಲಾಗಿದೆ. ಇದು ಜೈನರ ಧಾರ್ಮಿಕ ಕೇಂದ್ರ ಕೂಡ. ಪಾರ್ಶ್ವನಾಥ ಬಸದಿ ಮತ್ತು ಬಂದಾ ಬಸದಿ ಹದಿನಾರನೆ ಶತಮಾನಕ್ಕೆ ಸೇರಿದವುಗಳಾಗಿವೆ. ಇಲ್ಲಿಂದ ಹದಿನಾರು ಕಿ.ಮೀ. ದೂರದಲ್ಲಿರುವ ಹದುವಳ್ಳಿ ಜೈನ ಕಾಲದ ರಾಜಧಾನಿಯಾಗಿತ್ತಲ್ಲದೆ ಇಂದಿಗೂ ಇಲ್ಲಿ ಪುರಾತನ ಸ್ಮಾರಕಗಳಿವೆ.

ದಾಂಡೇಲಿ ಅಭಯಾರಣ್ಯ ಬದಲಾಯಿಸಿ

ದಾಂಡೇಲಿ ಕಾರವಾರದಿಂದ ೪೦ ಕಿ. ಮೀ. ದೂರದಲ್ಲಿದೆ. ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಔದ್ಯೋಗಿಕ ನಗರಾಗಿದೆ. ಇಲ್ಲಿ ಮ್ಯಾಂಗೆನೀಜ಼್ ಅದಿರು ಕಾರ್ಖಾನೆ ಹಾಗೂ ಪ್ಲಾಯವುಡ್ ಕಾರ್ಖಾನೆಗಳಿವೆ. ಇದಲ್ಲದೆ ಸುತ್ತ ಮುತ್ತ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ: ಸಿಂಥೇರಿ ರಾಕ್ಸ, ನಾಗಝರಿ ವ್ಯಾಲ್ಲಿ, ವಿಂಚೊಲಿ ರಪಿಡ್ಸ, ಕಾವಲಾ ಕೇವ್ಸ ,ಮತ್ತು ಕನ್ಹೇರಿ ಬ್ರಿಜ್. ವನ್ಯಮೃಗಗಳ ಅಭಯಾರಣ್ಯದಲ್ಲಿ ಆನೆಗಳು, ಕಾಡು ಕೋಣಗಳು, ಹುಲಿಗಳು,ಚಿ ರತೆಗಳು, ಸಾಂಬಾರ ಮೃಗ ಪ್ರಾಕೃತಿಕವಾಗಿ ಕಾಣಬಹುದಾಗಿದೆ. ಅರಣ್ಯ ವಸತಿ ಗೃಹದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇದೆ. ಡಿಶಂಬರ್ ತಿಂಗಳಿಂದ ಎಪ್ರಿಲ್, ಭೇಟಿನೀಡಲು ಪ್ರಶಸ್ತ ಸಮಯ. ಗಣೇಶ ಗುಡಿ ಯಿಂದ ೩೪ ಕಿ. ಮೀ.ದೂರದಲ್ಲಿ ಕಾಳಿ ನದಿಗೆ ಆಣೆಕಟ್ಟು ಕಟ್ಟಲಾಗಿದೆ. ಇಲ್ಲಿ ವಸತಿ ಗೃಹ ಗಳು ಕಾಡಿನಲ್ಲಿ ಇರುವದರಿಂದ ಶಬ್ದ ಮುಕ್ತ ವಾಗಿದ್ದು ಪ್ರಶಾಂತವಾಗಿ ಪ್ರಕೃತಿ ಮಡಿಲಲ್ಲಿ ಕಳೆಯುವ ಸಂತಸ ಪಡಬಹುದು.

 

ಗೋಕರ್ಣ ಬದಲಾಯಿಸಿ

ಗೋಕರ್ಣ ಕಾರವಾರದಿಂದ ೬೦ ಕಿ. ಮೀ. ದೂರದಲ್ಲಿದೆ.ಇದು ಯಾತ್ರಾರ್ಥಿಗಳ ಪುಣ್ಯ ಕ್ಷೇತ್ರ ಮತ್ತು ಸಮುದ್ರ ತೀರ. ಇಲ್ಲಿ ಮಹಾಬಲೇಶ್ವರ ದೇವಾಲಯ ಪ್ರಮುಖವಾದುದು. ಈ ಕ್ಷೇತ್ರ ವಾರಣಾಸಿಯಷ್ಟೆ ಪವಿತ್ರವಾಗಿದೆ ಎಂದು ಹಿಂದುಗಳು ನಂಬುತ್ತಾರೆ. ಶಿವನ ಆತ್ಮಲಿಂಗ ಇಲ್ಲಿ ಪ್ರತಿಷ್ಠಾವಪಿಸಿದ್ದಾರೆ. ಭಾರತದಾದ್ಯಂತ ಜನರು ದರ್ಶನ ಪಡೆಯಲು ಹಾಗು ಚಿತಾ ಭಸ್ಮ ವನ್ನು ತಂದು ತಾಮ್ರಪರ್ಣಿ ತೀರ್ಥ ದಲ್ಲಿ ತೇಲಿ ಬಿಟ್ಟು ಕೃತಾರ್ಥರಾಗುತ್ತಾರೆ. ಯಾತ್ರಾರ್ಥಿಗಳು ಸಮುದ್ರ ತೀರದಲ್ಲಿ ಸೂರ್ಯಾಸ್ತ ಮಾನ ವನ್ನು ನೋಡಲು ಕಾತುರರಾಗಿರುತ್ತಾರೆ. ಇಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

 

ಕಾರವಾರ ಬದಲಾಯಿಸಿ

ಗೋಕರ್ಣದಿಂದ ೫೭ ಕಿ. ಮೀ. ಬೆಂಗಳೂರದಿಂದ ೩೨೨ ಕಿ. ಮೀ. ಕರ್ನಾಟಕದಲ್ಲಿ ಕಾರವಾರ, ಸಮುದ್ರ ತೀರಕ್ಕೆ ಹೆಸರುವಾಸಿಯಾಗಿದೆ. ಇತ್ತೀಚೆಗೆ ನೌಕಾನೆಲೆಯೂ ಹೆಡೆಗೆದರಿದೆ. ಇಲ್ಲಿ ವಿದೇಶಿ ಹಡಗುಗಳು ಸಮುದ್ರ ತೀರಕ್ಕೆ ಬರುತ್ತವೆ. ಕಾಳಿ ನದಿ ಸಮುದ್ರವನ್ನು ಸೇರುವ ಪ್ರದೇಶ ಆಗಿರುವದರಿಂದ ಹಿನ್ನೀರಿಗಾಗಿ ಸಹ ಪ್ರಸಿಧ್ಧಿಯನ್ನು ಪಡೆದಿದಿದೆ. ಪ್ರವಾಸಿಗರು ಒಯಸ್ಟರ ರಾಕ್ ಗೆ ಹೋಗಿ ಆನಂದವನ್ನು ಪಡೆಯಬಹುದಾಗಿದೆ. ಅರಬ ವ್ಯಾಪಾರಸ್ಥರು ಪ್ರಪ್ರಥಮವಾಗಿ ಸುರಕ್ಷಿತ ಬಂದರವೆಂದು ಇಲ್ಲಿಗೆ ಬಂದರು. ಈ ಸಮುದ್ರ ತೀರವನ್ನು ಕವಿ ಶ್ರೀ ರವಿಂದ್ರನಾಥ ಟ್ಯಾಗೋರರು ಸಂದರ್ಶಿಸಿದ್ದಾರೆ ಮತ್ತು ಕಾರವಾರದಲ್ಲಿ ನೆಲೆಸಿ ತಮ್ಮ ಪ್ರಥಮ ನಾಟಕವನ್ನು ಇಲ್ಲಿಯೇ ರಚಿಸಿದ್ದಾರೆ. ಹತ್ತಿರದಲ್ಲಿರುವ ಐತಿಹಾಸಿಕ ಸದಾಶಿವಗಡ ಕೋಟೆ ಮತ್ತು ದುರ್ಗಾದೇವಿ ದೇವಸ್ಥಾನವನ್ನು ಹದಿನೆಂಟನೆ ಶತಮಾನದಲ್ಲಿ ಛತ್ರಪತಿ ಶಿವಾಜಿಯವರು ಸಂದರ್ಶಿಸಿದ್ದಾರೆ. ಕುರ್ಮಾಗಡದಲ್ಲಿರುವ ಐತಿಹಾಸಿಕ ಕೋಟೆ ಮತ್ತು ನರಸಿಂಹ ದೇವಾಲಯಗಳನ್ನು ಸಂದರ್ಶಿಸುವದು ಅರ್ಹವಾಗಿದೆ.

ಸಿರ್ಸಿ ಬದಲಾಯಿಸಿ

ಕಾರವಾರದಿಂದ ೯೦ ಕಿ. ಮೀ.ಬೆಂಗಳೂರದಿಂದ ೪೨೫ ಕಿ. ಮೀ.ದೂರ ಸಿರ್ಸಿ.ಸೊಂದಾ ರಾಜರ ಐತಿಹಾಸಿಕ ಸ್ಥಳ ಸಿರ್ಸಿ. ಇಲ್ಲಿ ಮಾರಿಕಾಂಬಾ ದೇವಸ್ಥಾನದ ಭಕ್ತರು ಕರ್ನಾಟಕ ವಲ್ಲದೆ ತಮಿಳುನಾಡು ಮತ್ತು ಕೇರಳದಲ್ಲಿ ನೆಲೆಸಿದ್ದಾರೆ. ಮಾರಿಕಾಂಬಾ ಜಾತ್ರೆಗೆ ಸಹಸ್ರಾರು ಭಕ್ತರು ಸಂದರ್ಶಿಸಿ ಪುನೀತರಾಗುತ್ತಾರೆ. ಇಲ್ಲಿ ಹತ್ತಿರದಲ್ಲಿ ಜಲಪಾತಗಳಿದ್ದು ಯಲ್ಲಾಪುರದ ಸಮೀಪ ವಿರುವ ಮಾಗೋಡು ಜಲಪಾತ ಪ್ರಖ್ಯಾತವಾಗಿದೆ.ಬೆಡ್ತಿ ನದಿ ಇಲ್ಲಿ ಧುಮ್ಮಿಕ್ಕಿ ಹರಿಯುವದು ಕಣ್ಮನವನ್ನು ಸೆಳೆಯುತ್ತದೆ.ಸಿದ್ದಾಪುರ ಹತ್ತಿರವಿರುವ ಉಂಚಳ್ಳಿ ಜಲಪಾತ ಸೊಬಗು ಬಣ್ಣಿಸಲಾಸಾಧ್ಯ ಇದನ್ನು ಲುಶಿಂಗ್ಟನ್ ಜಲಪಾತವೆಂದೂ ಕರೆಯುವರು.

ಸೊಂದಾ ಅಥವಾ ಸೋದೆ ಬದಲಾಯಿಸಿ

ಸೊಂದಾ ಸಿರ್ಸಿಯಿಂದ ೧೮ ಕಿ. ಮೀ.ದೂರದಲ್ಲಿದೆ. ಸೊಂದಾ ರಾಜರ ಐತಿಹಾಸಿಕ ಸ್ಥಳ ಸ್ವಾದಿ ಅಥವಾ ಸೊಂದಾ ವೆಂದು ಕರೆಯುತ್ತಾರೆ. ಶಾಮಲಾನದಿ ಇಲ್ಲಿ ಹರಿಯುತ್ತಿದೆ. ಅರಸಪ್ಪ ನಾಯಕರ ಕಾಲದಲ್ಲಿ ಧಾರ್ಮಿಕ ಮಠಗಳು ಪ್ರಾರಂಭವಾದವೆನ್ನಬಹುದು. ದ್ವೈತ ಸಂಪ್ರದಾಯದ ವಾದಿರಾಜರ (ಬೃಂದಾವನ) ಮಠ ಪ್ರಸಿಧ್ಧಿಯಾಗಿದೆ. ತ್ರಿವಿಕ್ರಮ ದೇವಸ್ಥಾನದಲ್ಲಿರುವ ೨೧ ಮೀ. ಎತ್ತರವಿರುವ ಧ್ವಜಸ್ಥಂಭ ಏಕ ಶಿಲೆಯಲ್ಲಿದೆ. ಜೈನ ಮಠ ದಿಗಂಬರ ಜೈನ ಮಂದಿರಗಳನ್ನೂ ನೋಡಬಹುದಾಗಿದೆ.

ಉಳವಿ ಬದಲಾಯಿಸಿ

ಕಾರವಾರದಿಂದ ೭೫ ಕಿ. ಮೀ.ಸಿರ್ಸಿ ಯಿಂದ ೪೦ ಕಿ. ಮೀ.ದೂರದಲ್ಲಿದ್ದು ಸೂಪಾಗೆ ಹತ್ತಿರವಾಗುತ್ತದೆ. ಶ್ರೀ ಚನ್ನಬಸವೇಶ್ವರ ಬಸವಣ್ಣನ ಅನುಯಾಯಿಗಳು ಕೂಡ. ಸಾವಿರಾರು ವೀರಶೈವ ಭಕ್ತರು ಚನ್ನಬಸವೇಶ್ವರ ಐಕ್ಯ ವಾದ ಸ್ಥಳ ಉಳವಿಯನ್ನು ನೋಡಲು ಆಗಮಿಸುತ್ತಾರೆ. ಹತ್ತಿರದಲ್ಲಿಯೇ ಅಕ್ಕ ನಾಗಮ್ಮನ ಗುಹೆ ಮತ್ತು ಮಹಾಮನಿ ಗುಹೆಗಳಿವೆ.

ಯಾಣ ಬದಲಾಯಿಸಿ

ಕಾರವಾರದಿಂದ ೬೦ ಕಿ. ಮೀ. ಮತ್ತು ಸಿರ್ಸಿಯಿಂದ ೪೦ ಕಿ. ಮೀ. ದೂರದಲ್ಲಿದೆ. ಇದು ಪ್ರವಾಸಿ ತಾಣವಾಗಿದೆ. ಸಹ್ಯಾದ್ರಿ ಬೆಟ್ಟದ ಅಂಚಿನಲ್ಲಿದೆ. ಸುಣ್ಣದ ಕಲ್ಲಿನಲ್ಲಿ (ಕಪ್ಪು ಶಿಲೆಯಲ್ಲಿ) ನಿರ್ಮಿತವಾದ ಗುಹೆ ಯಾಗಿದ್ದು ತುಂಬಾ ಮನಮೋಹಕವಾಗಿದೆ. ಭಸ್ಮಾಸುರನ ಭಸ್ಮದಿಂದ ಇದು ನಿರ್ಮಿತವಾಗಿದೆ ಎಂಬ ಪ್ರತೀತಿ ಇದೆ. ಭೈರವೇಶ್ವರ ದೇವಾಲಯವಿದ್ದು ನೂರಾರು ಭಕ್ತರು ಆಗಮಿಸುತ್ತಾರೆ. ಶಿವರಾತ್ರಿಯಲ್ಲಿ ರಥೋತ್ಸವ ನಡೆಯುತ್ತದೆ.